ಪೃಥ್ವಿಯಿಂದ ಭಕ್ತನಾದೆ, ಅಪ್ಪುವಿನಿಂದ ಮಾಹೇಶ್ವರನಾದೆ,
ತೇಜದಿಂದ ಪ್ರಸಾದಿಯಾದೆ, ವಾಯುವಿನಿಂದ ಪ್ರಾಣಲಿಂಗಿಯಾದೆ,
ಆಕಾಶದಿಂದ ಶರಣನಾದೆ, ಝೇಂಕಾರದಿಂದ ಸರ್ವಾಂಗ ವೇಧಿಸಿ
ಪಂಚಮುಖವುಳ್ಳ ಪರಮೇಶ್ವರನನರಿತು
ಪಾವನನಾದ ಮೇಲೆ ಘನವೆಂದು ಕೆಟ್ಟರು ಕೋಟ್ಯಾನುಕೋಟಿ.
ಇನ್ನು ಕಬ್ಬಿಣಕೆ ಪರುಷ ಸೋಂಕಲು ಕನಕವಾಯಿತೆಂದರು.
ಮುಂದೆ ಕಬ್ಬಿಣಕೆ ಬಾಧೆ ತಪ್ಪದು, ಕನಕಕ್ಕೆ ಬಾಧೆ ತಪ್ಪದು.
ಇನ್ನು ಇಂಥ ಚಿನ್ನಭಿನ್ನವೇ ಪರುಷವೆಂದೆನ್ನುವರು.
ಪರುಷ ಮುಟ್ಟಲು ಪರುಷವಾದುದೇ ತನ್ನ ಘನವು.
ಪರುಷ ಮುಟ್ಟಿ ಚಿನ್ನವಾದುದೆ ಸಿದ್ಭಾಂತ ಕಾಣಾ.
ಮುಂದೆ ಪರುಷಮುಟ್ಟಲು ಪರುಷಕಟ್ಟಳೆ
ಮುಂದೆ ವೇದಾಂತ ಗುರುಮುಟ್ಟಿ ಗುರುವಾದ
ನಿಷ್ಕಳಂಕ ನಿರಾಭಾರಿ ನಿರ್ಗುಣನಾದ
ಮಹಾತ್ಮಂಗೆ ನೋಟವಿಲ್ಲ ಕೂಟವಿಲ್ಲ
ಆಟವಿಲ್ಲ ಪಾಠವಿಲ್ಲ ಆರೋಗಣೆಯಿಲ್ಲ.
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.