ಆವಾವ ಜಾತಿ ಗೋತ್ರದಲ್ಲಿ ಬಂದಡೂ
ತಮ್ಮ ತಮ್ಮ ಕಾಯಕಕ್ಕೆ, ಭಕ್ತಿಗೆ ಸೂತಕವಿಲ್ಲದಿರಬೇಕು.
ಆವಾವ ವ್ರತವ ಹಿಡಿದಡೂ, ಇದಿರ ದಾಕ್ಷಿಣ್ಯವ ಮರೆದು
ತನ್ನಯ ತ್ರಿಕರಣ ಶುದ್ಧವಾಗಿ ನಡೆಯಬೇಕು.
ಪರಪುರುಷಾರ್ಥಕ್ಕೆ ಅರಿಯಿಸಿಕೊಂಬಡೆ ಮೂಗ
ಅರುಹಿರಿಯರು ಹೇಳಿದರೆಂದು ಕಲಸಬಹುದೆ ಅಮಂಗಲವ.
ಇಂತೀ ಕ್ರೀಯಲ್ಲಿ ಭಾವಶುದ್ಧವಾಗಿ
ಭಾವದಲ್ಲಿ ದಿವ್ಯಜ್ಞಾನಪರಿಪೂರ್ಣವಾಗಿಪ್ಪ ಗುರುಚರಭಕ್ತಂಗೆ
ಚೆನ್ನಬಸವಣ್ಣ ಸಾಕ್ಷಿಯಾಗಿ
ಕಮಳೇಶ್ವರಲಿಂಗವು ತಾನೆಯೆಂದು ಭಾವಿಸುವನು.