ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಗ್ಘವಣಿ ಸುಯಿದಾನವಾದ ಶರಣಂಗೆ, ತನು ಸುಯಿದಾನವಾಗಬೇಕು. ತನು ಸುಯಿದಾನವಾದ ಶರಣಂಗೆ ಮನ ಸುಯಿದಾನವಾಗಬೇಕು. ಮನ ಸುಯಿದಾನವಾದ ಶರಣಂಗೆ ಪ್ರಾಣದ ಮೇಲೆ ಲಿಂಗ ಸಯವಾಗಬೇಕು. ಪ್ರಾಣದ ಮೇಲೆ ಲಿಂಗ ಸಯವಾಗದಿರ್ದಡೆ ಇದೆಲ್ಲ ವೃಥಾ ಎಂದಿತ್ತು ಕೂಡಲಚೆನ್ನಸಂಗಯ್ಯನ ವಚನ
--------------
ಚನ್ನಬಸವಣ್ಣ
ಅರ್ಪಿತ ಆನರ್ಪಿತವೆಂಬ ಉಭಯಕುಳದ ಶಂಕೆವುಳ್ಳನ್ನಕ್ಕ ಅಚ್ಚಸಂಸಾರಿಯೆಂಬೆ. ಅರ್ಪಿತ ಅನರ್ಪಿತವೆಂಬೆರಡ ಕಳೆದು ನಿಂದಾತನ ಅಚ್ಚಲಿಂಗವಂತನೆಂಬೆ. ಅರ್ಪಿತ ಅನರ್ಪಿತವನರ್ಪಿಸಿ ಪ್ರಸಾದ ಸ್ವೀಕರಿಸಬಲ್ಲಡಾತನ ವಾಙ್ಮನಾತೀತನೆಂಬೆ. ಅರ್ಪಿತವಿಲ್ಲ, ಅನರ್ಪಿತವಿಲ್ಲ, ಅಕಲ್ಪಿತವಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಂಗದ ಮೇಲೊಂದು ಲಿಂಗವು, ಲಿಂಗದ ಮೇಲೊಂದು ಅಂಗವು. ಆವುದು ಘನವೆಂಬೆ ? ಆವುದು ಕಿರಿದೆಂಬೆ ? ತಾಳೋಷ್ಠಸಂಪುಟಕ್ಕೆ ಬಾರದ ಘನ, ಉಭಯಲಿಂಗವಿರಹಿತವಾದ ಶರಣ. ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಅರಸುವಂಗೆ ಅರಸುವಂಗೆ ಅರಕೆ ತಾನಹುದು, ದೇವಾ ! ಬಯಸುವಂಗೆ ಬಯಸುವಂಗೆ ಬಯಕೆ ತಾನಹುದು, ದೇವಾ ! ನೀವು ಭಾವಿಸಿದಂತಲ್ಲದೆ ಬೇರೊಂದಾಗಬಲ್ಲುದೆ ? ಈರೇಳು ಭುವನಸ್ಥಾಪ್ಯ ಪ್ರಾಣಿಗಳೆಲ್ಲ ನಿಮ್ಮಿಂದಲಾದವಾಗಿ. ನಿಮ್ಮಿಂದಲಹುದಾಗದೆಂಬ ಸಂದೇಹವುಂಟೆ ಬಸವಣ್ಣ ? ನಿಮ್ಮಡಿಗಳೆಂದಂತೆ, ನೆನೆದಂತೆ, ನೋಡಿದಂತೆ, ತಪ್ಪದು. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಪ್ರಭುವಿನಾಣೆ ಕಟ್ಟು ಗುಡಿಯನು.
--------------
ಚನ್ನಬಸವಣ್ಣ
ಅರ್ಪಿತ ಅರ್ಪಿತವೆನುತ್ತಿಹರೆಲ್ಲ ಅರ್ಪಿತವಾವುದೆಂದು ಹೇಳಿರಯ್ಯಾ? ಕಾಯಾರ್ಪಿತವೆಂಬಿರೆ ಅಳಿವಿನೊಳಗಾಯಿತ್ತು, ಭಾವಾರ್ಪಿತವೆಂಬಿರೆ ಭ್ರಮೆಗೊಳಗಾಯಿತ್ತು, ಜಿಹ್ವಾರ್ಪಿತವೆಂಬಿರೆ ರುಚಿಯೊಳಗಾಯಿತ್ತು. ಸರ್ವವೂ ಶಿವನಾಜ್ಞೆಯೊಳಗೆಂಬಿರೆ ಭವಬಂಧನ ಬಿಡದು, ಅರ್ಪಿಸಲೇಬೇಕು, ಅರ್ಪಿಸಿದಲ್ಲದೆ ಪ್ರಸಾದವಾಗದು. ಅರ್ಪಿತದ ಮರ್ಮ ಸಕೀಲನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಅರ್ಪಿತದಲ್ಲಿ ಅವಧಾನವರತು, ಅನರ್ಪಿತದಲ್ಲಿ (ಅರ್ಪಿತದಲ್ಲಿ?) ಸುಯಿಧಾನವರತು. ಬಂದುದು ಬಾರದುದೆಂದರಿಯದೆ, ನಿಂದ ನಿಲವಿನ ಪರಿಣಾಮತೆಯಾಯಿತ್ತು. ರುಚಿ ರೂಪಂ ನ ಚ ಜ್ಞಾನಂ ಅರ್ಪಿತಾನರ್ಪಿತಂ ತಥಾ ಆದೌ ಪ್ರವರ್ತತೇ ಯಸ್ಯ ಶಿವೇನ ಸಹಮೋದತೇ ಎಂಬುದಾಗಿ, ಕೂಡಲಚೆನ್ನಸಂಗಯ್ಯಾ. ನಿಮ್ಮವರು ಶಿವಸುಖಸಂಪನ್ನರಾದರಯ್ಯಾ.
--------------
ಚನ್ನಬಸವಣ್ಣ
ಅಂಧಕನು ಓಡ ಹಿಡಿದು ಸ್ವರೂಪವ ತಾ ನೋಡುವಂತೆ, ಶೈವ ಗುರುವಿನಲ್ಲಿ ಲಿಂಗ ಸಾಹಿತ್ಯವಾದ ಶಿಷ್ಯನ ವಿಧಿಯ ನೋಡಿರೆ ! ಗುರುವಿಂಗೆ ದೂರಾರ್ಚನೆ ಶಿಷ್ಯಂಗೆ ಇಷ್ಟಲಿಂಗಾರ್ಚನೆ, ಗುರು ವಾಯುಪ್ರಾಣಿ, ಶಿಷ್ಯ ಲಿಂಗಪ್ರಾಣಿ, ಗುರು ಭೂತದೇಹಿ, ಶಿಷ್ಯ ಲಿಂಗದೇಹಿ, ಗುರು ಅನರ್ಪಿತಭುಂಜಕ, ಶಿಷ್ಯ ಲಿಂಗಾರ್ಪಿತಭುಂಜಕ, ಗುರು ಅಗ್ನಿದಹನಸಂಪತ್ತು, ಶಿಷ್ಯ ಸಿದ್ಧಸಮಾಧಿಸಂಪತ್ತು, ಎಂತುಂಟು ಹೇಳಿರಣ್ಣಾ ? ``ಜ್ಞಾನಹೀನಗುgõ್ಞ ಪ್ರಾಪ್ತೇ ಶಿಷ್ಯಜ್ಞಾನಂ ನ ಸಿಧ್ಯತಿ ಮೂಲಚ್ಛಿನ್ನೇ ಯಥಾ ವೃಕ್ಷೇ ಕಥಂ ಪುಷ್ಪಂ ಫಲಂ ಭವೇತ್ ಎಂದುದಾಗಿ ಇವರಿಬ್ಬರ ಗುರುಶಿಷ್ಯಸಂಬಂಧಕ್ಕೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅರಿವರತು ಕುರುಹು ನಷ್ಟವಾದ ಬಳಿಕ ಕುರುಹಿನ ಬಣ್ಣ ಅಂಗದ ಮೇಲೇಕೊ ಘಟ್ಟಿವಾಳಂಗೆ ? ಅರಿವನಾರು ? ಅರುಹಿಸಿಕೊಂಬನಾರು ? ಬರಿಯ ಬಯಲು ಕಾಣಾ, ಕೂಡಲಚೆನ್ನಸಂಗಾ ನಿಮ್ಮ ಶರಣ ಘಟ್ಟಿವಾಳನಲ್ಲದೆ ನೆರೆ ಅರಿವರಾರೊ ?
--------------
ಚನ್ನಬಸವಣ್ಣ
ಅಂಗವೆ ಅಮಳೋಕ್ಯ, ಲಿಂಗವೆ ಮುಖಸೆಜ್ಜೆಯಾಗಿ ಆ ಲಿಂಗವೆ ಭುಂಜಗ, ಅಂಗವೆ ನಾಗವತ್ತಿಕೆಯಾದ ಬಳಿಕ ಬೇರರಸಲುಂಟೆ ? ಅಪ್ರತಿಮ ಪ್ರಾಣನಾಥನಾದಬಳಿಕ ಇನ್ನು ಬೇರರಸಲುಂಟೆ ? ಅಂಗಲಿಂಗಸುಸಂಗ ಶರಣರ ಸಂಗದಲ್ಲಿರಿಸಯ್ಯ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಅರಿವಿಲ್ಲದ ಕಾರಣ ಭವಕ್ಕೆ ಬಂದರು, ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಆಚಾರವಿಲ್ಲ. ಆಚಾರವಿಲ್ಲದವಂಗೆ ಲಿಂಗವಿಲ್ಲ, ಲಿಂಗವಿಲ್ಲದವಂಗೆ ಜಂಗಮವಿಲ್ಲ. ಜಂಗಮವಿಲ್ಲದವಂಗೆ ಪ್ರಸಾದವಿಲ್ಲ, ಪ್ರಸಾದವಿಲ್ಲದವಂಗೆ ಗಣತ್ವವಿಲ್ಲ. ಅರಿವು ಸಾಹಿತ್ಯ ಗುರು, ಗುರುಸಾಹಿತ್ಯ ಆಚಾರ, ಆಚಾರಸಾಹಿತ್ಯ ಲಿಂಗ, ಲಿಂಗಸಾಹಿತ್ಯ ಜಂಗಮ, ಜಂಗಮಸಾಹಿತ್ಯ ಪ್ರಸಾದ, ಪ್ರಸಾದಸಾಹಿತ್ಯ ಗಣತ್ವ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಈ ಸ್ಥಲವಾದವರಿಗೆಲ್ಲಾ ಭಕ್ತಿ ಉನ್ಮದ ಉಂಟು, [ಸಕಳ] ನಿರ್ವಾಣ ಲಿಂಗೈಕ್ಯಪದವಪೂರ್ವ.
