ಅಥವಾ

ಒಟ್ಟು 12 ಕಡೆಗಳಲ್ಲಿ , 6 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು, ಎರಡು, ಮೂರು, ನಾಲಕ್ಕು, ಅಯಿದು, ಆರು, ಏಳು, ಎಂಟು ಒಂಬತ್ತು, ಹತ್ತು, ಹನ್ನೊಂದು ಹನ್ನೆರಡು, ಹದಿಮೂರು, ಹದಿನಾಲಕ್ಕು, ಹದಿನೈದು, ಹದಿನಾರು, ಹದಿನೇಳು, ಹದಿನೆಂಟು, ಹತ್ತೊಂ¨ತ್ತು, ಇಪ್ಪತ್ತು, ಇಪ್ಪತ್ತೊಂದು, ಇಪ್ಪತ್ತೆರಡು, ಇಪ್ಪತ್ತಮೂರು, ಇಪ್ಪತ್ತನಾಲಕ್ಕು. ಇಪ್ಪತ್ತನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತನಾಲಕ್ಕು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಯುದಿಷ್ಠಿರೋ ವಿಕ್ರ[ಮೋ]ಶಾಲಿವಾಹನ[ಃ] ತ[ಪಸಾ] ಧ್ರುವಶ್ಚ [ದಿವಿ]ಜರಾಜನಂದನಃ ನಾಗಾಂತಕೋ ಭೂಪತಿ [ಷಷ್ಠಮಃ] ಕಲಿಯುಗೇ ಷಟ್‍ಚಕ್ರವರ್ತಿ[ನಃ] ಈ ಆರು ಮಂದಿ ಕಲಿಯುಗದ ಚಕ್ರವರ್ತಿಗಳು. ಇಪ್ಪತ್ತಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತಮೂರು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಯಯಾತಿ ನಹುಷ[ಶ್ಶಂತನುಃ] ಚಿತ್ರವೀರ್ಯಶ್ಚ ಪಾಂಡವಃ ರಾಜಾ ದುರ್ಯೋಧನ[ಶ್ಚೈ]ವ ದ್ವಾಪರೇ ಷ[ಟ್] ಚಕ್ರವರ್ತಿ[ನಃ] ಆ ಆರು ಮಂದಿ ದ್ವಾಪರದ ಚಕ್ರವರ್ತಿಗಳು. ಇಪ್ಪತ್ತೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತೆರಡು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ವೈವ[ಸ್ವ]ತೋ ದಿಲೀಪಶ್ಚ ರಘು ಚಕ್ರೇಶ್ವರೋ ಅ[ಜಃ] ದಶರಥೋ ರಾಮಚಂದ್ರ[ಶ್ಚ] ಷಡೈತೇ ಚಕ್ರವರ್ತಿ[ನಃ] ಈ ಆರು ಮಂದಿ ತ್ರೇತಾಯುಗದ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಹರಿಶ್ಚಂ[ದ್ರೋ] ನ[ಳ]ರಾಜ[ಃ] ಪುರುಕು[ತ್ಸ]ಶ್ಚ ಪುರೂರವಃ ಸಗರಃ ಕಾರ್ತವೀರ್ಯಶ್ಚ ಷಡೈತೇ ಚಕ್ರವರ್ತಿ[ನಃ] ಈ ಆರು ಮಂದಿ ಕೃತಯುಗದ ಚಕ್ರವರ್ತಿಗಳು. ಅಂತೂ ಇಪ್ಪತ್ತನಾಲ್ಕು ಮಂದಿ ಚಕ್ರವರ್ತಿಗಳು. ಇಪ್ಪತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತು ಎಂದರೆ ಪ್ರಪಂಚ ನಿರ್ಮಾಣ ಸಹಾಯ[ದ]ವರು. ಅದು ಎಂತೆಂದಡೆ: ಆಂಗೀರಸ, ಪುಲಸ್ತ್ಯ, ಪುಲಹ, ಶಾಂತ, ದಕ್ಷ, ವಸಿಷ್ಠ, ವಾಮದೇವ, ನವಬ್ರಹ್ಮ, ಕೌಶಿಕ, ಶೌನಕ, ಸ್ವಯಂಭು, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷಷ, ವೈವಸ್ವತ, ಸೂರ್ಯಸಾವರ್ಣಿ, ಚಂದ್ರಸಾವರ್ಣಿ, ಬ್ರಹ್ಮಸಾವರ್ಣಿ, ಇಂದ್ರ ಸಾವರ್ಣಿ ಇವರು ಇಪ್ಪತ್ತು ಮಂದಿ ಪ್ರಪಂಚ ನಿರ್ಮಾಣ ಸಹಾಯ[ದ]ವರು. ಹತ್ತೊಂಬತ್ತು ಎಂದರೆ ಪುಣ್ಯನದಿಗಳು. ಅದು ಎಂತೆಂದಡೆ: ಗ್ರಂಥ || ಗಂಗಾ ಪುಷ್ಕ[ರಿಣೀ] ನರ್ಮದಾ ಚ ಯಮುನಾ ಗೋದಾವರೀ ಗೋಮತೀ ಗಂಗಾದ್ವಾರ ಗಯಾ ಪ್ರಯಾಗ ಬದರೀ ವಾರಾಣಸೀ ಸೈಯಿಂಧವೀ ಇವು ಹತ್ತೊಂಬತ್ತು ಪುಣ್ಯನದಿಗಳು. ಹದಿನೆಂಟು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೆಂಟು ಎಂದರೆ.......... ಅದು ಎಂತೆಂದಡೆ: ........................... ಹದಿನೇಳು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೇಳು ಎಂದರೆ................. ಅದು ಎಂತೆಂದಡೆ: .................... ಹದಿನಾರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನಾರು ಎಂದರೆ [ಅ]ರಸುಗಳು ಅದು ಎಂತೆಂದಡೆ: ಗ್ರಂಥ || ಗಯಾಂಬರೀ[ಷ] ಶ[ಶ]ಬಿಂದುರಂಗದೋ ಪೃಥು[ರ್ಮ]ರು[ತ್] ಭರತ[ಸ್ಸು]ಹೋತ್ರಃ ರಾಮೋ ದಿಲೀಪೋ ಸಗರ ರಂತಿ ರಾಮ[ಃ] ಯಯಾತಿ ಮಾಂಧಾತ ಭಗೀರಥ[ಶ್ಚ] ಎಂದುದಾಗಿ, ಗಯ, ಅಂಬರೀಷ, ಶಶಬಿಂದು, ಪೃಥು, ಮರುತ್, ಭರತ, ಸುಹೋತ್ರ, ಪರಶುರಾಮ, ದಿಲೀಪ, ಸಗರ, ರಂತಿ, ರಾಮಚಂದ್ರ, ಯಯಾತಿ, ಮಾಂಧಾತ, ಭಗೀರಥ, ಅ[ಂಗದ] ಇವರು ಹದಿನಾರು ಮಂದಿ ಅರಸುಗಳು. ಹದಿನೈದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೈದು ಎಂದರೆ ತಿಥಿಗಳು. ಅದು ಎಂತೆಂದಡೆ: ಪಾಡ್ಯ, ಬಿದಿಗೆ, ತದಿಗೆ, ಚವುತಿ, [ಪಂಚಮಿ], ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಅಮಾವಾಸ್ಯೆ ಇವು ಹದಿನೈದು ತಿಥಿಗಳು. ಹದಿನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನಾಲಕ್ಕು ಎಂದರೆ ಲೋಕಂಗಳು. ಅದು ಎಂತೆಂದಡೆ: ಅತಲ ವಿತಲ ಸುತಲ ತಲಾತಲ ಮಹಾತಲ ರಸಾತಲ ಪಾತಾಳ ಭೂಲೋಕ ಭುವರ್ಲೋಕ ಸುರ್ವರ್ಲೋಕ ಮಹರ್ಲೋಕ ತಪೋಲೋಕ ಜನೋಲೋಕ ಸತ್ಯಲೋಕ ಇವು ಹದಿನಾಲ್ಕು ಲೋಕಂಗಳು. ಹದಿಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೆನಪ್ಪ ? ಹದಿಮೂರು ಎಂದರೆ ಚಕ್ರಂಗಳು. ಅದು ಎಂತೆಂದಡೆ, ಆಧಾರಚಕ್ರ, ಸ್ವಾಷ್ಠಾನಚಕ್ರ, ಮಣಿಪೂರಕಚಕ್ರ, ಅನಾಹಚಕ್ರ, ವಿಶುದ್ಧಿಚಕ್ರ, ಆಜ್ಞಾಚಕ್ರ, ಶಿಖಾಚಕ್ರ, ಬ್ರಹ್ಮಚಕ್ರ, ಘಟಚಕ್ರ, ಕಾಲಚಕ್ರ, ಮೇಘಚಕ್ರ, ಭೂಚಕ್ರ, ಅವಗಡಚಕ್ರ ಇವು ಹದಿಮೂರು ಚಕ್ರಂಗಳು. ಹನ್ನೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹನ್ನೆರಡು ಎಂದರೆ ಮಾಸಂಗಳು. ಅದು ಎಂತೆಂದರೆ, ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವೀಜ, ಕಾರ್ತೀಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಇವು ಹನ್ನೆರಡು ಮಾಸಂಗಳು. ಹನ್ನೊಂದು ಎಂದರೆ ನೋಡಿದ್ದೇನಪ್ಪ ? ಕೇಳಿದ್ದೇನಪ್ಪ ? ಹನ್ನೊಂದು ಎಂದರೆ ಭಾರತಂಗಳು. ಅದು ಎಂತೆಂದಡೆ: ಆದಿಭಾರತ, ಕೈಲಾಸಭಾರತ, ಶ್ರೀರುದ್ರಭಾರತ, ನಂದಿಭಾರತ, ನಾರ[ದ]ಭಾರ[ತ], ಭೃಗುಭಾರತ, ಮನುಭಾರತ, ಉಮಾಭಾರತ, ಪ್ರಸಿದ್ಧಭಾರತ, ಸಿದ್ಧೋರಗಭಾರತ, ಶ್ರೀರಂಗಭಾರತ ಇವು ಹನ್ನೊಂದು ಭಾರತಂಗಳು. ಹತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹತ್ತು ಎಂದರೆ, ದಶಾವತಾರಂಗಳು. ಅದು ಎಂತೆಂದರೆ, ಗ್ರಂಥ || ಮತ್ಸ್ಯಃ ಕೂರ್ಮಃ ವರಾಹಶ್ಚ ನಾರಸಿಂಹಶ್ಚ ವಾಮನಃ ರಾಮೋ ರಾಮಶ್ಚ [ಕೃಷ್ಣ]ಶ್ಚ ಬೌದ್ಧಃ ಕಲ್ಕಿ[ರೇ]ವ ಚ ಎಂದುದಾಗಿ, ಈ ದಶಾವತಾರಂಗಳಲ್ಲಿ ಯಾರಾರು ಸಂಹಾರ ಎಂದರೆ, ಮತ್ಯ್ಸಾವತಾರದಲ್ಲಿ ಅಮೃತಮಥನೇ ಸೋಮಕಾಸುರನ ಸಂಹಾರ. ಕೂರ್ಮಾವತಾರದಲ್ಲಿ ಮಂದರಪರ್ವತಕ್ಕೆ ಆಧಾರ. ವರಾಹಾವತಾರದಲ್ಲಿ ಹಿರಣ್ಯಾಕ್ಷನ ಸಂಹಾರ. ನರಸಿಂಹಾವತಾರದಲ್ಲಿ ಹಿರಣ್ಯಕಶ್ಯಪ ಸಂಹಾರ. ವಾಮನಾವತಾರದಲ್ಲಿ ಪಂಚಮೇಢ್ರಾಸುರ ಎಂಬ ರಾಕ್ಷಸನ ಸಂಹಾರ. ಪರಶುರಾಮಾವತಾರದಲ್ಲಿ ಕಾರ್ತವೀರ್ಯರ ಸಂಹಾರ. ರಫ್ಸುರಾಮಾವತಾರದಲ್ಲಿ ರಾವಣಕುಂಭಕರ್ಣರ ಸಂಹಾರ. 1ಬಲಭದ್ರ1 ನವತಾರದಲ್ಲಿ ಪ್ರಲಂಬಕವಾದ ಅಸುರರ ಸಂಹಾರ. ಬೌದ್ಧಾವತಾರದಲ್ಲಿ ತ್ರಿಪುರದಾನವಸತಿಯರ ಕೆಡಿಸಿದ. ಕಲ್ಕ್ಯವತಾರದಲ್ಲಿ 2ಕಂಸಾಸುರ, ನರಕಾಸುರ, ಬಾಣಾಸುರರ2 ಸಂಹಾರ, ಇವು ಹತ್ತು