ಅಥವಾ

ಒಟ್ಟು 120 ಕಡೆಗಳಲ್ಲಿ , 46 ವಚನಕಾರರು , 97 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು? ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ? ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ? ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ? ಇಂತೀ ತ್ರಿವಿಧದ ಬಿಡುಮುಡಿಯನರಿತು, ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ. ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ ನಿಸ್ಪ ೃಹ. ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ. ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ ಸಂಪನ್ನನಾದುದು ಲಿಂಗ ಭೋಗೋಪಭೋಗಿಯ ಅಂಗನಿರತ, ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 81 ||
--------------
ದಾಸೋಹದ ಸಂಗಣ್ಣ
ಇನ್ನು ತಾರಕಯೋಗದ ಲಕ್ಷಣಮಂ ಪೇಳ್ವೆನೆಂತೆನೆ : ಮಂತ್ರಯೋಗ ಲಯಯೋಗ ಹಠಯೋಗಕ್ಕೆ ಉತ್ತರೋತ್ತರ ವಿಶಿಷ್ಟವಾದ ರಾಜಯೋಗವೇ ಸಾಂಖ್ಯಯೋಗವೆಂದು ತಾರಕಯೋಗವೆಂದು ಅಮನಸ್ಕಯೋಗವೆಂದು ಮೂರು ಪ್ರಕಾರವಾಗಿರ್ಪುದು. ಆ ಮೂರರೊಳಗೆ ಮೊದಲು ಸಾಂಖ್ಯಯೋಗವೇ ತತ್ವಜಾÕನರೂಪವಪ್ಪುದರಿಂದೆ, ಆ ತತ್ವಂಗಳೆಂತೆನೆ : ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವಂಗಳಿಂದೆ ಜನಿತಮಾದ ವಾಗಾದಿ ಕರ್ಮೇಂದ್ರಿಯಂಗಳೈದು, ಶಬ್ದಾದಿ ವಿಷಯಂಗಳೈದು, ಶ್ರೋತ್ರಾದಿ ಜಾÕನೇಂದ್ರಿಯಂಗಳೈದು, ಪ್ರಾಣಾದಿ ವಾಯುಗಳೈದು, ಜೀವನಗೂಡಿ ಮಾನಸಾದಿ ಅಂತಃಕರಣಂಗಳೈದು, ಇಂತೀ ಪಂಚವಿಂಶತಿ ತತ್ವಂಗಳು ನಾನಲ್ಲ, ಅವು ನನ್ನವಲ್ಲವೆಂದು ವಿಭಾಗಿಸಿ ಕಳೆದು, ಪರಾತ್ಪರವಾದ ಪರಶಿವಬ್ರಹ್ಮವೆ ನಾನೆಂದು ತಿಳಿವುದೇ ಸಾಂಖ್ಯಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ ಗಂಧದಿಂದ ಸುಳಿವ ನಾನಾ ಸುಗಂಧವ ರಸದಿಂದ ಬಂದ ನಾನಾ ರಸಂಗಳ ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ -ಇಂತೀ ಪಂಚೇಂದ್ರಿಯಂಗಳಲ್ಲಿ ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ. ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ. ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ. ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ. ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ. ಅದೆಂತೆಂದಡೆ: ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ ಎತ್ತಿ ಪ್ರತಿಯ ಲಕ್ಷಿಸಬಹುದೆ ? ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು ದಹನ ಚಂಡಿಕೇಶ್ವರಲಿಂಗದಿರವು.
