ಅಥವಾ

ಒಟ್ಟು 48 ಕಡೆಗಳಲ್ಲಿ , 21 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂದ್ರಕಾಂತದ ಶಿಲೆಗೆ ಒಂದು ಗಜ ಹೋರುವಂತೆ ತನ್ನ ನೆಳಲಿಂಗೆ ತಾನೆ ಹೋರಿ ಸಾವಂತೆ ಆನೆಯ ಗತಿ ಆನೆಯ ಮತಿ. ಆನೆಯಹುದು, ಆನೆಯಲ್ಲ, ಅದನೇನೆಂಬೆ ? ನೀನೆನ್ನ ಕರಸ್ಥಲದಲ್ಲಿ ಸಿಲ್ಕಿದೆಯಾಗಿ ನೀ ನಾನೆಂಬ ಭ್ರಾಂತೇಕೆ ? ನಾನು ನೀನಲ್ಲದ ತೆರಹಿಲ್ಲ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ, ಶಾರದೆಯೆಂಬವಳ ಬಾಯ ಕಟ್ಟಿ, ಕಾರ ಮೇಘದ ಬೆಳಸ ನೀರ ಹರಿ ನುಂಗಲು ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು. ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು, ನೀರ ಹೊಳೆಯವರೆಲ್ಲರ ಕೊಡನೊಡೆದವು. ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ, ಸೋರುಮುಡಿಯಾಕೆ ಗೊರವನ ನೆರೆದಳು. ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು, ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ, ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು! ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ, ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು, ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ, ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!
--------------
ಅಲ್ಲಮಪ್ರಭುದೇವರು
ಲೋಕದವರನೊಂದು ಭೂತ ಹಿಡಿದಡೆ, ಆ ಭೂತದಿಚ್ಛೆಯಲ್ಲಿ ನುಡಿವುತ್ತಿಪ್ಪರು. ಲಾಂಛನ ಧಾರಿ ವೇಷವ ಧರಿಸಿ, ಆಸೆಯಿಂದ ಘಾಸಿಯಾಗಲೇಕಯ್ಯಾ ? ಆನೆಯ ಚೋಹವ ತೊಟ್ಟು ನಾಯಾಗಿ ಬೊಗಳುವ ಮಾನವರನೇನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಆನೆಯ ಏರುವಾತ ಮಹೇಶ್ವರನಲ್ಲ. ಕುದುರೆಯ ಏರುವಾತ ಮಹೇಶ್ವರನಲ್ಲ. ಬಸವನನೇರುವಾತ ಮಹೇಶ್ವರನಲ್ಲ. ಕೋಣವನೇರುವಾತ ಮಹೇಶ್ವರನಲ್ಲ. ವೈಲಿಪಾಲಿಕಿ ಸುಖಾಸನ ಏರುವಾತ ಮಹೇಶ್ವರನಲ್ಲ. ಗರುಡಗಂಭವನೇರುವಾತ ಮಹೇಶ್ವರನಲ್ಲ. ಕನ್ಯಸ್ತ್ರೀಯಳ ಕಳಸಕುಚವ ಪಿಡಿದು ಸಂಗವ ಮಾಡಬಲ್ಲರೆ ಮಹೇಶ್ವರನೆಂಬೆನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇರುವೆ ಆನೆಯ ನುಂಗಿತ್ತು, ಹೊಟ್ಟೆಗೆಯ್ದದೆ ಮಿಕ್ಕುವರ ನುಂಗಿತ್ತು. ಮತ್ತೊಂದು