ಕರ್ಪುರದ ಕಳ್ಳನ ಹುಲ್ಲಿನಲ್ಲಿ ಕಟ್ಟಿಸಲು, ಅಗ್ನಿಯೆಂಬ ಹಿತವ ಬಂದು ಬಿಡಿಸಲಾಗಿ, ಪಾಶ ಬೆಂದು ಕಳ್ಳ ತನ್ನಲ್ಲಯೆ ಅಡಗಿದಂತೆ, ಶರಣಂಗೆ ಬಯಲಪಾಶ ಬಂದು ಕಟ್ಟಿರಲು, ಬಯಲಲಿಂಗ ಬಂದು ಬಿಡಿಸಲು, ಬಯಲು ಬಯಲು ಏಕವಾಯಿತ್ತು. ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು ಸದಾಶೂನ್ಯವಾಯಿತ್ತು.
ಷಡುಸ್ಥಲದಲ್ಲಿ ಕಂಡೆಹೆನೆಂದಡೆ ಕ್ರೀಶುದ್ಧೆತೆಯಿಲ್ಲ. ತ್ರಿವಿಧ ಸ್ಥಲದಲ್ಲಿ ಕಂಡೆಹೆನೆಂದಡೆ ಭಾವಶುದ್ಧವಿಲ್ಲ. ಇದು ಮೀರಿ ಬೇರೊಂದನರಿದೆಹೆನೆಂದಡೆ ಆರರಿವಿಂಗೆ ಕುರುಹಿಲ್ಲ. ಈ ತೆರನನರಿದಡೆ ಅರಿವು ಕುರುಹು ಏಕವಾಯಿತ್ತು ಕಾಲಾಂತಕ ಭೀಮೇಶ್ವರಲಿಂಗವನರಿಯಲಾಗಿ.