ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಚ್ಚಿದಾನಂದ ನಿತ್ಯಪರಿಪೂರ್ಣ ನಿಃಕಲ ಶಿವತತ್ವವು ತನ್ನಿಂದ ತಾನೆ ಅಖಂಡ ಪರಿಪೂರ್ಣ ಗೋಳಕಾಕಾರ ಪರಂಜ್ಯೋತಿಸ್ವರೂಪವಪ್ಪ ಮಹಾಲಿಂಗವಾಯಿತ್ತು ನೋಡಾ. ಆ ಲಿಂಗದ ಮಧ್ಯದಲ್ಲಿ ಬೀಜದಿಂದ ವೃಕ್ಷವು ಉದಯವಾಗುವ ಹಾಂಗೆ, ಆ ಲಿಂಗವು ತನ್ನ ಇಚ್ಛಾಶಕ್ತಿಯ ಕೂಡಿಕೊಂಡು, ಜಗದುತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತುವಾಗಿ, ಸಕಲ ನಿಃಕಲವಾಗಿ, ಪಂಚಮುಖ ದಶಭುಜ ದಶಪಂಚನೇತ್ರ ದ್ವಿಪಾದ ತನುವೇಕ ಶುದ್ಧ ಸ್ಫಟಿಕವರ್ಣ ಧಾತುವಿನಿಂದ ಒಪ್ಪುತ್ತಿಪ್ಪುದು ಸದಾಶಿವಮೂರ್ತಿ. ಆ ಸದಾಶಿವನ ಈಶಾನ್ಯಮುಖದಲ್ಲಿ ಆಕಾಶ ಪುಟ್ಟಿತ್ತು. ತತ್ಪುರುಷಮುಖದಲ್ಲಿ ವಾಯು ಪುಟ್ಟಿತ್ತು. ಅಘೋರಮುಖದಲ್ಲಿ ಅಗ್ನಿ ಪುಟ್ಟಿತ್ತು. ವಾಮದೇವಮುಖದಲ್ಲಿ ಅಪ್ಪು ಪುಟ್ಟಿತ್ತು. ಸದ್ಯೋಜಾತಮುಖದಲ್ಲಿ ಪೃಥ್ವಿ ಪುಟ್ಟಿತ್ತು. ಮನಸ್ಸಿನಲ್ಲಿ ಚಂದ್ರ, ಚಕ್ಷುವಿನಲ್ಲಿ ಸೂರ್ಯ. ಪರಮಾತ್ಮ ಸ್ವರೂಪವಪ್ಪ ಗೋಪ್ಯಮುಖದಲ್ಲಿ ಆತ್ಮ ಹುಟ್ಟಿದನು. ಇಂತು, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮನೆಂಬ ಶಿವನ ಅಷ್ಟತನುಮೂರ್ತಿಯೆ ಸಮಸ್ತ ಜಗತ್ತಾಯಿತ್ತು. ಆ ಜಗತ್ತಾವಾವವೆಂದಡೆ: ಚತುರ್ದಶ ಭುವನಂಗಳು, ಸಪ್ತ ಸಮುದ್ರಂಗಳು, ಸಪ್ತ ದ್ವೀಪಂಗಳು, ಸಪ್ತ ಕುಲಪರ್ವತಂಗಳು, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗಬ್ರ್ಥೀಕರಿಸಿಕೊಂಡು ಬ್ರಹ್ಮಾಂಡವೆನಿಸಿತ್ತು. ಇದು ಜಗದುತ್ಪತ್ತಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪೃಥ್ವಿ ದೇವರೆಂಬೆನೆ ಪೃಥ್ವಿ ದೇವರಲ್ಲ. ಅಪ್ಪು ದೇವರೆಂಬೆನೆ ಅಪ್ಪು ದೇವರಲ್ಲ. ಅಗ್ನಿ ದೇವರೆಂಬೆನೆ ಅಗ್ನಿ ದೇವರಲ್ಲ. ವಾಯು ದೇವರೆಂಬೆನೆ ವಾಯು ದೇವರಲ್ಲ. ಆಕಾಶ ದೇವರೆಂಬೆನೆ ಆಕಾಶ ದೇವರಲ್ಲ. ಆತ್ಮ ದೇವರೆಂಬೆನೆ ಆತ್ಮ ದೇವರಲ್ಲ. ಸೂರ್ಯ ದೇವರೆಂಬೆನೆ ಸೂರ್ಯ ದೇವರಲ್ಲ. ಚಂದ್ರ ದೇವರೆಂಬೆನೆ ಚಂದ್ರ ದೇವರಲ್ಲ. ಅದೇನು ಕಾರಣವೆಂದೊಡೆ : ಪೃಥ್ವಿ ಶಿವನ ಸದ್ಯೋಜಾತಮುಖದಲ್ಲಿ ಪುಟ್ಟಿತ್ತು. ಅಪ್ಪು ಶಿವನ ವಾಮದೇವಮುಖದಲ್ಲಿ ಪುಟ್ಟಿತ್ತು. ತೇಜ ಶಿವನ ಅಘೋರಮುಖದಲ್ಲಿ ಪುಟ್ಟಿತ್ತು. ವಾಯು ಶಿವನ ತತ್ಪುರುಷಮುಖದಲ್ಲಿ ಪುಟ್ಟಿತ್ತು. ಆಕಾಶ ಶಿವನ ಈಶಾನ್ಯಮುಖದಲ್ಲಿ ಪುಟ್ಟಿತ್ತು. ಆತ್ಮ ಶಿವನ ಗೋಪ್ಯಮುಖದಲ್ಲಿ ಪುಟ್ಟಿತ್ತು. ಸೂರ್ಯ ಶಿವನ ನಯನದಲ್ಲಿ ಪುಟ್ಟಿತ್ತು. ಚಂದ್ರ ಶಿವನ ಮನಸ್ಸಿನಲ್ಲಿ ಪುಟ್ಟಿತ್ತು. ``ಯತ್ ದೃಷ್ಟಮ್ ತತ್ ನಷ್ಟಮ್'' ಎಂದು, ಇಂತೀ ಅಷ್ಟತನುಗಳಿಗೆ ಹುಟ್ಟು ಹೊಂದು ಉಂಟಾದ ಕಾರಣ ಇವು ಕಲ್ಪಿತವೆಂದು ಕಳೆದು ನೀನೊಬ್ಬನೆ ನಿತ್ಯ ಪರಿಪೂರ್ಣನೆಂದು ತಿಳಿದು ಉಳಿದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗದೇವರ ಪಾದದ ನೆನೆವ ನಿತ್ಯಮಾಡಿ, ಹೇಮದ ಕೂಟದ ಹಿರಿಯರುಗಳು ಆಶೀರ್ವಾದ ಬಿನ್ನಹ. ಅಂಗದ ಮೇಲೆ ಲಿಂಗವನು ಕಟ್ಟಿ ಶಿವಭಕ್ತರಾದ ಮೇಲೆ ಭವಿಗಳು ಇದ್ದಲ್ಲಿ ಶಿವಶಾಸ್ತ್ರವ ಓದಿ, ಭವಿಗಳ ಪಂಕ್ತಿಯಲ್ಲಿ ಅನ್ನವನು ಉಣಲಾಗದೆಂದು ಬರಿಯ ಮಾತಿನ ಬಣಬೆಯ ಹಿಡಕೊಂಡು ತಿರುಗುವ ನರಗುರಿಗಳು, ಆಧಾರಚಕ್ರದಲ್ಲಿ ಬ್ರಹ್ಮನೆಂಬೊ ಭವಿ ಹುಟ್ಟಿ, ಹೊರಗೆ ಪೃಥ್ವಿತತ್ವದ ಸ್ವಾಧಿಷ್ಟದಲ್ಲಿ ವಿಷ್ಣುವೆಂಬೊ ಭವಿ ಹುಟ್ಟಿ, ಒಳಗೆ ಅಪ್ಪುತತ್ವದ ಹೊರಗೆ ಅಪ್ಪುತತ್ವದ ಮಣಿಪೂರಕದಲ್ಲಿ ರುದ್ರನೆಂಬೊ ಭವಿ ಹುಟ್ಟಿ, ಒಳಗೆ ತೇಜತತ್ವದ ಹೊರಗೆ ತೇಜತತ್ವದ ಅನಾಹತದಲ್ಲಿ ಈಶ್ವರನೆಂಬೊ ಭವಿ ಹುಟ್ಟಿ, ಒಳಗೆ ವಾಯುತತ್ವದ ಹೊರಗೆ ವಾಯುತತ್ವದ ವಿಶುದ್ಧಿಯಲ್ಲಿ ಸದಾಶಿವನೆಂಬ ಭವಿ ಹುಟ್ಟಿ, ಒಳಗೆ ಆಕಾಶತತ್ವದ ಹೊರಗೆ ಆಕಾಶತತ್ವದ ಅಗ್ನಿಯಿಂದ ಪರಬ್ರಹ್ಮನೆಂಬೊ ಭವಿ ಹುಟ್ಟಿ. ಇಂತೀ ಇವರು ಆರುಮಂದಿ ಭವಿಗಳು. ಭಕ್ತನ ಅಂತರಂಗದೊಳು ಹುಟ್ಟಿ, ಅಂತರಂಗದೊಳು ಬೆಳೆದು, ಬೇರೊಂದು ವಿಷ್ಣುಲಿಂಗವಾಗಿ ಬಂದು ಪೂಜೆಗೊಂಬುತಿದರು ಕಾಣಿರೊ. ಅದು ಎಂತೆಂದರೆ : ಬ್ರಹ್ಮನೆಂಬ ಭವಿ, ವಿಷ್ಣುವೆಂಬ ಭವಿ, ರುದ್ರನೆಂಬ ಭವಿ. ಇಂತಿವರು ಮೂರುಮಂದಿ ಭವಿಗಳು ಒಂದುಗೂಡಲಿಕೆ ಈಶ್ವರನೆಂಬ ಲಿಂಗಾಕಾರ ಭವಿಯಾಯಿತು ಕಾಣಿರೊ. ಆ ಲಿಂಗದ ರೂಪನು ನೋಡಿ, ಶಿಲ್ಪಕಾರರು ತಮ್ಮ ಹೊಟ್ಟೆಕಿಚ್ಚಿಗೆ ಕಟೆದಿಟ್ಟು ಮಾರುವ ಶಿಲೆಯ ಲಿಂಗವ ತಂದು, ಶಿರದಲ್ಲಿ ಕಟ್ಟಿ, ಕರದಲ್ಲಿ ಪೂಜೆ ಮಾಡಿ ಶಿವಭಕ್ತರೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳ ಅಂತರಂಗದೊಳು ಕಾಮವೆಂಬೊ ಭವಿ, ಕ್ರೋಧವೆಂಬೊ ಭವಿ, ಲೋಭವೆಂಬೊ ಭವಿ, ಮೋಹವೆಂಬೊ ಭವಿ, ಮದವೆಂಬೊ ಭವಿ, ಮತ್ಸರವೆಂಬೊ ಭವಿ. ಇಂತೀ [ಈ]ರಾರು ಹನ್ನೆರಡುಮಂದಿ ಭವಿಗಳನು ಹತ್ತೇಲಿಯಿಟ್ಟುಕೊಂಡು, ಕೂಡಿಯುಂಡು ಕುಲವನರಸುವಂಥ ಕೋತಿಗಳು ಮಾಡಿದ ಭಕ್ತಿ ಏನಾಯಿತೆಂದರೆ, ಅಜ್ಜಿಗೆ ಅರಸಿನ ಚಿಂತೆಯಾದರೆ, ಮಗಳಿಗೆ ಮಿಂಡಗಾರನ ಚಿಂತೆಯನು ಮಾಡಿಕೊಂಡು, ಹಲವು ಮಿಂಡಗಾರಗೆ ಸೆರಗುಹಾಸಿ ಮಾಡಿಕೊಂಡು ಹೋದಂತಾದೀತು ಕಾಣಿರೊ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬೊ ವಿಪ್ರನ ಗರ್ಭದಲ್ಲಿ ನಕಾರವೆಂಬೊ ಅಕ್ಷರ ಹುಟ್ಟಿ, ಸದ್ಯೋಜಾತಮುಖದಲ್ಲಿ ಬ್ರಹ್ಮನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಹುಟ್ಟಿಸಬೇಕೆಂದು ಚಿಂತೆಯನು ತಾಳಿ, ಪೃಥ್ವಿತತ್ವವೆಂಬೊ ಆದಿ ಆಧಾರ ಬುಡವಾಗಿಯಿದ್ದ ಕಾಣಿರೊ. ಮಕಾರವೆಂಬೊ ಅಕ್ಷರ ಹುಟ್ಟಿ, ವಾಮದೇವಮುಖದಲ್ಲಿ ವಿಷ್ಣುವೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ರಕ್ಷಿಸಬೇಕೆಂಬೊ ಚಿಂತೆಯನು ತಾಳಿ, ಅಪ್ಪುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಶಿಕಾರವೆಂಬೊ ಅಕ್ಷರ ಹುಟ್ಟಿ, ಅಘೋರಮುಖದಲ್ಲಿ ರುದ್ರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಭಕ್ಷಿಸಬೇಕೆಂಬೊ ಚಿಂತೆಯನು ತಾಳಿ, ತೇಜತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ವಕಾರವೆಂಬೊ ಅಕ್ಷರ ಹುಟ್ಟಿ, ತತ್ಪುರುಷಮುಖದಲ್ಲಿ ಈಶ್ವರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ಅಂಗದೊಳಗೆ ಪ್ರಾಣಲಿಂಗವಾಗಿ ಪೂಜೆಗೊಳಬೇಕೆಂಬ ಚಿಂತೆಯನು ತಾಳಿ, ವಾಯುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಯಕಾರವಂಬೊ ಅಕ್ಷರ ಹುಟ್ಟಿ, ಈಶಾನ್ಯಮುಖದಲ್ಲಿ ಸದಾಶಿವನೆಂಬ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ತನ್ನ ಅಂತರಂಗದೊಳಗೆ ಇಂಬಿಟ್ಟು ಇರಬೇಕೆಂಬ ಚಿಂತೆಯನು ತಾಳಿ, ಆಕಾಶತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಅದು ಎಂತೆಂದಡೆ : ಇಂತೀ ಇಪ್ಪತ್ತೈದು ತತ್ವಗಳ ಆಧಾರದಲ್ಲಿ ಹುಟ್ಟಿದ ಭಕ್ತರೆಂಬ ಕೊಂಬೆಗಳು ಮಾಡಿದ ಭಕ್ತಿಯೆನಗಾಯಿತು ಅಂದರೆ, ಪೃಥ್ವಿತತ್ವದ ಆಧಾರದಲ್ಲಿ ಹುಟ್ಟಿದ ಕಸಕಡ್ಡಿಗಳೆಲ್ಲ ಕುಸುಕಿಂದ ಹರಕೊಂಡು ತಿಂದು ಹರಿಹೋದಂತೆ ಕಾಣಿರೊ. ಅದು ಎಂತೆಂದರೆ : ಭವಿಗಳ ಆಧಾರದಲ್ಲಿ ಭಕ್ತರೆಂಬ ಕೊಂಬೆಗಳು ಹುಟ್ಟಿ ಪೃಥ್ವಿತತ್ವವೆಂಬೊ ಭವಿಯ ಹುಟ್ಟಿಸೆಂದರೆ ಹುಟ್ಟಿಸಲಿಲ್ಲ. ಅಪ್ಪುತತ್ವವೆಂಬೊ ಭವಿಯ ರಕ್ಷಿಸಿಯೆಂದರೆ, ರಕ್ಷಿಸಿಯಿದ್ದಿಲ್ಲ. ತೇಜತತ್ವಯೆಂಬೊ ಭವಿಯ ಭಕ್ಷಿಸಿಯೆಂದರೆ, ಭಕ್ಷಿಸಿಯಿದ್ದಿಲ್ಲ. ವಾಯುತತ್ವವೆಂಬೊ ಭವಿಯ ಅಂಗದೊಳಗೆ ಲಿಂಗವಾಗಿ ಪೂಜೆಗೊಂಡಿದ್ದರೆ ಪೂಜೆಗೊಂಡಿದ್ದಿಲ್ಲಾ. ಆಕಾಶತತ್ವಯೆಂಬೊ ಭವಿಯನು ತಮ್ಮ ಅಂತರಂಗದೊಳಗೆ ಮರೆಯೊಳಗೆ ಇಂಬಿಟ್ಟುಕೊಂಡು ಇರಲಾರದ ಅಜ್ಞಾನಿಗಳು. ಪೃಥ್ವಿತತ್ವವೆಂಬೊ ಭವಿ ಆಧಾರದಲ್ಲಿ ಹುಟ್ಟಿ, ಭವಿ ಆಧಾರದಲ್ಲಿ ಬೆಳೆದು, ಆಕಾಶತತ್ವವೆಂಬೊ ಭವಿಯ ಅಂತರಂಗದ ಮರೆಯಲ್ಲಿ ಅಡಗಿಕೊಂಡಿದ ಅಜ್ಞಾನಿಗಳು. ಬ್ರಹ್ಮನೆಂಬೊ ಭವಿ, ವಿಷ್ಣುವೆಂಬೊ ಭವಿ, ರುದ್ರನೆಂಬೊ ಭವಿ. ಮೂವರು ತ್ರಿಮೂರ್ತಿಗಳು ಕೂಡಿ ಏಕಮೂರ್ತಿಯಾದ ಆಕಾರಲಿಂಗವನು ತಂದು, ತಮ್ಮ ಶಿರದಲ್ಲಿ ಕಟ್ಟಿಕೊಂಡು ಶಿವಭಕ್ತನೆ ಹೆಚ್ಚು, ಭವಿ ಕಡಿಮೆಯೆಂದು ಕೈಯಲ್ಲಿ ಕಂಜರದ ಬಾಕನೆ ಹಿಡಿದುಕೊಂಡು, ಕೆಂಜಡೆಯ ಬಿಟ್ಟುಕೊಂಡು, ವೀರಗಾಸೆಯಂತೆ ಕುಣಿದಾಡಿ, ಕೂಗಿ ಕೂಗಿ ಹೇಳುವ ಕುನ್ನಿಗಳು