--------------
ಪ್ರಸಾದಿ ಲೆಂಕಬಂಕಣ್ಣ
ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು, ಅವು ಒಂದರ ಸಿಹಿಯನೊಂದರಿಯವು. ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಬ್ಥಿಮಾನವೆಂಬ ಸಿಗುರು ಕಾಡಿತ್ತು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಕೋಣೆಯ ಕೋಹಿನಲ್ಲಿ ಮೂರು ಬಾಗಿಲುಂಟೆಂಬರು ಯೋಗಿಗಳು. ಅವು ದ್ವಾರಗಳಲ್ಲದೆ ಬಾಗಿಲ ನಾವರಿಯೆವು. ಪ್ರದಕ್ಷಿಣದ ಒಳಗಾದ ಬಾಗಿಲು ಮುಚ್ಚಿದಲ್ಲಿ ಸಿಕ್ಕಿದ ದ್ವಾರಂಗಳಿಗೆ ಕುರುಹಿಲ್ಲ. ಊಧ್ರ್ವನಾಮ ಯೋಗ ಸಂಬಂಧವಾದ ಒಂದು ಬಾಗಿಲು ಕಟ್ಟಿ ಒಂಬತ್ತು ಮುಚ್ಚಿದ ಸಂದಿಗಳೆಲ್ಲವು ಅದರೊಳಗೆ ಸಲೆಸಂದ ಮತ್ತೆ ಹೋಹುದೊಂದೆ ಬಾಗಿಲು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಘನಕ್ಕೆ ಮಹಾಘನಗಂಬ್ಥೀರ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಸನ್ಮಾನಿತರು, ನಿರವಯವಸ್ತುವಿನ ಪ್ರತಿಬಿಂಬರಾಗಿ, ತಮ್ಮ ತಾವರಿದು. ಚತುರ್ವಿಧ ವಿಸರ್ಜನೆಯನರಿದಾಚರಿಸುವುದು. ಆ ವಿಸರ್ಜನೆಗಳಾವಾವೆಂದಡೆ : ಮಲಮೂತ್ರವೆರಡನು ವಿಸರ್ಜನೆಯಿಂದ ಬಿಡುವಂಥದೆ ಸ್ಥೂಲಾಚಮನವೆನಿಸುವುದು. ಕ್ರೀಡಾವಿಲಾಸದಿಂದ ತಮ್ಮರ್ಧಾಂಗವೆಂದು ಭಕ್ತಗಣಸಾಕ್ಷಿಯಾಗಿ ವಿರಾಜಿಸುವಂಥ ಕ್ರಿಯಾಂಗನೆಯಲ್ಲಿ ವೀರ್ಯವ ಬಿಡುವಂಥಾದ್ದೊಂದು ಸ್ತೂಲಾಚಮನವೆನಿಸುವುದು. ಈ ಸ್ಥೂಲಾಚಮನಗಳ ಮಾಡಿದ ವೇಳೆಯಲ್ಲಿ ದಂತಗಳ್ಮೂವತ್ತೆರಡನು ತೀಡಿ, ಲಿಂಗಾಂಗ ಮಜ್ಜನಂಗೈದು, ಸರ್ವೋಪಚಾರಂಗಳಿಂ ಕ್ರಿಯಾಜಪ ಜ್ಞಾನಜಪ ಮಹಾಜ್ಞಾನಜಪ ಪರಿಪೂರ್ಣಾನುಭಾವಜಪಂಗಳೊಳ್ ಲಿಂಗಜಂಗಮ ಜಂಗಮಲಿಂಗಾರ್ಪಣವ ಮಾಡುವುದು. ಶಿವಶರಣಗಣಾರಾಧ್ಯರು ಲಿಂಗಾಬ್ಥಿಷೇಕ ಅರ್ಚನಾದಿಗಳ ಮಾಡಿ, ಅರ್ಪಣ ಸಂದ್ಥಿನಲ್ಲಿ ಜಲತೋರಿಕೆಯಾಗಿ ವಿಸರ್ಜಿಸಿ, ಉದಕವ ಬಳಸಿದ ವೇಳೆಯೊಳು, ಲಿಂಗಬಾಹ್ಯರಸಂಗಡ ಪ್ರಸಂಗಿಸಿದರೂ ದೀಕ್ಷಾಜಲದಿಂದ ಆರುವೇಳೆ ಲಿಂಗಸ್ಪರಿಶನದಿಂದ ಜಿಹ್ವೆಯ ಪ್ರಕ್ಷಾಲಿಸಿ, ಮುಖ ಮಜ್ಜನವಮಾಡಿ, ಲಿಂಗಾರ್ಚನಾರ್ಪಣವನುಭಾವಗಳ ಮಾಡುವುದು, ಇದು ಸೂಕ್ಷ್ಮಾಚಮನವೆನಿಸುವುದು. ಪ್ರಮಾಣಗಳಾದರೂ ಅನುವಲ್ಲದೆ ವಿಪತ್ತಿನ ವೇಳೆಯಾಗಲಿ, ಜಲ ಪರಿಹರಿಸಿದಲ್ಲಿ ಪರಿಣಾಮಜಲದಿಂದ ಆ ಸ್ಥಾನವ ಪ್ರಕ್ಷಾಲಿಸಿ, ಹಸ್ತಪಾದವ ತೊಳೆದು ಉದಕವ ಶೋದ್ಥಿಸಿ, ಲಿಂಗಸ್ಪರಿಶನವಗೈದು, ಆರುವೇಳೆ ಜಿಹ್ವೆಯ ಪ್ರಕ್ಷಾಲಿಸಿ, ಸತ್ಯೋದಕದ ಪರಮಾನಂದಜಲ ಮಹಾಜ್ಞಾನಪ್ರಣಮಪ್ರಸಾದಂಗಳ ಗುಟುಕ ಲಿಂಗಮಂತ್ರ ನೆನಹಿನೊಡನೆ ಸೇವಿಸುವುದು. ಲಿಂಗಬಾಹ್ಯರ ಸಂಗಡಪ್ರಸಂಗಿಸಿದೊಡೆ ಇದೇ ರೀತಿಯಲ್ಲಿ ಮುಖಪ್ರಕ್ಷಾಲನಂಗೈದು ಆಚರಿಸುವುದು. ಇದಕೂ ಮೀರಿದರೆ ಜಲಬಿಟ್ಟು, ಭವಿಗಳಸಂಗಡ ಪ್ರಸಂಗವ ಮಾಡಿದರೆ ಆ ಸಮಯದಲ್ಲಿ ಪ್ರಮಾದವಶದಿಂದ ಉದಕವು ದೊರೆಯದಿದ್ದರೆ ಅಲ್ಲಿ ವಿಸರ್ಜನಸ್ಥಾನವ ದ್ರವವಾರುವಂತೆ ಶುಚಿಯುಳ್ಳ ಮೃತ್ತಿಕೆ ಪಾಷಾಣ ಕಾಷ್ಠ ಕಾಡುಕುರುಳು ಪರ್ಣಗಳಿಂದ ಪ್ರಕ್ಷಾಲನಂಗೈದು, ಜಿಹ್ವಾಗ್ರದಲ್ಲಿ ಸಂಬಂಧವಾದ ಗುರುಲಿಂಗೋದಕದಿಂದ ಮತ್ತಾ ಜಿಹ್ವೆಯ ಪ್ರಕ್ಷಾಲಿಸಿ, ಆರುವೇಳೆ ತೂವರಂಗೈದು, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಶ್ರೀಗುರುಬಸವಲಿಂಗಾಯೆಂದು ಘನಮನವ ಚಿದ್ಘನಲಿಂಗಪ್ರಸನ್ನಧ್ಯಾನದಿಂದ ನವನಾಳವೆಂಬ ಕವಾಟಬಂಧನಂಗೈದು, ಪ್ರದಕ್ಷಣವಮಾಡಿ, ಪರಿಪೂರ್ಣ ಚಿದ್ಬೆಳಗಿನೊಳು ಮತ್ತೆಂದಿನಂತೆ ಅತಿಜಾಗ್ರವೆಂಬ ಮಹಾದರುವಿನೊಳ್ ಸತ್ಕøತ್ಯ ಸದ್ಧರ್ಮರಾಗಿರ್ಪುದು. ಮುಂದೆ ಲಿಂಗಾರ್ಚನಾರ್ಪಣಗಳ ಮಾಡಬೇಕಾದರೆ, ಶುದ್ಧೋದಕದಿಂದ ಲಿಂಗಾಬ್ಥಿಷೇಕಸ್ನಾನಂಗೈದು, ಪಾವುಡಗಳ ಮಡಿಮಾಡಿ ಪರಿಣಾಮಾರ್ಪಣ ತೃಪ್ತರಾಗಿರ್ಪುದು. ಇದಕೂ ಮೀರಿದರೆ, ಜಲವ ಬಿಡುವುದು, ಭವಿಗಳಸಂಗಡ ಪ್ರಸಂಗಿಸಿದರೆ ಸ್ನಾನಮಾಡುವ ಪರಿಯಂತರ ಜಿಹ್ವಾಗ್ರದಲ್ಲಿ ಸ್ಥಾಪ್ಯವಾದ ಸತ್ಯಶುದ್ಧ ಗುರುಲಿಂಗೋದಕ ಮಹಾಪ್ರಣಮಪ್ರಸಾದವೆ ಮೊದಲು ಕ್ರಿಯಾಘನ ಗುರುಲಿಂಗಜಂಗಮಾರ್ಚನೆ ತೀರ್ಥಪ್ರಸಾದಸೇವನೆಗಳಂ ಮಾಡಲಾಗದು. ಇದಕೂ ಮೀರಿದರೆ, ತನ್ನ ದೀಕ್ಷಾಗುರು ಶಿಕ್ಷಾಗುರು ಮೋಕ್ಷಾಗುರು ಪರಿಪೂರ್ಣಗುರುಸ್ಮರಣೆ ಧ್ಯಾನದಿಂದ ಸರ್ವಾವಸ್ಥೆಗಳ ನೀಗಿ, ಮಹಾಬಯಲ ಬೆರೆವುದು. ಇದಕೂ ಮೀರಿದರೆ, ತನುವಿಗೆ ಆಯಸದೋರಿ, ಆಪ್ತರಾರೂ ಇಲ್ಲದಂತೆ, ಪರಿಣಾಮಜಲ ದೊರೆಯದ ವೇಳೆಯೊಳು ಮಲಮೂತ್ರಗಳೆರಡೂ ತೋರಿಕೆಯಾದರೆ, ಎಲ್ಲಿ ಪರಿಯಂತರ ಸಂಶಯಗಳುಂಟೊ ಅಲ್ಲಿ ಪರಿಯಂತರವು ಎರಡನೂ ವಿಸರ್ಜಿಸುವುದು. ಆ ಸಂಶಯ ತೀರಿದಲ್ಲಿ ಉದಕವಿದ್ದಲ್ಲಿಗೆ ಹೋಗಿ, ಪೂರ್ವದಂತೆ ಮೃತ್ತಿಕಾಶೌಚಗಳ ಬಳಸಿ, ನಿರ್ಮಲವಾಗಿ ತೊಳೆದು, ಹಸ್ತಪಾದಗಳ ಪ್ರಕ್ಷಾಲಿಸಿ, ಆ ಸಮಯದಲ್ಲಿ ಕ್ರಿಯಾಭಸಿತವಿದ್ದರೂ ರಸಯುಕ್ತವಾದ ಪದಾರ್ಥವಾದರೂ ಪುಷ್ಪಪತ್ರಿಗಳಾದರೂ ಇದ್ದರೆ ಸತ್ಕ್ರಿಯಾಲಿಂಗಾರ್ಚನಾರ್ಪಣಗಳಿಗೆ ಬಾರವು. ಆದ್ದರಿಂದ ಅವು ಇದ್ದವು ನಿಕ್ಷೇಪವ ಮಾಡುವುದು. ಕ್ರಿಯಾಗುರು ಲಿಂಗಜಂಗಮಮುಖದಿಂದ ಶುದ್ಧೋದಕವ ಮಾಡಿ, ತ್ರಿವಿಧ ಸ್ನಾನಂಗೈದು, ಪುರಾತನೋಕ್ತಿಯಿಂದ ಜಂಗಮಲಿಂಗದಲ್ಲಿ ಚಿದ್ಭಸಿತವ ಬೆಸಗೊಂಡು, ಸತ್ಕ್ರಿಯಾರ್ಪಣಗಳನಾಚರಿಸಿ, ನಿತ್ಯಮುಕ್ತರಾಗಿರ್ಪವರೆ ಪೂರ್ವಾಚಾರ್ಯಸಗುಣಾನಂದಮೂರ್ತಿಗಳೆಂಬೆ ಕಾಣಾ ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ವೀರಂಗೆ ರಣಾಗ್ರದ ಕದನ ಭೋರೆಂದು ಕಟ್ಟಿದಲ್ಲಿ ದೂರದಲ್ಲಿರ್ದೆಸೆವನೊಂದಂಬಿನಲ್ಲಿ. ಸೇರಿಬಂದರೆ ಹೊಯಿವ ಬಿಲ್ಲಿನಲ್ಲಿ. ಅವು ಮೀರಿ ಬಂದಲಿ ಇರಿವ ಕಠಾರಿಯಲ್ಲಿ. ಅದು ತಪ್ಪಿದಲ್ಲಿ ತೆಕ್ಕೆಯಲ್ಲಿ ಪಿಡಿವ, ಯುದ್ಧದಲ್ಲಿ ಬಿದ್ದಲ್ಲಿ ಕಡಿವ ಬಾಯಲ್ಲಿ. ಇಂತಿ ಅವರ ಪ್ರಾಣಕ್ಕೆ ಬಂದಲ್ಲಿ ಅವ ತನ್ನ ಧೈರ್ಯ, ವ್ರತವರತುದಿಲ್ಲ. ಹೀಂಗಿರಲಿಲ್ಲವೆ ಸದ್ಭಕ್ತನ ಗುಣ? ಹೊನ್ನು ಹೆಣ್ಣು ಮಣ್ಣುಳ್ಳ ಕಾಲದಲ್ಲಿಯೇ ಪನ್ನಗಧರನ ಶರಣರಿಗೆ ಅನ್ನೋದಕ ವಸ್ತ್ರಂಗಳಿಂದುಪಚಾರವ ಮಾಡುವುದು. ನೀಡಿ ಮಾಡುವ ಭಕ್ತರ ಮಠದ ಒಡಗೊಂಡು ಹೋಗಿ ತೋರುವುದು ಅದಕ್ಕಾಗದಿರ್ದಡೆ ಹರಶರಣರ ಕಮಂಡಲ ಕೊಂಡುಹೋಗಿ ಮಡುವಿನಲ್ಲಿ ಅಗ್ಘವಣಿಯ ತಂದು, ಪಾದವ ತೊಳುವುದು. ಅದಕ್ಕಾಗದಿರ್ದಡೆ ಶಿವಶರಣ ಕಂಡು, ಇದಿರೆದ್ದು ನಮಸ್ಕರಿಸುವುದು. ಇಷ್ಟರೊಳಗೊಂದು ಗುಣವಿಲ್ಲದಿರ್ದರೆ ಅವ ಭಕ್ತನಲ್ಲ, ಅವ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತಿಳಿಯದ ಜನರು ಅವು ಶಿವನಲ್ಲ, ಜಡಜೀವಿಗಳು ಎಂಬುವರು. ಅದೆಂತಯ್ಯಾ `ಪಂಚತತ್ತ್ವಂ ಮುಖೋದ್ಭೂತಂ' ಎಂಬಾಗಮವಾಕ್ಯಸಿದ್ಧಿ? ಪಂಚತತ್ತ್ವದಿಂಗಳೆಲ್ಲ ಶಿವನ ಪಂಚಮುಖದಿಂದಿದಾದವು. ಆ ಪಂಚತತ್ತ್ವಂದ ಸಕಲ ಚರಾಚರಬ್ರಹ್ಮಾಂಡವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾನ ಲೀಲೆಯಿಂದ ಕಲ್ಲಯ್ಯಾ.
