ಅಥವಾ

ಒಟ್ಟು 32 ಕಡೆಗಳಲ್ಲಿ , 17 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ವಿಶ್ವಾದ್ಥಿಕ ಮಹಾರುದ್ರನುತ್ಪತ್ಯವೆಂತೆಂದಡೆ : ಅನಂತ ಬ್ರಹ್ಮಾಂಡ ಅನಂತ ಕೋಟಿ ಲೋಕಧರನಾದ ಪರಾಪರನಾದ ಮಹಾಸದಾಶಿವನಾದವನು ತನ್ನ ನಿಜಜಾÕನ ಹಿರಿಣ್ಯಗರ್ಭದಲ್ಲಿ ವಿಶ್ವಾದ್ಥಿಕ ಮಹಾರುದ್ರನಂ ನಿರ್ಮಿಸಿ ತನ್ನ ಪಂಚಮುಖದಿಂದ ಪೃಥ್ವಿ ತೇಜ ವಾಯುವಾಕಾಶವೆಂಬ ಮಹಾಭೂತ ಬ್ರಹ್ಮಾಂಡದೊಳು ಚತುರ್ದಶ ಭುವನಂಗಳು, ಸಪ್ತ ಕುಲಪರ್ವತಂಗಳು ಮೊದಲಾದ ಅನಂತ ಗಿರಿ ಗಹ್ವರಂಗಳಂ, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗಬ್ರ್ಥೀಕರಿಸಿಕೊಂಡು ನಿರ್ಮಿಸೆಂದು ಬೆಸನಂ ಕೊಟ್ಟು ಕಳುಹಲು, ಮಹಾಪ್ರಸಾದವೆಂದು ಕೈಕೊಂಡು ಆ ಭೂತಬ್ರಹ್ಮಾಂಡದೊಳು ನಿರ್ಮಿಸಿದನೆಂತೆಂದಡೆ : ಜಲದ ಮೇಲೆ ಕಮಠನ ನಿರ್ಮಿಸಿದ. ಆ ಕಮಠನ ಮೇಲೆ ಮಹಾವಾಸುಗಿಯಂ ನಿರ್ಮಿಸಿದ. ಆ ಮಹಾವಾಸುಗಿಯ ಮೇಲೆ ಅಷ್ಟದಿಗ್ಗಜಂಗಳ ನಿರ್ಮಿಸಿದನು ಆ ವಿಶ್ವಾದ್ಥಿಕ ಮಹಾರುದ್ರನು. ಆ ಅಷ್ಟದಿಗ್ಗಜಂಗಳ ಮೇಲೆ ಸಕಲವಾದ ಜೀವಂಗಳಿಗೂ ಸಕಲವಾದ ಪದಾರ್ಥಂಗಳಿಗೂ ಇಹಂತಾಗಿ ಮಹಾಪೃಥ್ವಿಯಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಮಹಾಮೇರುಪರ್ವತದ ತಾವರೆಯ ನಡುವಣ ಪೀಠಿಕೆಯ ಕ್ರಮದಲ್ಲಿ ನಡೆಯ ಪ್ರಮಾಣು ಹದಿನಾರು ಸಾವಿರದ ಯೋಜನ ಪ್ರಮಾಣು. ಉದ್ದ ಎಂಬತ್ನಾಲ್ಕು ಸಾವಿರ ಯೋಜನದುದ್ದ. ವಿಸ್ತೀರ್ಣ ಮೂವತ್ತೆರಡು ಸಾವಿರಯೋಜನ ಪ್ರಮಾಣು ಉಂಟಾಗಿಹಂತಾಗಿ ಮೇರುತನಕ ಸುತಾಳ ತಾಳ, ಪಂಚಾಶತಕೋಟಿ ಸೋಪಾನಂಗಳುಂಟಾಗಿ ದಿವ್ಯರೂಪಾಗಿ ನಿರ್ಮಿಸಿದನು. ಆ ಮೇರುವಿನ ಪೂರ್ವದೆಸೆಯಲ್ಲಿ ಪದ್ಮರಾಗವು, ಆಗ್ನೆಯಲ್ಲಿ ವಜ್ರ, ದಕ್ಷಿಣದಲ್ಲಿ ಮೌಕ್ತಿಕ, ನೈರುತ್ಯಭಾಗದಲ್ಲಿ ನೀಲ, ಪಶ್ಚಿಮದ ದೆಸೆಯ ವಿಭಾಗದಲ್ಲಿ ವೈಡೂರ್ಯ, ವಾಯುವ್ಯದಲ್ಲಿ ಚಿಂತಾಮಣಿ, ಉತ್ತರದಲ್ಲಿ ರತ್ನಕನಕ, ಈಶಾನ್ಯದಲ್ಲಿ ತಾಮ್ರ, ಮೇರುವಿನ ಮಧ್ಯದಲ್ಲಿ ಪುಷ್ಯರಾಗ ಜಾÕನ ದೃಷ್ಟಿಗಳುಂಟಾಗಿ ಪರಿಪೂರಿತಗಳಿಹಂತಾಗಿ ಗಿರಿಯ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಮೇಲುಳ್ಳ ವೃಕ್ಷಂಗಳೆಲ್ಲ ಕಲ್ಪವೃಕ್ಷಂಗಳು. ಆ ಮೇರುವಿನ ಮೇಲುಳ್ಳ ಮೃಗಂಗಳೆಲ್ಲ ಅಚಾಮಚರಿತ್ರಂಗಳು. ಆ ಮೇರುವಿನ ಮೇಲುಳ್ಳ ಗೋವೆಲ್ಲ ಕಾಮಧೇನುಗಳು. ಅಲ್ಲಿದ್ದ ಮನುಷ್ಯರೆಲ್ಲ ಪರಮಾತ್ಮರು. ಅಲ್ಲಿದ್ದ ಸ್ತ್ರೀಯರೆಲ್ಲ ದೇವಸ್ತ್ರೀಯರು. ಆಹಾರಂಗಳೆಲ್ಲ ಅಮೃತಾಹಾರ, ನೀರೆಲ್ಲ ರಜಸ್ತಳೇಯ ; ಅಲ್ಲಿಯ ಮಣ್ಣೆಲ್ಲ ಕಸ್ತೂರಿ ಕುಂಕುಮಾದಿಗಳೆನಿಸಿಕೊಂಬುದು. ಅಲ್ಲಿಯ ಕಾಷ್ಠಂಗಳೆಲ್ಲ ಸುಗಂಧಂಗಳು. ಆ ಮೇರುವಿನ ದೇವತೆಗಳಿಗೂ ಮುನಿಗಳಿಗೂ ಅನಂತ ಸಿದ್ಧರಿಗೂ ಅನಂತ ಯೋಗಿಗಳಿಗೂ ಜೋಗಿಗಳಿಗೂ ಪುರಂಗಳು ಗೃಹಂಗಳು ಗುಡಿಗಳು ಬಿಲದ್ವಾರಂಗಳುಂಟಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿಗೆ ನಾಲ್ಕು ಬಾಗಿಲು, ಎಂಟು ಸ್ವರ್ಣಕಂಡಿಗಳು, ಹದಿನಾರು ಮಕರತೋರಣಗಳು, ಮೂವತ್ತೆರಡು ಸೋಮವೀದಿಗಳು, ಅರವತ್ನಾಲ್ಕು ಸಂದುಗಳುಂಟಾಗಿ ಸರ್ವಸಂಪೂರ್ಣವಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿನ ಮಧ್ಯದಲ್ಲಿ ಶ್ರೀ ಮಹಾದೇವರಿಗೆ ಶಿವಪುರಮಂ ನಿರ್ಮಿಸಿದನು. ಪಂಚಸಹಸ್ರಯೋಜನ ಚತುಃಚಕ್ರಾಕಾರವಾಗಿ, ನವರತ್ನಖಚಿತವಾಗಿ, ಅಷ್ಟದಳವೇಷ್ಟಿತವಾಗಿ, ಅಷ್ಟಧ್ವಾನಂಗಳುಂಟಾಗಿ, ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ. ಪ್ರಮಥಗಣಂಗಳು, ನಂದಿ, ಮಹಾನಂದಿಕೇಶ್ವರ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖದಲ್ಲಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಬಲದ ದೆಸೆಯಲ್ಲಿ ಬ್ರಹ್ಮಪುರವು ತ್ರಿಕೋಣಾಕಾರವಾಗಿ ಅನಿಲಪ್ರಕಾರವೇಷ್ಟಿತವಾಗಿ, ಅಷ್ಟದ್ವಾರಂಗಳುಂಟಾಗಿ ಐನೂರು ಕೋಟಿ ಕನಕಗೃಹಂಗಳು ಅಸಂಖ್ಯಾತಕೋಟಿ ಮಹಾಋಷಿಗಳು ಒಡ್ಡೋಲಂಗಗೊಟ್ಟು, ನಾಲ್ಕು ವೇದಂಗಳು ಮೂರ್ತಿಬಾಂಧವರಾಗಿ ಸರಸ್ವತಿಸಮೇತವಾಗಿ ಬ್ರಹ್ಮದೇವರು ಪರಮಾನಂದಸುಖದೊಳಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ವಾಮಭಾಗದಲ್ಲಿ ವಿಷ್ಣುವಿಂಗೆ ವೈಕುಂಠವೆಂಬ ಪುರ ಚಕ್ರಾಕಾರವಾಗಿ ಪದ್ಮರಾಗಪ್ರಕಾಶವೇಷ್ಟಿತವಾಗಿ ಅಷ್ಟದ್ವಾರಂಗಳು ಹತ್ತುನೂರುಕೋಟಿ ಕನಕಗೃಹಂಗಳುಂಟಾಗಿ ಅನಂತಕೋಟಿ ಶಂಕ ಚಕ್ರ ಗದಾಹಸ್ತನಾಗಿ ವೇದ ಓಲೈಸಲಾಗಿ ಶ್ರೀಲಕ್ಷ್ಮೀ ಸಮೇತನಾಗಿ ವಿಷ್ಣು