ಗಜ ಒತ್ತಿ ಬರಲಾಗಿ ಕಚ್ಚಿತ್ತು. ಕಚ್ಚಿದ ವಿಷ ತಾಗಿ ಮತ್ತನಾಗಿ ಬಿದ್ದಿತ್ತು. ನಾಗಾಲಡಿಯಾಗಿ ಆನೆಯದೆ ತಾನುಳಿದ ಪರಿಯ ನೋಡಾ, ಈ ವಸ್ತುವನ್ನೇಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತ್ರಿಭುವನಗಿರಿಯರಸರು ತ್ರೈಲೋಕಪಟ್ಟಣಕ್ಕೆ ದಾಳಿಯನಿಕ್ಕಿದರು. ಆ ಪಟ್ಟಣ ಸುತ್ತಿ ಮುತ್ತಿಕೊಂಡರು. ಏಳು ಭೂದುರ್ಗಂಗಳು ಕೊಳಹೋದವು. ಅರಮನೆಯ ಹೊಕ್ಕರು, ಹನ್ನೆರಡುಸಾವಿರ ರಾಣಿವಾಸವ ಸೆರೆ ಹಿಡಿದರು. ಆನೆಯ ಸಾಲೆಗೆ ಕಿಚ್ಚನಿಕ್ಕಿದರು, ಕುದುರೆಗಳ ಕಾಲ ಹರಿಯ ಹೊಯ್ದರು. ನಾಯಿಗಳ ಕಣ್ಣ ಕೆಡಿಸಿದರು, ಹಿರಿಯರಸನ ಹಿಡಿದುಕೊಂಡರು. ಇಪ್ಪತ್ತೈದು ತಳವಾರರ ನಿರ್ಮೂಲಿಸಿ ಬಿಟ್ಟರು. ಮೂವರ ಮೂಗ ಕೊಯ್ದರು, ಒಬ್ಬನ ಶೂಲಕ್ಕೆ ಹಾಕಿದರು. ಆ ಪಟ್ಟಣದ ಲಕ್ಷ್ಮಿ ಹಾರಿತ್ತು. ಆ ಪಟ್ಟಣದ ಪ್ರಜೆಗಳಿಗೆ ರಣಮಧ್ಯ ಮರಣವಾಯಿತ್ತು. ಆ ರಣಭೂಮಿಯಲ್ಲಿಕಾಡುಗಿಚ್ಚೆದ್ದುರಿಯಿತ್ತು. ಆ ಊರ ನಡುಗಡೆಯಲ್ಲಿ ಒಬ್ಬ ಬೇತಾಳ ನಿಂದಿರ್ದ. ಆ ಬೇತಾಳನ ಮೇಲೆ ಅಕಾಲವರುಷ ಸುರಿಯಿತ್ತು. ಆ ವರುಷದಿಂ ಹದಿನಾಲ್ಕು ಭುವನ, ಸಚರಾಚರಂಗಳಿಗೆ ಶಾಂತಿಯಾಯಿತ್ತು. ಆ ಶಾಂತಿ ವಿಶ್ರಾಂತಿಯಲ್ಲಿ ಹುಟ್ಟಿದ ಸುಖವ, ನಿಮ್ಮ ಉಂಗುಷ್ಟಾಗ್ರದಲ್ಲಿ ಕಂಡ ಘನ[ವ], ಸುರಗಿಯ ಚೌಡಯ್ಯಗಳು ಬಲ್ಲರಲ್ಲದೆ, ನಾನೆತ್ತ ಬಲ್ಲೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಜ್ಯೋತಿ ಇದ್ದ ಗೃಹಕ್ಕೆ ತಮವುಂಟೇನಯ್ಯಾ ? ಪರಂಜ್ಯೋತಿಲಿಂಗದ ಸಂಗದ ಬೆಳಗಲಿಹ ಮಹಾತ್ಮನಿಗೆ ಮಾಯಾತಮಂಧದ ಭೀತಿಯುಂಟೇನಯ್ಯಾ ? ಕಂಠೀರWವಘೆನಿಹ ವನದೊಳು ಕರಿವುಂಟೇನಯ್ಯಾ ? ಲಿಂಗವೆಂಬ ಸಿಂಹದ ಮರೆಯಬಿದ್ದಾತಂಗೆ ಅಷ್ಟಮದವೆಂಬ ಕರಿಯ ಭಯವುಂಟೇನಯ್ಯಾ ? ಗರುಡನಿದ್ದ ಸ್ಥಾನದಲ್ಲಿಗೆ ಉರಗನ ಭಯವುಂಟೇನಯ್ಯಾ ? ಪರಮಾತ್ಮನೊಳುಬೆರೆದ ನಿಬ್ಬೆರಗಿ ಶರಣಂಗೆ ಕುಂಡಲಿಸರ್ಪನ ಭಯವುಂಟೇನಯ್ಯಾ ? ಆನೆಯ ಮೇಲೆ ಹೋಗುವ ಮಾನವನಿಗೆ ಶ್ವಾನನ ಭಯವುಂಟೇನಯ್ಯಾ ? ಲಿಂಗಾಂಗಸಮರಸವೆಂಬ ಮದ ತಲೆಗೇರಿ ಹೋಗುವ ಶಿವಶರಣಂಗೆ ಪಂಚೇಂದ್ರಿಯವೆಂಬ ಶ್ವಾನನ ಭಯವುಂಟೇನಯ್ಯಾ ? ಉರಿವುತಿಹ ಅಗ್ನಿಗೆ ಸೀತದ ಭಯವುಂಟೇನಯ್ಯಾ ? ಗುರುಕರುಣಾಗ್ನಿಯಲ್ಲಿ ಭವದಗ್ಧನಾದ ಶರಣಂಗೆ ಅನ್ಯಭಯಭೀತಿಯ ಚಳಿ ಉಂಟೇನಯ್ಯಾ ? ಉರಗಮುಟ್ಟಲು ಸರ್ವಾಂಗವನೆಲ್ಲ ವಿಷಕೊಂಡಂತೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಲಿಂಗಸೋಂಕಿದವರೆಲ್ಲ ಸರ್ವಾಂಗಲಿಂಗಿಗಳಾದುದ ನೋಡಾ.
--------------
ಹೇಮಗಲ್ಲ ಹಂಪ
ಕತ್ತೆಗೇಕಯ್ಯ ಕಡಿವಾಣ, ತೊತ್ತಿಗೆ ತೋಳಬಂದಿಯೇಕಯ್ಯ? ಶ್ವಾನಗೇಕೆ ಆನೆಯ ಜೋಹವಯ್ಯ? ಹಂದೆಗೇಕೆ ಚಂದ್ರಾಯುಧವಯ್ಯ? ಶಿವನಿಷೆ*ಯಿಲ್ಲದವಂಗೆ ವಿಭೂತಿ ರುದ್ರಾಕ್ಷಿ ಶಿವಮಂತ್ರ ಶಿವಲಿಂಗವೆಂಬ ಶಿವಚೋಹವೇತಕಯ್ಯ ಇವರಿಗೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಂದುದ ಕಿರಿದು ಮಾಡಿ ಬಾರದುದ ಹಿರಿದು ಮಾಡಿ ಆವಾಗ ಚಿಂತಿಸಿ ಬಳಲುತ್ತಿ[ಹಿ]ರೇಕೆ? ಇರುಹೆ ಅರುದಿಂಗಳ ದವಸವ ಕೂಡಹಾಕುವಂತೆ ತಾ ಕಿರಿದಾದರೂ ಆಸೆ ಹಿರಿದಾಯಿತ್ತು. ಸ್ಥೂಲಕಾಯವಾದ ಮದಗಜಕ್ಕೇನು, ಮುಂದಕ್ಕೆ ಬೇಕೆಂಬ ಆಸೆಯುಂಟೆ? ಇಲ್ಲ. ಇರುಹೆಯ ಆನೆಯ ಅಂತರವ ನೋಡಿರಣ್ಣ. ಅರಿದು ಸಲಹುವ ಶಿವನಿದ್ದ ಹಾಗೆ ಬರಿದೆ ಆಸೆಯಿಂದಲೇಕೆ ಸಾವಿರಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾಧೀನವನರಿಯದೆ?.
--------------
ಸ್ವತಂತ್ರ ಸಿದ್ಧಲಿಂಗ
ಮೇಘಮಂಡಲದರಸನು ಅನುರಸದರಸಿಯ ಮೈಯಲ್ಲಿ ತಾಗಿ ಒದಗಿದನುಮಿಷ ರತ್ನಪ್ರಭೆಯ ನೋಡುವಡೆ ಇಪ್ಪತ್ತೈದು ನೂರೆಂಟರ ಮಧ್ಯ [ತುಗಿ]ವ ಸಮಾಧಿ[ಕೆ] ತಾರಾಮತ್ಸ್ಯದ ಆನೆಯ ಕುಂಬಸ್ಥಳದ [ಜ]ವನಿಕೆಯ ಮೇಲೆ ಜಾಣ ನಿಟ್ಟಿಸಬಲ್ಲಡೆ ಹೇಳಾ. ಕನ್ನದುಳಿಯ ಕೆಂಪನು ತನ್ನ ಕೈಯಲ್ಲಿ ಕೊಟ್ಟಡೆ ಬಿನ್ನಣದ ಕಳವು ಹೇಳಾ. ತನ್ನ ಮನೆಯಲ್ಲಿ ಕರ್ಣಚಕ್ರಪತ್ರವನಿರಿಸಿದಡೆ ನಿನ್ನಳವೆ ? ಲೋಕದೊಳು ಬಲ್ಲ ಜಾಣರು. ಆ [ಹ]ಣ್ಣಿನೊಳಗಣ ಪದ್ಮದೆಸಳೆಸಳು ಕಮ್ಮೇರಿ ದೇವ ಬಳ್ಳೇಶ್ವರನ ಅನುಭಾವದ ಸರಿದೊಡಕು.
