ಅಥವಾ

ಒಟ್ಟು 57 ಕಡೆಗಳಲ್ಲಿ , 20 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ತನ್ನ ವಿನೋದಕ್ಕೆ ಗುರುವಾದ ಗುರು ತನ್ನ ವಿನೋದಕ್ಕೆ ಲಿಂಗವಾದ ಗುರು ತನ್ನ ವಿನೋದಕ್ಕೆ ಜಂಗಮವಾದ ಗುರು ತನ್ನ ವಿನೋದಕ್ಕೆ ಪಾದೋದಕವಾದ ಗುರು ತನ್ನ ವಿನೋದಕ್ಕೆ ಪ್ರಸಾದವಾದ ಗುರು ತನ್ನ ವಿನೋದಕ್ಕೆ ವಿಭೂತಿಯಾದ ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ. ಇಂತೀ ಭೇದವನರಿಯದೆ, ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು. ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು. ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು ಭವಹೇತುಗಳ ಮಾಡುವನಯ್ಯಾ. ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಊದ್ರ್ವಮುಖವಾದ, ಅನಂತೇಶನೆಂಬ ವಾಸುಕಿಯ ಶಿರದ ಮೇಲಿಹ ಅಷ್ಟದಳಾಬ್ಜಮಧ್ಯದಲ್ಲಿ, ಒಪ್ಪುತ್ತಿಹ ಶುದ್ಧವಿದ್ಯೆಯೇ ಪೀಠವಾದ ಶಿವಲಿಂಗವೊಂದರಲ್ಲಿ, ದೃಢಭಕ್ತಿಯುಳ್ಳಾತನ ದೇಹವೇ ಲಿಂಗದೇಹವು. ಆ ಚಿದ್ರೂಪನಾದ ಪರಮ ಸ್ವರೂಪನ ಮೂರ್ತಿ ತಾನೇ ಇಷ್ಟಲಿಂಗವು. ಆ ಇಷ್ಟಲಿಂಗದಲ್ಲಿ ದೇಹವನಡಗಿಸಿದ ಮಹಾತ್ಮನ ಮನ ಬುದ್ಧಿ ಅಹಂಕಾರ ಇಂದ್ರಿಯಾದಿ ಗುಣಂಗಳು ಜನನಾದಿ ವಿಕಾರಂಗಳ ಹೊದ್ದವಾಗಿ, ಆತ ನಿರ್ದೇಹಿ, ನಿಜಗುರು ಸ್ವತಂತ್ರಲಿಂಗೇಶ್ವರನ ಶರಣನುಪಮಾತೀತನು.
--------------
ಸ್ವತಂತ್ರ ಸಿದ್ಧಲಿಂಗ
ಇಷ್ಟಲಿಂಗ ಪ್ರಾಣಲಿಂಗ ಒಂದೆಯೆಂದರಿಯದೆ ಬ್ಥಿನ್ನವಿಟ್ಟು ನುಡಿವ ಭ್ರಾಂತರ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ತಿಳಿದುಪ್ಪ ಗಟ್ಟಿಗೊಂಡು ಹೆರೆದುಪ್ಪವಾದಂತೆ, ನಿರಾಕಾರ ಪರಬ್ರಹ್ಮವ ಸಾಕಾರಗೊಳಿಸಿ, ಶ್ರೀಗುರುಸ್ವಾಮಿ ಕರುಣಿಸಿ ಕರಸ್ಥಲಕ್ಕೆ ಇಷ್ಟಲಿಂಗವೆನಿಸಿ ಕೊಟ್ಟಬಳಿಕ, ಆ ಲಿಂಗದಲ್ಲಿ ನಿಷ್ಠೆ ಬಲಿಯಲು ಬಾಹ್ಯ ಕರಣಂಗಳು ತರಹರವಾಗಿ, ಆ ಲಿಂಗದ ಚಿತ್‍ಕಳೆ ದೃಷ್ಟಿಸೂತ್ರದಿಂದೆ ತನ್ನ ಅಂತರಂಗಕ್ಕೆ ವೇದ್ಥಿಸಿ ಪ್ರಾಣಲಿಂಗವೆನಿಸುವುದು. ಸ್ಫಟಿಕದ ಘಟದಲ್ಲಿರಿಸಿದ ಜ್ಯೋತಿಯಂತೆ ಒಳಹೊರಗೆ ತೋರುತಿರ್ಪುದು ಒಂದೇ ಲಿಂಗವೆಂದರಿಯದೆ, ಭ್ರಾಂತಿಜ್ಞಾನದಿಂದೆ ಅಂತರಂಗದಲ್ಲಿ ಬೇರೆ ಪ್ರಾಣಲಿಂಗವುಂಟೆಂದು ಇಷ್ಟಲಿಂಗದಲ್ಲಿ ಅವಿಶ್ವಾಸಮಾಡುವ ಭ್ರಷ್ಟಭವಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಷ್ಟಲಿಂಗದಲ್ಲಿ ಗುರುವಿಡಿದು, ಪ್ರಾಣಲಿಂಗದಲ್ಲಿ ಲಿಂಗವಿಡಿದು, ಭಾವಲಿಂಗದಲ್ಲಿ ಜಂಗಮವಿಡಿದು ಪರಮಪ್ರಸಾದವ ಸ್ವೀಕರಿಸಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಚಾರಲಿಂಗವ ಅಂಗೈಯೊಳಗಳವಡಿಸಿ ಮಜ್ಜನಕ್ಕೆರೆದು ತ್ರಿಪುಂಡ್ರಮಂ ಧರಿಯಿಸಿ ಪುಷ್ಪಜಾತಿಗಳಿಂದರ್ಚಿಸಿ ಪೂಜೆಮಾಡುವ ಕರವು ಆ ಪೂಜೆಗೆ ಮೆಚ್ಚಿ ಪಂಚಸ್ಫರ್ಷನಂಗಳಂ ಮರೆಯಲೊಡನೆ ಆ ಕರದಲ್ಲಿ ಜಂಗಮಲಿಂಗ ನೆಲೆಗೊಂಡಿತ್ತು. ಆ ಲಿಂಗದ ಪ್ರಕಾಶಮಂ ನೋಡುವ ನೇತ್ರಂಗಳು ಆ ಪ್ರಕಾಶಕ್ಕೆ ಮೆಚ್ಚಿ ಪಂಚವರ್ಣಂಗಳಂ ಮರೆಯಲೊಡನೆ ಅ ನೇತ್ರಂಗಳಲ್ಲಿ ಶಿವಲಿಂಗವೆ ನೆಲೆಗೊಂಡಿತ್ತು. ಆ ಲಿಂಗದ ಸದ್ವಾಸನೆಯಂ ವಾಸಿಸುವ ಘ್ರಾಣ ಆ ವಾಸನೆಗೆ ಮೆಚ್ಚಿ ಪಂಚಗಂಧಂಗಳಂ ಮರೆಯಲೊಡನೆ ಆ ಘ್ರಾಣದಲ್ಲಿ ಆಚಾರಲಿಂಗ ನೆಲೆಗೊಂಡಿತ್ತು. ಆ ಲಿಂಗದ ಮಂತ್ರಸ್ವರೂಪವನೆತ್ತಿ ಕೊಂಡಾಡುವ ಜಿಹ್ವೆ ಆ ಮಂತ್ರಕ್ಕೆ ಮೆಚ್ಚಿ ಪಂಚರಸಂಗಳಂ ಮರೆಯಲೊಡನೆ ಆ ಜಿಹ್ವೆಯಲ್ಲಿ ಗುರುಲಿಂಗ ನೆಲೆಗೊಂಡಿತ್ತು. ಆ ಲಿಂಗಮಂ ಮನವೊಲಿದು ಹಾಡುವ ನಾದಮಂ ಕೇಳುವ ಶ್ರೋತ್ರ ಆ ನಾದಕ್ಕೆ ಮೆಚ್ಚಿ ಪಂಚನಾದಂಗಳಂ ಮರೆಯಲೊಡನೆ ಆ ಶ್ರೋತ್ರದಲ್ಲಿ ಪ್ರಸಾದಲಿಂಗ ನೆಲೆಗೊಂಡಿತ್ತು. ಆ ಲಿಂಗವ ನೆನೆವ ಮನ ಆ ನೆನಹಿಂಗೆ ಮೆಚ್ಚಿ ಪಂಚಪರಿಣಾಮಂಗಳಂ ಮರೆಯಲೊಡನೆ ಆ ಮನದಲ್ಲಿ ಮಹಾಲಿಂಗ ನೆಲೆಗೊಂಡಿತ್ತು. ಈ ಷಡಿಂದ್ರಿಯಂಗಳೂ ಲಿಂಗವನಪ್ಪಿ ಅಗಲದ ಕಾರಣ ಆ ಲಿಂಗವೊಲಿದು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ನೆಲೆಗೊಂಡಿತ್ತು. ಇಂತಪ್ಪ ಇಷ್ಟಲಿಂಗದಲ್ಲಿ ಶರಣಂ ನಿಷ್ಠೆ ನಿಬ್ಬೆರಗಾಗಿ ಧ್ಯಾನಯೋಗಮಂ ಕೈಕೊಂಡು ಷಡುವರ್ಣಮಂ ಮರೆಯಲೊಡನೆ ಆ ಲಿಂಗವೊಲಿದು ಅಂಗವೇದ್ಥಿಸಿ ಜ್ಞಾನಕ್ರೀಗಳಲ್ಲಿ ಷಡ್ವಿಧ ಪ್ರಾಣಲಿಂಗವಾಗಿ ನೆಲೆಗೊಂಡಿತ್ತು. ಆ ಪ್ರಾಣಲಿಂಗಳಂ ಶರಣ ಮಂತ್ರಮಾಲೆಯಂ ಹೃದಯದೊಳಿಂಬಿಟ್ಟು ಮನವೆಂಬರಳ್ದ ತಾವರೆಯಲ್ಲಿ ಜಾಗ್ರತ್ ಸ್ವಪ್ನದಲ್ಲಿ ಪೂಜಿಸುವ ಧಾರಣಯೋಗದೊಳಿರ್ದು ಕ್ರೀಯ ಮರೆಯಲೊಡನೆ ಆ ಲಿಂಗವೊಲಿದು ಮನವೇದ್ಥಿಸಿ ಭಾವಂಗಳಡಗಿ ತ್ರಿವಿಧ ಭಾವಲಿಂಗವಾಗಿ ನೆಲೆಗೊಂಡಿತ್ತು. ಆ ಭಾವಲಿಂಗಗಳ ಶರಣನೊಡೆವೆರೆಯಲೊಡನೆ ಕರ್ಪೂರ ಹೋಗಿ ಉರಿಯ ಹಿಡಿದಂತಾದ ಸಮಾದ್ಥಿಯೋಗದೊಳಿರ್ದು ಜ್ಞಾನವ ಮರೆಯಲೊಡನೆ ಆ ಶರಣಂಗೆ ಆ ಲಿಂಗವೊಲಿದು ಸರ್ವಾಂಗಲಿಂಗವಾಯಿತು. ಆತನೇ ಪರಬ್ರಹ್ಮ. ಇದನರಿಯದೆ ಜ್ಞಾನಕ್ರೀಗಳಿಂದಾಚರಿಸಿ ಲಿಂಗಾಂಗ ಸಂಯೋಗವಾಗದೆ ಕೆರಹಿನಟ್ಟೆಗೆ ನಾಯಿ ತಲೆದೂಗುವಂತೆ ತಮ್ಮ ಅರಿವಿಂಗೆ ತಾವೇ ತಲೆದೂಗಿ `ಅಹಂ ಬ್ರಹ್ಮ'ವೆಂಬ ಚೌರಾಶಿ ಹೊಲೆಯರ ಎನಗೆ ತೋರದಿರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕೇಳು ಕೇಳಯ್ಯ ಆತ್ಮನೇ, ಎರಡು ಪ್ರಕಾರದ ಆದಿಮಧ್ಯ ಅವಸಾನವ ತಿಳಿದು ನೋಡು, ಕೆಡಬೇಡ ಕೆಡಬೇಡ. ತಂದೆಯ ದೆಸೆಯಿಂದ ತಾಯಿ ಯೋನಿಚಕ್ರದಲ್ಲಿ ಬಂದುದೇ ಆದಿ. ಹೊನ್ನು ಹೆಣ್ಣು ಮಣ್ಣು ನನ್ನದೆಂದು ಹಿಡಿದು ಷಟ್ಕರ್ಮವನಾಚರಿಸಿ ಸುಖದುಃಖಂಗಳಲ್ಲಿ ಮುಳುಗಿಪ್ಪುದೇ ಮಧ್ಯ. ಆತ್ಮನ ಕೃಪೆಯಿಂದ ಅರೆದು ಸಣ್ಣಿಸಿಕೊಂಡು ಭವಕ್ಕೆ ನೂಂಕಿಸಿಕೊಳ್ಳುವುದೇ ಅವಸಾನ. ಇವನರಿದು ಇವಕ್ಕೆ ಹೇಹಮಂ ಮಾಡು. ಮತ್ತೆ ಆದಿ ಮಧ್ಯ ಅವಸಾನಮಂ ತಿಳುಹುವೆನು. ನಾನು ಮಹಾಲಿಂಗದ ಗರ್ಭಾಬ್ಧಿಯಲ್ಲಿ ಬಂದೆನೆಂಬುದೇ ಆದಿ. ಲೋಕದ ವ್ಯವಹಾರವ ಸಾಕುಮಾಡಿ ಇಷ್ಟಲಿಂಗದಲ್ಲಿ ನಿಷೆ*ಯಾಗಿ, ಪ್ರಾಣಲಿಂಗದಲ್ಲಿ ಪರಿಣಾಮಿಯಾಗಿ, ಕ್ಷುತ್ತಿಂಗೆ ಭಿಕ್ಷೆ ಶೀತಕ್ಕೆ ರಗಟೆಯಾಗಿ, ಮೋಕ್ಷಗಾಮಿಯಪ್ಪುದೇ ಮಧ್ಯ. ತನುವ ಬಿಡುವಲ್ಲಿ ಮನವ ಪರಬ್ರಹ್ಮಕ್ಕೆ ಸಮರ್ಪಣ ಮಾಡಿ, ಜನನ-ಮರಣ ಗೆಲುವುದೇ ಅವಸಾನ. ಇದನರಿದು ಇದಕ್ಕೆ ಮೆಚ್ಚಿ, ಲಿಂಗವನೆ ಸಾಧಿಸು ವೇಧಿಸು. ಕಪಿಯ ಕೈಯ ಕನ್ನಡಿಯಂತೆ ಕುಣಿದರೆ ಕುಣಿದು, ಏಡಿಸಿದರೆ ಏಡಿಸಿ, ಹಲ್ಲುಕಿರಿದರೆ ಹಲ್ಲುಕಿರಿದು, ಮನವಾಡಿದಂತೆ ನೀನಾಡಬೇಡ. ಮನವಾಡಿದಂತೆ ಆಡಿದವಂಗೆ, ಭಕ್ತಿಯೆಲ್ಲಿಯದು? ಜ್ಞಾನವೆಲ್ಲಿಯದು? ವೈರಾಗ್ಯವೆಲ್ಲಿಯದು? ವಿರಕ್ತಿಯೆಲ್ಲಿಯದು? ಮುಕ್ತಿಯೆಲ್ಲಿಯದಯ್ಯಾ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಇಂತೀ ವಿಚಾರವನು ತಿಳಿಯದೆ ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ಹೆಸರಿಟ್ಟು ಇಷ್ಟಲಿಂಗದಲ್ಲಿ ಅವಿಶ್ವಾಸವ ಮಾಡಿ, ಕ್ರಿಯಾಚಾರದಲ್ಲಿ ಅನಾಚಾರಿಯಾಗಿ, ಜೀವಾತ್ಮನೇ ಪರಮಾತ್ಮನೆಂದು ಅಹಂಕರಿಸಿ, ದೇಹದ ಸಕಲಕರಣವಿಷಯಂಗಳಲ್ಲಿ ಮನಮಗ್ನವಾಗಿ ತನ್ನ ನಿಜದ ನಿಲವ ಮರೆದು, ಪರರಿಗೆ ಶಿವಶರಣಂಗಳ ವಚನವ ನೋಡಿ ಶಿವಾನುಭಾವವ ಪೇಳುವ ಕುನ್ನಿ ಮನುಜರ ಕೂಗ್ಯಾಡಿ ಕೂಗ್ಯಾಡಿ ನರಕದಲ್ಲಿಕ್ಕೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಯಜೀವದ ಕೀಲವನರಿದು ಜನನ ಮರಣಂಗಳಾಯಾಸವಳಿದು ಅಂಗಲಿಂಗದೊಳಗೇಕಾರ್ಥವ ಮಾಡುವ ಭೇದವೆಂತೆಂದಡೆ : ಪಂಚಭೂತಂಗಳ ಪೂರ್ವಾಶ್ರಯವನಳಿದು ಪಂಚಕರಣಂಗಳ ಹಂಚುಹರಿಮಾಡಿ, ಕರ್ಮಬುದ್ಧೀಂದ್ರಿಯಂಗಳ ಮರ್ದಿಸಿ, ದಶವಾಯುಗಳ ಹಸಗೆಡಿಸಿ ಕರಣಚತುಷ್ಟಯಂಗಳ ಕಾಲಮುರಿದು ಪಂಚವಿಂಶತಿ ತತ್ತ್ವಂಗಳ ವಂಚನೆಯನಳಿದು ಹತ್ತುನಾಡಿಗಳ ವ್ಯಕ್ತೀಕರಿಸಿ ಅಷ್ಟತನು ಅಷ್ಟಾತ್ಮಂಗಳ ನಷ್ಟಮಾಡಿ ಅಂತರಂಗದ ಅಷ್ಟಮದಂಗಳ ಸಂತರಿಸಿ, ಬಹಿರಂಗದ ಅಷ್ಟಮಂದಗಳ ಬಾಯಟೊಣೆದು, ಅಷ್ಟಮೂರ್ತಿಮದಂಗಳ ಹಿಟ್ಟುಗುಟ್ಟಿ ಸಪ್ತಧಾತು ಸಪ್ತವ್ಯಸನಂಗಳ ಸಣ್ಣಿಸಿ ಷಡೂರ್ಮೆ ಷಡ್‍ವರ್ಗಂಗಳ ಕೆಡೆಮೆಟ್ಟಿ ಷಡ್‍ಭ್ರಮೆ ಷಡ್‍ಭಾವವಿಕಾರಂಗಳ ಗಂಟಸಡಲಿಸಿ, ಪಂಚಕೋಶ ಪಂಚಕ್ಲೇಶಂಗಳ ಪರಿಹರಿಸಿ ಅಂಗಚತುಷ್ಟಯಂಗಳ ಶೃಂಗಾರವಳಿದು ಗುಣತ್ರಯಂಗಳ ಗೂಡಮುಚ್ಚಿ ಅಹಂಕಾರತ್ರಯಂಗಳ ಶಂಕೆಗೊಳಗುಮಾಡಿ ತಾಪತ್ರಯಂಗಳ ತಲ್ಣಣಗೊಳಿಸಿ ತನುತ್ರಯಂಗಳ ತರಹರಮಾಡಿ ಜೀವತ್ರಯಂಗಳ ಜೀರ್ಣೀಕರಿಸಿ, ಆತ್ಮತ್ರಯಂಗಳ ಧಾತುಗೆಡಿಸಿ, ಅವಸ್ಥಾತ್ರಯಂಗಳ ಅವಗುಣವಳಿದು, ತ್ರಿದೋಷಂಗಳ ಪಲ್ಲಟಗೊಳಿಸಿ, ಭಾವತ್ರಯಂಗಳ ಬಣ್ಣಗೆಡಿಸಿ , ದುರ್ಭಾವತ್ರಯಂಗಳ ದೂರಮಾಡಿ, ಮನತ್ರಯಂಗಳ ಮರ್ದನಮಾಡಿ, ತ್ರಿಕರಣಂಗಳ ಛಿದ್ರಗೊಳಿಸಿ, ಪಂಚಾಗ್ನಿಗಳ ಸಂಚಲವನತಿಗಳೆದು, ಇಂತೀ ಅಂಗ ಪ್ರಕೃತಿಗುಣಂಗಳೆಲ್ಲ ನಷ್ಟವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡು ಬಹಿರಂಗದ ಮೇಲಿದ್ದ ಇಷ್ಟಲಿಂಗದಲ್ಲಿ ನೈಷಿ*ಕಭಾವಂಬುಗೊಂಡು, ಅನಿಮಿಷದೃಷ್ಟಿ ಅಚಲಿತವಾಗಿ ಭಾವಬಲಿದಿರಲು, ಆ ಲಿಂಗವು ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸಿಕೊಂಡು ಷಡಾಧಾರಚಕ್ರಂಗಳಲ್ಲಿ ಷಡ್‍ವಿಧ ಲಿಂಗವಾಗಿ ನೆಲೆಗೊಂಬುದು. ಆ ಷಡ್‍ವಿಧ ಲಿಂಗಕ್ಕೆ ಷಡಿಂದ್ರಿಯಗಳನೆ ಷಡ್‍ವಿಧಮುಖಂಗಳೆನಿಸಿ, ಆ ಷಡ್‍ವಿಧ ಮುಖಂಗಳಿಗೆ ಷಡ್‍ವಿಧವಿಷಯಂಗಳನೆ ಷಡ್‍ವಿಧ ದ್ರವ್ಯಪದಾರ್ಥವೆನಿಸಿ, ಆ ಪದಾರ್ಥಂಗಳು ಷಡ್‍ವಿಧಲಿಂಗಕ್ಕೆ ಷಡ್‍ವಿಧ ಭಕ್ತಿಯಿಂದೆ ಸಮರ್ಪಿತವಾಗಲು, ಅಂಗವೆಂಬ ಕುರುಹು ಅಡಗಿ ಒಳಹೊರಗೆಲ್ಲ ಮಹಾಘನಲಿಂಗದ ದಿವ್ಯಪ್ರಕಾಶವೆ ತುಂಬಿ ತೊಳಗಿ ಬೆಳಗುತ್ತಿರ್ಪುದು. ಇಂತಪ್ಪ ಘನಲಿಂಗದ ಬೆಳಗನೊಳಗೊಂಡಿರ್ಪ ಚಿದಂಗವೆ ಚಿತ್‍ಪಿಂಡವೆನಿಸಿತ್ತು. ಇಂತಪ್ಪ ಅತಿಸೂಕ್ಷ್ಮವಾದ ಚಿತ್‍ಪಿಂಡದ ವಿಸ್ತಾರವನು ಚಿದ್‍ಬ್ರಹ್ಮಾಂಡದಲ್ಲಿ ವೇಧಿಸಿ ಕಂಡು, ಆ ಚಿದ್‍ಬ್ರಹ್ಮಾಂಡದ ಅತಿಬಾಹುಲ್ಯವನು ಆ ಚಿತ್‍ಪಿಂಡದಲ್ಲಿ ವೇಧಿಸಿ ಕಂಡು, `ಪಿಂಡಬ್ರಹ್ಮಾಂಡಯೋರೈಕ್ಯಂ' ಎಂಬ ಶ್ರುತಿ ಪ್ರಮಾಣದಿಂದ ಆ ಪಿಂಡಬ್ರಹ್ಮಾಂಡಗಳು ಒಂದೇ ಎಂದು ಕಂಡು, ಆ ಪಿಂಡಬ್ರಹ್ಮಾಂಡಂಗಳಿಗೆ ತಾನೇ ಆಧಾರವೆಂದು ತಿಳಿದು ಆ ಪಿಂಡಬ್ರಹ್ಮಾಂಡಗಳ ತನ್ನ ಮನದ ಕೊನೆಯಲ್ಲಿ ಅಡಗಿಸಿ, ಆ ಮನವ ಭಾವದ ಕೊನೆಯಲ್ಲಿ ಅಡಗಿಸಿ, ಆ ಭಾವವ ಜ್ಞಾನದ ಕೊನೆಯಲ್ಲಿ ಅಡಗಿಸಿ, ಆ ಜ್ಞಾನವ ಮಹಾಜ್ಞಾನದಲ್ಲಿ ಅಡಗಿಸಿ, ಆ ಮಹಾಜ್ಞಾನವನು ಪರಾತ್ಪರವಾದ ಪರಿಪೂರ್ಣ ಬ್ರಹ್ಮದಲ್ಲಿ ಅಡಗಿಸಿ, ಆ ಪರಬ್ರಹ್ಮವೆ ತಾನಾದ ಶರಣಂಗೆ ದೇಹಭಾವವಿಲ್ಲ. ಆ ದೇಹಭಾವವಿಲ್ಲವಾಗಿ ಜೀವಭಾವವಿಲ್ಲ. ಆ ಜೀವಭಾವವಿಲ್ಲವಾಗಿ ಫಲಪದಂಗಳ ಹಂಗಿಲ್ಲ. ಫಲಪದದ ಹಂಗಿಲ್ಲವಾಗಿ ಭವಬಂಧನಂಗಳು ಮುನ್ನವೆ ಇಲ್ಲ. ಭವಬಂಧನಂಗಳು ಇಲ್ಲವಾಗಿ, ಆ ಶರಣನು ತಾನು ಎಂತಿರ್ದಂತೆ ಪರಬ್ರಹ್ಮವೆ ಆಗಿ ಆತನ ಹೃದಯಾಕಾಶವು ಬಚ್ಚಬರಿಯ ಬಯಲನೈದಿಪ್ಪುದು. ಇದು ಕಾರಣ, ಆ ಶರಣನು ದೇಹವಿದ್ದು ಸುಟ್ಟಸರವಿಯಂತೆ ನಿರ್ದೇಹಿಯಾದ ಕಾರಣ ಉಪಮಾತೀತ ವಾಙ್ಮನಕ್ಕಗೋಚರನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಷ್ಟಲಿಂಗದಲ್ಲಿ ಶುದ್ಧವಾಗಿ, ಪ್ರಾಣಲಿಂಗದಲ್ಲಿ ಸಿದ್ಧವಾಗಿ, ಭಾವಲಿಂಗದಲ್ಲಿ ಪ್ರಸಿದ್ಧವಾಗಿ ಇರಬಲ್ಲಾತನೆ ನಿರ್ಮಲಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕೂಡಿ ಮಾಡಿದ ಸಯಿದಾನವ ತಂದು ಪದಾರ್ಥವೆಂದು, ಇಷ್ಟಲಿಂಗದಲ್ಲಿ ಪೂರ್ವಾಶ್ರಯ ಹೋಯಿತ್ತೆಂದು, ಪ್ರಾಣಲಿಂಗಕ್ಕೆ ಓಗರವೆಂದು ನೀಡುತ್ತಿದ್ದರಯ್ಯಾ. ಅಂಗದ ಕೈಯಲು ಅರ್ಪಿತವದೆ, ಲಿಂಗದ ಕೈಯಲು ರುಚಿಯದೆ. ಅಂಗದ ಕೈಯಾವುದು ಲಿಂಗದ ಕೈಯಾವುದೆಂದರಿಯರು. ಬೇರೆ ಮತ್ತೊಂದೆಂಬರು. ಒಂದೆಂದರ್ಪಿಸಿ ಮತ್ತೊಂದೆಂದು ಭಾವಿಸಿದರೆ ಹೊಂದಿದ ನೊಣವಿನಂತಾದರು, ಕೂಡಲಚೆನ್ನಸಂಗನಲ್ಲಿ ಅವರ ಸಹಜರೆಂತೆಂಬೆ ?
--------------
ಚನ್ನಬಸವಣ್ಣ
ಇನ್ನು ಇಷ್ಟ-ಪ್ರಾಣ-ಭಾವಲಿಂಗದ ಪೂಜೆಯ ವಿವರವೆಂತೆಂದಡೆ : ಇಷ್ಟಲಿಂಗದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಂ ಮಾಡುವದು ಇಷ್ಟಲಿಂಗದ ಪೂಜೆ. ಆ ಲಿಂಗವನು ಮನಸ್ಸಿನಲ್ಲಿಯೇ ಧ್ಯಾನಿಸುವದು ಪ್ರಾಣಲಿಂಗದ ಪೂಜೆ. ಜೀವನೆಂಬ ಶಿವಾಲಯದೊಳು ಪ್ರಾಣಲಿಂಗವೇ ದೇವ ನೋಡಾ. ಅಜ್ಞಾನವೆಂಬ ನಿರ್ಮಾಲ್ಯವಂ ಕಳದು ಸೋಹಂ ಭಾವದಲ್ಲಿ ಪೂಜಿಸುತಿರ್ಪುದೆ ಪ್ರಾಣಲಿಂಗಪೂಜೆ ನೋಡಾ. ಇದಕ್ಕೆ ಈಶ್ವರೋýವಾಚ : ``ಅಷ್ಟವಿಧಾರ್ಚನಂ ಕುರ್ಯಾತ್ ಇಷ್ಟಲಿಂಗಸ್ಯ ಪೂಜನಂ | ತಲ್ಲಿಂಗಂ ಮನುತೇ ಯಸ್ತು ಪ್ರಾಣಲಿಂಗಸ್ಯ ಪೂಜನಂ || ಜೀವೋ ಶಿವಾಲಯಃ ಪ್ರೋಕ್ತಃ ಲಿಂಗದೇವಃ ಪರಃಶಿವಃ | ತೈಜೇದ್ಯಜ್ಞಾನನಿರ್ಮಾಲ್ಯಂ ಸೋýಹಂಭಾವೇನ ಪೂಜಯೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಷ್ಟಲಿಂಗಕ್ಕೆ ಅರ್ಪಿಸುವಾಗ, ಇಷ್ಟಲಿಂಗದಲ್ಲಿ ಮೂಲಮಂತ್ರವ ಧ್ಯಾನಿಸುವ ಕ್ರಮವು: ಓಂ ಹ್ರಾಂ ನಾಂ ಸದ್ಯೋಜಾತ ಆಚಾರಲಿಂಗಾಯನಮಃ ಇಷ್ಟಲಿಂಗದ ಶಕ್ತಿ ಪೀಠದ ಹಿಂದೆಸೆಯಲ್ಲಿ ಸಂಬಂಧ. ಓಂ ಹ್ರೀಂ ಮಾಂ ವಾಮದೇವ ಗುರುಲಿಂಗಾಯನಮಃ ಇಷ್ಟಲಿಂಗದ ಎಡದ ಕೈಯಲ್ಲಿ ಸಂಬಂಧ. ಓಂ ಹ್ರೂಂ ಸಿಂ ಅಘೋರ ಶಿವಲಿಂಗಾಯನಮಃ ಇಷ್ಟಲಿಂಗದ ಬಲಭಾಗದ ವರ್ತುಳದ ಸಂಧಿಲಿ ಸಂಬಂಧ. ಓಂ ಹ್ರೈಂ ವಾಂ ತತ್ಪುರುಷ ಜಂಗಮಲಿಂಗಾಯನಮಃ ಇಷ್ಟಲಿಂಗದ ಎಡದ ಭಾಗದ ಗೋಮುಖದಲ್ಲಿ ಸಂಬಂಧ. ಓಂ ಹ್ರೌಂ ಯಾಂ ಈಶಾನ್ಯ ಪ್ರಸಾದಲಿಂಗಾಯನಮಃ ಇಷ್ಟಲಿಂಗದ ನಾಳದಲ್ಲಿ ಸಂಬಂಧ. ಓಂ ಹ್ರಃ ಓಂ ಗೋಪ್ಯಮುಖ ಮಹಾಲಿಂಗಾಯನಮಃ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧ. ಓಂ ಬಾಂ ಅಂ ಇಷ್ಟಲಿಂಗಾಯನಮಃ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧ. ಓಂ ಸಾಂ ಉಂ ಪ್ರಾಣಲಿಂಗಾಯ ನಮಃ ಇಷ್ಟಲಿಂಗದ ಬಲಭಾಗದ ವರ್ತುಳದಲ್ಲಿ ಸಂಬಂಧ. ಓಂ ವಾಂ ಮಾಂ ಭಾವಲಿಂಗಾಯ ನಮಃ ಇಷ್ಟಲಿಂಗದ ಬಲಭಾಗದ ಗೋಮುಖದ ತುದಿಯಲ್ಲಿ ಸಂಬಂಧ ಶಾಂತಕೂಡಲಸಂಗಮದೇವಾ.
--------------
ಗಣದಾಸಿ ವೀರಣ್ಣ
ಎನ್ನ ಇಪ್ಪತ್ತೆ ೈದಕ್ಷರ ಸ್ವರೂಪವನೊಳಕೊಂಡು ಎನ್ನ ಜ್ಞಾತೃವಿನಲ್ಲಿ ಸಂಗವಾದನಯ್ಯ ಬಸವಣ್ಣ. ಎನ್ನ ದಶಾಕ್ಷರ ಸ್ವರೂಪವನೊಳಕೊಂಡು ಎನ್ನ ಜ್ಞಾನದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಎನ್ನ ಏಕಾಕ್ಷರ ಸ್ವರೂಪವನೊಳಕೊಂಡು ಎನ್ನ ಜ್ಞೇಯದಲ್ಲಿ ಸಂಗವಾದನಯ್ಯ ಪ್ರಭುದೇವರು. ಇಂತೀ ತ್ರಿವಿಧವನು ಸಿದ್ಧೇಶ್ವರನು ಇಷ್ಟಲಿಂಗದಲ್ಲಿ ಸಂಬಂಧಿಸಿಕೊಟ್ಟ ಕಾರಣ ಎನ್ನ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧವರತು, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಮೇರೆದಪ್ಪಿದ ಸಮುದ್ರದಲ್ಲಿ ಅದ್ದಿದಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಜನನ ಸೂತಕ ಮರಣ ಸೂತಕಂಗಳ ಕಳೆದು ಶುದ್ಧವಾದೆನೆಂಬ ಅಜ್ಞಾನಿ ಜಡಜೀವಿಗಳು ನೀವು ಕೇಳಿರೋ! ಪೃಥ್ವಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಪ್ಪು ಶುದ್ಧವಲ್ಲ. ಅಗ್ನಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಗ್ನಿ ಶುದ್ಧವಲ್ಲ. ಅಪ್ಪು ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಪೃಥ್ವಿ ಶುದ್ಧವಲ್ಲ. ಅಪ್ಪು ಶುದ್ಧವೆಂಬರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ವಾಯು ಶುದ್ಧವಲ್ಲ. ಆಕಾಶ ಶುದ್ಧವೆಂಬಿರಿ, ಈ ಚತುರ್ವಿಧ ತತ್ವಂಗಳ ಒಳಗಿಟ್ಟುಕೊಂಡು ಈ ಪ್ರಕಾರವಾದ ಕಾರಣ ಆಕಾಶ ಶುದ್ಧವಲ್ಲ. ಇವು ಶುದ್ಧವಹ ಪರಿ ಎಂತೆಂದೊಡೆ: ಈ ಪಂಚತತ್ವಂಗಳು ಹುಟ್ಟಿದವು ನಮ್ಮ ಸದಾಶಿವನ ಸಿರಿಯಪ್ಪದೊಂದು ಇಷ್ಟಲಿಂಗದಲ್ಲಿ. ಆ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ ಸರ್ವ ರುಚಿಪದಾರ್ಥವನು ತಂದು ಆ ಲಿಂಗಕ್ಕೆ ಕೊಟ್ಟಲ್ಲಿ, ಲಿಂಗಪ್ರಸಾದವದು ಅಂಗಕ್ಕೆ ಲೇಸಾಗಲೆಂದು, ಕೊಂಬಾತನ ಸರ್ವಾಂಗವೆಲ್ಲ ಶುದ್ಧವಯ್ಯಾ. ಆತನಿಪ್ಪ ಗೃಹವೇ ಪುಣ್ಯಕ್ಷೇತ್ರವು, ಅಂತಹವರ ಪಾದಕ್ಕೆ ಶರಣಾರ್ಥಿ. ಈ ವಿವರವನರಿಯದೆ ತನ್ನ ಕರದ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡದೆ, ಭೋಜನ ಪದಾರ್ಥ ನೀರು ರೊಟ್ಟಿ ಮುಟ್ಟಿಗೆ ಗುಗ್ಗರಿ ಸೀತೆನಿ ಬೆಳಸಿ ಕಾಯಿ ಕಸಿಕು ಹಣ್ಣು ಹಂಪಲ ಹಾಲು ಮೊಸರು ಮಜ್ಜಿಗೆ ತುಪ್ಪ ಸಕ್ಕರೆ ಹೋಳು ವೀಳೆಯ -ಇವನೆಲ್ಲವನು ತನ್ನ ಲಿಂಗಕ್ಕೆ ಕೊಡದೆ, ಅಂಗಕ್ಕೆ ಲೇಸಾಗಲೆಂದು ತಿಂಬುವನು ಅವನೀಗ ತಾನೇ ಶುದ್ಧ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->