ಲಿಂಗ ಮುಂತಾದ ಭಕ್ತನ ಅಂಗದ ಮೇಲಣ ಲಿಂಗ
ಹೋಯಿತ್ತೆಂದು ಸಂದೇಹವ ಮಾಡಿ,
ಶೈಲ ವಾರಿ ಪಾಶ ಶಸ್ತ್ರ ಸಮಾಧಿ ಎಂಬಿವ ಕೊಳಲಾಗದು.
ಅದೆಂತೆಂದಡೆ:
ಭಕ್ತಸ್ಯ ಲಿಂಗದೇಹಸ್ಯ ತದೇಹಂ ಲಿಂಗವರ್ಜಿತಂ |
ಶಸ್ತ್ರ ಶೈಲಂ ಜಲಂ ಪಾಶಂ ಸಮಾಧಿಶ್ಚ ವಿವರ್ಜಯೇತ್ ||
ಎಂದುದಾಗಿ, ಇದಕ್ಕೆ ಮುಕ್ತಿಯನೆಯುವ ಪಥವೆಂತೆಂದಡೆ:
ನಿಶ್ಚಿತಂ ನಿರ್ಮಲಂ ಚೈವ ನಿಶ್ಚಲಂ ನಿರುಪಾಧಿಕಂ |
ಭುಕ್ತಿಮುಕ್ತಿಪ್ರದಾತಾಹ ಇತ್ಯತ್ವಂ ಶಿವಮಂದಿರಂ ||
ಎಂದುದಾಗಿ, ಧ್ಯಾನ ಧಾರಣ ಸಮಾಧಿಯಲ್ಲಿಹುದು.
ಅದೆಂತೆಂದಡೆ:
ತಪೋ ಧ್ಯಾನಾಧಿಕಂ ಕುರ್ವನ್ ರುದ್ರಾಕ್ಷಂ ಧಾರಯನ್ ಸದಾ |
ಶಿವಮಂತ್ರಜಪಂ ಶ್ಚೈವ ಶಿವಲೋಕೇ ಮಹೀಯತೇ ||
ಇಂತೆಂಬ ಶ್ರುತಿಯ ಮೀರಿ, ಅಂಗಕ್ಕೆ ಆಸೆಯ ಮಾಡಿ,
ಲಿಂಗವ ಧರಿಸಿ ಪೂಜೆಯ ಮಾಡುವ ಶಿಷ್ಯ ಗುರುದ್ರೋಹಿ.
ಹಣವಿಗಾಸೆ ಮಾಡಿ ಲಿಂಗಧಾರಣ ಮಾಡುವ ಗುರು ಶಿವದ್ರೋಹಿ.
ಅದೆಂತೆಂದಡೆ:
ಲಿಂಗಬಾಹ್ಯಕೃತಂ ದೃಷ್ಟ್ವಾ ಪುನರ್ಲಿಂಗಂತು ಧಾರಯೇತ್ |
ಪೂಜಾಯಾ ನಿಷ್ಫಲಾ ಚೈವ ರೌರವಂ ನರಕಂ ವ್ರಜೇತ್ ||
ಎಂದುದಾಗಿ, ಇಂತು ಇವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ, ವಿಭೂತಿ ರುದ್ರಾಕ್ಷಿ
ಪ್ರಣವ ಪಂಚಾಕ್ಷರಿ ಇಲ್ಲವಾಗಿ ಸತ್ಪಥಕ್ಕೆ ಸಲ್ಲರು ಕಾಣಿಭೋ.
ಇವರು ಕಂಡಕಂಡವರೊಡನೆ ಹರಿವ ಚಾಂಡಾಲಗಿತ್ತಿಯಂತೆ.
ಇವಂದಿರ ಮುಖವ ನೋಡಲಾಗದು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ.