ಬಂದವನಿವನಾರು, ಕಂಬಳಿಯ ಕಂಥೆಯ ತೊಟ್ಟು,
ಆಪ್ಯಾಯನ ಹಿಂಗದ ಕರಕರ್ಪರವ ಹಿಡಿದು,
ದೆಸೆವರಿವ ದಶದಂಡವ ಹಿಡಿದು,
ಮನೆ ಮನ ಮಂದಿರದ ಬಾಗಿಲಲ್ಲಿ ನಿಂದು,
ಇಂದ್ರಿಯಂಗಳೆಂಬ ತೃಷ್ಣೆ ಭಿಕ್ಷವಂ ಬೇಡಿ,
ಬೇಡಿದ ದನಿಯ ಕೇಳಿ ಎದ್ದವೈದು ನಾಯಿ.
ಹಮ್ಮಿ ಕಚ್ಚಿತ್ತು ಕಾಲ, ಮತ್ತೊಂದಡರಿ ಅಂಗವ ಹಿಡಿಯಿತ್ತು.
ಮತ್ತೊಂದು ಒಡಗೂಡಿ ಕೈಯ ಕಚ್ಚಿತ್ತು.
ಮತ್ತೊಂದು ಬೆರಸಿ, ನಾಸಿಕವ ಓಸರವಿಲ್ಲದೆ ಹಿಡಿಯಿತ್ತು.
ಮತ್ತೊಂದು ಭಿಕ್ಷೆಗೆ ತಪ್ಪದೆ ಬಾಯ ಹಿಡಿಯಿತ್ತು.
ಭಿಕ್ಷದಾಟ ತಪ್ಪಿತ್ತು, ಕಂಬಳಿಯಣ್ಣ ಕಂಬಳಿಯಲ್ಲಿ ಅಳಿದ.
ಇದಕಿನ್ನು ಬೆಂಬಳಿಯ ಹೇಳಾ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ.