ಅಥವಾ

ಒಟ್ಟು 68 ಕಡೆಗಳಲ್ಲಿ , 21 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ತರ್ಕ ವ್ಯಾಕರಣಾಗಮ ಶಾಸತ್ತ್ರ ಪುರಾಣ ಛಂದಸ್ಸು ನೈಘಂಟು ಜ್ಯೋತಿಷ್ಯ ಮೊದಲಾದ ಶಾಸ್ತ್ರದ ಆಸೆಯ ಭ್ರಮೆಯಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಶುದ್ಧಾತ್ಮನು. ಕತ್ತಿಸಾಧಕ ಕಠಾರಿಸಾಧಕ ಪಟಾಕಿನ ಸಾಧಕ ಮೊದಲಾದ ಬತ್ತೀಶ ಸಾಧಕದಲ್ಲಿ ಆಸೆ ಮಾಡಿತಯ್ಯ ಎನ್ನ ಮಹದಾತ್ಮನು. ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ಈಶಿತ್ವ ವಶಿತ್ವವೆಂಬ ಅಷ್ಟೈಶ್ವರ್ಯದಲ್ಲಿ ಆಸೆ ಮಾಡಿತಯ್ಯ ಎನ್ನ ಚಿದಾತ್ಮನು. ಹೀಂಗೆ ಅಜ್ಞಾನವೆಂಬ ಭವಪಾಶದಿಂದ ಹೊಡದಾಡಿ ಸತ್ತು, ಸತ್ತು-ಹುಟ್ಟಿ ಭವಕ್ಕೆ ಒಳಗಾಗಿ ಕೆಟ್ಟೆನಯ್ಯ. ಭವರೋಗವೈದ್ಯನೆ, ಸಲಹಾ, ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಪ್ರಾಣಲಿಂಗಿಯ ಯೋಗಸಂಬಂಧವೆಂತುಟೆಂದಡೆ : ಫಲರಸ ವರುಣನ ಕಿರಣ ಕೊಂಡಂತಿರಬೇಕು. ಪಯದೊಳಗಣ ನವನೀತದಂತಿರಬೇಕು. ವಾಯುವಿನ ಗಂಧದ ತೆರದಂತಿರಬೇಕು. ದೃಷ್ಟಿಯ ಚಿತ್ತದಂತಿರಬೇಕು. ಅಪ್ಪುವಿನ ಮೆಚ್ಚಿಕೆಯಂತಿರಬೇಕು. ಹೀಂಗೆ ಲಿಂಗದಲ್ಲಿ ಒಪ್ಪವಿಟ್ಟ ಶರಣಂಗೆ ಅರ್ಚನೆಯ ಮಾಡಿದಡೂ ಸರಿ, ಅರ್ಪಣದಲ್ಲಿ ಒಪ್ಪವಿಟ್ಟಡೂ ಸರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಪ್ಪಿನ ಭೂಮಿಗೆ ಮೂರುಗಜ ಸೂರ್ಯಕಾಂತದ ಕಲ್ಲು ಹಾಕಿ, ಮೂರು ಹಣವ ಕೊಂಡೆ. ಕೆಂಪಿನ ಭೂಮಿಗೆ ಆರು ಐದು ಗಜ ಚಂದ್ರಕಾಂತದ ಕಲ್ಲು ಹಾಕಿ, ಆರೈದು ಹಣವ ಕೊಂಡೆ. ಬಿಳುಪಿನ ಭೂಮಿಗೆ ಎರಡೆಂಟು ಏಳುಗಜದ ಅಗ್ನಿಕಾಂತದ ಕಲ್ಲು ಹಾಕಿ, ಎರಡೆಂಟು ಏಳು ಹಣವ ಕೊಂಡೆ. ಉಳಿದ ವರ್ಣದ ಭೂಮಿಗೆ ಮೂವತ್ತಾರು ಗಜ ಹಲವು ವರ್ಣದ ಚಿಪ್ಪುಗಲ್ಲುಗಳ ತುಂಬಿ ಈರೈದುಹಣವ ಕೊಂಡೆ. ಹೀಗೆ ಕಲ್ಲುಮಾರಿ ಹಾಗದ ಹಣವ ಕೊಂಡು ಕಾಯಕವ ಮಾಡುತಿರ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಈ ಮರುಳಮಾನವರ ಮರುಳತನವ ನಾನೇನೆಂಬೆನಯ್ಯಾ. ಹೊನ್ನು ತನ್ನದೆಂಬರು, ಹೊನ್ನು ರುದ್ರನದು. ಹೆಣ್ಣು ತನ್ನದೆಂಬರು, ಹೆಣ್ಣು ವಿಷ್ಣುವಿನದು. ಮಣ್ಣು ತನ್ನದೆಂಬರು, ಮಣ್ಣು ಬ್ರಹ್ಮನದು. ಇಂತೀ ತ್ರಿವಿಧವು ನಿಮ್ಮವೆಂಬಿರಿ- ನಿಮ್ಮವು ಅಲ್ಲ ಕಾಣಿರೋ ಎಲಾ ದಡ್ಡ ಪ್ರಾಣಿಗಳಿರಾ. ಇದಕ್ಕೆ ದೃಷ್ಟಾಂತ: ಗಗನದಲ್ಲಿ ಚಂದ್ರೋದಯವಾಗಲು ಭೂಮಂಡಲದಲ್ಲಿ ಕ್ಷೀರಸಮುದ್ರ ಹೆಚ್ಚುವದು. ಹೆಚ್ಚಿದರೇನು ? ಆ ಚಂದ್ರನ ವ್ಯಾಳ್ಯಕ್ಕೆ ಸಮುದ್ರವಿಲ್ಲ; ಸಮುದ್ರದ ವ್ಯಾಳ್ಯಕ್ಕೆ ಚಂದ್ರನಿಲ್ಲ. ಮತ್ತೆ ಆಕಾಶದಲ್ಲಿ ಮೋಡ ಬಂದು ಸುಳಿಗಾಳಿ ಬೀಸಲು ಗಿರಿಯೊಳಗಿರ್ದ ನವಿಲು ತನ್ನ ಪಕ್ಕವ ಬಿಚ್ಚಿ ಹರುಷಾನಂದದಲ್ಲಿ ಆಡುವದು ; ಪ್ರೇಮದಿಂದಲಿ ಕುಣಿಯವದು. ಕುಣಿದರೇನು ? ಚಂಡವಾಯುವಿನಿಂದ ಆಕಾಶದೊಳಗಣ ಕಾರಮುಗಿಲು ಹಾರಿಹೋಹಾಗ ನವಿಲು ಅಡ್ಡಬಂದಿತ್ತೆ ? ಇಲ್ಲ. ಗಿರಿಯೊಳಗಣ ಮಯೂರನನ್ನು ವ್ಯಾಧನು ಬಂದು ಬಲಿಹಾಕಿ ಕೊಲ್ಲುವಾಗ ಆ ಮೋಡ ಅಡ್ಡಬಂದಿತ್ತೆ ? ಇಲ್ಲ. ಇದರ ಹಾಂಗೆ, ನಿಮಗೆ ಬಾಲಪ್ರಾಯದಲ್ಲಿ ಮಾತಾಪಿತರ ಮೋಹ ಯೌವ್ವನಪ್ರಾಯದಲ್ಲಿ ಸ್ತ್ರೀ, ಪುತ್ರಮೋಹ. ಮಧ್ಯಪ್ರಾಯದಲ್ಲಿ ಧನಧಾನ್ಯದ ಮೋಹ. ಈ ಪರಿಯಲ್ಲಿ ಸಕಲವು ನೀವು ಇರುವ ಪರ್ಯಂತರದಲ್ಲಿ ಮಾಯಾ ಮಮಕಾರವಲ್ಲದೆ ಅಳಲಿ ಬಳಲಿ, ಕುಸಿದು ಕುಗ್ಗಿ ಮುಪ್ಪುವರಿದು, ಮರಣಕಾಲಕ್ಕೆ ಯಮದೂತರು ಬಂದು ಹಿಂಡಿ ಹಿಪ್ಪಿಯ ಮಾಡಿ ಒಯ್ಯುವಾಗ, ಮೂವರೊಳಗೆ ಒಬ್ಬರು ಅಡ್ಡಬಂದರೆ ? ಬಂದುದಿಲ್ಲ. ಅವರ ಸಂಕಟಕ್ಕೆ ನೀವಿಲ್ಲ, ನಿಮ್ಮ ಸಂಕಟಕ್ಕೆ ಅವರಿಲ್ಲ. ನಿನ್ನ ಪುಣ್ಯಪಾಪಕ್ಕೆ ಅವರಿಲ್ಲ, ಅವರ ಪುಣ್ಯಪಾಪಕ್ಕೆ ನೀನಿಲ್ಲ. ನಿನ್ನ ಸುಖದುಃಖಕ್ಕೆ ಅವರಿಲ್ಲ, ಅವರ ಸುಖದುಃಖಕ್ಕೆ ನೀನಿಲ್ಲ. ನಿನಗವರಿಲ್ಲ, ಅವರಿಗೆ ನೀನಿಲ್ಲ. ಇಂತಿದನು ಕಂಡು ಕೇಳಿ ಮತ್ತಂ ಹಿತ್ತಲಕ್ಕೆ ಹಳೆಯೆಮ್ಮಿ ಮನಸೋತ ಹಾಗೆ, ಹಾಳಕೇರಿಗೆ ಹಂದಿ ಜಪ ಇಟ್ಟ ಹಾಗೆ, ಹಡಕಿಗೆ ಶ್ವಾನ ಮೆಚ್ಚಿದ ಹಾಗೆ, ಮತ್ತಂ, ಮಾನವರೊಳಗೆ ಹಂದಿ, ನಾಯಿ, ಹಳೆಯೆಮ್ಮಿಯೆಂದರೆ- ಜೀವನಬುದ್ಭಿಯುಳ್ಳವನೇ ಹಂದಿ. ಕರಣಬುದ್ಧಿಯುಳ್ಳವನೇ ನಾಯಿ. ಮಾಯಾಪ್ರಕೃತಿಯುಳ್ಳವನೇ ಹಳೆಯೆಮ್ಮಿ. ಇವಕ್ಕೆ ಮೂರು ಮಲವಾವೆಂದಡೆ: ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯವನು, ಕಚ್ಚಿ ಮೆಚ್ಚಿ ಮರುಳಾಗಿ ಬಿಡಲಾರದೆ ಕಂಡು ಕೇಳಿ ಮೋಹಿಸಿ, ಇದನು ಬಿಟ್ಟು ವೈರಾಗ್ಯಹೊಂದಿದರೆ ಮೋಕ್ಷವಿಲ್ಲೆಂದು ಪ್ರಪಂಚವಿಡಿದು ಪಾರಮಾರ್ಥ ಸಾಧಿಸಬೇಕೆಂದು ಹೇಳುವವರ, ಹೀಂಗೆ ಮಾಡಬೇಕೆಂಬುವರ ಬುದ್ಧಿಯೆಂತಾಯಿತಯ್ಯಾ ಎಂದಡೆ: ಗಿಳಿ ಓದಬಲ್ಲುದು; ಬಲ್ಲರೇನು ತನ್ನ ಮಲವ ತಾನು ತಿಂದ ಹಾಗೆ. ವಿಹಂಗ ಹನ್ನೆರಡುಯೋಜನದಮೇಲೆ ಅಮೃತಫಲವಿಪ್ಪುದ ಬಲ್ಲದು. ಬಲ್ಲರೇನು, ಅದು ಬಾಯಿಲಿ ತಿಂದು ಬಾಯಿಲೆ ಕಾರುವದು. ಹಾಂಗೆ ಈ ಮಾನವರು ತ್ರಿವಿಧಮಲಸಮಾನವೆಂಬುದ ಬಲ್ಲರು, ಬಲ್ಲರೇನು ? ಬಿಡಲಾರರು. ಇಂತೀ ಪರಿಪರಿಯಲ್ಲಿ ಕೇಳಿ ಕೇಳಿ ಕಂಡು ಬಿಡಲಾರದೆ ಇದ್ದರೆ ಇಂಥ ಹೊಲೆಸೂಳೆಯ ಮಕ್ಕಳ ಶರೀರವ ಖಡ್ಗದಿಂದ ಕಡಿದು ಕರಗಸದಿಂದ ಕೊರೆದು ಛಿದ್ರಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿಗಳಿಗೆ ಹಾಕಿದರೆ ಎನ್ನ ಸಿಟ್ಟು ಮಾಣದು. ಕಡೆಯಲ್ಲಿ ಚಂದ್ರಸೂರ್ಯರು ಇರುವ ಪರ್ಯಂತರ ಮಹಾ ಅಘೋರ ನರಕದಲ್ಲಿ ಕಲ್ಪಕಲ್ಪಾಂತರದಲ್ಲಿ ಹಾಕದೆ ಬಿಡನೆಂದಾತನು ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಡಿನ ಶಿರದಮೇಲೆ ಕುಣಿದಾಡುವ ಕೋಡಗ ಮಾರುತನ ಕೂಡೆ ಉಡುವ ಹಡೆಯಿತ್ತು ನೋಡಾ. ಉಡುವಿನ ನಾಲಗೆಯಲ್ಲಿ ಅಜ ಹರಿ ಸುರ ಮನು ಮುನಿಗಳು ಅಡಗಿದರು. ಇವರೆಲ್ಲರ ಯಜನಾದಿಕೃತ್ಯಂಗಳು ಉಡುವಿನ ಕಾಲಿನಲ್ಲಿ ಅಡಗಿದವು. ತ್ರಿಜಗವೆಲ್ಲವು ಹೀಂಗೆ ಪ್ರಳಯದಲ್ಲಿ ಮುಳುಗಿದೆಯಲ್ಲ. ಉಡುವಿನ ನಾಲಗೆ ಕೊಯಿದು, ಕುಣಿದಾಡುವ ಕೋಡಗನ ಕಾಲಮುರಿದು, ಅಜಪಶುವ ಕೊಂದು, ಅಗ್ನಿಯಲ್ಲಿ ಸುಟ್ಟು ಭಸ್ಮವಮಾಡಬಲ್ಲಾತನ ಜನನಮರಣ ವಿರಹಿತನೆಂಬೆ, ತ್ರಿಜಗಾಧಿಪತಿಗಳಿಗೆ ಒಡೆಯನೆಂಬೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂದಿನವರಿಗೆ ಪರುಷವಿಪ್ಪುದು ಇಂದಿನವರಿಗೆ ಪರುಷವೇಕಿಲ್ಲ ? ದಯದಿಂದ ಕರುಣಿಸಿ ಸ್ವಾಮಿ. ಕೇಳಯ್ಯ ಮಗನೆ : ಲಾಂಛನಧಾರಿಗಳು ಸ್ವಯಪಾಕ ಭಿಕ್ಷಕ್ಕೆ ಬಂದ ವೇಳೆಯಲ್ಲಿ ಗೋದಿಯ ಬೀಸುವಗೆ ಆ ಹಿಟ್ಟು ಬಿಟ್ಟು ಕಡೆಯಲಿದ್ದ ಹಿಟ್ಟು ನೀಡುವವರಿಗೆ ಎಲ್ಲಿಹುದೊ ಪರುಷ ? ಲಾಂಛನಧಾರಿಗಳು ಧಾನ್ಯ ಭಿಕ್ಷಕ್ಕೆ ಬಂದಡೆ ಘನವ ಮಾಡಿಕೊಳ್ಳಿರಿ ಎಂಬವರಿಗೆ ಎಲ್ಲಿಹುದೊ ಪರುಷ ? ಶಿವಯೋಗಿ ಲಿಂಗಾರ್ಪಿತ ಭಿಕ್ಷಕ್ಕೆ ಬಂದಡೆ ಸುಮ್ಮನಿಹರು. ಇದು ಭಿಕ್ಷವೇಳೆಯೆ ? ಎಂಬವರಿಗೆ ಎಲ್ಲಿಹುದೊ ಪರುಷ ? ಮತ್ತಂ, ಹಬ್ಬವ ಮಾಡುವಾಗ ಭಿಕ್ಷಕ್ಕೆ ಬಂದಡೆ ತಂಗಳ ನೀಡಿ ಕಳಿಸುವವರಿಗೆ ಎಲ್ಲಿಹುದೊ ಪರುಷ ? ಪರುಷ ಎಲ್ಲಿಹುದು ಎಂದಡೆ : ಜಂಗಮವು ಮನೆಗೆ ಬಂದಡೆ ಬಂದ ಬರವ, ನಿಂದ ನಿಲವ ಅರಿತವರಿಗೆ ಅದೇ ಪರುಷ. ಯಾವ ವೇಳೆಯಾಗಲಿ, ಯಾವ ಹೊತ್ತಾಗಲಿ ಜಂಗಮವು ಭಿಕ್ಷಕ್ಕೆ ಬರಲು ಹಿಂದಕ್ಕೆ ತಿರುಗಗೊಡ[ದ]ವರನ್ನೆಲ್ಲ ಸುಖವಬಡಿಸುವುದೇ ಪರುಷ. ಸಮಸ್ತ ಒಡವೆಯೆಲ್ಲವನು ಎನ್ನ ಒಡವೆಯಲ್ಲವೆಂದವರಲ್ಲಿ ಅದೇ ಪರುಷ. ತನ್ನ ಪ್ರಪಂಚಿನ ಪುತ್ರ ಮಿತ್ರ ಕಳತ್ರರಿಗೆ ಮಾಡುವ ಹಾಗೆ ಗುರು-ಲಿಂಗ-ಜಂಗಮಕ್ಕೆ, ಕೇವಲ ಸದ್ಭಕ್ತಿಗೆ ಭಕ್ತಿಯ ಮಾಡಿದವರಿಗೆ ಅದೇ ಪರುಷ. ಹೀಗೆ ಮಾಡಿದವರಿಗೆ ಅಂದೇನು ಇಂದೇನು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ
--------------
ಗಣದಾಸಿ ವೀರಣ್ಣ
ಅಯ್ಯ ! ಪೂರ್ವವನಳಿದು ಪುನರ್ಜಾತನಾದ ಸತ್ಯಸದ್ಧರ್ಮಸ್ವರೂಪ ತಚ್ಛಿಷ್ಯನು ಶ್ರೀಗುರುಲಿಂಗಜಂಗಮದ ವೇಧಾ_ಮಂತ್ರ_ಕ್ರಿಯಾದೀಕ್ಷೆಯ ಪಡೆದು, ಅಷ್ಟಾವರಣದ ನೆಲೆಕಲೆಗಳ ತಿಳಿದು, ಪಂಚಾಚಾರ ಮೊದಲಾಗಿ ಸರ್ವಾಚಾರ ಸಂಪತ್ತಿನ ವಿವರ ತಿಳಿದು, ನೂರೊಂದು ಸ್ಥಲದ ಆಚರಣೆ_ಇನ್ನೂರಹದಿನಾರು ಸ್ಥಲದ ಸಂಬಂಧವನರಿದು, ಷಟ್ಸ್ಥಲ ಮಾರ್ಗವಿಡಿದು, ಶ್ರೀಗುರುಲಿಂಗ ಜಂಗಮಕ್ಕೆ ತನು_ಮನ_ಧನವಂಚನೆಯಿಲ್ಲದೆ ನಿರ್ವಂಚಕನಾಗಿ, ಭಕ್ತಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಕಾಯಕ[ವ ಮಾಡಿ] ಮಹೇಶ್ವರಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಭಿಕ್ಷವ ಮಾಡಿ, (ಬೇಡಿ?) ಬಂದ ಪದಾರ್ಥವ ಸಮರ್ಪಿಸಿ, ಪರದ್ರವ್ಯದಲ್ಲಿ ರಿಣಭಾರನಾಗದೆ, ಸತ್ಯಶುದ್ಧ ನಡೆನುಡಿಯಿಂದಾಚರಿಸಿ, ಶ್ರದ್ಧಾದಿ ಸಮರಸಾಂತ್ಯಮಾದ ಸದ್ಭಕ್ತಿಯ ತಿಳಿದು ಅನಾದಿಕುಳ ಸನ್ಮತವಾದ ದಶವಿಧ ಪಾದೋದಕ, ಏಕಾದಶ ಪ್ರಸಾದದ ವಿಚಾರ ಮೊದಲಾದ ಅರ್ಪಿತಾವಧಾನವ, ಪರಿಪೂರ್ಣಮಯ ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ, ಅಚ್ಚ ಪ್ರಸಾದಿಸ್ಥಲದ ಶರಣತ್ವವ ಪಡೆದು, ಸತ್ಯಸದಾಚಾರವುಳ್ಳ ಸದ್ಗುರುಲಿಂಗಜಂಗಮದ ನಿಜನಿಷ*ತ್ವಮಂ ತಿಳಿದು, ದಂತಧಾವನಕಡ್ಡಿ ಮೊದಲು Põ್ಞಪ ಕಟಿಸೂತ್ರ ಕಡೆಯಾದ ಸಮಸ್ತ ಪದಾರ್ಥವ ಗುರು_ಲಿಂಗ_ಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುದ ಹಾರೈಸಿ, ಕೊಂಡು ಇಂತು ಅಂತರಂಗ ಪರಿಪೂರ್ಣವಾಗಿ ನಿಂದ ಸಮಯದಲ್ಲಿ, ಸ್ವಯ_ಚರ_ಪರಲೀಲೆಯ ಧರಿಸಿ ಜಂಗಮಾಕೃತಿಯಿಂದ ಬಂದ ಗುರುಲಿಂಗಜಂಗಮದ ವೃತ್ತಸ್ಥಾನವಾದ ಮೊಳಪಾದ ಪರಿಯಂತರವು ತೊಳದು ಬಹುಗುಣಿಯಲ್ಲಿ ಮಡಗಿಕೊಂಡು, ಹೊಸಮನೆ, ಹೊಸಧನ, ಧಾನ್ಯ ಭಾಂಡಭಾಜನ, ಹೊಸ ಅರುವೆ_ಆಭರಣ, ಜನನಿಜಠರದಿಂದಾದ ಅಂಗಾಂಗ, ಕಾಯಿಪಲ್ಯ, ಉಚಿತಕ್ರಿಯೆ ಮೊದಲಾಗಿ ಅರಿದಾಚರಿಸುವದು ನೋಡ ! ಆ ಮೇಲೆ ಗುರುಲಿಂಗಜಂಗಮದ ಪ್ರಕ್ಷಾಲನೆ ಮಾಡಿದ ಪಾದವನ್ನು ಮೂರು ವೇಳೆ ಅಡಿಪಾದವ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳ್ಯಕ್ಕೆ ದಶಾಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದ ಉದಕವನ್ನು ಭಾಂಡಭಾಜನದಲ್ಲಿ ತುಂಬಿ ಸ್ವಪಾಕವ ಮಾಡುವುದು. ಆ ಸಮಯದಲ್ಲಿ ಬಿಂದುಮಾತ್ರ [ವಾದರೂ] ಇಷ್ಟಲಿಂಗ ಬಾಹ್ಯವಾದ ಭವಿಜನ್ಮಾತ್ಮರಿಗೆ ಹಾಕಲಾಗದು. ಇನ್ನು ಜಂಗಮದ ಅಂಗುಷ* ಎರಡು_ಅಂಗುಲಿ ಎಂಟರಲ್ಲಿ ತನ್ನ ತರ್ಜನಿ ಬೆರಳಿಂದ ಮೊದಲಂತೆ ಪಾದೋದಕವ ಮಾಡಿ, ಬಟ್ಟಲಲ್ಲಿ ಮಡಗಿ, ಪೂರ್ವದಲ್ಲಿ ಭಾಂಡದೊಳಗೆ ತುಂಬಿದ ಗುರುಪಾದೋದಕದಿಂದ ವಿಭೂತಿ ಘಟ್ಟಿಯ ಅಭಿಷೇಕವ ಮಾಡಿ, ಈ ಬಟ್ಟಲಲ್ಲಿ ಮಡಗಿದ ಲಿಂಗಪಾದೋದಕದಲ್ಲಿ ಮಿಶ್ರವ ಮಾಡಿ, ಇಪ್ಪತ್ತೊಂದು ಪ್ರಣಮವ ಲಿಖಿಸಿ ಶ್ರೀಗುರುಲಿಂಗಜಂಗಮವು ತಾನು ಮಂತ್ರಸ್ಮರಣೆಯಿಂದ ಸ್ನಾನ_ಧೂಳನ_ಧಾರಣವ ಮಾಡಿ, ಲಿಂಗಾರ್ಚನೆ ಕ್ರಿಯೆಗಳ ಮುಗಿಸಿಕೊಂಡು, ಆ ಮೇಲೆ ತೀರ್ಥವ ಪಡಕೊಂಬುವಂಥ ಲಿಂಗಭಕ್ತನು ಆ ಜಂಗಮಲಿಂಗಮೂರ್ತಿಯ ಸಮ್ಮುಖದಲ್ಲಿ ಗರ್ದುಗೆಯ ರಚಿಸಿಕೊಂಡು, ಅಷ್ಟಾಂಗಯುಕ್ತನಾಗಿ ಶರಣಾರ್ಥಿ ಸ್ವಾಮಿ ! ಜಂಗಮಲಿಂಗಾರ್ಚನೆಗೆ ಅಪ್ಪಣೆಯ ಪಾಲಿಸಬೇಕೆಂದು ಬೆಸಗೊಂಡು, ಆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮ ಲಿಂಗಮೂರ್ತಿಗೆ ಅಷ್ಟವಿಧಾರ್ಚನೆ_ಷೋಡಶೋಪಚಾರಂಗಳ ಸಮರ್ಪಿಸಿ, ಆ ಮೇಲೆ, ತನ್ನ ವಾಮಕರದಂಗುಲಿ ಮಧ್ಯದಲ್ಲಿ ಷಡಕ್ಷರಂಗಳ ಲಿಖಿಸಿಕೊಂಡು ಅರ್ಚಿಸಿ, ತನ್ನ ಹೃನ್ಮಂದಿರಾಲಯದಲ್ಲಿ ನೆಲಸಿರುವ ಜ್ಯೋತಿರ್ಮಯ ಇಷ್ಟಮಹಾಲಿಂಗವ ನಿರೀಕ್ಷಿಸಿ ಆ ಪರಶಿವಜಂಗಮಲಿಂಗದೇವನ ಚರಣಾಂಗುಷ*ವ, ತನ್ನ ವಾಮಕರಸ್ಥಲದಲ್ಲಿ ಸುತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪವಾದ ಪ್ರಾಣಲಿಂಗವೆಂದು ಭಾವಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯಗಳ ಮಾಡಿ, ಆಮೇಲೆ ಇಷ್ಟಲಿಂಗಜಪಪ್ರಣಮ ಒಂದು ವೇಳೆ ಪ್ರಾಣಲಿಂಗ ಜಪಪ್ರಣಮ ಒಂದು ವೇಳೆ ಭಾವಲಿಂಗ ಜಪಪ್ರಣಮ ಒಂದು ವೇಳೆ ಪ್ರದಕ್ಷಿಣವ ಮಾಡಿ ಜಂಗಮಸ್ತೋತ್ರದಿಂದ ಶರಣು ಮಾಡಿ ಪೂಜೆಯನಿಳುಹಿ, ಪಾತ್ರೆಯಲ್ಲಿರುವ ಗುರುಪಾದೋದಕದಲ್ಲಿ ಬಿಂದುಯುಕ್ತವಾಗಿ ಮೂಲ ಪ್ರಣಮವ ಲಿಖಿಸಿ ಬಲದಂಗುಷ*ದಲ್ಲಿ ನೀಡುವಾಗ ಷಡಕ್ಷರಿಮಂತ್ರವ ಆರು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಗುರುವೆಂದು ಭಾವಿಸುವುದು. ಎಡದಂಗುಷ*ದ ಮೇಲೆ ನೀಡುವಾಗ ಪಂಚಾಕ್ಷರವ ಐದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಲಿಂಗವೆಂದು ಭಾವಿಸುವುದು. ಎರಡಂಗುಷ*ದ ಮಧ್ಯದಲ್ಲಿ ನೀಡುವಾಗ ಒಂಬತ್ತಕ್ಷರವ ಒಂದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ತ್ರಿಕೂಟಸಂಗಮ ಅನಾದಿಜಂಗಮವೆಂದು ಭಾವಿಸುವುದು. ಈ ಪ್ರಕಾರದಲ್ಲಿ ನೀಡಿದ ಮೇಲೆ ದ್ರವವನಾರಿಸಿ, ಭಸ್ಮಧಾರಣವ ಮಾಡಿ, ಒಂದೆ ಪುಷ್ಪವ ಧರಿಸಿ, ನಿರಂಜನ ಪೂಜೆಯಿಂದ ಪ್ರದಕ್ಷಣವ ಮಾಡಿ, ನಮಸ್ಕರಿಸಿ, ಆ ತೀರ್ಥದ ಬಟ್ಟಲೆತ್ತಿ ಆ ಜಂಗಮಲಿಂಗಕ್ಕೆ ಶರಣಾರ್ಥಿಯೆಂದು ಅಭಿವಂದಿಸಿ. ಅವರು ಸಲಿಸಿದ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಸ್ವರೂಪ ಜಂಗಮ ತೀರ್ಥದ ಸ್ತೋತ್ರವ ಮಾಡಿ, ಅಷ್ಟಾಂಗ ಹೊಂದಿ ಶರಣುಹೊಕ್ಕು, ನಿಮ್ಮ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ! ಎಂದು ಬೇಡಿಕೊಂಡು ಬಂದು ಮೊದಲ ಹಾಂಗೆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಜಂಗಮ ಮೂರ್ತಿಗಳು ಸಲಿಸಿದೋಪಾದಿಯಲ್ಲಿ ತಾನು ಸಲಿಸುವುದು. ಆಮೇಲೆ ಷಟ್ಸ್ಥಲಭಕ್ತ ಮಹೇಶ್ವರರು ಅದೇ ರೀತಿಯಲ್ಲಿ ಸಲಿಸುವುದು. ಉಳಿದ ಷಟ್ಸ್ಥಲಮಾರ್ಗವರಿಯದ ಲಿಂಗಧಾರಕಶಿಶುವಾಗಿಲಿ, ಶಕ್ತಿಯಾಗಲಿ, ದೊಡ್ಡವರಾಗಲಿ ಆ ಗರ್ದುಗೆಯ ತೆಗೆದು ಲಿಂಗಕ್ಕೆ ಅರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ, ಅವರಿಗೆ ಇಪ್ಪತ್ತೊಂದು ದೀಕ್ಷೆ, ಷಟ್ಸ್ಥಲಮಾರ್ಗ, ಸರ್ವಾಚಾರ ಸಂಪತ್ತಿನಾಚರಣೆ ಮುಂದಿದ್ದರಿಂದ ಅವರು ಬಟ್ಟಲೆತ್ತಲಾಗದು. ಹೀಂಗೆ ಸಮಸ್ತರು ಸಲಿಸಿದ ಮೇಲೆ ಕೊಟ್ಟು_ಕೊಂಡ, ಭಕ್ತ_ಜಂಗಮವು ಇರ್ವರು ಕೂಡಿ ಮುಕ್ತಾಯವ ಮಾಡಿದಲ್ಲಿಗೆ ದಶವಿಧ ಪಾದೋದಕವಾಗುವುದು. ಆ ಮೇಲೆ ಗುರುಪಾದೋದಕದಿಂದ ಪಾಕವ ಮಾಡಿದ ಭಾಂಡಭಾಜನಂಗಳು ತಾಂಬೂಲ ಪದಾರ್ಥ ಮುಂತಾಗಿ ಇರ್ವರು ಕೂಡಿ ಮೌನಮಂತ್ರ ಧ್ಯಾನದಿಂದ ಹಸ್ತಸ್ಪರ್ಶನವ ಮಾಡಿ. ಶುದ್ಧ ಪ್ರಸಾದವೆಂದು ಭಾವಿಸಿ, ಬಹುಸುಯಿದಾನದಿಂದ ಸಮಸ್ತ ಜಂಗಮಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂಥಿಣಿಯ ನೋಡಿ, ನಿರೀಕ್ಷಿಸಿ, ಶರಣಾರ್ಥಿ ! ಸ್ವಾಮಿ ! ಮಹಾಲಿಂಗಾರ್ಪಿತವ ಮಾಡಬೇಕೆಂದು ಅಭಿವಂದಿಸಿ, ಪತಿವ್ರತತ್ವದಿಂದ ಜಂಗಮಕ್ಕೆ ನಿರ್ವಂಚಕನಾಗಿ, ಭಕ್ತ_ಜಂಗಮವೆಂಬ ಉಭಯನಾಮವಳಿದು ಕ್ಷೀರ ಕ್ಷೀರ ಬೆರೆತಂತೆ ನಿರಾಕಾರ_ ನಿಶ್ಯಬ್ಧಲೀಲೆ ಪರಿಯಂತರವು ಶ್ರೀಗುರುಲಿಂಗಜಂಗಮಪಾದೋದಕಪ್ರಸಾದವ ಸಪ್ತವಿಧಭಕ್ತಿಯಿಂದ ಸಾವಧಾನಿಯಾಗಿ ಆಚರಿಸುವಾತನೆ ಜಂಗಮಭಕ್ತನಾದ ಅಚ್ಚಪ್ರಸಾದಿಯೆಂಬೆ ಕಾಣಾ ! ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಆಕಾರ ನಿರಾಕಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಜೀವ ಪರಮರಿಲ್ಲದಂದು, ಮನ ಮನನ ಮನುನೀಯವಿಲ್ಲದಂದು, ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ, ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು, ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ತ್ವವಾಗಿಪ್ಪುದು. ಒಂದು ಸಕಲನಿಃಕಲತತ್ತ್ವವಾಗಿಪ್ಪುದು. ಒಂದು ಸಕಲತತ್ತ್ವವಾಗಿಪ್ಪುದು. ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತ್ತೆ ೈದು ತೆರನಾಗಿಪ್ಪುದು. ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ, ಸೂಕ್ಷ ್ಮ, ಪರತತ್ವವೆಂಬ ಈ ಮೂರು ತತ್ತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್‍ಶಕ್ತಿ. ಚಿತ್‍ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು, ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ, ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ, ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ, ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ, ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ. ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ. ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು. ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೇಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ತ್ವವಿಪ್ಪತ್ತೆ ೈದು. ವಿದ್ಯಾತತ್ತ್ವಹತ್ತು ತೆರನು. ಅದೆಂತೆಂದಡೆ: ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷೆ*, ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ತ್ವಮೂವತ್ತೆ ೈದು ತೆರನು. ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು. ಅಂತು ತತ್ತ್ವ ಮೂವತ್ತಾರು. ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ೈತತ್ತ್ವ ಮೂವತ್ತಾರು ತೆರನು. ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್‍ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು. ತತ್‍ಪದವೆಂದು ತೂರ್ಯನಾಮದ ಶಿವತತ್ತ್ವವು. ತ್ವಂ ಪದವೆಂದು ಇಪ್ಪತ್ತೆ ೈದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು. ತತ್‍ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೀಂಗೆ ಅರಿದು ಅರ್ಚಿಸಿ ವಂದಿಸಿ ಆರಾಧನೆಯಂ ಮಾಡಿ ತನುಕ್ರಿಯಾಮಾರ್ಗದಿಂದ ಶುದ್ಧ ಪವಿತ್ರಚರಿತನಾಗಿ, ಮಹಾಜ್ಞಾನವರ್ತಕನಾಗಿ, ಶ್ರೀಗುರುವಾಜ್ಞೆಯಂ ಮೀರದೆ ನಡೆವುದೀಗ ಗುರುಪೂಜೆಯ ಇರವು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅನಾದಿಯಾಗಿ ಶಿವನುಂಟು, ಮಾಯೆಯುಂಟು, ಆತ್ಮನುಂಟೆಂಬುದನಾವರಿಯೆವಯ್ಯ. ಆದಿ ಅನಾದಿ ಸುರಾಳ ನಿರಾಳವಿಲ್ಲದಂದು, ಮಾಯೆಯನು ಕಾಣೆ, ಆತ್ಮನನು ಕಾಣೆ. ಮಹಾದೇವ ತಾನೊಬ್ಬನೇ ಇದ್ದೆನೆಂಬುದು ಕಾಣಬಂದಿತ್ತು ನೋಡ ಶಿವಜ್ಞಾನದೃಷ್ಟಿಗೆ. ಆ ಲಿಂಗನಿರ್ಮಿತದಿಂದ ಮಾಯೆ ಹುಟ್ಟಿತ್ತು ನೋಡಾ. ಆ ಮಾಯೆಯಿಂದ ತತ್ವಬ್ರಹ್ಮಾಂಡಾದಿ ಲೋಕಾದಿಲೋಕಂಗಳು ಹುಟ್ಟಿದವು ನೋಡಾ. ಹೀಂಗೆ ನಿನ್ನ ನೆನಹು ಮಾತ್ರದಿಂದ ತ್ರೆ ೈಜಗ ಹುಟ್ಟಿತ್ತು ನೋಡಾ. ಆ ತ್ರೈಜಗಂಗಳ ಉತ್ಪತ್ತಿ ಸ್ಥಿತಿ ಲಯಂಗಳಿಗೆ ನೀನೆ ಕಾರಣನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
`ವೀರಮಾಹೇಶ್ವರ ತಂತ್ರಂ ಜ್ಞಾತವ್ಯಂ ತ್ರಿವಿಧಂ ಸುತ | ಸಾಮಾನ್ಯಂ ಚ ವಿಶೇಷಂ ಚ ನಿರಾಭಾರಂ ಕ್ರಮಾದ್ಭವೇತ್' ಎಂದು ಎಲೆ ಕುಮಾರ, ವೀರಮಾಹೇಶ್ವರಾಗಮವು ಮೂರು ವಿಧವಾದುದೆಂದು ಅರಿಯಬೇಕಾದುದು :ಸಾಮಾನ್ಯವೀರಶೈವ, ವಿಶೇಷ ವೀರಶೈವ, ನಿರಾಭಾರವೀರಶೈವವೆಂದು ಹೀಂಗೆ ಕ್ರಮದಿಂದ ಮೂರು ಪ್ರಕಾರಮಪ್ಪುದು ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ತಾನು ಸಾವ ಕನಸ ಕಂಡಡೆ ಎದ್ದು ಕುಳ್ಳಿರಿ ಎಂಬ ಲೋಕದ ನಾಣ್ನುಡಿ ದಿಟ ಲೇಸು. ಸಾಯಬಹುದೆ ಸತಿಯ ಬಿಟ್ಟು, ಸುತರ ಬಿಟ್ಟು, ಸಕಲಭೋಗಾಕ್ರೀಗಳಂ ಬಿಟ್ಟು? ಇನ್ನು ದಿಟ ದಿಟ ಕೃತಯುಗ ತ್ರೇತಾಯುಗ ದ್ವಾಪರಯುಗದಲ್ಲಿ ಹರಿಶ್ಚಂದ್ರ, ರಾಮ, ರಾವಣಾದಿಗಳು ಸತ್ತರು. ಕಲಿಯುಗದಲ್ಲಿ ಅನಂತರು ಸತ್ತರು. ನಿನ್ನ ಪಿತೃಪಿತಾಮಹರೂ ಸತ್ತರು. ನಿನ್ನ ಜೇಷ*ಕನಿಷ*ರುಗಳೂ ಸತ್ತರು ಕಾಣಾ. ಹೀಗೆ ಕಂಡು ಕೇಳಿಯೂ ಮರುಳು ಮಾನವಾ, ಸಾವು ದಿಟವೆಂದರಿ, ಸಂದೇಹ ಬೇಡ. ಸಾಯಲ್ಕೆ ಮುನ್ನ ಧನ ಕೆಡದ ಹಾಗೆ ಸತ್ಪಾತ್ರಕ್ಕೆ ಮಾಡಿ, ಮನ ಕೆಡದ ಹಾಗೆ ಶಿವನನ್ನೇ ಧ್ಯಾನಿಸಿ, ತನು ಕೆಡದ ಹಾಗೆ ಶಿವನನ್ನೇ ಪೂಜಿಸು. ಬಾಲಂ ವೃದ್ಧಂ ಮೃತಂ ದೃಷ್ಟ್ವಾ ಮೃತಂ ವಿಷ್ಣ್ವಾದಿದೈವತಂ ಅಹಂ ಮೃತೋ ನ ಸಂದೇಹೋ ಶೀಘ್ರಂ ತು ಶಿವಪೂಜನಂ ಎಂಬುದನರಿದು, ಮರೆಯಬೇಡ. ಹೆಣ್ಣ ನಚ್ಚಿ, ಅಶುಭವ ಮಚ್ಚಿ, ಮರೆಯಬೇಡ, ಅವಳು ನಿನ್ನ ನಂಬಳು. ನೀನು ತನು ಮನ ಧನವನಿತ್ತಡೆಯೂ ಪರಪುರುಷರ ನೆನೆವುದ ಮಾಣಳು. ಅದನು ನೀನೇ ಬಲ್ಲೆ. ಹೊನ್ನ ನಚ್ಚಿ ಕೆಡದಿರು ಸತಿಸುತದಾಯಾದ್ಯರಿಂದಂ ರಾಜಾದಿಗಳಿಂದಂ ಕೆಡುವುದು. ಅಲ್ಲಿ ನೀನು ಸುಯಿಧಾನದಿಂ ರಕ್ಷಿಸಲು ಧರ್ಮಹೀನನ ಸಾರೆ, ನಿಲ್ಲೆನೆಂದು ನೆಲದಲಡಗಿ ಹೋಗುತ್ತಲಿದೆ, ನೋಡ ನೋಡಲು, ಹೋಗದ ಮುನ್ನ ಅರಿವನೆ ಅರಿದು, ಮರೆವನೆ ಮರೆದು ಮಾಡಿರಯ್ಯಾ, ಶಿವಮಹೇಶ್ವರರಿಗೆ ತನು ಮನ ಧನವುಳ್ಳಲ್ಲಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಆಕಾಶದೊಳಗಣ ಆಕಾಶ, ಜ್ಞಾನ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಆಕಾಶದೊಳಗಣ ವಾಯು, ಮನಸ್ಸು; ಅಲ್ಲಿ ಜಂಗಮಲಿಂಗ ಸ್ವಾಯತ. ಆಕಾಶದೊಳಗಣ ಅಗ್ನಿ, ಅಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆಕಾಶದೊಳಗಣ ಅಪ್ಪು, ಚಿತ್ತ; ಅಲ್ಲಿ ಗುರುಲಿಂಗ ಸ್ವಾಯತ. ಆಕಾಶದೊಳಗಣ ಪೃಥ್ವಿ, ಬುದ್ಧಿ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಪಂಚಕರಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ವಾಯುವಿನೊಳಗಣ ಆಕಾಶ, ಸಮಾನವಾಯು; ಅಲ್ಲಿ ಪ್ರಸಾದಲಿಂಗ ಸ್ವಾಯತ, ವಾಯುವಿನೊಳಗಣ ಅಗ್ನಿ, ಸಮಾನವಾಯು; ಅಲ್ಲಿ ಪ್ರಸಾದಲಿಂಗ ಸ್ವಾಯತ. ವಾಯುವಿನೊಳಗಣ ಅಗ್ನಿ, ಉದಾನವಾಯು; ಅಲ್ಲಿ ಶಿವಲಿಂಗ ಸ್ವಾಯತ. ವಾಯುವಿನೊಳಗಣ ಅಪ್ಪು, ಅಪಾನವಾಯು; ಅಲ್ಲಿ ಗುರುಲಿಂಗ ಸ್ವಾಯತ. ವಾಯುವಿನೊಳಗಣ ಪೃಥ್ವಿ, ಪ್ರಾಣವಾಯು; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ವಾಯುಪಂಚಕದಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಅಗ್ನಿಯೊಳಗಣ ಅಗ್ನಿ, ನೇತ್ರೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ. ಅಗ್ನಿಯೊಳಗಣ ಆಕಾಶ, ಶ್ರೋತ್ರೇಂದ್ರಿಯ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಅಗ್ನಿಯೊಳಗಣ ಅಪ್ಪು, ಜಿಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಅಗ್ನಿಯೊಳಗಣ ಪೃಥ್ವಿ, ಘ್ರಾಣೇಂದ್ರಿಯ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಬುದ್ಧೀಂದ್ರಿಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಅಪ್ಪುವಿನೊಳಗಣ ಅಪ್ಪು, ರಸ; ಅಲ್ಲಿ ಗುರುಲಿಂಗ ಸ್ವಾಯತ. ಅಪ್ಪುವಿನೊಳಗಣ ಆಕಾಶ, ಶಬ್ದ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಅಪ್ಪುವಿನೊಳಗಣ ವಾಯು, ಸ್ಪರ್ಶನ; ಅಲ್ಲಿ ಜಂಗಮಲಿಂಗ ಸ್ವಾಯತ. ಅಪ್ಪುವಿನೊಳಗಣ ಅಗ್ನಿ ರೂಪು; ಅಲ್ಲಿ ಶಿವಲಿಂಗ ಸ್ವಾಯತ. ಅಪ್ಪುವಿನೊಳಗಣ ಪೃಥ್ವಿ ಗಂಧ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಪಂಚವಿಷಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಪೃಥ್ವಿಯೊಳಗಣ ಪೃಥ್ವಿ, ಪಾಯ್ವಿಂದ್ರಿಯ; ಅಲ್ಲಿ ಆಚಾರಲಿಂಗ ಸ್ವಾಯತ. ಪೃಥ್ವಿಯೊಳಗಣ ಆಕಾಶ, ವಾಗಿಂದ್ರಿಯ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಪೃಥ್ವಿಯೊಳಗಣ ವಾಯು, ಪಾಣೀಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಪೃಥ್ವಿಯೊಳಗಣ ಅಗ್ನಿ, ಪಾದೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ. ಪೃಥ್ವಿಯೊಳಗಣ ಅಪ್ಪು, ಗುಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಹೀಂಗೆ ಪಂಚಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಆತ್ಮನೊಳಗಣ ಆತ್ಮ,ಶುದ್ಧಾತ್ಮ; ಅಲ್ಲಿ ಮಹಾಲಿಂಗ ಸ್ವಾಯತ. ಆತ್ಮನೊಳಗಣ ಆಕಾಶ, ಸುಜ್ಞಾನ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಆತ್ಮನೊಳಗಣ ವಾಯು, ಸುಮನ; ಅಲ್ಲಿ ಜಂಗಮಲಿಂಗ ಸ್ವಾಯತ. ಆತ್ಮನೊಳಗಣ ಅಗ್ನಿ, ನಿರಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆತ್ಮನೊಳಗಣ ಅಪ್ಪು, ಸುಬುದ್ಧಿ; ಅಲ್ಲಿ ಗುರುಲಿಂಗ ಸ್ವಾಯತ. ಆತ್ಮನೊಳಗಣ ಪೃಥ್ವಿ, ಸುಚಿತ್ತ; ಅಲ್ಲಿ ಆಚಾರಲಿಂಗ ಸ್ವಾಯತ. ಇಂತೀ ಪ್ರಾಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಇಂತೀ ಅಂಗ ಪ್ರಾಣಂಗಳಲ್ಲಿಯು ಲಿಂಗವೇ ಎಡೆಕಡೆಯಿಲ್ಲದ ಪ್ರಭೇದವನರಿದಾತನೆ ಸರ್ವಾಂಗಲಿಂಗಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅವಸ್ಥೆಗಳಿಪ್ಪತ್ತುನಾಲ್ಕನು ಹೀಂಗೆ ದರ್ಶನವ ಮಾಡಿದಾತನು ಶಿವಮುಕ್ತನು, ಆತನು ಶಿವಯೋಗಿ ಲಿಂಗಾನುಭಾವಿ. ಆ ಶಿವಮುಕ್ತನಿಗೆ ಪಂಚಮಲಂಗಳು ಪಂಚಶಕ್ತಿಗಳು ಬಿಟ್ಟ ಪ್ರಕಾರ ದರ್ಶನವದೆಂತೆಂದಡೆ : ಮುಂದೆ ಇದ್ದ ಮಾಯಾಭೋಗದ ಇಚ್ಛೆಯಿಲ್ಲದಿಹುದೆ ತಿರೋಧಾನಮಲ ನಷ್ಟ, ಕರ್ಮವ ತೊರೆದು ಸುಖದುಃಖಗಳು ಸಮವಾಗಿ ಪಂಚಕೃತ್ಯಂಗಳು ಕೆಟ್ಟುದಾಗಿ, ಮಹಾಮಾಯೆ ನಷ್ಟ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆಸೆಯೆಂಬ ಶೂಲದ ಮೇಲೆ, ವೇಷವೆಂಬ ಹೆಣನ ಕುಳ್ಳಿರಿಸಿ; ಧರೆಯ ಮೇಲುಳ್ಳ ಹಿರಿಯರು ಹೀಂಗೆ ಸವೆದರು ನೋಡಾ ! ಆಸೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು, ಹೇಸಿಕೆಯಾಗಿತ್ತು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->