ಅಥವಾ

ಒಟ್ಟು 41 ಕಡೆಗಳಲ್ಲಿ , 19 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗದೇವರ ಪಾದದ ನೆನೆವ ನಿತ್ಯಮಾಡಿ, ಹೇಮದ ಕೂಟದ ಹಿರಿಯರುಗಳು ಆಶೀರ್ವಾದ ಬಿನ್ನಹ. ಅಂಗದ ಮೇಲೆ ಲಿಂಗವನು ಕಟ್ಟಿ ಶಿವಭಕ್ತರಾದ ಮೇಲೆ ಭವಿಗಳು ಇದ್ದಲ್ಲಿ ಶಿವಶಾಸ್ತ್ರವ ಓದಿ, ಭವಿಗಳ ಪಂಕ್ತಿಯಲ್ಲಿ ಅನ್ನವನು ಉಣಲಾಗದೆಂದು ಬರಿಯ ಮಾತಿನ ಬಣಬೆಯ ಹಿಡಕೊಂಡು ತಿರುಗುವ ನರಗುರಿಗಳು, ಆಧಾರಚಕ್ರದಲ್ಲಿ ಬ್ರಹ್ಮನೆಂಬೊ ಭವಿ ಹುಟ್ಟಿ, ಹೊರಗೆ ಪೃಥ್ವಿತತ್ವದ ಸ್ವಾಧಿಷ್ಟದಲ್ಲಿ ವಿಷ್ಣುವೆಂಬೊ ಭವಿ ಹುಟ್ಟಿ, ಒಳಗೆ ಅಪ್ಪುತತ್ವದ ಹೊರಗೆ ಅಪ್ಪುತತ್ವದ ಮಣಿಪೂರಕದಲ್ಲಿ ರುದ್ರನೆಂಬೊ ಭವಿ ಹುಟ್ಟಿ, ಒಳಗೆ ತೇಜತತ್ವದ ಹೊರಗೆ ತೇಜತತ್ವದ ಅನಾಹತದಲ್ಲಿ ಈಶ್ವರನೆಂಬೊ ಭವಿ ಹುಟ್ಟಿ, ಒಳಗೆ ವಾಯುತತ್ವದ ಹೊರಗೆ ವಾಯುತತ್ವದ ವಿಶುದ್ಧಿಯಲ್ಲಿ ಸದಾಶಿವನೆಂಬ ಭವಿ ಹುಟ್ಟಿ, ಒಳಗೆ ಆಕಾಶತತ್ವದ ಹೊರಗೆ ಆಕಾಶತತ್ವದ ಅಗ್ನಿಯಿಂದ ಪರಬ್ರಹ್ಮನೆಂಬೊ ಭವಿ ಹುಟ್ಟಿ. ಇಂತೀ ಇವರು ಆರುಮಂದಿ ಭವಿಗಳು. ಭಕ್ತನ ಅಂತರಂಗದೊಳು ಹುಟ್ಟಿ, ಅಂತರಂಗದೊಳು ಬೆಳೆದು, ಬೇರೊಂದು ವಿಷ್ಣುಲಿಂಗವಾಗಿ ಬಂದು ಪೂಜೆಗೊಂಬುತಿದರು ಕಾಣಿರೊ. ಅದು ಎಂತೆಂದರೆ : ಬ್ರಹ್ಮನೆಂಬ ಭವಿ, ವಿಷ್ಣುವೆಂಬ ಭವಿ, ರುದ್ರನೆಂಬ ಭವಿ. ಇಂತಿವರು ಮೂರುಮಂದಿ ಭವಿಗಳು ಒಂದುಗೂಡಲಿಕೆ ಈಶ್ವರನೆಂಬ ಲಿಂಗಾಕಾರ ಭವಿಯಾಯಿತು ಕಾಣಿರೊ. ಆ ಲಿಂಗದ ರೂಪನು ನೋಡಿ, ಶಿಲ್ಪಕಾರರು ತಮ್ಮ ಹೊಟ್ಟೆಕಿಚ್ಚಿಗೆ ಕಟೆದಿಟ್ಟು ಮಾರುವ ಶಿಲೆಯ ಲಿಂಗವ ತಂದು, ಶಿರದಲ್ಲಿ ಕಟ್ಟಿ, ಕರದಲ್ಲಿ ಪೂಜೆ ಮಾಡಿ ಶಿವಭಕ್ತರೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳ ಅಂತರಂಗದೊಳು ಕಾಮವೆಂಬೊ ಭವಿ, ಕ್ರೋಧವೆಂಬೊ ಭವಿ, ಲೋಭವೆಂಬೊ ಭವಿ, ಮೋಹವೆಂಬೊ ಭವಿ, ಮದವೆಂಬೊ ಭವಿ, ಮತ್ಸರವೆಂಬೊ ಭವಿ. ಇಂತೀ [ಈ]ರಾರು ಹನ್ನೆರಡುಮಂದಿ ಭವಿಗಳನು ಹತ್ತೇಲಿಯಿಟ್ಟುಕೊಂಡು, ಕೂಡಿಯುಂಡು ಕುಲವನರಸುವಂಥ ಕೋತಿಗಳು ಮಾಡಿದ ಭಕ್ತಿ ಏನಾಯಿತೆಂದರೆ, ಅಜ್ಜಿಗೆ ಅರಸಿನ ಚಿಂತೆಯಾದರೆ, ಮಗಳಿಗೆ ಮಿಂಡಗಾರನ ಚಿಂತೆಯನು ಮಾಡಿಕೊಂಡು, ಹಲವು ಮಿಂಡಗಾರಗೆ ಸೆರಗುಹಾಸಿ ಮಾಡಿಕೊಂಡು ಹೋದಂತಾದೀತು ಕಾಣಿರೊ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬೊ ವಿಪ್ರನ ಗರ್ಭದಲ್ಲಿ ನಕಾರವೆಂಬೊ ಅಕ್ಷರ ಹುಟ್ಟಿ, ಸದ್ಯೋಜಾತಮುಖದಲ್ಲಿ ಬ್ರಹ್ಮನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಹುಟ್ಟಿಸಬೇಕೆಂದು ಚಿಂತೆಯನು ತಾಳಿ, ಪೃಥ್ವಿತತ್ವವೆಂಬೊ ಆದಿ ಆಧಾರ ಬುಡವಾಗಿಯಿದ್ದ ಕಾಣಿರೊ. ಮಕಾರವೆಂಬೊ ಅಕ್ಷರ ಹುಟ್ಟಿ, ವಾಮದೇವಮುಖದಲ್ಲಿ ವಿಷ್ಣುವೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ರಕ್ಷಿಸಬೇಕೆಂಬೊ ಚಿಂತೆಯನು ತಾಳಿ, ಅಪ್ಪುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಶಿಕಾರವೆಂಬೊ ಅಕ್ಷರ ಹುಟ್ಟಿ, ಅಘೋರಮುಖದಲ್ಲಿ ರುದ್ರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಭಕ್ಷಿಸಬೇಕೆಂಬೊ ಚಿಂತೆಯನು ತಾಳಿ, ತೇಜತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ವಕಾರವೆಂಬೊ ಅಕ್ಷರ ಹುಟ್ಟಿ, ತತ್ಪುರುಷಮುಖದಲ್ಲಿ ಈಶ್ವರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ಅಂಗದೊಳಗೆ ಪ್ರಾಣಲಿಂಗವಾಗಿ ಪೂಜೆಗೊಳಬೇಕೆಂಬ ಚಿಂತೆಯನು ತಾಳಿ, ವಾಯುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಯಕಾರವಂಬೊ ಅಕ್ಷರ ಹುಟ್ಟಿ, ಈಶಾನ್ಯಮುಖದಲ್ಲಿ ಸದಾಶಿವನೆಂಬ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ತನ್ನ ಅಂತರಂಗದೊಳಗೆ ಇಂಬಿಟ್ಟು ಇರಬೇಕೆಂಬ ಚಿಂತೆಯನು ತಾಳಿ, ಆಕಾಶತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಅದು ಎಂತೆಂದಡೆ : ಇಂತೀ ಇಪ್ಪತ್ತೈದು ತತ್ವಗಳ ಆಧಾರದಲ್ಲಿ ಹುಟ್ಟಿದ ಭಕ್ತರೆಂಬ ಕೊಂಬೆಗಳು ಮಾಡಿದ ಭಕ್ತಿಯೆನಗಾಯಿತು ಅಂದರೆ, ಪೃಥ್ವಿತತ್ವದ ಆಧಾರದಲ್ಲಿ ಹುಟ್ಟಿದ ಕಸಕಡ್ಡಿಗಳೆಲ್ಲ ಕುಸುಕಿಂದ ಹರಕೊಂಡು ತಿಂದು ಹರಿಹೋದಂತೆ ಕಾಣಿರೊ. ಅದು ಎಂತೆಂದರೆ : ಭವಿಗಳ ಆಧಾರದಲ್ಲಿ ಭಕ್ತರೆಂಬ ಕೊಂಬೆಗಳು ಹುಟ್ಟಿ ಪೃಥ್ವಿತತ್ವವೆಂಬೊ ಭವಿಯ ಹುಟ್ಟಿಸೆಂದರೆ ಹುಟ್ಟಿಸಲಿಲ್ಲ. ಅಪ್ಪುತತ್ವವೆಂಬೊ ಭವಿಯ ರಕ್ಷಿಸಿಯೆಂದರೆ, ರಕ್ಷಿಸಿಯಿದ್ದಿಲ್ಲ. ತೇಜತತ್ವಯೆಂಬೊ ಭವಿಯ ಭಕ್ಷಿಸಿಯೆಂದರೆ, ಭಕ್ಷಿಸಿಯಿದ್ದಿಲ್ಲ. ವಾಯುತತ್ವವೆಂಬೊ ಭವಿಯ ಅಂಗದೊಳಗೆ ಲಿಂಗವಾಗಿ ಪೂಜೆಗೊಂಡಿದ್ದರೆ ಪೂಜೆಗೊಂಡಿದ್ದಿಲ್ಲಾ. ಆಕಾಶತತ್ವಯೆಂಬೊ ಭವಿಯನು ತಮ್ಮ ಅಂತರಂಗದೊಳಗೆ ಮರೆಯೊಳಗೆ ಇಂಬಿಟ್ಟುಕೊಂಡು ಇರಲಾರದ ಅಜ್ಞಾನಿಗಳು. ಪೃಥ್ವಿತತ್ವವೆಂಬೊ ಭವಿ ಆಧಾರದಲ್ಲಿ ಹುಟ್ಟಿ, ಭವಿ ಆಧಾರದಲ್ಲಿ ಬೆಳೆದು, ಆಕಾಶತತ್ವವೆಂಬೊ ಭವಿಯ ಅಂತರಂಗದ ಮರೆಯಲ್ಲಿ ಅಡಗಿಕೊಂಡಿದ ಅಜ್ಞಾನಿಗಳು. ಬ್ರಹ್ಮನೆಂಬೊ ಭವಿ, ವಿಷ್ಣುವೆಂಬೊ ಭವಿ, ರುದ್ರನೆಂಬೊ ಭವಿ. ಮೂವರು ತ್ರಿಮೂರ್ತಿಗಳು ಕೂಡಿ ಏಕಮೂರ್ತಿಯಾದ ಆಕಾರಲಿಂಗವನು ತಂದು, ತಮ್ಮ ಶಿರದಲ್ಲಿ ಕಟ್ಟಿಕೊಂಡು ಶಿವಭಕ್ತನೆ ಹೆಚ್ಚು, ಭವಿ ಕಡಿಮೆಯೆಂದು ಕೈಯಲ್ಲಿ ಕಂಜರದ ಬಾಕನೆ ಹಿಡಿದುಕೊಂಡು, ಕೆಂಜಡೆಯ ಬಿಟ್ಟುಕೊಂಡು, ವೀರಗಾಸೆಯಂತೆ ಕುಣಿದಾಡಿ, ಕೂಗಿ ಕೂಗಿ ಹೇಳುವ ಕುನ್ನಿಗಳು ಮಾಡಿದ ಭಕ್ತಿಯೇನಾಯಿತೆಂದರೆ, ಕೈಲಾಸದ ನಾಯಿಗಳು ಕೈಮೈಯನ್ನ ಹರಕೊಂಡು, ವೈಹಾಳಿಯ ಬಯಲಿಗೆ ಹೋಗಿ, ಒದರಿದರೆ, ಸತ್ತಂತಾಯಿತೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರಾರುಂಟೊ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಅಯ್ಯಾ ಅಯ್ಯಾ ಎಂದು ನೆನೆವುತ್ತಿಹರಯ್ಯಾ ಗಂಗೆವಾಳುಕಸಮಾರುದ್ರರು, ಅವರಿಗೆ ಪ್ರಸಾದಲಿಂಗವ ಸಾಹಿತ್ಯವ ಮಾಡಿದ ಕಾರಣ. ಅಯ್ಯಾ ಅಯ್ಯಾ ಎಂದು ಹೊಗಳುತ್ತಿಹರಯ್ಯಾ ಏಕಾದಶರುದ್ರರು, ಅವರಿಗೆ ಸಕಲ ನಿಃಕಲಾತ್ಮಕ ನೀನೆಯಾಗಿ ಪ್ರಾಣಲಿಂಗವ ಸಾಹಿತ್ಯವ ಮಾಡಿದ ಕಾರಣ. ಶಿವಶಿವಾ ಎನುತಿರ್ಪರಯ್ಯಾ ವಿಷ್ಣು ಮೊದಲಾದ ತ್ರೈತಿಂಶತಿಕೋಟಿ ದೇವತೆಗಳು, ಅವರಿಗೆ ಧರ್ಮಾರ್ಥಕಾಮಮೋಕ್ಷಂಗಳನಿತ್ತೆಯಾಗಿ. ಹರಹರಾ ಎನುತಿರ್ಪರಯ್ಯಾ ಬ್ರಹ್ಮ ಮೊದಲಾದ ಅಷ್ಟಾಶೀತೀಸಹಸ್ರ ಋಷಿಯರು, ಅವರಿಗೆ ಸ್ವರ್ಗ ನರಕಾದಿಗಳ ಮಾಡಿದೆಯಾಗಿ. ಮಹಾದೇವಾ ಮಹಾದೇವಾ ಎನುತಿರ್ಪರಯ್ಯಾ ದಾನವಾದಿಗಳು ಅವರಿಗೆ ಸುಕೃತ ದುಃಕೃತಂಗಳನೀವೆಯಾಗಿ. ಬಸವಾ ಬಸವಾ ಎನುತಿರ್ಪರಯ್ಯಾ ಮಹಾಭಕ್ತರು, ಅವರಿಗೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ತೋರಿದ ಕಾರಣ. ಉಳಿದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೆಲ್ಲ ನಿಮ್ಮುವನನಿಮಿಷವಾಗಿ ನೋಡುತಿರ್ಪರಯ್ಯಾ, ಸಕಲ ನಿಃಕಲಾತ್ಮಕ ಚೈತನ್ಯನಾದೆಯಾಗಿ. ಸಕಲವೂ ನಿನ್ನಾಧಾರ, ನಿಃಕಲವೂ ನಿನ್ನಾಧಾರ. ಸಕಲ ನಿಃಕಲದೊಡೆಯ ದೇವರದೇವ ಕಲಿದೇವಾ ನಿಮ್ಮ ಕರಸ್ಥಲದ ಹಂಗಿನೊಳಗಿರ್ದ ಕಾರಣ ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಆಗಮದ ಹೊಲಬನರಿಯದ ಕುನ್ನಿಗಳು