ಅಥವಾ

ಒಟ್ಟು 57 ಕಡೆಗಳಲ್ಲಿ , 24 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲಚಕ್ರದ ವಚನ : ಏಕಂ ಏಕವಾದ ವಸ್ತುವ ಲೋಕಾಲೋಕಂಗಳರಿಯವು ಸ್ಥೂಲ ಸೂಕ್ಷ್ಮವೆನುತಿರ್ಪರೆಲ್ಲರೂ, ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ ಭೂತಪ್ರಾಣಿಗಳವರೆತ್ತ ಬಲ್ಲರು ಆತನ ಘನವ. ಚಿಟುಕು ಮುನ್ನೂರರವತ್ತು ಕೂಡಿದಡೆ ಒಂದು ವಿಘಳಿಗೆ, ಆ ವಿಘಳಿಗೆ ಅರುವತ್ತು ಕೂಡಿದೊಡೆ ಒಂದು ಘಳಿಗೆ, ಆ ಘಳಿಗೆ ಅರುವತ್ತು ಕೂಡಿದೊಡೆ ಒಂದು ದಿನ. ದಿನ ಮೂವತ್ತು ಕೂಡಿದೊಡೆ ಒಂದು ಮಾಸ ಮಾಸ ಹನ್ನೆರಡು ಕೂಡಿದೊಡೆ ಒಂದು ವರುಷ ವರುಷ ಅರುವತ್ತು ಕೂಡಿದೊಡೆ ಒಂದು ಸಂವತ್ಸರ_ ಇಂತೀ ಕಾಲಚಕ್ರಂಗಳು ಈ ಪರಿಧಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ. ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಳೆಯೊಳು, ತಿರುಗಿ ಬರುತ್ತಿಹವು ಕಾಣಿರೆ. ಕೃತಯುಗ ಹದಿನೇಳು ಲಕ್ಷವು ಇಪ್ಪತ್ತೆಂಟುಸಾವಿರವರ್ಷ ವರ್ತಿಸಿ ನಿಂದಿತ್ತು. ತ್ರೇತಾಯುಗ ಹನ್ನೆರಡು ಲಕ್ಷವು ತೊಂಬತ್ತಾರುಸಾವಿರ ವರ್ಷ ವರ್ತಿಸಿ ನಿಂದಿತ್ತು. ದ್ವಾಪರಯುಗ ಎಂಟು ಲಕ್ಷವು ಅರುವತ್ತುನಾಲ್ಕುಸಾವಿರ ವರ್ಷ ವರ್ತಿಸಿ ನಿಂದಿತ್ತು. ಕಲಿಯುಗ ನಾಲ್ಕುಲಕ್ಷವು ಮೂವತ್ತೆರಡುಸಾವಿರ ವರ್ಷ ವರ್ತಿಸಿ ನಿಂದಿತ್ತು. _ಇಂತೀ ನಾಲ್ಕು ಯುಗಂಗಳು ಕೂಡಿ ಒಂದಾಗಿ ಮೇಳಯಿಸಿದೊಡೆ, ನಾಲ್ವತ್ತು ಮೂರು ಲಕ್ಷವು ಇಪ್ಪತ್ತುಸಾವಿರ ವರುಷ ಕಟ್ಟಳೆಯಾಯಿತ್ತು. ಈ ನಾಲ್ಕುಯುಗಂಗಳು ಇಪ್ಪತ್ತೊಂದು ಬಾರಿ ತಿರುಗಿದಡೆ ಸುರಪತಿಗೆ ಪರಮಾಯು, ಬ್ರಹ್ಮಂಗೆ ಜಾವ, ಅಷ್ಟಾಶಿತಿ ಸಹಸ್ರ ಋಷಿಯರು ಸಾವಿರಬಾರಿ ತಿರುಗಿದಡೆ ಬ್ರಹ್ಮಂಗೆ ಆಯುಷ್ಯ ನೂರಪ್ಪುದು, ವಿಷ್ಣುವಿಂಗೆ ಜಾವಪ್ಪುದು. ಆ ವಿಷ್ಣುವಿನ ಒಂದು ದಿನ(ಜಾವ?)ದೊಳಗೆ ನಾಲ್ಕು ಬಾರಿ ಹುಟ್ಟಿ ನಾಲ್ಕು ಬಾರಿ ಹೊಂದುವ ಬ್ರಹ್ಮನು, ಆ(ದಿ) ವಿಷ್ಣುವಿನ ಒಂದು ದಿನವಪ್ಪುದು, (ಅಂಥ ವಿಷ್ಣುವಿನ ಒಂದು ದಿನದಲ್ಲಿ) ಸಮಸ್ತ ಈರೇಳು ಭುವನಂಗಳೆಲ್ಲ ಭೂತಸಂಹಾರ , ಅಂಥಾ ಭೂತಸಂಹಾರಗಳು ಹದಿನೆಂಟು ಲಕ್ಷವು ಇಪ್ಪತ್ತೆಂಟುಸಹಸ್ರ ವರುಷ ತಿರುಗಲು ಪೃಥ್ವಿಯೆಲ್ಲಾ ಜಲಪ್ರಳಯ. ಅಂಥಾ ಜಲಪ್ರಳಯವೆಂಟು ಬಾರಿ ತಿರುಗಿದಡೆ ವಿಷ್ಣುವಿಂಗೆ ಮರಣ, ರುದ್ರಂಗೆ ನಿಮಿಷ. ಅಂಥಾ ರುದ್ರನ ಒಂದು ನಿಮಿಷದಲ್ಲಿ ಅತಳ ವಿತಳ ಸುತಳ ಮಹೀತಳ ರಸಾತಳ ತಳಾತಳ ಪಾತಾಳ_ ಇಂತು ಕೆಳಗೇಳು ಭುವನಂಗಳು, ಮೇಲೆ, ಸತ್ಯಲೋಕ ಜನರ್ಲೋಕ ತಪೋಲೋಕ ಮಹರ್ಲೋಕ, ಸ್ವರ್ಲೋಕ ಭುವರ್ಲೋಕ ಭೂಲೋಕ ಮೊದಲಾಗಿ_ಇಂತೀ ಲೋಕಾಲೋಕಂಗಳೆಲ್ಲ ಮುಳುಗಿ ಮಹಾಪ್ರಳಯವಾದಲ್ಲಿ ರುದ್ರಲೋಕವೊಂದುಳಿಯೆ, ಆ ರುದ್ರಂಗೆ ಒಂದುದಿನ. ಅಂಥಾದಿನ ಮುನ್ನೂರರವತ್ತು ಕೂಡಿದಡೆ ಒಂದು ವರುಷ. ಅಂಥಾ ವರುಷ ಶತಕೋಟಿ ಕೂಡಿದಡೆ ರುದ್ರಂಗೆ ಪರಮಾಯು. ಅಂಥಾ ರುದ್ರರು ಅನೇಕರು ಹೋದರಲ್ಲಾ, ಮತ್ತಂ ಪಶುಪತಿ, ಶಂಕರ, ಶಶಿಧರ, ಸದಾಶಿವ, ಗೌರೀಪತಿ, ಮಹಾದೇವ ಈಶ್ವರರೆಂಬವರು ಆ ದಿನದಲ್ಲಿ ಇವರು ಪ್ರಮಥಗಣೇಶ್ವರರು, ತಪೋರಾಜ್ಯವನುಂಬರು. ತಪಕ್ಕೆ ಬಿಜಯಂಗೈವರು ಆ ರುದ್ರರು. ಲೋಕಾಲೋಕಂಗಳು ಕೂಡಿ ಭೂತ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು. ಬಳಿಕ ಶೂನ್ಯವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು ಬಳಿಕ ಕಾಳಾಂಧರ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು_ಬಳಿಕ ಮಹಾ ಪ್ರಕಾಶದ ಬೆಳಗು. ಇಂತಹ ಕಾಲಂಗಳು ಈ ಪರಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ ! ಅಂತಹ ಕಾಲಂಗಳೂ ಅರಿಯವು, ಅಂತಹ ದಿನಂಗಳೂ ಅರಿಯವು ಅಂತಹ ದೇವತೆಗಳೂ ಅರಿಯರು,_ ಅಪ್ರಮಾಣ ಅಗಮ್ಯ ಅಗೋಚರ ಉಪಮಿಸಬಾರದು ಅಂತಿಂತೆನಲಿಲ್ಲ ಗುಹೇಶ್ವರಲಿಂಗ ನಿರಂಜನ ನಿರಾಳ ! ನಿರಾಮಯ !
--------------
ಅಲ್ಲಮಪ್ರಭುದೇವರು
ಮಹಾಮೇರುವೆಂಬ ಪಟ್ಟಣದರಸಂಗೆ ಮೂರು ಪ್ರಧಾನಿಗಳು, ಆರು ಮಂದಿ ವಜೀರರು, ಮೂವತ್ತಾರು ಮಂದಿ ಸರದಾರರು, ಐವತ್ತೆರಡು ಮಂದಿ ಮಹಾಲದಾರರು ಕೂಡಿ ಕತ್ತಲ ಕಾಳಂಧವೆಂಬ ದೇಶವನು ಕಾಳಗವ ಮಾಡಿ ತಕ್ಕೊಂಬುವುದ ಕಂಡೆನಯ್ಯ. ಅದು ಹೇಗೆಂದಡೆ: ಹತ್ತುಲಕ್ಷ ರಾವುತರ ಹಿಡಿದು, ಎಂಟು ಸಾವಿರ ಕುದುರೆಗಳ ಹಿಡಿದು, ಅರವತ್ತು ಕೋಟಿ ಕಾಲಮಂದಿಯ ಸಂದಿಸಂದಿನಲ್ಲಿ ನಿಲಿಸಿ, ಸಪ್ತೇಳುಸಾಗರವ ದಾಂಟಿ, ಕತ್ತಲಕಾಳಂಧವೆಂಬ ದೇಶವನು, ಕೈಸೆರೆಯ ಮಾಡಿಕೊಂಡು, ಐದು ಠಾಣ್ಯವ ಬಲಿದು, ಕಡೆಯ ಠಾಣ್ಯದ ಮುಂದೆ ಚಾವಡಿಯ ರಚಿಸುವುದ ಕಂಡೆನಯ್ಯ. ಅದು ಹೇಗೆಂದಡೆ: ಅದಕೆ ಕಂಬ ಒಂದು, ತೊಲೆ ಮೂರು, ಆರು ಜಂತಿಗಳು, ಮೂವತ್ತಾರು ನೆಲೆಗಳ ಹೂಡಿ. ಒಂಬತ್ತು ಬಾಗಿಲಲ್ಲಿ ನವ ಬೊಂಬೆಗಳ ನಿಲಿಸಿ, ಅವಕ್ಕೆ ನವರತ್ನವ ಕೆತ್ತಿಸಿ, ಐದು ತೊಂಡಲಂಗಳ ಕಟ್ಟಿ, ಹವಳ ನೀಲ ರತ್ನ ಧವಳ ಮುತ್ತು ಮಾಣಿಕ್ಯದ ಗದ್ದುಗೆಯ ಮೇಲೆ ಆ ಅರಸನ ಮೂರ್ತಂಗೊಳಿಸಿ, ಸಪ್ತದ್ವೀಪಂಗಳಂ ರಚಿಸಿ, ಸೋಮವೀದಿ ಸೂರ್ಯವೀದಿಯ ಶೃಂಗಾರವ ಮಾಡಿ, ಆ ಅರಸಿಂಗೆ ಒಡ್ಡೋಲಗವಂ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ: ಪಾತಾಳಲೋಕವೆಂಬ ಠಾಣ್ಯದಲ್ಲಿ ತಾಳ, ಕಂಸಾಳ, ಘಂಟೆ, ಜಾಗಟೆ ಮೊದಲಾದ ಶಬ್ದಂಗಳು, ಮತ್ರ್ಯಲೋಕವೆಂಬ ಠಾಣ್ಯದಲ್ಲಿ ಕಿನ್ನರವೇಣು ತಂಬೂರವೇಣು ಕೈಲಾಸವೇಣುಗಳು ಮೊದಲಾದ ಶಬ್ದಗಳು, ಸ್ವರ್ಗಲೋಕವೆಂಬ ಠಾಣ್ಯದಲ್ಲಿ ಭೇರಿ ಡಮರು ತುಡುಮೆ ಡಿಂಡಿಮ ಮೊದಲಾದ ಶಬ್ದಂಗಳು, ತತ್ಪುರುಷವೆಂಬ ಲೋಕದಲ್ಲಿ, ಕೊಳಲು ನಾಗಸ್ವರ ಶಂಖ ಸನಾಯ ಬುರುಗು ನಪಿರಿ ಹೆಗ್ಗಾಳೆ ಚಿನಿಗಾಳೆ ಚಂದ್ರಗಾಳೆ ಮೊದಲಾದ ಶಬ್ದಂಗಳು, ಈಶಾನ್ಯಲೋಕವೆಂಬ ಠಾಣ್ಯದಲ್ಲಿ ಗೀತಪ್ರಬಂಧ ರಾಗಭೇದ ಮೊದಲಾದ ಶಬ್ದಂಗಳು, ಇಂತಿವು ಆ ಅರಸಿಂಗೆ ಒಡ್ಡೋಲಗವ ಮಾಡುವುದ ಕಂಡೆನಯ್ಯ. ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೇಣು, ರುದ್ರಂಗೆ ಮೃದಂಗ, ಈಶ್ವರಂಗೆ ಉಪಾಂಗ, ಸದಾಶಿವಂಗೆ ಗಾಯನ- ಇಂತೀ ಐವರು ಆ ಅರಸಿಂಗೆ ಗಂಧರ್ವರಾಗಿರ್ಪರು ನೋಡಾ. ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಇಂತೈವರು ನಾಂಟ್ಯವನಾಡುತಿರ್ಪರು ನೋಡಾ. ಒಬ್ಬ ಸತಿಯಳು ಆ ಅರಸಿಂಗೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆಯ ಮೇಲೆ, ಮಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು, ಪ್ರಾಣಲಿಂಗಿಯೆಂಬ ತುಪ್ಪವನೆರೆದು, ಶರಣನೆಂಬ ಸಕ್ಕರೆಯ ತಳೆದು, ಆ ಅರಸಿಂಗೆ ನೈವೇದ್ಯವ ಮಾಡುತಿರ್ಪಳು ನೋಡಾ. ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಪಂಚದೀಪಂಗಳ ರಚಿಸಿ, ಆ ಅರಸಿಂಗೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಬ್ರಹ್ಮ. ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತ ವಿಷ್ಣು. ಕಂಠದಲ್ಲಿ ಲಿಂಗವ ಧರಿಸಿಕೊಂಡಾತ ರುದ್ರ. ಉರಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಈಶ್ವರ. ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತ ಸದಾಶಿವ. ಆಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತ ಪರಮೇಶ್ವರ. ಬ್ರಹ್ಮಂಗೆ ಪೀತವರ್ಣದ ಲಿಂಗ, ವಿಷ್ಣುವಿಂಗೆ ನೀಲವರ್ಣದ ಲಿಂಗ, ರುದ್ರಂಗೆ ಕಪಿಲವರ್ಣದ ಲಿಂಗ, ಈಶ್ವರಂಗೆ ಮಾಂಜಿಷ್ಟವರ್ಣದ ಲಿಂಗ, ಸದಾಶಿವಂಗೆ ಮಾಣಿಕ್ಯವರ್ಣದ ಲಿಂಗ, ಪರಮೇಶ್ವರಂಗೆ ಸ್ಫಟಿಕವರ್ಣದ ಲಿಂಗ. ಬ್ರಹ್ಮ ಪಾಶುಪತಿಯಾಗಿ ಸುಳಿದ, ವಿಷ್ಣು ಜೋಗಿಯಾಗಿ ಸುಳಿದ, ರುದ್ರ ಶ್ರವಣನಾಗಿ ಸುಳಿದ, ಈಶ್ವರ ಸನ್ಯಾಸಿಯಾಗಿ ಸುಳಿದ, ಸದಾಶಿವ ಯೋಗಿಯಾಗಿ ಸುಳಿದ, ಪರಮೇಶ್ವರ ಕಾಳಾಮುಖಿಯಾಗಿ ಸುಳಿದ. ಬ್ರಹ್ಮಂಗೆ ಕಾವಿ ಬಿಳಿದು, ವಿಷ್ಣುವಿಂಗೆ ಪೀತಸಕಲಾತಿ, ರುದ್ರಂಗೆ ಕಾಗು ಕಂಬಳಿ, ಈಶ್ವರಂಗೆ ಮೃಗಾಜಿನ ಕಾವಿಕಪ್ಪಡ, ಸದಾಶಿವಂಗೆ ಪುಲಿಚರ್ಮ ರತ್ನಗಂಬಳಿ, ಪರಮೇಶ್ವರಂಗೆ ಮೇಕೆಚರ್ಮ ಸಿತಕಪ್ಪಡ. ಬ್ರಹ್ಮ ಸ್ಥೂಲನೆಂದು, ವಿಷ್ಣು ಸೂಕ್ಷ್ಮನೆಂದು, ರುದ್ರ ಕಾರಣನೆಂದು, ಈಶ್ವರ ಸಕಲನೆಂದು, ಸದಾಶಿವ ನಿಃಕಲನೆಂದು, ಪರಮೇಶ್ವರ ಶೂನ್ಯನೆಂದು. ಬ್ರಹ್ಮಂಗೆ `ನ'ಕಾರ, ವಿಷ್ಣುವಿಂಗೆ `ಮ'ಕಾರ, ರುದ್ರಂಗೆ `ಶಿ'ಕಾರ, ಈಶ್ವರಂಗೆ `ವ'ಕಾರ, ಸದಾಶಿವಂಗೆ `ಯ'ಕಾರ, ಪರಮೇಶ್ವರಂಗೆ `ಓಂ' ಕಾರ. ಬ್ರಹ್ಮಂಗೆ ಭಕ್ತಸ್ಥಲ, ವಿಷ್ಣುವಿಂಗೆ ಮಹೇಶ್ವರಸ್ಥಲ, ರುದ್ರಂಗೆ ಪ್ರಸಾದಿಸ್ಥಲ, ಈಶ್ವರಂಗೆ ಪ್ರಾಣಲಿಂಗಿಸ್ಥಲ, ಸದಾಶಿವಂಗೆ ಶರಣಸ್ಥಲ, ಪರಮೇಶ್ವರಂಗೆ ಐಕ್ಯಸ್ಥಲ. ಇಂತಪ್ಪ ಶೈವಲಿಂಗದ ಭಕ್ತಿಯು, ಷಡುಸ್ಥಲದ ಸುಳುಹಿನೊಳಗಲ್ಲ. ರೇವಣಸಿದ್ಧಯ್ಯದೇವರು ಸಾಕ್ಷಿಯಾಗಿ ಪ್ರಭುದೇವರ ವಿರಶೈವ ಲಿಂಗ ಜಂಗಮದ ಷಡುಸ್ಥಲ ಸುಳುಹು ಆ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಕಾಣಾ, ಸಿದ್ಧರಾಮಯ್ಯಾ.
--------------
ಚನ್ನಬಸವಣ್ಣ
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಬ್ರಹ್ಮಂಗೆ ಬ್ರಹ್ಮಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ವಿಷ್ಣುವಿಂಗೆ ವಿಷ್ಣುಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ದೇವತೆಗಳಿಗೆ ದೇವಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿ ಸ್ನಾನವ ಮಾಡಿದ ಋಷಿಗಳಿಗೆ ಋಷಿಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಗಂಧರ್ವರುಗಳಿಗೆ ಗಂಧರ್ವಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ರುದ್ರಗಣರಿಗೆ ರುದ್ರಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಯಕ್ಷರಿಗೆ ಯಕ್ಷಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಕಿನ್ನರರಿಗೆ ಕಿನ್ನರಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಅಮರಗಣರಿಗೆ ಅಮರಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಪಿತೃಗಣರಿಗೆ ಪಿತೃಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಭೂತಗಣರಿಗೆ ಭೂತಗಣಪದವಾಯಿತ್ತು. ಅದೆಂತೆಂದೊಡೆ : ``ಬ್ರಹ್ಮವಿಷ್ಣ್ವಾದಿದೇವಾ ಋಷಯೋ ಗಂಧರ್ವಾ ಯಕ್ಷಕಿನ್ನರಾಃ | ಮರುದ್‍ಗಣಾಃ ಪಿತೃಗಣಾಃ ಸರ್ವೇ ಭೂತಗಣಾ ಅಪಿ | ನಿತ್ಯಂ ಚ ಸರ್ವಯತ್ನೇನ ಭಸ್ಮಸ್ನಾನಂ ಪ್ರವರ್ತತೇ ||'' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಮಹತ್ವವ ಕಂಡು ಕೇಳಿ ನಂಬಲರಿಯದೆ ಗರ್ವದಿಂದೆ ಮುಂದುಗೆಟ್ಟ ಮರುಳಮಾನವರಿಗೆ ಭವರಾಟಾಳದಲ್ಲಿ ಸತ್ತು ಸತ್ತು ಹುಟ್ಟಿ ಹುಟ್ಟಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪುರುಷನ ವೀರ್ಯವೇ ಸ್ತ್ರೀಗೆ ಶಕ್ತಿಯಾಗಿ, ತದ್ದಾರಣಬಲದಿಂ ಅದೇ ಸಾಕಾರಮಾಗಿ ಸೃಷ್ಟಿಯಾದಲ್ಲಿ, ಆ ಶಿಶುವನು ರಕ್ಷಿಸುವುದಕ್ಕೆ ಆ ಸತಿಯೇ ಕಾರಣಮಾಗಿರ್ಪಂತೆ, ಸದಾಶಿವನ ವೀರ್ಯರೂಪಸುವರ್ಣವೇ ವಿಷ್ಣುವಿಗೆ ಶಕ್ತಿಯಾಗಿ, ತದ್ಧಾರಣಬಲದಿಂದ ತದ್ರೂಪಮಾಗಿರ್ಪ ರಜೋಗುಣಮೂರ್ತಿಯಾದ ಬ್ರಹ್ಮಾದಿಸಕಲಪಂಚಮಂ ಸೃಷ್ಟಿಸಿ, ತದ್ರಕ್ಷಣಕ್ಕೆ ತಾನೇ ಕಾರಣಮಾಗಿರ್ಪನು. ಇಂತಪ್ಪ ಶಿವಶಕ್ತಿಗಳ ಮಹಿಮೆಯಂ ನಾನೆಂಬ ರಜೋಗುಣವೇ ಮೆರೆಗೊಂಡಿರ್ಪುದು. ತತ್ಸಂಗಕ್ಕೂ ತಾನೇ ಉಪಾಧಿಕಾರಣಮಾಗಿರ್ಪ ಭೇದಮಂ ಗುರುಮುಖದಿಂದ ತಿಳಿದು ನೋಡಿದಲ್ಲಿ, ಅವರಿಬ್ಬರ ಕ್ರೀಡೆಯನ್ನು ನೋಡಿ ನಾನಿಲ್ಲವಾದೆನು, ನಾನಿಲ್ಲವಾದಲ್ಲಿ ಅವೆರಡೂ ಒಂದೆಯಾಯಿತ್ತು. ದರ್ಪಣವಿಲ್ಲವಾದಲ್ಲಿಬಿಂಬ ಪ್ರತಿಬಿಂಬಗಳೇಕವಾದಂತೆ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸೃಷ್ಟಿಯ ಕಲ್ಪಿಸುವ ಕರ್ತ ಬ್ರಹ್ಮಂಗೆ ಶತಾಯುಗನೆಂಬ ಗಣಿತವಿದೇನು? ಸಕಲಜೀವಿಗಳ ರಕ್ಷಿಸುವ ವಿಷ್ಣುವಿಂಗೆ ದಶಾವತಾರವೆಂಬ ಗಣಿತವಿದೇನು? ಕೋಪಾಗ್ನಿರುದ್ರನೆಂಬ ಜಮದಗ್ನಿಯ ತಲೆಯನರಿದವರಾರುರಿ ಮೂವತ್ತುಮೂರು ಕೋಟಿ ದೇವರ್ಕಳನಾಳಿದ ರಾವಣಂಗೆ ಅಳಿವೆಂಬುದೇನುರಿ ಹರಸಿ ಲಕ್ಷವಿಪ್ರರು ನಿಚ್ಚ ಮಂತ್ರಾಕ್ಷತೆಯನಿಡುತ್ತಿರಲು ದುರ್ಯೋಧನಂಗೆ ಸಾವೆಂಬುದೇನು ? ಹರನೆ ನೀ ಹರಸಿ ಪಟ್ಟವ ಕಟ್ಟಿಕೊಟ್ಟಂತಲ್ಲದೆ ಇಲ್ಲ. ಎಲ್ಲರಿಗೆಯೂ ಮೂರು ಲೋಕದೊಳಗೆ ನೀನೊಬ್ಬನೆ ಒಡೆಯನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವಿಘ್ನೇಶ್ವರ ಹರನ ಮಗನೆಂಬ ಪಂಚಮಹಾಪಾತಕರ ನುಡಿಯ ಕೇಳಲಾಗದು. ಪಾರ್ವತಿ ಹರನ ಸತಿಯೆಂಬ ಲಿಂಗದ್ರೋಹಿಗಳ ನೆನೆಯಲಾಗದು. ಬಹುರೂಪಿ ಹರನ ಸರಿಯೆಂಬ ಗುರುದ್ರೋಹಿಗಳ ನೆನೆಯಲಾಗದು. ಅಂದೆಂತೆಂದಡೆ:`ಯತ್ರ ಜೀವಾತ್ಮ ತತ್ರ ಶಿವ' ಎಂದೆನಿಸಿಕೊಂಬಾತನೊಬ್ಬ ಗಣೇಶ್ವರನು. ಭೂಮಿಪೀಠಾಕಾಶವಾಗಿರ್ದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಬಾಣಸವ ಮಾಡಿಸಿದಾತನೊಬ್ಬ ಗಣೇಶ್ವರನು. ಅರ್ಜುನನ ಕೂಡ ಯುದ್ಧವ ಮಾಡಿ, ತನ್ನ ಸತಿಯಳಿಗೆ ತೋರಿಸಿದಾತನೊಬ್ಬ ಗಣೇಶ್ವರನು. ಅಂಗಜನ ಸಂಹಾರವ ಮಾಡಿದಾತನೊಬ್ಬ ಆದಿರುದ್ರನೆಂಬ ಗಣೇಶ್ವರನು. ದಕ್ಷನ ಸಂಹಾರವ ಮಾಡಿದಾತನೊಬ್ಬ ವೀರಭದ್ರನೆಂಬ ಗಣೇಶ್ವರನು. ಹತ್ತು ಅವತಾರ ವಿಷ್ಣುವಿಂಗೆ, ಅನಂತ ಅವತಾರ ಬ್ರಹ್ಮಂಗೆ. ಇಂತಿವರೆಲ್ಲರಿಗೂ ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ. ಈ ನಾಲ್ಕೂ ಪ್ರಳಯಚಕ್ರವೆಂದೆನಿಸಿಹವು. ಇಂತಿವರೊಳಗಾದವರೆಲ್ಲರು ಇನ್ನುಳಿದವರು ನರದೇಹಿಗಳಿಗೆ ಪ್ರಳಯವು. ಉಪಮಿಸಲಾಗದು, ಅಜಾತ ಪವಿತ್ರ ನಿರ್ಲೇಪ [ಜಂಗಮಲಿಂಗ ಪ್ರಭುವೆ].
--------------
ಮಾರೇಶ್ವರೊಡೆಯರು
ಏಕೋದೇವ ಶಿವನದ್ವಿತೀಯ. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಿ ನುಡಿವುತ್ತಿ(ವೆ), ಶ್ರುತಿ ಶಾಸ್ತ್ರ ಪುರಾಣ ಆಗಮಂಗಳೆಲ್ಲವು. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಲು, ಮರಳಿ ವಿಷ್ಣು ದೇವರೆಂದು ನುಡಿವುತ್ತಿಪ್ಪರು. ದೈವಕ್ಕೆ ಉತ್ಪತ್ತಿ ಸ್ಥಿತಿ ಲಯಂಗಳೆಂಬುದುಂಟೆ. ದೃಷ್ಟಾಂತರ ಜಾಯತೆ ಅಷ್ಟಮಿ ಸಾಕ್ಷಿ. ಆ ವಿಷ್ಣುವಿಂಗೆ ಲಯವುಂಟೆಂಬುದಕ್ಕೆ ಕಾಡಬೇಡನೆಚ್ಚಂಬು ಅಂಗಾಲಲ್ಲಿ ನೆಟ್ಟು ಪ್ರಾಣವ ಬಿಟ್ಟುದೇ ಸಾಕ್ಷಿ. ಅಚ್ಯುತಂಗೆ ಅನೇಕ ಭವವುಂಟೆಂಬುದಕ್ಕೆ ಮತ್ಸ್ಯ ಕೂರ್ಮ ವರಾಹವತಾರವಾದುದೇ ಸಾಕ್ಷಿ. ಆ ಹರಿ, ಹರನ ಭೃತ್ಯನೆಂಬುದಕ್ಕೆ ರಾಮೇಶ್ವರ ಆದಿಯಾದ ಪ್ರತಿಷೆ*ಗಳೇ ಸಾಕ್ಷಿ. ಇಂತಪ್ಪ ಹರಿಯನು ಹರಂಗೆ ಸರಿಯೆಂದು ನುಡಿವರು ಅಜ್ಞಾನಿಗಳು. ಆತಂಗಿಲ್ಲದ ಮಹತ್ವದ ತಾವು ನುಡಿವುತ್ತಿಹರು. ಬಲಿಯ ಮೂರಡಿ ಭೂಮಿಯ ಸ್ಥಾನವ ಬೇಡಿದಲ್ಲಿ ಪಂಚಾಶತಕೋಟಿ ಭೂಮಿ ಸಾಲದೆ ಹೋಯಿತೆಂದು ನುಡಿವುತ್ತಿಹರು. ಮಗಧನೆಂಬ ರಾಕ್ಷಸನನಟ್ಟುವಲ್ಲಿ ಅದೆಲ್ಲಿ ಬಂದಿತೊ, ಓಡುವುದಕ್ಕೆ ಭೂಮಿ. ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲಾ ಇದ್ದೀತೆಂದು ನುಡಿವುತ್ತಿಹರು. ಆ ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲವು ಇದ್ದರೆ, ಸೀತೆ ಹೋದಳೆಂದು ಅರಸಿ ಸೇತುವೆ ಕಟ್ಟಿ ದಣಿಯಲೇಕೊ. ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವೂ ಬಂದವೆಂದು ನುಡಿವುತ್ತಿಹರು. ಆ ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವು ಬಂದರೆ, ಕಪಿಗಳ ಕೂಡಿ ಸೇತುವೆ ಕಟ್ಟುವುದಕ್ಕೇನು ಕಾರಣ. ಇಂತಪ್ಪ ಹರಿಯನು ಹರಗೆ ಸರಿಯೆಂದು ನುಡಿವ ದ್ವಿಜರ ನುಡಿಯನು ಪ್ರಮಾಣಿಸಿದರೆ, ಅಘೋರ ನರಕದಲ್ಲಿ ಇಕ್ಕದೆ ಮಾಣ ನಿಜಗುರು ಶಾಂತಮಲ್ಲಿಕಾರ್ಜುನ.
--------------
ನಿಜಗುರು ಶಾಂತಮಲ್ಲಿಕಾರ್ಜುನ
ಬ್ರಹ್ಮಂಗೆ ಕಾಲಕೊಟ್ಟು, ವಿಷ್ಣುವಿಂಗೆ ಕೈಯಕೊಟ್ಟು, ರುದ್ರಂಗೆ ತಲೆಯಕೊಟ್ಟು, ಉಳಿದ ಪರುಷರಿಗೆ ಸರ್ವಾಂಗವನು ಕೊಟ್ಟು, ಹಾದರ ಮಾಡಿ ಕಾಯಕವ ಮಾಡುತ್ತಿರ್ಪೆನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಹಸ್ರದಳಕಮಲಮಂಟಪದಲ್ಲಿ ಓಂಯೆಂಬ ತಾಯಿ ಒಬ್ಬ ಮಗನ ಹಡೆದು ಸಾಕಿ ಸಲುಹಿ ತನ್ನಂತೆ ಮಾಡಿಕೊಂಡು ತತ್ಪುರುಷಲೋಕದಲ್ಲಿರುವ ಈಶ್ವರನ ಮಗಳ ತಕ್ಕೊಂಡು, ನಿಟಿಲವೆಂಬ ಹಸೆಯಜಗುಲಿಯ ಮೇಲೆ ಮದಲಿಂಗ ಮೊದಲಗಿತ್ತಿಯ ಕುಳ್ಳಿರಿಸಿ, ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬವ ನಿಲ್ಲಿಸಿ, ಮಹಾಜ್ಞಾನವೆಂಬ ಹಂದರವ ಹೊಂದಿಸಿ, ಪ್ರಾಣಾಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯಯೆಂಬ ಹತ್ತು ತೋರಣವ ಕಟ್ಟಿ, ಚಂದ್ರ ಸೂರ್ಯರೆಂಬ ದೀವಿಗೆಯ ಮುಟ್ಟಿಸಿ, ಪಾತಾಳಲೋಕದಲ್ಲಿರ್ಪ ಭಕ್ತನ ಕರೆಸಿ, ಮತ್ರ್ಯಲೋಕದಲ್ಲಿರ್ಪ ಮಹೇಶ್ವರನ ಕರೆಸಿ, ಸ್ವರ್ಗಲೋಕದಲ್ಲಿರ್ಪ ಪ್ರಸಾದಿಯ ಕರೆಸಿ, ತತ್ಪುರುಷಲೋಕದಲ್ಲಿರ್ಪ ಪ್ರಾಣಲಿಂಗಿಯ ಕರೆಸಿ, ಈಶಾನ್ಯಲೋಕದಲ್ಲಿರ್ಪ ಶರಣನ ಕರೆಸಿ, ಈ ಪಂಚಮೂರ್ತಿಗಳಂ ಮಜ್ಜನಂಗೈಸಿ ಕುಳ್ಳಿರ್ದರು ನೋಡಾ ! ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೀಣೆ, ರುದ್ರಂಗೆ ಮೃದಂಗ, ಈಶ್ವರಂಗೆ ಶಂಖ, ಸದಾಶಿವಂಗೆ ಘಂಟೆ, ಈ ಪಂಚಮೂರ್ತಿಗಳು ನಾದವಾಲಗವಂ ಮಾಡುತಿಪ್ಪರು ನೋಡಾ ! ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಈ ಐವರು ನಾಂಟ್ಯವನಾಡುತ್ತಿಪ್ಪರು ನೋಡಾ ! ನಿಷ್ಪತಿಯೆಂಬ ಬಸವಣ್ಣನ ಮೇಲೆ ಮದಲಿಂಗ ಮೊದಲಗಿತ್ತಿಯ ಕುಳ್ಳಿರಿಸಿ, ಸೋಮಬೀದಿ ಸೂರ್ಯಬೀದಿಯಲ್ಲಿ ಮೆರವಣಿಗೆಯಂ ಮಾಡಿ, ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಫಾಶಕ್ತಿ ಆದಿಶಕ್ತಿ ಪರಾಶಕ್ತಿ ಈ ಐವರು ನವರತ್ನದ ಹರಿವಾಣಗಳಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಸಪ್ತದೀಪಂಗಳ ರಚಿಸಿ ಓಂ ನಮೋ ಓಂ ನಮೋ ಶಿವಾಯಯೆಂದು ಬೆಳಗುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾ ಬಾಹಾಗ ಎನ್ನ ಗುರು ಮೂರು ರತ್ನವ ಕೊಟ್ಟ. ಅವ ನಾನೊಲ್ಲದೆ ಒಂದ ಬ್ರಹ್ಮಂಗೆ ಕೊಟ್ಟೆ. ಒಂದ ವಿಷ್ಣುವಿಗೆ ಕೊಟ್ಟೆ, ಒಂದ ರುದ್ರಂಗೆ ಕೊಟ್ಟೆ. ಆ ಕೊಟ್ಟುದನು ಬ್ರಹ್ಮ ಬೆಗಡವನಿಕ್ಕಿ ಪವಣಿಸಿ ಕಟ್ಟಿದ. ಅದ ವಿಷ್ಣು ಕುಂದಣದಲ್ಲಿ ಕೀಲಿಸಿ ಮುಂಗೈಯಲ್ಲಿಕ್ಕಿದ. ಮತ್ತೊಂದವನಾ ರುದ್ರನೊಡೆದು ಬೆಳಗ ಬಯಲು ಮಾಡಿದ. ಇಂತೀ ಮೂವರು ರತ್ನದ ಹಂಗಿಗರಾದರು. ಅವರ ಹಂಗನೊಲ್ಲದೆ ಸಂದೇಹ ಬಿಡಲಾರದೆ, ಬಂದ ಬಂದ ಯೋನಿಯಲ್ಲಿ ಸಂದಿಲ್ಲದೆ ತಿರುಗಲಾರದೆ, ನೊಂದೆನಯ್ಯಾ. ಬ್ರಹ್ಮನ ಬಲೆಯಲ್ಲಿ ಸಿಲುಕಿ, ವಿಷ್ಣುವಿನ ಬಂಧನದಲ್ಲಿ ಕಟ್ಟುವಡೆದು, ರುದ್ರನ ಹಣೆಗಿಚ್ಚಿನಲ್ಲಿ ಉರಿಯಲಾರದೆ, ಹಾರಿದೆನಯ್ಯಾ ಕೇಡಿಲ್ಲದ ಪದವ. ಗುರುವಿನ ಹಂಗ ಬಿಟ್ಟೆ, ಅಡಿಗಡಿಗೆ ಏಳಲಾರದೆ. ಲಿಂಗದ ಹಂಗ ಬಿಟ್ಟೆ, ಮಜ್ಜನಕ್ಕೆರೆದ ಹಾವಸೆಗಾರದೆ. ಜಂಗಮದ ಹಂಗ ಬಿಟ್ಟೆ, ಸಂದೇಹದಲ್ಲಿ ಸಾಯಲಾರದೆ. ಇವರಂದ ಒಂದೂ ಚಂದವಿಲ್ಲ. ಅಭಂಗ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಂಗೆ.
--------------
ಮೋಳಿಗೆ ಮಾರಯ್ಯ
ಪೂರ್ವದಲ್ಲಿ ಓಂಕಾರವೆಂಬ ಲಿಂಗದ ಸಂಗದಿಂದ ಪ್ರಣವವೆ ಆದಿಯಾಯಿತ್ತು ನೋಡಾ. ಆ ಆದಿಯ ಸಂಗದಿಂದ ಒಬ್ಬ ಶಿವನಾದ. ಆ ಶಿವನ ಸಂಗದಿಂದ ಈಶ್ವರನಾದ. ಆ ಈಶ್ವರನ ಸಂಗದಿಂದ ರುದ್ರನಾದ. ಆ ರುದ್ರನ ಸಂಗದಿಂದ ವಿಷ್ಣುವಾದ. ಆ ವಿಷ್ಣುವಿನ ಸಂಗದಿಂದ ಬ್ರಹ್ಮನಾದ. ಬ್ರಹ್ಮಂಗೆ ಸರಸ್ವತಿಯಾದಳು, ವಿಷ್ಣುವಿಂಗೆ ಲಕ್ಷ್ಮಿಯಾದಳು, ರುದ್ರಂಗೆ ಕ್ರಿಯಾಶಕ್ತಿಯಾದಳು, ಈಶ್ವರಂಗೆ ಸ್ವಯಂಭೂಶಕ್ತಿಯಾದಳು, ಸದಾಶಿವಂಗೆ ಜ್ಞಾನಶಕ್ತಿಯಾದಳು. ಈ ಐವರ ಸಂಗದಿಂದ ನರರು ಸುರರು ದೇವಾದಿದೇವರ್ಕಳು ಕಿನ್ನರಕಿಂಪುರುಷರು ಗರುಡಗಂಧರ್ವರು ಹುಟ್ಟಿದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರುಲಿಂಗದಲ್ಲಿ ಅರಿದಿಹೆನೆಂಬ ಆರುಹುಗೇಡಿಗಳು ನೀವು ಕೇಳಿರೊ ! ಆರುಲಿಂಗ ನಿಮಗೆಲ್ಲಿಹವು ? ಅದೆಂತೆಂದಡೆ:ಆಚಾರಲಿಂಗ ಬ್ರಹ್ಮಂಗೆ ಸಂಬಂಧ, ಗುರುಲಿಂಗ ವಿಷ್ಣುವಿಂಗೆ ಸಂಬಂಧ, ಶಿವಲಿಂಗ ರುದ್ರಂಗೆ ಸಂಬಂಧ, ಜಂಗಮಲಿಂಗ ಈಶ್ವರಂಗೆ ಸಂಬಂಧ, ಪ್ರಸಾದಲಿಂಗ ಸದಾಶಿವಂಗೆ ಸಂಬಂಧ, ಮಹಾಲಿಂಗ ಪರಶಿವಂಗೆ ಸಂಬಂಧ, ಇಂತಾರುಲಿಂಗ ಆರುದರುಶನಕ್ಕೆ ಸಂಬಂಧ. ನಿಮ್ಮ ಸಂಬಂಧವ ನೀವು ಬಲ್ಲಿರೆ ಹೇಳಿರೊ ! ಅರಿಯದಿರ್ದಡೆ ಕೇಳಿರೊ ! ಗುರುಲಿಂಗ ಜಂಗಮವೆಂಬ ತ್ರಿವಿಧ ಸಂಬಂಧವ ತಿಳಿದು ! ಆರು ಪರಿಯ ಶಿಲೆಯಂ ಮೆಟ್ಟಿ ! ಮೂರುಬಾಗಿಲ ತೆರೆದು ! ಶ್ರೀ ಗುರುವಿನ ಪ್ರಸಾದವ ಸವಿದು ! ಮುಂದಿರ್ದ ಲಿಂಗಸಂಗವ ಮಾಡಿ ! ಆ ಪ್ರಥಮಶಿವನೆಂಬ ಜಂಗಮವ ನೋಡುತ್ತಾ ನೋಡುತ್ತಾ ನಿಬ್ಬೆರಗಾಗಬೇಕು ! ಇದು ಕಾರಣ ಆರುಮೂರುಗಳೆಂಬ ಮರವೆಯ ಹರಿದು, ತಟ್ಟುಮುಟ್ಟುಗಳೆಂಬ ಭ್ರಮೆಯ ಜರೆದು ! ಅಂಗಲಿಂಗವೆಂಬ ದ್ವಂದ್ವವ ಹಿಂಗಿ ನಿಸ್ಸಂಗಿಯಾಗಿರ್ದೆನಯ್ಯಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ದಶನಾದಗಳು ಇಲ್ಲದಂದು, ಸುನಾದಗಳು ನೆಲೆಗೊಳ್ಳದಂದು, ಝೇಂಕಾರವು ಮೊನೆದೋರದಂದು, ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿದ್ದನಯ್ಯ. ತನ್ನ ನೆನವಿನ ಮಂತ್ರದಲ್ಲಿ ಓಂಕಾರನೆಂಬ ಮೂರ್ತಿಯಾದನಯ್ಯ. ಆ ಓಂಕಾರನೆಂಬ ಮೂರ್ತಿಂಗೆ ಚಿಚ್ಫಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಪರಶಿವನಾದ. ಆ ಪರಮಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಸದಾಶಿವನಾದ, ಆ ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಈಶ್ವರನಾದ, ಆ ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ರುದ್ರನಾದ, ಆ ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ವಿಷ್ಣುವಾದ, ಆ ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಬ್ರಹ್ಮನಾದ, ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ನರಲೋಕಾದಿ ಲೋಕಂಗಳು ಆದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕ್ರಿಯಾಶಕ್ತಿ ಬ್ರಹ್ಮಂಗೆ ಸರಸ್ವತಿಯಾಗಿ ಬಂದುದನರಿದು ಇಚ್ಛಾಶಕ್ತಿ ವಿಷ್ಣುವಿಂಗೆ ಮಹಾಲಕ್ಷ್ಮಿಯಾಗಿ ನಿಂದುದನರಿದು, ಜ್ಞಾನಶಕ್ತಿ ರುದ್ರಂಗೆ ಉಮಾದೇವಿಯಾಗಿ ಸಲೆ ಸಂದುದನರಿದು, ಇಂತೀ ತ್ರಿವಿಧ ಶಕ್ತಿಗಳ ಮನೋಹರದಲ್ಲಿ ತ್ರಿವಿಧ ಮೂರ್ತಿಗಳು ಆಡುವದ ಕಂಡು ನಾನಾಸುಖ ಪರಿಪೂರ್ಣ ಕಳೆಯಿಂದ ಕ್ರಿಯಾಶಕ್ತಿ ಅದರ ಸುಖಿಚ್ಛೆಯಿಂದ ಇಚ್ಛಾಶಕ್ತಿ ಈ ಉಭಯಶಕ್ತಿ ಸನ್ಮತವಾಗಿ ನಿಂದ ಉಳುಮೆ ಜ್ಞಾನಶಕ್ತಿ. ಇಂತೀ ತ್ರಿವಿಧ ಶಕ್ತಿಯ ಒಡಹುಟ್ಟಿ ನಾ ಬಂದೆ. ಬ್ರಹ್ಮಂಗೆ ಕಿರಿದಂಗಿಯ ಕೊಟ್ಟು ಮೈದುನನ ಮಾಡಿಕೊಂಡೆ. ವಿಷ್ಣುವಿಂಗೆ ನಡುವಳಾಕೆಯ ಕೊಟ್ಟು ಬಿಡುಮುಡಿಯ ಮೈದುನನ ಮಾಡಿಕೊಂಡೆ. ರುದ್ರಂಗೆ ಹಿರಿಯಕ್ಕನ ಕೊಟ್ಟು ಎನ್ನೊಡಗೂಡುವ ಭಾವನ ಮಾಡಿಕೊಂಡೆ. ಕಿರಿದಂಗಿಯ ಗಂಡ ಸತ್ತ, ನಡುದಂಗಿಯ ಗಂಡ ಬಿಟ್ಟ, ಹಿರಿಯಕ್ಕನ ಕೊಂದ ಭಾವ. ಇಂತೀ ಮೂವರ ಕೊಳುಕೊಡೆ ದೃಷ್ಟ ಸಂಬಂಧ ನಷ್ಟವಾಯಿತ್ತು. ಕಲುಹೃದಯದ ಕಲಕೇತಮಲ್ಲ ಬಂದೆ. ಗೆಲ್ಲ ಸೋಲವೆಂಬ ತಗರ ಕೋಡ ಹಿಡಿದು ಮೇಖಲೇಶ್ವರಲಿಂಗವಲ್ಲದಿಲ್ಲಾಯೆಂದು ನಲಿದು ಕುಣಿದಾಡಬಂದೆ.
--------------
ಕಲಕೇತಯ್ಯ
ಇನ್ನಷ್ಟು ... -->