ಅಥವಾ

ಒಟ್ಟು 9 ಕಡೆಗಳಲ್ಲಿ , 4 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳ್ಳೆ ಪದಾರ್ಥಬಂದಡೆ ನೀಡೆಂಬಿರಿ, ಕೀಳುಪದಾರ್ಥಬಂದಡೆ ಬೇಡೆಂಬಿರಿ. ಕಮ್ಮಾದರೆ ನೀಡೆಂಬಿರಿ, ಆ ಪದಾರ್ಥ ಹೆಚ್ಚಾದರೆ ಪ್ರಸಾದ[ವೆಂದು] ಕೈಕೊಂಬಿರಿ. ಕಡ್ಡಿ ಹರಳು ಮೊದಲಾದ ಕಠಿನಪದಾರ್ಥ ಬಂದಡೆ, ಜಿಹ್ವೆಯಲ್ಲಿ ತೊಂಬಲವನಾರಿಸಿಬಿಡುವಿರಿ. ಮಕ್ಷಿಕ ಮೊದಲಾದ ಕ್ರಿಮಿಗಳು ಬಿದ್ದರೆ ಆರೂ ಅರಿಯದ ಹಾಗೆ ತೆಗೆದು ಸಿಪ್ಪದೆ ವರಸದೆ ಕದ್ದು ಚಲ್ಲುವಿರಿ. ಇಂತಪ್ಪ ಮೂಳಹೊಲೆಯರು ಪ್ರಸಾದಿಗಳೆಂದಡೆ ಪರಶಿವಪ್ರಸಾದಿಗಳಾದ ಶಿವಶರಣರು ಊರ ಸೂಳೆಯರ ಹಾಟಹೊಯಿಸಿ ತಲೆಯಬೋಳಿಸಿ ಪಟ್ಟಿಯ ತೆಗೆದು ಅವರ ಎಡಗಾಲಕೆರ್ಪಿನಿಂದ ಘಟ್ಟಿಸಿ ಮೂಡಲದಿಕ್ಕಿಗೆ ಅಟ್ಟಿದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವೀರಮಾಹೇಶ್ವರರು ಸರ್ವಾಂಗದಲ್ಲಿ ವಿಭೂತಿ-ರುದ್ರಾಕ್ಷಿ ಧಾರಣವಾಗಿ, ಶಿವಲಿಂಗವ ಧರಿಸಿ, ಕಾವಿಲಾಂಛನವ ಪೊದ್ದರೆಂದು ಈ ಮತ್ರ್ಯಲೋಕದ ಜಡಮತಿ ಮರುಳಮಾನವರು ತಾವು ಧರಿಸುತ್ತಿರ್ಪರು. ಇಂತಪ್ಪವರ ನಡತೆ ಎಂತಾಯಿತ್ತೆಂದರೆ, ಗುರುವನರಿಯದೆ ವಿಭೂತಿಧರಿಸುವರೆಲ್ಲ ಬೂದಿಯೊಳಗಣ ಕತ್ತೆಗಳೆಂಬೆ. ತಮ್ಮ ನಿಜವ ತಾವರಿಯದೆ ರುದ್ರಾಕ್ಷಿ ಧರಿಸುವರೆಲ್ಲ ಕಳವು ಮಾಡಿ ಕೈಯ ಕಟ್ಟಿಸಿಕೊಂಡ ಕಳ್ಳರೆಂಬೆ. ಲಿಂಗದ ಸ್ವರೂಪವ ತಿಳಿಯದೆ ಕೊರಳಲ್ಲಿ ಲಿಂಗವ ಕಟ್ಟುವರೆಲ್ಲ ವಾಳೆ ಆವಿಗೆ ಯಳಗುದ್ದಿಯ ಕಟ್ಟುವಂತೆ ಕಟ್ಟುವರೆಂಬೆ. ಜಂಗಮದ ನಿಲವ ಅರಿಯದೆ ಕಾವಿಯ ಲಾಂಛನ ಹೊದ್ದವರೆಲ್ಲ ರಕ್ತಮುಳುಗಿದ ಹಸಿಯ ಚರ್ಮವ ಹೊದ್ದವರೆಂಬೆ. ಇಂತಿದರನುಭಾವವ ತಿಳಿಯದೆ ಈಶ್ವರನ ವೇಷವ ಧರಿಸಿ ಉದರಪೋಷಣಕ್ಕೆ ತಿರುಗುವರೆಲ್ಲ ಜಾತಿಹಾಸ್ಯಗಾರರೆಂಬೆ. ಇಂತಪ್ಪ ವೇಷಧಾರಿಗಳ ಶಿವಸ್ವರೂಪರೆಂದು ಭಾವಿಸುವವರ ಶಿವಸ್ವರೂಪರೆಂದು ಹೇಳುವವರ, ಇಂತಪ್ಪ ಉಭಯ ಮೂಢಾತ್ಮರ ಮುಖದ ಮೇಲೆ ಲೊಟ್ಟಲೊಟ್ಟನೆ ಉಗುಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ ಘಟ್ಟಿಸಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಯವೆಂಬ ಘಟಕ್ಕೆ ಚೈತನ್ಯವೆ ಸಯದಾನ, ಸಮತೆ ಎಂಬ ಜಲ ಕರಣಾದಿಗಳೆ ಶ್ರಪಣ. ಜ್ಞಾನವೆಂಬ ಅಗ್ನಿಯನಿಕ್ಕಿ ಮತಿಯೆಂಬ ಸಟ್ಟುಕದಲ್ಲಿ ಘಟ್ಟಿಸಿ, ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ ಪರಿಣಾಮದೋಗರವ ನೀಡಿದಡೆಕೂಡಲಸಂಗಮದೇವಂಗಾರೋಗಣೆಯಾಯಿತ್ತು.
