ಅಥವಾ

ಒಟ್ಟು 35 ಕಡೆಗಳಲ್ಲಿ , 19 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸೆ ತ್ರಿವಿಧದ ಗೊತ್ತು, ನಿರಾಸೆ ಏಕಮಯನ ಗೊತ್ತು. ಅಲ್ಲ, ಅಹುದೆಂಬುದು ಬಲ್ಲವನ ಮತವಲ್ಲ. ಎಲ್ಲಿಯೂ ಸದ್ಗುಣ, ಎಲ್ಲರಲ್ಲಿ ನಿಜಭಾವ, ಪರಿಪೂರ್ಣ ತಾನಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಎಂಬತ್ತನಾಲ್ಕುಲಕ್ಷ ವ್ರತಶೀಲ, ಅರವತ್ತನಾಲ್ಕು ನೇಮ, ಅರುವತ್ತಾರು ವ್ರತಂಗಳಲ್ಲಿ ಇವ ಪ್ರಮಾಣಿಸಿ ನಾಮವಿಟ್ಟೆಹೆನೆಂದಡೆ ಎನಗಾಗದು, ಚೆನ್ನಬಸವಣ್ಣಂಗಲ್ಲದೆ. ಆತ ಜ್ಞಾನಸೂತ್ರಧಾರಿ, ನಾನು ಕ್ರಿಯಾವರ್ತಕ. ಮಾಡಿಕೊಂಡ ವ್ರತಕ್ಕೆ ಕೇಡು ಬಂದಿಹಿತೆಂದು, ಬೆನ್ನ ಮತ್ಸದ ಹುಣ್ಣಿನ ಪಶುವಿನಂತೆ ಎಲ್ಲಿಯೂ ನುಸುಳಲಮ್ಮೆನು. ಬ್ಥಿನ್ನಭಾವದ ಕ್ರೀಯಲ್ಲಿ ನೆಮ್ಮಿದೇನೆ, ಎನಗೆ ಅಭಿನ್ನದಠಾವ ಹೇಳಾ, ಚೆನ್ನಬಸವಣ್ಣಪ್ರಿಯ ಏಲೇಶ್ವರಲಿಂಗವೆ.
--------------
ಏಲೇಶ್ವರ ಕೇತಯ್ಯ
ಬಲ್ಲವರೆಂದು ಎಲ್ಲಕ್ಕೂ ಹೇಳಿ, ಅಲ್ಲಿ ಎಲ್ಲಿಯೂ ಬೋದ್ಥಿಸಬಲ್ಲವ ನಾನೆಂದು ನುಡಿವ ಕಲ್ಲೆದೆಯವನೆ ಕೇಳಾ. ಲಿಂಗವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಜಂಗಮವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಪ್ರಸಾದವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಸಾಮ್ಯಸಂಬಂಧಕ್ಕೆ ಕರ್ತೃಭೃತ್ಯತ್ವವಲ್ಲದೆ, ಜ್ಞಾನಾತೀತಂಗೆ ಸಾಮ್ಯಸಂಬಂಧವ ಭಾವಿಸಲಿಲ್ಲ. ಇಕ್ಕಿದ ಕರುವಿಂಗೆ ಲೆಪ್ಪಣವಲ್ಲದೆ, ಮನಸ್ಸಿನಲ್ಲಿ ಒಪ್ಪವುಂಟೆ ಅಯ್ಯಾ ? ಇದು ತಪ್ಪದು. ಕ್ರಿಯಾನಿರತವಾದ ಭಕ್ತಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಓದಿನಲ್ಲಿ ಕಾಬಡೆ ಅಕ್ಷರಜ್ಞನಲ್ಲ, ಪಾಠದಲ್ಲಿ ಕಾಬಡೆ ಗಂಧರ್ವನಲ್ಲ. ಬಯಲಿನಲ್ಲಿ ಕಾಬಡೆ ಭೂಮಿಯಾಕಾಶ ಮಧ್ಯದಲ್ಲಿಪ್ಪವನಲ್ಲ. ಅರಸಿದಡೆ ಎಲ್ಲಿಯೂ ಇಲ್ಲ, ಅರಸದಿರ್ದಡೆ ಅಲ್ಲಿಯೇ ಇಹೆ. ನಿನ್ನ ಬಲ್ಲವರಾರೊ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನ್ನನರಿಯೆನೆಂಬುದು ಅಜ್ಞಾನ ನೋಡಾ. ಅರಿಯದ ಅಜ್ಞಾನವ ಅಗಳೆದು ಜ್ಞಾನವ ಕಾಣೆನೆಂಬುದು ವಿಪರೀತ ಭಾವ ನೋಡಾ ! ಎಲ್ಲವನು ತೋರುವ ಘನವನು ಎಲ್ಲಿಯೂ ಕಾಣಬಾರದು. ಕಾಣಬಾರದ ನಿಜವ ತೋರಬಾರದು, ತೋರಬಾರದ ನಿಜವ ತಿಳಿಯಬಾರದು,. ಗುಹೇಶ್ವರಲಿಂಗದಲ್ಲಿ ಬಯಕೆಯುಳ್ಳನ್ನಕ್ಕ ತವಕ ಎಡೆಗೊಂಡಿಪ್ಪ ಕಾರಣ ತಿಳುಹಲಿಲ್ಲವೆಂಬುದ ನಿನ್ನ ನೀ ತಿಳಿದು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಕೆರೆಯಲ್ಲಿ ಉಂಡು ತೊರೆಯಲ್ಲಿ ನೆನೆವನಂತೆ ಆರು ಕೊಟ್ಟ ಒಡವೆಯ ಆರಿಗಿಕ್ಕಿ ತಾನಾರಾದ್ಥಿಸಿಕೊಂಬವನ ನೋಡಾ! ಅಲ್ಲಿಗಲ್ಲಿಗೆ ಎಲ್ಲಿಯೂ ತಪ್ಪದು. ಇದನರಿದು, ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
--------------
ಗಾವುದಿ ಮಾಚಯ್ಯ
ಲಿಂಗವೆಂದು ಹಿಂಗಿ ಭಾವಿಸುವಾಗ ಅರಿವು ಲಿಂಗಕ್ಕೆ ಹೊರಗೆ. ಆ ಲಿಂಗ ಚಿತ್ತದ ಕೈಯಲ್ಲಿ ಪ್ರಮಾಣಿಸಿಕೊಂಬಾಗ ಅಣೋರಣೀಯಾನ್ ಮಹತೋ ಮಹೀಯಾನ್ ಎಂದು ಪ್ರಮಾಣಿಸಿಕೊಂಬುದು ಹುಸಿಯೆ ? ತೊರೆಯುದಕ ಮಳಲ ಮರೆಯಲ್ಲಿ ಬಂದು ಸಂದೇಹವ ಬಿಡಿಸುವಂತೆ, ಎಲ್ಲಿಯೂ ನೀನೇ, ಏಣಾಂಕಧರ ಸೋಮೇಶ್ವರಲಿಂಗವೆ.
--------------
ಬಿಬ್ಬಿ ಬಾಚಯ್ಯ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂದು ಶಿಲೆಯೊಡೆದು ಮೂರಾದ ಭೇದವ ನೋಡಾ. ಒಂದು ಶಿಲೆ, ಶೂಲ ಕಪಾಲ ಡಿಂಡಿಮ ರುಂಡಮಾಲೆ ಐದು ತಲೆ, ತಲೆಯೊಳಗೊಬ್ಬಳು, ತೊಡೆಯೊಳಗೊಬ್ಬಳು. ಇಂತೀ ಕಡುಗಲಿಯ ದೇವನೆಂಬರು ನೋಡಾ. ಎನ್ನ ದೇವಂಗೈದು ಮುಖವಿಲ್ಲ, ಈರೈದು ಭುಜವಿಲ್ಲ. ಎನ್ನ ದೇವಂಗೆ ತೊಡೆಮುಡಿಯೊಳಾರನೂ ಕಾಣೆ. [ಹಿಡಿ]ವುದಕ್ಕೆ ಕೈದಿಲ್ಲ, ಕೊಡುವುದಕ್ಕೆ ವರವಿಲ್ಲ. ತೊಡುವುದಕ್ಕಾಭರಣವಿಲ್ಲ, ಒಡಗೂಡುವುದಕ್ಕೆಪುರುಷ[ನಿಲ್ಲ]. ತನಗೆ ಮತಿಯಿಲ್ಲ, ತನ್ನನರಿವವರಿಗೆ ಗತಿಯಿಲ್ಲ. ಗತಿಯಿಲ್ಲವಾಗಿ ಶ್ರುತಿಯಿಲ್ಲ, ಶ್ರುತಿಯಿಲ್ಲವಾಗಿ ನಾದವಿಲ್ಲ. ನಾದವಿಲ್ಲಾಗಿ ಬಿಂದುವಿಲ್ಲ, ಬಿಂದುವಿಲ್ಲವಾಗಿ ಕಳೆಯಿಲ್ಲ. ಇಂತಿವೆಲ್ಲವೂ ಇಲ್ಲವಾಗಿ ಹೊದ್ದಲಿಲ್ಲ, ಹೊದ್ದಲಿಲ್ಲವಾಗಿ ಸಂದಿಲ್ಲ, ಸಂದಿಲ್ಲವಾಗಿ ಸಂದೇಹವಿಲ್ಲ. ನಿಃಕಳಂಕ ಮಲ್ಲಿಕಾರ್ಜುನನಲ್ಲದೆ ಎಲ್ಲಿಯೂ ಕಾಣೆ.
--------------
ಮೋಳಿಗೆ ಮಾರಯ್ಯ
ಅಗ್ಘವಣಿಗಡಿವಜ್ಜೆಯುಂಟೆ ? ವಾಯುವ ಹಿಡಿದು ಬಂದ್ಥಿಸಬಹುದೆ ? ಅನಲಂಗೆ ತಾಳು ತುದಿ ಸುಡುವುದಕ್ಕೆ ಬೇರೆ ಬ್ಥಿನ್ನವುಂಟೆ ? ಸುಗಂಧಕ್ಕೆ ಬುಡ ತುದಿಯಿಲ್ಲ. ಅರ್ಕೇಶ್ವರಲಿಂಗವನರಿದುದಕ್ಕೆ ಎಲ್ಲಿಯೂ ತಾನೆ.
--------------
ಮಧುವಯ್ಯ
ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ ಪರಿಹಾಸಕಂಗಳಿಂದ ಬೇಡಿ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ? ಮಾಡುವ ಠಾವಿನಲ್ಲಿ, ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ ಅಲ್ಲಿ ಬೇಡಬಹುದೆ ? ಭಕ್ತಿಯ ಮಾಡಿಹೆನೆಂದು ಕಾಡಬಹುದೆ ತಾ ? ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ ಸಲ್ಲೀಲೆಯಿಂ ಪ್ರಸಾದವ ಕೊಂಡು ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ, ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಕಾಲ ಮುಟ್ಟಲಮ್ಮದ ಸಯದಾನ, ಕಲ್ಪಿತವಿಲ್ಲದ ಸಯದಾನ. ಅನಂತರತಿ ಎಂಬ ಹೆಂಗೂಸ ಮುಟ್ಟದ ಸಯದಾನ. ಭಾಳಲೋಚನನೆಂಬ ಜಂಗಮ ಮುಟ್ಟದ ಸಯದಾನ. ಎಲ್ಲಿಯೂ ಮುಟ್ಟದ ಸಯದಾನವ ನಿಮಗರ್ಪಿಸಿದೆನು ಆರೋಗಿಸಯ್ಯಾ ಪ್ರಭುವೆ, ಕೂಡಲಸಂಗಮದೇವಾ.
--------------
ಬಸವಣ್ಣ
ಹಿಡಿಗಟ್ಟಿಗೊಳಗಾದನೆಂಬ ಸುದ್ದಿಯ ಗುರು ಕೇಳಿದ. ಕೇಳಿ ಸೈರಿಸಲಾರದೆ ಕಂಡು ಕಂಡು, ಇರಿಸುವ ಠಾವಂ ತೋರಿದ. ಅಲ್ಲ್ಲಲ್ಲಿಯಿದ್ದಡೆ ಎಲ್ಲಿಯೂ ಇರನೆಂದು ಅಜಲೋಕಕ್ಕೆ ಕಳುಹಿದ. ಅಜಲೋಕದಲ್ಲಿ ಆನಂದವೆಂಬ ಮನೆಯಲ್ಲಿ, ಭಕ್ತಿಯೆಂಬ ಬಂಧನವಂ ಮಾಡಿ, ಜ್ಞಾನವೆಂಬ ಕಾವಲಂ ಕೊಟ್ಟಿರಲಾಗಿ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಇನಿತು ಬಂಧನಕ್ಕೊಳಗಾದೆ.