ಶ್ರೀಗುರುಲಿಂಗಜಂಗಮದ ನೆಲೆಯನರಿಯದೆ ಹೋಗಿ, ಬಾಗಿಲ ದಾಟುವ ಮರನ ದೇವರೆಂದು ಪೂಜಿಸಿ, ಬರುತ್ತ ಹೋಗುತ್ತ ಮರನ ಒದ್ದು ಹರಿಸಿಕೊಂಬರು. ಎಂಬತ್ತುನಾಲ್ಕುಲಕ್ಷ ಜೀವರಾಶಿಗೆ ಕಾಗೆ ಕನಿಷ*. ಆ ಕಾಗೆಯ ಬಾಯಲು ಮಾತಾಪಿತರುಂಡರೆಂದು ಓಗರವನಿಕ್ಕಿ, ಬಳಿಕ ಉಂಬವರ ಪಙÂ್ತಯಲ್ಲಿ ಶ್ರೀಗುರು ಕಾರುಣ್ಯವ ಪಡೆದ ಭಕ್ತನು, ಅಲ್ಲಿ ಹೋಗಿ ಲಿಂಗಾರ್ಪಣವ ಮಾಡಿದಡೆ ಅವನು ಕಾಗೆಗಿಂದ ಕರಕಷ್ಟವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಶಿವಶಿವಾ, ಈ ಲೋಕದ ಮಾನವರು ಸಂಸಾರಸುಖವ ಬಹುಸವಿಯೆಂದು ಹರುಷದಿಂದ ಉಬ್ಬಿ ಕೊಬ್ಬಿ ಹೊನ್ನು, ಹೆಣ್ಣು, ಮಣ್ಣಿನ ಹೋರಾಟವ ಮಾಡುವ ಪರಿಯ- ಪೇಳ್ವೆ ಕೇಳಿರಯ್ಯಾ. ಹೊನ್ನಿಗಾಸೆಯ ಮಾಡಿ ನಾನಾದೇಶವ ತಿರುಗಿ ತಿರುಗಿ, ನಾನಾವ್ಯಾಪಾರವ ಮಾಡಿ ದುಡಿದು ದುಃಖಮಂಬಟ್ಟು ಹಗಲು ಹಸುವಿನ ಚಿಂತೆ ಇಲ್ಲ, ಇರುಳು ನಿದ್ರೆಯ ಚಿಂತೆ ಇಲ್ಲ. ಈ ಪರಿಯಲ್ಲಿ ಸರ್ವರನು ಠಕ್ಕುಠವಳಿಯಿಂದ ಸಿಂತರಿಸಬೇಕೆಂಬ ಚಿಂತೆಯುಂಟಲ್ಲದೆ ಇವರಿಗೆ ಜಂಗಮದ ನೆನವು ಎಲ್ಲಿಹುದೋ? ಹೀಗೆ ನಾನಾ ಧಾವತಿಯಿಂದ ಆ ಹೊನ್ನ ಗಳಿಸಿ ತಂದು ಆ ಹೆಣ್ಣು ತರಬೇಕು, ಈ ಹೆಣ್ಣು ಬಿಡಬೇಕು, ಆ ಹೆಣ್ಣು ನೋಡಬೇಕು, ಈ ಹೆಣ್ಣು ಮಾಡಬೇಕು ಎಂಬೀ ಉಲ್ಲಾಸದಿಂದ ಮದವೇರಿದ ಆನೆಯ ಹಾಗೆ ಮಸ್ತಿಗೆ ಬಂದ ಕೋಣನ ಹಾಗೆ, ಮಚ್ಚರಕ್ಕೆ ಬಂದ ಟಗರಿನ ಹಾಗೆ, ಇಂತೀ ಪರಿಯಲ್ಲಿ ತಿರುಗುವ ಕತ್ತಿಮೂಳರಿಗೆ ಲಿಂಗದ ನೆನಹು ಎಲ್ಲಿಹುದೊ? ಹೀಗೆ ಆ ಹೊನ್ನಿನಿಂದ ಆ ಊರಲ್ಲಿ ಹೊಲವ ಮಾಡಬೇಕು, ಈ ಊರಲ್ಲಿ ಹೊಲವ ಮಾಡಬೇಕು, ಅಲ್ಲಿ ಮನೆಯ ಮಾಡಬೇಕು, ಇಲ್ಲಿ ಮನೆಯ ಮಾಡಬೇಕು. ಈ ಉಲ್ಲಾಸ ಚಿಂತೆಯಿಂದ ಹಗಲು ಹಸಿವಿನ ಚಿಂತೆ ಇಲ್ಲ. ಇರುಳು ನಿದ್ರೆಯ ಖಬರಿಲ್ಲ. ಇಂತೀ ಪರಿಯಲ್ಲಿ ಬೆಕ್ಕು ನಾಯಿಗಳು ತಮ್ಮ ಒಡಲ ವಿಷಯದ ಚಿಂತೆಯಿಂದ ಹಗಲು ಇರುಳು ಚರಿಸುವಂತೆ ಈ ಮಾಯಾ ಪ್ರಪಂಚದಲ್ಲಿ ತಿರುಗುವ ಮಂಗಮನುಜರಿಗೆ ಗುರುವಿನ ನೆನಹು ಎಲ್ಲಿಹುದೋ? ಇಂತೀ ಪ್ರಕಾರದಲ್ಲಿ ತ್ರಿವಿಧ ಹೋರಾಟದಲ್ಲಿ ಸಿಲ್ಕಿದ ಜಡಜೀವರುಗಳಿಗೆ ಪರಬ್ರಹ್ಮದ ಎಚ್ಚರವಿಲ್ಲದೆ ಮುಂದೆ ಮೋಕ್ಷವ ಹರಿಯಬೇಕೆಂಬ ಚಿಂತೆಯಿಲ್ಲ. ಇಂತೀ ವಿಚಾರವನು ತಿಳಿಯದೆ ಹೊನ್ನು, ಹೆಣ್ಣು, ಮಣ್ಣೆಂಬ ತ್ರಿವಿಧಮಲವ ಕಚ್ಚಿ ಹಂದಿ ನಾಯಿಗಳ ಹಾಗೆ ಈ ಸಂಸಾರವೆಂಬ ಹಾಳಕೇರಿಯಲ್ಲಿ ಹೊಡದಾಡಿ ಹೊತ್ತುಗಳೆದು ವ್ಯರ್ಥ ಸತ್ತು ಹೋಗುವ ಕತ್ತೆಮೂಳ ಹೊಲೆಮಾದಿಗರಿಗೆ ಇನ್ನೆತ್ತಣ ಮುಕ್ತಿ ಹೇಳಾ! ಇಂತಪ್ಪ ಮೂಢಾತ್ಮರಿಗೆ ಕಲ್ಪಕಲ್ಪಾಂತರ ಎಂಬತ್ತುನಾಲ್ಕುಲಕ್ಷ ಯೋನಿಚಕ್ರದಲ್ಲಿ ತಿರುಗುವುದೇ ಪ್ರಾಪ್ತಿಯುಂಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆನೆ ಮೊದಲು ಇರುವೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿಯಲ್ಲಿ ಸತ್ತು ಹುಟ್ಟಿ ಮಾಡಿದ ಪಾಪಂಗಳಿಗೆ ಕಡೆ ಇಲ್ಲವು ನೋಡಾ ! ಒಬ್ಬ ಶಿವನ ಅಂಗವ ಕಂಡೆನಾಗಿ ಹರಿದುಹೋಹವು ನೋಡಾ ! ಆ ಶಿವನ ತನು ಮನದ ಕೊನೆಯಲ್ಲಿ ನಿರಾಲಂಬಲಿಂಗವಿಪ್ಪದು ನೋಡಾ ! ಆ ಲಿಂಗವು ಒಂದೇ ಮೂರುತೆರನಾಯಿತ್ತು. ಅದು ಹೇಗೆಂದಡೆ : ಗುರು-ಲಿಂಗ-ಜಂಗಮವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಗುರುವಿಡಿದು ಭಕ್ತ-ಮಹೇಶ್ವರನೆಂದು ಎರಡುತೆರನಾಯಿತ್ತು. ಲಿಂಗವಿಡಿದು ಪ್ರಸಾದಿ-ಪ್ರಾಣಲಿಂಗಿಯೆಂದು ಎರಡುತೆರನಾಯಿತ್ತು. ಜಂಗಮವಿಡಿದು ಶರಣ-ಐಕ್ಯನೆಂದು ಎರಡುತೆರನಾಯಿತ್ತು. ಹೀಂಗೆ ಮೂರು ಆರುತೆರನಾಯಿತ್ತು. ಅದು