ಇಡಾದಲ್ಲಿ ಸುಳಿವ ಚಂದ್ರನು ದೇವರೆಂದು ನುಡಿವರು.
ಪಿಂಗಳದಲ್ಲಿ ಸುಳಿವ ಸೂರ್ಯನು ದೇವರೆಂದು ನುಡಿವರು.
ಸುಷುಮ್ನನಾಳದ ತುದಿಯನಡರಿ ಬ್ರಹ್ಮರಂಧ್ರದ
ಸಹಸ್ರದಳಪದ್ಮದಲ್ಲಿ ನೋಡಿ,
ದೇವರ ಕಂಡೆನೆಂದು ನುಡಿವರು ನೋಡಾ.
ಇಂಥ ಭ್ರಾಂತುಭ್ರಮೆಗಳಿಗೆ ಕೆಟ್ಟ ಕೇಡಿಂಗೆ
ಕಡೆಯಿಲ್ಲ ಮೊದಲಿಲ್ಲ ನೋಡಾ.
ಮುಂದೆ ಸ್ವಾನುಭವ ಸ್ವಯಂಭು ತಾನಾದ ಮಹಾತ್ಮಂಗೆ
ಇತರವಾದ ಮಾಯಾರೂಪಿನ ಭ್ರಾಂತುಂಟೆ ಹೇಳಾ ?
ಅಚ್ಚಳಿದ ಬ್ರಹ್ಮ ಮುಟ್ಟಲು
ಬ್ರಹ್ಮವಪ್ಪುದಲ್ಲದೆ ಮಾಯೆ ಉಂಟೆ ಹೇಳಾ ?
ಸೀಮೆಯ ಬಿಟ್ಟು ನಿಸ್ಸೀಮನಾದ ದೈವಕ್ಕೆ
ಸರಿಯಿಲ್ಲ ಮಿಗಿಲಿಲ್ಲ ಮರವಿಲ್ಲ.
ಪರಿಪೂರ್ಣ ತಾನಾದ
ವರನಾಗನ ಗುರುವೀರೇಶ ಪರಂಜ್ಯೋತಿ ಮಹಾವಿರಕ್ತಿ.