ಮಾಡಿದ ಭಕ್ತಿಯೇನಾಯಿತೆಂದರೆ, ಕೈಲಾಸದ ನಾಯಿಗಳು ಕೈಮೈಯನ್ನ ಹರಕೊಂಡು, ವೈಹಾಳಿಯ ಬಯಲಿಗೆ ಹೋಗಿ, ಒದರಿದರೆ, ಸತ್ತಂತಾಯಿತೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರಾರುಂಟೊ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ನಿರಂಜನ ಪ್ರಣವದುತ್ಪತ್ಯ : ಏನೂ ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹು ಮಾತ್ರದಲ್ಲಿ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಆ ನಿರಂಜನಪ್ರಣವದ ನೆನಹುಮಾತ್ರದಲ್ಲಿ ಕಲಾಪ್ರಣವ ಉತ್ಪತ್ಯವಾಯಿತ್ತು . ಆ ಕಲಾಪ್ರಣವದ ನೆನಹುಮಾತ್ರದಲ್ಲಿ ಅನಾದಿಪ್ರಣವ ಉತ್ಪತ್ಯವಾಯಿತ್ತು. ಆ ಅನಾದಿಪ್ರಣವದ ನೆನಹುಮಾತ್ರದಲ್ಲಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು. ಆ ಅಕಾರ ಉಕಾರ ಮಕಾರದ ರೂಪಾಂಗಭೇದದಿಂದ ಒಂಬತ್ತು ಪ್ರಣವ ಉತ್ಪತ್ಯವಾಯಿತ್ತು. ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿಹ ಪ್ರಣವ ಶಿವಸಂಬಂಧವಾಗಿಹವು. ಆ ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿಹ ಪ್ರಣವ ಶಿವಶಕ್ತಿರಹಿತವಾಗಿಹುದು. ಆ ಶಿವಸಂಬಂಧವಾಗಿಹ ಅಖಂಡಗೋಳಕಾಕಾರಪ್ರಣವದಲ್ಲಿ ಜ್ಯೋತಿಸ್ವರೂಪಪ್ರಣವವೆಂದು, ದರ್ಪಣಾಕಾರಪ್ರಣವವೆಂದು, ಕುಂಡಲಾಕಾರಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು ಅರ್ಧಚಂದ್ರಕಪ್ರಣವವೆಂದು, ತಾರಕಕಾಸ್ವರೂಪಪ್ರಣವವೆಂದು ಆರುಪ್ರಕಾರವಾಗಿಹುದು. ಶಕ್ತಿಸಂಬಂಧವಾದ ಪರಂಜ್ಯೋತಿಸ್ವರೂಪವಾಗಿಹ ಪರಮಪ್ರಣವದಲ್ಲಿ ತಾರಕಸ್ವರೂಪಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು ಕುಂಡಲಾಕಾರಪ್ರಣವವೆಂದು ಅರ್ಧಚಂದ್ರಕಪ್ರಣವವೆಂದು ದರ್ಪಣಾಕಾರಪ್ರಣವವೆಂದು ಜ್ಯೋತಿಸ್ವರೂಪಪ್ರಣವವೆಂದು ಆರು ಪ್ರಕಾರವಾಗಿಹುದು. ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವದಲ್ಲಿ ಮೂರ್ತಿಬ್ರಹ್ಮಪ್ರಣವವೆಂದು, ಪಿಂಡಬ್ರಹ್ಮಪ್ರಣವವೆಂದು, ಕಲಾಬ್ರಹ್ಮಪ್ರಣವವೆಂದು, ಬ್ರಹ್ಮಾನಂದಬ್ರಹ್ಮಪ್ರಣವವೆಂದು, ವಿಜ್ಞಾನಬ್ರಹ್ಮಪ್ರಣವವೆಂದು ಪರಬ್ರಹ್ಮಪ್ರಣವವೆಂದು ಈ ಆರು ಪ್ರಣವಂಗಳು ಷಟ್‍ಸ್ಥಲಬ್ರಹ್ಮ ತಾನೆ ಷಷ*ಪ್ರಣವವಾಗಿಹುದೆಂದು ನಿರಾಮಯಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳಿಹುದು. ಇನ್ನು ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ದರ್ಪಣಾಕಾರದ ಪ್ರಣವದಲ್ಲಿ ಈಶಾನ್ಯಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕಪ್ರಣವದಲ್ಲಿ ತತ್ಪುರುಷಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರಪ್ರಣವದಲ್ಲಿ ಅಘೋರಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಕಸ್ವರೂಪಪ್ರಣವದಲ್ಲಿ ವಾಮದೇವಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪಪ್ರಣವದಲ್ಲಿ ಸದ್ಯೋಜಾತಮುಖವು ಉತ್ಪತ್ಯವಾಯಿತ್ತು. ಈಶಾನ್ಯಮುಖದಲ್ಲಿ ಸಾಯುಜ್ಯಪ್ರಣವ ಉತ್ಪತ್ಯವಾಯಿತ್ತು. ತತ್ಪುರುಷಮುಖದಲ್ಲಿ ಸಾಕಲ್ಯಪ್ರಣವ ಉತ್ಪತ್ಯವಾಯಿತ್ತು. ಅಘೋರಮುಖದಲ್ಲಿ ಶಾಂಭವಪ್ರಣವ ಉತ್ಪತ್ಯವಾಯಿತ್ತು. ವಾಮದೇವಮುಖದಲ್ಲಿ ಸ್ವಾಸ್ಯಪ್ರಣವ ಉತ್ಪತ್ಯವಾಯಿತ್ತು. ಸದ್ಯೋಜಾತಮುಖದಲ್ಲಿ ಸೌಖ್ಯಪ್ರಣವ ಉತ್ಪತ್ಯವಾಯಿತ್ತು. ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವವು, ಶಕ್ತಿಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪರಬ್ರಹ್ಮಪ್ರಣವವು, ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವ ಈ ಮೂರು ಪ್ರಣವಂಗಳು ಕೂಡಿ ಏಕಾರ್ಥವಾಗಿ ಅಖಂಡಿತ ಅಪ್ರಮಾಣ ಅಗೋಚರ ಅಪ್ರಮೇಯ ಅಗಮ್ಯ ವಾಚಾಮಗೋಚರಕತ್ತತ್ತವಾದ ಮಹಾಘನಕ್ಕೆ ಘನವನೇನೆಂದುಪಮಿಸಬಾರದ ಉಪಮಾತೀತಕತ್ತತ್ತವಾಗಿಹನು ನೋಡಾ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->