ಮನಮನವೇಕಾರ್ಥವಾಗದವರಲ್ಲಿ,
ತನುಗುಣ ನಾಸ್ತಿಯಾಗದವರಲ್ಲಿ,
ಬುದ್ಧಿಗೆ ಬುದ್ಧಿ ಓರಣವಾಗದವರಲ್ಲಿ,
ಭಾವಕ್ಕೆ ಭಾವ ತಾರ್ಕಣೆಯಾಗದವರಲ್ಲಿ,
ಶೀಲಕ್ಕೆ ಶೀಲ ಸಮಾನವಿಲ್ಲದವರಲ್ಲಿ,
ಅವರೊಡನೆ ಕುಳ್ಳಿರಲಾಗದು,
ಸಮಗಡಣದಲ್ಲಿ ಮಾತನಾಡಲಾಗದು.
`ಸಂಸರ್ಗತೋ ದೋಷಗುಣಾ ಭವಂತಿ' ಎಂದುದಾಗಿ,
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಸದ್ಭಕ್ತಿಯನರಿದವರ ಸಂಗದಿಂದ
ನಿಮಗಾನು ದೂರವಾಗಿಪ್ಪೆನಯ್ಯಾ.