--------------
ಚನ್ನಬಸವಣ್ಣ
ಅರ್ಪಿತ ವಿಡಿದು ಸಯಿದಾನವಾಯಿತ್ತೀಯೊಡಲಿಂಗೆ, ಅನರ್ಪಿತವಿಡಿದು ಪ್ರಸಾದವಾಯಿತ್ತೀ ಪ್ರಾಣಕ್ಕೆ. ತನು ಭೋಗಿಸುವುದು ಉಪಾಧಿ [ಕ] ಪ್ರಸಾದ, ಪ್ರಾಣ ಭೋಗಿಸುವುದು ಪರಿಣಾಮಪ್ರಸಾದ. ಈ ಭೇದವ ಭೇದಿಸಿ ಪ್ರಾಣಚೈತನ್ಯ ಲಿಂಗವೆಂದರಿದೆನಾಗಿ ಕೂಡಲಚೆನ್ನಸಂಗನೆಂಬ ಲಿಂಗ ಸ್ವಯವಾಯಿತ್ತು.
--------------
ಚನ್ನಬಸವಣ್ಣ
ಅರಮನೆಯ ಕೂಳನಾದಡೆಯು ತಮ್ಮುದರದ ಕುದಿಹಕ್ಕೆ ಲಿಂಗಾರ್ಪಿತವೆಂದೆಡೆ ಅದು ಲಿಂಗಾರ್ಪಿತವಲ್ಲ ಆನರ್ಪಿತ. ಅದೆಂತೆಂದೆಡೆ : ಅರ್ಪಿತಂಚ ಗುರೋರ್ವಾಕ್ಯಂ ಕಿಲ್ಬಿಷಸ್ಯ ಮನೋ[s]ರ್ಪಿತಂ ಅನರ್ಪಿತಸ್ಯ ಭುಂಜಿಯಾನ್ ರೌರವಂ ನರಕಂ ವ್ರಜೇತ್ ಎಂದುದಾಗಿ ತನ್ನ ಒಡಲಕಕ್ಕುಲತೆಗೆ ಆಚಾರವನನುಸರಿಸಿ ಭವಿಶೈವ ದೈವ ತಿಥಿವಾರಂಗಳ ಹೆಸರಿನಲ್ಲಿ ಅಟ್ಟಿ ಕೂಳತಂದು ತಮ್ಮ ಇಷ್ಟಲಿಂಗಕ್ಕೆ ಕೊಟ್ಟು ಹೊಟ್ಟೆಯ ಹೊರೆವ ಆಚಾರಭ್ರಷ್ಟ ಪಂಚಮಹಾಪಾತಕರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಮುಂದೆ ಅಘೋರ ನರಕವನುಂಬರು. ಇದನರಿದು ನಮ್ಮ ಬಸವಣ್ಣನು ತನುವಿನಲ್ಲಿ ಆಚಾರಸ್ವಾಯತವಾಗಿ. ಮನದಲ್ಲಿ ಅರಿವು ಸಾಹಿತ್ಯವಾಗಿ ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾಗಿ ಇಂತೀ ತನು-ಮನ-ಪ್ರಾಣಂಗಳಲ್ಲಿ ಸತ್ಯ ಸದಾಚಾರವಲ್ಲದೆ ಮತ್ತೊಂದನರಿಯದ ಭಕ್ತನು ಭವಿಶೈವ ದೈವ ತಿಥಿ ಮಾಟ ಕೂಟಂಗಳ ಮನದಲ್ಲಿ ನೆನೆಯ. ತನುವಿನಲ್ಲಿ ಬೆರಸ ಭಾವದಲ್ಲಿ ಬಗೆಗೊಳ್ಳ ಏಕಲಿಂಗ ನಿಷ್ಠಾಪರನು ಪಂಚಾಚಾರಯುಕ್ತನು ವೀರಶೈವ ಸಂಪನ್ನ ಸರ್ವಾಂಗಲಿಂಗಿ ಸಂಗನಬಸವಣ್ಣನು ಈ ಅನುವ ಎನಗೆ ಅರುಹಿಸಿ ತೋರಿದ ಕಾರಣ ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅನಾದಿ ಪರಶಿವನಿಂದಾಕಾರವಾದ ಆದಿಬಿಂದು ಅನಾದಿಬಿಂದು ಚಿದ್ಬಿಂದು ಪರಬಿಂದುವೆ ಜಗದ ಮಧ್ಯದಲ್ಲಿ ಸ್ವಯ, ಚರ, ಪರ, ಭಕ್ತ, ಮಹೇಶ್ವರ, ಪ್ರಸಾದಿ ಪೂಜ್ಯ ಪೂಜಕತ್ವದಿಂದ ಚರಿಸುತ್ತಿರಲು, ಆ ಸಮಯದಲ್ಲಿ ಪ್ರಮಾದವಶದಿಂದ ಲಿಂಗಾಂಗಕ್ಕೆ ಸುಯಿಧಾನ ತಪ್ಪಿ ವಿಘ್ನಾದಿಗಳು ಬಂದು ತಟ್ಟಿ ಶಂಕೆ ಬಂದಲ್ಲಿ ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿದಲ್ಲಿ ಸ್ಥೂಲವಾದಡೆ ಸದಾಚಾರಕ್ಕೆ ಹೊರಗು ಸೂಕ್ಷ್ಮವಾದಡೆ ಶರಣಗಣಂಗಳ ಸಮೂಹಮಧ್ಯದಲ್ಲಿ ಭೃತ್ಯಭಾವದಿಂದ ಹತ್ತು ಹನ್ನೊಂದ ಕೊಳತಕ್ಕುದಲ್ಲ ನೋಡಾ (ಕೊಳತಕ್ಕುದಲ್ಲದೆ?) ಕರ್ತೃತ್ವದಿಂದ ಹತ್ತು ಹನ್ನೊಂದ ಕೊಡತಕ್ಕುದಲ್ಲ ನೋಡಾ ! ಸ್ಥೂಲ ಸೂಕ್ಷ್ಮದ ವಿಚಾರವೆಂತೆಂದಡೆ: ಪರಶಿವಸ್ವರೂಪವಾದ ಇಷ್ಟಲಿಂಗದ ಷಟ್‍ಸ್ಥಾನದೊಳಗೆ ಆವ ಮುಖದಿಂದಾದಡೆಯು ಸುಯಿಧಾನ ತಪ್ಪಿ ಪೆಟ್ಟುಹತ್ತಿ ಭಿನ್ನವಾದಡೆ, ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಹರಗುರುವಚನ ವಿಚಾರಿಸಿರಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಪ್ರತಿಜ್ಞೆಯ ಮಾಡುವುದು, ಶಕ್ತಿ ಸ್ವರೂಪವಾದ ಅಂಗದ ಅವಯವಂಗಳಿಗೆ ಶಿವಾನುಕೂಲದಿಂದ ವ್ಯಾಘ್ರ ಭಲ್ಲೂಕ ದಂಷ್ಟ್ರ ಕರ್ಕಟ ವಾಜಿ ಮಹಿಷ ಸಾಗರದುಪ್ಪಿ ಗಜ ಶುನಿ ಶೂಕರ ಮಾರ್ಜಾಲ ಹೆಗ್ಗಣ ಉರಗ ಮೊದಲಾದ ಮಲಮಾಂಸಭಕ್ಷಕ ಪ್ರಾಣಿಗಳು ಮೋಸದಿಂದ ಪಾದ ಪಾಣಿ ಗುದ ಗುಹ್ಯ ದೇಹವ ಕಚ್ಚಿದಡೆ ಸ್ಥೂಲವೆನಿಸುವುದಯ್ಯಾ ! ಅದರಿಂದ ಮೇಲೆ ಜಿಹ್ವೆ ನಾಸಿಕ ನೇತ್ರ ಲಲಾಟ ಶ್ರೋತ್ರಂಗಳ ಕಚ್ಚಿದಡೆ ಸೂಕ್ಷ್ಮವೆನಿಸುವುದಯ್ಯಾ ! ಈ ಪ್ರಕಾರದಲ್ಲಿ ಲಿಂಗಾಂಗಕ್ಕೆ ಅಪಮೃತ್ಯು ಬಂದು ತಟ್ಟಿದಲ್ಲಿ ಆಚಾರಕ್ಕೆ ಹೊರಗಾದವರು ಗಣಮಧ್ಯದಲ್ಲಿ ಪ್ರಾಣವ ಬಿಡುವುದಯ್ಯಾ, ಇಂತಪ್ಪ ಆಚಾರಕ್ರಿಯಾನಿಷ್ಠನ ಭಕ್ತ ಮಹೇಶ್ವರ ಶರಣಗಣಂಗಳು ಜಂಗಮದ ಪಾದದಲ್ಲಿ ಸಮಾಧಿಯ ಮಾಡುವುದಯ್ಯಾ ಪ್ರಾಣತ್ಯಾಗವ ಮಾಡಲಾರದಿರ್ದಡೆ, ಭಕ್ತ ಮಹೇಶ್ವರ ಶರಣಗಣಂಗಳ ಮಹಾನೈಷ್ಠೆಯಿಂದ ಸಾಕ್ಷಾತ್ಪ್ರಭುವೆಂದು ನಂಬಿ ಅವರು ತೋರಿದ ಸೇವೆಯ ಮಾಡಿ, ಅವರು ಕೊಟ್ಟ ಧಾನ್ಯಾದಿಗಳ ಸ್ವಪಾಕವ ಮಾಡಿ ಮಹಾಪ್ರಸಾದವೆಂದು ಭಾವಿಸಿ ಪಾತಕಸೂತಕಂಗಳ ಹೊದ್ದದೆ ಆಚರಿಸಿದಾತಂಗೆ ಅವಸಾನಕಾಲದಲ್ಲಿ ಮಹಾಗಣಂಗಳು ಲಿಂಗಮುದ್ರಾಭೂಮಿಯಲ್ಲಿ ಪಾದದಳತೆಯಿಲ್ಲದೆ ನೋಟಮಾತ್ರ ಪ್ರಮಾಣಿಸಿ ಸಹಜಸಮಾಧಿಯ ಮಾಡಿ ಲಿಂಗಾಕೃತಿಪ್ರಣವಸಂಬಂಧವಾದ ತಗಡ ಸಂಬಂಧ ಮಾಡದೆ ಪುಷ್ಪಾಂಜಲಿಯ ಮಾಡದೆ, ಆ ನಿಕ್ಷೇಪ ಸ್ಥಾನದಲ್ಲಿ ಜಂಗಮದ ಪಾದವಿಟ್ಟು ಆ ಮರಣಸನ್ನದ್ಧನ ನಿಕ್ಷೇಪನ ಮಾಡುವುದಯ್ಯಾ. ಈ ರೀತಿಯಿಂದಾಚರಿಸಿದಡೆ ಮರಳಿ ಗುರುಕರಜಾತನಾಗಿ ಸದ್ಭಕ್ತಿ ಜ್ಞಾನಾಚಾರ ಕ್ರೀಯಲ್ಲಿ ನಡೆನುಡಿಸಂಪನ್ನನಾಗಿ ಷಟ್‍ಸ್ಥಲದ ಬ್ರಹ್ಮವ ಕೂಡಿ ಘನಸಾರದಂತೆ ಸರ್ವಾಂಗವೆಲ್ಲ ಜ್ಯೋತಿರ್ಮಯಲಿಂಗದಲ್ಲಿ ನಿರವಯವಪ್ಪುದು ನೋಡಾ ! ಇಂತು ಗುರುಮಾರ್ಗಾಚಾರವ ಮೀರಿ, ಅವಧೂತಮಾರ್ಗದಲ್ಲಿ ನಡೆದಡೆ, ಇರುವೆ ಮೊದಲಾನೆ ಕಡೆಯಾದ ಸಮಸ್ತ ಯೋನಿಯಲ್ಲಿ ಜನಿಸಿ, ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವನನುಭವಿಸಿ ಕಾಲಕಾಮಾದಿಗೊಳಗಾಗಿ ಗುರುಮಾರ್ಗಾಚಾರಕ್ಕೆ ಹೊರಗಾಗಿ ಹೋಹರು ನೋಡಾ, ಕೂಡಲಚೆನ್ನಸಂಗಮದೇವಾ !
