ಏ ಪದದಿಂದ ಪ್ರಾರಂಭವಾಗುವ ವಚನಗಳು:
ಏರುವ ಇಳಿಯುವ ಆದಿಯ ಅನಾದಿಯನರಿದು, ಭೇದವ ತಿಳಿದು ಸಾಧಿಸಿ ನೋಡಿ, ಅಂತರಂಗದಲ್ಲಿ ವೇಧಿಸಿ ನೋಡುತಿರಲು, ಭೋಗ್ಯವಲ್ಲದ ಮಣಿ ಪ್ರಜ್ವಲವಾಯಿತ್ತು. ಆ ಬೆಳಗಿನೊಳಗೆ ಪಶ್ಚಿಮದ ಕದವ ತೆಗೆದು ಪರಮನೊಡಗೂಡಿ, ಬಚ್ಚಬರಿಯ ಬಯಲಬೆಳಗಿನೊಳಗಾಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
ಏನೇನು ಇಲ್ಲದಾಗ ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ? ಆದಿ ಅನಾದಿ ಇಲ್ಲದಂದು ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ? ಮುಳುಗಿ ಹೋದವಳ ತೆಗೆದುಕೊಂಡು, ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು ರಕ್ಷಣೆಯ ಮಾಡಿದ ಶಿಶುವಾದ ಕಾರಣ ಹಡದಪ್ಪಣ್ಣನೆ ಎನ್ನ ಕರಸ್ಥಲಕ್ಕೆ ಲಿಂಗವಾಗಿ ಬಂದು ನೆಲೆಗೊಂಡನು. ಚೆನ್ನಮಲ್ಲೇಶ್ವರನೆ ಎನ್ನ ಮನಸ್ಥಲಕ್ಕೆ ಪ್ರಾಣವಾಗಿ ಬಂದು ಮೂರ್ತಗೊಂಡನು. ಆ ಕರಸ್ಥಲದ ಲಿಂಗವನರ್ಚಿಸಿ ಪೂಜಿಸಿ ವರವ ಬೇಡಿದಡೆ ತನುವ ತೋರಿದನು; ಆ ತನುವಿಡಿದು ಮಹಾಘನವ ಕಂಡೆ; ಆ ಘನವಿಡಿದು ಮನವ ನಿಲಿಸಿದೆ. ಮನವ ನಿಲಿಸಿ ನೋಡುವನ್ನಕ್ಕ ಪ್ರಾಣದ ನೆಲೆಯನರಿದೆ; ಪ್ರಣವವನೊಂದುಗೂಡಿದೆ. ಕಾಣಬಾರದ ಕದಳಿಯನೆ ಹೊಕ್ಕು ನೂನ ಕದಳಿಯ ದಾಂಟಿದೆ. ಜ್ಞಾನಜ್ಯೋತಿಯ ಕಂಡೆ. ತಾನುತಾನಾಗಿಪ್ಪ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ, ಚೆನ್ನಮಲ್ಲೇಶ್ವರನ ಕರುಣದ ಶಿಶುವಾದ ಕಾರಣದಿಂದ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.