ಅಥವಾ

ಒಟ್ಟು 53 ಕಡೆಗಳಲ್ಲಿ , 29 ವಚನಕಾರರು , 53 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಟದ ಮಧ್ಯದಲ್ಲಿ ನಿಂದವನ, ಆತ್ಮನ ಚಿತ್ತದಲ್ಲಿ ಅರಿದವನ, ಅಲ್ಲ ಆಹುದೆಂದು ಗೆಲ್ಲ ಸೋಲಕ್ಕೆ ಹೋರದವನ, ಎಲ್ಲಾ ಜೀವಂಗಳಲ್ಲಿ ದಯವುಳ್ಳವನ, ಆತನೆಲ್ಲಿಯೂ ಸುಖಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಲ್ಲಲ್ಲಿಗೆ ತಕ್ಕ ಹಾಗೆ ಎಲ್ಲರಿಗೂ ಬೋದ್ಥಿಸಲಾಗದು. ಬಲ್ಲವರಲ್ಲಿ ನುಡಿದು, ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ನುಡಿದಡೆ, ಅವರು ಕಲ್ಲೆದೆಯವನೆಂಬರು. ಒಳ್ಳಿತು ಹೊಲ್ಲವೆನಬೇಡ ಆರಿಗೂ. ತನ್ನಲ್ಲಿಯೆ ಅರಿಕೆಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ ವಾಚಾರಚನೆಯೆಂಬ ಹುಲಿ ಹುಟ್ಟಿ, ಅರಿದೆನೆಂಬ ಹಿರಿದಪ್ಪ ಬೆಟ್ಟದಲ್ಲಿ ಗೆಲ್ಲ ಸೋಲವೆಂಬ ಮತ್ತಗಜ ಹುಟ್ಟಿ, ಮೊನೆ ಮುಂಬರಿದು ಹರಿದ ಬೆಟ್ಟದಲ್ಲಿ ಪರಿಭ್ರಮಣದ ತೋಳ ಹುಟ್ಟಿ, ಹುಲಿ ಹುಲ್ಲೆಯ ಕೋಡಿನಲ್ಲಿ ಸತ್ತು ಗಜ ಅಜದ ಮೆಲುಕಿನಲ್ಲಿ ಸಿಕ್ಕಿ, ತೋಳ ಉಡುವಿನ ಕಣ್ಣಿನೊಳಡಗಿತ್ತು. ತುರುವಿನ ಮುಂದೆ ಬರಿಕೆಯಿವುತ್ತಿದೆ ಗೋಪತಿನಾಥ ವಿಶ್ವೇಶ್ವರಲಿಂಗವನರಿತೆಹೆನೆಂದು.
--------------
ತುರುಗಾಹಿ ರಾಮಣ್ಣ
ಭಟಂಗೆ ಬ್ಥೀತಿ ಉಳ್ಳನ್ನಕ್ಕ ರಣವ ಹೊಗಬಲ್ಲನೆ? ಬಲ್ಲವ ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ಹೋರುವನ್ನಬರ ಬಲ್ಲವನಹನೆ? ಅರಿದು ನುಡಿಯಲಿಲ್ಲ, ಮರೆದು ಸುಮ್ಮನಿರಲಿಲ್ಲ. ಆರು ಎಂದಂತೆ ಎನಲಿಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಹ್ಯತೆ ಸಹ್ಯತೆ ಶಂಕರಿತೆ ಮೂಲಭದ್ರಿಕೆ ಮಾಯಾರಿತು ಮಂತ್ರರಿತು ತಂತ್ರಸಾಧನ ಮಾತ್ರಾಯ ಪೂರ್ವನಿರೀಕ್ಷಣೆ ರಘುವಾಚ ವಾದಮೂಲ ವೈದಿಕಧರ್ಮ ಸಾಂಖ್ಯನ ಮತ ವ್ಯಾಪಾರ ಸಂಗ್ರಹ ಮಾಯಾ ತರ್ಕ ಶೂನ್ಯ, ಉತ್ತರ ಸಂಕಲ್ಪ ಚಿಂತನೆ ಮೊದಲಾದ ವೇದಾಧ್ಯಾಯ, ಉಭಯಚಿಂತನೆಯಾದರೂ ವೇದವೇದ್ಯರಲ್ಲ. ಅದೆಂತೆಂದಡೆ : ಮದವ ಸ್ವೀಕರಿಸಿದ ಮದೋನ್ಮತ್ತನಂತೆ, ತನ್ನ ಕೊರತೆಯ ತಾನರಿಯದೆ ಇದಿರಿಗೆ ಚತುರತೆಯನೊರೆವವನಂತೆ, ವೇದಘಾತಕರಲ್ಲದೆ ವೇದವೇದ್ಯರಲ್ಲ. ವೇದವೇದ್ಯರಾರೆಂದಡೆ ತಾನೆಂಬುದ ತಾನರಿದು, ತಾನೆಂಬ ಭಾವ ಏನೂ ಇಲ್ಲದೆ, ಶ್ರುತಿ ಸ್ಮೃತಿ ತತ್ತ್ವಜ್ಞಾನ ಭೇದಂಗಳ ಧ್ಯಾನಪರಿಪೂರ್ಣನಾಗಿ, ಪ್ರಾಣಿಗಳ ಕೊಲ್ಲದೆ, ಗೆಲ್ಲ ಸೋಲವನೊಲ್ಲದೆ, ತ್ರಿವಿಧದರ್ಚನೆಯಲ್ಲಿ ನಿಲ್ಲದೆ, ಎಲ್ಲಾ ಆತ್ಮಂಗಳಲ್ಲಿ ಸಲ್ಲೀಲೆವಂತನಾಗಿ, ಭಾವ ನಿಜವಸ್ತುವಿನಲ್ಲಿ ವೇದ್ಥಿಸಿ ನಿಂದಾತನೇ ವೇದವೇದ್ಯ, ಲಲಾಮಬ್ಥೀಮಸಂಗಮೇಶ್ವರ ಲಿಂಗದೊಳಗಾದ ಶರಣ.
--------------
ವೇದಮೂರ್ತಿ ಸಂಗಣ್ಣ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ ದೈವದ ಕುರುಹು ಎಲ್ಲಿ ಇದ್ದಿತ್ತು ಹೇಳಿರಣ್ಣಾ ? ಶರೀರದ ಮೇಲೆ ಕಟ್ಟಿ, ಕರ ಚರಣಾದಿ ಅವಯವಂಗಳು ಮುಂತಾದ ಹಲವು ಪರಿಭ್ರಮಣದಿಂದ ಪೂಜಿಸಿಕೊಂಬುದು, ಅದಾವ ಲಿಂಗವಣ್ಣಾ ? ಸರ್ವರೆಲ್ಲರ ಕೈಯಲ್ಲಿ, ಇದು ವಸ್ತು ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಅದಾವ ವಸ್ತುವಿನ ಕುರುಹಣ್ಣಾ ? ಇಂತೀ ಸ್ಥಾವರ ಚರ ಅರಿವಿನ ಕುರುಹೆಂಬುದೊಂದು ಸೆರಗ ತೋರಾ ? ಅದು ನುಡಿವಡೆ ಸಮಯಕ್ಕೆ ದೂರ. ಅದು ಮುನ್ನವೆ ಅರಿದರಿವ ಈಗ ಕುರುಹಿಡುವಲ್ಲಿ, ಅದು ಪರಿಭ್ರಮಣ ಭ್ರಾಂತಿ. ಇಂತೀ ಕರ್ಮಕಾಂಡ, ಇಂತಿವನರಿದು ಬೆರೆದೆನೆಂಬ ಜ್ಞಾನಕಾಂಡ. ಸುಮುದ್ರಿತವಾಗಿ, ಆ ಸುಮುದ್ರೆಯಲ್ಲಿ ಸೂತಕ ನಿಂದು, ಅದೇತಕ್ಕೂ ಒಡಲಿಲ್ಲದಿಪ್ಪುದು, ಕಾಮಧೂಮ ಧೂಳೇಶ್ವರ ತಾನು ತಾನೆ.