--------------
ಚನ್ನಬಸವಣ್ಣ
ಅಯ್ಯಾ, ಸಜ್ಜನ ಸದ್ಭಾವಿಗಳ ಸಂಗದಿಂದ ಮಹಾನುಭಾವಿಗಳ ಕಾಣಬಹುದು, ಮಹಾನುಭಾವಿಗಳ ಸಂಗದಿಂದ ಶ್ರೀಗುರುವ ಕಾಣಬಹುದು, ಶ್ರೀಗುರುವಿನ ಸಂಗದಿಂದ ಲಿಂಗವ ಕಾಣಬಹುದು, ಲಿಂಗಸಂಗದಿಂದ ಜಂಗಮವ ಕಾಣಬಹುದು. ಜಂಗಮಸಂಗದಿಂದ ಪ್ರಸಾದವ ಕಾಣಬಹುದು, ಪ್ರಸಾದದಿಂದ ಆಚಾರವ ಕಾಣಬಹುದಯ್ಯಾ. ಆಚಾರದಿಂದ ತನ್ನ ಕಾಣಬಹುದಯ್ಯಾ ಇದು ಕಾರಣ ಕೂಡಲಚೆನ್ನಸಂಗಮದೇವಾ, ನಿಮ್ಮ ಸಜ್ಜನ ಸದ್ಭಾವಿಗಳ ಸಂಗವನೆ ಕರುಣಿಸಯ್ಯಾ ನಿಮ್ಮ ಧರ್ಮ.
--------------
ಚನ್ನಬಸವಣ್ಣ
ಅಯ್ಯಾ, ಕ್ರಿಯಾವಿಭೂತಿಯ ಧರಿಸಿದ ಭಕ್ತನು ಚಿದ್ರುದ್ರಾಕ್ಷಿಯ ಧರಿಸಿ ಮಂತ್ರಧ್ಯಾನವ ಮಾಡಬೇಕಾದ ನಿಮಿತ್ತ, ಪ್ರಥಮದಲ್ಲಿ ರುದ್ರಾಕ್ಷಿಮಣಿಗಳ ಕ್ರಮವ ಮಾಡದೆ, ಅವರು ಹೇಳಿದಂತೆ ಕ್ರಯವ ಕೊಟ್ಟು ಮುಖಭಿನ್ನವಾದುದನುಳಿದು, ಸ್ವಚ್ಛವಾದ ರುದ್ರಾಕ್ಷಿಗಳ ಶ್ರೀಗುರುಲಿಂಗಜಂಗಮದ ಸನ್ನಿಧಿಗೆ ತಂದು ವೃತ್ತಸ್ಥಾನದ ಪರಿಯಂತರವು ಧೂಳಪಾದೋದಕವ ಮಾಡಿ, ಆ ರುದ್ರಾಕ್ಷಿಯ ಪೂರ್ವಾಶ್ರಯವ ಕಳೆದು, ಲಿಂಗಧಾರಕಭಕ್ತರಿಂದ ಗುರುಪಾದೋದಕ ಮೊದಲಾಗಿ ಶಿವಪಂಚಾಮೃತದಿಂದ ಇಪ್ಪತ್ತೊಂದು ಪೂಜೆಯ ಮಾಡಿಸಿ ಆಮೇಲೆ ಶ್ರೀಗುರುಲಿಂಗಜಂಗಮದ ಪಾದಪೂಜೆಗೆ ಧರಿಸಿ, ಆಮೇಲೆ ಲಿಂಗಜಂಗಮಕ್ಕೆ ಸಮರ್ಪಿಸಿ, ಅವರಿಂದ ದಯಚಿತ್ತವ ಪಡೆದು, ಶರಣುಹೊಕ್ಕು ಮಹಾಪ್ರಸಾದವೆಂದು ಬೆಸಗೊಂಡು, ಆ ಕರುಣಾಕಟಾಕ್ಷ ಮಾಲೆಗಳ ಭಿನ್ನವಿಟ್ಟು ಅರ್ಚಿಸದೆ, ಅಭಿನ್ನಸ್ವರೂಪು ಮುಂದುಗೊಂಡು ಬಹುಸುಯಿಧಾನದಿಂದ ತನ್ನ ತೊಡೆಯ ಮೇಲೆ ಮೂರ್ತವ ಮಾಡಿಕೊಂಡು, ತನ್ನ ಜ್ಞಾನಪ್ರಕಾಶವೆಂದು ಭಾವಿಸಿ ತನ್ನ ತಾನರ್ಚಿಸಿ, ಮಂತ್ರಧ್ಯಾನಾರೂಢನಾಗಿ ತತ್ತತ್ ಸ್ಥಾನದಲ್ಲಿ ಧರಿಸುವುದಯ್ಯಾ. ಇಂತು ವಿಭೂತಿ ರುದ್ರಾಕ್ಷಿಯ ಧರಿಸಿ ಲಿಂಗನಿಷ್ಠಾಪರನಾದ ಭಕ್ತನು ಸ್ಥಲಮೆಟ್ಟಿಗೆಯಿಂದ ಆಯಾಯ ಮಂತ್ರವ ಹೇಳುವುದಯ್ಯಾ. ಅದರ ವಿಚಾರವೆಂತೆಂದಡೆ: ಕ್ರಿಯಾದೀಕ್ಷಾಯುಕ್ತನಾದ ಉಪಾಧಿಭಕ್ತಂಗೆ ಗುರುಮಂತ್ರವ ಹೇಳುವುದಯ್ಯಾ. ಕ್ರಿಯಾದೀಕ್ಷೆಯ ಪಡೆದು ಗುರುಲಿಂಗಜಂಗಮದಲ್ಲಿ ಅರ್ಥಪ್ರಾಣಾಭಿಮಾನಂಗ? ನಿರ್ವಂಚಕತ್ವದಿಂದ ಸಮರ್ಪಿಸಿ ನಡೆನುಡಿ ಸಂಪನ್ನನಾದ ನಿರುಪಾಧಿಭಕ್ತಂಗೆ ಲಿಂಗಮಂತ್ರವ ಹೇ?ುವುದಯ್ಯಾ ಇವರಿಬ್ಬರ ಆಚರಣೆಯ ಪಡೆದು ಸಮಸ್ತ ಭೋಗಾದಿಗಳು ನೀಗಿಸಿ ಸಚ್ಚಿದಾನಂದನಾದ ಸಹಜಭಕ್ತಂಗೆ ಜಂಗಮಮಂತ್ರವ ಹೇ?ುವುದಯ್ಯಾ. ಆ ಮಂತ್ರಂಗಳಾವುವೆಂದಡೆ: ಶಕ್ತಿಪ್ರಣವ ಹನ್ನೆರಡು ಗುರುಮಂತ್ರವೆನಿಸುವುದಯ್ಯಾ, ಶಿವಪ್ರಣವ ಹನ್ನೆರಡು ಲಿಂಗಮಂತ್ರವೆನಿಸುವುದಯ್ಯಾ, ಶಿವಶಕ್ತಿರಹಿತವಾದ ಹನ್ನೆರಡು ಜಂಗಮಮಂತ್ರವೆನಿಸುವುದಯ್ಯಾ. ಇಂತು ವಿಚಾರದಿಂದ ಉಪಾಧಿ ನಿರುಪಾಧಿ ಸಹಜಭಕ್ತ ಮಹೇಶ್ವರರಾಚರಿಸುವುದಯ್ಯಾ. ಇನ್ನು ನಿರಾಭಾರಿ ವೀರಶೈವನಿರ್ವಾಣ ಸದ್ಭಕ್ತಜಂಗಮಗಣಂಗಳು ಶುದ್ಧಪ್ರಸಾದಪ್ರಣವ ಹನ್ನೆರಡು, ಸಿದ್ಧಪ್ರಸಾದಪ್ರಣವ ಹನ್ನೆರಡು, ಪ್ರಸಿದ್ಧಪ್ರಸಾದಪ್ರಣವ ಹನ್ನೆರಡು, ಇಂತು ವಿಚಾರದಿಂದ ಮೂವತ್ತಾರು ಪ್ರಣವವನೊಡಗೂಡಿ, ಶುದ್ಧಪ್ರಸಾದಪ್ರಣವ ಆಚಾರಲಿಂಗ ಗುರುಲಿಂಗ ಇಷ್ಟಲಿಂಗ ಪರಿಯಂತರ ತ್ರಿವಿಧ ಲಿಂಗಕ್ಕೆಂದು ಮಾಡುವುದಯ್ಯಾ. ಸಿದ್ಧಪ್ರಸಾದಪ್ರಣವ ಶಿವಲಿಂಗ ಜಂಗಮಲಿಂಗ ಪ್ರಾಣಲಿಂಗ ಪರಿಯಂತರ ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ. ಪ್ರಸಿದ್ಧಪ್ರಸಾದಪ್ರಣವ ಪ್ರಸಾದಲಿಂಗ ಮಹಾಲಿಂಗ ಭಾವಲಿಂಗ ಪರಿಯಂತರ ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ. ಹೀಗೆ ಹರುಕಿಲ್ಲದೆ ಸ್ಥಲಮೆಟ್ಟಿಗೆಯಿಂದ ಕರುಣಿಸಿದ ಗುರುವಿಂಗೆ ಬೆಸಗೊಂಡ ಶಿಷ್ಯೋತ್ತಮಂಗೆ. ಆಯಾಯ ಲಿಂಗಪ್ರಸಾದ ಒದಗುವುದೆಂದಾಂತ ನಮ್ಮ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಅಂಗಾಲಿಂದ ಮೊಕಾಲ ಪರಿಯಂತರ ಬಸವಣ್ಣ ಮೊಳಕಾಲಿಂದ ಕಂಠ ಪರಿಯಂತರ ಚೆನ್ನಬಸವರಾಜದೇವರು ಕಂಠದಿಂದ ಮೇಲೆ ಪ್ರಭುದೇವರು. ಒಂದು ವಸ್ತು ಎರಡಾಯಿತ್ತು, ಎರಡು ವಸ್ತು ಮೂರಾಯಿತ್ತು. ಆ ಮೂರುವಸ್ತುವನು ತಿಳಿದು ನೋಡಿದಡೆ ಕೂಡಲಚೆನ್ನಸಂಗಯ್ಯನಲ್ಲಿ ಒಂದೆಯಾಯಿತ್ತು
--------------
ಚನ್ನಬಸವಣ್ಣ
