ಐದು ಕೇರಿಯ ಮುಂದೆ ಒಂದು ಗ್ರಾಮವ ಕಂಡೆನಯ್ಯ, ಆ ಗ್ರಾಮದ ಮುಂದೆ ಒಂದು ಗುಡಿಯ ಕಂಡೆನಯ್ಯ. ಆ ಗುಡಿಯೊಳಗೊಬ್ಬ ಪುರುಷನು ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ! ಆ ಪುರುಷನ ಸರ್ಪ ನುಂಗಿ, ಆ ಸರ್ಪನ ಕಪ್ಪೆ ನುಂಗಿ ನಿರ್ವಯಲಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
ಆರು ಕೇರಿಯ ಮುಂದೆ ಮೂರು ಗ್ರಾಮವ ಕಂಡೆನಯ್ಯ. ಮೂರು ಗ್ರಾಮದ ಮುಂದೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗವ ನೋಡ ಹೋಗದ ಮುನ್ನ ಆರು ಕೇರಿ ಅಳಿದು, ಮೂರು ಗ್ರಾಮ ಹೋಗಿ, ಮೀರಿ ಕಂಡೆನಯ್ಯ ಆ ಲಿಂಗವನು ಝೇಂಕಾರ ನಿಜಲಿಂಗಪ್ರಭುವೆ.
ಆದಿಯ ಸಂಗದಿಂದ ಮೂವರು ಹುಟ್ಟಿ, ಆರು ಗ್ರಾಮವ ಪೊಕ್ಕು, ಒಂಬತ್ತು ಬೀದಿಯನೇರಿ ಬರಲು, ಕಡೆಯ ಬಾಗಿಲಲ್ಲಿ ಸ್ವಯಂಪ್ರಕಾಶವೆಂಬ ಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ತನ್ನ ಮರೆದು ಮುಂದೆ ಕಾಣಬಲ್ಲಾತನೆ ನಿಮ್ಮ ಶರಣನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
ಗ್ರಾಮಮಧ್ಯದ ಧವಳಾರದೊ?ಗೊಂದು ಸತ್ತ ಹೆಣನಿರುತ್ತಿರಲು, ಗ್ರಾಮ ಸುತ್ತಿ ಬರುತಿದ್ದ ರಕ್ಕಸಿ ಆ ಸತ್ತುದ ಕಂಡಳಲ್ಲಾ. ಗ್ರಾಮ ನನ್ನ ಕಾಹು, ಗ್ರಾಮದಲ್ಲಿ ನಾನಿಪ್ಪೆ, ಇದಾರೊ ಕೊಂದವರು ? ನಾನು ಕೊಲ್ಲದ ಮುನ್ನ, ಅದು ತಾನೆ ಸತ್ತಡೆ, ಎನಗಿದು ಸೋಜಿಗವು. ಸತ್ತುದು ಗ್ರಾಮವ ಕೆಡಿಸಿತ್ತು, ಇನ್ನಿದ್ದರೆ ಎನ್ನನೂ ಕೆಡಿಸಿತ್ತು. ಇಲ್ಲಿದ್ದವರಿಗುಪಟಳ ನೋಡಾ ! (ಎಂದು) ಗ್ರಾಮ ಬಿಟ್ಟು ಹೋಯಿತ್ತಯ್ಯಾ ಕೂಡಲಚೆನ್ನಸಂಗಮದೇವಾ.
ಐದು ದಾರಿಯ ಮೇಲೆ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ. ಆ ಪುರುಷಂಗೆ ಒಬ್ಬ ಸತಿಯಳಿಪ್ಪಳು ನೋಡಾ. ಆ ಸತಿಯಳ ಸಂಗದಿಂದ ಆರು ದೇಶವ ದಾಂಟಿ, ಮೂರು ಗ್ರಾಮವ ಮೀರಿ, ಪರಕೆಪರವನಾಚರಿಸುತಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ನಾನಾ ದೇಶವ ತಿರುಗಿ ಒಂದು ಮುಳ್ಳುಮೊನೆಯ ಮೇಲೆ ಒಬ್ಬ ಪುರುಷನು ನಿಂದಿರುವುದ ಕಂಡೆನಯ್ಯ. ಆ ಪುರುಷನ ಸತಿಯಳು ಒಬ್ಬ ಮಗನ ಹಡೆದು ಆರು ಮೂರು ಗ್ರಾಮವ ಕಟ್ಟಿಸಿ ಆ ಶಿಶುವ ಆ ಪುರುಷಂಗೆ ಕೊಟ್ಟು ಹೆಂಡತಿ ಬತ್ತಲೆಯಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಕಿಚ್ಚಿನೊಳಗೆ ಕಿಚ್ಚು ಹುಟ್ಟಿ ಉರಿವುತ್ತಿದ್ದಿತ್ತು. ಕಿಚ್ಚ ಕಾಯ ಹೋದವರ ಹಚ್ಚಡ ಬೆಂದು ಬತ್ತಲೆಯಾದರು. ಆ ಕಿಚ್ಚು ಗ್ರಾಮವ ಸುತ್ತಿ ದಳ್ಳುರಿಗೊಳಲು ಗ್ರಾಮದವರು ಗ್ರಾಮದಾಸೆಯ ಬಿಟ್ಟು ಹೋದರು. ಗ್ರಾಮಕ್ಕಿನ್ನು ಮರಳಿ ಬಾರವೆಂದು ನೇಮವ ಮಾಡಿಕೊಂಡರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಗ್ರಾಮಕ್ಕಾಗಿ ಬೇಗ ಹೋದರು.