ತನು ಹೇಳಿಗೆ, ಮನ ಸರ್ಪನಾಗಿ,
ತನ್ನಯ ವಿಲಾಸಿತದಿಂದ ಹೆಡೆಯೆತ್ತಿ ಆಡುತ್ತಿರಲಾಗಿ,
ನಾನಾರೂಪು ತೋ[ರುವ] ಆಕಾಶದ ಮಧ್ಯದಲ್ಲಿ,
ಉಭಯನಷ್ಟವಾದ ಚಿದ್ಘನರೂಪಿನ ಹದ್ದು ಬಂದು,
ಹೊಯ್ಯಿತ್ತು ಸರ್ಪನ.
ಆ ಸರ್ಪ ಹದ್ದಿನ ಕೊರಳ ಸುತ್ತಿ,
ಬಾಯ ಬಿಟ್ಟು ಕಚ್ಚದಂತೆ ಹೆಡೆಯೊಳು ಮುಚ್ಚಿ, ಹದ್ದೆದ್ದಾಡದಂತಿರಲು,
ಆ ಬುದ್ಧಿಯ ನೆನೆದು ಒದ್ದು, ತನ್ನ ಸಖದ ಉಗುರಿನಲ್ಲಿ ಹೆಡೆ ಉಡುಗಿ,
ಹಾವಿನ ತೆಕ್ಕೆ ಬಿಟ್ಟು ಹದ್ದೆದ್ದಿದಿತ್ತು ಮಹದಾಕಾಶಕ್ಕೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ.