ಅಥವಾ

ಒಟ್ಟು 58 ಕಡೆಗಳಲ್ಲಿ , 26 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಂಗೆ ಹೆಣ್ಣುಬೇಡ, ಹೊನ್ನುಬೇಡ, ಮಣ್ಣುಬೇಡವೆಂದು ಹೇಳಿ, ತಾ ಮುಟ್ಟುವನ್ನಬರ ಆ ಬೋಧೆಯ ಹುಸಿಯೆಂದ. ತಾ ಮುಟ್ಟದೆ ತನ್ನ ಮುಟ್ಟಿಪ್ಪ ಭಕ್ತನ ತಟ್ಟದೆ, ಕರ್ಮಕ್ಕೆ ಕರ್ಮವನಿತ್ತು ತಾ ವರ್ಮಿಗನಾಗಬಲ್ಲಡೆ, ಹೊಳೆಯಲ್ಲಿ ಹಾಕಿದ ಸೋರೆಯಂತೆ, ಅನಿಲ ಕೊಂಡೊಯ್ದ ಎಲೆಯಂತೆ, ಯಾತಕ್ಕೂ ಹೊರಗಾಗಿ ಜಗದಾಸೆಯಿಲ್ಲದಿಪ್ಪ ವೇಷಕ್ಕೆ ಒಳಗಲ್ಲ. ಆತ ಜಗದೀಶನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊರಗನೆ ಕೊಯ್ದು ಹೊರಗನೆ ಪೂಜಿಸಿ ಹೊರಗಾಗಿ ಹೋಯಿತ್ತು ತ್ರೈಜಗವೆಲ್ಲ. ಆನದನರಿಯದಂತೆ ಲಿಂಗವ ಪೂಜಿಸ ಹೋದಡೆ, ಕೈ ಲಿಂಗದಲ್ಲಿ ಸಿಲುಕಿತ್ತಲ್ಲಾ ! ಮನ ದೃಢದಿಂದ ನಿಮ್ಮ ನೆನೆದಿಹೆನೆಂದಡೆ ತನು ಸಂದಣಿಸಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇಂದ್ರಿಯಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ ಬ್ರಹ್ಮನುತ್ಪತ್ಯಕ್ಕೆ ಹೊರಗಾಗಿ ಶ್ರೀಗುರುವಿನಿಂದ ಸರ್ವಾಂಗವೆಲ್ಲ ಶುದ್ಧಪ್ರಸಾದವಾಗುವುದಯ್ಯ. ಸಮಸ್ತವಿಷಯಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ ವಿಷ್ಣುವಿನ ಸ್ಥಿತಿಗೆ ಹೊರಗಾಗಿ ಚಿದ್ಘನಮಹಾಲಿಂಗದಿಂದ ಸರ್ವಾಂಗವೆಲ್ಲ ಸಿದ್ಧಪ್ರಸಾದವಾಗುವುದಯ್ಯ. ಸಮಸ್ತಕರಣಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ ರುದ್ರನ ಲಯಕ್ಕೆ ಹೊರಗಾಗಿ ನಿರಾಲಂಬ ನಿಷ್ಕಳಂಕ ಜಂಗಮದಿಂದ ಸರ್ವಾಂಗೆಲ್ಲ ಪ್ರಸಿದ್ಧ ಪ್ರಸಾದವಾಗುವುದಯ್ಯ. ಇಂತು ಇಂದ್ರಿಯ ವಿಷಯ ಕರಣಗುಣಧರ್ಮಗಳಳಿದು, ಲಿಂಗೇಂದ್ರಿಯ ವಿಷಯ ಕರಣಂಗಳಾಗಿ ಬ್ರಹ್ಮನುತ್ಪತ್ಯ, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೆ ಹೊರಗಾದಲ್ಲದೆ ಮಹಾಪ್ರಸಾದಿಸ್ಥಲದೊಳಗಣ ಷಟ್ಸ್ಥಲ ದೊತೆಯದು ನೋಡ ಸಂಗನಬಸವೇಶ್ವರ. !
--------------
ಗುರುಸಿದ್ಧದೇವರು
ಇನ್ನು ಬ್ರಹ್ಮಾಂಡಕಪಾಲದೊಳಗಣ ಸೃಷ್ಟಿಯ ವಿಸ್ತೀರ್ಣವದೆಂತೆಂದಡೆ : ಆ ಭುವನಂಗಳು ಇಹ ಕ್ರಮವೆಂತೆಂದಡೆ : ಬ್ರಹ್ಮಾಂಡಕಪಾಲ ಸಹಸ್ರಕೋಟಿ ಯೋಜನ ಪ್ರಮಾಣು. ಅದರೊಳಗಾಗಿ ಅತಳಲೋಕ ಇಪ್ಪತ್ತೊಂದುಕೋಟಿ ಯೋಜನದಲ್ಲಿ ಶಿವನ ಆಜ್ಞಾಶಕ್ತಿಯಿಂದ ಆಧಾರಶಕ್ತಿ ಇಹಳು. ಆ ಆಧಾರಶಕ್ತಿಯ ಉದ್ದ ಗಾತ್ರದೊಳಗಾಗಿ ಐದು ಸಾವಿರಕೋಟಿ ಯೋಜನದಲ್ಲಿ ವಿತಳಲೋಕವಿಹುದು. ಆ ವಿತಳಲೋಕ ಆರುಸಾವಿರಕೋಟಿ ಯೋಜನಪ್ರಮಾಣು. ಆ ವಿತಳಲೋಕದ ಮೇಲೆ ಐದುಸಾವಿರಕೋಟಿ ಯೋಜನದಲ್ಲಿ ಸುತಳಲೋಕವಿಹುದು. ಆ ಸುತಳಲೋಕ ಅಗ್ನಿ ಜ್ವಾಲೆಯಾಗಿಹುದು. ಆ ಸುತಳಲೋಕದೊಳು ಕಾಲಾಗ್ನಿ ರುದ್ರರಿಹರು. ಆ ಸುತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ರಸಾತಳಲೋಕವಿಹುದು. ಆ ರಸಾತಳಲೋಕ ಬಯಲಾಗಿಹುದು. ಆ ರಸಾತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ತಳಾತಳಲೋಕವಿಹುದು. ಆ ತಳಾತಳಲೋಕ ಮಹಾಗ್ನಿ ಜ್ವಾಲೆಯಾಗಿಹುದು. ಆ ತಳಾತಳಲೋಕದ ಮೇಲೆ ಮಹಾತಳಲೋಕವಿಹುದು. ಆ ಮಹಾತಳಲೋಕದ ಮೇಲೆ ಪಾತಾಳಲೋಕವಿಹುದು. ಆ ಪಾತಾಳಲೋಕ ಎಂಬತ್ತು ಸಾವಿರ ಕೋಟಿ ಯೋಜನ ಭೂಮಿಯಮೇಲೆ ಜಲಮಯವಾಗಿಹುದು. ಆ ಜಲಮಯವಾಗಿಹ ಪಾತಾಳಲೋಕವು ಆಧಾರಶಕ್ತಿಯ ಆಜ್ಞೆಯಿಂದ ಹದಿನಾರು ದಿಕ್ಕುಗಳಲ್ಲಿಯೂ ಹದಿನಾರುಮಹಾಭೂತಂಗಳು ಸುತ್ತಿಹವು. ಹದಿನಾರುಭೂತಗಣಂಗಳ ನಡುವೆ ಕೂರ್ಮಾಂಡನೆಂಬ ಮಹಾಕೂರ್ಮನ ಅಗಲವದೆಂತೆಂದಡೆ : ಐದುಸಾವಿರಕೋಟಿ ವಿಸ್ತೀರ್ಣದಗಲ ನೋಡಾ. ಆ ಕೂರ್ಮಾಂಡನೆಂಬ ಮಹಾಕೂರ್ಮನ ಉದ್ದ ಹದಿನೆಂಟುಸಾವಿರಕೋಟಿಯೋಜನ ಪರಿಪ್ರಮಾಣುದ್ದದ ಬೆನ್ನ ಮೇಲೆ ಶತಕೋಟಿಯೋಜನ ಪರಿಪ್ರಮಾಣುದ್ದದ ಭೂಮಿಯ ಮೇಲೆ ಐನೂರು ಶಿರಸ್ಸನುಳ್ಳ ಶೇಷನು, ನಾಲ್ವತ್ತುಸಾವಿರ ಶೇಷನು ವಳಯಾಕೃತವಾಗಿ ಸುತ್ತಿರಲು, ಆ ನಾಲ್ವತ್ತುಸಾವಿರ ಶೇಷನ ಒಳಯಾಕೃತದಲ್ಲಿ, ಮಧ್ಯದಲ್ಲಿ ಶೇಷಾಹಿಯೆಂಬ ಮಹಾನಾಗ ಇಪ್ಪುದು. ಆ ಶೇಷಾಹಿಯೆಂಬ ಮಹಾನಾಗವು ಎಂಟುಸಾವಿರಕೋಟಿ ಯೋಜನಪ್ರಮಾಣು ನೀಳವು. ಹತ್ತುಸಾವಿರಕೋಟಿ ಸುತ್ತು ವಿಸ್ತೀರ್ಣವು. ಐದುಸಾವಿರ ಕೋಟಿ ಅಗಲದ ಹೆಡೆಯು. ಸ್ವರ್ಗ ಜ್ಯೋತಿಪ್ರಕಾಶದ ದೇಹವನುಳ್ಳುದಾಗಿ, ಸಹಸ್ರ ಶಿರ, ದ್ವಿಸಹಸ್ರಾಕ್ಷವು. ಆ ಸಹಸ್ರ ಶಿರದಲ್ಲಿ ಮಾಣಿಕ್ಯದ ಬಟ್ಟುಗಳ ಧರಿಸಿಕೊಂಡು ಮಹಾಗ್ನಿಜ್ವಾಲೆಯನುಳ್ಳ ಮಹಾಶೇಷನಿಹನು. ಐನೂರು ಶಿರಸ್ಸನುಳ್ಳ ಶೇಷ ನೂರುನಾಲ್ವತ್ತುಸಾವಿರ ಶೇಷನ ಸುತ್ತುವಳಯಾಕೃತವಾಗಿ ಅಷ್ಟದಿಗ್ಗಜಂಗಳಿಹವು. ಆ ಅಷ್ಟದಿಗ್ಗಜಂಗಳ ಮೇಲೆ ವಿಸ್ತೀರ್ಣ ಒಂದೊಂದು ಗಜಂಗಳು ನವಕೋಟಿಯೋಜನಪ್ರಮಾಣದುದ್ದವು, ಸಾವಿರಕೋಟಿಯೋಜನಪ್ರಮಾಣದಗಲವು, ಶತಕೋಟಿಸಾವಿರಯೋಜನಪ್ರಮಾಣದ ನೀಳವನುಳ್ಳುದಾಗಿ ಅಷ್ಟದಿಕ್‍ಮಹಾಗಜಂಗಳಿಹವು. ಆ ಅಷ್ಟದಿಕ್‍ಮಹಾಗಜಂಗಳು ಆಧಾರವಾಗಿ ಭೂಲೋಕವಿಹುದು. ಆ ಭೂಲೋಕ ಮೊದಲಾಗಿ ಕೆಳಗಿನಂಡಬ್ರಹ್ಮಾಂಡಕಪಾಲ ಕಡೆಯಾಗಿ ಅರುವತ್ತುಸಾವಿರಕೋಟಿಯೋಜನ ಪರಿಪ್ರಮಾಣು. ಆ ಭುವರ್ಲೋಕವು ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಕಬ್ಬುಣವಾಗಿಹುದು. ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಮಣ್ಣಾಗಿಹುದು. ಇದು ಮಧ್ಯಭೂಮಿ. ಈ ಮಧ್ಯಭೂಮಿ ಅಜಲಮಯವಾಗಿ ಉತ್ತರ-ದಕ್ಷಿಣ ಶತಸಹಸ್ರಕೋಟಿಯೋಜನಪರಿಪ್ರಮಾಣು. ಸುತ್ತ ಅಗಲ ಮುನ್ನೂರರುವತ್ತುಕೋಟಿಯೋಜನಪರಿಪ್ರಮಾಣು. ದಕ್ಷಿಣ-ಉತ್ತರ ಸಮುದ್ರ ತೊಡಗಿ ಉತ್ತರ ಹಿಮವತ್ಪರ್ವತ. ಇದಕ್ಕೆ ಹೆಸರು ಭರತವರುಷ. ಈ ಹಿಮವತ್ಪರ್ವತವು ಉತ್ತರ ದಕ್ಷಿಣ ಇಪ್ಪತ್ತುಸಾವಿರ ಯೋಜನಪ್ರಮಾಣು. ಕೆಳಗೆ ಮೇಲೆ ಇಪ್ಪತ್ತುಸಾವಿರಯೋಜನಪ್ರಮಾಣು. ಮೇಲುದ್ದವು ಎಂಬತ್ತೈದುಸಾವಿರಯೋಜನಪ್ರಮಾಣು. ಉತ್ತರ ಸಮುದ್ರಕ್ಕೆ ದಕ್ಷಿಣ ಉತ್ತರ ಸಾವಿರಕೋಟಿ ಯೋಜನದಲ್ಲಿ ವಿಂಧ್ಯಪರ್ವತವಿಹುದು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ಮೂರುಸಾವಿರ, ದಕ್ಷಿಣ ಉತ್ತರ ಮೂವತ್ತುಸಾವಿರಯೋಜನಪ್ರಮಾಣು. ಕೆಳಗು ಮೇಲು ಮೂವತ್ತುಸಾವಿರಯೋಜನಪ್ರಮಾಣು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ತುನೂರುಸಾವಿರಯೋಜನ ಪ್ರಮಾಣು. ಪಶ್ಚಿಮದೆಸೆಯ ಸಮುದ್ರದಲ್ಲಿಹ ಅಸ್ತಮಾನಪರ್ವತ. ಆ ಪರ್ವತ ದಕ್ಷಿಣ-ಉತ್ತರ ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಕೆಳಗು ಮೇಲು ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಮೇಲುದ್ದವು ತೊಂಬತ್ತುಸಾವಿರ ಯೋಜನಪ್ರಮಾಣು ಭೂಮಿಗೆ ನಡುವಾಗಿ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ಉತ್ತರ ದಕ್ಷಿಣ ಹದಿನಾರುಸಾವಿರ ಯೋಜನಪ್ರಮಾಣು. ಆ ಮೇರುಪರ್ವತದ ಮೇಲುದ್ದವು ಸಾವಿರಕೋಟಿಯ ಮೇಲೆ ನೂರುಸಾವಿರದ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಮಹಾಮೇರುವಿನ ಪೂರ್ವದಿಕ್ಕಿನಲ್ಲಿ ಮಂದರಪರ್ವತವಿಹುದು. ಅಲ್ಲಿಹ ವೃಕ್ಷ ಕದಂಬವೃಕ್ಷ. ಆ ಮಹಾಮೇರುವಿನ ದಕ್ಷಿಣದಿಕ್ಕಿನಲ್ಲಿ ಗಂಧಮಾದನಪರ್ವತವಿಹುದು. ಅಲ್ಲಿಹ ವೃಕ್ಷ ಜಂಬೂವೃಕ್ಷ. ಆ ಮಹಾಮೇರುವಿನ ನೈಋತ್ಯದಿಕ್ಕಿನಲ್ಲಿ ನೀಲಗಿರಿಪರ್ವತವಿಹುದು. ಅಲ್ಲಿಹ ವೃಕ್ಷ ಭೂದಳವೃಕ್ಷ. ಆ ಮಹಾಮೇರುವಿನ ಪಶ್ಚಿಮದಿಕ್ಕಿನಲ್ಲಿ ಕಾಶೀಪರ್ವತವಿಹುದು. ಅಲ್ಲಿಹ ವೃಕ್ಷ ಬಿಲ್ವದ ವೃಕ್ಷ. ಆ ಮಹಾಮೇರುವಿನ ವಾಯುವ್ಯದಿಕ್ಕಿನಲ್ಲಿ ನೀಲಪರ್ವತವಿಹುದು. ಅಲ್ಲಿಹ ವೃಕ್ಷ ಬ್ರಹ್ಮವೃಕ್ಷ. ಆ ಮಹಾಮೇರುವಿನ ಉತ್ತರದಿಕ್ಕಿನಲ್ಲಿ ಮಧುರಾದ್ರಿಪರ್ವತವಿಹುದು. ಅಲ್ಲಿಹ ವೃಕ್ಷ ವಟವೃಕ್ಷ. ಆ ಮಹಾಮೇರುವಿನ ಈಶಾನ್ಯದಿಕ್ಕಿನಲ್ಲಿ ಕಪಿಲ ಮಹಾಪರ್ವತವಿಹುದು. ಅಲ್ಲಿಹ ವೃಕ್ಷ ಶಾಕಾಫಲವೃಕ್ಷ. ಸಪ್ತಕುಲಪರ್ವತಂಗಳು ಒಂದೊಂದು ಬಗೆ ಹತ್ತುಸಾವಿರ ಯೋಜನಪ್ರಮಾಣು. ಆ ಸಪ್ತಕುಲಪರ್ವತಂಗಳೊಂದೊಂದಿಗೆ ಐದುಸಾವಿರ ಯೋಜನಪ್ರಮಾಣು. ಈ ಸಪ್ತಕುಲಪರ್ವತಂಗಳ ನಡುವೆ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ತುದಿಯಲ್ಲಿ ಪಂಚಸಹಸ್ರಯೋಜನದಗಲ ಚುತುಃಚಕ್ರಾಕಾರವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ನವರತ್ನಖಚಿತವಾಗಿ ಪ್ರಮಥಗಣಂಗಳು ನಂದಿ, ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದರಿಂ ಸುಖಂಗಳಲಿಪ್ಪಂತಾಗಿ ಶಿವಪುರವಿಹುದು. ಆ ಶಿವಪುರದೊಳು ಸಿಂಹಾಸನಾರೂಢನಾಗಿ ಮಹಾರುದ್ರಮೂರ್ತಿ ಇಹನು. ಆ ಮಹಾರುದ್ರಮೂರ್ತಿಯ ಚಂದ್ರಾದಿತ್ಯರು, ನಕ್ಷತ್ರ ನವಗ್ರಹಂಗಳು ಮೊದಲಾಗಿ ಎಲ್ಲಾ ದೇವರ್ಕಳು ಪ್ರದಕ್ಷಣಬಹರು. ಯಕ್ಷ ಕಿನ್ನರ ಗಂಧರ್ವ ಸಿದ್ಧ ವಿದ್ಯಾಧರ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳೆಲ್ಲರು ಒಡ್ಡೋಲಗಂಗೊಟ್ಟಿರಲು ಎಲ್ಲ ಲೋಕಕ್ಕೂ ಸಾಕ್ಷೀಭೂತನಾಗಿ ಆ ಮಹಾರುದ್ರಮೂರ್ತಿ ಇಹನು. ಆ ಮಹಾಮೇರುವಿನ ದಕ್ಷಿಣದ ಕೆಳಗಣ ಪಾಶ್ರ್ವದಲ್ಲಿ ಚಿಕ್ಕದೊಂದು ಕೋಡು. ಆ ಕೋಡಿನಲ್ಲಿ ಕಲ್ಪವೃಕ್ಷವಿಹುದು. ಆ ದಕ್ಷಿಣ ಕೋಡಿನಲ್ಲಿ ಜಂಬೂವೃಕ್ಷದ ಹಣ್ಣಿನ ರಸ ಸೋರಿ ಜಾಂಬೋಧಿಯೆಂಬ ಮಹಾನದಿ ಹರಿಯುತ್ತಿಹುದು. ಆ ನೀರ ಸೇವಿಸಿದವರು ಸ್ವರ್ಣವರ್ಣವಹರು. ಆ ನೀರು ಹರಿದ ಠಾವೆಲ್ಲ ಸ್ವರ್ಣಬೆಳೆಭೂಮಿ. ಆ ಭೂಮಿಗೆ ಉತ್ತರ ಪೂರ್ವವಾಗಿ ಶ್ರೀ ಕೈಲಾಸಪರ್ವತವಿಹುದು. ಆ ಕೈಲಾಸಪರ್ವತ ಏಳು ನೆಲೆಯಾಗಿ ರತ್ನಮಯವಾಗಿ ಅನಂತ ಕೋಡುಗಳುಂಟಾಗಿಹುದು. ಆ ಕೈಲಾಸಪರ್ವತವು ಉತ್ತರ ದಕ್ಷಿಣ ಹದಿನಾರುಸಾವಿರಕೋಟಿಯೋಜನ ಪರಿಪ್ರಮಾಣು. ಆ ಕೈಲಾಸಪರ್ವತದ ಮೇಲುದ್ದವು ಸಾವಿರಕೋಟಿ ನೂರುಸಾವಿರದ ಮೇಲೆ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಕೈಲಾಸಪರ್ವತದ ತುದಿಯಲ್ಲಿ ಶಿವಪುರದ ವಿಸ್ತೀರ್ಣ ಪಂಚಸಹಸ್ರ ಯೋಜನದಗಲ. ಚತುಷ್ಟಾಕಾರವಾಗಿ ನವರತ್ನಖಚಿತವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ಪ್ರಮಥಗಣಂಗಳು, ನಂದಿ ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖಂಗಳಲ್ಲಿಪ್ಪಂತಾಗಿ ಮಹಾಶಿವಪುರವಿಹುದು. ಆ ಶಿವಪುರದೊಳು ಶ್ರೀಕಂಠನೆಂಬ ಸದಾಶಿವಮೂರ್ತಿ ಇಹನು. ಆ ಶಿವಪುರದ ಬಾಗಿಲ ಕಾವಲಾಗಿ ನಂದಿ-ಮಹಾಕಾಳರೆಂಬ ಮಹಾಗಣಂಗಳಿಹರು. ನಂದಿ-ಮಹಾನಂದಿ-ಅತಿಮಹಾನಂದಿಕೇಶ್ವರರು ವಿಘ್ನೇಶ್ವರ ಕುಮಾರಸ್ವಾಮಿ ಮಹಾಭೈರವೇಶ್ವರ ಮಹಾಕಾಳಿ ಮೊದಲಾದ ಅಸಂಖ್ಯಾತ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಶುಗಳು, ನವಗ್ರಹಂಗಳು, ಬ್ರಹ್ಮ , ವಿಷ್ಣು , ರುದ್ರಗಣಂಗಳು, ಮೂವತ್ಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು, ಅಷ್ಟದಶ ಗಣಂಗಳು, ಯೋಗೀಶ್ವರರು, ಯಕ್ಷ ಕಿನ್ನರ ಗರುಡ ಗಂಧರ್ವ ಸಿದ್ಧ ವಿದ್ಯಾಧರರು, ರಾಕ್ಷಸಗಣ ನಾಗಗಣ ಭೂತಗಣಂಗಳು ಮೊದಲಾದ ಎಲ್ಲಾ ಗಣಂಗಳ ಸನ್ನಿಧಿಯಲ್ಲಿ ಒಡ್ಡೋಲಗಂಗೊಟ್ಟಿರಲು, ಚತುರ್ವೇದಂಗಳು ಮೊದಲಾಗಿ ಎಲ್ಲಾ ವೇದಂಗಳು `ವಿಶ್ವಾಧಿಕೋ ರುದ್ರೋ ಮಹಾಋಷಿ' ಎನಲು 'ಋತಂ ಸತ್ಯಂ ಪರಬ್ರಹ್ಮ ' ಎನಲು `ಅತ್ಯತಿಷ್ಟರ್ದಶಾಂಗುಲಂ' ಎನಲು `ತತ್ಪರ ಬ್ರಹ್ಮ ವಿಜಾತಿ', ಎನಲು `ಓಮಿತೈಕಾಕ್ಷರ ಬ್ರಹ್ಮ' ಎಂದು ಬೊಬ್ಬಿಟ್ಟು ಸಾರುತ್ತಿರಲು ತುಂಬುರ ನಾರದರು ಗೀತಮಂ ಪಾಡುತಿರಲು ನಂದಿ ಮದ್ದಳೆವಾದ್ಯಮಂ ಬಾರಿಸುತ್ತಿರಲು, ವಿಷ್ಣು ಆವುಜವ ನುಡಿಸಲು, ಬ್ರಹ್ಮ ತಾಳವನೊತ್ತಲು, ಪಂಚಮಹಾವಾದ್ಯಂಗಳು ಮೊಳಗುತ್ತಿರಲು ಭೃಂಗೀಶ್ವರ ಮಹಾನಾಟ್ಯವನಾಡಲು ಉಮಾಮಹೇಶ್ವರಿಯೊಡನೆ ಪರಮೇಶ್ವರನು ಸಿಂಹಾಸನಾರೂಢನಾಗಿ ಕುಳ್ಳಿರ್ದು ಭೃಂಗೀಶ್ವರನ ಮಹಾನಾಟ್ಯವ ತಮ್ಮ ಲೀಲಾವಿನೋದದಲ್ಲಿ ನೋಡುತ್ತ ಶ್ರೀ ಕೈಲಾಸಪರ್ವತದಲ್ಲಿ ಇರುತ್ತಿರ್ದನು. ಈ ಭೂಮಿಗೆ ದಕ್ಷಿಣ ಪೂರ್ವದಲ್ಲಿ ಆದಿಯ ಮಹಾದ್ರಿಪರ್ವತವಿಹುದು. ಆ ಆದಿಯ ಮಹಾದ್ರಿಪರ್ವತದಲ್ಲಿ ಅಗಸ್ತ್ಯಮಹಾಮುನಿ ಇಹನು. ಈ ಭೂಮಿ ಒಂಬತ್ತು ತುಂಡಾಗಿಹುದು. ಒಂಬತ್ತು ತುಂಡಾದ ಅಂತರಾಳವೆಲ್ಲವು ಜಲಮಯವಾಗಿ ಹೊರಗೆ ಬಿರಿದುದ್ದವಾಗಿ ಬೆಳೆಯಲು ನವಖಂಡಪೃಥ್ವಿಯೆಂದು ಹೆಸರಾಯಿತ್ತು. ಈ ಭೂಮಿ ಜಂಬೂದ್ವೀಪ. ಈ ಭೂಮಿಗೆ ಜನನ ಲವಣಸಮುದ್ರ. ಆ ಜಂಬೂದ್ವೀಪ ಲವಣಸಮುದ್ರದ ವಿಸ್ತೀರ್ಣ: ಆ ಜಂಬೂದ್ವೀಪದ ಅಗಲ ಶತಕೋಟಿಯೋಜನಪ್ರಮಾಣು. ಆ ಜಂಬೂದ್ವೀಪ ವಳಯಾಕೃತವಾಗಿ ಸುತ್ತಿಕೊಂಡು ಶತಕೋಟಿಯೋಜನಪರಿಪ್ರಮಾಣದಗಲವಾಗಿ ಲವಣಸಮುದ್ರವಿಹುದು. ಅದರಿಂದಾಚೆ ಪ್ಲಕ್ಷದ್ವೀಪ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಇಕ್ಷುಸಮುದ್ರ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಕುಶದ್ವೀಪ. ಅದರಗಲ ನಾನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಸುರೆಯ ಸಮುದ್ರ. ಅದರಗಲ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಶಾಕದ್ವೀಪ. ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಘೃತಸಮುದ್ರ, ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಸಾಲ್ಮಲೀದ್ವೀಪ. ಅದರಗಲ ಸಾವಿರದಾರು ನೂರು ಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ಷೀರಸಮುದ್ರ. ಅದರಗಲ ಸಾವಿರದಾರುನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಪುಸ್ಕರದ್ವೀಪ. ಅದರಗಲ ಮೂರುಸಾವಿರಕೋಟಿ ಯೋಜನ ಪ್ರಮಾಣು. ಅದರಿಂದಾಚೆ ದಧಿಸಮುದ್ರ. ಅದರಗಲ ಮೂರುಸಾವಿರದಿನ್ನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ರೌಂಚದ್ವೀಪ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವಾದೋದಕಸಮುದ್ರ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವರ್ಣಬೆಳೆಯಭೂಮಿ. ಅದರಗಲ ಹನ್ನೆರಡುಸಾವಿರಕೋಟಿಯೋಜನ ಪ್ರಮಾಣು. ಅದರಿಂದಾಚೆಯಲಿ ಚಕ್ರವಾಳಗಿರಿ. ಅದರಗಲ ಇಪ್ಪತ್ತೈದುಸಾವಿರಕೋಟಿ ಯೋಜನ ಪ್ರಮಾಣು. ಈ ಸಪ್ತಸಮುದ್ರಂಗಳು ಸಪ್ತದ್ವೀಪಂಗಳು ಹೊರಗೆ ಬಿರಿದು ಬೆಳೆಯಲು ಸಪ್ತಸಮುದ್ರಂಗಳು, ದೆಸೆಗಳು ಕೂಡಿ ಮೇಳೈಸಲು ನಾಲ್ವತ್ರೊಂಬತ್ತುಸಾವಿರಕೋಟಿ ಯೋಜನ ಪ್ರಮಾಣಿನ ಮೇಲೆ ತೊಂಬತ್ತು ಸಾವಿರದೈವತ್ತುಕೋಟಿಯ ಮಧ್ಯಭೂಮಿ ಯೋಜನ ಪ್ರಮಾಣುಮಂ ಕೂಡಿ ನೂರುಸಾವಿರಕೋಟಿ ಯೋಜನ ಪ್ರಮಾಣು. ಈ ಭೂಮಿಗೂ ಚಕ್ರವಾಳಗಿರಿಗೂ ಹೊರಗೆ ಕಾವಲಾಗಿ ಅಷ್ಟದಿಕ್ಪಾಲರಿಹರು. ಮೇರು ಮಂದರ ಕೈಲಾಸ ಗಂಧಮಾದನ ವಿಂಧ್ಯ ಹಿಮಾಲಯ ನಿಷಧ ಚಿತ್ರಕೂಟವೆಂಬ ಅಷ್ಟಕುಲಪರ್ವತಂಗಳ ತಪ್ಪಲಲ್ಲಿ ಅನಂತವಾಸುಗಿ ಕಶ್ಚ ಕರ್ಕಾಟಕ ಪರ ಮಹಾಪರ ಶಂಕವಾಲಿ ಕುಳಿಕನೆಂಬ ಅಷ್ಟಮಹಾಗಣಂಗಳಿಹವು. ಈಶಾನಮುಖದಲ್ಲಿ ವಡಬಮುಖಾಗ್ನಿ ಇಹುದು. ಉತ್ತರದೆಸೆಯಲ್ಲಿ ಕ್ಷೀರಸಮುದ್ರದೊಳು ವಿಷ್ಣು ಅನಂತಶಯನದಲ್ಲಿ ತಮೋಗುಣಯುಕ್ತನಾಗಿ ನಿದ್ರಾಲಂಬಿಯಾಗಿಹನು. ಈ ಭೂಮಿಗೆ ದಕ್ಷಿಣದೆಸೆಯಾಗಿ ಉತ್ತರ ಪರಿಯಂತರ ಬ್ರಹ್ಮ ಮಹೇಶ್ವರಿ ಕೌಮಾರಿ ವೈಷ್ಣವಿ ವರಾಹಿ ಮಾಹೇಂದ್ರಿ ಚಾಮುಂಡಿಯೆಂಬ ಸಪ್ತಮಾತೃಕೆಯರು ಇಹರು. ಮೇಲುಗಡೆಯಲ್ಲಿ ವಿನಾಯಕ, ಕೆಳಗಡೆಯಲ್ಲಿ ಭೈರವನಿಹನು. ಈ ಭೂಮಿಗೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮದಲ್ಲಿ ಭೈರವ ಮಹಾಭೈರವ ಕಾಲಭೈರವ ದುರ್ಗಿ ಮಹಾದುರ್ಗಿ ಮೊದಲಾದ ಅನಂತ ಭೂತಗಣಂಗಳು ಕಾವಲಾಗಿಹರು. ಈ ಭೂಮಿಯಿಂದ ಮೇಲೆ ಯೋಜನ ಪ್ರಮಾಣದಲ್ಲಿ ಸಪ್ತಮೇಘಂಗಳು, ವಾಯುವಿನ ದೆಸೆಯಿಂದ ಚಲಿಸುತ್ತಿಹುದು. ಅವಾವೆಂದಡೆ : ನೆಲವೃಷ್ಟಿ ನೀರವೃಷ್ಟಿ ಸ್ವರ್ಣವೃಷ್ಟಿ ಪುಷ್ಪವೃಷ್ಟಿ ಕಲ್ಪವೃಷ್ಟಿ ಮಣ್ಣವೃಷ್ಟಿ ಮೌಕ್ತಿಕವೃಷ್ಟಿ- ಎಂಬ ಸಪ್ತವೃಷ್ಟಿಗಳು ವೃಷ್ಟಿಸುತ್ತಿರಲು ಆ ಸಪ್ತಮೇಘಮಂಡಲಂಗಳ ಮೇಲೆ ಶತಕೋಟಿಯೋಜನದಲ್ಲಿ ಭುವರ್ಲೋಕವಿಹುದು. ಆ ಭುವರ್ಲೋಕದಲ್ಲಿ ಆದಿತ್ಯ ಚರಿಸುತ್ತಿಹನು. ಆ ಆದಿತ್ಯನ ರಥದ ಪ್ರಮಾಣು ತೊಂಬತ್ತುಸಾವಿರಯೋಜನಪ್ರಮಾಣದುದ್ದವು, ನಾಲ್ವತ್ತೈದುಸಾವಿರ ಯೋಜನದಗಲವು. ಆ ರಥಕ್ಕೆ ಒಂದೇ ಗಾಲಿ, ಒಂದೆ ನೊಗದಲ್ಲಿ ಕಟ್ಟುವ ಪಚ್ಚವರ್ಣದ ವಾಜಿಗಳೇಳು. ಉರದ್ವಯವಿಲ್ಲದ ಅರುಣ ರಥದ ಸಾರಥಿ. ಆ ಅರುಣನ ಕಂಡುದೆ ಉದಯ, ಕಾಣದುದೇ ಅಸ್ತಮಯ. ಆದಿತ್ಯಪಥಕ್ಕೆ ಶತಕೋಟಿ ಯೋಜನದಲ್ಲಿ ಚಂದ್ರಮನ ಪಥವು ಆ ಚಂದ್ರಮನ ಪಥಕ್ಕೆ ಶತಕೋಟಿ ಯೋಜನದಲ್ಲಿ ಅಂಗಾರಕನ ಪಥವು. ಅಂಗಾರಕನ ಪಥಕ್ಕೆ ಶತಕೋಟಿಯೋಜನದಲ್ಲಿ ಬುಧನ ಪಥವು. ಆ ಬುಧನ ಪಥಕ್ಕೆ ಶತಕೋಟಿಯೋಜನದಲ್ಲಿ ಬೃಹಸ್ಪತಿಯ ಪಥವು. ಆ ಬೃಹಸ್ಪತಿಯ ಪಥಕ್ಕೆ ಶತಕೋಟಿಯೋಜನದಲ್ಲಿ ಶುಕ್ರನ ಪಥವು. ಆ ಶುಕ್ರನ ಪಥಕ್ಕೆ ಶತಕೋಟಿ ಯೋಜನದಲ್ಲಿ ಶನೀಶ್ವರನ ಪಥವು. ಆ ಶನೀಶ್ವರನ ಪಥಕ್ಕೆ ಶತಕೋಟಿ ಯೋಜನದಲ್ಲಿ ರಾಹುಕೇತುಗಳ ಪಥವು. ಆ ರಾಹುಕೇತುಗಳ ಪಥಕ್ಕೆ ಶತಕೋಟಿಯೋಜನದಲ್ಲಿ ನಕ್ಷತ್ರಾದಿಗಳ ಪಥವು. ಆ ನಕ್ಷತ್ರಾದಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸಪ್ತಮಹಾಋಷಿಗಳ ಪಥವು. ಆ ಸಪ್ತಮಹಾಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಅಶ್ವಿನೀದೇವತೆಗಳ ಪಥವು. ಆ ಅಶ್ವಿನೀದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ವಿಶ್ವದೇವತೆಗಳ ಪಥವು. ಆ ವಿಶ್ವದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಬಾಲಸೂರ್ಯರ ಪಥವು. ಆ ಬಾಲಸೂರ್ಯರ ಪಥಕ್ಕೆ ಶತಕೋಟಿಯೋಜನದಲ್ಲಿ ಸೇನ ಮಹಾಸೇನ ಋಷಿಗಳ ಪಥವು. ಆ ಸೇನ ಮಹಾಸೇನ ಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಕ್ರುಕರನೆಂಬ ಋಷಿಗಳ ಪಥವು. ಆ ಕ್ರುಕರನೆಂಬ ಮುನಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸ್ವರ್ಣಪ್ರಭವಾಗಿ ಸ್ವರ್ಗಲೋಕವಿಹುದು. ಆ ಸ್ವರ್ಗಲೋಕದಲ್ಲಿ ಕಲ್ಪವೃಕ್ಷವಿಹುದು. ಆ ಕಲ್ಪವೃಕ್ಷದ ನೆಳಲಲ್ಲಿ ಅಮರಾವತಿಪುರ. ಆ ಪುರದೊಳು ದೇವೇಂದ್ರನಿಹನು. ಆ ದೇವೇಂದ್ರನ ಓಲಗದೊಳಗೆ ಸಪ್ತಮಹಾಋಷಿಗಳು, ಮೂವತ್ಮೂರು ಕೋಟಿ ದೇವರ್ಕಳಿಹರು. ಆ ಸ್ವರ್ಗಲೋಕಕ್ಕೆ ಶತಕೋಟಿ ಯೋಜನದಲ್ಲಿ ಮಹರ್ಲೋಕವಿಹುದು; ಅದು ಬ್ರಹ್ಮ ಪಥವು. ಆ ಮಹರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಜನರ್ಲೋಕವಿಹುದು; ಅದು ವಿಷ್ಣುವಿನ ಪಥವು. ಆ ಜನರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ತಪರ್ಲೋಕವಿಹುದು ; ಅದು ರುದ್ರಪಥವು. ಆ ತಪರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸತ್ಯರ್ಲೋಕವಿಹುದು ; ಅದು ಈಶ್ವರಪಥವು. ಆ ಸತ್ಯರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸದಾಶಿವಲೋಕವಿಹುದು. ಆ ಸದಾಶಿವಲೋಕಕ್ಕೆ ತ್ರಿಶತ ಸಹಸ್ರಕೋಟಿ ಯೋಜನದಲ್ಲಿ ಶಿವಾಂಡವಿಹುದು. ಆ ಶಿವಾಂಡವು ಪಂಚಶತಸಹಸ್ರಕೋಟಿ ಲಕ್ಷವು ತ್ರಿಶತ ಸಹಸ್ರಕೋಟಿ ಲಕ್ಷದ ಮೇಲೆ ಶತಕೋಟಿ ಸಾವಿರ ಲಕ್ಷ ಯೋಜನ ಪ್ರಮಾಣದಗಲವನುಳ್ಳ ಶಿವಾಂಡವು, ಮಹಾಸಮುದ್ರಂಗಳನು, ಅಣುವಾಂಡಗಳನು, ಬ್ರಹ್ಮಾಂಡಂಗಳನು, ಅನಂತಕೋಟಿ ಲೋಕಾದಿಲೋಕಂಗಳನೊಳಕೊಂಡು ಮಹಾಪ್ರಳಯಜಲದೊಳಗಿಹುದು. ಆ ಶಿವಾಂಡಕ್ಕೆ ಹೊರಗಾಗಿ ಅಖಂಡ ಚಿದ್ಬ ್ರಹ್ಮಾಂಡವಿಹುದು. ಅಖಂಡ ಚಿದ್ಬ್ರಹ್ಮಾಂಡವು ಅನಂತಕೋಟಿ ಬ್ರಹ್ಮಾಂಡವನೊಳಕೊಂಡು ಆದಿ ಮಧ್ಯಾವಸಾನಂಗಳಿಲ್ಲದೆ ಅಖಂಡಿತ ಅಪ್ರಮೇಯ ಅವ್ಯಕ್ತ ಅಚಲಿತ ಅಪ್ರಮಾಣ ಅಗೋಚರ ಅಖಂಡಪರಿಪೂರ್ಣವಾಗಿಹುದು ನೋಡಾ ಚಿದ್ಬ್ರಹ್ಮಾಂಡವು ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ವಾಚಾತೀತವೂ ಮನೋತೀತವೂ ಭಾವಾತೀತವೂ ಆದ ಮಹಾಲಿಂಗವು ಸತ್ಯಜ್ಞಾನಾನಂದ ಸ್ವರೂಪಮಾದಲ್ಲಿ, ಸತ್ಯವೇ ಭಕ್ತ, ಜ್ಞಾನವೇ ಗುರು, ಆನಂದವೇ ಜಂಗಮಸ್ವರೂಪವಾಗಿ ನಟಿಸುತಿರ್ಪ ಮಹಾಲಿಂಗವು ತನ್ನ ಲೀಲೆಗೋಸುಗ ಆನಂದವನ್ನು ಮರೆವಿಡಿದು, ಅದರಲ್ಲಿಯೇ ದುಃಖಸ್ವರೂಪಮಾಗಿ ಮಹಾರುದ್ರನಂ ಸೃಜಿಸಿ, ಜ್ಞಾನಮಂ ಮರೆವಿಡಿದು, ಅದರಲ್ಲಿಯೇ ಅಜ್ಞಾನವೆಂಬ ವಿಷ್ಣುವಂ ಕಲ್ಪಸಿ, ಸತ್ಯವಂ ಮರೆವಿಡಿದು, ಅದರಲ್ಲಿ ಮಿಥ್ಯೆಯೆಂಬ ಬ್ರಹ್ಮನು ಕಲ್ಪಿಸಲು, ಸರ್ಗಸ್ಥಿತಿ ಸಂಹಾರಂಗಳಿಗಿದೇ ಕಾರಣಮಾಗಿ, ಆ ರುದ್ರನಲ್ಲಿ ಜಾಗ್ರವೂ, ವಿಷ್ಣುವಿನಲ್ಲಿ ಸುಷುಪ್ತಿಯೂ, ಬ್ರಹ್ಮನಲ್ಲಿ ಸ್ವಪ್ನವೂ ಉತ್ಪನ್ನವಾಗಿ, ಆ ಜಾಗ್ರದಲ್ಲಿ ತೇಜವೂ, ಸುಷುಪ್ತಿಯಲ್ಲಿ ವಾಯ್ವಾಕಾಶಂಗಳೂ, ಸ್ವಪ್ನದಲ್ಲಿ ಪೃಥ್ವಿಯಪ್ಪುಗಳೂ ಆಗಿ, ಅವುಗಳೇ ಒಂದಕ್ಕೊಂದಾವರಣಂಗಳಾಗಿರ್ಪ ಈ ಪ್ರಪಂಚದಲ್ಲಿ ಕ್ರೀಡಾನಿಮಿತ್ತವಾಗಿ ಜೀವಪರಮರೂಪುಗಳಂ ಧರಿಸಿ, ಇದಕ್ಕೆ ಹೊರಗಾಗಿ, ತಾನು ಪರಮರೂಪದಲ್ಲಿ ನಿಂದು, ತನ್ನೊಳ್ತಾನೆ ಕಲ್ಪಿಸಿದ ಜೀವಕೋಟಿಗಳನ್ನು ಇದಕ್ಕೊಳಗುಮಾಡಲು, ಅವೆಲ್ಲವೂ ಒಂದಕ್ಕೊಂದು ಸುತ್ತಿಮುತ್ತಿ ಮಿಥ್ಯೆಯೇ ಸ್ಥೂಲಮಾಗಿ, ಅಜ್ಞಾನವೇ ಸೂಕ್ಷ್ಮವಾಗಿ, ದುಃಖವೇ ಕಾರಣಮಾಗಿ, ಜಾಗ್ರತ್ಸ್ವಪ್ನಸುಷುಪ್ತ್ಯವಸ್ಥೆಗಳನನುಭವಿಸುತ್ತಾ. ನಿಜವಂ ಮರತು ನಿಜಾವಸ್ಥೆಯಂ ತೊರೆದು, ತ್ರಿಮೂರ್ತಿಗಳ ಬಲೆಗೆ ಸಿಕ್ಕಿ ದಾಂಟಲಾರದೆ, ಕೋಟಲೆಗೊಳುತತಿಪ್ರ್ಮದಂ ನೋಡಿ ನೋಡಿ, ಆನಂದಿಸುತ್ತಿರ್ಪನೆಂತೆಂದೊಡೆ: ಮದ್ದಂ ಮೆಲುವಾತಂಗದೇ ಸಾಧಕಮಾಗಿ, ಆ ಲಹರಿಯೊಳಗೆ ಕೂಡಿ, ನಿಜಾವಸ್ಥೆಯಂ ತೊರೆದು, ತದವಸ್ಥೆಯೊಳು ಬದ್ಧನಾಗಿ, ಆ ಲಹರಿಯಳಿದಲ್ಲಿ ಮರಣವೇ ಕಾರಣಮಾಗಿ, ತಿರಿಗಿ ಶರೀರಮಂಪೊಂದಿ, ಅವಸ್ಥಾತ್ರಯಂಗಳನನುಭವಿಸುತ್ತಿಪ್ರ್ಮದಂ ನೋಡಿ, ಪರಮಾನಂದಿಸುತ್ತಿಪುನು. ಇಂತಪ್ಪ ಭ್ರಮೆಯಂ ಕಳೆದು, ತನ್ನ ನಿಜಸ್ವರೂಪಮಪ್ಪ ತೂರ್ಯಾವಸ್ಥೆಯಂ ಹೊಂದುವನೆಂದೊಡೆ, ಹೊಂದತೀರದೆ ಸ್ವಲ್ಪಕಾಲವೇ ಮಹಾತ್ಕಾಲಮಾಗಿ, ಪೃಥ್ವಿವ್ಯಪ್ತೇಜೋವಾಯ್ವಾಕಾಶಾದಿ ಪಂಚಭೂತಂಗಳು ದಾಂಟಲಾರದೆ, ಆ ಪಂಚಭೂತಗುಣಗಂಗಳಂ ಪಂಚೇಂದ್ರಿಯಮುಖಗಳಿಂದ ತನ್ನತಃಕರಣದಿಂ ಕೊಂಡುಂಡು, ಭಾವವಂ ಮುಟ್ಟಲೊಲ್ಲದೆ, ಪಂಚೇದ್ರಿಯಂಗಳಲ್ಲಿರ್ಪ ಬ್ರಹ್ಮನ, ಅಂತಃಕರಣದಲ್ಲಿರ್ಪ ವಿಷ್ಣುವಿನ, ಭಾವದಲ್ಲಿರ್ಪ ರುದ್ರನ ಕಾಟದಲ್ಲಿ ಕೋಟಲೆಗೊಳುತ್ತಿರ್ಪುದಂ ತಪ್ಪಿಸುವುದಕ್ಕುಪಾಯಮಂ ಕಾಣದಿರ್ಪ ಜೀವನಿಗೆ ತಾನೇ ದಯೆಯಿಂ ಗುರುರೂಪನಾಗಿ ಬಂದು, ತನ್ನ ನಿಜವನ್ನೇ ಇದಿರಿಟ್ಟು ತೋರಿದಲ್ಲಿ, ಆ ವಸ್ತುವಂ ನೋಡಿ ನೋಡಿ, ತನ್ನ ಅಂತರಂಗದಲ್ಲಿರ್ಪ ಅಜ್ಞಾನವು ಹರಿದು, ಅಲ್ಲೊಂದು ಸೂಕ್ಷ್ಮದ್ವಾರವು ಕಾಣಿಸಲಲ್ಲಿ ಪ್ರವೇಶಿಸಲೆಸದಿರ್ಪ ಅನೇಕ ದುರ್ಗುಣಗಳಿಗಂಜದೆ ಆತ್ಮಾನಮಾತ್ಮನಾವೇತ್ತಿ ಎಂಬ ಶ್ರುತಿವಚನದಿಂ ತನ್ನಿಂದುತ್ಪನ್ನಮಾದ ಪಂಚಭೂತಗಳಲ್ಲಿ ತಾನೇ ಕಾರಣಭೂತಮಾಗಿ ಕೂಡಲು, ಆ ಗುಣಂಗಳು ಆತ್ಮಸ್ವರೂಪಮಾಗಿ, ಆತ್ಮನಿಂದಲೇ ಉಧ್ಭವಿಸಿ, ಆತ್ಮನಿಗೆ ಸುಖವನ್ನೂ ವಾಯುರೂಪಮಾದ ಜೀವನಿಗೆ ದುಃಖವನ್ನೂ ಉಂಟುಮಾಡುತ್ತಿರ್ಪವೆಂತೆಂದೊಡೆ: ಅರಸಿನಲ್ಲಿ ಹುಟ್ಟಿದ ಗ್ರಹವು ಅರಸಿಂಗೆ ಸುಖಮಂ ಪರರಿಗೆ ದುಃಖಮಂ ಮಾಡುವಂದದಿ, ಆಧಿಯಲ್ಲಾಕಾಶಾತ್ಮಸಂಗದಿಂ ಜ್ಞಾನವು ಹುಟ್ಟಿ, ಅದು ಅಭೇದಮಾಗಿರ್ಪ ಆಕಾಶಾತ್ಮಂಗಳಲ್ಲಿ ಇದಾಕಾಶವಿದಾತ್ಮವೆಂಬ ಭೇದಮಂ ಪುಟ್ಟಿಸಿ, ಜೀವರ ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಯಿತ್ತು. ಉಳಿದ ನಾಲ್ಕು ಭೂತಂಗಳಲ್ಲಂತಃಕರಣಚತುಷ್ಟಯಂಗಳು ಹುಟ್ಟಿ, ಅವೇ ನಾಲ್ಕುಮುಖಂಗಳಾಗಿ, ಜ್ಞಾನವು ಮಧ್ಯಮುಖಮಾಗಿ, ತದ್ಬಲದಿಂ ಅಹಂ ಬ್ರಹ್ಮವೆಂದಹಂಕರಿಸುತ್ತಿರ್ಪ ಬ್ರಹ್ಮನಂ ನೋಡಿ, ಆತ್ಮರೂಪಮಾದ ಶಿವನು ಭಾವಹಸ್ತದಲ್ಲಿ ಅಂತಃಕರಣಮಧ್ಯದಲ್ಲಿರ್ಪ ಜ್ಞಾನವೆಂಬ ಬ್ರಹ್ಮಕಪಾಲವಂ ಪರಿಗ್ರಹಿಸಲು, ಉಳಿದ ನಾಲ್ಕು ಶಿರಸ್ಸುಗಳಿಂ ಸೃಷ್ಟಿಕರ್ತನಾದ ಬ್ರಹ್ಮನು ಸಂಹಾರರೂಪಮಾದ ಜ್ಞಾನಮುಖದಲ್ಲಿ ಸಕಲ ಪದಾರ್ಥಗಳನ್ನು ಪರಿಗ್ರಹಿಸುತ್ತಿರ್ಪನು. ಅಂತಪ್ಪ ಆತ್ಮರೂಪಮಾದ ಶಿವನೊಳಗೆ ಆಕಾಶಮೆಂತೈಕ್ಯಮಪ್ಪುದೆಂದೊಂಡೆ : ಆಕಾಶವೂ ವಾಯುರೂಪು. ಭಸ್ತ್ರಿಯಲ್ಲಿ ಪ್ರವೇಶಿಸಿರ್ಪ ವಾಯುವಿನಿಂದ ಆಕಾಶಮಧಿಕಮಾಗಲು. ವಾಯುವಡಗಲಾಕಾಶವೂ ಕೂಡ ಅಡಗುವಂದದಿ, ಅಂತಪ್ಪ ವಾಯುವೇ ಜೀವನು, ಆ ಜೀವನಿಗವಸಾನಸ್ಥಾನವೇ ಆತ್ಮನು, ಆ ಆತ್ಮನಲ್ಲಿ ಕೂಡಿ ತನ್ನ ಮುನ್ನಿನ ವಾಯುರೂಪಮಳಿದಲ್ಲಿ ಅದಕಿಂತ ಮೊದಲೇ ಆಕಾಶವಳಿವುತ್ತಿರ್ಪುದು. ಅಂತಪ್ಪ ಆತ್ಮಸ್ವರೂಪವೆಂತೆಂದೊಂಡೆ : ಆತ್ಮವಂ ವಿಚಾರಿಸಿ ಆತ್ಮಸ್ವರೂಪವನರಿಸಿದ ಜೀವನು ತಾನಾತ್ಮನಾಗುತ್ತಿರಲು ಆತ್ಮಸ್ವರೂಪಮಿತೆಂದು ಮರಳಿಯೋರ್ವರೊಳುಸುರುವುದೆಂತಯ್ಯಾ! ಸತ್ತವನು ಬಂದು ತನ್ನ ವೃತ್ತಾಂತವಂ ಹೇಳಬಲ್ಲನೆ? ಉರಿಯೊಳ್ಕೂಡಿದ ಕರ್ಪುರವು ಉರಿಯಪ್ಪುದಲ್ಲದೆ ಕರ್ಪುರವಪ್ಪುದೆ? ಅಂತಪ್ಪ ಅಭೇದಾನಂದ ಪರಮಾತ್ಮಸಂಗದೊಳೇಕಮಾಗಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪಿಂಡಾಂಡದ ಮೇಲೊಂದು ತುಂಬಿದ ಭಾಂಡೆಯ ಕಂಡೆನಯ್ಯ. ಪಿಂಡಾಂಡವ ಹೊದ್ದದೆ ಅಖಂಡಮಯವಾಗಿದೆ ನೋಡಾ. ಆ ಭಾಂಡವಯೆನ್ನ ಮಂಡೆಯ ಮೇಲೆ ಹೊತ್ತಿಪ್ಪೆನಯ್ಯ. ಮೂಲಜ್ಞಾನಾಗ್ನಿಯೆದ್ದು ಮೇಲಣ ಕಮಲವ ತಾಗಲು ಕಮಲದೊಳಗಣ ಕೊಡ ಕೊಡದೊಳಗಣ ಉದಕ ಉಕ್ಕಿ ಶರೀರದ ಮೇಲೊಗಲು ಪಿಂಡ ಕರಗಿ ಅಖಂಡಮಯನಾದೆನು. ಅಮೃತ ಬಿಂದುವ ಸೇವಿಸಿ ನಿತ್ಯಾನಿತ್ಯವ ಗೆದ್ದು ನಿರ್ಮಲ ನಿರಾವರಣನಾದೆನು. ಸೀಮೆಯ ಮೀರಿ ನಿಸ್ಸೀಮನಾದೆನು. ಪರಮ ನಿರಂಜನನನೊಡಗೂಡಿ ಮಾಯಾರಂಜನೆಯಳಿದು ನಿರಂಜನನಾಗಿದ್ದೆನು ಕಾಣಾ. ಸಮಸ್ತ ವಿಶ್ವಪ್ರಪಂಚಿಗೆ ಹೊರಗಾಗಿ ನಿಃಪ್ರಪಂಚ ನಿರ್ಲೇಪನಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯ, ಸಾತ್ವಿಕ ಶರಣರ ನುಡಿ ಹುಸಿಯೆ ? ಅದು ದಿಟ ಅದು ಆಟ. ಒಳಗೆಂಬುದೆ ದೇವಲೋಕ, ಹೊರಗೆಂಬುದೆ ಮರ್ತ್ಯಲೋಕ. ಈ ಎರಡು ಲೋಕಕ್ಕೆ ಹೊರಗಾಗಿ ನಾವಿರಲು ಈ ಎರಡು ಲೋಕದೊಳಗೆಯೂ ತಾವೆ ಇರಲಿ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುವಾದಡೆ ಭೃತ್ಯರ ಚಿತ್ತವನರಿಯಬೇಕು. ಲಿಂಗವಾದಡೆ ಅರ್ಚಕನ ಚಿತ್ತದಲ್ಲಿ ಅಚ್ಚೊತ್ತಿದಂತಿರಬೇಕು. ಜಂಗಮವಾದಡೆ ಉತ್ಪತ್ತಿ ಸ್ಥಿತಿ ಲಯದ ಗೊತ್ತ ಮೆಟ್ಟದೆ ನಿಶ್ಚಿಂತನಾಗಿರಬೇಕು. ಇಂತೀ ತ್ರಿವಿಧಲಿಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ, ತ್ರಿವಿಧಾಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ, ತ್ರಿವಿಧಾಂಗ ತ್ರಿವಿಧಮಲಕ್ಕೆ ಹೊರಗಾಗಿ, ತ್ರಿವಿಧಾತ್ಮ ತ್ರಿವಿಧ ಅರಿವಿನಲ್ಲಿ ಕರಿಗೊಂಡು, ವಿಶ್ವಾಸಕ್ಕೆ ಎಡದೆರಪಿಲ್ಲದೆ ತನ್ಮಯಮೂರ್ತಿ ತಾನಾದ ನಿಜೈಕ್ಯಂಗೆ ರಾಗ ವಿರಾಗವಿಲ್ಲ, ಪುಣ್ಯ ಪಾಪವಿಲ್ಲ, ಕರ್ಮ ನಿಃಕರ್ಮವಿಲ್ಲ. ಇಂತೀ ಭಿನ್ನಭಾವನಲ್ಲ, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿದ ಶರಣ.
--------------
ಆನಂದಯ್ಯ
ಅಂಗವಿಲ್ಲದ ಮಂಗಳಾಂಗಿಯ ಮನದಲ್ಲಿ, ಶಿವಲಿಂಗದುದಯವ ಕಂಗಳಿಲ್ಲದೆ ಕಂಡು, ಅಂಗವಿಲ್ಲದೆ ಸಂಗವ ಮಾಡಿ, ನಿಸ್ಸಂಗಿಯಾಗಿ ಸರ್ವಸಂಗಕ್ಕೆ ಹೊರಗಾಗಿ, ನಿರ್ವಯಲ ಬೆರಸಲು `ಮಂಗಳ ಮಂಗಳ'ವೆನುತ್ತಿಪ್ಪ ಮಹಾಗಣಂಗಳ ಸಂಗದಲ್ಲಿ ಮೈಮರೆದನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಿಷ್ಣು ದೈವವೆಂದಡೆ ಪಾಂಡವರ ಬಂಡಿಯ ಬೋವನಾದ, ಬ್ರಹ್ಮದೈವವೆಂದಡೆ ಆ ಬೋವಂಗೆ ಕಂದನಾದ, ಜಿನ ದೈವವೆಂದಡೆ ಆ ಬೋವನ ಅವತಾರವಾದ, ಮುಪ್ಪುರವ ಕೆಡಿಸುವಲ್ಲಿ ಕುಟ್ಟಿಲ ಭೌದ್ಧನಾದ, ರುದ್ರ ದೈವವೆಂದಡೆ ಅರ್ಧನಾರಿಗೆ ಸಿಕ್ಕಿದ. ಇಂತೀ ಸಮಯ ಕುಲಕ್ಕೆ ಹೊರಗಾಗಿ, ಶಕ್ತಿ ಸಮಯ ನಿರಸನವಾಗಿ ನಿಂದುದ ಸದಾಶಿವಮೂರ್ತಿಲಿಂಗವೊಂದಲ್ಲದಿಲ್ಲಾ ಎಂದೆ.
