ಅಥವಾ

ಒಟ್ಟು 17 ಕಡೆಗಳಲ್ಲಿ , 4 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಿಂಡವಾಯಿತ್ತು ನಾದಬಿಂದು ಕಳೆಗಳ ಕೂಡಿ ಕೊಂಡು ಸ್ವರೂಪ ತತ್ವವಿಡಿದು ಚೆನ್ನಾಗಿ ಧರೆಯಿಂದಲೆದು ಕರ್ಮೇಂದ್ರಿಯಂಗಳ ಜನನ ಸರಸದಿಂದ ಪಂಚವಿಷಯಂಗಳುತ್ಪತ್ಯ ಮೇಣ್ ಉರಿಯಿಂದ ಬುದ್ಧೀಂದ್ರಿಯಂಗಳಾದವು ನೋಡಿರೆ. ಮರುತನಿಂದೈದು ಪ್ರಾಣವಾಯುಗಳ ಜನನ ಹಿರಿದಪ್ಪ ಗಗನದಲ್ಲಿ ಚತುರ ಕರಣವು ಆತ್ಮ ನೆರೆ ಕೂಡಿ ಪಂಚವಿಂಶತಿತತ್ವವಿಡಿದು. | 1 | ಆರೂರ್ಮೆ ಏಳುಧಾತೈದುವಿಂಶತಿ ಅಂಶ ಈ ಮೂರು ತನುಗುಣವು ಇಪ್ಪತ್ತೈದು ಎರಡಂಗ ಆರು ಚಕ್ರವು ಕಮಲದೈವತ್ತೊಂದರಕ್ಷರಗಳಿಂ ವಾರಿಜ ದಾಕ್ಷಾಯಣಿ ಹರಿ ರುದ್ರ ಈಶ್ವರ ಮೀರಿದ ಸದಾಶಿವನದ್ಥಿದೈವಂಗಳು, ನವದ್ವಾರ ಚೆನ್ನಾಗಿ ಸಕಲಾರಂಭತತ್ವವಿಡಿದು. | 2 | ಮೂರು ಕರ್ಮಗಳು ಏಳ್ನೂರು ಎಪ್ಪುತ್ತು ಲೊ ಓರಣದ ಕರಣದ ಕರಣ ಅರುವತ್ತಾರು ಕೋಟಿಯಂ ಮೂ [ರಾ]ರು ಗುಣ ಅಂತರಂಗದಷ್ಟವೇದವು ಸಹಿತದ ಮೂರು ಮಲ ದಶವಾಯು ಅಂಗದೊಳು ಚರಿಸುತಿಹ ಮಾರುತ ಮನ ಮಂತ್ರಿ ಪ್ರಾಣ ನಾಯಕನರಸು ಶ ರೀರ ಜಗದೊಳುತ್ಪತ್ಯವಾಗಿದೆ ದೇವ. | 3 | ನೆಲ ನೀರು ಶಿಲೆಯಿಂದ ಬಿತ್ತಿಗಟ್ಟಿಯೆ ಅದನು ಸಲೆ ಗೋಮಯದಿ ಶುದ್ಧಮಾಡಿ ಸಾರಿಸುವಂತೆ ಎಲು ಚರ್ಮ ನರ ತೊಗಲು ಮಾಂಸ ಮಜ್ಜೆಯ ಕೂಡಿಯೆ ಚೆಲುವಾಗಿ ಈ ಕಾಯ ಗಾಳಿ ತುಂಬಿ ವೃಕ್ಷ ಉಲಿವಂತೆ ಶಿವಬೀಜವ ಚೈತನ್ಯದಿಂದಲಿ ಇಳೆಗೆ ತೋರುತಿರೆ ನೋಡಿದ ತಿಳಿಯಿರಣ್ಣ. | 4 | ಆದಿ ಮಧ್ಯ ಅಂತ್ಯ ಭಾಂಡದೊಳು ಶಿವ ತಾನೆ ಆದಿಯಾಗಿಯೆ ನೆಲದ ಮರೆಯಲ್ಲಿಹ ಧನದಂತೆ ಭೇದಿಸದೆಯಿಪ್ಪ ಭೇದವನಾರು ಅರಿಯರಲ್ಲ ಅಭೇದ್ಯಗುರು ಪಡುವಿಡಿ ಸಿದ್ಧಮಲ್ಲಿನಾಥನ ಪಾದವಿಡಿದ ತನುವು ಸುಕೃತದೇಹಿಯಾಗಿ ಮೇದಿನಿಗೆ ತೋರುತಿದೆ ಶಿವಶರಣರಿದ ತಿಳಿಯರೆ. | 5 |
--------------
ಹೇಮಗಲ್ಲ ಹಂಪ
ನೇತ್ರದ ಸೂತ್ರದಲ್ಲಿ ಸಕಲ ವಿಸ್ತಾರದ ರೂಪಿರ್ಪುದನಾರೂ ಅರಿಯರಲ್ಲ ! ಅದೆಂತೆಂದೊಡೆ :``ನೇತ್ರದೇವೋ ನ ಚ ಪರಃ'' ಎಂಬ ಶ್ರುತಿ ಸಾಕ್ಷಿಯಾಗಿ ನೇತ್ರವೆ ಶಿವನೆಂದರಿದು, ಆ ಶಿವನಿರ್ದಲ್ಲಿಯೆ ಕೈಲಾಸ ಮೇರು ಮಂದರವಿರ್ಪುವು. ಆ ಶಿವನಿರ್ದಲ್ಲಿಯೆ ಸಕಲಪ್ರಮಥಗಣಂಗಳಿರ್ಪರು. ಆ ಶಿವನಿರ್ದಲ್ಲಿಯೆ ಸಕಲತೀರ್ಥಕ್ಷೇತ್ರಂಗಳಿರ್ಪುವು. ಆ ಶಿವನಿರ್ದಲ್ಲಿಯೆ ಸಕಲವೇದವೇದಾಂತಗಳಿರ್ಪುವು. ಆ ಶಿವನಿರ್ದಲ್ಲಿಯೆ ಸಕಲ ಸಚರಾಚರಂಗಳಿರ್ಪುವು. ಇಂತೀ ಸಕಲವಿಸ್ತಾರವನೊಳಕೊಂಡ ನೇತ್ರದ ನಿಲವು ನೀನೇ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಮಥಗಣಂಗಳ ಪ್ರಸಾದಕೊಂಡದಲ್ಲಿ ಅಡಗಿದ ಗೊತ್ತ ಆರೂ ಅರಿಯರಲ್ಲ, ಬಸವಣ್ಣಂಗೆ ಪ್ರಭುದೇವರು ತೋರಿ ಕೊಟ್ಟನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ, ಪ್ರಾಣದೊಳಗೆ ಶಬ್ದವಿರ್ಪುದನಾರೂ ಅರಿಯರಲ್ಲ. ಪ್ರಾಣದೊಳಗೆ ಶಬ್ದವಿರ್ಪುದ ಎಲ್ಲರೂ ಬಲ್ಲರಲ್ಲದೆ, ಶಬ್ದದೊಳಗೆ ನಾದವಿರ್ಪುದನಾರೂ ಅರಿಯರಲ್ಲ. ಶಬ್ದದೊಳಗೆ ನಾದವಿರ್ಪುದ ಎಲ್ಲರೂ ಬಲ್ಲರಲ್ಲದೆ, ನಾದದೊಳಗೆ ಮಂತ್ರವಿರ್ಪುದನಾರೂ ಅರಿಯರಲ್ಲ. ಮಂತ್ರದೊಳಗೆ ಶಿವನಿರ್ಪುದ ಎಲ್ಲರೂ ಬಲ್ಲರಲ್ಲದೆ, ಶಿವನ ಕೂಡುವ ಅವಿರಳಸಮರಸವನಾರೂ ಅರಿಯರಲ್ಲ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು. ಶೀಲದ ಹೊಲಬನಾರೂ ಅರಿಯರಲ್ಲ. ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ ನೀರ ಬಳಸದಿರ್ದಡೆ ಶೀಲವೆ ? ಕೊಡಕ್ಕೆ ಪಾವಡವ ಹಾಕಿ ಚಿಲುಮೆಯ ಶೀತಳವ ತಂದಡೆ ಶೀಲವೆ ? ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ ? ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ ? ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ ? ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ ? ಅಲ್ಲಲ್ಲ. ಭವಿಕಾಣಬಾರದಂತಿರ್ದಡೆ ಶೀಲವೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಇಂತಿವೆಲ್ಲವು ಹೊರಗಣ ವ್ಯವಹಾರವು. ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ ಭವಿಯ ಕಳೆಯಲಿಲ್ಲ. ಮಾಯಾಮೋಹವೆಂಬ ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಡಲಿಲ್ಲ. ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ ಕೆರೆ ಬಾವಿಗಳ ನೀರ ನೀಗಲಿಲ್ಲ. ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ. ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ. ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ ಚಿತ್‍ಕೋಣವೆಂಬ ಚಿಲುಮೆಯಲ್ಲಿ ಚಿದಾಮೃತವೆಂಬ ಶೀತಳವ ತಂದು ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ. ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ ಭವಬಂಧನಂಗಳು ಹಿಂಗಲಿಲ್ಲ, ಜನನಮರಣಂಗಳು ಜಾರಲಿಲ್ಲ, ಸಂಸಾರದ ಮಾಯಾಮೋಹವ ನೀಗಲಿಲ್ಲ. ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ : ಹುತ್ತದೊಳಗಣ ಹಾವ ಕೊಲುವೆನೆಂದು ಮೇಲೆ ಹುತ್ತವ ಬಡಿದ ಅರೆಮರುಳನಂತಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತಂದೆ ತಾಯಿಗಳ ವಿಕಾರದ ಶುಕ್ಲಶೋಣಿತದ ಸಂಬಂಧವಪ್ಪ ಸರ್ವಸೂತಕತನುವಿಡಿದ ಪ್ರಾಣಿಗಳಿಗೆ ಯಮನ ಸಂಹಾರವ ಕಲ್ಪಿಸಿಕೊಂಡಿಪ್ಪ ಶಿವನ ಪರಿಯಾನಾರೂ ಅರಿಯರಲ್ಲ. ಈ ಮಾಯಿಕ ಸಂಬಂಧವಾದ ದೇಹ ತಾನೆಂದೆಂಬ ಮೂಢಾತ್ಮರ ನಾನೇನೆಂಬೆನಯ್ಯ?. ಆತ್ಮ ಅನಾತ್ಮನ ವಿಚಾರಿಸಿ ತಿಳಿಯಲು ಅಚೇತನವಾದ ಅನಾತ್ಮಸ್ವರೂಪೇ ದೇಹ; ಆ ದೇಹಕ್ಕೆ ಆಶ್ರಯವಾಗಿಪ್ಪ ಚೈತನ್ಯನೇ ಆತ್ಮನು. ಇದು ಕಾರಣ, ದೇಹವೇ ಜಡ; ಆತ್ಮನೇ ಅಜಡನು. ಅದೇನುಕಾರಣ ದೇಹ ಜಡ, ಆತ್ಮನು ಅಜಡನುಯೆಂದಡೆ; ದೇಹವೇ ಮಾಯಾಕಾರ್ಯವಾದ ಕಾರಣ ಜಡ; ಇದು ಕಾರಣ, ಇಂದ್ರಿಯಂಗಳು ಜಡ; ವಿಷಯಂಗಳು ಜಡ; ಕರಣಂಗಳು ಜಡ; ವಾಯುಗಳು ಜಡ; ಆತ್ಮನೇ ಅಜಡನು. ಆತ್ಮನದೇನುಕಾರಣ ಅಜಡನೆಂದರೆ ಶಿವಾಂಶಿಕನಾದಕಾರಣ ಅಜಡನು. ಆ ಶುದ್ಧ ಚಿದ್ರೂಪನಾದ ಆತ್ಮನು ಅವಿದ್ಯಾಸಂಬಂಧವಾದ ದೇಹೇಂದ್ರಿಯದ ಸಂಗದಿಂದ ಸಂಸಾರಿಯಾಗಿಪ್ಪನು ನೋಡಾ. ಈ ಸಂಸಾರವ್ಯಾಪ್ತಿಯಹಂಥ ಜೀವನದ ಗುಣವ ಕಳೆದುಳಿದಿಹನೆಂದಡೆ ದೇವ ದಾನರ ಮಾನವರಿಗೆ ದುರ್ಲಭ ನೋಡಾ. ಈ ಮಾಯಾಪ್ರಪಂಚ ನಿವೃತ್ತಿಯಮಾಡುವ ಮಹದರುಹು ತಾನೆಂತಾದೋ ಅಂತಪ್ಪ ಅರುಹುಳ್ಳ ಶರಣರಿಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುಶಿಷ್ಯ ಸಂಬಂಧವೆಂದು ನುಡಿಯುತಿರ್ಪರೆಲ್ಲರು; ಗುರುಶಿಷ್ಯ ಸಂಬಂಧವನಾರೂ ಅರಿಯರಲ್ಲ ! ಗುರುಶಿಷ್ಯ ಸಂಬಂಧವೆಂತೆಂದೊಡೆ ಹೇಳಿಹೆವು ಕೇಳಿರೋ ಸದ್ಭಕ್ತ ಶರಣಜನಂಗಳೆಲ್ಲರು. ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವ ಕಾಲದಲ್ಲಿ ಆ ಶಿಷ್ಯನ ಸ್ಥೂಲತನು ಸೂಕ್ಷ್ಮತನು ಕಾರಣತನುವೆಂಬ ತನುತ್ರಯಂಗಳಲ್ಲಿ ಮುಸುಕಿದ ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳ ಕಳೆದು, ಮಾಯಾಪ್ರಕೃತಿಕಾಯದ ಪೂರ್ವಾಶ್ರಯವನು ಚಿದಗ್ನಿಯಿಂದೆ ಸುಟ್ಟು ಚಿತ್ಕಾಯವೆಂದೆನಿಸಿ, ಆ ಚಿತ್ಕಾಯಸ್ವರೂಪವಾದ ಶಿಷ್ಯನ ಮಸ್ತಕದ ಮೇಲೆ ಹಸ್ತವನಿರಿಸಿ ಮಥನವ ಮಾಡಿ, ಶಿಷ್ಯನ ಭಾವದ ಘಟ್ಟಿಯನೆ ಕರದಲ್ಲಿ ಕೊಡುವುದು. ಅದೆಂತೆಂದೊಡೆ : ``ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿ ಸಮಪ್ರಭಾ | ತಚ್ಚೋಧ್ರ್ವಂತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಳಾ || ಯಥಾಕಲಾಸ್ತಥಾಭಾವೋ ಯಥಾಭಾವಸ್ತಥಾ ಮನಃ | ಯಥಾಮನಸ್ತಥಾ ದೃಷ್ಟಿಃ ಯಥಾದೃಷ್ಟಿಸ್ತಥಾ ಸ್ಥಲಂ || ಏವಂ ಭೇದಾಃ ಕಳಾದೇವಿ ಸದ್ಗುರುಶಿಷ್ಯಮಸ್ತಕೇ | ಹಸ್ತಾಬ್ಜಮಥನಗ್ರಾಹ್ಯಂ ತಸ್ಯ ಭಾವಃ ಕರೋದಿತಃ || ಏತೇ ಗುರುಕರಾಜಾಜತಾಃ ಲಿಂಗಭಕ್ತಾ ವಿಭೇದತಃ | ನಾದಬಿಂದುಕಳಾತೀತಂ ಗುರೂಣಾಂ ಲಿಂಗಮುದ್ಭವಂ ||'' -ಪರಮರಹಸ್ಯ ಎಂಬ ಶಿವಾಗಮೋಕ್ತವಾಗಿ, ಆ ಶಿಷ್ಯನ ಪಶ್ಚಿಮದಿಶೆಯಲ್ಲಿ ಬೆಳಗುತಿರ್ಪ ನಿತ್ಯನಿರಂಜನ ಪರಮಕಳೆಯ ಧ್ಯಾನಿಸಿ ಭಾವಸ್ಥಲಕ್ಕೆ ತಂದು, ಆ ಭಾವಸ್ಥಲದಿಂದೆ ಮನಸ್ಥಲಕ್ಕೆ ತಂದು, ಆ ಮನಸ್ಥಲದಿಂದೆ ದೃಷ್ಟಿಸ್ಥಲಕ್ಕೆ ತಂದು, ಆ ದೃಷ್ಟಿಸ್ಥಲದಿಂದೆ ಕರಸ್ಥಲಕ್ಕೆ ತಂದು, ಸಾಕಾರಲಿಂಗಮೂರ್ತಿಯಲ್ಲಿ ತುಂಬಿ ಇಷ್ಟಲಿಂಗವೆನಿಸಿ ಕರಸ್ಥಲದಲ್ಲಿ ಮೂರ್ತಿಗೊಳಿಸಿ ಆ ಲಿಂಗಕ್ಕೆ ಜಂಗಮದ ಪಾದತೀರ್ಥ ಪ್ರಸಾದವನೆ ಪ್ರಾಣಕಳೆಯೆಂದರ್ಪಿಸಿ, ಮತ್ತಂ, ಆ ಇಷ್ಟಲಿಂಗವೆ ಅನಿಷ್ಟಪಂಚಕಂಗಳೆಂಬ ಕತ್ತಲೆಯನೋಡಿಸುವುದಕ್ಕೆ ಚಿತ್ಸೂರ್ಯನೆಂದು ನಂಬುಗೆಯನಿಂಬುಗೊಳಿಸಿ, ಮತ್ತಮಾಲಿಂಗದಲ್ಲಿ ವೃತ್ತ ಕಟಿ ವರ್ತುಳ ಗೋಮುಖ ನಾಳ ಗೋಳಕವೆಂಬ ಆರು ಸ್ಥಾನಂಗಳ ತೋರಿ, ಆ ಆರು ಸ್ಥಾನಂಗಳಲ್ಲಿ ನಕಾರ ಮಕಾರ ಶಿಕಾರ ವಕಾರ ಯಕಾರ ಓಂಕಾರ ಎಂಬ ಆರು ಪ್ರಣವಂಗಳನೆ ಬೋಧಿಸಿ, ಆ ಆರು ಪ್ರಣವಂಗಳನೆ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಎಂಬ ಆರು ಲಿಂಗಗಳೆಂದರುಹಿ, ಆ ಆರು ಲಿಂಗಂಗಳಿಗೆ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ ಎಂಬ ಆರು ಇಂದ್ರಿಯಂಗಳನೆ ಆರು