--------------
ಸಿದ್ಧರಾಮೇಶ್ವರ
ಹಸಿವು ತೃಷೆ ನಿದ್ರೆ ರೋಗಾದಿ ಬಾಧೆಗಳು ತನಗಾಗುತ್ತಿಹವೆಂಬ ಜೀವಭಾವವ ಮರೆದು, ಅವು ಲಿಂಗದ ಸದಿಚ್ಛೆಯಿಂದ ಅಂಗಕ್ಕುಂಟಾಗಿಹವೆಂಬ ಶಿವಭಾವವು ಸದಾಸನ್ನಿಹಿತವಾಗಿದ್ದಡೆ ಶರಣನ ಹಸಿವು ತೃಷೆ ಮುಂತಾದ ಸರ್ವಭಂಗವು ಲಿಂಗದಲ್ಲಿ ಲೀನವಾಗಿ, ಹುಟ್ಟುಗೆಟ್ಟು, ಸಾವಿನಸಂತಾಪವಿಲ್ಲದೆ ನಾನು ನನ್ನದೆಂಬಹಂಕಾರ ಮಮಕಾರಗಳು ಮರೆಮಾಜಿ ಸಂಚಿತ ಅಗಾಮಿ ಪ್ರಾರಬ್ಧವೆಂಬ ಕರ್ಮತ್ರಯ ಮುಂತಾದ ಪಾಶಗಳು ನಾಶವಾಗಿ, ನಿತ್ಯಮುಕ್ತಿಯಾಗುತ್ತಿಹುದಯ್ಯಾ. ಕೂಡಲಚೆನ್ನಸಂಗಮದೇವಾ, ಇದು ನಿಮ್ಮ ಭಕ್ತಿದೇವತೆಯ ಚಮತ್ಕೃತಿಯೆಂದರಿದೆನು.
--------------
ಚನ್ನಬಸವಣ್ಣ
ಮತ್ತಮಾ ಸಾಧಾರದೀಕ್ಷೆಯು ಸಬೀಜದೀಕ್ಷೆ ನಿರ್ಬೀಜದೀಕ್ಷೆ ಚಿನ್ಮಯ ದೀಕ್ಷೆ ಯೆಂದು ಮೂರು [ಪ್ರಕಾರದವು]. ಅವು ಯಥಾಕ್ರಮದಿಂದ ಕರ್ಮಕಾಂಡ ಭಕ್ತಿ ಕಾಂಡ ಜ್ಞಾನಕಾಂಡಗಳಲ್ಲಿಯ ದೀಕ್ಷೆ ಎನಿಸಿಕೊಂಬವು. ಇಂತೆಂದು ಕಾರಣಾಗಮ ಪೇಳೂದಯ್ಯಾ. ಅವರೊಳು ನಿರ್ಬೀಜದೀಕ್ಷೆ[ಯು ಸದ್ಯೋ ನಿರ್ವಾಣದೀಕ್ಷೆ ಎಂದು] ಚಿರಂ ನಿರ್ವಾಣದೀಕ್ಷೆ ಎಂದು ಎರಡು ಭೇದವು ಪೇಳಲ್ಪಡುತ್ತಿಹುದು. ಅವರೊಳು ಅತ್ಯಂತ ವಿರಕ್ತನಾದ ಶಿಷ್ಯ[ನು] ಅನೇಕ ಭವಂಗಳಲ್ಲಿ ಮಾಡಲ್ಪಟ್ಟ ಸಂಚಿತಕರ್ಮಂಗಳನು, ಮತ್ತಮಾ ಸಂಚಿತಕರ್ಮರಾಶಿಯೊಳಂ ಆಗ ತಾಳ್ದಿರ್ದ ಶರೀರವಿಡಿದು ಅನುಭವಿಸುತ್ತಿರ್ದ ಪ್ರಾರಬು ಕರ್ಮಂಗಳನು, ಮುಂದೆ ಭವಾಂ ತರಂಗಳಲ್ಲಿ ಅನುಭವಿಸಲುಳ್ಳ ಆಗಾಮಿ ಕರ್ಮಂಗಳನು ಶೋದ್ಥಿಸಿ ಸದ್ಯೋನ್ಮುಕ್ತಿ ಯನೆಯಿಸುವ ದೀಕ್ಷೆ ಸದ್ಯೋನಿರ್ವಾಣದೀಕ್ಷೆ ಎನಿಸುವದಯ್ಯಾ, ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಆದಿ ಅನಾದಿಯೆಂಬವು ಸಂಗಷ್ಟವಾಗಿರ್ದು, ವಿಭೇದವಾಗುವಲ್ಲಿ ಕುಂಡಲಿಯ ಶಕ್ತಿಯಲ್ಲಿ ಪ್ರಾಣವಾಯು ಪ್ರಣವಸ್ವರವನೊಡಗೂಡಿ ಬ್ರಹ್ಮಸ್ಥಾನದಲ್ಲಿ ಸ್ಥಾಪ್ಯ ಶಿವನಾಗಿ, ಭ್ರೂಮಧ್ಯಕಂಠಸ್ಥಾನದಲ್ಲಿ ನಿಃಕಲಸ್ವರೂಪನಾಗಿ, ಹೃದಯನಾಬ್ಥಿಯಲ್ಲಿ ಸಕಲನಿಃಕಲನಾಗಿ, ಸ್ವಾದ್ಥಿಷ್ಠಾನ ಆಧಾರದಲ್ಲಿ ಕೇವಲಸಖನಾಗಿ, ಆ ಸಕಲಕ್ಕೆ ಎರಡು ಪಾದವನಿತ್ತು, ಒಂದು ಪಾದಕ್ಕೆ ಕ್ರಿಯಾಶಕ್ತಿ, ಒಂದು ಪಾದಕ್ಕೆ ಜ್ಞಾನಶಕ್ತಿಯ ಮಾಡಿ ನಿಲ್ಲಿಸಿ, ಮೇಲಣ ಸಕಲ ನಿಃಕಲತತ್ತ್ವಕೈದಿ, ಅಲ್ಲಿಗೆ ಎರಡು ಹಸ್ತವನಿತ್ತು, ಒಂದು ಹಸ್ತಕ್ಕೆ ಆದಿಶಕ್ತಿ, ಒಂದು ಹಸ್ತಕ್ಕೆ ಇಚ್ಛಾಶಕ್ತಿಯನಾದಿ ಮಾಡಿ ನಿಲಿಸಿ, ಮೇಲಣ ನಿಃಕಲತತ್ತ್ವವನೈದಿ, ಅಲ್ಲಿಗೆ ನಾಲ್ಕು ಪಾದವನಿತ್ತು, ಅವು ಆವವು ಎಂದಡೆ, ಜಿಹ್ವೆ ಘ್ರಾಣ ನೇತ್ರ ಶ್ರೋತ್ರವೆಂಬ ನಾಲ್ಕು ಪಾದ ವನಾದಿಮಾಡಿ ನಿಲ್ಲಿಸಿ, ನಾಲ್ಕು ಪಾದವಂ ನಿಲ್ಲಿಸಿದುದರಿಂದ ನಂದಿಯೆಂಬ ನಾಮವಾಯಿತ್ತು. ಆ ನಂದೀಶ್ವರಂಗೆ ಚಿತ್‍ಶಕ್ತಿಯೆ ಅಂಗ, ಪರಶಕ್ತಿಯೆ ಮುಖ. ಇಂತಪ್ಪ ನಂದೀಶ್ವರ ನಲಿದಾಡಿ ಅನಾದಿ ಪರಶಿವ ಅಖಿಳ ಬ್ರಹ್ಮಾಂಡವ ಹೊತ್ತಿಪ್ಪನಲಾಯೆಂದರಿದು, ಆದಿವಾಹನವಾದನು, ಅದೀಗ ಆದಿವೃಷಭನೆಂಬ ನಾಮವಾಯಿತ್ತು. ಆದಿವೃಷಭನ ಆದಿಯಲ್ಲಿ ಪರಶಿವನಿಪ್ಪನು, ಆ ಪರಶಿವನಾದಿಯಲ್ಲಿ ನಿಃಕಲವಿಪ್ಪುದು, ಆ ನಿಃಕಲದಾದಿಯಲ್ಲಿ ಸಕಲ ನಿಃಕಲವಿಪ್ಪುದು. ಆ ಸಕಲ ನಿಃಕಲದಾದಿಯಲ್ಲಿ ಕೇವಲ ಸಕಲವಿಪ್ಪುದು. ಆ ಸಕಲವೆಂದರೆ ಅನಂತತತ್ತ್ವ. ಬ್ರಹ್ಮಾಂಡ ಕೋಟ್ಯಾನುಕೋಟಿ ಲೋಕಾಲೋಕಂಗಳು ದೇವದಾನವ ಮಾನವರು ಸಚರಾಚರ ಎಂಬತ್ತನಾಲ್ಕು ಲಕ್ಷ ಜೀವಜಂತುಗಳುದ್ಭವಿಸಿದವು. ಆ ಪಿಂಡ ಬ್ರಹ್ಮಾಂಡದ ಹೊರೆಯಲ್ಲಿ ಸಕಲಪದಾರ್ಥಗಳುದ್ಭವಿಸಿದವು. ಸಕಲಪದಾರ್ಥಂಗಳ ಪುಣ್ಯಪಾಪದ ಸಾರವ ಕೈಕೊಂಬುದಕ್ಕೆ ದೇವನಾವನುಂಟೆಂದು ಆಹ್ವಾನಿಸಿ ನೋಡಲು, ಆ ನಿಃಕಲ ಮಹಾಲಿಂಗವೆ ಕ್ರಿಯಾಶಕ್ತಿಯ ಮುಖದಲ್ಲಿ ಇಷ್ಟಲಿಂಗವಾಗಿ ಬಂದು, ಜ್ಞಾನಶಕ್ತಿಮುಖದಲ್ಲಿ ಸಕಲಪದಾರ್ಥಂಗಳ ಕೈಕೊಂಬಲ್ಲಿ, ಪುಣ್ಯಪಾಪಂಗಳ ಸಾರವಳಿದು, ಲಿಂಗ ಸಾರವಾದ ರೂಪ ಇಷ್ಟಲಿಂಗಕ್ಕೆ ಕೊಟ್ಟು, ಆ ರುಚಿಪ್ರಸಾದವ ಜ್ಞಾನಶಕ್ತಿ ಆದಿಶಕ್ತಿ ಕೈಯಲ್ಲಿಪ್ಪ ಪ್ರಾಣಲಿಂಗಕ್ಕೆ ಇಚ್ಛಾಶಕ್ತಿಯ ಮುಖದಲ್ಲಿ ಕೊಡಲು, ಆ ರುಚಿ ಪ್ರಸಾದವ ಪ್ರಾಣಲಿಂಗವಾರೋಗಿಸಿ, ಪರಮ ಪರಿಣಾಮವನೈದಲು, ಆ ಪರಿಣಾಮ ಪ್ರಸಾದವ ಜ್ಞಾನಶಕ್ತಿಯು ನಂದೀಶ್ವರಂಗೆ ಕೊಡಲು, ಆ ಪರಮ ತೃಪ್ತಿಯ ಶೇಷ ನಂದೀಶ್ವರ ಆರೋಗಿಸಿ ಪರವಶವನೈದಲು, ಆ ಪರವಶದ ಶೇಷವ ಜ್ಞಾನಶಕ್ತಿ ಆರೋಗಿಸಿ, ಅಡಿಮುಡಿಗೆ ತಾನೆ ಆದಿಯಾಗಲು, ಅದೀಗ ಅಡಿಮುಡಿಯ ಶೇಷ ಹೊತ್ತಿಪ್ಪನೆಂದು ವೇದಾಗಮಶಾಸ್ತ್ರಪುರಾಣಪುರುಷರು ನುಡಿಯುತಿಪ್ಪರು. ಇಂತಪ್ಪ ಬಸವನ ಆದಿಮೂಲವ ಬಲ್ಲ ಶರಣನಾಯಿತ್ತು ತೊತ್ತು ಮುಕ್ಕುಳಿಸಿ ಉಗುಳುವ ಪಡುಗ, ಮೆಟ್ಟುವ ಚರ್ಮ ಹಾವುಗೆಯಾಗಿ ಬದುಕಿದೆನು ಕಾಣಾ, ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಸಂಗಮೇಶ್ವರದ ಅಪ್ಪಣ್ಣ
ಜಗವಿದ್ದಂದು ನೀನೆ, ಜಗವಿಲ್ಲದಂದು ನೀನೆ ; ಪಂಚಶತಕೋಟಿ ವಿಸ್ತೀರ್ಣ ಭೂಮಂಡಲವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಈರೇಳುಭುವನ ಹದಿನಾಲ್ಕು ಲೋಕವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅರಿದಡೆ ಆತ್ಮನಲ್ಲ, ಅರಿಯದಿದ್ದಡೆ ಆತ್ಮನಲ್ಲ. ತೋರಿತ್ತಾದಡೆ ವಿಷಯ, ತೋರದಿದ್ದಡೆ ಶೂನ್ಯವೆನಿಸುಗು, ಬೊಮ್ಮದ ಅರಿವಿನ್ನೆಲ್ಲಿಯದೊ ? ಅವು ತಾನರಿವಾಗಿದ್ದು, ಸ್ವಾನುಭಾವದ ಹೊರೆಯಲ್ಲಿದ್ದು, ಸನ್ನಿದ್ಥಿ, ನಿತ್ಯನಿಜಾನಂದಾತ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂದರಿವುದು.