--------------
ಅರಿವಿನ ಮಾರಿತಂದೆ
ಕಾಮಸಂಹಾರಿ, ಹರಿಯಜರಹಂಕಾರ ದರ್ಪಚ್ಚೈದನ ಲಿಂಗವೆಂದೆಂಬರು, ಅದ ನಾವರಿಯೆವಯ್ಯಾ ! ನಾವು ಬಲ್ಲುದಿಷ್ಟಲ್ಲದೆ ಕಾಮ ಕ್ರೋಧ ಲೋಭ ಮೋಹ ಮಾತ್ಸರ್ಯವಿರಹಿತರು, ನಮ್ಮ ಜಂಗಮದೇವರು ಕಾಣಿರಯ್ಯಾ ! ಇಹನಾಸ್ತಿ ಪರನಾಸ್ತಿ ಫಲಪಥಕ್ಕೆ ಹೊರಗಾಗಿ ಮಾಡುವ ಭುಕ್ತಿಯ ಕೊಟ್ಟು, ಮುಕ್ತಿಯನೀವ. ಚರಿಸಿದಡೆ ವಸಂತ, ನಿಂದಡೆ ನೆಳಲಿಲ್ಲ, ನಡೆದಡೆ ಹೆಜ್ಜೆಯಿಲ್ಲ. ದಗ್ಧಪಟನ್ಯಾಯ, ಯಥಾಸ್ವೇಚ್ಛ ತನ್ನ ನಿಲುವು ಅದಾರಿಗೆ ವಿಸ್ಮಯ, ಅಗೋಚರ. ಚರಾಚರಾ ಸ್ಥಾವರಾತ್ಮಕನು ನಮ್ಮ ಜಂಗಮದೇವರು ಕಾಣಿರಯ್ಯಾ. ಆ ಜಂಗಮವು ಭಕ್ತರಿಗೆ ಚರಣವ ಕರುಣಿಪನು. ಆ ಭಕ್ತರು ಪಾದಪ್ರಕ್ಷಾಲನಂ ಗೆಯ್ದು, ಗಂಧಾಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ ವಿಭೂತಿ ರುದ್ರಾಕ್ಷಿಯಂ ಧರಿಸಿ, ಮೈವಾಸವಂ ಭೂಷಣ ಎರೆದಲೆಯನ ಕರದಲ್ಲಿ ಹಿಡಿದು, ಆ ಜಂಗಮದೇವರು ತೀರ್ಥವನೀವುದಯ್ಯಾ. ಆಮೇಲೆ ತಂಡ ಮೊತ್ತಕ್ಕೆ ಮಂಡೆ ಬಾಗಿ, ತಮ್ಮಿಷ್ಟಲಿಂಗಕ್ಕೆ ಮುಷ್ಟಿ ಅರ್ಪಿಸಿ, ತಾವು ಸಲಿಸುವುದಯ್ಯಾ. ಆಮೇಲೆ ಗಣಸಮೂಹವು, ತಾವು ರೋಹ ಅವರೋಹದಿಂದ ಅರ್ಪಿತವ ಮಾಡುವದು, ಆಗಮಾಚಾರವಯ್ಯಾ. ಲಿಂಗ ನಿರ್ಮಾಲ್ಯವನೆ ಲಿಂಗಕ್ಕೆ ಮತ್ತೆ ಮತ್ತೆ ಧರಿಸುವೆ,ಭಾವನಿರ್ಭಾವವನರಿದು, ಇನ್ನೊಂದು ನಿರಂತರದ ಅವಧಾನವುಂಟು. ತಾ ಪ್ರಸಾದವ ಸವಿವಾಗ, ಜಂಗಮಲಿಂಗಕ್ಕೆ ಪದಾರ್ಥವ ಸಮೀಪಸ್ಥವ ಮಾಡಲು, ಅದೇ ಹಸ್ತದಲ್ಲಿ ಸಜ್ಜಾಗೃಹಕ್ಕೆ ಸಮರ್ಪಿಸಿಕೊಂಬುವದೊಂದವಧಾನ. ಆಚೆಗೆ ತೀರ್ಥ ಸಂಬಂಧಿಸಿ, ಎಯ್ದದಿರಲ್ಲದರಲ್ಲಿ ಪಾದೋದಕವ ನೀಡುವದ ದಯಗೊಟ್ಟಡೆ ಸಂದಿಲ್ಲ. ಅವು ಮೂರು, ಇವು ಮೂರು, ಆಚೆ ಹನ್ನೊಂದು, ಈಚೆ ಹತ್ತರ ಅರುವತ್ತರಾಯ ಸಂದಿತ್ತು . ಭಾಷೆ ಪೂರೈಸಿತ್ತು, ಲೆಕ್ಕ ತುಂಬಿತ್ತು, ಬಿತ್ತಕ್ಕೆ ವಟ್ಟವಿಲ್ಲ, ಕಾಳೆಗ ಮೊಗವಿಲ್ಲ. ಕಾಳಿಂಗನ ಹಸ್ತಾಭರಣ, ನಮ್ಮ ಜಂಗಮಲಿಂಗಕ್ಕಯ್ಯಾ ! ಇಂತಪ್ಪ ಈ ನಡೆಯನರಿದಾಚರಿಸಿದ ಸಂಗನಬಸವಣ್ಣಂಗೆ ಆಯತವನಾಯತವೆಂಬ ಅನಾಚಾರಿಯನು ಎನ್ನ ಮುಖದತ್ತ ತೋರದಿರಯ್ಯಾ. ಆ ಮಹಾಮಹಿಮನ ಹೆಜ್ಜೆ ಹೆಜ್ಜೆಗಶ್ವಮೇಧಫಲ ತಪ್ಪದಯ್ಯಾ. ಆ ಸಿದ್ಧಪುರುಷಂಗೆ ನಮೋ ನಮೋ ಎಂಬೆನು ಕಾಣಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ ಅರಿವಿಂಗೆ ಅರಿವಾಗಿಪ್ಪ ಭೇದವು ಎನಗೆ ಕಾಣಬಂದಿತ್ತು ನೋಡಾ. ನಿನ್ನ ಒಳಗ ಒರೆದು ನೋಡಿದಡೆ, ಒರೆದೊರೆಯಿಲ್ಲದ ಚಿನ್ನದ ಪರಿಮಳ ಎನ್ನ ಮನವನಾವರಿಸಿ ಪರಮಸುಖದ ಪರಿಣಾಮವನು ಒಳಕೊಂಡಿತ್ತು ನೋಡಾ. ಈ ಕುರುಹಿನ ಮೊಳೆಯ ಬರಿಯ ಬಯಲಲ್ಲಿ ನಿಲಿಸಿ ನೋಡಿ ಕೂಡಾ, ನಮ್ಮ ಗುಹೇಶ್ವರನ ಶರಣ ಅಜಗಣ್ಣನೊಳಗೆ ನೀನು ನಿರಾಳಸಂಗಿಯಾಗಿ.
--------------
ಅಲ್ಲಮಪ್ರಭುದೇವರು
ಅಂಗಕ್ಕೆ ಕ್ರೀಯ ಅಂಗೀಕರಿಸಿದಲ್ಲಿ ಮನಕ್ಕೆ ಮುನ್ನವೆ ವ್ರತವ ಮಾಡಬೇಕು. ಆ ವ್ರತಕ್ಕೆ ಮುನ್ನವೆ ತಟ್ಟು-ಮುಟ್ಟು ತಾಗು-ಸೋಂಕು ಬಪ್ಪುದನರಿಯಬೇಕು. ಅವು ಬಂದು ಸೋಂಕಿದ ಮತ್ತೆ ಅಂಗವ ಬಿಟ್ಟೆಹೆನೆಂಬುದೆ ವ್ರತಕ್ಕೆ ಭಂಗ. ಇಂತೀ ಸಂದು ಸಂಶಯವನರಿಯಬೇಕೆಂದು ಅಂಗಕ್ಕೆ, ಕ್ರೀ ಆತ್ಮಂಗೆ ಅರಿವಿಂಗೆ ನೆರೆ ವ್ರತವ ಸೋಂಕಿಂಗೆ ಹೊರಗಾಗಿ ಮಾಡಬೇಕು, ಏಲೇಶ್ವರಲಿಂಗದಲ್ಲಿ ವ್ರತಸ್ಥನಾಗಬಲ್ಲಡೆ.
--------------
ಏಲೇಶ್ವರ ಕೇತಯ್ಯ
ಜಗಭಗದ ಊಧ್ರ್ವದಲ್ಲಿ ಮೋಹನದ ಗೊಟ್ಟಿ ಹುಟ್ಟಿತ್ತು. ಗೊಟ್ಟಿಯ ಪೂರ್ವದಲ್ಲಿ ಕಮಲವರಳಿತ್ತು. ಕಮಲ ಹೃತ್ಕಮಲದಲ್ಲಿ ಬಿಂದು ವ್ಯಂಜನದಿಂದ ಗುರುಲಿಂಗ ರೂಪಾಗಿ ಪುಲ್ಲಿಂಗ ಚರಿಸಿತ್ತು. ನಪುಂಸಕಲಿಂಗವಡಗಿತ್ತು. ಬಿಂದುವಿನಿಂದ ನಾದ, ಆ ಸುನಾದದಿಂದ ಕಳೆ, ಆ ಕಳೆಯ ಕಾಂತಿಯಿಂದ ಜಗ. ಇಂತೀ ಜಗದ ಉತ್ಪತ್ಯದಲ್ಲಿ ಹುಟ್ಟದೆ ಸ್ಥಿತಿಗೊಳಗಲ್ಲದೆ ಲಯಕ್ಕೆ ಹೊರಗಾಗಿ ಅರಿದುದು ಸ್ವಾನುಭಾವ ಸಂಬಂಧ ಇದು ಪಿಂಡ, ಪಿಂಡಜ್ಞಾನ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ವೇಷವ ತೊಟ್ಟಡೆ ಜಗಕ್ಕಳುಕಲ್ಲದೆ ಎನಗಳುಕಿಲ್ಲ. ನೀ ಲಿಂಗವ ಕೊಟ್ಟಡೆ ನೀ ನಿನ್ನನರಿದು ನೀ ಭವಪಾಶಕ್ಕೆ ಹೊರಗಾಗಿ ಎನ್ನ ಹೊರಗು ಮಾಡಬೇಕಲ್ಲದೆ, ಕುರುಡನ ಕಯ್ಯ ಕೋಲ ಕುರುಡಹಿಡಿದಂತೆ ನೀ ಕರ್ತನಲ್ಲ ನಾ ಭೃತ್ಯನಲ್ಲ, ನೀ ಮುಕ್ತನಲ್ಲ ನಾ ಸತ್ಯನಲ್ಲ, ನಿಮ್ಮಯ ಚಿತ್ತ ನೊಂದಡೆ ನಿಮ್ಮಲ್ಲಿಯೆ ಇರಲಿ ಎನಗಾ ನೋವಿಲ್ಲ. ನೀನರಿದು ಬದುಕು ಸದಾಶಿವಮೂರ್ತಿಲಿಂಗವಾಗಬಲ್ಲಡೆ.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->