ಮುಖಗಳೆಂದು ತಿಳುಹಿ, ಆ ಆರು ಮುಖಂಗಳಿಗೆ ಗಂಧ ರುಚಿ ರೂಪು ಸ್ಪರ್ಶನ ಶಬ್ದ ತೃಪ್ತಿ ಎಂಬ ಆರು ಪದಾರ್ಥಂಗಳನು ಶ್ರದ್ಧೆ ನಿಷೆ* ಸಾವಧಾನ ಅನುಭಾವ ಆನಂದ ಸಮರಸ ಎಂಬ ಆರು ಭಕ್ತಿಗಳಿಂದರ್ಪಿಸುವ ಸಕೀಲದ ವಿವರವ ತೋರಬಲ್ಲಾತನೇ ಗುರು. ಆ ಗುರುವಿನ ಕರುಣದಿಂದೆ ಪಡೆದ ಇಷ್ಟಲಿಂಗವನು ಕರಸ್ಥಲ ಮನಸ್ಥಲ ಭಾವಸ್ಥಲಮಂಟಪದಲ್ಲಿ ಮೂರ್ತಿಗೊಳಿಸಿ, ಸಗುಣಪೂಜೆ ನಿರ್ಗುಣಪೂಜೆ ಕೇವಲ ನಿರ್ಗುಣಪೂಜೆಯ ಮಾಡಿ, ಆ ಲಿಂಗದ ಮಹಾಬೆಳಗಿನೊಳಗೆ ತನ್ನಂಗದ ಕಳೆಯನಡಗಿಸಿ, ಉರಿ-ಕರ್ಪುರ ಸಂಯೋಗದಂತೆ ಅವಿರಳ ಸಮರಸವಾಗಿರ್ಪಾತನೆ ಶಿಷ್ಯನು. ಇಂತೀ ಅರುಹು ಆಚಾರಸನ್ನಿಹಿತ ಗುರುಶಿಷ್ಯರಿಬ್ಬರು ಬಯಲು ಬಯಲ ಬೆರದಂತೆ ನಿರವಯಲ ಪರಬ್ರಹ್ಮದಲ್ಲಿ ನಿಷ್ಪತ್ತಿಯನೈದಿರ್ಪರು ನೋಡಾ ! ಇಂತೀ ಅರುಹಿನ ವಿಚಾರವನರಿಯದೆ ಮಾಡುವ ಮಾಟವೆಲ್ಲ ಅಜ್ಞಾನಗಡಣದೊಳಗು. ಈ ಅಜ್ಞಾನಗುರುಶಿಷ್ಯರ ವಿಧಿಯೆಂತಾಯಿತ್ತೆಂದಡೆ, ಹುಟ್ಟುಗುರುಡನ ಕೈಯ ಕೆಟ್ಟಗಣ್ಣವ ಹಿಡಿದು ಬಟ್ಟೆಯ ಕಾಣದೆ ಕಮರಿಯ ಬಿದ್ದು ಸತ್ತಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನವಖಂಡ ಮಂಡಲದೊಳಗೊಂದು ಪುಂಡರೀಕವೆಂಬ ಹುತ್ತವಿರ್ಪುದು. ಆ ಹುತ್ತದೊಳಗೊಂದು ವಿಚಿತ್ರ ಸರ್ಪವಿರ್ಪುದು. ಆ ಸರ್ಪನ ಬಾಯೊಳಗೊಂದು ಬೆಲೆಯಿಲ್ಲದ ರತ್ನವಿರ್ಪುದು. ಈ ರತ್ನದ ಬೆಳಗಿನೊಳಗೆ ಈರೇಳುಲೋಕದ ಸುಳುಹಿರ್ಪುದನಾರೂ ಅರಿಯರಲ್ಲ ! ಆ ಹತ್ತುವ ಕೆಡಿಸದೆ ಸರ್ಪನ ಕೊಂದು ರತ್ನವ ಸಾಧ್ಯಮಾಡಿಕೊಂಡಾತನೆ ಮುಕ್ತಿರಾಜ್ಯಕ್ಕೆ ಅರಸನಪ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅನುಭಾವ ಅನುಭಾವವೆಂದು ನುಡಿವುತಿರ್ಪರೆಲ್ಲರು. ಅನುಭಾವದ ಕೀಲವನಾರೂ ಅರಿಯರಲ್ಲ ! ಅನುಭಾವವೆಂದೊಡೆ, ಅಂತರಂಗದ ಹೃದಯಕಮಳದ ಅಷ್ಟದಳಂಗಳ ಮೆಟ್ಟಿ ಚರಿಸುವ ಜೀವಹಂಸನ ಕೊಂದು, ಇಂದ್ರದಿಕ್ಕಿನ ಎಸಳಿನಲ್ಲಿ ತೋರುವ ಭಿನ್ನಭಕ್ತಿಯನಳಿದು, ಅಗ್ನಿದಿಕ್ಕಿನ ಎಸಳಿನಲ್ಲಿ ತೋರುವ ಜಡನಿದ್ರೆಯ ಮರ್ದಿಸಿ, ಯಮದಿಕ್ಕಿನ ಎಸಳಿನಲ್ಲಿ ತೋರುವ ವ್ಯಸನವಿಕಾರವ ಮಸುಳಿಸಿ, ನೈಋತ್ಯದಿಕ್ಕಿನ ಎಸಳಿನಲ್ಲಿ ತೋರುವ ಪಾಪದ ದುಷ್ಕøತವ ಪಲ್ಲಟಿಸಿ, ವರುಣದಿಕ್ಕಿನ ಎಸಳಿನಲ್ಲಿ ತೋರುವ ಮಂದಗಮನವ ಪರಿಹರಿಸಿ, ವಾಯುವ್ಯದಿಕ್ಕಿನ ಎಸಳಿನಲ್ಲಿ ತೋರುವ ದುಷ್ಟಾಚಾರವ ದೂರಮಾಡಿ, ಕುಬೇರದಿಕ್ಕಿನ ಎಸಳಿನಲ್ಲಿ ತೋರುವ ದ್ರವ್ಯಾಪೇಕ್ಷೆಯ ಧಿಕ್ಕಿರಿಸಿ, ಈಶಾನ್ಯದಿಕ್ಕಿನ ಎಸಳಿನಲ್ಲಿ ತೋರುವ ವನಿತಾದಿ ವಿಷಯ ಪ್ರಪಂಚುಗಳ ಈಡಾಡಿ ನೂಂಕಿ, ಇಂತೀ ಅಷ್ಟದಳಂಗಳ ಹಿಡಿದು ತೋರುವ ಪ್ರಕೃತಿಗುಣಂಗಳ ನಷ್ಟಮಾಡಿ, ನಟ್ಟನಡು ಚೌದಳಮಧ್ಯದಲ್ಲಿರ್ದ ಪರಬ್ರಹ್ಮವನು ನೆಟ್ಟನೆ ಕೂಡಿ, ಅಷ್ಟಾವಧಾನಿಯಾಗಿ, ಅಚಲಿತಜ್ಞಾನದಲ್ಲಿ ಸುಳಿಯಬಲ್ಲಡೆ ಆತನೆ ನಿಜಾನುಭಾವಿ, ಆತನೆ ನಿತ್ಯಮುಕ್ತನು, ಆತನೆ ನಿರ್ಭೇದ್ಯನು. ಇಂತೀ ಭೇದವನರಿಯದೆ, ಮಾತುಕಲಿತ ಭೂತನಂತೆ ಆ ಮಾತು ಈ ಮಾತು ಹೋ ಮಾತುಗಳ ಕಲಿತು ಕಂಡಕಂಡಲ್ಲಿ ನಿಂದನಿಂದಲ್ಲಿ ಮುಂದುವರಿದು ಹರಟೆಗುಟ್ಟುವ ಒಣ ಹರಟೆಗಾರರ ಶಿವಾನುಭಾವಿಗಳೆಂತೆಂಬೆನಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಜಂಗಮ ಜಂಗಮವೆಂದು ನುಡಿಯುತಿರ್ಪರೆಲ್ಲರು, ಜಂಗಮದ ಘನವನಾರು ಅರಿಯರಲ್ಲ. ಜಂಗಮವೆಂದಡೆ ನಿರ್ನಾಮ ನಿರ್ದೇಹಿ ; ಜಂಗಮವೆಂದಡೆ ನಿರ್ಜಡ ನಿರಾವರಣ ; ಜಂಗಮವೆಂದಡೆ ನಿಃಸೀಮ ನಿರ್ಜಾತ ; ಜಂಗಮವೆಂದಡೆ ನಿರುಪಮ ನಿರ್ಭೇದ್ಯ ; ಜಂಗಮವೆಂದಡೆ ನಿರಾಳ ನಿರಾಲಂಬ ; ಜಂಗಮವೆಂದಡೆ ನಿರಂಜನ ನಿರ್ವಯಲು. ಇಂತಪ್ಪ ಸಚ್ಚಿದಾನಂದ ನಿತ್ಯಪರಿಪೂರ್ಣ ಜಂಗಮದ ಪರಮಪ್ರಸಾದವ ಕೊಂಡು ಎನ್ನ ಪ್ರಾಣದ ತೊಡಕ ಹರಿದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವಂಗೆ ಐದುಮುಖವಿರ್ಪುದ ಸಕಲರು ಬಲ್ಲರು. ಭಕ್ತಂಗೆ ಐದುಮುಖವಿರ್ಪುದನಾರೂ ಅರಿಯರಲ್ಲ. ಆ ಭಕ್ತಂಗೆ ಗುರು ಒಂದು ಮುಖ, ಲಿಂಗ ಒಂದು ಮುಖ, ಜಂಗಮ ಒಂದು ಮುಖ, ಪಾದೋದಕ ಒಂದು ಮುಖ, ಪ್ರಸಾದ ಒಂದು ಮುಖ. ಇಂತೀ ಪಂಚಮುಖವನುಳ್ಳ ಸದ್‍ಭಕ್ತನೇ ಸಾಕ್ಷಾತ್ ಪರಶಿವನು ತಾನೆ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸ್ವರ್ಗಕ್ಕೆ ಏಳು ಸೋಪಾನವಿರ್ಪುದನು ಆರೂ ಅರಿಯರಲ್ಲ ! ಅದು ಹೇಗೆಂದೊಡೆ : ಜಂಗಮವ ಕಾಣುತ್ತ ಸದ್‍ಭಕ್ತನು ಕುಳಿತಾಸನವ ಬಿಟ್ಟು ಇದಿರೆದ್ದು ನಡೆವುದೇ ಒಂದನೆಯ ಸೋಪಾನ. ಮನಕರಗಿ ತನು ಉಬ್ಬಿ ಕಂಗಳಲ್ಲಿ ಪರಿಣಾಮಜಲವುಕ್ಕಿ ಅವರ ಚರಣಕಮಲದ ಮೇಲೆ ಸುರಿವಂತೆ ಸಾಷ್ಟಾಂಗದಿಂದೆ ನಮಸ್ಕರಿಸುವುದೇ ಎರಡನೆಯ ಸೋಪಾನ. ಆ ಜಂಗಮವ ತನ್ನ ಮಠಕ್ಕೆ ಬಿಜಯಂಗೈಸಿ ಉನ್ನತಾಸನದ ಗದ್ದುಗೆಯ ಮೇಲೆ ಕುಳ್ಳಿರಿಸಿ ಪಾದಪ್ರಕ್ಷಾಲನವ ಮಾಡುವುದೇ ಮೂರನೆಯ ಸೋಪಾನ. ಆ ಜಂಗಮದೇವರ ಅಷ್ಟವಿಧಾರ್ಚನೆ - ಷೋಡಶೋಪಚಾರಗಳಿಂದರ್ಚಿಸಿ, ಪಾದಿತೀರ್ಥವ ಕೊಂಬುವುದೇ ನಾಲ್ಕನೆಯ ಸೋಪಾನ. ಆ ಜಂಗಮಕ್ಕೆ ಮೃಷ್ಟಾನ್ನಪಾನಂಗಳಿಂದೆ ತೃಪ್ತಿಪಡಿಸುವುದೇ ಐದನೆಯ ಸೋಪಾನ. ಆ ಜಂಗಮದ ಒಕ್ಕುಮಿಕ್ಕಪ್ರಸಾದವ ಕೊಂಬುವುದೇ ಆರನೆಯ ಸೋಪಾನ. ಆ ಜಂಗಮದಲ್ಲಿ ಅನುಭಾವವ ಬೆಸಗೊಂಬುವುದೇ ಏಳನೆಯ ಸೋಪಾನ. ಇಂತೀ ಸಪ್ತಸೋಪಾನಂಗಳ ಬಲ್ಲ ಸದ್ಭಕ್ತಂಗೆ ಕೈಲಾಸ ಕರತಾಳಮಳಕವಲ್ಲದೆ ತನುವ ಸವೆಸದೆ, ಮನವ ದಂಡಿಸದೆ, ಧನವ ಸಮರ್ಪಿಸದೆ, ಮಿಥ್ಯಾಸಂಸಾರದಲ್ಲಿ ಸಿಲ್ಕಿ ಹೊತ್ತುಗಳೆದು ಹೊಡೆದಾಡಿ ಸತ್ತು ಹೋಗುವ ವ್ಯರ್ಥಜೀವಿಗಳಿಗೆ ಇನ್ನೆತ್ತಣ ಕೈಲಾಸವಯ್ಯ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಪ್ರಾಣಲಿಂಗಸಂಬಂಧಿಗಳೆಂದು ನುಡಿಯುವವರು ಅನೇಕರುಂಟು: ಪ್ರಾಣಲಿಂಗದ ಕಳೆಯನಾರೂ ಅರಿಯರಲ್ಲ ! ಪ್ರಾಣಲಿಂಗದ ಕಳೆ ಎಂತೆಂದಡೆ : ಆಧಾರದಲ್ಲಿ ಎಳೆಯ ಸೂರ್ಯನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಸ್ವಾಧಿಷಾ*ನದಲ್ಲಿ ಪೂರ್ಣಚಂದ್ರನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಮಣಿಪೂರಕದಲ್ಲಿ ಮಿಂಚಿನಲತೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಅನಾಹತದಲ್ಲಿ ಸ್ಫಟಿಕದ ಸಲಾಕೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ವಿಶುದ್ಧಿಯಲ್ಲಿ ಮೌಕ್ತಿಕದ ಗೊಂಚಲದಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಆಜ್ಞೇಯದಲ್ಲಿ ರತ್ನದ ದೀಪ್ತಿಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಬ್ರಹ್ಮರಂಧ್ರದಲ್ಲಿ ಸ್ವಯಂಜ್ಯೋತಿಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಶಿಖೆಯಲ್ಲಿ ಶುದ್ಧತಾರೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಪಶ್ಚಿಮದಲ್ಲಿ ಉಳುಕ ನಕ್ಷತ್ರದಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಇಂತಪ್ಪ ಪ್ರಾಣಲಿಂಗದ ಕಳೆಯನರಿಯದೆ ಪ್ರಾಣನ ಸಂಯೋಗಿಸಿ ಪ್ರಳಯವ ಗೆಲಲರಿಯದೆ ಮಾತಿನ ಮಾಲೆಯ ನುಡಿದು