ಅಥವಾ

ಒಟ್ಟು 5 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲವ ಭುಂಜಿಸುವ ಶೂಕರನಿಗೆ ಮದಗಜವ ಹೋಲಿಸಿದರೆ ಆ ಶೂಕರ ಮದಗಜವಾಗಬಲ್ಲುದೆ ? ಎಲುಬು ಕಡಿಯುವ ಶುನಿಗಳಿಗೆ ಗಜವೈರಿಯ ಹೋಲಿಸಿದರೆ ಆ ಶುನಿಗಳು ಗಜವೈರಿಯಾಗಬಲ್ಲುವೆ ? ಇಲಿಯ ತಿಂಬುವ ಮಾರ್ಜಾಲನಿಗೆ ಮಹಾವ್ಯಾನ ಹೋಲಿಸಿದರೆ ಆ ಮಾರ್ಜಾಲ ಮಹಾವ್ಯಾಘ್ರನಾಗಬಲ್ಲುದೆ ? ಹೊಲಸುತಿಂಬುವ ಕಾಗಿಯ ಮರಿಗೆ ಕೋಗಿಲೆಯ ಹೋಲಿಸಿದರೆ ಆ ಕಾಗಿಯಮರಿ ಸುನಾದಸ್ವರ ಕೋಗಿಲಮರಿಯಾಗಬಲ್ಲುದೆ ? ಕಸವ ತಿಂಬುವ ಕತ್ತೆಗೆ ಕುದುರೆಯ ಹೋಲಿಸಿದರೆ ಆ ಕತ್ತೆ ಮಹಾತೇಜಿಯಾಗಬಲ್ಲುದೆ ? ಕಸ ನೀರು ಹೊರುವ ದಾಸಿಗೆ ಅರಸಿಯ ಹೋಲಿಸಿದರೆ ಆ ದಾಸಿಯು ಅರಸಿಯಾಗಬಲ್ಲಳೆ ? ಈಚಲ ಕಾಡಿನಮರಕ್ಕೆ ಟೆಂಗಿನಮರ ಹೋಲಿಸಿದರೆ ಆ ಈಚಲ ಕಾಡಿನಮರ ಎಳೆಯ ಟೆಂಗಿನಮರವಾಗಬಲ್ಲುದೆ ? ನೀರೊಳಗಣ ಕೋಳಿಗೆ ಕೊಳದೊಳಗಣ ಹಂಸನ ಹೋಲಿಸಿದರೆ ಆ ನೀರಕೋಳಿಯು ರಾಜಹಂಸನಾಗಬಲ್ಲುದೆ ? ತಿಪ್ಪೆಯೊಳಗಣ ಪುಳವತಿಂಬುವ ಕೋಳಿಗೆ ಪಂಜರದೊಳಗಣ ಗಿಣಿಯ ಹೋಲಿಸಿದರೆ ಆ ಕೋಳಿಯು ಅರಗಿಳಿಯಾಗಬಲ್ಲುದೆ ? ಇಂತೀ ದೃಷ್ಟದ ಹಾಗೆ ಲೌಕಿಕದ ಜಡಮತಿ ಮನುಜರಿಗೆ ಶಿವಜ್ಞಾನಸಂಪನ್ನರಾದ ಶರಣರ ಹೋಲಿಸಿದರೆ, ಆ ಮಂದಮತಿ ಜೀವರು ಶಿವಜ್ಞಾನಿಗಳಾದ ಶಿವಶರಣರಾಗಬಲ್ಲರೆ ? ಈ ಭೇದವ ತಿಳಿಯಬಲ್ಲರೆ ಕೂಡಲ ಚನ್ನಸಂಗಯ್ಯನ ಶರಣರೆಂಬೆ. ಇದ ತಿಳಿಯದಿದ್ದರೆ ಭವಭಾರಿಗಳೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಈಚಲ ತಿಂದ ನರಿ ತನ್ನ ವಿಕಾರಕ್ಕೆ ಒರಲುವಂತೆ ಮಾತಿನ ಮಮಕಾರಕ್ಕೆ ಆಗಮವ ಬಲ್ಲೆವೆಂದು ಕೂಗಿಡುವರು ನೋಡಾ. ಆಗಮವತಿರಹಸ್ಯ. ಆಗಮ ಹೇಗಿಹುದೆಂಬುದ ಲೋಗರು ನೀವೆತ್ತ ಬಲ್ಲಿರಿ? ಆಗಮಮೂರ್ತಿ ಅನುಭಾವಿ ಬಲ್ಲ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮ ಶರಣರು ಬಲ್ಲರು.