--------------
ಮಾದಾರ ಧೂಳಯ್ಯ
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಗೆಲ್ಲ ಸೋಲಬಲ್ಲವರಿಗೇಕೆ ? ಅದು ಬೆಳ್ಳರ ಗುಣ. ಪಥವೆಲ್ಲರಲ್ಲಿ ನಿಹಿತನಾಗಿ, ಅತಿಶಯದ ವಿಷಯದಲ್ಲಿ ಗತನಾಗದೆ, ಸರ್ವವನರಿತು, ಗತಮಯಕ್ಕೆ ಅತೀತನಾಗು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಓಡ ಹಿಡಿದವನ ಕೈ ಮಸಿಯೆಂಬುದ ನಾಡೆಲ್ಲ ಬಲ್ಲರು. ಅವನ ಕೂಡೆ ಆಡಲಾಗದು ಅಯ್ಯಾ, ತನಗಾ ಮಸಿ ಹತ್ತೂದಾಗಿ. ಲಿಂಗವಿರೋಧಿಯ ಕೈವಿಡಿದಾಡುವವ ಮುನ್ನವೆ ವ್ರತಗೇಡಿ. ಅಂಥವನ ಸಂಗ ಬೇಡಯ್ಯಾ, ತನಗಾ ಭಂಗ ಬಂದುದಾಗಿ. ಅದೆಂತೆಂದಡೆ : ಜಗದ ಕರ್ತ ಶಿವನ ವಿರೋಧವ ಮಾಡಿ ದಕ್ಷನೊಬ್ಬ ಯಾಗವನಿಕ್ಕಲು, ತೆತ್ತೀಸಕೋಟಿದೇವರ್ಕಳೆಲ್ಲಾ ತೊತ್ತಳದುಳಿಸಿಕೊಂಡು, ನುಚ್ಚುನುರಿಯಾಗಿ ಹೋದರು ನೋಡಾ, ಅವನಂಗ ಸಂಗದಲ್ಲಿದ ಕಾರಣ. ಗೆಲ್ಲ ಸೋಲಕೆ ಇಕ್ಕು ಮುಂಡಿಗೆ, ಏರು ಮುಂಡಿಗೆಯೆಂಬ ಮಚ್ಚರಕ್ಕೆ ಮುಂದುವಿಡಿದು ಮುಡುಹಿಕ್ಕಿ ಕೆಲದಾಡುವರೆಲ್ಲಾ. ತಮ್ಮ ಮನದಲ್ಲಿ ತಾವರಿದು ಒಯ್ಯನೆ ತೊಲಗುವರು. ಮೇಲೆ ಲಿಂಗ ನಿರೂಪದಿಂದ ಬಂದ ಕಾರ್ಯಕ್ಕೆ ಅಂಜರು, ಏಕಾಂಗವೀರರು. ವಾಯದ ಹರೆಮಾತಿನ ಮಾಲೆಗೆ ಬೆದರಿ ಬೆಚ್ಚಿ ಓಡುವನಲ್ಲ, ಏಕೋಭಾವ ನಿಷೆ* ನಿಬ್ಬೆರಗು ಗಟ್ಟಿಗೊಂಡ ದೃಢಚಿತ್ತವುಳ್ಳ ಸದ್ಭಕ್ತ. ಇಂತಪ್ಪ ಉಲುಹಡಗಿದ ಶರಣರ ಸಂಗದಲ್ಲಿರಿಸಿ ಬದುಕುವಂತಿರಿಸಯ್ಯಾ, ವರದ ಶಂಕರೇಶ್ವರಾ.
--------------
ವರದ ಸಂಕಣ್ಣ
ವೇದನೆಯಿಂದ ವಸ್ತುವ ವೇದಿಸಿ ಕಾಣಬೇಕೆಂಬುದು ಅದೇನು ಹೇಳಾ. ಸರ್ವೇಂದ್ರಿಯಂಗಳ ಸಂಚವ ಬಿಟ್ಟು, ಏಕೇಂದ್ರಿಯದಲ್ಲಿ ವಸ್ತುವ ಆಚರಿಸಬೇಕೆಂಬುದು ಅದೇನು ಹೇಳಾ. ಅಲ್ಲ ಅಹುದು, ಉಂಟು ಇಲ್ಲ ಎಂಬುದು ಗೆಲ್ಲ ಸೋಲಕ್ಕೆ ಹೋರುವುದು ಅದೇನು ಹೇಳಾ. ಅದು ಪಂಚಲೋಹದ ಸಂಚದಂತೆ ಹಿಂಚು ಮುಂಚಿನ ಭೇದ. ಅರಿದೆ ಮರೆದೆನೆಂಬುದು ಪರಿಭ್ರಮಣದ ಭೇದ. ಅರಿಯಲಿಲ್ಲ ಮರೆಯಲಿಲ್ಲ ಎಂಬುದು ಅದು ಪರತತ್ವದ ಭೇದ. ಇಂತೀ ಗುಣ ಭಾವಂಗಳ ಲಕ್ಷಿಸಿ, ದೃಷ್ಟಿ ಉಂಟೆಂದಲ್ಲಿ ಆತ್ಮ, ದೃಷ್ಟ ನಷ್ಟವಾಯಿತ್ತೆಂಬಲ್ಲಿಯೆ ಪರಮ. ಉಭಯದ ತೊಟ್ಟು ಬಿಟ್ಟಲ್ಲಿ, ನಿಜ ನಿಶ್ಚಯ ಅದೆಂತು ತಾನಂತೆ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಎಲ್ಲವ ಕಳಿದುಳಿದ ಹೂವ ತಂದು, ಗೆಲ್ಲ ಸೋಲಕ್ಕೊಳಗಾಗದ ನೀರ ತುಂಬಿ, ಕರಣಂಗಳೆಲ್ಲವು ಕಂಗಳ ತುಂಬಿ ನಿಂದು ನೋಡಿ, ಎಂದೂ ತನ್ನಂಗದಿಚ್ಛೆಯ ಮರೆದು, ಲಿಂಗವ ಪೂಜಿಸಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸ್ವಪ್ನದಲ್ಲಿ ಮರೆದು, ಸಕಲವ ಕಂಡು ಅರಿದು, ಹೇಳುವುದು, ಆತ್ಮ ಭಿನ್ನವೋ, ಘಟ ಭಿನ್ನವೋ ? ಇಷ್ಟಲಿಂಗವೆಂದು, ಪ್ರಾಣಲಿಂಗವೆಂದು ಕಟ್ಟಿ ಹೋರುವಾಗ, ತಾನು ದೃಷ್ಟದ ಅಂಗವ ಹೊತ್ತು ಹೋರುತ್ತಿದ್ದು, ಮತ್ತೆ ಕ್ರೀಯಲ್ಲಾವೆಂಬುದಕ್ಕೆ ತೆರಪಾವುದು ? ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಕ್ರೀಯೋ, ನಿಃಕ್ರೀಯೋ ? ಮಂದಿಯ ನಡುವೆ ನಿಂದಿರ್ದ ಉಡುವಿನಂತೆ, ಕಣ್ಣು ಮುಚ್ಚಿ ಗೆದ್ದೆನೆಂದು ಬಡಿಯಿಸಿಕೊಂಬ ತೆರದ ಮಾತಿನ ಮಾಲೆ ಬೇಡ. ನೂಲ ಹಿಡಿದು ಬೆಟ್ಟವನೇರುವಂತೆ, [ವಿ]ಧವೆ ಬಾಲನ ಹಿಡಿದು ಬದುಕುವಂತೆ, ಕೂಷ್ಮಾಂಡವ ಹಿಡಿದು ಎಯ್ದುವ ಜಲದಲ್ಲಿ ಚರಿಸುವನಂತೆ, ಕಡೆಯಾಗಬೇಡ, ನೆರೆ ನಂಬು. ಮಾಡುವ ಕ್ರೀಯಲ್ಲಿ ಅರಿವುಹೀನವಾಗಬೇಡ. ಮಡುವಿನ ನಡುವೆ ಕಟ್ಟಿದ ಹಾಲದ ಹಾದಿಯಂತೆ, ಅಡಿ ತೊಲಗಿದಡೆ ಕುಡಿವಿರಿ ನೀರ. ಬಿಡದಿರು ಮಾಡುವ ಸತ್ಕ್ರೀಯ. ಇದನರಿದು ಒಡಗೂಡು, ಐಘಟದೂರ ರಾಮೇಶ್ವರಲಿಂಗವ, ಉಭಯ ಭಾವವಳಿದು.
--------------
ಮೆರೆಮಿಂಡಯ್ಯ
ಭಕ್ತಂಗೆ ಬೇಡದ ಭಾಷೆ, ನಿನಗೆ ಕೊಡದ ಭಾಷೆ. ಭಕ್ತಂಗೆ ಓಡದ ಭಾಷೆ, ನಿನಗೆ ಕಾಡುವ ಭಾಷೆ. ಭಕ್ತಂಗೆ ಸತ್ಯದ ಬಲ, ನಿನಗೆ ಶಕ್ತಿಯ ಬಲ. ಇಬ್ಬರ ಗೆಲ್ಲ ಸೋಲಕ್ಕೆ ಕಡೆಯಿಲ್ಲ. ಈ ಇಬ್ಬರಿಗೆಯೂ ಒಡೆಯರಿಲ್ಲದ ಲೆಂಕ. ಇನ್ನು ಭಕ್ತನು ಭಕ್ತಿಯ ಛಲವ ಬಿಡನಾಗಿ. ಭಕ್ತ ಸೋತಡೆ, ಭಕ್ತನದೆ ಗೆಲುವು. ಭಕ್ತ ಗೆದ್ದಡಂತು ಗೆಲುವು? ಇದ ನೀನೆ ವಿಚಾರಿಸಿಕೊಳ್ಳಾ, ಭಕ್ತದೇಹಿಕದೇವ ಸಕಳೇಶ್ವರಾ.
--------------
ಸಕಳೇಶ ಮಾದರಸ
ಖ್ಯಾತಿಲಾಭದ ಪೂಜೆ, ದ್ರವ್ಯವ ಕೆಡಿಸುವುದಕ್ಕೆ ಮೊದಲಾಯಿತ್ತು. ವೈರಾಗ್ಯದ ವಿರಕ್ತಿ ಮೂರಕ್ಕೆ ಒಡಲುಗೊಳಿಸಿತ್ತು. ವಾಗದ್ವೈತದ ಕೇಣಸರ, ಗೆಲ್ಲ ಸೋಲಕ್ಕೆ ಕಲ್ಲೆದೆಯ ಮಾಡಿತ್ತು. ಇವೆಲ್ಲವ ತಿಳಿದು, ಇಲ್ಲ ಉಂಟು ಎಂಬಲ್ಲಿಯೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಇನ್ನಷ್ಟು ... -->