ಅವಿನಾಶಂಗೆ ವಿನಾಶವರ್ಪಿತವಾದರೆ ಪ್ರಸಾದಿ. ಆ ಪ್ರಸಾದ ವರ್ಣನಾಸ್ತಿಯಾಗಿ ಕೊಳಬಲ್ಲಡೆ ಪ್ರಸಾದಿ. ಆ ಪ್ರಸಾದಿಯೆಂಬ ಅವಿನಾಶಂಗೆ ನಮೋ ನಮೋಯೆಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ ಭಕ್ತಾಂಗನೆಯರು ತಮ್ಮ ಲಿಂಗಶರೀರಂಗ? ಮಧ್ಯದಲ್ಲಿ ಹರಭಕ್ತಿಗೆ ಹೊರಗಾದ ಅಸು[ರಾಂಶಿ] ಕವಪ್ಪ ಹಸುರು ಹಚ್ಚೆಗಳೆಂಬ ಪತಿತ ಲೇಖನ ಇವಾದಿಯಾದ ಅನ್ಯ ಚಿಹ್ನೆಗಳನು ಅಂಕಿತಧಾರಣ ಲೇಖನಂಗ? ಮಾಡಿಕೊಂಡು ಮತ್ತೆ ತಾವು ಲಿಂಗವನರ್ಚಿಸಿ ಭಕ್ತರಾದೆವೆಂಬ ಈ ಭಂಗಮಾರಿ ಹೊಲೆಜಂಗುಳಿಗಳಿಗೆ ಉಪದೇಶವ ಕೊಟ್ಟ ಗುರು, ಪ್ರಸಾದ ನೀಡುವ ಜಂಗಮ, ಅವರಗೊಡಗೂಡಿಕೊಂಡು ನಡೆವ ಭಕ್ತತತಿ ಈ ಚತುರ್ವಿಧರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರ ವೇಳೆ ಬಂದು ನರಕವಿಪ್ಪತ್ತೆಂಟುಕೋಟಿಯನೈದುವರು, ಅದೆಂತೆಂದೊಡೆ: ``ಭಕ್ತನಾರೀ ಸ್ವಯಾಂಗೇಷು ಪತಿತಾದ್ಯನ್ಯ ಚಿಹ್ನೆಯೇತ್ ಲೇಖನಾಂಕಂ ಯದಿ ಕೃತ್ವಾ ತೇ[s]ಪಿ ಸ್ತ್ರೀ ಪತಿತ ಸ್ತ್ರೀಣಾಂ ತಸ್ಯೋಪದೇಶಶೇಷಂಚ ದತ್ವಾಶ್ಚೈ ಗುರುಃ ಚರಾನ್ ತಪತ್ಸಂಗ ಸಯೋದ್ಭಕ್ತಾ ತದಾದಿ ಚತುರಾನ್ವಯಂ ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್ ಅಷ್ಟವಿಂಶತಿಕೋಟ್ಯಸ್ತು ನರಕಂ ಯಾತಿ ಸಧ್ರುವಂ ಇಂತೆಂದುದಾಗಿ ಇದು ಕಾರಣ ಇಂತಪ್ಪ ಅನಾಚಾರಿಗಳನು ಕೂಡಲಚೆನ್ನಸಂಗಯ್ಯ ಅಘೋರ ನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಅಂಗ ಸಂಸಾರವಿರಹದೊಳು ಸವೆದು, ಲಿಂಗವು ಅವಗ್ರಹಿಸಿಕೊಂಡ ಮೃತ್ತಿಕಾ ಪಂಜರದೊಳಗೆ, ಭುಜಂಗ ತಲೆಯೆತ್ತಿ ನೋಡಲು, ಥಳಥಳನೆ ಹೊಳೆವ ಮಾಣಕ್ಯದ ಬೆಳಗುಗಳೆಸೆಯೆ ಸದ್ಯೋಜಾತನ ಜಟಾಮಕುಟವ ಸುತ್ತಿರ್ದ ಫಣೀಂದ್ರನಲ್ಲದೆ ಮತ್ತಾರೂ ಅಲ್ಲವೆಂದು ಶಿಖರವ ಮೊದಲುಗೊಂಡಗುಳಿಸಲು, ಸುತ್ತಿರ್ದ ಫಣಿಸೂತ್ರವ ಕಂಡು ಚಕ್ಕನೆ ಕದವ ತೆರೆಯಲು ದೃಷ್ಟಿದೃಷ್ಟವಾದ (ಅ)ನಿಮಿಷನ ಕರಸ್ಥಲವ ಕಂಡು ಧೃಷ್ಟತನದಲ್ಲಿ ಲಿಂಗವ ತೆಗೆದುಕೊಂಡಡೆ ಸಂದು ಕಳಾಸಂಗಳು ತಪ್ಪಿ ಅಸ್ಥಿಗಳು ಬಳಬಳನುದುರಲು ಆತನ ಬೆರಗು ನಿಮ್ಮ ಹೊಡೆದು ಖ್ಯಾತಿಯಾಯಿತ್ತು ನೋಡಯ್ಯಾ, ಅಲ್ಲಮಪ್ರಭುವೆಂಬ ನಾಮ ನಿಮಗೆ ! ಭಕ್ತಿದಳದುಳದಿಂದ ಬಂದಿಕಾರರಾಗಿ ಬಂದು ಹೊಕ್ಕಡೆ ಬದನೆಯ ಕಾಯಿಗಳು ಬಾಣಲಿಂಗವಾಗವೆ ನಮ್ಮ ಬಸವಣ್ಣನ ದೃಷ್ಟಿತಾಗಲು ? ಇದು ಕಾರಣ-ಕೂಡಲಚೆನ್ನಸಂಗನಲ್ಲಿ ಅನಿಮಿಷಪ್ರಭುವಿಂಗೆ ಬಸವಣ್ಣ ಗುರುವಾದ ಕಾರಣ ನಾನು ನಿಮಗೆ ಚಿಕ್ಕ ತಮ್ಮ ಕೇಳಾ ಪ್ರಭುವೆ.