--------------
ಉರಿಲಿಂಗಪೆದ್ದಿ
ಆದಿ ಇದ್ದಂದು ನೀನೆ, ಆದಿ ಇಲ್ಲದಂದು ನೀನೆ ; ಅನಾದಿ ಇದ್ದಂದು ನೀನೆ, ಅನಾದಿ ಇಲ್ಲದಂದು ನೀನೆ ; ನಾದ ಬಿಂದು ಕಳೆ ಇದ್ದಂದು ನೀನೆ, ಅವು ಇಲ್ಲದಂದು ನೀನೆ ; ಸಾವಯವ ನಿರವಯವವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನಿರಾಮಯವೆಂಬ ಭಕ್ತನ ಅಂಗದಲ್ಲಿ ಝೇಂಕಾರವೆಂಬ ಜಂಗಮವು ಜಂಗಿಟ್ಟು ನಡೆಯಲೊಡನೆ ನಿರಂಜನವಾಯಿತ್ತು. ಆ ನಿರಂಜನದೊಡನೆ ನಿರಾಕಾರವಾಯಿತ್ತು. ಆ ನಿರಕಾರದೊಡನೆ ಆಕಾರಲಿಂಗವಾಗಿ, ಮಂತ್ರಘೋಷವ ಘೋಷಿಸುತಿರ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ನಾದಪ್ರಭೆ, ಬಿಂದುಪ್ರಭೆ, ಕಳಾಪ್ರಭೆ ಇಂತೀ ತ್ರಿವಿಧಪ್ರಭೆಗಳು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು ನೋಡಾ. ನಾದಪ್ರಭೆಯು ಭಕ್ತ-ಮಹೇಶ್ವರ, ಬಿಂದು ಪ್ರಭೆಯು ಪ್ರಸಾದಿ-ಪ್ರಾಣಲಿಂಗಿ, ಕಳಾಪ್ರಭೆಯು ಶರಣ-ಐಕ್ಯ. ಇಂತೀ ಷಡ್ವಿಧಮೂರ್ತಿಗಳಿಗೆ ಷಡ್ವಿಧಲಿಂಗವು. ಅವು ಆವಾವುಯೆಂದೊಡೆ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗ. ಈ ಷಡ್ವಿಧಲಿಂಗಕು ಷಡ್ವಿಧ ಶಕ್ತಿಯರು ಅವು ಆವಾವುಯೆಂದೊಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಫಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿತ್‍ಶಕ್ತಿ. ಇಂತೀ ಶಕ್ತಿಯರಿಗೂ ಷಡ್ವಿಧಭಕ್ತಿ. ಅವು ಆವಾವುಯೆಂದೊಡೆ: ಸದ್ಭಕ್ತಿ, ನೈಷ್ಠಿಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೂ ಷಡ್ವಿಧಹಸ್ತ. ಅವು ಆವಾವುಯೆಂದೊಡೆ: ಸುಚಿತ್ತಹಸ್ತ, ಸುಬುದ್ಧಿಹಸ್ತ, ನಿರಹಂಕಾರಹಸ್ತ, ಸುಮನಹಸ್ತ, ಸುಜ್ಞಾನಹಸ್ತ, ನಿರ್ಭಾವಹಸ್ತ, ಈ ಷಡ್ವಿಧಹಸ್ತಗಳಿಗೂ ಷಡ್ವಿಧ ಕಲೆಗಳು. ಅವು ಆವಾವುಯೆಂದೊಡೆ: ನಿವೃತ್ತಿಕಲೆ, ಪ್ರತಿಷ್ಠಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆ. ಈ ಷಡ್ವಿಧಕಲೆಗಳಿಗೂ ಷಡ್ವಿಧಪರಂಗಳು. ಅವು ಆವಾವುಯೆಂದೊಡೆ: ಶುದ್ಧಜ್ಞಾನವೇ ಪರ, ಬದ್ಧಜ್ಞಾನವೇ ಪರ, ನಿರ್ಮಲಜ್ಞಾನವೇ ಪರ, ಮನೋಜ್ಞಾನವೇ ಪರ, ಸುಜ್ಞಾನವೇ ಪರ, ಪರಮಜ್ಞಾನವೇ ಪರ. ಈ ಷಡ್ವಿಧಪರಗಳಿಂದತ್ತತ್ತ ಮಹಾಜ್ಞಾನದ ಬೆಳಗು, ಸ್ವಯಜ್ಞಾನದ ತಂಪು, ನಿರಂಜನದ ಸುಖ. ಆ ನಿರಂಜನದ ಸುಖದೊಳಗೆ ಸುಳಿದಾಡುವ ಝೇಂಕಾರವೆಂಬ ಜಂಗಮವ ನಿರಾಮಯವೆಂಬ ಭಕ್ತನೇ ಬಲ್ಲ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->