--------------
ಬಳ್ಳೇಶ ಮಲ್ಲಯ್ಯ
ಇರುಹೆ ಅಂಜದೆ ಮದ ಸೊಕ್ಕಿದ ಐದಾನೆಯ ತನ್ನ ಕಡೆಗಾಲಿನಲ್ಲಿ ಕಟ್ಟಿ ಸದಮದದಲ್ಲಿ ಎಳೆವುತ್ತದೆ. ಆನೆಯ ಕೊಂಬು ಮುರಿದು, ಸುಂಡಿಲುಡುಗಿ, ಮದ ಸೋರಿ, ಗಜಘಟವಳಿದು ಹೋಯಿತ್ತು. ಇರುಹಿನ ಕಾಲು ಐಗಜವ ಕೊಂದು, ಮೂರು ಹುಲಿಯ ಮುರಿದು, ನನಗಿನ್ನಾರೂ ಅಡಹಿಲ್ಲಾಯೆಂದು ಹೋಯಿತ್ತು, ಸದಾಶಿವಮೂರ್ತಿಲಿಂಗದಲ್ಲಿಗೆ ಎಯ್ದಿತ್ತು.
--------------
ಅರಿವಿನ ಮಾರಿತಂದೆ
ಆನೆಯ ನುಂಗಿದ ಹುಲಿ, ಹುಲಿಯ ನುಂಗಿದ ಸರ್ಪ, ಸರ್ಪನ ನುಂಗಿದ ಸಿಂಹ, ಸಿಂಹನ ನುಂಗಿದ ಮರೆ, ಮರೆಯ ನುಂಗಿದ ಭಲ್ಲೂಕ ಇಂತಿವರು ಹಕ್ಕಿಯ ಹೊಲನಲ್ಲಿ ತಮ್ಮ ತಮ್ಮ ವೈರತ್ವದಿಂದಲಿರುವುದಿದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಾಧು ಗುಣಕ್ಕೆ ಸಲೆ ಸಂದ ವಾರಣ ಬಂದು ಹುಟ್ಟು ಕಂಗಳರ ಸಭಾಮಧ್ಯದಲ್ಲಿ ನಿಲ್ಲಲು ಕೆಲದೊಳಿಪ್ಪ ಕಣ್ಣುಳ್ಳಾತ ಆನೆ ಬಂದಿತೆಂದು ನುಡಿಯಲೊಡನೆ ಅತಿ ಪ್ರೇಮದಿಂದ ಕಂಗಳರು ಆ ಆನೆಯ ಅವಯವಂಗಳಂ ಮುಟ್ಟಿ ನೋಡಿ ಆನೆ ಕೊಳಗದಾಕಾರವೆಂದು ಕಾಲ ಮುಟ್ಟಿದಾತ ಆನೆ ಒನಕೆಯಾಕಾರವೆಂದು ಸೊಂಡಿಲ ಮುಟ್ಟಿದಾತ ಆನೆ ಹರವಿಯಾಕಾರವೆಂದು ಕುಂಭಸ್ಥಲವ ಮುಟ್ಟಿದಾತ ಆನೆ ಮೊರದಾಕಾರವೆಂದು ಕಿವಿಯ ಮುಟ್ಟಿದಾತ ಆನೆ ರಜಪೂರಿಗೆಯಾಕಾರವೆಂದು ಬಾಲವ ಮುಟ್ಟಿದಾತ ಇಂತಿವರೆಲ್ಲರೂ ಆನೆಯ ನೆಲೆಯನರಿಯದೆ ತಮ್ಮೊಳಗೆ ತಾವು ಕೊಂಡಾಡುತ್ತಿಪ್ಪರು. ಆನೆಯ ನೆಲೆಯ ಆನೆಯನೇರುವ ಪಟ್ಟದರಸು ಬಲ್ಲನಲ್ಲದೆ ಹುಟ್ಟು ಕುರುಡರದೇನು ಬಲ್ಲರಯ್ಯ?. ಈ ಪ್ರಕಾರದಲ್ಲಿಪ್ಪ ಪಶುಪ್ರಾಣಿಗಳು ನಿಜೈಕ್ಯರ ಆಚರಣೆಯನರಿಯದೆ ಮೂಗಿನಾಭರಣವ ಮೂಗಿಗಿಕ್ಕುವಂತೆ ನುಡಿದು ನಡೆಯ ತಪ್ಪುವರು. ಅದು ಶಿವಜ್ಞಾನಿಗಳ ಮತವಲ್ಲ. ಅದು ಹೇಗೆಂದೊಡೆ ಪ್ರತ್ಯಕ್ಷ ಜ್ಞಾನವ ಪ್ರಮಾಣಿಸಿ ಅಪರೋಕ್ಷಜ್ಞಾನವನಾಲೋಚಿಸಿ ಸಹಜಜ್ಞಾನವ ಸಂಪಾದಿಸಿ ಈ ಜ್ಞಾನತ್ರಯವನೊಂದುಮಾಡಿ ಬಿಡುವ ಹಿಡಿವ ಆಚರಣೆಯಂ ನೆಲೆಗೊಳಿಸಿಕೊಂಡು ಹಿಡಿದಾಚರಣೆಯಲ್ಲಿ ಪರಾಕ್ರಮಿಯಾಗಿ ಆದಿ ಅನಾದಿಯ ಮೇಲಣ ಜ್ಯೋತಿರ್ಮಯವಪ್ಪ ಶೂನ್ಯಲಿಂಗಮಂ ಬೆರಸಿ ಭಿನ್ನವಿಲ್ಲದಿರ್ಪ ಆಚರಣೆಯ ವೀರಮಾಹೇಶ್ವರ ಬಲ್ಲನಲ್ಲದೆ ಅಜ್ಞಾನಿ ಬಾಯಿಬಡಿಕರಿವರೆತ್ತ ಬಲ್ಲರಯ್ಯಾ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಪರುಷ ಸೋಂಕಿಯೂ ಪಾಷಾಣ ಶುದ್ಧವಾಗದಿದ್ದರೆ ಆ ಪರುಷದ ಗೊಡವೆ ಏತಕಯ್ಯ? ಅಗ್ನಿ ಸೋಂಕಿಯೂ ಕಾಷ*ದ ಗುಣವಳಿಯದಿದ್ದರೆ ಆ ಅಗ್ನಿಯ ಗೊಡವೆ ಏತಕಯ್ಯ? ಗರುಡನಿದ್ದೂ ಸರ್ಪದ ಭಯ ಹಿಂಗದಿದ್ದರೆ ಆ ಗರುಡನ ಗೊಡವೆ ಏತಕಯ್ಯ? ವಜ್ರಾಂಗಿಯ ತೊಟ್ಟಿರ್ದೂ ಬಾಣದ ಭಯ ಹಿಂಗದಿದ್ದರೆ ಆ ವಜ್ರಾಂಗಿಯ ಗೊಡವೆ ಏತಕಯ್ಯ? ಆನೆಯನೇರಿಯೂ ಶ್ವಾನನ ಭಯಹಿಂಗದಿದ್ದರೆ ಆ ಆನೆಯ ಗೊಡವೆ ಏತಕಯ್ಯ? ಜ್ಯೋತಿಯಿದ್ದೂ ಕತ್ತಲೆ ಹರೆಯದಿದ್ದರೆ ಆ ಜ್ಯೋತಿಯ ಗೊಡವೆ ಏತಕಯ್ಯ? ಅಂಗದ ಮೇಲೆ ಚಿದ್ಘನಲಿಂಗವ ಧರಿಸಿದ್ದು ತನುಮನದ ಅವಗುಣ ಹಿಂಗದಿದ್ದರೆ ಆ ಲಿಂಗದ ಗೊಡವೆ ಏತಕಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನೀವು ಸೋಂಕಿಯೂ ಭವ ಹಿಂಗದಿದ್ದರೆ ನಿಮಗೆ ಕುಂದಯ್ಯ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ರಂಡೆಮುಂಡೆಯ ಮಗ ರಾಜಕುಮಾರ ಗಗನದಲ್ಲಿ ಪುಟ್ಟಿ, ಭೂಮಿಯಲ್ಲಿ ಬಂದು, ಆ ಭೂಮಿಯ ರಾಜನಲ್ಲಿ ಯುದ್ಭವ ಮಾಡಿ, ಆನೆಯ ಹಲ್ಲು ಕಿತ್ತು, ಕುಂಭವನೊಡೆದು, ಕುದುರೆಯ ಕಾಲ ಮುರಿದು, ನಾಯಿಯ ನಾಲಿಗೆ ಕಿತ್ತು, ಬೆಕ್ಕಿನ ಕಣ್ಣು ಕಳೆದು ಉಣ್ಣದೆ ಉಪವಾಸ ಮಾಡದೆ ಯುದ್ಧದಿಂ ತ್ರಿಲೋಕದ ರಾಜರ ಗೆದ್ದು, ತ್ರಿಲೋಕದ ರಾಜರಲ್ಲಿ ಸತ್ತು ನಿಂದಿತ್ತು. ಈ ಭೇದವ - ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವಿನ ಶರಣರು ಬಲ್ಲರಲ್ಲದೆ ಮಿಕ್ಕಿನ ಜೀವಾತ್ಮರು ಅರಿಯರು.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->