ಮಾತಿನ ಹಂಗಿಲ್ಲದವಳಾದೆ ನಾನು. ಅಜಾತನ ಒಲುಮೆಯಿಲ್ಲದವಳಾದೆ ನಾನು. ಪ್ರಣವದ ಹಂಗಿಲ್ಲದವಳಾದೆ ನಾನು. ಪ್ರಸಾದದ ಕುರುಹಿಲ್ಲದವಳಾದೆ ನಾನು. ಪ್ರಯಾಣದ ಗತಿಯನಳಿದು ಪರಂಜ್ಯೋತಿ ವಸ್ತುವ ಕಂಡು ನಾನು ಬದುಕಿದೆನಯ್ಯ ಸಂಗಯ್ಯ.
ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ. ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ. ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ. ಭೈರವನು ಭಯಂಕರಹರನ ಮಗನೆಂಬ ಭವಹರಗುರುದ್ರೋಹಿಗಳು ನೀವು ಕೇಳಿರೆ. ಅಜಾತನ ಚರಿತ್ರ ಪವಿತ್ರ. ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ, ಆದಿಯ ಲಿಂಗ ಅನಾದಿಯ ಶರಣ ಗುರುವಿನ ಗುರು ಪರಮಗುರುವರ[ನ] ತೋರಿದೆನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು
ಲೆಕ್ಕದಲ್ಲಿ ಲೇಪಿತವಾದವರಿಗೇಕೆ ಅಜಾತನ ಸುದ್ದಿ ? ಪ್ರಖ್ಯಾತದಲ್ಲಿ ನೀತಿಯ ಹೇಳಿಹೆನೆಂದು ವೇಷದಲ್ಲಿ ಸುಳಿವರಿಗೇಕೆ ಪರದೋಷನಾಶನ ಸುದ್ದಿ ? ಇವರೆಲ್ಲರೂ ಈಶನ ಭಾಷೆಯಲ್ಲಿ ಸಿಕ್ಕಿ, ಭೂಭಾರಕರಾದರು, ನಿಃಕಳಂಕ ಮಲ್ಲಿಕಾರ್ಜುನಾ.
ಕಲಿಯುಗದಲ್ಲಿ ಹುಟ್ಟಿ ಆ ಕಲಿಯುಗದಲ್ಲಿ ಬೆಳೆದೆನಯ್ಯ. ಕೃತಯುಗದಲ್ಲಿ ಹುಟ್ಟಿ ಆ ಕೃತಯುಗದಲ್ಲಿ ಬೆಳೆದೆನಯ್ಯ. ದ್ವಾಪರದಲ್ಲಿ ಹುಟ್ಟಿ ಆ ದ್ವಾಪರದಲ್ಲಿಯೆ ಬೆಳೆದೆನಯ್ಯ. ತ್ರೇತಾಯುಗದಲ್ಲಿ ಹುಟ್ಟಿ ಆ ತ್ರೇತಾಯುಗದಲ್ಲಿಯೆ ಬೆಳೆದೆನಯ್ಯ. ಎನಗೆ ಪ್ರಾಣವಿಲ್ಲ ಎನಗೆ ಕಾಯವಿಲ್ಲ. ನಾನೇತರಲ್ಲಿಯೂ ಹೊಂದಿದವಳಲ್ಲ. ಅಜಾತನ ಕಲ್ಪಿತ ಸಂಬಂಧವಾಗಲು ಆನು ನಿಮ್ಮೈಕ್ಯದಲ್ಲಿ ನಿಂದೆನಯ್ಯ ಸಂಗಯ್ಯ.