ಅಥವಾ

ಒಟ್ಟು 19 ಕಡೆಗಳಲ್ಲಿ , 10 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದವೆಂಬುದು ವೇದ್ಯರಿಗಲ್ಲದೆ ಸಾಧ್ಯವಲ್ಲ. ಅದೆಂತೆಂದಡೆ : ಬಿಂದು ವ್ಯಂಜನ ಗುರು ಲಘು ಸಮಾಸ ವಿಭಕ್ತಿಯ ನೇಮ ಬೀಜಾಕ್ಷರ ಐವತ್ತೆರಡರ ಭೇದದೊಳಗಲ್ಲದೆ, ಇಂತಿವೆಲ್ಲವೂ ಒಂದರಲ್ಲಿ ಹುಟ್ಟಿ, ಒಂದರಲ್ಲಿ ಬೆಳೆದು, ಒಂದರಲ್ಲಿ ಲಯವಹ ಕಾರಣ, ಇಂತೀ ವೇದಿಗಳೆಲ್ಲರೂ ವೇದಾಂತ ಸಿದ್ಧಾಂತದನುವನರಿಯದೆ, ಯಾಗವ ಮಾಡಿಹೆವೆಂದು ತಿಲ ಘೃತ ಸಮಿದೆ ಮೊದಲಾದ ಅಜಹತ ದಿಗ್ಭಂಧನಂಗಳಲ್ಲಿ ಪ್ರವರ್ತನ ಗ್ರಹಂಗಳಲ್ಲಿ ಕರ್ಮವ ಮಾಡಿ, ಅಗ್ನಿಗಾಹುತಿ ಕೊಟ್ಟಲ್ಲಿ , ಆತ ವೇದಾಂತನೆ ಬಲುರೋಗಾಂತನಲ್ಲದೆ ? ಇನ್ನು ವೇದಾಂತಸಿದ್ಧಿಯ ಕೇಳಿರೊ : ಪೂರ್ವದಲ್ಲಿ ಹುಟ್ಟುವದನರಿದು, ಮಧ್ಯದಲ್ಲಿ ಬೆಳೆವುದ ನಿಧಾನಿಸಿ, ಉತ್ತರದಲ್ಲಿ ಕಟ್ಟಕಡೆ ಎಂಬುದ ವಿಚಾರಿಸಿ ಲಕ್ಷಿಸಿ, ಇಂತೀ ತ್ರಿವಿಧದ ಭೇದವ ಕಿತ್ತುಹಾಕಿ, ಒಂ ಎಂಬ ಅರ್ಥವ ತಿಳಿದು, ನಯೆಂಬ ನಕಾರಮಂ ತಿಳಿದು, ನಾನಾರೆಂಬುದ ಭಾವಿಸಿ, ಮಯೆಂಬ ಮದರೂಪಂ ವರ್ಜಿಸಿ, ಶಿಯೆಂಬ ಶಿಕಾರವ ಸ್ವೀಕರಿಸಿ, ಯಯೆಂಬ ಯಕಾರವ ನಾಲ್ಕರಲ್ಲಿ ಏಕೀಕರಿಸಿದ ಮತ್ತೆ , ವೇದವೇದ್ಯನು ನೋಡಾ, ಲಲಾಮಬ್ಥಿಮಸಂಗಮೇಶ್ವರಲಿಂಗವು.
--------------
ವೇದಮೂರ್ತಿ ಸಂಗಣ್ಣ
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ; ಆಯುಷ್ಯ ತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ. ನೆಲನನಗೆದು ಮಡುಗದಿರಾ, ನೆಲ ನುಂಗಿದಡುಗುಳುವುದೆ ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ ! ನಿನ್ನ ಮಡದಿಗಿರಲೆಂದಡೆ, ಆ ಮಡದಿಯ ಕೃತಕ ಬೇರೆ; ನಿನ್ನ ಒಡಲು ಕಡೆಯಲು ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ, ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು. 201
--------------
ಬಸವಣ್ಣ
ಆ ಪರಶಿವನ ಮಾಯಾಸ್ವರೂಪವಾದ ಈ ಲೋಕದ ಜನರಿಗೆ ಪೂರ್ವಪುಣ್ಯವೊದಗಿ, ಸಂಸಾರ ಹೇಯವಾಗಿ, ಗುರುಕಾರುಣ್ಯವ ಪಡೆದು, ಆತ್ಮಜ್ಞಾನ ತಿಳಿಯಲಿಕ್ಕೆ, ಮನಗೊಟ್ಟು, ತತ್ವವ ಶೋಧಿಸಿ, ಪುರಾತನ ವಚನ ಹಾಡಿಕೊಂಡು ಅನುಭವಿಯಾಗಿ, ನಾನೇ ಅನುಭಾವಿ ನಾನೇ ಪ್ರಭು, ನಾನೇ ಪರಬ್ರಹ್ಮವ ಬಲ್ಲ ಪರಮಜ್ಞಾನಿಯೆಂದು, ಬಸವಾದಿ ಪೂರ್ವಪ್ರಮಥರ ಪುರಾತರ ಮಹಾಗಣಂಗಳ ಜರಿದು, ಈ ಭುವನದಲ್ಲಿ ಇನ್ನಾ ್ಯರು ನಿಜವನರಿತವರಿಲ್ಲೆಂದು ಅಹಂಕರಿಸಿ, ನಾವು ಮಹಾಜ್ಞಾನಿಗಳು, ನಾವು ಕೇವಲ ಶಿವಾಂಶಿಕರು, ನಮ್ಮನ್ನಾರು ಅರಿಯರು, ನಮ್ಮ ಬಲ್ಲವರು ಪುಣ್ಯವಂತರು, ನಮ್ಮನ್ನರಿಯದವರು ಪಾಪಿಷ*ರು. ನಾವು ಮಹತ್ವ ಉಳ್ಳವರು, ನಾವು ಮಕ್ಕಳ ಕೊಡುವೆವು, ರೋಗ ಕಳೆಯುವೆವು, ಬ್ರಹ್ಮಹತ್ಯಾದಿ ಪಿಶಾಚಿಯ ಸೋಂಕು ಬಿಡಿಸುವೆವು ಎಂದು ವಿಭೂತಿ ಮಂತ್ರಿಸಿಕೊಟ್ಟು, ಅವರ ಮನೆಯಲ್ಲಿ ಶಿವಪೂಜೆಯ ಪಸಾರವನಿಳಿಯಿಟ್ಟು, ಆ ರೋಗದವರನ್ನು ಮುಂದೆ ಕೂಡ್ರಿಸಿಕೊಂಡು, ತಾ ಕೂತು ಕಣ್ಣು ಮುಚ್ಚಿ, ಒಳಗೆ ಬೆಳಗವ ಕಂಡು, ಕಣ್ದೆರೆದು, ಬಿರಿಗಣ್ಣಿನಿಂದ ನೋಡ್ತ ಹಡ್ತ ಹುಡ್ತ ಮಾಡಿ ಪರಿಣಾಮವಾಗಲೆಂದು ಹೇಳಲು, ಅದು ರಿಣಾ ತೀರಿಹೋದರೆ, ನಮ್ಮ ಮಹತ್ವ ಎಂಥಾದ್ದು, ಹಿಂದೆ ಇಂಥಾ ಮಹತ್ವ ಬಳಹ ಮಾಡೀವಿಯೆಂದು ಅಲ್ಲಲ್ಲಿ ಹೆಸರು ಹೇಳಿಕೊಳ್ಳಬೇಕು. ಅದು ಹೋಗದಿದ್ದರೆ- ಇವರ ವಿಶ್ವಾಸ ಘಟ್ಟಿಲ್ಲೆಂದು, ಏನರೆ ನೆವ ಕೊಳ್ಳಬೇಕು. ಕೊಟ್ಟರೆ ಹೊಗಳಬೇಕು, ಕೊಡದಿದ್ದರೆ ಬೊಗಳಬೇಕು. ಅವರಿಂದ ಆ ಹಣವು ತನಗೆ ಬಾರದಿದ್ದರೆ ಅವರ ಅರ್ಥವ ಕಳೆಯಬೇಕೆಂಬ ಯೋಚನೆಬೇಕು. ಅಥವಾ ಫಣ್ಯಾಚಾರದಲ್ಲಿ ಅವರಿಂದ ಅರ್ಥವ ಸೆಳೆತಂದು ಹಿಂದೆ ತಾ ಬಿಟ್ಟು ಪೂರ್ವಪ್ರಪಂಚದವರಿಗೆ ಕೊಟ್ಟು ಈ ವಿಷಯಾತುರಕ್ಕೆ ವಾಯು ತಪ್ಪಿ ನಡೆದು ಇದು ಪ್ರಭುವಿನಪ್ಪಣೆಯೆಂದು ಹಾಡಿದ್ದೇ ಹಾಡುವ ಕಿಸಬಾಯಿದಾಸನ್ಹಾಂಗೆ ಹಾದಿಡ್ದೇ ಹಾಡಿಕೊಳ್ಳುತ್ತ, ಕ್ರೀಯ ನಿಃಕ್ರಿಯವಾಗಿ ಸತ್ತ ಕತ್ತಿಯ ಎಲವು ತಂದು ತಿಪ್ಪಿಯಲ್ಲಿ ಬಚ್ಚಿಟ್ಟು ಸುತ್ತುವ ತಲೆಹುಳುಕ ಹುಚ್ಚುನಾಯಿಯಂತೆ, ಉಚ್ಚಿಯಾ ಪುಚ್ಚಿಗೆ ಮೆಚ್ಚನಿಟ್ಟ ನಿಚ್ಚ ಕಚ್ಚಿಗಡಕರಿಗೆ ತಮ್ಮ ನಿಜದೆಚ್ಚರ ಇನ್ನೆಲ್ಲಿಹದೋ ? ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಜಂಗಮಲಿಂಗಮೋಹಿತನಾದಡೆ ತನ್ನ ಕುಲಗೋತ್ರಮೋಹವ ಮರೆಯಬೇಕು. ಜಂಗಮಲಿಂಗಭಕ್ತನಾದಡೆ ಪೂರ್ವಕುಲವ ಬೆರಸಲಾಗದು. ಜಂಗಮಲಿಂಗಪೂಜಕನಾದಡೆ ಮಾನವರನು ಉಪಧಾವಿಸಲಾಗದು. ಜಂಗಮಲಿಂಗವೀರನಾದಡೆ ಅರ್ಥವ ಕಟ್ಟಲಾಗದು. ಜಂಗಮಲಿಂಗಪ್ರಸಾದಿಯಾದಡೆ ಬೇಡಿದಡೆ ಇಲ್ಲೆನ್ನಲಾಗದು. ಜಂಗಮಲಿಂಗಪ್ರಾಣಿಯಾದಡೆ ಲಾಂಛನದ ನಿಂದೆಯ ಕೇಳಲಾಗದು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಜಂಗಮಲಿಂಗಭಕ್ತಿ.
--------------
ಚನ್ನಬಸವಣ್ಣ
ಸೆರಗೊಡ್ಡಿ ಬೇಡಿಕೊಂಬೆನು ಸರಿದಪ್ಪನು ಪೇಳದೆ ನೆರೆಬಲ್ಲ ಗುರುಹಿರಿಯರು ಭಕ್ತ ವಿರಕ್ತರುವೊಪ್ಪುವುದು. ಅಮ್ಮವ್ವೆ ರೆಮ್ಮವ್ವೆ ವೈಜವ್ವೆ ನಿಂಬವ್ವೆ ದುಗ್ಗಳವ್ವೆ ಮಾಂಗಾಯಕ್ಕರಸಿಗಳು ನೀಲಲೋಚನೆ ಕೋಳೂರ ಕೊಡಗೂಸು ಹೇರೂರ ಹೆಣ್ಣು ಕದಿರರೆಬ್ಬವ್ವೆ ಪಿಟ್ಟವ್ವೆ ಸತ್ಯಕ್ಕ ಇಂತೀ ತೆತ್ತೀಸಕೋಟಿ ಸತ್ಯಶರಣರು ಈ ವಚನದ ಅರ್ಥವ ಮಾಡಿ ಅನುಭವಿಸಿ ನಿಮ್ಮ ಶಿಶುವೆಂದು ಕರಿಯಬಸವನ ಎತ್ತಿಕೊಂಬುದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಆಸೆಗೆ ಹುಟ್ಟಿದ ಭಾಷೆಹೀನ ವೇಷಧಾರಿಗಳು ಸಹಜವನೆತ್ತ ಬಲ್ಲರಯ್ಯಾ ? ಭಕ್ತಿ ಯುಕ್ತಿ ವಿರಕ್ತಿಯ ಪಥವನರಿಯದೆ ಸತ್ತು ಹುಟ್ಟುವ ಮುಕ್ತಿಗೇಡಿಗಳೆತ್ತ ಬಲ್ಲರಯ್ಯಾ ಲಿಂಗದ ನಿಜವ ? ಅರ್ಥವ ಹಿಡಿದು, ಅರಿವ ಮರೆದು, ಕರ್ತುಗಳಾಪ್ಯಾಯನವರಿಯದ ಅನುಮಾನಭರಿತ ಅಧಮರುಗಳೆತ್ತ ಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗ ಶರಣರ ಘನವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೋಣನ ಕೊರಳಲ್ಲಿ ಕಪಿ, ಬೆನ್ನಿನಲ್ಲಿ ರಕ್ಷಿ, ಬಾಲದ ಜವೆಗೊಂದೊಂದು ಮುಸುವ, ಕೊಂಬಿನ ಮೇಲೆ ಕುಣಿವ ಗಿಡುಗ ; ಇಂತಿವೆಲ್ಲವ ಸಂತೈಸಿಕೊಂಡು ರಕ್ಷಿ ನಡೆದಳು. ತಮಪುರವೆಂಬ ಪಟ್ಟಣಕ್ಕೊಸ್ತಿಯ ಹೋಗಿ, ಆ ಪಟ್ಟಣದೊಳು ಸ್ಥಿರವಾಗಿ ನಿಂದು, ಬದುಕು ಮನೆ ಅರ್ಥವಂ ಗಳಿಸಿ, ತಮಪುರದರಸಿಂಗೆ ಸರಿಗೊರನಿಕ್ಕಿ ತಮದ ಮರೆಯಲ್ಲಿಪ್ಪ ವನಿತೆಯ ಕಂಡರೊ[ಂದ]ಗ್ನಿ, ನಡೆದರೆರಡಗ್ನಿ, ನುಡಿದರೆ ಮೂರಗ್ನಿ, ಕೇಳಿದರೆ ನಾಲ್ಕಗ್ನಿ, ವಾಸಿಸಿದರೈದಗ್ನಿ. ಆ ಗಿರಿಯೊಳು ನಿಂದು, ಗಿಡುಗನನಡಸಿ, ಮುಸುವನ ಹರಿಯಬಿಟ್ಟು, ಕಪಿಯ ಕೈವಿಡಿದು ಜಪವ ಮಾಡಿ, ಕೋಣನ ನೆರೆ ಕೂಗುವವ ನುಡಿಯ ಪಾಶದೊಳು ಸಿಲ್ಕಿ, ತ್ರಿಲೋಕವೆಲ್ಲ ವ್ರತಭ್ರಷ್ಟರಾದ ಚೋದ್ಯವ ಕಂಡು ನಾ ಬೆರಗಾಗುತಿರ್ದೆನು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗಂಡಗಿಕ್ಕದೆ ಮಾಡಿ ತಪ್ಪಿಸಿ ತಿಂಬ ದಿಂಡೆಹೆಂಗಳೆಯಂತೆ ಕರ್ತುಗಳಿಗೆ ಅರ್ಥವ ಸವೆಯದೆ ಸಟೆವೆರೆದು ಬಾಳುವ ಕುಟಿಲಗಳ್ಳರಿಗೆಂತಪ್ಪುದಯ್ಯಾ ಭಕ್ತಿ ? ಸತ್ಯ ಧನವ ನಿತ್ಯ ನಿತ್ಯವರಿದು ಮರೆದಿತ್ತಡೆ ಕರ್ತುವೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಂಚಾಂಗ ಪಂಚಾಂಗವೆಂದು ಕಳವಳಗೊಂಡು ಜೋಯಿಸನ ಕರೆಯಿಸಿ, ಕೈಮುಗಿದು ಕಾಣಿಕೆಯನಿಕ್ಕಿ ಎಲೆ ಅಡಿಕೆಯಂ ಕೊಟ್ಟು, ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು, ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು ? ಪಂಚಾಂಗವೆಂಬ ಶಬ್ದಕ್ಕೆ ಅರ್ಥವ ಹೇಳಲರಿಯದೆ ಜೋಯಿಸರು ಕೆಟ್ಟರು ; ಕೇಳಲರಿಯದೆ ಅನಂತ ಹಿರಿಯರು ನರಕಕ್ಕೆ ಇಳಿದರು. ಪಂಚಾಂಗವೆಂದರೆ ಹೇಳಿಹೆ ಕೇಳಿರಣ್ಣಾ. ಪಂಚ ಅಂದರೆ ಐದು ; ಅಂಗವೆಂದರೆ ದೇಹ, ಪೃಥ್ವಿ ಅಪ್ಪು ತೇಜ ವಾಯು ಆಕಾಶ- ಈ ಐದು ಕೂಡಿ ದೇಹವಾಯಿತ್ತು. ಆ ದೇಹದೊಳಗೆ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಚ್ಚು ಮುರಿಯುವುದೇ ಪಂಚಾಂಗ. ಸತ್ವ ರಜ ತಮವೆಂಬ ಅಹಂಕಾರವ ತುಳಿವುದೆ ಪಂಚಾಂಗ. ಆಣವಮಲ ಮಾಯಾಮಲ ಕಾರ್ಮಿಕಮಲವ ಮುಟ್ಟದಿರುವುದೇ ಪಂಚಾಂಗ. ತನ್ನ ಸತಿಯ ಸಂಗವಲ್ಲದೆ ಪರಸತಿಯರ ಮುಟ್ಟದಿರುವುದೇ ಪಂಚಾಂಗ. ತನ್ನ ಇಷ್ಟಲಿಂಗವಲ್ಲದೆ ಭೂಮಿಯ ಮೇಲೆ ಇಟ್ಟು ಪೂಜೆಯ ಮಾಡುವ ದೇವರಿಗೆ ಕೈಮುಗಿಯದಿರುವುದೆ ಪಂಚಾಂಗ. ಜಾತಿಸೂತಕ ಜನನಸೂತಕ ಉಚ್ಫಿಷ್ಟಸೂತಕ ಮೃತ್ಯುಸೂತಕ ರಜಸ್ಸೂತಕ - ಈ ಪಂಚಸೂತಕವ ಶರಣರು ಕಳೆವರಾಗಿ, ನಮ್ಮ ಶಿವಭಕ್ತರಿಗೆ ಸಲ್ಲದೆಂಬುದೆ ಪಂಚಾಂಗ. ಸೂತಕ ನಾಸ್ತಿಯಾದುದೆ ಪಂಚಾಂಗ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದವೆ ಪಂಚಾಂಗ. ಲಿಂಗಾಚಾರ ಸರ್ವಾಚಾರ ಭೃತ್ಯಾಚಾರ ಶಿವಾಚಾರ ಗಣಾಚಾರವೆ ಪಂಚಾಂಗ. ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಗಣಪ್ರಸಾದ, ಮಹಾಪ್ರಸಾದವ ಕೊಂಬುವುದೆ ಪಂಚಾಂಗ. ಇಂತೀ ಪಂಚಾಂಗದ ನಿಲವನರಿಯದೆ ಪಂಚಸೂತಕದೊಳಗೆ ಹೊಡೆದಾಡುವ ಪಂಚಮಹಾಪಾತಕರ ಎನಗೊಮ್ಮೆ ತೋರದಿರಯ್ಯ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಸ್ವತಂತ್ರತ್ವಾನುಭಾವವೇ ಅಂಗವಾದ ಮಹೇಶ್ವರನು ಮಂತ್ರಾತ್ಮಕಸ್ವರೂಪವಾದ ಗುರುಲಿಂಗಸನ್ನಿಹಿತವಾಗಿ, ಆಚಾರ ಗೌರವ ಲಿಂಗ ಜಂಗಮ ಪ್ರಸಾದ ಮಹದ ನಿಷೆ*ಯೆಂಬಾರರೊಳುನಿಂದು, ಕ್ರಿಯಾ ಜ್ಞಾನ ಚರ್ಯಾಪದತ್ರಯದಿಂದಾಚರಿಸಲರಿಯದೆ ತನ್ನ ದುರ್ಗುಣಂಗಳ ಮಡುಗಿ ಇತರ ಗುಣವನರಸಿ ಎತ್ತಿತೋರುವ ಬಿನುಗು ಮೂಕೊರೆಯರನೆಂತು ಮಹೇಶ್ವರರೆನಬಹುದು ? ಕೀಳುಶಾಸ್ತ್ರವನೋದಿ ಹಾಳುಗೋಷಿ*ಯ ಕಲಿತು, ಬಾಳಬಲ್ಲೆವೆಂದು ಕೂಳಿನಾಸೆಗೆ ದೇವಭಕ್ತರುಗಳ ಹಳಿವುತ್ತ ತೋಳ ಕುರಿಯ ಕೂಸು ನೆಗೆದಂತೆ ಬಾಳುವರ ತಪ್ಪಿನೊಳಿಕ್ಕಿ ಅರ್ಥವ ಸೆಳೆದುನುಂಗುವ ಹೇಯಸಂಬಂಧಿಗಳನೆಂತು ಮಹೇಶ್ವರರೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ತನುವ ದಂಡಿಸಿ ಧನವ ಗಳಿಸಿ ಅನುವರಿಯದೆ ಬಿನುಗು ಮುಖನಾಗಿ, ಕಲ್ಲುಮಣ್ಣಿಗೆ ಕಳೆದುಳಿವ ಕಾಲನ ಬಾಧೆಗೆ ಉಳಿವಿಲ್ಲ, ಮನವ ಕನಲಿಸಿ ಕ್ಷುಧೆಯ ಮರುಗಿಸಿ ಅರ್ಥವ ಗುಡಿಸಿ ಆಳ್ದನ ಮರೆದು ಸತಿಪುತ್ರ ವಿಷಯಭ್ರಾಂತಕ್ಕೊಲಿದು, ಅಳಿಸಿ ಕಸಗೂಡಿ ಕಳೆದುಳಿವ ಮಾಯೆಗುಳಿವಿಲ್ಲ. ಭಾವ ಬೆಚ್ಚಿ ಕೊನರಿ ಕೊಸದು ಧನವ ತಂದು, ಮಹಾದೇವನ ಮರೆದು, ಅನಿತ್ಯಸಂಸಾರ ಅಪವಾದ ಅರಿಷ್ಟಭಾವಕ್ಕೆಳಸಿ, ದುಷ್ಕರ್ಮಿಯಾಗಿ ಉಳಿದು, ದುರ್ಗತಿಯನೈದುವದೊಡಕೊಳವಲ್ಲ. ಮತ್ತೆಂತೆಂದೊಡೆ: ಒಡೆಯರಿಗೊಡವೆಯನು ವಂಚಿಸುವ ತುಡುಗುಣಿಯರ ಬಾಯಲ್ಲಿ ಹುಡಿಯ ಹೊಯ್ಯಿಸಿ ನಡೆವ ಕಡುಗಲಿ ವೀರಮಾಹೇಶ್ವರ ನಾನು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರೀಗುರು ಲಿಂಗ ಜಂಗಮಕ್ಕೆ ಅರ್ಚನೆ ಪೂಜನೆ ದಾಸೋಹವನು ಧರ್ಮವ ಕಾಮಿಸಿ ಮಾಡಿದರೆ ಧರ್ಮವಪ್ಪುದು, ಅರ್ಥವ ಕಾಮಿಸಿ ಮಾಡಿದರೆ ಅರ್ಥವಪ್ಪುದು, ಕಾಮವ ಕಾಮಿಸಿ ಮಾಡಿದರೆ ಕಾಮವಪ್ಪುದು, ಮೋಕ್ಷವ ಕಾಮಿಸಿ ಮಾಡಿದರೆ ಮೋಕ್ಷವಪ್ಪುದು, ಸಾಲೋಕ್ಯವ ಕಾಮಿಸಿ ಮಾಡಿದರೆ ಸಾಲೋಕ್ಯವಪ್ಪುದು, ಸಾಮೀಪ್ಯವ ಕಾಮಿಸಿ ಮಾಡಿದರೆ ಸಾಮೀಪ್ಯವಪ್ಪುದು ಸಾರೂಪ್ಯವ ಕಾಮಿಸಿ ಮಾಡಿದರೆ ಸಾರೂಪ್ಯವಪ್ಪುದು, ಸಾಯುಜ್ಯವ ಕಾಮಿಸಿ ಮಾಡಿದರೆ ಸಾಯುಜ್ಯವಪ್ಪುದು, ಕಾಮಧೇನುವ ಕಾಮಿಸಿ ಮಾಡಿದರೆ ಕಾಮಧೇನುವಪ್ಪುದು, ಕಲ್ಪತರುವ ಕಾಮಿಸಿ ಮಾಡಿದರೆ ಕಲ್ಪತರುವಪ್ಪುದು, ಪರುಷವ ಕಾಮಿಸಿ ಮಾಡಿದರೆ ಪರುಷವಪ್ಪುದು, ಆವುದನಾವುದ ಕಾಮಿಸಿದರೆ ಕಾಮಿಸಿದ ಫಲ ತಪ್ಪದು. ಕಾಮಿಸದ ನಿಷ್ಕಾಮದಾಸೋಹ ಕೂಡಲಚನ್ನಸಂಗಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಐದು ಪರಿಯ ಬಣ್ಣವ ತಂದು ಕೊಟ್ಟಡೆ ನಾಲ್ಕು ಮೊಲೆಯ ಹಸುವಾಯಿತ್ತು. ಹಸುವಿನ ಬಸಿರಲ್ಲಿ ಕರುವು ಹುಟ್ಟಿತ್ತು. ಕರುವ ಮುಟ್ಟಲೀಯದೆ ಹಾಲು ಕರೆದುಕೊಂಡಡೆ ಕರ ರುಚಿಯಾಯಿತ್ತು. ಮಧುರ ತಲೆಗೇರಿ ಅರ್ಥವ ನೀಗಾಡಿ ಆ ಕರುವಿನ ಬೆಂಬಳಿವಿಡಿದು ಭವಹರಿಯಿತ್ತು ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
`ಶತಮಾನಃ ಪುರುಷಃ ಶತೇಂದ್ರಿಯ' ಎಂಬ ಶ್ರುತಿವಚನದಿಂ ನೂರು ಸಂಖ್ಯೆಯುಳ್ಳ ಆ ವಿರಾಟ್ಪುರುಷನು ಅನುಭವಕಾರಣಮಾದ ವಯೋರೂಪಮಾದ ಷೋಡಶ ಸಂಖ್ಯೆಯೇ ತಾನಾಗಿ ಉಳಿದ ಚೌರಾಸೀತಿ ಸಂಖ್ಯೆಯೇ ಪಂಚಭೂತಂಗಳೆಂಬ ಪಂಚಶೂನ್ಯಂಗಳೊಳಗೆ ಕೂಡಿ ಚೌರಾಶೀತಿ ಲಕ್ಷ ಭೇದಂಗಳಾದ ಜೀವಜಾಲಂಗಳಾಗಿ ಉಳಿದಂಶವೆ ಪರಮನಾಗಿ, ಆ ಜೀವಜಾಲಂಗಳಿಗೆ ಆ ಪರಮವೆ ಕಾರಣಮಾಗಿರ್ಪುದು. ಪಂಚಶೂನ್ಯಂಗಳಾದ್ಯಂತಂಗಳಲ್ಲಿರ್ಪ ಚೌರಾಶೀತಿ ಲೆಕ್ಕದಲ್ಲಿ ಎಂಬತ್ತುಲಕ್ಷ ಜೀವಂಗಳು ಆದಿಯಾಗಿರ್ಪಲ್ಲಿ ಚಾತುರ್ಲಕ್ಷ ಭೇದವಡೆದ ಮನುಷ್ಯ ಜೀವಂಗಳೆ ಕಡೆಯಾಗಿಪ್ಪವೆಂತೆಂದರೆ : ಸಕಲ ಜನ್ಮಂಗಳಿಗೂ ಮನುಷ್ಯನೇ ಕಡೆ. ಈ ಮನುಷ್ಯಜನ್ಮದಲ್ಲಿ ಮಾಡಿದ ಕರ್ಮದಿಂ ಸಕಲ ಜನ್ಮಂಗಳನೆತ್ತಿ ಅನುಭವಿಸುತ್ತಿರ್ಪುದರಿಂ ಅದೇ ಆದಿ ಇದೇ ಅಂತ್ಯಮಾಯಿತ್ತು. ಮಧ್ಯೆ ಇರ್ಪ ಪಂಚಭೂತಂಗಳೆಂಬ ಪಂಚ ಶೂನ್ಯಂಗಳಳಿಯಲು ಎಂಬತ್ತುನಾಲ್ಕು ಹದಿನಾರರೊಳಗೆ ಕೂಡಿ ನೂರಾಯಿತ್ತು. ಸೃಷ್ಟಿ ಸ್ಥಿತಿಗಳೆಂಬ ಮಿಥ್ಯ ಶೂನ್ಯಂಗಳೊಳಗೆ ಕೂಡಿದ ಸಂಹಾರಮೊಂದೆ ನಿಜಮಾಯಿತ್ತು. ಆ ನೂರ ಹತ್ತರಿಂದ ಕಳೆಯೆ ನಿಂತುದು ಹತ್ತಾಯಿತ್ತು ಹತ್ತ ಒಂದರಿಂದ ಕಳೆಯೆ ನಿಂತವಸ್ತು ಒಂದೆಯಾಯಿತ್ತು. ಅದ ಕಳೆವುದಕ್ಕೆ ಒಂದು ವಸ್ತು ಇಲ್ಲದಿರ್ಪುದರಿಂ ಕೂಡತಕ್ಕವಸ್ತುವಲ್ಲದೆ ಕಳೆಯತಕ್ಕ ವಸ್ತುವಲ್ಲವಾಯಿತ್ತು. ಕೂಡುವುದೆಲ್ಲ ಮಿಥ್ಯವಾಗಿ ಕಳೆವುದಕ್ಕೆ ಬೇರೊಂದು ವಸ್ತುವಿಲ್ಲದಿರ್ಪುದರಿಂ ತಾನೊಂದೆ ನಿಜಮಾಯಿತ್ತು. ಆ ನಿಜವೊಂದೆ ಉಂಟಾದುದು ಮಿಕ್ಕುದಿಲ್ಲವಾದುದರಿಂ ಆ ತಥ್ಯಮಿಥ್ಯಗಳೆರಡೂ ನಿತ್ಯಮಾಯಿತ್ತು. ಆ ಸತ್ಯದಿಂ ಕಾಣಬರುತ್ತಿರ್ಪುದೆ ಮಿಥ್ಯ. ಆ ಮಿಥ್ಯದಿಂ ಪ್ರಕಾಶಿಸುತ್ತಿರ್ಪುದೆ ಸತ್ಯ. ಒಂದರ ಗುಣವನೊಂದು ಪ್ರಕಾಶವಮಾಡುತ್ತಿರ್ಪುದರಿಂ ಅವಕ್ಕವೆ ಗುಣಂಗಳಾಯಿತ್ತು. ಅಂತಪ್ಪ ಸತ್ಯವೆ ನಿಜ. ನಿಜದಲ್ಲಿ ಪ್ರಕಾಶಮಾಗಿರ್ಪುದೆ ಜ್ಞಾನ. ಸತ್ಯ ಜ್ಞಾನಸಂಗದಲ್ಲಿ ಪರಿಪೂರ್ಣಮಾಗಿ ಪ್ರಕಾಶಿಸುತ್ತಿರ್ಪುದೆ ಆನಂದ. ಅಂತಪ್ಪ ಸಚ್ಚಿದಾನಂದಮಯನಾಗಿ ಮೂರು ಮೂಲೆಯುಳ್ಳ ಒಂದು ವಸ್ತು ತಾನಾಗಿರ್ಪ ಬ್ರಹ್ಮ ತನ್ನ ಮಹಿಮಾಪ್ರಕಟನ ನಿಮಿತ್ಯ ತನ್ನಲ್ಲಿಯೇ ಭಿನ್ನಮಾಗಿರ್ಪ. ನಿಜ ಛಾಯಾಮಿಥ್ಯ ಮಾಯಾ ಸಂಗಮಾದಲ್ಲಿ ಸತ್ಯ ಮಿಥ್ಯದೊಳಗೆ ಕೂಡಿ ಉಂಟಾಗಿಯಿಲ್ಲಮಾಗುತ್ತಿರ್ಪ ಶರೀರಮಾಯಿತ್ತು. ಜ್ಞಾನ ಮಿಥ್ಯದೊಳಗೆ ಕೂಡಲು ಜ್ಞಾನ ಜ್ಞಾನರೂಪಮಾದ ಜೀವಮಾಯಿತ್ತು. ಆನಂದ ಮಿಥ್ಯದೊಳಗೆ ಕೂಡಲು ಸುಖದುಃಖಕಾರಣಮಾದ ಮನಸ್ಸಾಯಿತ್ತು. ಇಂತಪ್ಪ ಮಿಥ್ಯದೊಳಗೆ ಕೂಡಿ ಆ ಬ್ರಹ್ಮವೇ ಚಿದ್ರೂಪಮಾದನಂತಗಳಾಗಿ ಹೆಚ್ಚಿ ಆ ಮಿಥ್ಯಾಕ್ರೀಡೆಗಳನನುಭವಿಸುತ್ತಿರ್ಪ ಮಿಥ್ಯಾಭವವನ್ನು ಉಪಸಂಹರಿಸಿ ಕಳದು ಆ ಮಿಥ್ಯವ ಮಿಥ್ಯವ ಮಾಡುವುದಕ್ಕೆ ತಾನೆ ಕಾರಣಮಾಗಿ ನಿಂತ ಅಖಂಡ ಸತ್ಯಜ್ಞಾನಾನಂದ ಪದಾರ್ಥ ತಾನೊಂದೆಯಾಗಿರ್ಪ ಮಹಾಲಿಂಗವೇ ಇಷ್ಟಮಾದಲ್ಲಿ ಶರೀರ ಮಿಥ್ಯ ಕಳೆದು ಲಿಂಗದೊಳಗೆ ಬೆರೆದ ತನುವೆ ಸತ್ತಾಯಿತ್ತು. ಆ ಲಿಂಗವೆ ಪ್ರಾಣಲಿಂಗಮಾದಲ್ಲಿ ಆ ಪ್ರಾಣದ ಮಿಥ್ಯವಳಿದು ಆ ಲಿಂಗದೊಳಗೆ ಲೀನಮಾದ ಜ್ಞಾನವೇ ಚಿತ್ತಾಯಿತ್ತು. ಎರಡರ ಸಂಗದಿಂದುದಿಸಿದ ಆನಂದ ಮಹಿಮೆಯೆ ಭಾವಲಿಂಗಮಾದಲ್ಲಿ ಮನಸ್ಸಿನ ಮಿಥ್ಯವಳಿದು ಆ ಭಾವಲಿಂಗದಲ್ಲಿ ಬೆರೆದ ಮನವೆ ಆನಂದರೂಪಮಾಯಿತ್ತು. ಇಂತಪ್ಪ ಸಚ್ಚಿದಾನಂದ ಮೂರ್ತಿಯಾದ ಗುರುರೂಪಮಾದ ಮಹಾಲಿಂಗಕ್ಕೆ ಅಷ್ಟೋತ್ತರ ಶತವಚನಂಗಳೆಂಬ ಸುವಾಸನೆವಿಡಿದಷ್ಟೋತ್ತರ ಶತದಳಂಗಳಿಂ ಸುವಾಕ್ಯಂಗಳೆಂಬ ಕೇಸರಂಗಳಂ ಪಂಚಾಕ್ಷರಿ ಬೀಜಂಗಳಿಂ ಪ್ರಕಾಶಿಸುತ್ತಿಪ್ಪ ಪ್ರಣವ ಕರ್ಣಿಕೆಯಿಂ ವಿರಾಜಿಸುತ್ತಿರ್ಪ ಚಿನ್ನದ ಪುಂಡರೀಕ ಭಕ್ತಿರಸ ಪೂರಿತಮಾಗಿರ್ಪ ಹೃದಯ ಸರಸಿಯೊಳು ವಿವೇಕ ಬಿಸದೊಳಗೆ ಕೂಡಿ ಬೆಳದು ಮಹಾಗುರೂಪದೇಶವೆಂಬ ಭಾಸ್ಕರೋದಯದಿಂ ಜಿಹ್ವಾಮುಖದಲ್ಲಿ ವಿಕಸನಮಾಗಿ ಜಗದ್ಭರಿತಮಾದ ದಿವ್ಯವಾಸನೆಯಿಂ ಮೀಸಲಳಿಯದ ಪರಮ ಪವಿತ್ರಮಾಗಿರ್ಪ ದಿವ್ಯ ಕಮಲಮಂ ಮಹಾಲಿಂಗಕರ್ಪಿಸಿ ತತ್ಕರ್ಣಿಕಾಮಧ್ಯದಲ್ಲಿ ಭಾವಹಸ್ತದಲ್ಲಿ ತಲ್ಲಿಂಗಮಂ ತಂದು ಪ್ರತಿಷೆ*ಯಂ ಮಾಡಿ ತದ್ವಚನಾಮೃತ ರಸದಿಂದಭಿಷೇಕಮಂ ಮಾಡಿ ತತ್ ಜ್ಞಾನಾಗ್ನಿಯಿಂ ಮಿಥ್ಯಾಗುಣಂಗಳಂ ದಹಿಸಿ ಆ ಸತ್ವಸ್ವರೂಪಮಾಗಿರ್ಪ ಭಸ್ಮವಂ ಧರಿಸಿ ತನ್ಮಹಿಮಾವರ್ಣನೀಯಮಾಗಿರ್ಪಾಭರಣಂಗಳಿಂದಲಂಕರಿಸಿ ಸತ್ಕೀರ್ತಿಯೆಂಬ ವಸ್ತ್ರಮಂ ಸಮರ್ಪಿಸಿ ವೈರಾಗ್ಯ ಧರ್ಮವುಳ್ಳ ಹೃದಯವೆಂಬ ಶಿಲೆಯೊಳಗೆ ವಚನಮೆಂಬ ಸುಗಂಧದ ಕೊರಡಂ ಭಕ್ತಿರಸಯುಕ್ತಮಾಗಿ ತೆಯ್ದು ಅಲ್ಲಿ ಲಭ್ಯಮಾದ ಪರಮ ಶಾಂತಿಯೆಂಬ ಗಂಧಮಂ ಸಮರ್ಪಿಸಿ ತದ್ಬೀಜ ರೂಪಮಾಗಿರ್ಪ ತತ್ವವೆಂಬಕ್ಷತೆಯನಿಟ್ಟು ಮನವೆಂಬ ಕಾಷ*ದಲ್ಲಿ ಹೊತ್ತಿರ್ಪ ಜ್ಞಾನಾಗ್ನಿಯಲ್ಲಿ ಪಲವಿಧ ಗುಣಂಗಳೆಂಬ ದಶಾಂಗಧೂಪಮಂ ಬೆಳಗಿ ಊಧ್ರ್ವಮುಖಮಾಗಿರ್ಪ ತದ್ವಾಸನಾ ಧೂಪ ಧೂಮಮಂ ಸಮರ್ಪಿಸಿ ತದ್ವಚನ ಮುಖದಲ್ಲಿ ಸಕಲವು ಅಖಂಡಮಯಮಾಗಿ ಪ್ರಕಾಶಿಸುತ್ತಿರ್ಪ ಚಿಜ್ಯೋತಿ ನೀಲಾಂಜನಮಂ ಮಂಗಳಮಯಮಾಗಿ ಬೆಳಗಿ, ವದನವೆಂಬ ಘಂಟೆಯಲ್ಲಿ ನಾಲಗೆಯೆಂಬ ಕುಡುಹನು ಮೂಲಾಧಾರಮಾರುತನ ಮೊದಲನು ಭಾವದಲ್ಲಿ ಪಿಡಿದು ನುಡಿಸಿ ತನ್ಮುಖದಲ್ಲಿ ಪ್ರಕಾಶಮಾನಮಾಗಿ ಜಗದ್ಭರಿತಮಾದ ವಚನಾಘೋಷಂಗಳೆಂಬ ಘಂಟಾನಾದಮಂ ಸಮರ್ಪಿಸಿ ವಚನಾರ್ಥಂಗಳೆಂಬ ಪಲವಿಧ ಶುಚಿರುಚಿಗಳುಳ್ಳ ಪದಾರ್ಥಂಗಳಿಂ ತನ್ಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಪರಮಾನಂದಾಮೃತವನು ತೃಪ್ತಿ ಪಾತ್ರೆಯಲ್ಲಿಟ್ಟು ನೈವೇದ್ಯಮಂ ಸಮರ್ಪಿಸಿ ನಿರ್ಮಳ ಭಕ್ತಿ ರಸವೆಂಬ ಶುದ್ಧೋದಕಮಂ ನಿವೇದಿಸಿ ತನುಮನಃಪ್ರಾಣಂಗಳೆಂಬ ತಾಂಬೂಲಮಂ ಸತ್ಯ ಜ್ಞಾನಾನಂದ ರೂಪಮಾದ ಮಹಾಶಿವಲಿಂಗಮುಖದಲ್ಲಿ ಸಮರಸಾನುರಾಗದಿಂ ಪ್ರಕಾಶಮಾಗಿರ್ಪ ದಿವ್ಯತಾಂಬೂಲಮಂ ಸಮರ್ಪಿಸಿ ಲಿಂಗದೊಳಗುಪಭೋಗಿಸುತ್ತಿರ್ಪ ಅಷ್ಟ ಭೋಗಂಗಳೆ ಅಷ್ಟ ವಿಧಾರ್ಚನಂಗಳಾಗಿ ಆ ಲಿಂಗದೊಳಗೆ ಬೆರದು ಭೇದದೋರದಿರ್ಪ ಷೋಡಶ ಕಳೆಗಳೆ ಷೋಡಶೋಪಚಾರವಾಗಿ ತಲ್ಲಿಂಗ ಸಂಗವೆ ರತಿಯಾಗಿ ಎರಡೂ ಏಕಮಾಗಿರ್ಪ ನಿರ್ವಾಣ ಸುಖಮೆ ಪರಮಸುಖಮಾಗಿ ನೀನು ನಾನೆಂಬ ಭೇದವಳಿದು ಎರಡೂ ಒಂದಾಗಿ ಅಭೇದಾನಂದದಲ್ಲಿ ಬೇರೆವಾಂಛೆ ಇಲ್ಲಮಾಗಿ, ನೀನಲ್ಲದೆ ನಾನೇನೂವಲ್ಲೆ ಇದ ಬರದೋದಿ ಕೇಳಿ ಅರ್ಥವಂ ಮಾಡಿ ಆನಂದಿಸುವ ತದೀಯ ಭಕ್ತರ ವಾಂಛಿತವಂ ಸಲಿಸಿ ಮಿಥ್ಯಾಭ್ರಮೆಯಂ ನಿವೃತ್ತಿಯಂ ಮಾಡಿ ಪುನರಾವೃತ್ತಿ ರಹಿತ ಶಾಶ್ವತ ದಿವ್ಯಮಂಗಳಮಯ ನಿಜಾನಂದ ಸುಖವನಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಚಂದ್ರಸೂರ್ಯರ ಬೆಳಗಿನಲ್ಲಿ ಆಡುವ ಮಡದಿ ಪುರುಷರನುವ ಕಂಡಾಡು. ಅತ್ತಲವರು ಬಂದಡೆ, ಮತ್ತೇನೆಂದು ಬೆಸಗೊಳ್ಳಬಾರದು. ಅಹಮ್ಮೆನ್ನದ ಅರ್ಥವ ತಂದು, ಸೋಹಮ್ಮೆಂಬ ಕುಳಕಿತ್ತಡೆ, ದಾಸೋಹಂ ಭಾವ ಧರಿಸುವದು. ಗುರುನಿರಂಜನ ಚನ್ನಬಸವಲಿಂಗದಲಿ
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->