ಅ
(52)
ಆ
(19)
ಇ
(6)
ಈ
(1)
ಉ
(11)
ಊ
(4)
ಋ
(0)
ೠ
(0)
ಎ
(26)
ಏ
(0)
ಐ
(1)
ಒ
(12)
ಓ
(1)
ಔ
(0)
ಅಂ
(10)
ಅಃ
(10)
ಕ
(56)
ಖ
(0)
ಗ
(14)
ಘ
(1)
ಙ
(0)
ಚ
(6)
ಛ
(0)
ಜ
(6)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(21)
ಥ
(0)
ದ
(5)
ಧ
(2)
ನ
(26)
ಪ
(16)
ಫ
(1)
ಬ
(20)
ಭ
(10)
ಮ
(28)
ಯ
(0)
ರ
(2)
ಱ
(0)
ಲ
(13)
ವ
(10)
ಶ
(8)
ಷ
(0)
ಸ
(24)
ಹ
(30)
ಳ
(0)
ವಚನಕಾರ: ಅಕ್ಕಮಹಾದೇವಿ
ಅಂಕಿತ ನಾಮ: ಚೆನ್ನಮಲ್ಲಿಕಾರ್ಜುನ
ಕಾಲ: ಹನ್ನೆರಡನೆಯ ಶತಮಾನ
ದೊರಕಿರುವ ವಚನಗಳು: 434 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ: ನಿರ್ಮಲಶೆಟ್ಟಿ ಮತ್ತು ಸುಮತಿ
ಹುಟ್ಟಿದ ಸ್ಥಳ:
ಪರಿಚಯ: ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು ಸುಮತಿಯರ ಮಗಳು. ತಂದೆ ತಾಯಿಯರ ಹೆಸರು ಕವಿ ಕಲ್ಪನೆ ಇದ್ದೀತು ಅನ್ನುವುದು ಕೆಲವು ವಿದ್ವಾಂಸರ ಅನುಮಾನ. ಹರಿಹರನ ಮಹದೇವಿಯಕ್ಕಗಳ ರಗಳೆಯ ಪ್ರಕಾರ ಊರಿನ ಮುಖ್ಯಸ್ಥ ಕೌಶಿಕ ಮಹದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿದ. ಅಕ್ಕ ಶರತ್ತುಗಳನ್ನು ವಿಧಿಸಿ ಮದುವೆಗೆ ಒಪ್ಪಿದರೂ ಕೌಶಿಕ ವಚನ ಭಂಗ ಮಾಡಿದಾಗ ಉಡುಗೆಯನ್ನೂ ತೊರೆದು ಮನೆ ಬಿಟ್ಟು ಹೊರಟುಬಿಡುತ್ತಾಳೆ. ಇನ್ನು ಕೆಲವು ಕಥನಪರಂಪರೆಗಳಲ್ಲಿ ಅಕ್ಕ ಎಳವೆಯಲ್ಲೇ ಚನ್ನಮಲ್ಲಿಕಾರ್ಜುನನನ್ನು ವರಿಸಿದವಳು ಅನ್ನುವುದೂ ಉಂಟು. ಉರಕ್ಕೆ ಜವ್ವನಗಳು ಬಾರದ ಮುನ್ನ ಎಂದು ಆರಂಭವಾಗುವ ಅಕ್ಕನ ವಚನ ನೋಡಿ. ಪರ್ಯಟನೆ ಮಾಡುತ್ತ ಮಹದೇವಿ ಕಲ್ಯಾಣಕ್ಕೆ ಹೋದಳು, ಅಲ್ಲಿಂದ ಶ್ರೀಶೈಲದ ಕದಳಿಯಲ್ಲಿ ಐಕ್ಯಳಾದಳು ಎಂಬ ವಿವರಗಳಿವೆ. ಅಲ್ಲಮ ಮತ್ತು ಅಕ್ಕಮಹಾದೇವಿ ಒಂದೇ ಪ್ರಾಂತದವರು, ಅವರ ಬದುಕಿನ ಕಥೆಗಳಲ್ಲೂ ವೈಚಾರಿಕ ನಿಲುವುಗಳಲ್ಲೂ ಅನೇಕ ಸಾಮ್ಯಗಳಿವೆ. ಈಕೆಯ 434 ವಚನಗಳು ಮತ್ತು ಹಲವು ಹಾಡುಗಳು ದೊರೆತಿವೆ. ಯೋಗಾಂಗ ತ್ರಿವಿಧಿ, ಸೃಷ್ಟಿಯ ವಚನ ಮತ್ತು ಮಂತ್ರಗೋಪ್ಯ ಮಹಾದೇವಿಯ ಇತರ ಕೃತಿಗಳು ಎಂದು ಹೇಳುವುದುಂಟು. ಆದರೆ ಇವುಗಳ ರಚನೆಯನ್ನು ನೋಡಿದರೆ ವಚನಗಳನ್ನು ಸೃಷ್ಟಿಸಿದ ಮನಸ್ಸೇ ಈ ಕೃತಿಗಳನ್ನೂ ರಚಿಸಿತು ಎಂದು ನಂಬುವುದು ಕಷ್ಟವಾಗುವಂತಿದೆ. ಭಾವಗಳ ತೀವ್ರತೆ ಈಕೆಯ ರಚನೆಗಳ ಮುಖ್ಯ ಲಕ್ಷಣ.
ಪುಣ್ಯಪಾಪಂಗಳನರಿಯದ ಮುನ್ನ, ಅನೇಕ ಭವಂಗಳ ಬಂದೆನಯ್ಯಾ ? ಬಂದು ಬಂದು ನೊಂದು ಬೆಂದೆನಯ್ಯಾ ? ಬಂದು ನಿಮ್ಮ ನಂಬಿ ಶರಣುವೊಕ್ಕೆನಯ್ಯಾ ? ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯಾ ನಿಮ್ಮ ಧರ್ಮ ನಿಮ್ಮ ಧರ್ಮ. ನಿಮ್ಮಲೊಂದು ಬೇಡುವೆನು, ಎನ್ನ ಬಂಧನ ಬಿಡುವಂತೆ ಮಾಡಯ್ಯಾ ಚೆನ್ನಮಲ್ಲಿಕಾರ್ಜುನಾ
ಪೃಥ್ವಿ ಪೃಥ್ವಿಯ ಕೂಡದ ಮುನ್ನ, ಅಪ್ಪು ಅಪ್ಪುವ ಕೂಡದ ಮುನ್ನ, ತೇಜ ತೇಜವ ಕೂಡದ ಮುನ್ನ, ವಾಯು ವಾಯುವ ಕೂಡದ ಮುನ್ನ, ಆಕಾಶ ಆಕಾಶವ ಕೂಡದ ಮುನ್ನ ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ ?
ಪ್ರಾಣ ಲಿಂಗವೆಂದರಿದ ಬಳಿಕ ಪ್ರಾಣ ಪ್ರಸಾದವಾಯಿತ್ತು. ಲಿಂಗ ಪ್ರಾಣವೆಂದರಿದ ಬಳಿಕ ಅಂಗದಾಸೆ ಹಿಂಗಿತ್ತು. ಲಿಂಗ ಸೋಂಕಿನ ಸಂಗಿಗೆ ಕಂಗಳೆ ಕರುವಾದವಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಹಿಂಗದೆ ಅನಿಮಿಷನಾಗಿಹ ಶರಣಂಗೆ.
ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ, ಪವಳದ ಚಪ್ಪರವಿಕ್ಕಿ, ಮುತ್ತುಮಾಣಿಕದ ಮೇಲುಕಟ್ಟ ಕಟ್ಟಿ, ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯಮಾಡಿದರು