ಅಥವಾ

ಒಟ್ಟು 40 ಕಡೆಗಳಲ್ಲಿ , 23 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಭಕ್ತನಾದಡೆ ತನುವಿನಾಸೆಯ ಬಿಡಬೇಕು. ಲಿಂಗಭಕ್ತನಾದಡೆ ಮನದಾಸೆಯ ಬಿಡಬೇಕು. ಜಂಗಮಭಕ್ತನಾದಡೆ ಧನದಾಸೆಯ ಬಿಡಬೇಕು. ಗುರುವಿನ ಅನುವನರಿಯನಾಗಿ ಗುರು ಸಂಬಂದ್ಥಿಯಲ್ಲ. ಲಿಂಗದ ನಿಲವನರಿಯನಾಗಿ ಲಿಂಗಸಂಬಂದ್ಥಿಯಲ್ಲ. ಜಂಗಮದಲ್ಲಿ ನಿಜವನರಿಯನಾಗಿ ಜಂಗಮ ಸಂಬಂದ್ಥಿಯಲ್ಲ. ಇದು ಕಾರಣ, ಗುರುಲಿಂಗಜಂಗಮವನರಿಯಲೇ ಆಗದು, ನೆರೆ ಅರಿದಡೆ, ಅರಿಯಬೇಕು ನಿಃಕಳಂಕ ಮಲ್ಲಿಕಾರ್ಜುನಲ್ಲಿ. ಆ ಶರಣ ಉರಿಯುಂಡ ಕರ್ಪುರದಂತೆ.
--------------
ಮೋಳಿಗೆ ಮಾರಯ್ಯ
ಆಗದಾಗದು ಮಾಡದವಂಗೆ ಬ್ರಹ್ಮಪದವಿ. ಆಗದಾಗದು ಮಾಡದವಂಗೆ ವಿಷ್ಣುಪದವಿ. ಆಗದಾಗದು ಮಾಡದವಂಗೆ ಶಿವಪದವಿ. ಆಗದು ಮಾಡದವಂಗೆ ತೂರ್ಯಾತೀತ ನಿರ್ಮಲ ನಿಜಾನಂದ, ಕಪಿಲಸಿದ್ಧಮಲ್ಲಿಕಾರ್ಜುನನ ಅರಿವು.
--------------
ಸಿದ್ಧರಾಮೇಶ್ವರ
ಗುರುವಚನದಿಂದಲ್ಲದೆ ಲಿಂಗವನರಿಯಬಾರದು. ಗುರುವಚನದಿಂದಲ್ಲದೆ ಜಂಗಮವನರಿಯಬಾರದು. ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು. ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು. ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ ? ತನ್ನಲ್ಲಿ ತಾನು ಸನ್ನಹಿತನಾದೆಹೆನೆಂದಡೆ ಗುರುವಿಲ್ಲದೆ ಆಗದು ಕೇಳಾ. ಎನ್ನ ಅಜಗಣ್ಣನೆಂಬ ಗುರುವಿಲ್ಲದೆ ಆರೂಢಿಯ ಕೂಟ ಸಮನಿಸದು ಕೇಳಾ.
--------------
ಮುಕ್ತಾಯಕ್ಕ
ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡುಂಬಿರಿ, ಪ್ರಸಾದವಾವುದು? ಓಗರವಾವುದು? ಬಲ್ಲವರು ನೀವು ಹೇಳಿರೇ. ಕೈಯಲಿಕ್ಕಿದವ ಶಿವದ್ರೋಹಿ, ಕೈಯಾಂತು ಕೊಂಡವ ಗುರುದ್ರೋಹಿ, ಕಾಯವ ಕಳೆದು ಕಾಯಪ್ರಸಾದಿ, ಜೀವವ ಕಳೆದು ಜೀವಪ್ರಸಾದಿ, ಪ್ರಾಣವ ಕಳೆದು ಪ್ರಾಣಪ್ರಸಾದಿ. ಕಾಯ ಜೀವ ಇಂದ್ರಿಯ ವಿರೋಧಿಗಲ್ಲದೆ ಮತ್ತಾರಿಗೂ ಆಗದು. ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗಲ್ಲದೆ ಮತ್ತಾರಿಗೂ ಆಗದು.
--------------
ಚನ್ನಬಸವಣ್ಣ
ಪರುಷವಿದ್ದುದ ಕಂಡು ಪರಿಣಾಮಬಡುವರು, ಇಷ್ಟಲಿಂಗ ಬಿದ್ದಿತ್ತೆಂದು ಕುತ್ತಿಕೊಂಡು ಸಾವರು. ಅರಿದರಿದು ಗುರುಶಿಷ್ಯಸಂಬಂಧವು, ಅರಿವುಳ್ಳವರಿಗಲ್ಲದೆ ಮತ್ತಾರಿಗೆಯೂ ಆಗದು. ಕುರುಹು ಘನವೋ ? ಲಿಂಗ ಘನವೋ ? ಅರಿವುಳ್ಳವರು ಹೇಳಿರೆ. ಮರಹು ಕವಿದಹುದೆಂದು ಕುರುಹ ತೋರಿದನಲ್ಲದೆ ಅರಿದರಿವ ಮರೆದರೆ ಕೂಡಲಚೆನ್ನಸಂಗಯ್ಯಂಗೆ ಅವನಂದೇ ದೂರ.
--------------
ಚನ್ನಬಸವಣ್ಣ
ಅಂಜಿದಡೆ ಮಾಣದು, ಅಳುಕಿದಡೆ ಮಾಣದು, ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ. ಕಕ್ಕುಲತೆಗೆ ಬಂದಡೆ ಆಗದು ನೋಡಾ. ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು, ಕೂಡಲಸಂಗಮದೇವಾ.
--------------
ಬಸವಣ್ಣ
ಕಾಮಿಸಿ ಕಲ್ಪಿಸಿ ಭಾವಿಸಿ ಬರಿದೆ ಬಳಲಿದೆ. ಚಿಂತೆ ಮರುಳುತನಂ ಅದೆಂತು ಬಂದುದನಂತೆ ಕಾಬುದು. ಚಿಂತೆ ಮರುಳುತನಂ ಅಚಿಂತ್ಯ ಸಕಳೇಶ್ವರ ಮಾಡಿದಂತೆ. ಅಂತೆಯಲ್ಲದೆ ಎಂತೂ ಆಗದು ಚಿಂತೆ ಮರುಳುತನಂ.
--------------
ಸಕಳೇಶ ಮಾದರಸ
ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ. ಅದ್ವೈತಿಯಾದಡೆ ತನುವಿಕಾರ, ಮನದ ಸಂಚಲ, ಭಾವದ ಭ್ರಾಂತು, ಅರಿವಿನ ಮರಹು, ಇಂತೀ ಚತುರ್ವಿಧಂಗಳಲ್ಲಿ ವಿಧಿನಿಷೇಧಂಗಳಳಿದು, ಚಿದ್ಬ್ರಹ್ಮದೊಳವಿರಳಾತ್ಮಕವಾದುದು ಅದ್ವೈತ. ಅಂತಪ್ಪ ವಿಧಿನಿಷೇಧಂಗಳು ಹಿಂಗದೆ, ಲಿಂಗವನರಿಯದೆ, ವಾಗದ್ವೈತದಿಂದ ನುಡಿದು ಅದ್ವೈತಿ ಎನಿಸಿಕೊಂಬುದೆ ದ್ವೈತ. ಇಂತಪ್ಪ ದ್ವೈತಾದ್ವೈತಂಗಳಿಗೆ ಸಿಲುಕದ, ಹರಿಹರಬ್ರರ್ಹದಿಗಳನರಿಯದ ವೇದಶಾಸ್ತ್ರ ಆಗದು ಪುರಾಣ ಇತಿಹಾಸ ರಹಸ್ಯಛಂದಸ್ಸು ಅಲಂಕಾರ ನಿಘಂಟು ಶಬ್ದತರ್ಕಂಗಳೆಂಬ ಕುತರ್ಕಂಗಳಿಗೆ ನಿಲುಕದ ನಿತ್ಯನಿಜೈಕ್ಯ ನಿರುಪಮಸುಖಿಯಾಗಿ, ತಾನಿದಿರೆಂಬ ಭಿನ್ನಭಾವವಿಲ್ಲದ ಸ್ವಯಾದ್ವೈತಿ ತಾನೆ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಅಂಗ ಮೂವತ್ತಾರರ ಮೇಲೆ ಲಿಂಗ. ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ, ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ ಸುಸಂಗ ಪ್ರಸಾದವ ಕೊಳಬಲ್ಲವಂಗೆ ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು !
--------------
ಅಲ್ಲಮಪ್ರಭುದೇವರು
ನಿರ್ವಯಲು ಸಾಮೀಪ್ಯ ಸಾಯುಜ್ಯವೆಂಬ ಒಡ್ಡುಗಲ್ಲ ಮೇಲೆ ಸಕಲಸಾಮ್ರಾಜ್ಯವೆಂಬ ಶಿವಪುರವುಂಟು. ಆ ಪುರಕ್ಕೆ ವಜ್ರ ಮುತ್ತು ರತ್ನದಿಂದ ತೆತ್ತಿಸಿದ ಕೊತ್ತಳ. ಕೋಳು ಹೋಗದ ಮುಗಿಲಟ್ಟಣೆಯ ಪುರವನಾಳೆನೆಂಬುವರು. ಅಂದು ಆಗದು ಸರಸವಲ್ಲ. ಶಾಸ್ತ್ರದ ಕೊನೆಯ ಮೇಲಣ ಅವಧಾನದಂತೆ ತೋರಿಯಡಗುವ ವಿದ್ಯುಲ್ಲತೆಯಂತೆ ಬಯಲಲ್ಲಿ ಮೂಡುವ ಸುರಧನುವಿನಂತೆ ಮರೀಚಿಕದಂತೆ, ಕುಸುಮದ ನನೆಯಂತೆ [ದುಗ್ಧಘೃತ] ಮಿಶ್ರದಂತೆ ಮನದಲ್ಲಿಯೇ ವಾಸವಪ್ಪ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು.
--------------
ಬಾಚಿಕಾಯಕದ ಬಸವಣ್ಣ
ಲಿಂಗದಲ್ಲಿ ಸಾಹಿತ್ಯನು, ಜಂಗಮದಲ್ಲಿ ಸನುಮತನು, ಪ್ರಸಾದದಲ್ಲಿ ಸನ್ನಹಿತನು, ಈ ತ್ರಿವಿಧ ಸಂಬಂಧ ಸಾರಾಯ ಬಸವಣ್ಣಂಗಲ್ಲದೆ ಮತ್ತಾರಿಗೆಯೂ ಆಗದು. ಕೂಡಲಚೆನ್ನಸಂಗಯ್ಯನ ದಯದಿಂದ ಆನು ಬದುಕಿದೆನು.
--------------
ಚನ್ನಬಸವಣ್ಣ
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವನರಿದಿಹೆವೆಂದರೆ ಮತ್ತಾರಿಗೂ ಆಗದು. ಸಾಧಿಸುವ ಸಾಧಕಂಗಲ್ಲದೆ ಮತ್ತಾರಿಗೂ ಆಗದು. ಭೇದಿಸುವ ಭೇದಕಂಗಲ್ಲದೆ ಮತ್ತಾರಿಗೂ ಆಗದು. ಪ್ರಸಾದಿಯ ಪ್ರಸಾದ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗಲ್ಲದೆ ಮತ್ತಾರಿಗೂ ಆಗದು.
--------------
ಚನ್ನಬಸವಣ್ಣ
ವ್ಯಾಸಾದಿಗಳಂತೆ ಶ್ವಾನಜ್ಞಾನಿಗಳಪ್ಪರೆ ಸತ್ಯಶುದ್ಧಶರಣರು ? `ನ ದೇವಃ ಕೇಶವಾತ್ಪರಂ' ಎಂದ ವ್ಯಾಸ, ತನ್ನ ತೋಳುಗಳನೆರಡನು ಹೋಗಲಾಡನೆ ? ಹಿಡಿಯರೆ ಅಂದು ಆಕಾಶಗಣಂಗಳು ? ಮರಳಿ ಈಶ್ವರನಲ್ಲದೆ ದೈವವಿಲ್ಲೆಂದು ಶ್ರುತ್ಯರ್ಥವನರಿದು ದೇವಾರ್ಚನೆಯಂ ಮಾಡಲಾಗಿ ಆ ವ್ಯಾಸನ ಎರಡು ಕರಂಗಳು ಬಂದು, ಅಶೇಷವಹಂತಹ ಚರ್ಮ ಈಶ್ವರನ ಆಲಯದ ಮುಂದೆ ಧ್ವಜಪತಾಕೆಗಳಾಗದೆ ? ಈರೇಳು ಲೋಕವು ಅರಿಯೆ. ಅನಂತಪುರಾಣಾಗಮಗಳಲ್ಲಿ ಕೇಳಿರೆ: ಈಶ್ವರಾರ್ಚನೆಯ ಮಾಡಿ ಮರಳಿ ವಿತಥವಾಗಿ ಪರದಾರಕಿಚ್ಚೈಸಿದಡೆ ಇವಂಗಿದೆ ಪ್ರಿಯವೆಂದು ಆ ಇಂದ್ರನ ಮೈಯೆಲ್ಲಾ ಅನಂಗನಹಂತಹ ಅಂಗವಾಗದೆ ? ಈರೇಳು ಭುವನವರಿಯೆ. ಮರಳಿ ಈಶ್ವರಾರ್ಚನೆಯ ಮಾಡಲು ಆ ಅಂಗದ ಯೋನಿ[ಕೂ]ಪೆಲ್ಲಾ ನಯನಂಗಳಾಗವೆ ಇಂದ್ರಂಗೆ ? ಇದನರಿದು ಶಿವಾರ್ಚನೆಯಂ ಮಾಡಿ ಶಿವನವರಿಗೆ ಧನಸಹಿತ ತ್ರಿವಿಧವ ನಿವೇದಿಸುವುದು ಶಿವಾಚಾರ ಕೇಳಿರಣ್ಣಾ. ಅರಿದರಿದು ಬರಿದೊರೆ ಹೋಗಬೇಡ. ಋಷಿಗಳ ಶಿವಾರ್ಚನೆಯ ವಿಶೇಷವಹಂತಹ ಫಲವ ಕೇಳಿರಣ್ಣಾ: ಕೀಳುಗುಲದ ಋಷಿಗಳ ಕುಲನಾಮಂಗಳ ತೊಡೆದು ಮೇಲುಗುಲನಾಮವ ಕೇಳಿರಣ್ಣಾ. ಅದು ಹೇಗೆಂದಡೆ: ಮುಖದಿಂದುತ್ಪತ್ಯವಾದ ಬ್ರಾಹ್ಮಣನು ಆ ಋಷಿಗಳ ಶಾಖೆಯಾದನು, ಅವರ ಗೋತ್ರವಾದನು. ಶಿವಾಚಾರ ವಿಶೇಷವೊ ? ಕುಲ ವಿಶೇಷವೊ ? ಹೇಳಿರಣ್ಣಾ. `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬ ಕ್ರೂರಹೃದಯರ ಮಾತ ಕೇಳಲಾಗದು. ಹೋಹೋ ಶಿವನ ಮುಖದಿಂದ ಹುಟ್ಟಿ ಉತ್ತಮವಹಂತಹ ಬ್ರಾಹ್ಮಣಧರ್ಮದಲ್ಲಿ ಜನಿಸಿದಂತಹ ವರ್ಣಿಗಳು ಕ್ಷತ್ರಿಯನ ಭಜಿಸ ಹೇಳಿತ್ತೆ ಈ ವೇದ ? `ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಜೇತ್' ಎಂದುದಾಗಿ_ ಶಿವನನೆ ಧ್ಯಾನಿಸಿ, ಇತರ ದೇವತೆಗಳ ಬಿಡಹೇಳಿತ್ತಲ್ಲವೆ ? ಅದಂತಿರಲಿ, ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಸತ್ತ ಕಪಿಲೆಯ ಕಡಿದು ಹಂಚಿ ತಿನ್ನ ಹೇಳಿತ್ತೆ ವೇದ ? ಆಗದು ಅವದಿರ ಸಂಗ. ಅಧಮರ ವರ್ಣಾಶ್ರಮಹೀನರ ಕರ್ಮವ ಕಳೆದೆಹೆವೆಂದು ದತ್ತಪುತ್ರರಾಗಿ ಹೊರಸಿ[ನಡಿ]ಯಲಿ ನುಸುಳ ಹೇಳಿತ್ತೇ ಆ ವೇದ ? ಭುಂಜಿಸಿ ಮುಕ್ತಿಯನಿತ್ತಿಹೆವೆಂದಡೆ ಅದಂತಿರಲಿ, ಹಲ ಕೆಲ ಕಾಲ ವಂದಿಸಿದ ಗೌತಮಂಗೆ ಬಾರದೆ ಅಂದು ಗೋವಧೆ ? ಅದಂತಿರಲಿ, ಬ್ರಾಹ್ಮಣರೆ ದೈವವೆಂದು ದಾನಾದಿಗಳ ಮಾಡಿದ ಕರ್ಣನ ಶಿರಕವಚ ಹೋಗದೆ ಜಗವರಿಯೆ ? ವಿಷ್ಣುದೈವವೆಂದರ್ಚಿಸಿದ ಬಲಿ ಬಂಧನಕ್ಕೆ ಬಾರನೆ ಮೂಜಗವರಿಯೆ ? ಶಿಬಿಯ ಮಾಂಸವ ಕೊಂಡು ಇತ್ತ ಮುಕ್ತಿಯ ಕೇಳಿರಣ್ಣಾ. ಅವಂಗೆ ಬಂದ ವಿಧಿಯ ಹೇಳಲಾಗದು. ಅದಂತಿರಲಿ, ಶಿವನ ಭಕ್ತರಿಗೆ ಪರಮಾಣುವಿನಷ್ಟು ಕಾಂಚನವನೀಯೆ ಅಣಿಮಾದ್ಯಷ್ಟಮಹದೈಶ್ವರ್ಯವನೀವರು, ಮೇಲೆ ಮುಕ್ತಿಯಹುದು. ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ಭೂಲೋಕಾಧಿಪತಿರ್ಭೂತ್ವಾ ಶಿವ ಸಾಯುಜ್ಯಮಾಪ್ನುಯಾತ್ ಎಂದುದಾಗಿ, ಅದಲ್ಲದೆ ಮತ್ತೆ ದಾನಪರಿಗ್ರಹಂಗಳಂ ಕೊಂಡ ಕೆಲಬರ ಮುಕ್ತರ ಮಾಡಿ ಶಿವಲೋಕಕ್ಕೆ ಕೊಂಡೊಯ್ದುದುಂಟಾದಡೆ ಹೇಳಿರಣ್ಣಾ ? ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣಮಹಾತ್ಮೆಯನ್ನು ಯಜುರ್ವೇದ ಸಾಕ್ಷಿಯಾಗಿ ಪೇಳುವೆ ಕಾಶಿಯ ಕಾಂಡದಲ್ಲಿ.