ಹೇಗೆಂದಡೆ; ಇಷ್ಟ-ಪ್ರಾಣ-ಭಾವವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದಾಗಿ ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ; ಇಷ್ಟಲಿಂಗವಿಡಿದು ಆಚಾರಲಿಂಗ-ಗುರುಲಿಂಗವೆಂದು ಎರಡುತೆರನಾಯಿತ್ತು. ಪ್ರಾಣಲಿಂಗವಿಡಿದು ಶಿವಲಿಂಗ-ಜಂಗಮಲಿಂಗವೆಂದು ಎರಡುತೆರನಾಯಿತ್ತು. ಭಾವಲಿಂಗವಿಡಿದು ಪ್ರಸಾದಲಿಂಗ-ಮಹಾಲಿಂಗವೆಂದು ಎರಡುತೆರನಾಯಿತ್ತು. ಹೀಂಗೆ ಮೂರು ಆರುತೆರನಾಯಿತ್ತು. ಅದು ಹೇಗೆಂದಡೆ: ಧ್ಯಾನ ಧಾರಣ ಸಮಾಧಿಯೆಂದು ಮೂರುತೆರನಾಯಿತ್ತು. ಈ ಮೂರನೊಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ; ಧ್ಯಾನವಿಡಿದು ಕ್ರಿಯಾಶಕ್ತಿ-ಜ್ಞಾನಶಕ್ತಿಯೆಂದು ಎರಡುತೆರನಾಯಿತ್ತು. ಧಾರಣವಿಡಿದು ಇಚ್ಫಾಶಕ್ತಿ-ಆದಿಶಕ್ತಿಯೆಂದು ಎರಡುತೆರನಾಯಿತ್ತು. ಸಮಾಧಿವಿಡಿದು ಪರಾಶಕ್ತಿ-ಚಿಚ್ಫಕ್ತಿಯೆಂದು ಎರಡುತೆರನಾಯಿತ್ತು. ಇದಕ್ಕೆ ಭಕ್ತಿ ಆರುತೆರನಾಯಿತ್ತು. ಅದು ಹೇಗೆಂದಡೆ: ಸದ್ಭಕ್ತಿ, ನೈಷಿ*ಕಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿಯೆಂದು ಆರುತೆರನಾಯಿತ್ತು. ಒಬ್ಬ ನಿಃಕಲಶಿವನು ಒಂದೇ ಮೂರುತೆರನಾಯಿತ್ತು. ಮೂರೇ ಆರುತೆರನಾಯಿತ್ತು. ಆರೇ ಮೂವತ್ತಾರುತೆರನಾಯಿತ್ತು. ಮೂವತ್ತಾರೇ ಇನ್ನೂರಹದಿನಾರುತೆರನಾಯಿತ್ತು. ಇನ್ನೂರಹದಿನಾರಾದ ಶಿವನು ಮೂವತ್ತಾರಾದ. ಮೂರಾದ ಶಿವನು ಆರಾದ. ಆರಾದ ಶಿವನು ಮೂರಾದ, ಮೂರಾದ ಶಿವನು ಒಂದಾದ, ಒಂದಾದ ಶಿವನು ಅಂಗಲಿಂಗಸಂಬಂಧ ಗರ್ಭೀಕರಿಸಿಕೊಂಡು ತಾನು ತಾನಾಗಿರ್ಪನು ನೋಡಾ. ಇಂತಪ್ಪ ನಿಃಕಲಶಿವನ ಮಹಾಮಹಿಮೆ ಕಂಡು ನೆನೆದ ನೆನಹಿಂಗೆ ತೃಪ್ತಿಯಾಯಿತ್ತು ಕಾಣಾ, ಅಂದವಾಗಿ ಎನ್ನ ಸಲಹಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->