--------------
ಸಿದ್ಧರಾಮೇಶ್ವರ
ಅಯ್ಯಾ ಎನ್ನ ತಂದೆ ತಾಯಿಗಳು ತಮ್ಮ ಕಂದನಪ್ಪ ಶಕ್ತಿಯ ಕೈಲೆಡೆಗೊಟ್ಟು ಕಳುಹಿದಡೆ, ಎನ್ನ ಇಲ್ಲಿಗೆ ತಂದು ಮದುವೆಯಂ ಮಾಡಿ, ಮುಗ್ಧನಪ್ಪ ಗಂಡನ ಕೊರಳಲ್ಲಿ ಕಟ್ಟಿ, ಎನ್ನ ಅತ್ತೆ ಮಾವಂದಿರ ವಶಕ್ಕೆ ಕೊಟ್ಟರು. ಎಮ್ಮತ್ತೆ ಮಾವಂದಿರ ಊರ ಹೊಕ್ಕರೆ, ಕತ್ತಲೆಯಲ್ಲದೆ ಬೆಳಗಿಲ್ಲ. ಎಮ್ಮತ್ತೆ ಮಾವಂದಿರ ಮನೆಯ ಹೊಕ್ಕರೆ, ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು ಎನ್ನ ಗಂಡನ ತಲೆಯೆತ್ತಿ ನೋಡಲೀಸರು. ಹಟ್ಟಿಯಲಿಪ್ಪ ಶುನಕ ಅಡಿಯಿಟ್ಟು ನಡೆಯಲೀಸವು. ಸುತ್ತಲಿಹ ಆನೆ ಕುದುರೆ ತೊತ್ತಳದುಳಿವುತಿಪ್ಪವು. ಒತ್ತೊತ್ತಿನ ಬಾಗಿಲವರು ಎನ್ನ ಇತ್ತಿತ್ತ ಹೊರಡಲೀಸರು. ಸುತ್ತಲಿಹ ಕಾಲಾಳ ಪ್ರಹರಿ, ಮೊತ್ತದ ಸರವರ ಈ ಮುತ್ತಿಗೆಗೊಳಗಾಗಿ ನಾ ಸತ್ತು ಹುಟ್ಟುತಿರ್ದೆನಯ್ಯಾ, ಆಗ ಎನ್ನ ಹೆತ್ತತಾಯಿ ಬಂದು ತತ್ವವೆಂಬ ತವರುಮನೆಯ ಹಾದಿ ತೋರಿದಡೆ, ಇತ್ತ ತಾ ನೋಡಿ ಎಚ್ಚತ್ತು, ಎನ್ನ ಚಿಕ್ಕಂದಿನ ಗಂಡನ ನೋಡಿದೆ. ಎಮ್ಮಿಬ್ಬರ ನೋಟದಿಂದ ಒಂದು ಶಿಶು ಹುಟ್ಟಿತ್ತು. ಆ ಶಿಶು ಹುಟ್ಟಿದಾಕ್ಷಣವೆ ಎಮ್ಮಿಬ್ಬರ ನುಂಗಿತ್ತು. ನುಂಗಿದ ಶಿಶು ತಲೆಯೆತ್ತಿ ನೋಡಲು, ಎಮ್ಮತ್ತೆ ಮಾವಂದಿರಿಬ್ಬರು ಹೆದರಿ ಬಿದ್ದರು. ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು ಎತ್ತಲೋ ಓಡಿಹೋದರು. ಈ ಹಟ್ಟಿಯಲ್ಲಿಪ್ಪ ಶುನಕ ಸುತ್ತಲಿಹ ಆನೆ ಕುದುರೆ ಒತ್ತೊತ್ತಿನ ಬಾಗಿಲವರು, ಸುತ್ತಲಿಹ ಕಾಲಾಳ ಪ್ರಹರಿ ಮೊತ್ತದ ಸರವರ ಹೊತ್ತಿ ನಿಂದುರಿದು, ನಾ ಸುತ್ತಿ ನೋಡಿದರೆ ಎಲ್ಲಿಯೂ ಬಟ್ಟಬಯಲಾಗಿರ್ದಿತ್ತು ಕಾಣಾ. ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ವಾದ ವಶ್ಯ ಯಂತ್ರ ಮಂತ್ರ ಇಂದ್ರಜಾಲ ಮಹೇಂದ್ರಜಾಲ ಅದೃಶ್ಯಾಕರಣ ಪರಕಾಯಪ್ರವೇಶ ತೀರ್ಥಯಾತ್ರೆ ದಿಗ್ವಳಯದಲ್ಲಿ ಜನಜನಿತದ ಆಗುಚೇಗೆಯಲ್ಲದೆ ಎಲ್ಲಿಯೂ ಕಾಬುದಿಲ್ಲ. ಕಾಬುದಕ್ಕೆ ತೆರಪು ಮೂರನರಿದು ಮೂರ ಮರೆದು ಆರನರಿದು ಹದಿನಾರ ಹರಿದು, ಐದ ಬಿಟ್ಟು ಇಪ್ಪತ್ತೈದ ಕಟ್ಟಿ ಬಟ್ಟ ಬಯಲು ತುಟ್ಟತುದಿಯ ಮೆಟ್ಟಿ ನೋಡಿ ಕಂಡ ನಾರಾಯಣಪ್ರಿಯ ರಾಮನಾಥನಲ್ಲಿ ಕೂಟದ ಶರಣ.
--------------
ಗುಪ್ತ ಮಂಚಣ್ಣ
ಇನ್ನಷ್ಟು ... -->