ದಶಾವತಾರಗಳು. ಒಂಬತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಒಂಬತ್ತು ಎಂದರೆ ನವಗ್ರಹಂಗಳು. ಅದು ಎಂತೆಂದರೆ: ಆದಿತ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ, ರಾಹು, ಕೇತು- ಇವು ಒಂಬತ್ತು ನವಗ್ರಹಂಗಳು. ಎಂಟು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಎಂಟು ಎಂದರೆ ಅಷ್ಟದಿಕ್ಪಾಲಕರು. ಅದು ಎಂತೆಂದರೆ: ಇಂದ್ರ, ಅಗ್ನಿ, ಯಮ, ನೈರುತಿ, ವರುಣ, ವಾಯುವ್ಯ, ಕುಬೇರ, ಈಶಾನ್ಯ- ಎಂಟು ಮಂದಿ ಅಷ್ಟದಿಕ್ಪಾಲಕರು. ಏಳು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಏಳು ಎಂದರೆ ಸಪ್ತಋಷಿಗಳು. ಅದು ಎಂತೆಂದರೆ: ಗ್ರಂಥ || ಕಶ್ಯಪಾತ್ರಿ ಭರದ್ವಾಜ[ಃ] ವಿಶ್ವಾಮಿ[ತ್ರಶ್ಚ] ಗೌತಮ[ಃ] ಜಮದಗ್ನಿ[ಃ] ವಸಿಷ್ಠ[ಶ್ಚ] ಸಪ್ತೈತೇ ಋಷಯ[ಃ ಸ್ಮøತಾಃ] ಎಂದುದಾಗಿ, ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ- ಇವರು ಏಳುಮಂದಿ ಸಪ್ತ ಋಷಿಗಳು. ಆರು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಆರು ಎಂದರೆ ಶಾಸತ್ತ್ರಂಗಳು. ಅದು ಎಂತೆಂದರೆ: ಶಿಲ್ಪಶಾಸ್ತ್ರ, ಭರತಶಾಸ್ತ್ರ, ತರ್ಕಶಾಸ್ತ್ರ, ಶಬ್ದಶಾಸ್ತ್ರ, ಆ[ನ್ವೀಕ್ಷಕೀ]ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ- ಇವು ಆರು ಶಾಸ್ತ್ರಂಗಳು. ಐದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಐದು ಎಂದರೆ ಈಶ್ವರನ ಪಂಚ ಮುಖಂಗಳು ಅದು ಎಂತೆಂದರೆ, ಗ್ರಂಥ || ಸದ್ಯೋಜಾ[ತೋ]ದ್ಭವೋರ್ಭೂಮಿಃ] ವಾಮದೇವೋದ್ಭ[ವಂ ಜಲಂ] ಅಫ್ಸೋ[ರಾದ್ವಹ್ನಿ]ರು[ದ್ಭೂತಂ] ತತ್ಪರು[ಷಾದ್ವಾಯುರ್ಭವೇತ್ ಈಶಾನಾದ್ಗಗನಂ ಜಾತಂ] ಎಂದುದಾಗಿ, ಸದ್ಯೋಜಾತಮುಖ, ವಾಮದೇವಮುಖ, ಅಘೋರಮುಖ, ತತ್ಪುರುಷಮುಖ, ಈಶಾನ್ಯಮುಖ- ಇವು ಐದು ಪಂಚಮುಖಂಗಳು. ನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ನಾಲಕ್ಕು ಎಂದರೆ ವೇದಂಗಳು. ಅದು ಎಂತೆಂದರೆ: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ- ಇವು ನಾಲ್ಕು ವೇದಂಗಳು. ಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಮೂರು ಎಂದರೆ ತ್ರಿಮೂರ್ತಿಗಳು. ಅದು ಎಂತೆಂದರೆ: ಬ್ರಹ್ಮ, ವಿಷ್ಣು, ಈಶ್ವರ- ಇವರು ಮೂವರು ತ್ರಿಮೂರ್ತಿಗಳು. ಎರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಎರಡು ಎಂದರೆ ಭಾನು ಶಶಿ. ಅದು ಎಂತೆಂದರೆ: ಸೂರ್ಯ, ಚಂದ್ರ- ಇವರಿಬ್ಬರು ಸೂರ್ಯಚಂದ್ರಾದಿಗಳು. ಒಂದು ಎಂದರೆ ನೋಡಿದ್ದೆನಪ್ಪ ಕೇಳಿದ್ದೇನಪ್ಪ ? ಒಂದು ಎಂದರೆ ಏಕೋ[ಏವ]ದೇವಃ ಅದು ಎಂತೆಂದರೆ: ದೇವನು ಒಬ್ಬನೇ. ದೇವನು] ಒಬ್ಬನೇ ಅಲ್ಲದೆ ಇಬ್ಬರೆಂದು ಬಗುಳುವನ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ನಿಮ್ಮ ತಂದಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಂದಿಯ ತಂದಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ಅಜ್ಜ ಪಣಜ ಸತ್ತದ್ದು ಕೇಳುತ್ತಿದ್ದಿ, ನಿಮ್ಮ ತಾಯಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಾಯಿಯ ತಾಯಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ತಾಯಿಯ ಅಜ್ಜಿ ಪಣಜಿ ಸತ್ತದ್ದು ಕೇಳುತ್ತಿದ್ದಿ. ನಿನ್ನ ಸತಿಸುತರು ಒಡಹುಟ್ಟಿದ ಬಂಧುಗಳು ಸ್ನೇಹಿತರು ಬೀಗರು ಮೊದಲಾದ ಸಕಲಲೋಕಾದಿಲೋಕಂಗಳು ನಿಮ್ಮ ಕಣ್ಣಮುಂದೆ ವೃಕ್ಷದ ಪರ್ಣಗಳು ಉದುರಿದ ಹಾಗೆ ಸಕಲರು ಅಳಿದುಹೋಗುವುದ ನೋಡುತ್ತಿದ್ದಿ. ಇದಲ್ಲದೆ ದೃಷ್ಟಾಂತ: ಒಬ್ಬ ರೋಮಜಋಷಿಗೆ ಮೂರುವರೆಕೋಟಿ ರೋಮಂಗಳುಂಟು, ಅಂತಹ ಋಷಿಗೂ ಕೃತಯುಗ, ತ್ರೇತಾಯುಗ, ದ್ವಾಪರ, ಕಲಿಯುಗವೆಂಬ ಚತುರ್ಯುಗ ಪ್ರಳಯವಾದಲ್ಲಿ ಒಂದು ರೋಮ ಉದುರುವದು. ಹೀಗೆ ಈ ಪರಿಯಲ್ಲಿ ಮೂರುವರೆಕೋಟಿ ರೋಮಂಗಳು ಉದುರಿದಲ್ಲಿ ಆ ರೋಮಋಷಿಯೆಂಬ ಮುನೀಶ್ವರನು ಪ್ರಳಯವಾಗುವನು. ಮತ್ತೆ ದೇವಲೋಕದ ಸನಕ ಸನಂದಾದಿ ಮುನಿಜನಂಗಳು ಅನಂತಕೋಟಿ ಋಷಿಗಳು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ತೆತ್ತೀಸಕೋಟಿ ದೇವರ್ಕಳು ಇಂತಿವರೆಲ್ಲರು ಎತ್ತಲಾನುಕಾಲಕ್ಕೆ ಮರಣಕ್ಕೆ ಒಳಗಾದರು. ವೇದಾಗಮ ಶಾಸ್ತ್ರ ಪುರಾಣ ಶ್ರುತಿ ಪ್ರಮಾಣಗಳಿಂದ ಮತ್ತೆ ಹರ, ಗುರು, ಪುರಾತನರ ವಾಕ್ಯದಿಂದ ನಿಮ್ಮ ಉಭಯ ಕರ್ಣದಿಂ ಕೇಳುತ್ತಿದ್ದಿ. ಇಂತೀ ಎಲ್ಲವನು ಕಂಡು ಕೇಳಿ ಗಾಢನಿದ್ರೆಯ ಮನುಷ್ಯನ ಹಾಂಗೆ ನಿನ್ನ ನಿಜಸ್ವರೂಪವ ಮರದು ತ್ರಿವಿಧಮಲವ ಕಚ್ಚಿ ಶುನಿ ಶೂಕರನ ಹಾಗೆ ಕಚ್ಚಿ ಕಡಿದಾಡಿ ಸತ್ತು ಹೋಗುವ ವ್ಯರ್ಥಗೇಡಿ ಮೂಳ ಹೊಲೆಮಾದಿಗರ ಕಿವಿ ಹರಿದು, ಕಣ್ಣುಗುಡ್ಡಿಯ ಮೀಟಿ, ನೆತ್ತಿಯ ಮೇಲೆ ಮೂರು ಪಟ್ಟೆಯನೆ ಕೆತ್ತಿ ಅವನ ಮುಖದ ಮೇಲೆ ಹೆಂಡಗಾರನ ಮುಖದಿಂದ ಲೊಟ್ಟಲೊಟ್ಟನೆ ಉಗುಳಿಸಿ ಪಡುವಲದಿಕ್ಕಿಗೆ ಅಟ್ಟೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನು ಆದಿಮೂಲ ಅನಾದಿಮೂಲಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತೀತ ಮೂಲಸ್ವಾಮಿಗತ್ತತ್ತವಾಗಿಹ ಆ ಅಖಂಡ ಮೂಲಸ್ವಾಮಿಯ ರೂಪು, ಲಾವಣ್ಯ, ಸೌಂದರ್ಯ, ಅಂಗ-ಪ್ರತ್ಯಂಗಸ್ವರೂಪ ಸ್ವಭಾವಗಳೆಂತೆಂದಡೆ : ಸಹಜ ನಿರಾಲಂಬವಾಗಿಹ, ಮಹಾಘನಕ್ಕೆ ಘನವಹ, ಮಹಾಘನವಾಗಿಹ ಪ್ರಣವವೆ ಅಖಂಡಮೂಲಸ್ವಾಮಿಯ ಶಿರಸ್ಸು ನೋಡಾ. ದಿವ್ಯಾನಂದಪ್ರಣವ ದಿವ್ಯಜ್ಞಾನ ಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಚಕ್ಷು. ನಿರಾಕಾರಪ್ರಣವ, ನಿರಾಳಪ್ರಣವವೆ ಆ ಅಖಂಡ ಮೂಲಸ್ವಾಮಿಯ ಪುರ್ಬು. ಅಚಲಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಹಣೆ ನೋಡಾ. ಸಹಜ ನಿರಾಲಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ನಾಸಿಕ. ನಿರಾಲಂಬಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಉಶ್ವಾಸ-ನಿಶ್ವಾಸಂಗಳು ನೋಡಾ. ನಿರಾಮಯಪ್ರಣವ ನಿರಾಮಯಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕರ್ಣ. ನಿರ್ವಯಲಪ್ರಣವ ನಿರ್ವಯಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಲ್ಲ ನೋಡಾ. ಅಮಲಪ್ರಣವ ಅಮಲಾನಂದಪ್ರಣವ ಅಮಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಡ್ಡ ಮೀಸೆ ಕೋರೆದಾಡೆ ನೋಡಾ. ನಾದ ಬಿಂದು ಕಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ತಾಳೋಷ*ಸಂಪುಟ ನೋಡಾ. ಸಹಜಪ್ರಣವ, ಸಹಜಾನಂದಪ್ರಣವ, ಸಹಜಜ್ಯೋತಿಪ್ರಣವ, ಅನಂತಪ್ರಣವ, ಆನಂದಪ್ರಣವ, ಆನಂದಜ್ಯೋತಿಪ್ರಣವ, ಅಖಂಡಪ್ರಣವ, ಅಖಂಡ ಜ್ಯೋತಿಪ್ರಣವ, ಅಖಂಡಾನಂದ ಮಹಾಜ್ಯೋತಿಪ್ರಣವ, ಚಿತ್ಪ್ರಣವ, ಚಿದಾನಂದಜ್ಯೋತಿಪ್ರಣವ, ಚಿದ್ವ್ಯೋಮಪ್ರಣವ, ನಿತ್ಯನಿಜಾನಂದಪ್ರಣವ, ಸಚ್ಚಿದಾನಂದಪ್ರಣವ, ನಿತ್ಯನಿರಾಕಾರಪ್ರಣವ, ಸಕಲ ನಿಃಕಲಾತೀತಪ್ರಣವವೆಂಬ ಷೋಡಶಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಷೋಡಶದಂತಂಗಳು ನೋಡಾ. ಆ ಒಂದೊಂದು ದಂತಂಗಳ ಕಾಂತಿಯೆ ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ಕುಳವಿಲ್ಲದ ನಿರಾಕುಳಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕೊರಳು. ಅಪ್ರಮಾಣ ಅಗೋಚರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಭುಜಂಗಳು ನೋಡಾ. ಪರಮಪ್ರಣವ, ಪರಮಾನಂದಪ್ರಣವ, ಶಿವಪ್ರಣವ, ಶಿವಜ್ಯೋತಿಪ್ರಣವ,ಅಚಲಪ್ರಣವ, ಅಚಲಾನಂದಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಹಸ್ತಾಂಗುಲಿ ನಖಂಗಳು ನೋಡಾ. ಪರಬ್ರಹ್ಮಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಎದೆ. ನಿರಂಜನ ಜ್ಯೋತಿಪ್ರಣವ ನಿರಂಜನಾನಂದವೆಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ಸಣ್ಣ ಕುಚಗಳು ನೋಡಾ. ನಿರುಪಮಪ್ರಣವ, ನಿರುಪಮಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ದಕ್ಷಿಣ ವಾಮ ಪಾಶ್ರ್ವಂಗಳು. ಅನಿರ್ವಾಚ್ಯಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನು. ಮಹದಾನಂದಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನಿನೆಲುವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗರ್ಭ ನೋಡಾ. ಆ ಗರ್ಭ ಅನಂತಕೋಟಿ ಮಹಾಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪ್ರಣವಂಗಳು, ಅನೇಕಕೋಟಿ ತತ್ವಂಗಳು, ಅನೇಕಕೋಟಿ ಅಕ್ಷರಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಪತಿಗಳು, ಅನೇಕಕೋಟಿ ಅನಾದಿಪಶುಗಳು, ಅನೇಕಕೋಟಿ ಅನಾದಿಪಾಶಂಗಳೆಂಬ ಅನಾದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿಪತಿಗಳು, ಅನೇಕಕೋಟಿ ಆದಿಪಶುಗಳು, ಅನೇಕಕೋಟಿ ಆದಿಪಾಶಂಗಳೆಂಬ ಆದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪತಿಗಳು, ಅನೇಕಕೋಟಿ ಪಶುಗಳು, ಅನೇಕಕೋಟಿ ಪಾಶಂಗಳೆಂಬ ಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ತತ್‍ಪದ, ಅನೇಕಕೋಟಿ ಅನಾದಿ ತ್ವಂಪದ, ಅನೇಕಕೋಟಿ ಅನಾದಿ ಅಸಿಪದಂಗಳೆಂಬ ಅನಾದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿ ತತ್‍ಪದ, ಅನೇಕಕೋಟಿ ಆದಿ ತ್ವಂಪದ, ಅನೇಕಕೋಟಿ ಆದಿ ಅಸಿಪದಂಗಳೆಂಬ ಆದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ತ್ವಂಪದಂಗಳು, ಅನೇಕಕೋಟಿ ತತ್ಪದಂಗಳು, ಅನೇಕಕೋಟಿ ಅಸಿಪದಂಗಳೆಂಬ ವೇದಾಂತ ಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರು, ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಆದಿಬ್ರಹ್ಮರು, ಅನೇಕಕೋಟಿ ನಾರಾಯಣರು, ಅನೇಕಕೋಟಿ ಆದಿನಾರಾಯಣರು, ಅನೇಕಕೋಟಿ ರುದ್ರರು, ಅನೇಕಕೋಟಿ ಆದಿರುದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಋಷಿಗಳು, ಅನೇಕಕೋಟಿ ಆದಿಋಷಿಗಳು, ಅನೇಕಕೋಟಿ ಭಾನು, ಅನೇಕಕೋಟಿ ಆದಿಭಾನು, ಅನೇಕಕೋಟಿ ಚಂದ್ರರು, ಅನೇಕಕೋಟಿ ಆದಿಚಂದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ಆದಿಮಹೇಂದ್ರರು, ಅನೇಕಕೋಟಿ ದೇವರ್ಕಳು, ಅನೇಕಕೋಟಿ ಆದಿದೇವರ್ಕಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮಾಂಡಂಗಳು, ಅನೇಕಕೋಟಿ ಮಹಾಬ್ರಹ್ಮಾಂಡಂಗಳು, ಅನೇಕಕೋಟಿ ಆದಿಮಹಾಬ್ರಹ್ಮಾಂಡಂಗಳು ಅಡಗಿಹವು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ನಡುವೇ ವ್ಯೋಮಾತೀತಪ್ರಣವವು. ಆ ಅಖಂಡ ಮಹಾಮೂಲಸ್ವಾಮಿಯ ಕಟಿಸ್ಥಾನವೇ ಚಿತ್ಕಲಾತೀತಪ್ರಣವ. ಆ ಅಖಂಡ ಮಹಾಮೂಲಸ್ವಾಮಿಯ ಪಚ್ಚಳವೇ ಅನಾದಿಪ್ರಣವ ಆದಿಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಉಪಸ್ಥವೇ ಅನೇಕಕೋಟಿ ಬ್ರಹ್ಮ-ವಿಷ್ಣು-ರುದ್ರ-ಈಶ್ವರ-ಸದಾಶಿವ ಮೊದಲಾದ ಅನೇಕಕೋಟಿ ದೇವರ್ಕಳಿಗೂ ಜನನಸ್ಥಲವಾಗಿಹ ನಿರ್ವಾಣಪ್ರಣವ ನೋಡಾ. ಕಲಾನಂದಪ್ರಣವ ಬ್ರಹ್ಮಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳದೊಡೆ ನೋಡಾ. ಚಿಜ್ಜ್ಯೋತಿಪ್ರಣವ, ಪರಂಜ್ಯೋತಿಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳಪಾದ ಕಂಭಂಗಳು ನೋಡಾ. ನಿಶ್ಶಬ್ದಪ್ರಣವ, ನಿಶ್ಶಬ್ದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಹರಡು ನೋಡಾ. ಓಂಕಾರಪ್ರಣವ ಮಹದೋಂಕಾರಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಂಗಳು ನೋಡಾ. ಆ ಓಂಕಾರ ಪ್ರಣವದ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವೆಂಬ ಪ್ರಣವದತ್ತತ್ತ ಸ್ಥಾನಂಗಳೇ ಆ ಅಖಂಡ ಮಹಾಮೂಲಸ್ವಾಮಿಯ ಪದಾಂಗುಲಿಗಳು ನೋಡಾ. ಆ ಓಂಕಾರಪ್ರಣವದ ಮಹದೋಂಕಾರಪ್ರಣವದ ಮಹಾಪ್ರಕಾಶವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಾಂಗುಷಾ*ಂಗುಲಿಗಳು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಸರವೇ ಪರಾತೀತಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಮಾತೇ ಮಹಾಜ್ಯೋತಿ ಪ್ರಣವಕತ್ತತ್ತವಾಗಿಹ ಅತಿಮಹಾಜ್ಯೋತಿಪ್ರಣವ ನೋಡಾ. ಶೂನ್ಯ-ನಿಃಶೂನ್ಯ ಆ ಮಹಾಶೂನ್ಯಕತ್ತತ್ತವಾದ ಮಹದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ವಪೆ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯಲ್ಲಿ ಅನಂತಕೋಟಿ ನಿರಾಳಸ್ವಯಂಭುಲಿಂಗ ಅಡಗಿಹವಾಗಿ ಆ ನಿರಾಳಸ್ವಯಂಭುಲಿಂಗಂಗಳೇ ಸ್ಥಾನದಲ್ಲಿ ಧರಿಸಿಹ ಭೂಷಣಂಗಳು ನೋಡಾ. ಜ್ಞಾನಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ತುರುಬು ನೋಡಾ. ಆನಂತಕೋಟಿ ಪ್ರಣವಂಗಳನೊಳಕೊಂಡಿಹ ಮಹಾಭೂತಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಶೃಂಗಾರ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ ಮಣ್ಣು ಮಟ್ಟಿಯ ಧರಿಸಿ ಭವಭಾರಕ್ಕೆ ಒಳಗಾದರು ವಿಪ್ರ ಮೊದಲು ಶ್ವಪಚ ಕಡೆಯಾಗಿ ನೋಡಾ. ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ ದೇವ-ದಾನವ-ಮಾನವರು ಮೊದಲಾದ ಸಕಲ ಲೋಕಾದಿಲೋಕಂಗಳು ಭವಕ್ಕೆ ಭಾಜನವಾದರು ನೋಡಾ. ಶ್ರೀ ವಿಭೂತಿಯ ಧರಿಸಲರಿಯದೆ ಗರುಡ ಗಂಧರ್ವ ಕಿನ್ನರ ಕಿಂಪುರುಷರು ಮೊದಲಾದ ಸಕಲ ಮನುಮುನಿಜನಂಗಳು ಋಷಿಗಳು ಭವಕ್ಕೆ ಗುರಿಯಾದರು ನೋಡಾ. ಶ್ರೀ ವಿಭೂತಿಯ ಧರಿಸಲರಿಯದೆ ಅಂಗಾಲಕಣ್ಣವರು ಮೈಯೆಲ್ಲಕಣ್ಣವರು ಒಂದುತಲೆಯವರು ಎರಡುತಲೆಯವರು ಮೂರುತಲೆಯವರು ನಾಲ್ಕುತಲೆಯವರು ಐದುತಲೆಯವರು ಆರುತಲೆಯವರು ಏಳುತಲೆಯವರು ಎಂಟುತಲೆಯವರು ಒಂಬತ್ತು ತಲೆಯವರು ಹತ್ತುತಲೆಯವರು ಹನ್ನೊಂದುತಲೆಯವರು ನೂರುತಲೆಯವರು ಐದುನೂರುತಲೆಯವರು ಸಾವಿರತಲೆಯವರು ಗಂಗೆಗೌರಿವಲ್ಲಭರು ಸಮಾರುದ್ರರು ನಂದಿವಾಹನರು ಇಂತಪ್ಪವರೆಲ್ಲ ಆದಿಪ್ರಮಥರು ಇವರು ಎತ್ತಲಾನುಕಾಲಕ್ಕೆ ಭವಕ್ಕೆ ಬರುವರು ನೋಡಾ. ಮತ್ತಂ, ಇಂತಪ್ಪ ಶ್ರೀ ವಿಭೂತಿಯನು ಬಸವಾದಿ ಪ್ರಭುದೇವರಾಂತ್ಯಮಾದ ಏಳುನೂರುಯೆಪ್ಪತ್ತು ಪ್ರಮಥಗಣಂಗಳು ಮೂಳ್ಳೂರಲಿಕ್ಕೆ ಇಂಬಿಲ್ಲದೆ ಸರ್ವಾಂಗದಲ್ಲಿ ಧರಿಸಿ ತ್ರೈಲೋಕ ಮೊದಲಾದ ಚತುರ್ದಶಭುವನವ ತಮ್ಮ ಚರಣದಿಂದ ಸ್ವಯವಮಾಡಿ ಪರಶಿವಲಿಂಗದಲ್ಲಿ ಶಿಖಿಕರ್ಪುರ ಸಂಯೋಗದ ಹಾಗೆ ಬೆರೆದು ನಿರ್ವಯಲಾದರು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶ್ರುತಿವಿಧಿಸಿದ ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು ಭವಭೀತಿ ಮೃತ್ಯುಭಯಕ್ಕಂಜಿ ಜಮದಗ್ನಿ ಅಗಸ್ತ್ಯ ಕಸ್ಯಪ ಮೊದಲಾದ ಎಲ್ಲಾ ಋಷಿಗಳು ಧರಿಸಿ ಕೊರಜರಾದರು ನೋಡಾ. ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು ಎಲ್ಲಾ ದೇವರ್ಕಳು ಎಲ್ಲಾ ಶ್ರುತಿ ಸ್ಮøತಿಗಳು ಧರಿಸಿದವು ನೋಡಾ. ಶ್ರೀವಿಭೂತಿಯೆ ಪರಂಜ್ಯೋತಿಯೆಂದರಿದು ಗಾಯತ್ರಿ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳು ಧರಿಸಿದರು ನೋಡಾ. ಶ್ರೀವಿಭೂತಿಯ ಪರಂಜ್ಯೋತಿ ನಿರುತವಿದು ನಂಬಿ ಧರಿಸಿ ಬದುಕು ಮನುಜಾ. ಶ್ರೀವಿಭೂತಿಯೆ ಪರಂಜ್ಯೋತಿಯೆಂಬುದು. ಇದಕ್ಕೆ ಜಾಬಾಲೋಪನಿಷತ್ : ``ಓಂ ಸ ಏಷ ಭಸ್ಮ ಜ್ಯೋತಿ ಸ್ಸಏಷ ಭಸ್ಮ ಜ್ಯೋತಿರಿತ'' ಇಂತೆಂದುದು ಶ್ರುತಿ. ಇದಕ್ಕೆ ಮಾನವಪುರಾಣೇ : ``ಭಸ್ಮ ಜ್ಯೋತಿರ್ಭವತ್ಯೇವ ಶಿವಾಖ್ಯಂ ನ ಹಿ ಸಂಶಯಃ | ಜಾಬಾಲೋಪನಿಷತ್ಸರ್ವಂ ಪ್ರಾಹೇದಂ ಪರಯಾ ಮುದಾ ||'' ಇಂತೆಂದುದಾಗಿ, ಇನ್ನು ವಿಭೂತಿ ಅಭಿಮಂತ್ರ ವಿಭೂತಿಧಾರಾ ಎಂಬುದಕ್ಕೆ ಕಾತ್ಯಾಯನ ಗೃಹ್ಯೇ, ಕಾತ್ಯಾಯನ ಸ್ಮೃತಿ, ಬೋಧಾಯನ ಸ್ಮೃತಿ, ಅಭಿಮಂತ್ರ ಶ್ರುತಿ : ``ಮಾನಸ್ತೋಕೇ ತನಯೇ ಮಾನ ಆಯುಷಿ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ | ವೀರಾನ್ಮಾನೋ ರುದ್ರ ಭಾಮಿತೋ ವಧೀರ್ಹವಿಷ್ಮಂತೋ ಶಮಿತ್ವಾ ಹವಾಮಹೇ ||'' ಇಂತೆಂದುದು ಶ್ರುತಿ. ಇನ್ನು ವಿಭೂತಿಧಾರಾ ಎಂಬುದಕ್ಕೆ ಶ್ರುತಿ: ``ಓಂ, ಕುಕ್ಷರುಷಿ ರುದ್ರೋ ದೇವತಾ ಜಗತೀ ಛಂದಃ | ಓಂ, ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯ ತ್ರಿಯಾಯುಷಂ | ಅಗಸ್ತ್ಯಸ್ಯ ತ್ರಿಯಾಯುಷಂ ತನ್ಮೇ ಅಸ್ತು ತ್ರಿಯಾಯುಷಂ | ಯದ್ದೇವಾನಾಂ ತ್ರಿಯಾಯುಷಂ ಶತಾಯುಷಂ ಕುರು ತ್ವಾನಿ || ಲಲಾಟ ಭುಜದ್ವಯಂ ನಾಭೇರುತ್ವಾರುಷಿ | ಬ್ರಹ್ಮಣ ರುಷಿ ವೈದಿಕಂ ಸದಾ || '' ಇಂತೆಂದುದು ಶ್ರುತಿ. ಇದಕ್ಕೆ ಬೋಧಾಯನ ಶ್ರುತಿ : ``ಮಾನಸ್ತೋಕೇತ್ಯಾದಿ ಮಂತ್ರೇಣ ಮಂತ್ರಿತಂ ಭಸ್ಮ ಧಾರಯೇತ್ | ಊಧ್ರ್ವಪುಂಡ್ರಂ ಭವೇತ್ ಸಾಮ ಮಧ್ಯಪುಂಡ್ರಂ ಯಜೂಂಷಿ ಚ | ಅಧಃ ಪುಂಡ್ರಮೃಚಃ ಸಾಕ್ಷಾತ್ ತಸ್ಮಾತ್ ಪುಂಡ್ರಂ ತ್ರಿಯಾಯುಷಂ ||'' ಇದಕ್ಕೆ ಲೈಂಗ್ಯ ಪುರಾಣೇ : ``ಅಕಾರೋನಾಮಿಕಂ ಪ್ರೋಕ್ತಂ ಉಕಾರೋ ಮಧ್ಯಮಾಂಗುಲಿಃ | ಮಕಾರೋ ತಜ್ರ್ಜನಿಸ್ಥಾನಂ ತ್ರಿಭಿಃ ಕುರ್ಯಾತ್ ತ್ರಿಪುಂಡ್ರಕಂ ||'' ಇಂತೆಂದುದಾಗಿ. ಇದಕ್ಕೆ ಕಾಲಾಗ್ನಿರುದ್ರೋಪನಿಷತ್ : ``ಹರಃ ಓಂ, ಅಥ ಕಾಲಾಗ್ನಿರುದ್ರಂ ಭಗವಂತಂ ಸನತ್ಕುಮಾರಃ ಅಪಪ್ರಚ್ಛಧೀಹಿ ಭಗವನ್ ತ್ರಿಪುಂಡ್ರವಿಧಿಂ ಸತತ್ವಂ ಕಿಂ ದ್ರವ್ಯಂ ಕ್ರಿಯತ್ ಸ್ಥಾನಂ ಕತಿ ಪ್ರಮಾಣಂ ಕಾ ರೇಖಾ ಕೇ ಮಂತ್ರಾಃ ಕಾ ಶಕ್ತಿಃ ಕಿಂ ದೈವತಂ ಕಃ ಕರ್ತಾ ಕಿಂ ಫಲಮಿತಿ ಚ || ತಂ ಹ್ಯೋವಾಚ ಭಗವಾನ್ ಕಾಲಾಗ್ನಿ ರುದ್ರಃ ಯದ್ದ್ರವ್ಯಂ ತದಾಗ್ನೇಯಂ ಭಸ್ಮ, ಸದ್ಯೋಜಾತಾದಿ ಪಂಚಬ್ರಹ್ಮ ಮಂತ್ರೈಃ ಪರಿಗೃಹ್ಯ ಅಗ್ನಿರಿತಿ ಭಸ್ಮೇತ್ಯನೇನ ಚಾಭಿಮಂತ್ರ್ಯ ಮಾನಸ್ತೋಕ ಇತಿ ಸಮುದ್ದøತ್ಯ, ಮಾನೊ ಮಹಾಂತಮಿತಿ ಜಲೇನ ಸಂಸೃಜ್ಯ, ತ್ರಿಯಾಯುಷಮಿತಿ ಶಿರೋ ಲಲಾಟವಕ್ಷ ಸ್ಕಂಧೇಷು ತ್ರಿಯಾಯುಷೈಸ್ತ್ರ್ಯಂಬಕೈಸ್ತ್ರಿಶಕ್ತಿಭಿಸ್ತಿರ್ಯಕ್ ತಿಸ್ರೋ ರೇಖಾಃ ಪ್ರಕುರ್ವೀತ ವ್ರತಮೇತಚ್ಛಾಂಭವಂ ಸರ್ವೇಷು ದೇವೇಷು ವೇದವೇದಾದಿಭಿರುಕ್ತಂ ಭವತಿ ತಸ್ಮಾತ್ತತ್ಸಮಾಚರೇನ್ಮುಮುಕ್ಷುರ್ನಪುನರ್ಭವಾಯ || ಅಥ ಸನತ್ಕುಮಾರಃ ಪಪ್ರಚ್ಛ ಪ್ರಮಾಣಮಸ್ಯ ತ್ರಿಪುಂಡ್ರಧಾರಣಸ್ಯ ತ್ರಿಧಾರೇಖಾಭವತ್ಯಾಲಲಾಟಾದಾಚಕ್ಷುಷೋರಾಮೂಧ್ರ್ನೋರಾಭ್ರುವೋರ್ಮ- ಧ್ಯತಶ್ಚ ಪ್ರಥಮಾ ರೇಖಾ ಸಾ ಗಾರ್ಹಪತ್ಯಶ್ಚಾಕಾರೋ ರಜೋ ಭೂರ್ಲೋಕಃ ಸ್ವಾತ್ಮಾ ಕ್ರಿಯಾಶಕ್ತಿಃ ಋಗ್ವೇದಃ ಪ್ರಾತಃ ಸವನಂ ಮಹೇಶ್ವರೋ ದೇವತೇತಿ || ಯಾsಸ್ಯ ದ್ವಿತೀಯಾ ರೇಖಾ ಸಾ ದಕ್ಷಿಣಾಗ್ನಿರುಕಾರಃ ಸ್ವತ್ವ ಮಂತ್ರರಿಕ್ಷಮಂತರಾತ್ಮಾ ಚೇಚ್ಛಾಶಕ್ತಿಃ ಯಜುರ್ವೇದೋ ಮಾಧ್ಯಂ ದಿನಂ ಸವನಂ ಸದಾಶಿವೋ ದೇವತೇತಿ || ಯಾsಸ್ಯ ತೃತೀಯಾ ರೇಖಾ ಸಾsಹವನೀಯೋ ಮಕಾರಸ್ತಮೋ - ದ್ಯೌರ್ಲೋಕಃ ಪರಮಾತ್ಮಾ ಜ್ಞಾನಶಕ್ತಿಃ ಸಾಮವೇದಸ್ತøತೀಯಂ ಸವನಂ ಮಹಾದೇವೋ ದೇವತೇತಿ || ಏವಂ ತ್ರಿಪುಂಡ್ರವಿಧಿಂ ಭಸ್ಮನಾ ಕರೋತಿ ಯೋ ವಿದ್ವಾನ್ ಬ್ರಹ್ಮಚಾರೀ ಗೃಹೀ ವಾನಪ್ರಸ್ಥೋ ಯತಿರ್ವಾ ಸಃ ಸಮಸ್ತ ಮಹಾಪಾತಕೋ - ಪಪಾತಕೇಭ್ಯಃ ಪೂತೋ ಭವತಿ, ಸ ಸರ್ವೇಷು ತೀರ್ಥೇಷು ಸ್ನಾತೋ ಭವತಿ, ಸ ಸರ್ವಾನ್ ಜ್ಞಾತೋ ಭವತಿ, ಸ ಸರ್ವಾನ್ ವೇದಾನಧೀತೋ ಭವತಿ, ಸ ಸತತಂ ಸಕಲರುದ್ರಮಂತ್ರಜಾಪೀ ಭವತಿ, ಸ ಸಕಲಭೋಗಾನ್‍ಭುಂಕ್ತೆ ದೇಹಂತ್ಯಕ್ತ್ವ ಶಿವಸಾಯುಜ್ಯಮೇತಿ ನ ಸ ಪುನರಾವರ್ತತೇನ ಸ ಪುನರಾವರ್ತತ ಇತ್ಯಾಹ ಭಗವಾನ್ ಕಾಲಾಗ್ನಿರುದ್ರಃ ||'' ಇಂತೆಂದುದಾಗಿ, ಇದಕ್ಕೆ ಭೀಮತಂತ್ರಾಗಮೇ : ``ಸರ್ವತೀರ್ಥೇಷು ಯತ್‍ಪುಣ್ಯಂ ಸರ್ವಯಜ್ಞೇಷು ಯತ್‍ಫಲಂ| ತತ್‍ಫಲಂ ಕೋಟಿಗುಣಿತಂ ಭಸ್ಮಸ್ನಾನಾನ್ನಸಂಶಯಃ||'' ಇಂತೆಂದುದಾಗಿ, ಇದಕ್ಕೆ ಭವಿಷ್ಯೋತ್ತರಪುರಾಣೇ : ``ಶಿವಾಗ್ನಿಕಾರ್ಯಂ ಯಃ ಕೃತ್ವಾ ಕುರ್ಯಾತ್ರಿಯಾಯುಷಂ | ಆತ್ಮವಿತ್ ವಿಶುದ್ಧ ಃ ಸರ್ವಪಾಪೈಶ್ಚ ಸಿತೇನ ಭಸ್ಮನಾ || '' ಇಂತೆಂದುದಾಗಿ, ಇದಕ್ಕೆ ಪರಾಶರಪುರಾಣೇ : ``ಕ್ರಿಯಾಯುಷ್ಯಾಣಿ ಕುರುತೇ ಲಲಾಟೇಚ ಭುಜದ್ವಯೇ | ನಾಶಿಕಾಂತೇ ಚ ಧೃತ್ವಾರ್ಷೇ | '' (?) ಇದಕ್ಕೆ ಬ್ರಹ್ಮಪುರಾಣೇ : ``ಶ್ರಾದ್ಧೇ ಯಜ್ಞೇ ಜಪೇ ಹೋಮೇ ವೈಶ್ವದೇವೇ ಸುರಾರ್ಚನೇ | ಧೃತತ್ರಿಪುಂಡ್ರಪೂತಾತ್ಮಾ ಮೃತ್ಯುಂ ಜಯತಿ ಮಾನವ ಃ || '' ಇಂತೆಂದುದಾಗಿ, ಇದಕ್ಕೆ ಆದಿತ್ಯಪುರಾಣೇ : ``ಸರ್ವಾಶ್ರಮಾಣಾಂ ವರ್ಣಾನಾಂ ಭಸ್ಮ ರುದ್ರಾಕ್ಷ ಧಾರಣಂ | ಕರ್ತವ್ಯಂ ಮಂತ್ರತಶ್ಚೋಕ್ತಂ ದ್ವಿಜಾನಾಂ ನಾತ್ರ ಸಂಶಯಃ || '' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ ಃ ``ವಿಪ್ರಾದೀನಾಂಚ ಸರ್ವೇಷಾಂ ಲಲಾಟಂ ಭಸ್ಮಶೂನ್ಯಕಂ | ಭಿಕ್ಷಾ ಚ ಜಪಹೋಮಂ ಚಾರ್ಪಣಂ ನಿಷ್ಫಲಂ ಭವೇತ್ || '' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ಸಿತೇನ ಭಸ್ಮನಾ ಕಾರ್ಯಂ ತ್ರಿಸಂಧ್ಯಾಂ ತ್ರಿಪುಂಡ್ರಕಂ | ಸರ್ವಪಾಪವಿನಿರ್ಮುಕ ್ತಃ ಶಿವಸಾಯುಜ್ಯಮಾಪ್ನುಯಾತ್ || '' ಇಂತೆಂದುದಾಗಿ, ಇದಕ್ಕೆ ಲೋಕಾಕ್ಷಿ ಸ್ಮೃತಿ : ``ಮಧ್ಯಮಾನಾಮಿಕಾಂಗುಷೆ*ೀ ತ್ರಿಪುಂಡ್ರಂ ಭಸ್ಮನಾ ಧೃತಂ | ತತ್ತ್ರಿಪುಂಡ್ರಂ ಭವೇತ್ಪುಣ್ಯಂ ಮಹಾಪಾತಕನಾಶಕಂ ''|| ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ನೃಪಾಣಾವಿೂೀಶ್ವರಾಣಾಂ ಚ ಭಸ್ಮೀ ತ್ರೇಣ ಚ ಚಂದನಂ | ತ್ರಿಪುಂಡ್ರಂ ವಿಧಿವತ್ಕುರ್ಯಾತ್ ಸುಗಂಧೇನಾಪಿ ವಾಗುಹಾಂ || ಭಸ್ಮನಾಯೈ ತ್ರಿಸಂಧ್ಯಾಂ ಚ ಗೃಹಸ್ಥೋ ಜಲಸಂಯುತಂ | ಸರ್ವಕಾಲೇ ಭವೇತ್ ಸ್ತ್ರೀಣಾಂ ಯತಿನಾಂ ಜಲವರ್ಜಿತಂ || ವಾನಪ್ರಸ್ಥೇಷು ಕಾಂಸ್ಯಾನಾಂ ದೀಕ್ಷಾಹೀನಂ ಮೃಣಂ ತಥಾ | ಮಧ್ಯಾಹ್ನೇ ಪ್ರಾಕ್‍ಜಲಯುಕ್ತಂ ಪರಾಕ್ ಜಲವಿವರ್ಜಿತಂ ||'' ಇಂತೆಂದುದಾಗಿ, ಇದಕ್ಕೆ ಕ್ರಿಯಾಸಾರೇ : ``ಶುದ್ಧ ತಾ ಜಲೇನೈೀವ ಭಸ್ಮಸ್ಯಾತ್ ತ್ರಿಪುಂಡ್ರಕಂ | ಯೋ ಧಾರಯೇತ್ ಪರಬ್ರಹ್ಮ ಸಂಪ್ರಾಪ್ನೋತಿ ನ ಸಂಶಯಃ|| ಮಧ್ಯಮಾನಾಮಿಕಾಂಗುಷೆ* ೈರನುಲೋಮವಿಲೋಮತಃ ||'' ಧಾರಯದ್ಯಗ್ನಿ ತ್ರಿಪುಂಡ್ರಾಂತಂ ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುಗಾಗಿ, ಇದಕ್ಕೆ ಕ್ರಿಯಾಸಾರೇ : ``ಮಧ್ಯಾಂಗುಲಿ ತ್ರಯೇಣೈವ ಸ್ವದಕ್ಷಿಣ ಕರಸ್ಯ ತು | ಷಡಂಗುಲಾಯತಂ ಮಾನಮಪಿವಾsಲಿಕಮಾನನಂ || ಷಡಂಗುಲಪ್ರಮಾಣೇನ ಬ್ರಾಹ್ಮಣಾನಾಂ ತ್ರಿಪುಂಡ್ರಕಂ | ನೃಪಾನಾಂ ಚತುರಂಗುಲ್ಯಂ ವೈಶ್ಯಾನಾಂ ಚ ದ್ವಿರಂಗುಲಂ | ಶೂದ್ರಾಣಾಂ ಚ ಸರ್ವೇಷಾಂ ಏಕಾಂಗುಲಾ ತ್ರಿಪುಂಡ್ರಕಂ ||'' ಇಂತೆಂದುಗಾಗಿ, ಇದಕ್ಕೆ ಭೀಮಸಂಹಿತಾಯಾಂ : ``ಮೂಧ್ರ್ನಾ ಲಲಾಟಕಂ ದ್ಯೌಶ್ಚ ಶ್ರೋತ್ರೇ ಬಾಹೂ ತಥೈೀವ ಚ | ಹೃದಯಂ ನಾಭಿಪೃಷೌ* ಚ ಹಸ್ತೋ ವೈ ಸಂಧಯಃ ಕ್ರಮಾತ್ || ಮೂಧ್ರ್ನಿಃ ಸ್ಯಾತ್ ಬ್ರಹ್ಮಣ ಪ್ರೀತಿಃ ಲಲಾಟೇ ಚ ಸರಸ್ವತೀ | ಕಂಠೋ ಲಕ್ಷ್ಮ್ಯಾ ಭವೇತ್ ಪ್ರೀತಿಃ ಸ್ಕಂದೇ ಪೀಣಾತಿ ಪಾರ್ವತಿ || ಇಂದ್ರ ಪ್ರೀತಿ ಕರಂ ಬಾಹೋ ಹೃದಯಂ ಚ ಶರಪ್ರಿಯಂ | ಅನೇನ ವಿಧಿನಾ ಚೈವ ವಿಭೂತಿಂ ಧಾರಯೇತ್ ಸುಧೀಃ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ತ್ರಿಪುಂಡ್ರಂ ಬ್ರಹ್ಮಣೋ ವಿದ್ವಾನ್ ಮನಸಾsಪಿ ನ ಲಂಘಯೇತ್ | ಶ್ರುತ್ವಾ ವಿಧೀಯತೇ ಯಸ್ಮಾತ್ ತತ್ಯಾನಿ ಪತಿತೋ ಭವೇತ್ ||'' ಇಂತೆಂದುದಾಗಿ, ಇದಕ್ಕೆ ಮತ್ಸ್ಯಪುರಾಣೇ : ``ನ ಚ ಶೌಚಂ ತಪೋ ಯಜ್ಞಂ ತೀರ್ಥಂ ದೇವಾಗ್ನಿಪೂಜನಂ | ಅಶ್ವಮೇಧಮಿದಂ ವ್ಯರ್ಥಂ ತ್ರಿಪುಂಡ್ರೋ ಯೋ ನ ಧಾರಯೇತ್ ||'' ಇಂತೆಂದುದಾಗಿ, ಇದಕ್ಕೆ ಬ್ರಹ್ಮಾಂಡಪುರಾಣೇ : ``ವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞೇನ ವೇದಿನಾಂ | ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಮಭೂಃ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಸರ್ವೇ ತಪಸ್ವಿನಃ ಪ್ರೋಕ್ತಾಃ ಸರ್ವೇ ಯಜ್ಞೇಷು ಭಾಗಿನಃ | ರುದ್ರಭಕ್ತಾ ಸ್ಮøತಾಸ್ಸರ್ವೇ ತ್ರಿಪುಂಡ್ರಾಂಕಿತಮಸ್ತಕಾಃ ||'' ಇಂತೆಂದುದಾಗಿ, ಇದಕ್ಕೆ ಕ್ರಿಯಾಸಾರೇ : ``ಶಿರೋ ಲಲಾಟೇ ಶ್ರವಣೋದ್ವಯಾಗ್ನಿರ್ವಾಭುಜದ್ವಯಂ | ವಕ್ಷೋ ನಾಭಿಃ ಪೃಷ*ಭಾಗೇ | ಕಕುದಿತ್ಯೇಕದೋದಶ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಮೂಧ್ನೇ ಲಾಲಟೇ ಕರ್ಣೇ ಚ ಚಕ್ಷುಷೇ ಮಸ್ತಕಸ್ತಥಾ | ಅನ್ಯ ಬಾಹು ಭುಜದ್ವಂದ್ವಂ ಸ್ಥಾನಾವಪ್ಯುದರಂ ತಥಾ || ಮಣಿಬಂಧೇಷು ಧೃತ್ವಾ ಪಾಶ್ರ್ವೇ ನಾಭಿಮೇಢ್ರಂ ಚ ಪೃಷ್ಟಕಂ | ಊರೂ ಚ ಚಾಮಕಾಶ್ಚ ೈವ ಸಂಷ್ಟಪಿ ಯಥಾಕ್ರಮಂ || ವಿಧಿವತ್‍ಭಸ್ಮಸ್ನಾನಂ ಧಾರಣಂ ಮೋಕ್ಷಕಾರಣಂ || '' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ಶಿರೋ ಫಾಲಃ ಕರ್ಣಕಂ ತೌಚ ಬಾಹೂ ಚ ಮಣಿಬಂಧಕೇ | ಹೃದಯಂ ಚ ಪರಂ ಚೈವ ನಾಭಿ ಭುಜದ್ವಯಂ ತಥಾ || ಓಷಾ*ವಪಿ ಚ ವಿಜ್ಞೇಯೋ ಷೋಡಶಃ ಸಂಧಯಃ ಸ್ಮøತಾಃ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಲಲಾಟಾಂಘ್ರಿವಾಂ ಭುಜಾತ್ ಹೃದಯಂ ನಾಭಿರೇವ ಚ | ಅಪರೇ ಸಂಧಯೋ ಜ್ಞೇಯಾ ಅಷ್ಟಸ್ಥಾನಂ ಚ ಭೂಷಣಂ || ಭಸ್ಮಸ್ನಾನಂ ನರೋ ತೀರ್ಥಂ ಗಂಗಾಸ್ನಾನಂ ದಿನೇ ದಿನೇ | ಭಸ್ಮರೂಪಂ ಶಿವಂ ಸಾಕ್ಷಾದ್ಭಸ್ಮ ತ್ರೈಲೋಕ್ಯಸಾಧನಂ || '' ಇಂತೆಂದುದಾಗಿ, ಇದಕ್ಕೆ ಯಜುರ್ವೇದ : ``ಓಂ ಭಾಗದ್ವಯೇವಾಯೇವಂ ಪ್ರಣಯೇತಿ ಬ್ರಾಹ್ಮಣಃ | ಆ ಋಷಯಃ ಉದ್ಧರೇವ ಬ್ರಾಹ್ಮಣೋ ವೈ ಸರ್ವದೇವತಾಃ | ಸರ್ವಾದಿ ದೇವೈಃ ಆನಂದೇವತಾಭಿರುದ್ಧತಿ || '' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ಜಲಸ್ನಾನಂ ತಪಃ ಪುಣ್ಯಂ ಮಂತ್ರಸ್ನಾನಂ ಕುಲಕ್ಷಯಃ| ವಿಭೂತಿರೇಣುಮಾತ್ರೇಣ ತತ್ಫಲಂ ಶ್ರುಣು ಪಾರ್ವತಿ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಶ್ರೀಮತ್ ತ್ರಿಪುಂಡ್ರಮಹಾತ್ಮ್ಯಂ ಯಃ ಪಠೇತ್ ಸತತಂ ನರಃ | ಈಹೇಷ್ಟಾನ್ ಸಕಲಾನ್ ಪ್ರಾಪ್ಯ ಗಚ್ಛಂತಿ ಪರಮಂ ಪದಂ ||'' ಇಂತೆಂದುದಾಗಿ, ಇದನರಿದು ಶ್ರೀ ವಿಭೂತಿಯ ಧರಿಸದ ಕರ್ಮಿಯ ಎನಗೊಮ್ಮೆ ತೋರದಿರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅನಾದಿ ಸದಾಶಿವತತ್ವ, ಅನಾದಿ ಈಶ್ವರತತ್ವ, ಅನಾದಿ ಮಹೇಶ್ವರತತ್ವವೆಂಬ, ಅನಾದಿ ತ್ರಿತತ್ವಂಗಳು ತಾನಲ್ಲ. ಆದಿ ಸದಾಶಿವತತ್ವ, ಆದಿ ಈಶ್ವರತತ್ವ, ಆದಿ ಮಹೇಶ್ವರತತ್ವವೆಂಬ ಆದಿ ತ್ರಿತತ್ವಂಗಳು ತಾನಲ್ಲ. ಶಂಕರ ಶಶಿಧರ ಗಂಗಾಧರ ಗೌರೀಶ ಕಳಕಂಠ ರುದ್ರ, ಕಪಾಲಮಾಲಾಧರ ರುದ್ರ,ಕಾಲಾಗ್ನಿರುದ್ರ, ಏಕಪಾದರುದ್ರ, ಮಹಾಕಾಲರುದ್ರ, ಮಹಾನಟನಾಪಾದರುದ್ರ, ಊಧ್ರ್ವಪಾದರುದ್ರ, ಬ್ರಹ್ಮಕಪಾಲ ವಿಷ್ಣುಕಂಕಾಳವ ಪಿಡಿದಾಡುವ ಪ್ರಳಯಕಾಲರುದ್ರರು, ತ್ರಿಶೂಲ ಖಟ್ವಾಂಗಧರರು ವೃಷಭವಾಹನರು ಪಂಚಮುಖರುದ್ರರು, ಶೂನ್ಯಕಾಯನೆಂಬ ಮಹಾರುದ್ರ, ಅನೇಕಮುಖ ಒಂದುಮುಖವಾಗಿ ವಿಶ್ವರೂಪರುದ್ರ, ವಿಶ್ವಾಧಿಕಮಹಾರುದ್ರ, ಅಂಬಿಕಾಪತಿ ಉಮಾಪತಿ ಪಶುಪತಿ ಮೊದಲಾದ ಗಣಾಧೀಶ್ವರರೆಂಬ ಮಹಾಗಣಂಗಳು ತಾನಲ್ಲ. ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ ವಿರಾಟ್ಪುರುಷನು ತಾನಲ್ಲ. ವಿಶ್ವತೋಮುಖ ವಿಶ್ವತೋಚಕ್ಷು ತಾನಲ್ಲ. ವಿಶ್ವತೋಪಾದವನುಳ್ಳ ಮಹಾಪುರುಷ ತಾನಲ್ಲ. ಪತಿ-ಪಶು-ಪಾಶಂಗಳೆಂಬ ಸಿದ್ಧಾಂತಜ್ಞಾನತ್ರಯಂಗಳು ತಾನಲ್ಲ. ತ್ವಂ ಪದ ತತ್‍ಪದ ಅಸಿಪದವೆಂಬ ವೇದಾಂತಪದತ್ರಯ ಪದಾರ್ಥಂಗಳು ತಾನಲ್ಲ. ಜೀವಹಂಸ ಪರಮಹಂಸ ಪರಾಪರಹಂಸನೆಂಬ ಹಂಸತ್ರಯಂಗಳು ತಾನಲ್ಲ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ ಪಂಚಮೂರ್ತಿಗಳು ತಾನಲ್ಲ. ಆ ಸದಾಶಿವತತ್ವದಲ್ಲುತ್ಪತ್ಯವಾದ ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯಾತ್ಮರೆಂಬ ಅಷ್ಟತನುಮೂರ್ತಿಗಳು ತಾನಲ್ಲ. ಅಸ್ಥಿ ಮಾಂಸ ಚರ್ಮ ನರ ರೋಮ -ಈ ಐದು ಪೃಥ್ವಿಯಿಂದಾದವು. ಪಿತ್ಥ ಶ್ಲೇಷ್ಮ ರಕ್ತ ಶುಕ್ಲ ಮೂತ್ರ -ಈ ಐದು ಅಪ್ಪುವಿನಿಂದಾದವು. ಕ್ಷುದೆ ತೃಷೆ ನಿದ್ರೆ ಆಲಸ್ಯ ಸಂಗ -ಈ ಐದು ಅಗ್ನಿಯಿಂದಾದವು. ಪರಿವ ಪಾರುವ ಸುಳಿವ ಕೂಡುವ ಅಗಲುವ -ಈ ಐದು ವಾಯುವಿನಿಂದಾದವು. ವಿರೋಧಿಸುವ ಅಂಜಿಸುವ ನಾಚುವ ಮೋಹಿಸುವ ಅಹುದಾಗದೆನುವ -ಈ ಐದು ಆಕಾಶದಿಂದಾದವು. ಇಂತೀ ಪಂಚಭೌತಿಕದ ಪಂಚವಿಂಶತಿ ಗುಣಂಗಳಿಂದಾದ ದೇಹವು ತಾನಲ್ಲ. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಜ್ಞಾನೇಂದ್ರಿಯಂಗಳು ತಾನಲ್ಲ. ವಾಕು ಪಾದ ಪಾಣಿ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂಗಳು ತಾನಲ್ಲ. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ಪಂಚವಿಷಯಂಗಳು ತಾನಲ್ಲ, ವಚನ ಗಮನ ದಾನ ವಿಸರ್ಗ ಆನಂದವೆಂಬ ಕರ್ಮೇಂದ್ರಿಯಂಗಳ ತನ್ಮಾತ್ರೆಗಳು ತಾನಲ್ಲ, ಇಡೆ ಪಿಂಗಳೆ ಸುಷುಮ್ನಾ ಗಾಂಧಾರೀ ಹಸ್ತಿಜಿಹ್ವಾ ಪೂಷೆ ಪಯಸ್ವಿನೀ ಅಲಂಬು ಲಕುಹ ಶಂಕಿನೀ-ಎಂಬ ದಶನಾಡಿಗಳು ತಾನಲ್ಲ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯವೆಂಬ ದಶವಾಯುಗಳು ತಾನಲ್ಲ. ಸ್ಥೂಲತನು, ಸೂಕ್ಷ್ಮತನು, ಕಾರಣತನು, ನಿರ್ಮಲತನು, ಆನಂದತನು, ಚಿನ್ಮಯತನು, ಚಿದ್ರೂಪತನು, ಶುದ್ಧತನುವೆಂಬ ಅಷ್ಟತನುಗಳು ತಾನಲ್ಲ. ಜೀವಾತ್ಮ ಅಂತರಾತ್ಮ ಪರಮಾತ್ಮ ನಿರ್ಮಲಾತ್ಮ ಶುದ್ಧಾತ್ಮ ಜ್ಞಾನಾತ್ಮ ಭೂತಾತ್ಮ ಮಹಾತ್ಮವೆಂಬ ಅಷ್ಟ ಆತ್ಮಂಗಳು ತಾನಲ್ಲ. ಸಂಸ್ಥಿತ ತೃಣೀಕೃತ ವರ್ತಿನಿ ಕ್ರೋಧಿನಿ ಮೋಹಿನಿ ಅತಿಚಾರಿಣಿ ಗಂಧಚಾರಿಣಿ ವಾಸಿನಿಯೆಂಬ ಅಂತರಂಗದ ಅಷ್ಟಮದಂಗಳು ತಾನಲ್ಲ. ಕುಲ ಛಲ ಧನ ರೂಪ ಯೌವ್ವನ ವಿದ್ಯೆ ರಾಜ್ಯ ತಪವೆಂಬ ಬಹಿರಂಗ ಅಷ್ಟಮದಂಗಳು ತಾನಲ್ಲ. ರಸ ರುಧಿರ ಮಾಂಸ ಮೇದಸ್ಸು ಅಸ್ಥಿ ಮಜ್ಜೆ ಶುಕ್ಲವೆಂಬ ಸಪ್ತಧಾತುಗಳು ತಾನಲ್ಲ. ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನವೆಂಬ ಸಪ್ತವ್ಯಸನಂಗಳು ತಾನಲ್ಲ. ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ ಷಡೂರ್ಮಿಗಳು ತಾನಲ್ಲ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳು ತಾನಲ್ಲ. ಜಾತಿ, ವರ್ಣ, ಆಶ್ರಮ, ಕುಲ, ಗೋತ್ರ, ನಾಮಗಳೆಂಬ ಷಟ್‍ಭ್ರಮೆಗಳು ತಾನಲ್ಲ. ಆಸ್ತಿ, ಜಾಯತೇ, ಪರಿಣಮತೇ, ವರ್ಧತೇ, ವಿನಶ್ಯತಿ, ಅಪಕ್ಷೀಯತೇ ಎಂಬ ಷಡ್ಭಾವವಿಕಾರಂಗಳು ತಾನಲ್ಲ. ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯವೆಂಬ ಪಂಚಕೋಶಂಗಳು ತಾನಲ್ಲ. ಸತ್ವ ರಜ ತಮೋಗುಣತ್ರಯಂಗಳು ತಾನಲ್ಲ. ಅಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕವೆಂಬ ತಾಪತ್ರಯಂಗಳು ತಾನಲ್ಲ. ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯಂಗಳು ತಾನಲ್ಲ. ವಾತ ಪಿತ್ಥ ಕಫಂಗಳೆಂಬ ದೋಷತ್ರಯಂಗಳು ತಾನಲ್ಲ. ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳು ತಾನಲ್ಲ. ಸುಖ ದುಃಖ ಪುಣ್ಯ ಪಾಪಂಗಳು ತಾನಲ್ಲ. ಸಂಚಿತ, ಪ್ರಾರಬ್ಧ, ಆಗಾಮಿಯೆಂಬ ಕರ್ಮತ್ರಯಂಗಳು ತಾನಲ್ಲ. ಅಗ್ನಿಮಂಡಲ, ಆದಿತ್ಯಮಂಡಲ, ಚಂದ್ರಮಂಡಲವೆಂಬ ಮಂಡಲತ್ರಯಂಗಳು ತಾನಲ್ಲ. ಆಧಾರ, ಸ್ವಾಧಿಷಾ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೆ ಎಂಬ ಷಡುಚಕ್ರಂಗಳ ದಳ ವರ್ಣ ಅಕ್ಷರಂಗಳು ತಾನಲ್ಲ. ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತಗಳೆಂಬ ಪಂಚಾವಸ್ಥೆಗಳು ತಾನಲ್ಲ. ಜಾಗ್ರದಲ್ಲಿಯ ಜಾಗ್ರ, ಜಾಗ್ರದಲ್ಲಿಯ ಸ್ವಪ್ನ, ಜಾಗ್ರದಲ್ಲಿಯ ಸುಷುಪ್ತಿ, ಜಾಗ್ರದಲ್ಲಿಯ ತೂರ್ಯ, ಜಾಗ್ರದಲ್ಲಿಯ ತೂರ್ಯಾತೀತವೆಂಬ ಜಾಗ್ರಪಂಚಾವಸ್ಥೆಗಳು ತಾನಲ್ಲ. ಸ್ವಪ್ನದಲ್ಲಿಯ ಜಾಗ್ರ, ಸ್ವಪ್ನದಲ್ಲಿಯ ಸ್ವಪ್ನ, ಸ್ವಪ್ನದಲ್ಲಿಯ ಸುಷುಪ್ತಿ, ಸ್ವಪ್ನದಲ್ಲಿಯ ತೂರ್ಯ, ಸ್ವಪ್ನದಲ್ಲಿಯ ತೂರ್ಯಾತೀತವೆಂಬ ಸ್ವಪ್ನಪಂಚಾವಸ್ಥೆಗಳು ತಾನಲ್ಲ. ಸುಷುಪ್ತಿಯಲ್ಲಿಯ ಜಾಗ್ರ, ಸುಷುಪ್ತಿಯಲ್ಲಿಯ ಸ್ವಪ್ನ, ಸುಷುಪ್ತಿಯಲ್ಲಿಯ ಸುಷುಪ್ತಿ , ಸುಷುಪ್ತಿಯಲ್ಲಿಯ ತೂರ್ಯ, ಸುಷುಪ್ತಿಯಲ್ಲಿಯ ತೂರ್ಯಾತೀತವೆಂಬ ಸುಷುಪ್ತಿಯ ಪಂಚಾವಸ್ಥೆಗಳು ತಾನಲ್ಲ. ತೂರ್ಯದಲ್ಲಿಯ ಜಾಗ್ರ, ತೂರ್ಯದಲ್ಲಿಯ ಸ್ವಪ್ನ, ತೂರ್ಯದಲ್ಲಿಯ ಸುಷುಪ್ತಿ, ತೂರ್ಯದಲ್ಲಿಯ ತೂರ್ಯ, ತೂರ್ಯದಲ್ಲಿಯ ತೂರ್ಯಾತೀತವೆಂಬ ತೂರ್ಯಪಂಚಾವಸ್ಥೆಗಳು ತಾನಲ್ಲ. ತೂರ್ಯಾತೀತದಲ್ಲಿಯ ಜಾಗ್ರ, ತೂರ್ಯಾತೀತದಲ್ಲಿಯ ಸ್ವಪ್ನ , ತೂರ್ಯಾತೀತದಲ್ಲಿಯ ಸುಷುಪ್ತಿ, ತೂರ್ಯಾತೀತದಲ್ಲಿಯ ತೂರ್ಯ, ತೂರ್ಯಾತೀತದಲ್ಲಿಯ ತೂರ್ಯಾತೀತವೆಂಬ ತೂರ್ಯಾತೀತಪಂಚಾವಸ್ಥೆಗಳು ತಾನಲ್ಲ. ಸಕಲ-ಶುದ್ಧ-ಕೇವಲಾವಸ್ಥೆಗಳು ತಾನಲ್ಲ. ಸಕಲದಲ್ಲಿಯ ಸಕಲ, ಸಕಲದಲ್ಲಿಯ ಶುದ್ಧ, ಸಕಲದಲ್ಲಿಯ ಕೇವಲವೆಂಬ ಸಕಲತ್ರಿಯಾವಸ್ಥೆಗಳು ತಾನಲ್ಲ. ಶುದ್ಧದಲ್ಲಿಯ ಸಕಲ, ಶುದ್ಧದಲ್ಲಿಯ ಶುದ್ಧ, ಶುದ್ಧದಲ್ಲಿಯ ಕೇವಲವೆಂಬ ಶುದ್ಧತ್ರಿಯಾವಸ್ಥೆಗಳು ತಾನಲ್ಲ. ಕೇವಲದಲ್ಲಿಯ ಸಕಲ, ಕೇವಲದಲ್ಲಿಯ ಶುದ್ಧ, ಕೇವಲದಲ್ಲಿಯ ಕೇವಲವೆಂಬ ಕೇವಲತ್ರಿಯಾವಸ್ಥೆಗಳು ತಾನಲ್ಲ. ಜ್ಞಾತೃ ಜ್ಞಾನ ಜ್ಞೇಯವೆಂಬ ಜ್ಞಾನತ್ರಯಂಗಳು ತಾನಲ್ಲ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂಬ ಅಷ್ಟಾಂಗಯೋಗಂಗಳು ತಾನಲ್ಲ. ಧರ್ಮ ಅರ್ಥ ಕಾಮ ಮೋಕ್ಷಂಗಳೆಂಬ ಚತುರ್ವಿಧ ಪುರುಷಾರ್ಥಂಗಳು ತಾನಲ್ಲ. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧಪದಂಗಳು ತಾನಲ್ಲ. ಅಣಿಮಾ ಗರಿಮಾ ಲಘಿಮಾ ಮಹಿಮಾ ಪ್ರಾಪ್ತಿ ಪ್ರಕಾವ್ಯ ಇಶಿತ್ವ ವಶಿತ್ವ ಎಂಬ ಅಷ್ಟಮಹದೈಶ್ವರ್ಯಂಗಳು ತಾನಲ್ಲ. ರಾಜಸಹಂಕಾರ ತಾಮಸಹಂಕಾರ ಸ್ವಹಂಕಾರವೆಂಬ ಅಹಂಕಾರತ್ರಯಂಗಳು ತಾನಲ್ಲ. ಅಂಜನಾಸಿದ್ಧಿ, ಘುಟಿಕಾಸಿದ್ಧಿ, ರಸಸಿದ್ಧಿ, ಪಾದೋದಕಸಿದ್ಧಿ, ಪರಕಾಯ ಪ್ರವೇಶ, ದೂರಶ್ರವಣ, ದೂರದೃಷ್ಟಿ, ತ್ರಿಕಾಲಜ್ಞಾನವೆಂಬ ಅಷ್ಟಮಹಾಸಿದ್ಧಿಗಳು ತಾನಲ್ಲ. ಉದರಾಗ್ನಿ ಮಂದಾಗ್ನಿ ಶೋಕಾಗ್ನಿ ಕ್ರೋಧಾಗ್ನಿ ಕಾಮಾಗ್ನಿಯೆಂಬ ಪಂಚಾಗ್ನಿಗಳು ತಾನಲ್ಲ. ಪ್ರಕೃತಿ, ಪುರುಷ, ಕಾಲ, ಪರ, ವ್ಯೋಮಾಕಾಶಂಗಳು ತಾನಲ್ಲ. ಊಧ್ರ್ವಶೂನ್ಯ, ಅಧಃಶೂನ್ಯ, ಮಧ್ಯಶೂನ್ಯ, ಸರ್ವಶೂನ್ಯವಾಗಿಹ ಸಹಜನಿರಾಲಂಬವೇ ತಾನೆಂದರಿದ ಮಹಾಶರಣಂಗೆ ನಾಮ ರೂಪ ಕ್ರಿಯಾತೀತವಾಗಿಹ ಮಹಾಘನವೇ ತನ್ನ ಶಿರಸ್ಸು ನೋಡಾ. ದಿವ್ಯಜ್ಞಾನವೇ ತನ್ನ ಚಕ್ಷು, ಅಚಲಪದವೇ ತನ್ನ ಪುರ್ಬು, ಅಚಲಾತೀತವೇ ತನ್ನ ಹಣೆ ನೋಡಾ. ನಿರಾಕುಳಪದವೇ ತನ್ನ ನಾಸಿಕ, ನಿರಂಜನಾತೀತವೆ ತನ್ನ ಉಶ್ವಾಸ-ನಿಶ್ವಾಸ ನೋಡಾ. ನಿರಾಮಯವೇ ತನ್ನ ಕರ್ಣ, ನಿರಾಮಯಾತೀತವೇ ತನ್ನ ಕರ್ಣದ್ವಾರ ನೋಡಾ. ಅಮಲ ನಿರ್ಮಲವೇ ತನ್ನ ಗಲ್ಲ, ಅಮಲಾತೀತವೇ ತನ್ನ ಗಡ್ಡಮೀಸೆ ಕೋರೆದಾಡೆ ನೋಡಾ. ನಾದಬಿಂದುಕಳಾತೀತವೆ ತನ್ನ ತಾಳೋಷ*ಸಂಪುಟ ನೋಡಾ. ಅಕಾರ, ಉಕಾರ, ಮಕಾರ, ನಾದ ಬಿಂದು ಅರ್ಧಚಂದ್ರ ನಿರೋದಿನಾದಾಂತ ಶಕ್ತಿವ್ಯಾಪಿನಿ ವ್ಯೋಮರೂಪಿಣಿ ಅನಂತ ಆನಂದ ಅನಾಶ್ರಿತ ಸುಮನೆ ಉನ್ಮನಿ ಇಂತೀ ಪ್ರಣವದಲ್ಲಿ ಉತ್ಪತ್ಯವಾದ ಷೋಡಶಕಳೆ ತನ್ನ ಷೋಡಶ ದಂತಂಗಳು ನೋಡಾ. ಆ ದಂತಂಗಳ ಕಾಂತಿ ಅನೇಕಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ತನ್ನ ಕೊರಳೆ ನಿರಾಕುಳ, ತನ್ನ ಭುಜಂಗಳೆ ಅಪ್ರಮಾಣ ಅಗೋಚರ ನೋಡಾ. ತನ್ನ ಹಸ್ತಾಂಗುಲಿ ನಖಂಗಳೆ ಪರತತ್ವ, ಶಿವತತ್ವ, ಗುರುತತ್ವ, ಲಿಂಗತತ್ವಂಗಳು ನೋಡಾ. ಪರಬ್ರಹ್ಮವೇ ತನ್ನ ಎದೆ, ಆ ಪರಬ್ರಹ್ಮವೆಂಬ ಎದೆಯಲ್ಲಿ ನಿರಂಜನಪ್ರಣವ ಅವಾಚ್ಯಪ್ರಣವವೆಂಬ ಸಣ್ಣ ಕುಚಂಗಳು ನೋಡಾ. ಚಿತ್ತಾಕಾಶ ಭೇದಾಕಾಶವೆ ತನ್ನ ದಕ್ಷಿಣ ವಾಮ ಪಾಶ್ರ್ವಂಗಳು ನೋಡಾ. ಬಿಂದ್ವಾಕಾಶವೇ ತನ್ನ ಬೆನ್ನು ನೋಡಾ. ಮಹಾಕಾಶವೇ ತನ್ನ ಬೆನ್ನ ನಿಟ್ಟೆಲವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾಕಾರಲಿಂಗವೆ ತನ್ನ ಗರ್ಭ ನೋಡಾ. ಆ ಗರ್ಭ ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದುನೋಡಾ. ಆ ಗರ್ಭದಲ್ಲಿ ಅನೇಕಕೋಟಿತತ್ವಂಗಳು, ಅನೇಕಕೋಟಿ ಸದಾಶಿವರು, ಅನೇಕಕೋಟಿ ಮಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿರುದ್ರರು, ಅನೇಕಕೋಟಿ ವಿಷ್ಣಾ ್ವದಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಋಷಿಗಳು ಅನೇಕಕೋಟಿ ಚಂದ್ರಾದಿತ್ಯರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ದೇವರ್ಕಗಳು, ಅನೇಕಕೋಟಿ ಬ್ರಹ್ಮಾಂಡಗಳಡಗಿಹವು ನೋಡಾ. ತನ್ನ ನಡುವೆ ವ್ಯೋಮಾತೀತವು, ತನ್ನ ಕಟಿಸ್ಥಾನವೇ ಕಲಾಪ್ರಣವ, ತನ್ನ ಪಚ್ಚಳವೆ ಅನಾದಿಪ್ರಣವ ಆದಿಪ್ರಣವ ನೋಡಾ. ತನ್ನ ಉಪಸ್ಥವೇ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ಸಮಸ್ತ ದೇವರ್ಕಗಳಿಗೂ ಜನನಸ್ಥಳವಾಗಿಹ ನಿರ್ವಾಣಪದ ನೋಡಾ. ಶಿವಸಂಬಂಧ, ಶಕ್ತಿಸಂಬಂಧವಾಗಿಹ ಓಂಕಾರವೆ ತನ್ನ ಒಳದೊಡೆ ನೋಡಾ. ಸಚ್ಚಿದಾನಂದ ಪರಮಾನಂದವೆ ತನ್ನ ಒಳಪಾದ ಕಂಬಗಳು ನೋಡಾ. ಚಿದಾತ್ಮ ಪರಮಾತ್ಮನೆ ತನ್ನ ಹರಡು, ಅತಿಸೂಕ್ಷ್ಮಪಂಚಾಕ್ಷರವೆ ತನ್ನ ಪಾದಾಂಗುಷಾ*ಂಗುಲಿಗಳೆಂಬ ಸಾಯುಜ್ಯಪದ ನೋಡಾ. ತನ್ನ ಸ್ವರವೆ ಪರಾಪರ, ತನ್ನ ಮಾತೇ ಮಹಾಜ್ಯೋತಿರ್ಮಯಲಿಂಗ, ಚಿನ್ಮಯ ಚಿದ್ರೂಪ ಚಿತ್ಪ್ರಕಾಶವೆ ತನ್ನ ವಪೆ ನೋಡಾ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಮೊದಲಾಗಿ ಇನ್ನೂರ ಹದಿನಾರು ಷಡುಸ್ಥಲಲಿಂಗವೆ ತನ್ನಂತಃಸ್ಥಾನದಲ್ಲಿ ಧರಿಸಿಹ ಆಭೂಷಣಂಗಳು ನೋಡಾ. ಮಹಾಲಿಂಗವೇ ತುರುಬು, ಶಿವಜ್ಞಾನವೆ ಶೃಂಗಾರವಾಗಿಹ ತನ್ನ ತಾನರಿದು ಅಂತಃಶೂನ್ಯ, ಅಧಃಶೂನ್ಯ, ಬಹಿಃಶೂನ್ಯ, ದಶದಿಶಾಶೂನ್ಯ ನಿರಾಕಾರವಾಗಿಹ ತನ್ನ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ತಿಳಿದು ಮಹಾಶರಣನು ತಾನೆ ಗುರು, ತಾನೆ ಲಿಂಗ, ತಾನೆ ಜಂಗಮ, ತಾನೆ ಪರಮಪಾದೋದಕಪ್ರಸಾದ ನೋಡಾ. ತಾನೆ ನಾದಬಿಂದುಕಳಾತೀತ ನೋಡಾ. ತಾನೆ ಶೂನ್ಯ ನಿಶ್ಶೂನ್ಯನು, ತಾನೆ ಘನಶೂನ್ಯ, ಮಹಾಘನಶೂನ್ಯ ನೋಡಾ. ತಾನೆ ಬಯಲು ನಿರ್ಬಯಲು, ತಾನೆ ನಿರುಪಮ ನಿರಾಕಾರ ತಾನೆ ನಿರಾಳ ನಿರಾಲಂಬ ನೋಡಾ. ತಾನೆ ಸಚ್ಚಿದಾನಂದ ನಿತ್ಯಪರಿಪೂರ್ಣನು, ತನ್ನಿಂದಧಿಕವಪ್ಪ ಪರಬ್ರಹ್ಮವೊಂದಿಲ್ಲವಾಗಿ ತಾನೆ ಸ್ವಯಂಜ್ಯೋತಿರ್ಲಿಂಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮಹಾಕಾಲ ಕಲ್ಪದಲ್ಲಿ, ಮಹಾಪ್ರಮಥರ ಕಾಲಾಗ್ನಿಯಲ್ಲಿ ನರರು ಬೆಂದು ಸುರರುಗಳ ನೆಮ್ಮುವರು. ಸುರರುಗಳು ಬೆಂದು ಋಷಿಗಳ ನೆಮ್ಮುವರು. ಋಷಿಗಳು ಬೆಂದು ಬ್ರಹ್ಮರುಗಳ ನೆಮ್ಮುವರು. ಬ್ರಹ್ಮರುಗಳು ಬೆಂದು ವಿಷ್ಣುಗಳ ನೆಮ್ಮುವರು. ವಿಷ್ಣುಗಳು ಬೆಂದು ರುದ್ರರುಗಳ ನೆಮ್ಮುವರು. ರುದ್ರರುಗಳು ಬೆಂದು ಈಶ್ವರರುಗಳ ನೆಮ್ಮುವರು. ಈಶ್ವರರುಗಳು ಬೆಂದು ಸದಾಶಿವರುಗಳ ನೆಮ್ಮುವರು. ಸದಾಶಿವರುಗಳು ಬೆಂದು ಪರಮೇಶ್ವ[ರ]ರುಗಳ ನೆಮ್ಮುವರು. ಪರಮೇಶ್ವರರುಗಳು ಬೆಂದು ಪಂಚಭೂತಂಗಳು ಸಹಿತ ಭಿಕ್ಷಭೈರವನಂತಾಗಿ ಬೆಂದು ಮಾಯೆಯ ನೆಮ್ಮುವರು. ಮಾಯೆ ಮನವ ನೆಮ್ಮಿದೊಡಾ ಮನ ನೆಮ್ಮುವದಕ್ಕೆ ಎರವಿಲ್ಲದೆ ಬೆಂದು, ಬಾಯಾರಿತು ಕಾಣಾ ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ
ಅಯ್ಯ ಎತ್ತಿದ (ಇಕ್ಕಿದ?) ಮಣಿ ಮುಕುಟದ ಮೇಲೆ ಸುತ್ತಿದ ನಾಗಭೂಷಣದ ಪಡೆಯೊಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಇಕ್ಕಿದ ಕರೋಟಿಮಾಲೆಯೊಳಗಿಪ್ಪ ರುದ್ರರು ಒಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಇಕ್ಕಿದ ರುಂಡಮಾಲೆಯೊಳಗಿಪ್ಪ ಮುಂಡಧಾರಿಗಳು ಒಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಉಟ್ಟ ಗಜಚರ್ಮದೊಳಗಿಪ್ಪ ಋಷಿಗಳು ಒಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಖಟ್ವಾಂಗದೊಳಗಿಪ್ಪ ಮನುಮುನಿಗಳು ಒಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಗಂಗೆ ಗೌರಿ ಭೃಂಗಿ ಮೊದಲಾಗಿ ಶಿವನಿಪ್ಪ ನೆಲೆಯನರಿಯರು, ಗುಹೇಶ್ವರ ನಿಮ್ಮ ಶರಣ ಸಂಗನಬಸವಣ್ಣ ಬಲ
--------------
ಅಲ್ಲಮಪ್ರಭುದೇವರು
ಪರಮೇಶ್ವರನ ಪರಮೈಶ್ವರ್ಯವೆನಿಪ, ನಿತ್ಯ ನಿಜವಾದ ವಿಭೂತಿಯನು, ಭಕ್ತಿಯಿಂದೊಲಿದು ಧರಿಸಲು, ನಿತ್ಯರಪ್ಪರು ನೋಡಿರೇ. ಮುನ್ನ ಜಮದಗ್ನಿ ಕಶ್ಯಪ ಅಗಸ್ತ್ಯ ಮೊದಲಾದ ಋಷಿಗಳು, ಸಮಸ್ತ ದೇವತೆಗಳು, ಮೂರು ಮೂರು ಬಾರಿ, ಆಯುಷ್ಯವ ಪಡದೆರೆಂದು ವೇದಗಳು ಸಾರುತ್ತಿವೆ. `ತ್ರಿಯಾಯುಷಂ ಜಮದಗ್ನೇ:ಕಶ್ಯಪಸ್ಯ ತ್ರಿಯಾಯುಷಂ ಅಗಹಸ್ತ್ಯಸ್ಯ ತ್ರಿಯಾಯುಷಂ ಯುದ್ದೇವಾನಾಂ ತ್ರಿಯಾಯುಷಂ ತನ್ಮೇ ಅಸ್ತು ತ್ರಿಯಾಯುಷಂ' ಎಂದುವು ಶ್ರುತಿಗಳು. ಇದನರಿದು ಧರಿಸಿರೇ, ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಬಲ್ಲಡೆ.