ನೀತಿಶಾಸ್ತ್ರ ಘಾತಕದ ಕಥೆಗಳ ಕಲಿತು ಓತು ಎಲ್ಲರೊಡನೆ ಹೇಳಿ ಚಾತುರ್ಯನೆನಿಸಿಕೊಂಡು ಒಡಲ ಹೊರೆವ ಉದರಘಾತಕರ ಪ್ರಾಣಲಿಂಗಸಂಬಂಧಿಗಳೆಂತೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಯೋಗ ಯೋಗವೆಂದು ನುಡಿಯುತಿರ್ಪರೆಲ್ಲರು ; ಯೋಗದೊಳಗಣ ಯೋಗವನಾರೂ ಅರಿಯರಲ್ಲ ! ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗವೆಂದು ಯೋಗ ಚತುರ್ವಿಧದೊಳಗೆ, ಮೊದಲು ಮಂತ್ರಯೋಗದ ಭೇದವೆಂತೆಂದೊಡೆ : ಆವನಾನೊಬ್ಬ ಯೋಗಸಿದ್ಧಿಯ ಪಡೆವಾತನು ಪಕ್ಷಿಗಳುಲಿಯದ ಮುನ್ನ, ಪಶುಗಳು ಕೂಗದ ಮುನ್ನ, ಪ್ರಕೃತಿ ಆತ್ಮರು ಸುಳಿಯದ ಮುನ್ನ, ಶುಭಮುಹೂರ್ತದಲ್ಲಿ ಶಿವಧ್ಯಾನಮಂ ಮಾಡುತೆದ್ದು ಶೌಚಾಚಮನ ದಂತಧಾವನಂಗಳಂ ಮಾಡಿ ಜಲಸ್ನಾನಂಗೈದು, ಏಕಾಂತಸ್ಥಳದಲ್ಲಿ ಕಂಬಳಾಸನದಿ ಗದ್ದುಗೆಯಲ್ಲಿ ಪೂರ್ವಮುಖವಾಗಲಿ ಉತ್ತರಮುಖವಾಗಲಿ ತನಗಿಷ್ಟಾಸನದಲ್ಲಿ ಕುಳ್ಳಿರ್ದು, ಭಸ್ಮಸ್ನಾನಂಗಳನಾಚರಿಸಿ ಆಗಮೋಕ್ತದಿಂದೆ ಈಶ್ವರಾರ್ಚನೆಯಂ ಮಾಡಿ ಬಳಿಕ ಅಂತರಾಳಹೃದಯಕಮಲ ಕರ್ಣಿಕಾಸ್ಥಲದಲ್ಲಿಹ ಹಕಾರವೆಂಬ ಬೀಜಾಕ್ಷರಮಧ್ಯದಲ್ಲಿ ಮೂರ್ತಿಧ್ಯಾನಂ ಮಾಡುವುದೆಂತೆನೆ : ಶುದ್ಧಪದ್ಮಾಸನನಾಗಿ ಚಂದ್ರಕಲಾಧರನಾದ ಪಂಚಮುಖ ತ್ರಿನೇತ್ರಂಗಳುಳ್ಳ ಶೂಲ ವಜ್ರ ಖಡ್ಗ ಪರಶು ಅಭಯಂಗಳಾಂತ ಪಂಚ ದಕ್ಷಿಣಹಸ್ತಂಗಳುಳ್ಳ ನಾಗ ಪಾಶ ಘಂಟೆ ಅನಲ ಅಂಕುಶಂಗಳಾಂತ ಪಂಚ ವಾಮಕರಂಗಳುಳ್ಳ ಕಿರೀಟಾದ್ಯಾಭರಣಂಗಳಿಂದಲಂಕೃತನಾದ ಸ್ಫಟಿಕದ ಕಾಂತಿಮಯನಾದ ಸದಾಶಿವಮೂರ್ತಿಯ ಧ್ಯಾನಿಸುತ್ತೆ , ``ಓಂ ಅಸ್ಯ ಶ್ರೀಷಡಕ್ಷರಮಂತ್ರಸ್ಯ ವಾಮದೇವ ಋಷಿಃ ಪಂಕ್ತಿಃ ಛಂದಃ ಶ್ರೀಸದಾಶಿವೋ ದೇವತಾ ಓಂ ಬೀಜಂ ಉಮಾಶಕ್ತಿಃ ಉದಾತ್ತಸ್ವರಃ ಶ್ವೇತವರ್ಣಃ ಸದಾಶಿವಪ್ರೀತ್ಯರ್ಥೇ ಜಪೇ ವಿನಿಯೋಗಃ|'' ಎಂಬ ಷಡಕ್ಷರಮಂತ್ರಾನುಷಾ*ನಾದಿ ಅಖಿಳಮಂತ್ರಗಳಿಂದೆ ಕರಶಿರಾದಿ ಷಡಂಗನ್ಯಾಸಂಗಳಂ ಮಾಡಿ ನಿತ್ಯಜಪಾನುಷಾ*ನಮಂ ಮೋಕ್ಷಾರ್ಥಿಯಾದಾತನು ರುದ್ರಾಕ್ಷಿ ನೂರೆಂಟರಿಂದಾದಡೂ ಇಪ್ಪತ್ತೈದರಿಂದಾದಡೂ ಆಗಮೋಕ್ತಮಾರ್ಗದಿಂದೆ ಜಪಮಾಲಿಕೆಯಿಂದೆ ಅಂಗುಷ*ಮಧ್ಯಮೆಗಳಿಂದೆ ಉಪಾಂಶುರೂಪದಿಂದೆ ಧ್ಯಾನಪೂರ್ವಕದಿಂ ಜಪವಂ ಮಾಡುವುದೆ ಮಂತ್ರಯೋಗವೆನಿಸಿತ್ತು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->