--------------
ಚನ್ನಬಸವಣ್ಣ
ಅಂಗಪ್ರಸಾದಿ ಆತ್ಮದ್ರೋಹಿ, ಲಿಂಗಪ್ರಸಾದಿ ಲಿಂಗದ್ರೋಹಿ, ಜಂಗಮಪ್ರಸಾದಿ ಜಂಗಮದ್ರೋಹಿ ಎಂದುದಾಗಿ, ಭಾವದಿಂದ ಪ್ರಸಾದವ ಕೊಂಡು, ಅನುಭಾವದಿಂದತಿಗಳೆದಡೆ ಅದು ಪ್ರಸಾದವಲ್ಲ, ಮಾಂಸ. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಸಂಪತ್ತ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಅಯ್ಯಾ, ಗುರುವರನ ಹೊಂದಿ ಗುರುಪುತ್ರನಾದ ಬಳಿಕ ಅಕಸ್ಮಾತ್ ಆ ಗುರುವಿನಲ್ಲಿ ಅನಾಚಾರ ದುರಾಚಾರಗಳು ಮೈದೋರಿದಲ್ಲಿ, ಅವು ಸೂಕ್ಷ್ಮವಿದ್ದಡೆ ತಿದ್ದಿಕೊಳ್ಳಬೇಕು, ಸ್ಧೂಲವಿದ್ದಡೆ ಆ ಗುರುವ್ಯಕ್ತಿಯನುಳಿದು ತಾನರಿದ ಗುರುತತ್ವವ ನಂಬಿ ಸದಾಚಾರವ ಸಾಧಿಸುತ್ತಿರಬೇಕು. ಇಂತೀ ಆಚರಣೆಯೆ ನಿಮ್ಮ ಶರಣರಿಗೆ ಸದಾ ಸಮ್ಮತವಾಗಿರ್ಪುದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಂತರಂಗದ ಅರಿವು, ಬಹಿರಂಗದ ಕ್ರಿಯೆ- ಈ ಉಭಯಸಂಪುಟ ಒಂದಾದ ಶರಣಂಗೆ ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ. ಕೂಡಲಚೆನ್ನಸಂಗಯ್ಯಲ್ಲಿ ಸಂಗವಾದುದು ಸರ್ವೇಂದ್ರಿಯ.
--------------
ಚನ್ನಬಸವಣ್ಣ
ಅನ್ನದಾನಿ, ವಸ್ತ್ರದಾನಿ, ಹಿರಣ್ಯದಾನಿಗಳ ಮನೆಯ ಬಾಗಿಲ ಕಾದಿಪ್ಪರಯ್ಯಾ ಬಹುವಿಧದ ವೇಷಧಾರಿಗಳು. ``ವಯೋವೃದ್ಧಾಸ್ತಪೋವೃದ್ಧಾ ವೇದವೃದ್ಧಾ ಬಹುಶ್ರುತಾಃ ಸರ್ವೇ ತೇ ದಾನಿವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ _ಎಂದುದಾಗಿ ದೈನ್ಯವ ಬಿಟ್ಟಿಪ್ಪ ನಿರಾಭಾರಿಯ ತೋರಿ ಬದುಕಿಸಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಕಾಯ ಸನ್ನಹಿತವಾಯಿತ್ತಲ್ಲಾ; ಅಕಾಯ ಅಳವಟ್ಟಿತ್ತಲ್ಲಾ; ಅಕಾಯ ನಿಂದು [ನಿಜ] ನಿವಾಸವಾಯಿತ್ತಲ್ಲಾ; ಕೂಡಲಚೆನ್ನಸಂಗಾ ನಿನ್ನಿಂದೆ ನಿಂದಿತಲ್ಲಾ !
--------------
ಚನ್ನಬಸವಣ್ಣ
ಅಂತರಂಗದಲ್ಲಿ ಅರಿವಾದಡೇನಯ್ಯಾ ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ ? ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ ? ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ ? ಸಾಕಾರ ನಿರಾಕಾರ ಏಕೋದೇವ, ನಮ್ಮ ಕೂಡಲಚೆನ್ನಸಂಗಯ್ಯನು.
--------------
ಚನ್ನಬಸವಣ್ಣ

ಇನ್ನಷ್ಟು ...