--------------
ಸ್ವತಂತ್ರ ಸಿದ್ಧಲಿಂಗ
ಎಲಾ, ದೇವರು ಹಿಡಿಯಿತೆಂಬೋ ನಾಯಿಮಗನೇ ನೀ ಕೇಳು : ಎಲಾ, ಹಿಂದಕ್ಕೆ ಅನಂತ ಋಷಿಗಳು ದೇವರ ಕುರಿತು ತಪಸ್ಸುಮಾಡಿ ದೇವರ ಕಾಣದೆ ಪೋದರು. ತ್ರಿಕಾಲದಲ್ಲಿ ಮಹಾಪುರುಷರು ಶಿವಪೂಜೆ ಅಂಗೀಕರಿಸಿ, ಕೋಟ್ಯಾಂತರ ದ್ರವ್ಯವನ್ನು ಜಂಗಮಕ್ಕೆ ನೀಡಿ, ಮಾಡಿ, ಸ್ವಪ್ನದಲ್ಲಿ ದೇವರ ಪಾದವ ಕಾಣದೆ ಹೋದರು. ಈಗಿನವರು ಮಹಾಮಲಿನವಾದ ಕಾಯಕೂಷ್ಣವೂಷ್ಣವು (?), ಬಿಷ್ಣದ (?) ದೇಹ, ಕನಿಷ್ಟದ ನಡತೆ, ಕಾರ್ಕೋಟಕ ಬುದ್ಧಿ ಕರ್ಮೇಂದ್ರಿಯಂಗಳಲ್ಲಿ ಹೊರಳಾಡುವ ಹೊಲೆಯ[ರಿ]ಂಗೆ ದೇವರೆಲ್ಲೈತೆಲಾ ? ಆದರೂ ಚಿಂತೆಯಿಲ್ಲ. ಎಲಾ, ಹನುಮಂತ ದೇವರು ಹಿಡೀತು ಎಂಬವನೇ ನೀ ಕೇಳು : ಹಿಂದಕ್ಕೆ ಹನುಮಂತದೇವರು ಸಂಜೀವನಕ್ಕೆ ಪೋಗಿ ಅರ್ಧಬೆಟ್ಟವನ್ನು ಕಿತ್ತುಕೊಂಡು ಬಂದಿರ್ದ. ಅಂಥ ಹನುಮಂತದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ ಈಗ ಹನ್ನೆರಡು ಮಣವು ಕಲ್ಲನಾದರು ಎತ್ತಿ ನೆತ್ತಿಮೇಲೆ ಇಟ್ಟುಕೊಂಡರೆ ದೇವರೆನಬಹುದು ! ಎಲಾ, ವೀರಭದ್ರದೇವರು ಹಿಡೀತು ಎಂಬುವನೇ ನೀ ಕೇಳು : ಹಿಂದಕ್ಕೆ ವೀರಭದ್ರದೇವರು ಮುನ್ನೂರು ಮೂರು ಕೋಟಿ ರಾಕ್ಷಸರನ್ನು ಸಂಹರಿಸಿದ. ಅಂತಪ್ಪ ವೀರಭದ್ರದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ ಕತ್ತಿ ಕಿತ್ತುಕೊಂಡು ಒಬ್ಬ ಇಬ್ಬರನಾದಡೆ ಸಂಹರಿಸಿದಡೆ ದೇವರೆನಬಹುದು! ಇದಂ ಬಿಟ್ಟು, ನೀನು ದೇವರುಹಿಡೀತು ಎಂದು ಕೂಗುವಾಗ, ಗಟ್ಟಿಯುಳ್ಳವ ಬಂದು ತೆಕ್ಕೆಯೊಳಗೆ ಪಿಡಿದರೆ, ತೆಕ್ಕೆಯೊಳಗೆ ಸೇರಿಕೊಂ[ಬೆಯ]ಲ್ಲದೆ ತೆಕ್ಕೆ ಬಿಡಿಸಿಕೊಂ[ಬ]ಸಾಮಥ್ರ್ಯ ನಿನಗಿಲ್ಲಾ ! ನಿಮಗೆ ಹಿಡಿವುದು ಪಿಶಾಚಿ, ಪಿಶಾಚಿ ವಡವದೇ (?) ಪಾದರಕ್ಷೆ ಇಂಥಾ ದೇವರ ಮಹಾತ್ಮೆಯಂ ತಿಳಿದು, [ತ]ಮ್ಮ ಸುಜ್ಞಾನವಂ, ಮರೆದು, 'ಇವರೇ ದೇವರೆ'ಂದು ಅಡ್ಡಬೀಳುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಮಾನವಲೋಕದವರೆಲ್ಲರೂ ಮರದಲಿಂಗವ ಪೂಜಿಸುವರಯ್ಯಾ. ಮರನ ಸಿಂಹಾಸನದ ಮೇಲೆ ಗಂಗೆವಾಳುಕಸಮಾರುದ್ರರೆಲ್ಲರೂ ಹಿಂದಣ ಋಷಿಗಳು ದೇವತ್ವಗುಣವನರಿಯರಾಗಿ ಅಂಗವಿಲ್ಲವರಿಗೆ. ವರಮುಖ ಶಾಪಮುಖರಾಗಿ ಲಿಂಗವಿಲ್ಲವರಿಗೆ. ಧ್ಯಾನದಿಂದ ಲಿಂಗವ ಕಂಡೆನೆಂದೆಂಬರು. ಮೌನದಿಂದ ಲಿಂಗವ ಕಂಡೆನೆಂದೆಂಬರು. ಅನುಷಾ*ನದಿಂದ ಲಿಂಗವ ಕಂಡೆನೆಂದೆಂಬರು. ಜಪ ತಪ ಸಮಾಧಿ ಸಂಧ್ಯಾ ನಿತ್ಯನೇಮ ಹೋಮ ಇವೆಲ್ಲವ ಮಾಡಿದವರೆಲ್ಲರೂ ಕೆಯ್ಯ ಬೆಳೆದ ಒಕ್ಕಲಿಗನಂತೆ ಫಲದಾಯಕರಾದರಯ್ಯ. ಇವೆಲ್ಲವನೂ ಅಲ್ಲವೆಂಬೆ, ಸೋಹಂ ಎಂಬೆ. [ಮೆಲ್ಲ] ಮೆಲ್ಲನೆ ಆಡುವೆ ಬಹುರೂಪ. ಇವೆಲ್ಲ ನಾಸ್ತಿಯಾದವು, ಎನ್ನ ಬಹುರೂಪಮುಖದಲ್ಲಿ. ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲ.
--------------
ಬಹುರೂಪಿ ಚೌಡಯ್ಯ
ಶಿವನಿಂದಧಿಕ ದೈವ ಇಲ್ಲ, ಶಿವಭಕ್ತಂಗಧಿಕ ಕುಲಜನಿಲ್ಲವೆಂದು ಹೇಳುವುವು ಆಗಮ ಶ್ರುತಿ. ಅದು ಎಂತೆಂದಡೆ : ಸರ್ವ ಅಪ್ಸರರು ಸರ್ವ ಗಂಧರ್ವರು ಸರ್ವ ಯತಿಗಳು ಸರ್ವ ಜತಿಗಳು ಎಲ್ಲಾರು, ಎಲಾ ಈ ಶಿವಲಿಂಗಮಂ ಪೂಜಿಸಿ ಮೋಕ್ಷವ ಪಡೆದೆನೆಂಬೋ ಭಕ್ತರು ನೀವು ಕೇಳಿರಯ್ಯಾ : ಈ ಶಿವಲಿಂಗಮಂ ಬ್ರಹ್ಮ ಪೂಜಿಸಿ ಭವ ಹಿಂಗಿಸಿದ ; ವಿಷ್ಣು ಪೂಜಿಸಿ ಹತ್ತು ಅವತಾರದ ದೋಷವನೀಡಾಡಿದ ; ಇಂದ್ರ ಪೂಜಿಸಿ ಅಯಿಶ್ವರ್ಯಮಂ ಪಡೆದ ; ಋಷಿಗಳು ಪೂಜಿಸಿ ಕುಲವಂ ಕಳೆದು ಬ್ರಹ್ಮರೆನಿಸಿ ನಿಶ್ಚಿಂತರಾದರು ; ಮಹಾಗಣಾಧೀಶ್ವರರೂ ಪೂಜಿಸಿ ಕೈಲಾಸಕ್ಕೆ ಸೋಪಾನವ ಕಟ್ಟಿದರು ; ಮಿಕ್ಕ ನರರು ಪೂಜಿಸಿ [ಸು]ರಲೋಕವನೈದಿದರೆಂಬೋ ಶಾಸ್ತ್ರವಂ ಕೇಳಿ, ಓದಿ, ಹಾಡಿ, ತಿಳಿದು, ಪರಮ ವಿರಕ್ತಿಯ ನಿಟ್ಟಿಸಲಾರದೆ ಪರದೈವಕಡ್ಡ ಬಿದ್ದು ಹಿಂದೆ ಅವ ಕಟ್ಟಿದ ಲಿಂಗವು ಕೋಣನ ಕೊರಳಿಗೆ ಗುದಿಗೆ ಕಟ್ಟಿದಂತಾಯಿತು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
-->