ಬಯಲ ದೇಹದಲ್ಲಿ ಒಂದು ತೊಲಗದ ಕಂಬವ ಕಂಡೆ.
ತೊಲಗದ ಕಂಬವ ಹಿಡಿದು ಹೋಗುವನ್ನಕ್ಕ
ಮುಂದೆ ಸರೋವರವ ಕಂಡೆ.
ಆ ಸರೋವರವ ಒಳಹೊಕ್ಕು ನೋಡಲು,
ಮುಂದೆ ಗಟ್ಟ ಬೆಟ್ಟಗಳು, ಹೊಗಬಾರದು.
ಆನೆಗಳು ಅಡ್ಡಲಾದವು, ಕೋಡಗ ಮುಂದುವರಿದವು,
ನಾಯಿಗಳಟ್ಟಿಕೊಂಡು ಬಂದವು, ಇರುಹೆ ಕಟ್ಟಿಕೊಂಡು ಬಿಡವು.
ಇದ ಕಂಡು ನಾ ಹೆದರಿಕೊಂಡು, ಮನವೆಂಬ ಅರಸನ ಹಿಡಿದು,
ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ, ಆ ಅರಸನ ಶಕ್ತಿವಿಡಿದು,
ಆ ಸರೋವರದೊಳಗಣ ಗಟ್ಟ ಬೆಟ್ಟವನೆ ದಾಂಟಿ,
ಅಷ್ಟಮದವನೆ ಹಿಟ್ಟುಗುಟ್ಟಿ, ಕೋಡಗನ ಕೊರಳ ಮುರಿದು,
ನಾಯಿಗಳನೆ ಕೊಂದು, ಇರುಹೆಯ ಗೂಡಿಗೆ ಕಿಚ್ಚನಿಕ್ಕಿ,
ನಿರ್ಮಳವಾದ ದೇಹದಲ್ಲಿ ನಿಂದು ಮುಂದುವರಿದು ನೋಡಲು
ಇಟ್ಟೆಡೆಯ ಬಾಗಿಲ ಕಂಡೆ,
ಆ ಇಟ್ಟೆಡೆಯ ಬಾಗಿಲ ಹೊಕ್ಕು, ಹಿತ್ತಲ ಬಾಗಿಲಿನ ಕದವ ತೆಗೆದು ನೋಡಲು,
ಬಟ್ಟಬಯಲಾಯಿತ್ತು.
ಆ ಬಟ್ಟಬಯಲಲ್ಲಿ ನಿಂದು ನಾನೆತ್ತ ಹೋದೆನೆಂದರಿಯೆನಯ್ಯಾ
ನಿಮ್ಮ ಪಾದವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.