ಪರಮಾನಂದಸುಖದಲ್ಲಿಪ್ಪಂತೆ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಪೂರ್ವದೆಸೆಯಲ್ಲಿ ದೇವೇಂದ್ರಂಗೆ ಅಮರಾವತಿಯ ಪುರಮಂ ನಿರ್ಮಿಸಿದನು. ಆಗ್ನೇಯ ದೆಸೆಯಲ್ಲಿ ಅಗ್ನಿದೇವಂಗೆ ತೇಜೋವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ದಕ್ಷಿಣದಿಶಾಭಾಗದಲ್ಲಿ ಯಮದೇವಂಗೆ ಸಿಂಹಾವತಿಯ ಪುರಮಂ ನಿರ್ಮಿಸಿದನು. ನೈಋತ್ಯ ದಿಶಾಭಾಗದಲ್ಲಿ ನೈಋತ್ಯಂಗೆ ಕೃಷ್ಣವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಪಶ್ಚಿಮ ದಿಶಾಭಾಗದಲ್ಲಿ ವರುಣಂಗೆ ಜಂಜನಿತಪುರಮಂ ನಿರ್ಮಿಸಿದನು. ವಾಯುವ್ಯದಲ್ಲಿ ವಾಯುವಿಂಗೆ ಗಂಗಾವತಿಯಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಉತ್ತರದೆಶೆಯಲ್ಲಿ ಕುಬೇರಂಗೆ ಅಳಕಾಪುರಮಂ ನಿರ್ಮಿಸಿದನು. ಈಶಾನ್ಯದಿಶಾಭಾಗದಲ್ಲಿ ಈಶಾನ್ಯದೇವಂಗೆ ಧವಳಾವತಿಪುರಮಂ ಮೊದಲಾಗಿ ಸಮಸ್ತವಾದ ಪುರಗಳಂ ನಿರ್ಮಿಸಿದನು ವಿಶ್ವಾದ್ಥಿಯಕಮಹಾರುದ್ರನು. ಆ ಮಹಾಮೇರುವಿಂಗೆ ವಳಯಾಕೃತವಾಗಿ ಲವಣ ಇಕ್ಷು ಸುರೆ ಘೃತ ದದ್ಥಿ ಕ್ಷೀರ ಶುದ್ಧಜಲಂಗಳೆಂಬ ಸಪ್ತಸಮುದ್ರಂಗಳಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಸಮುದ್ರಂಗಳ ನಡುವೆ ಜಂಬೂದ್ವೀಪ, ಪ್ಲಕ್ಷದ್ವೀಪ, ಶುಕ್ಲದ್ವೀಪ, ಕುಶದ್ವೀಪ, ಶಾಕದ್ವೀಪ, ಶಾಲ್ಮಲೀದ್ವೀಪ, ಪುಷ್ಕರದ್ವೀಪ, ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ದ್ವೀಪಂಗಳಿಗೆ ವಳಯಾಕೃತವಾಗಿ ಮಲಯಜಪರ್ವತ, ನೀಲಪರ್ವತ, ಶ್ವೇತಪರ್ವತ, ಋಕ್ಷಪರ್ವತ, ರಮ್ಯಪರ್ವತ, ಉತ್ತರಕುರುಪರ್ವತ, ಸುಗಂಧಪರ್ವತ, ನಿರಾಕಾರಪರ್ವತ, ಉದಾರಪರ್ವತ, ಮಣಿಶಿಖರಪರ್ವತ, ಅರ್ಧಚಂದ್ರಪರ್ವತ, ಮಧುರಪರ್ವತ, ಮಣಿನಾಗಪರ್ವತ, ಮೈನಾಕಪರ್ವತ, ಉದಯಾದ್ರಿಪರ್ವತ, ತ್ರಿಪುರಾಂತಕಪರ್ವತ, ಶ್ರೀರಾಮಪರ್ವತ, ಮಾಲ್ಯವಂತಪರ್ವತ, ನಿಷಧಪರ್ವತ, ಹೇಮಕೂಟಪರ್ವತ, ನಿರಾಚಲಪರ್ವತ, ಗಂಧಾಚಲಪರ್ವತ, ನೀಲಾಚಲಪರ್ವತ, ಮಂದಾಚಲಪರ್ವತ, ಮೇರುಮಂದಿರಪರ್ವತ, ಶುಬರೀಶ್ವರಪರ್ವತ, ಕುಮುದಉದಯಾದ್ರಿ, ದೇವಕೂಟ, ವಿಂಧ್ಯಾಚಲ, ಪವನಾಚಲ, ಪರಿಯಾಚಲ, ಚಂದ್ರಾಚಲ, ಧಾರಾಚಲ, ಷಡುಲಕ್ಷ್ಮಿಗಿರಿ, ಮಾನಸಾಂತಗಿರಿ, ತಮಂಧಗಿರಿ, ಚಂದ್ರಗಿರಿ, ನಾಗಗಿರಿ, ಲಘುಗಿರಿ, ಮಕರಗಿರಿ, ದ್ರೋಣಗಿರಿ, ಅನಂತವಜ್ರಗಿರಿ, ಕಪಿಲಗಿರಿ, ನೀಲಗಿರಿ, ಪರಗಿರಿ, ತ್ರಿಪುರಗಿರಿ, ಸಿಂಹಗಿರಿ, ಶ್ರೀಕಂಠಗಿರಿ, ಚಕ್ರವಾಳಗಿರಿಪರ್ವತ, ಇಂದ್ರಗಿರಿಪರ್ವತ, ಲೋಕಪರ್ವತಂಗಳು