--------------
ಉರಿಲಿಂಗಪೆದ್ದಿ
ಪರಮಪವಿತ್ರ ನಿರ್ಮಲಲಿಂಗ ತನ್ನ ಅಂಗದ ಮೇಲಿರುತ್ತಿರಲು, ಅಂಗಶುದ್ಧ ಸೌಕರ್ಯವಿಲ್ಲದವನ ಮುಖವ ನೋಡಲಾಗದು. ಅವನ ಮುಟ್ಟಲೆಂತೂ ಆಗದು. ಮನದ ಮಲಿನವ ಕಳೆದು ಪ್ರಾಣಲಿಂಗವ ಧರಿಸಬೇಕು. ತನುವಿನ ಮಲವ ಕಳೆದು ಇಷ್ಟಲಿಂಗವ ಧರಿಸಬೇಕು. ಜೀವತ್ರಯಂಗಳ ಮಲವ ಕಳೆದು ಪ್ರಸಾದವ ಧರಿಸಬೇಕು. ಮನದ ಮಲಿನವಾವುದೆಂದಡೆ ಮನವ್ಯಾಕುಲ. ತನುವಿನ ಮಲಿನವಾವುದೆಂದಡೆ ತನುಗುಣವ್ಯಾಪ್ತಿ ತನುತ್ರಯದ ಮಲಿನವಾವುದೆಂದಡೆ ಈಷಣತ್ರಯ. ಜೀವತ್ರಯದ ಮಲವಾವುದೆಂದಡೆ ಅವಸ್ಥಾತ್ರಯ. ಕರಣಂಗಳ ಮಲವಾವುದೆಂದಡೆ ಸಂಕಲ್ಪ ವಿಕಲ್ಪ. ಅಸತ್ಯ ನಿಂಧ್ಯ ಮಿಥ್ಯವಾದ ಸತ್ಕಿರಿಸುತಿಹ, ಅನ್ಯರಿಗೆ ಕೈಯನಾನುಹ. `ನಿರ್ಮಲಸ್ಯ ತು ನಿರ್ಮಾಲ್ಯಂ ಮಲದೇಹೀ ನ ಧಾರಯೇತ್' ಎಂದುದಾಗಿ, ಲಿಂಗವಿಪ್ಪ ಸುಕ್ಷೇತ್ರ ಕಾಯದ ಮಲಿನವ ಕಳೆದು, ಪ್ರಸಾದವ ಧರಿಸದಿದ್ದಡೆ, ಭವಮಾಲೆ ಹಿಂಗದು, ನರಕ ತಪ್ಪದಯ್ಯಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಆಕಾಶದಲ್ಲಾಡುವ ಪಟಕ್ಕಾದಡೆಯೂ ಮೂಲಸೂತ್ರವಿರಬೇಕು. ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು. ಭೂಮಿಯಿಲ್ಲದೆ ಬಂಡಿ ನಡೆವುದೆ ? ಅಂಗಕ್ಕೆ ಲಿಂಗವಿಲ್ಲದೆ ನಿಸ್ಸಂಗವಾಗಬಾರದು. ಕೂಡಲಚೆನ್ನಸಂಗಮದೇವರಲ್ಲಿ ಸಂಗವಿಲ್ಲದೆ ನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೆ ?
--------------
ಚನ್ನಬಸವಣ್ಣ
ಇನ್ನಷ್ಟು ... -->