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬೇವಿನಮರಕ್ಕೆ ಬೆಲ್ಲದ ಕಟ್ಟೆಯ ಕಟ್ಟಿ, ಚಿನ್ನಿ ಸಕ್ಕರೆಯ ಖಾತವ ಹಾಕಿ, ಜೇನುತುಪ್ಪ ನೊರೆವಾಲೆಂಬ ನೀರೆರೆದರೆ, ಬೇವಿನಮರವಳಿದು ಬೆಲ್ಲದ ಮರವಾಗಬಲ್ಲುದೆ ? ಮಾವಿನಮರಕ್ಕೆ ವಿಷದ ಕಟ್ಟೆಯ ಕಟ್ಟಿ, ಉಪ್ಪಿನ ಖಾತವ ಹಾಕಿ, ಬೇವಿನ ಈಚಲ ತಾಡಿನ ಹಣ್ಣು ಮೊದಲಾದ ತ್ರಿವಿಧ ಹಣ್ಣಿನ ರಸವೆಂಬ ನೀರೆರೆದರೆ ಮಾವಿನಮರವಳಿದು ಬೇವು ಈಚಲ ತಾಡ ಮೊದಲಾದ ತ್ರಿವಿಧ ವೃಕ್ಷವಾಗುವುದೆ ? ಇಂತೀ ದೃಷ್ಟಾಂತದಂತೆ ಲೋಕದ ಮಧ್ಯದಲ್ಲಿ ಸಂಸಾರವಿಷಯರಸಪೂರಿತವಾದ ಕಡುಪಾತಕ ಜಡಜೀವಿಗಳಾದ ಕುರಿಮನುಜರ ತಂದು ಭಿನ್ನಜ್ಞಾನಿಗಳಾದ ಆಶಾಬದ್ಭ ಗುರುಮೂರ್ತಿಗಳು ಅಂತಪ್ಪ ಜಡಮತಿಗಳಿಗೆ ವಿಭೂತಿಯ ಪಟ್ಟವಗಟ್ಟಿ, ರುದ್ರಾಕ್ಷಿಯ ಧರಿಸಿ, ಅವನ ಮಸ್ತಕದ ಮೇಲೆ ಪತ್ರಿ ಪುಷ್ಪವನಿಟ್ಟು, ಮೂರೇಳು ಪೂಜೆಯ ಮಾಡಿ, ಇದಕ್ಕೆ ದೃಷ್ಟಾಂತ : ಹಸಿಯ ಕುಳ್ಳಲ್ಲಿ ಬೆಂಕಿಯನಿಟ್ಟು ಊದಿ ಪುಟುಮಾಡುವ ಮರುಳರಂತೆ, ಬರಡು ಆವಿನ ಹಾಲ ಕರಸಿಹೆನೆಂಬ ಅಧಮನಂತೆ, ದುಮ್ಮಡಿಯ ಹಚ್ಚಿ ಊದಿ ಕಿವಿಯೊಳಗಣ ತೊನಸಿ ತೆಗೆವ ಗಂಧಿಗಾರನಂತೆ, ಅಂತಪ್ಪ ಮಲತ್ರಯಯುಕ್ತವಾದ ಜೀವಾತ್ಮರ ದಕ್ಷಿಣ ವಾಮಭಾಗದ ಕರ್ಣದಲ್ಲಿ ತಾರಕಮಂತ್ರದುಪದೇಶವನು ತಮ್ಮ ನಿಲವ ತಾವರಿಯದ ಭಿನ್ನಭಾವದ ಗುರುಮೂರ್ತಿಗಳು ಊದಿ ಊದಿ ಬಾಯಾರಿ ಗಂಟಲೊಣಗಿ ಧ್ವನಿಬಿದ್ದು ದಣಿದು ಹೋದರಲ್ಲದೆ ಸದ್ಭಕ್ತ ಶರಣಜನಂಗಳು ಮಾಡಲರಿಯರು. ಮತ್ತಂ, ಚಿದಂಶಿಕನಾದಾತ್ಮನು ಶಿವಕೃಪೆಯಿಂ ಸುಜ್ಞಾನೋದಯವಾಗಿ, ಸಕಲಪ್ರಪಂಚವನ್ನೆಲ್ಲ ನಿವೃತ್ತಿಯ ಮಾಡಿ, ಶ್ರೀಗುರುಕಾರುಣ್ಯವ ಪಡೆದ ಲಿಂಗಾಂಗಸಂಬಂಧಿಯಾದ ಸದಾಚಾರಸದ್ಭಕ್ತ ಶರಣಜನಂಗಳಿಗೆ ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಸಕಲ ಭಿನ್ನಭಾವದ ಜೀವಾತ್ಮರು ವೇದಾಗಮ ಶಾಸ್ತ್ರ ಪುರಾಣ ತರ್ಕ ತಂತ್ರಗಳೆಲ್ಲವು ತಮ್ಮ ವೇದಾಗಮ ಬೋಧಿಸಿ ಶಿವಾಗಮವನೋದಿದ ಶಿವಶರಣರಿಗೆ ಹೇಳಿ ಹೇಳಿ ತಾವೇ ಬೇಸತ್ತು ಬಳಲಿ ಬೆಂಡಾಗಿ ಮುಖಭಂಗಿತರಾಗಿ ಹೋದರಲ್ಲದೆ ಅವರೇನು ಮರಳಿ ಜಡಮತಿಜೀವರಾಗಲರಿಯರು. ಅಂತಪ್ಪ ಶಿವಜ್ಞಾನಸಂಪನ್ನರಾದ ಶರಣಜನಂಗಳು ಎಷ್ಟು ಪ್ರಪಂಚವ ಮಾಡಿದಡೂ ಮಲತ್ರಯಯುಕ್ತವಾದ ಜೀವರಾಗಲರಿಯರು. ಅವರು ಎಷ್ಟು ಕ್ರೀಯವನಾಚರಿಸಿದೊಡೆಯು ಫಲಪದವಿಯ ಪಡೆದು ಭವಭಾರಕ್ಕೆ ಬರುವ ಜಡಮತಿ ನರಕಜೀವಿಗಳಾಗಲರಿಯರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->