ಮೊದಲಾದ ಪರ್ವತಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇದಕ್ಕೆ ದೇಶಂಗಳಾಗಬೇಕೆಂದು ಪಾಂಚಾಲ, ಬರ್ಬರ, ಮತ್ಸ್ಯ, ಮಗಧ, ಮಲೆಯಾಳ, ತೆಲುಂಗ, ಕಳಿಂಗ, ಕುಕರ, ಕೊಂಕಣ, ತ್ರಿಕರರಾಷ್ಟ್ರ, ಶ್ವಾಸಿನಿ, ಕಂಠರಹಿತ, ಕುತಿಷ್ಟ, ದಶಾರ್ಣ, ಕುರು, ಮುಖಸರ, ಕೌಸಯಿವರ್ಣ, ಆವಂತಿ, ಲಾಳ, ಮಹೇಂದ್ರ, ಪಾಂಡ್ಯ, ಸರ್ವೇಶ್ವರ, ವಿಷ್ಣು, ಶಾಂತಕ, ತುರಾದ್ರ, ಮಗಧಾದ್ರ, ವಿದೇಹ, ಮಗಧ, ದ್ರವಿಳ, ಕಿರಾಂತ, ಕುಂತಳ, ಕಾಮೀರ, ಗಾಂಧಾರ, ಕಾಂಭೋಜ, ಕೀಳುಗುಜ್ಜರ, ಅತಿದೃಷ್ಟ, ನೇಪಾಳ, ಬಂಗಾಳ, ಪುಳಿಂದ್ರ, ಜಾಳೇಂದ್ರ, ಕಲ್ವರ-ಇಂಥಾ ದೇಶಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇನ್ನು ಭೂಮಿಯಿಂದಂ ಮೇಲೆ ಮೇಘಮಂಡಲ ಮೊದಲಾಗಿ ಶಿವಾಂಡ ಚಿದ್ಬ ್ರಹ್ಮಾಂಡ ಕಡೆಯಾಗಿ ಎಲ್ಲಾ ಲೋಕಂಗಳಂ ನಿರ್ಮಿಸಿ, ಸಪ್ತಪಾತಾಳವ ನಿರ್ಮಿಸಿದನದೆಂತೆಂದಡೆ: ಅಲ್ಲಿ ಪೃಥ್ವಿಯ ಕೆಳಗೆ ಶತಕಯೋಜನದಲ್ಲಿ ಅತಳಲೋಕದಲ್ಲಿ ಇಶಿತಮಂಡಲಮಂ ನಿರ್ಮಿಸಿದನು. ಅತಳಲೋಕದಿಂದಂ ಕೆಳಗೆ ಕೋಟಿಯೋಜನದುದ್ದದಲ್ಲಿ ವಿತಳಲೋಕದಲ್ಲಿ ಸ್ವರ್ಣ ನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲು ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಸುತಳತೋಲಕದಲ್ಲಿ ಕೃಷ್ಣನಾಗಮಂಡಲಮಂ ನಿರ್ಮಿಸಿದನು. ಆ ಸುತಳಲೋಕದಿಂದಲು ಕೆಳಗೆ ರಸಾತಳಲೋಕದಲ್ಲಿ ರತ್ನನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ರಸಾತಳಲೋಕದಿಂದಲು ಕೆಳಗೆ ಚತುಃಕೋಟಿ ಯೋಜನದುದ್ದದಲ್ಲಿ ಮಹಾತಳಲೋಕದಿಂದಲು ಕೆಳಗೆ ಶತಕೋಟಿ ಯೋಜನದುದ್ದದಲ್ಲಿ ಪಾತಾಳಲೋಕದಲ್ಲಿ ಅವಿಷ್ಟಕೆ ಆಧಾರವಾಗಿ ಕಮಠನಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಕಮಠನ ಮೇಲೆ ಜಲಂಗಳಂ, ಕಮಲಂಗಳಂ, ಮಹಾಪೃಥ್ವಿಯಂ, ಮೇರುಪರ್ವತ ಸಮಸ್ತದೇವಾಸುರಂಗಳಂ ಮಹಾಪೃಥ್ವಿಯು ಸಮಸ್ತ ಸಪ್ತಸಮುದ್ರಂಗಳಂ, ಸಪ್ತದ್ವೀಪಂಗಳಂ ಮೊದಲಾದ ಲೋಕಾದಿಲೋಕ ಪರ್ವತಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲೂ ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಅತಳ ವಿತಳ ಸುತಳ ರಸಾತಳ ತಳಾತಳ ಮಹಾತಳ ಪಾತಾಳ ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನರ್ಲೋಕ, ತಪರ್ಲೋಕ, ಸತ್ಯರ್ಲೋಕ-ಇಂಥ ಲೋಕಂಗಳೆಂಬ ಹದಿನಾಲ್ಕು ಲೋಕಂಗಳಂ ನಿರ್ಮಿಸಿ ಮತ್ತೆ ಸ್ವರ್ಗ-ಮತ್ರ್ಯ-ಪಾತಾಳಗಳ ವಿವರಿಸಿ ನೋಡಿ ಆ ಲೋಕದವರಿಗೆ ವೇದಶಾಸ್ತ್ರಂಗಳಂ ನಿರ್ಮಿಸಿದನದೆಂತೆಂದಡೆ : ವೇದ ವೇದಾಂಗ, ಮಂತ್ರಶಾಸ್ತ್ರ, ತರ್ಕಶಾಸ್ತ್ರ, ಯೋಗಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ವೈದ್ಯಶಾಸ್ತ್ರ, ನೀತಿಶಾಸ್ತ್ರ, ಧರ್ಮಶಾಸ್ತ್ರ, ಶಕುನಶಾಸ್ತ್ರ, ಶಸ್ತ್ರಶಾಸ್ತ್ರ, ಶಿಲ್ಪಶಾಸ್ತ್ರ, ಜಲಶಾಸ್ತ್ರ, ಸಾಮುದ್ರಿಕಶಾಸ್ತ್ರ, ನೃಪತಿಶಾಸ್ತ್ರ, ಅಂಜನಶಾಸ್ತ್ರ, ರಸವೈದ್ಯಶಾಸ್ತ್ರ, ಬಿಲ್ಲುಶಾಸ್ತ್ರ, ಗೋಪಶಾಸ್ತ್ರ, ಮನುಷ್ಯಶಾಸ್ತ್ರ, ರಥಿಕಶಾಸ್ತ್ರ, ಅಂಗುಲಿಶಾಸ್ತ್ರ, ಶ್ರವಣಶಾಸ್ತ್ರ, ಗಂಧಪಾದ್ಯಶಾಸ್ತ್ರ, ಭುಜಗಶಾಸ್ತ್ರ, ಯೋಗಿಣಿಶಾಸ್ತ್ರ, ಯಕ್ಷಿಣಿಶಾಸ್ತ್ರ, ಶಬ್ದನೀತಿಶಾಸ್ತ್ರ, ಅಲಂಕಾರಶಾಸ್ತ್ರ, ವಿಶ್ವಶಾಸ್ತ್ರ, ಗಂಡಶಾಸ್ತ್ರ, ವ್ಯಾದ್ಥಿಶಾಸ್ತ್ರ, ಯುದ್ಧಶಾಸ್ತ್ರ, ಹಸರಶಾಸ್ತ್ರ, ಶುಂಭನಶಾಸ್ತ್ರ, ಮುಖಶಾಸ್ತ್ರ, ಬಂಧಶಾಸ್ತ್ರ, ಜಲಸ್ತಂಭಶಾಸ್ತ್ರ, ಅಗ್ನಿಶಾಸ್ತ್ರ, ಕರ್ಮಶಾಸ್ತ್ರ, ಪುರಾಣಿಕಶಾಸ್ತ್ರ, ಇಂಗಶಾಸ್ತ್ರ, ವೈದ್ಯಶಾಸ್ತ್ರ, ಇಂದ್ರಜಾಲ, ಮಹೇಂದ್ರಜಾಲ ಶಾಸ್ತ್ರಂಗಳು ಮೊದಲಾದ ಚೌಷಷ್ಠಿ ವಿದ್ಯಂಗಳ ನಿರ್ಮಿಸಿದನು ನೋಡಾ [ಅಪ್ರಮಾಣ] ಕೂಡಲಸಂಗಯ್ಯನ ಶರಣ ವಿಶ್ವಾದ್ಥಿಕಮಹಾರುದ್ರನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೂವಿನ ಮೇಲೊಂದು ಚಿಕ್ಕ ಬೆಟ್ಟ ಹುಟ್ಟಿ, ಬೆಕ್ಕಿನ ಮೇಲಾರು ಬೆಟ್ಟ ಹುಟ್ಟಿದವು. ಬೆಟ್ಟದ ಮೇಲಣವರು ಕಲ್ಲನಿರಿಸಿ ಆರೂ ಕಾಣರು ! ಒಂದು ಗಿರಿ ನೂರನಾಲ್ವತ್ತೆಂಟು ಲಕ್ಷ ಮುಖವು. ನಾನೊಂದು ಮುಖದಲಿ ಇದ್ದೇನೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ, ಕಾಲಕರ್ಮಂಗಳ ದಂಡಿಸಿದಡಿಲ್ಲ, ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ. ಜಲಸಮಾದ್ಥೀಯಲ್ಲಿ ಕುಳಿತಡಿಲ್ಲ, ಇದಕ್ಕೆ ಶ್ಲೋಕ : ಪೂಜಾಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ | ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಮನೋಲಯಂ || ಇಂತೆಂದುಂದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು ಮತ್ತೆ ಅರಸಲುಂಟೇನಯ್ಯಾ? ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ ಚಿತ್ತ ಸಮಾಧನವುಳ್ಳ ಪುರುಷಂಗೆ ? ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ?
--------------
ಗುಹೇಶ್ವರಯ್ಯ
ನಿಜವನರಿಯದ ಶರಣರು, ಲಿಂಗೈಕ್ಯರು, ಗಿರಿ ಗಗನ ಗಹ್ವರದೊಳಗಿದ್ದಲ್ಲಿ ಫಲವೇನೊ? ಮನವು ಲೇಸಾಗಿದ್ದಡೆ ಸಾಲದೆ? ಪರಮಸುಖಿಯಾಗಿರ್ಪ ಶರಣನ ಹೃದಯದಲ್ಲಿ ಸದಾಸನ್ನಹಿತನು ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಕಾಣಬಹುದೆ ಪರುಷದ ಗಿರಿ ಅಂಧಕಂಗೆ ಮೊಗೆಯಬಹುದೆ ರಸದ ಬಾವಿ ನಿರ್ಭಾಗ್ಯಂಗೆ ತೆಗೆಯಬಹುದೆ ಕಡವರವು ದಾರಿದ್ರಂಗೆ ಕರೆಯಬಹುದೆ ಕಾಮಧೇನು ಅಶುದ್ಧಂಗೆ ಹೊನ್ನ ಹುಳುವ ಕಂಡು ನರಿ ತನ್ನ ಬಾಲವ ಹುಣ್ಣು ಮಾಡಿಕೊಂಡಡೆ ಹೋಲಬಹುದೆ ಎನ್ನೊಡೆಯ ಕೂಡಲಸಂಗನ ಶರಣರನು ಪುಣ್ಯವಿಲ್ಲದೆ ಕಾಣಬಹುದೆ 268
--------------
ಬಸವಣ್ಣ
ಗಂಭೀರ ಗುಹೆಯೊಳಗಿಪ್ಪ ನಿರವಯ ಪರಮಾತ್ಮಲಿಂಗವನು ಅರುವಿನಮುಖದಿಂದ ಅಂಗ ಭಾವದ ಕಳೆಯೊಳು ನಿಂದು ಕರಸ್ಥಲಕ್ಕೆಯ್ದಿಸಿ, ನಯನಸ್ಥಲವೆರಸಿ ಹೃದಯಸ್ಥಲಕ್ಕೊಯ್ದು ಭೃಕುಟಿಸ್ಥಲದಲ್ಲಿರಿಸಿ ಮಂತ್ರಸ್ಥಲ ಕೂಡಿ ಲಯಸ್ಥಲದಲ್ಲಿ ಘನಸುಖಪರಿಣಾಮಿಯಾಗಿರ್ದ ಕಾಣಾ ನಿಮ್ಮ ಶರಣ. ಇಂತೀ ಸಗುಣ ನಿರವಯಾನಂದ ನಿಜಸುಖವನರಿಯಲರಿಯದೆ ಶೈವಾಗಮದ ನುಡಿಯವಿಡಿದು ಗಿರಿ ಗಹ್ವರ ನದಿಮೂಲ ಶರಧಿ ಕಾಂತಾರ ಕಾಶಿ ಮೊದಲಾದ ಕಂಡ ಕಂಡದುದಕ್ಕೆ ಹರಿದು ಹೋಗಿ ಅನ್ನೋದಕವ ಸಣ್ಣಿಸಿ ಸೊಪ್ಪು ಪಾಷಾಣಪುಡಿಯ ಕೊಂಡು ಕಷ್ಟಬಟ್ಟು ಕಾಣಲರಿಯದೆ ಕೆಟ್ಟುಹೋಗುವ ಭ್ರಷ್ಟರಿಗೆ ಜ್ಞಾನಿಯೆಂದು ನುಡಿವ ಶುನಕರಿಗೆ ನಾಯಕ ನರಕ ತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕುಂಕುಮದ ಗಿರಿ ಕೊನೆಯೇರಿ ಬೆಳೆಯೆ, ಆಯತವಿಡಿದು ಸುಖವ ಕಂಡು ಅನುಭವದವಳಿಗೆ [ಪಚ್ಚವರ್ಣ್ವ] ಸುಖವನೇಕೀಕರಿಸಿ ನೋಡಲು ಆಯತವಾಯಿತ್ತಯ್ಯಾ ಕುಂಕುದಮ [ಹನ್ನೆರಡಸಳ] ಪೀಠ, ಆ ಪೀಠದಲ್ಲಿ ವೀರಭೃತ್ಯನೆಂಬವ ನಿಂದು, ಜಂಗಮವಿಡಿದು ನಡೆಯೆ, ಅನಿಲಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು, ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.
--------------
ಸಿದ್ಧರಾಮೇಶ್ವರ
ಅಂಧಕಾರದ ಗಿರಿ ಅರಿವೇರಿತು ಅನುವಿಡಿದು ಸುಖವ ಕಂಡು ಅನುಭವದವಳಿಗೆ ಕೆಂಪುವರ್ಣ ಸುಖವನೇಕೀಕರಿಸಿ ನೋಡಲು ಆಯತವಾಯಿತ್ತು ಈ ಅಂಧಕಾರದ ಎರಡೆಸಳಪೀಠ ಆ ಪೀಠದಲ್ಲಿ ಸಮಯಾಚಾರಿಯೆಂಬವ ನಿಂದು ಪರಿಣಾಮವಿಡಿದು ನಡೆಯೆ, ಆತ್ಮನ ಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನ ಧರ್ಮಂ ಬದುಕಿದೆನು
--------------
ಸಿದ್ಧರಾಮೇಶ್ವರ
ನಾನಾ ವೃಕ್ಷಂಗಳೊಳಗೆ ವಸ್ತು ತಾನೇ. ನಾನಾ ಗಿರಿಪರ್ವತಂಗಳಲ್ಲಿಯೂ ತಾನೇ. ಸಕಲ [ಸಮು]ದ್ರ ಆಕಾಶಾದಿ ಭುವನ ಬ್ರಹ್ಮಾಂಡ ಪಿಂಡಂಗಳೆಲ್ಲವು ತಾನೆಂದರಿಯದೆ, ಇದಿರಲ್ಲಿ ವಸ್ತು ಉಂಟೆಂಬ ಷಟ್‍ಸ್ಥಳಬ್ರಹ್ಮಿ ನೀ ಕೇಳಾ, ಗಿರಿ.... ನೆವುಂಟೆ? ಲಿಂಗವಾಗಿ ಸಂಗವನರಸಲುಂಟೆ? ಬೆಳಗೆಂಬ ಸಂದೇಹನ... ದ್ವಂದ್ವದ ಪ್ರಸಂಗವೆಲ್ಲಿಯದು ಹೇಳಾ. ನಿಂದ ನಿಲವೆ ತಾನಾದ ಅಬದ್ಧಂಗೆ ನಿರಾಳ ಸುರಾಳವೆಲ್ಲಿಯದು ಹೇಳಾ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ. ಗಿರಿ ಘನ ವಜ್ರ ಕಿರಿದೆನ್ನಬಹುದೆ ಬಾರದಯ್ಯಾ. ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ. ಮರಹು ಘನ ನಿಮ್ಮ ನೆನೆವ ಮನ ಕಿರಿದೆನ್ನಬಹುದೆ! ಬಾರದಯ್ಯಾ ಕೂಡಲಸಂಗಮದೇವಾ. 6
--------------
ಬಸವಣ್ಣ
ಹಿರಿದಪ್ಪ ಮಹಾಮೇರುವೆಯ ತುದಿಯಲ್ಲಿ, ಒಂದು ಅರಗಿನ ಗಿಳಿ ತತ್ತಿಯನಿಕ್ಕಿ, ತತ್ತಿಯ ಆ ಗಿರಿ ನುಂಗಿತ್ತ ಕಂಡೆ. ಗಿಳಿಯ ಕುರುಹಿಲ್ಲದೆ ಹಾರಿಹೋಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ, ನೀವೇ ಬಲ್ಲಿರಿ.
--------------
ಮೋಳಿಗೆ ಮಾರಯ್ಯ
ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು ಪವನನ ಸುಳುಹು ಇಲ್ಲದಂದು, ಅಗ್ನಿಗೆ ಕಳೆ ಮೊಳೆದೋರದಂದು, ತರು ಗಿರಿ ತೃಣಕಾಷಾ*ದಿಗಳಿಲ್ಲದಂದು, ಯುಗಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದಿಹೆನೆಂಬ ತ್ರಿಜಗಾಧಿಪತಿಗಳಿಲ್ಲದಂದು_ ತೋರುವ ಬೀರುವ ಪರಿ ಇಲ್ಲದಂದು, ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು !
--------------
ಅಲ್ಲಮಪ್ರಭುದೇವರು
ಸ್ವಾನುಭಾವದ ಬೆಳಗಿನಲ್ಲಿ ಒಂದು ಬೆಕ್ಕು ಹುಟ್ಟಿತ್ತು. ಆ ಬೆಕ್ಕಿನ ತಲೆಯ ಮೇಲೊಂದು ಗಿರಿ ಹುಟ್ಟಿತ್ತು. ಗಿರಿಯ ಮೇಲೆರಡು ರತ್ನ ಹುಟ್ಟಿದವು. ಆ ರತ್ನಂಗಳನರಸಿಕೊಂಡು ಬರಲು, ಅವು ತನ್ನನವಗ್ರಹಿಸಿದವು. ಒಂದು ರತ್ನ ಅಂಗವನವಗ್ರಹಿಸಿತ್ತು, ಮತ್ತೊಂದು ರತ್ನ ಪ್ರಾಣವನವಗ್ರಹಿಸಿತ್ತು. ಆ ರತ್ನಂಗಳ ಪ್ರಭೆ ತಾನಾದ ನಮ್ಮ ಗುಹೇಶ್ವರನ ಶರಣ ಸಿದ್ಧರಾಮಯ್ಯದೇವರ ನಿಲವಿಂಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಉದಕದ ಬಾಯಲಲಿ ಒಂದು ರಸದ ಗಿರಿ ಹುಟ್ಟಿ, ಹೊಸಮಾಣಿಕ್ಯವ ನುಂಗಿತ್ತ ಕಂಡೆ. ನುಂಗುವಾಗ ಒಂದು, ಗುಟುಕಿಸುವಾಗ ಎರಡು, ಸ್ವಸ್ಥಾನದಲ್ಲಿ ನಿಂದಾಗ ಮೂರು, ಅದರಂಗವ ತಿಳಿದು ಕಳೆಯಬಲ್ಲಡೆ ನಿಃಕಳಂಕ ಮಲ್ಲಿಕಾರ್ಜುನ ಲಿಂಗವ ಬಲ್ಲವ.
--------------
ಮೋಳಿಗೆ ಮಾರಯ್ಯ
ಅಯ್ಯಾ ಅರಗಿನ ಮರದ ಮೇಲೆ ಗಿರಿ ಹುಟ್ಟಿತ್ತಯ್ಯಾ. ಆ ಗಿರಿಯ ತಪ್ಪಲಲ್ಲಿ ಸಪ್ತಶರಧಿಗಳಿಪ್ಪವು. ಆ ಶರಧಿಯ ನಡುವೆ, ತರು ಮರ ಗಿರಿ ಗಹ್ವರ ಖಗ ಮೃಗಂಗಳಿಪ್ಪವು. ಈ ಭಾರವ ತಾಳಲಾರದೆ, ಅರಗಿನ ಮರದಡಿಯಲಿರ್ದ ಪರಮಜ್ಞಾನವೆಂಬ ಉರಿಯೆದ್ದು, ಅರಗಿನ ಮರ ಕರಗಿ ಕುಸಿಯಿತ್ತು, ಗಿರಿ ನೆಲಕ್ಕೆ ಬಿದ್ದಿತ್ತು, ಸಪ್ತಶರಧಿಗಳು ಬತ್ತಿದವು. ಅಲ್ಲಿರ್ದ ತರು ಮರ ಖಗ ಮೃಗಾದಿಗಳು ಗಿರಿಗಹ್ವರವೆಲ್ಲ ದಹನವಾದವು. ಇದ ಕಂಡು, ನಾ ನಿಮ್ಮೊಳು ಬೆರಗಾಗಿ ನೋಡುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->