--------------
ಬಸವಣ್ಣ
ಕಾಯವೆಂಬ ಘಟಕ್ಕೆ ಕರಣಾದಿಗಳೆ ಸುಯಿದಾನ ಅದಕ್ಕೆ ಚೈತನ್ಯವೇ ಜಲವಾಗಿ, ಸಮತೆಯೇ ಮುಚ್ಚಳಿಕೆ, ಧೃತಿಯೆಂಬ ಸಮಿದೆ, ಮತಿಯೆಂಬ ಅಗ್ನಿಯಲುರುಹಿ, ಜ್ಞಾನವೆಂಬ ದರ್ವಿಯಲ್ಲಿ ಘಟ್ಟಿಸಿ ಪಕ್ವಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ, ಪರಿಣಾಮ[ದೋ]ಗರವ ನೀಡುವೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ, ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ, ಅಂತಪ್ಪ ಮಾಘಮಾಸದ ಚತುರ್ದಶಿದಿವಸ ಒಂದೊತ್ತು ಉಪವಾಸವ ಮಾಡಿ, ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು ಸಾಯಂಕಾಲಕ್ಕೆ ಸ್ನಾನವ ಮಾಡಿ, ಜಂಗಮವ ಕರತಂದು ಅರ್ಚಿಸಿ, ಲಿಂಗವ ಪತ್ರಿ, ಪುಷ್ಪ, ಅಭೀಷೇಕ, ಕಡ್ಡಿ, ಬತ್ತಿ, ಏಕಾರತಿ ಪಂಚಾರತಿಗಳಿಂದ ಪೂಜಿಸಿ, ಪಾದೋದಕವ ಸೇವಿಸಿ, ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ ಉತ್ತಮವಾದ ಫಲಹಾರ ಜೀನಸುಗಳು ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು ಮೊದಲಾದ ಫಲಹಾರ ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ, ಬುಂದೆ, ಲಡ್ಡು ಮೊದಲಾದ ಫಲಹಾರ. ಇಂತಪ್ಪ ಫಲಹಾರ ಜೀನಸು ಎಡೆಮಾಡಿ ಪ್ರಸಾದವೆಂದು ಕೈಕೊಂಡು, ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ ಅಂಗಕ್ಕೆ ಗಡಣಿಸಿಕೊಂಡು, ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ ಪರಿಯಂತರವಾಗಿ, ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ, ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು ಸ್ಥಾವರಲಿಂಗದ ಗುಡಿಗೆ ಹೋಗಿ ಆ ಲಿಂಗದ ಪೂಜೆಯಿಂದ ಬೆಳಗ ಕಳೆದು ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು ಹಳ್ಳ ಹೊಳೆಗೆ ಹೋಗಿ, ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ, ಸ್ನಾನವ ಮಾಡಿ ಬಂದು ಜಂಗಮವ ಕರಿಸಿ, ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ, ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ. ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಡ ಕೊಂದು ಗಡಿಗೆಯಲಿಕ್ಕಿ, ಕುರಿಯ ಸುಲಿದು ಮಡಿಕೆಯಲಿಕ್ಕಿ, ಹೋತ ಕೊಯ್ದು ಕುಳ್ಳಿಯಲಿಕ್ಕಿ, ಬೆಂಕಿಯಿಲ್ಲದೆ ಪಾಕವ ಮಾಡಿ ಬೀರೇಶ್ವರಲಿಂಗಕ್ಕೆ ಕೊಟ್ಟು, ಕೀಲಿಲ್ಲದ ಕತ್ತರಿಯಿಂದ ಉಣ್ಣಿಯ ಕತ್ತರಿಸಿ, ಬಿರಿಕಿಲ್ಲದೆ ನೂಲು ಮಾಡಿ ಘಟ್ಟಿಸಿ ನೇದು, ಘಳಿಗೆಯ ಮಾಡಿ ವೀರಬೀರಗೆ ಹೊಚ್ಚಿ ಡೊಳ್ಳು ಹೊಡೆದು, ಸತ್ತಿಗೆಯ ನೆರಳಲ್ಲಿ ಪಿರಿಕೆಯ ಹೊಡೆದು, ಕಾಯಕವ ಮಾಡಿ ಹೋಗಬೇಕಣ್ಣ ವೀರಬೀರೇಶ್ವರಲಿಂಗದಲ್ಲಿಗೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಈ ಲೋಕದೊಳಗೆ ನಾವು ಗುರುಗಳು, ನಾವು ಚರಂತಿಹಿರಿಯರೆಂದು ಬಂದು ದೀಕ್ಷೋಪದೇಶ ಅಯ್ಯತನವ ಮಾಡುವೆವೆಂದು ಹೇಳಿಕೊಂಬರಯ್ಯ. ಅದೆಂತೆಂದೊಡೆ: ಭಕ್ತರ ದೀಕ್ಷೋಪದೇಶವ ಮಾಡುವ ಕಾಲಕ್ಕೆ ಅವರ ಮನೆಯೊಳಗಣ ಗಡಿಗೆ ಮಡಕೆಯ ಹೊರೆಯಕ್ಕೆ ಹಾಕಿಸಿ, ಮೈಲಿಗೆ ಮುಟ್ಟಚಟ್ಟನೆಲ್ಲವ ತೊಳಿಸಿ, ಗೃಹವನೆಲ್ಲ ಸಾರಣೆಯ ಮಾಡಿಸಿ, ಹೊಸ ಮಡಕೆಯ ತರಿಸಿ, ಆ ಭಕ್ತರ ಮಂಡೆಯ ಬೋಳಿಸಿ, ಮೈಯ ತೊಳಸಿ, ಹೊಸ ವಸ್ತ್ರವ ಉಡಿಸಿ, ತೊಡಿಸಿ, ಹೊದಿಸಿ, ಅವರ ಪೂರ್ವದ ಲಿಂಗವನೆಲ್ಲ ವಿಚಾರಿಸಿ ನೋಡಿ ಭಿನ್ನವಾದ ಲಿಂಗವನೆಲ್ಲ ತೆಗೆದು ಪ್ರತ್ಯೇಕಲಿಂಗವ ತಂದು, ವೇಧಾಮಂತ್ರಕ್ರೀಯೆಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ ಅವರಂಗದ ಮೇಲೆ ಲಿಂಗವ ಧರಿಸಿ ಮಾಂಸಪಿಂಡವಳಿದು ಮಂತ್ರಪಿಂಡವಾಯಿತು, ಭವಿಜನ್ಮವಳಿದು ಭಕ್ತನಾದೆ, ಪೂರ್ವಜನ್ಮವಳಿದು ಪುನರ್ಜಾತನಾದೆ ಎಂದು ಅವರಂಗದ ಮೇಲೆ ಲಿಂಗಧಾರಣ ಮಾಡಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಸದ್ಭಕ್ತರಾದಿರೆಂದು ಅವರನು ಬೋಳೈಸಿಕೊಂಡು ತಮ್ಮ ಒಡಲ ಹೊರೆವರಲ್ಲದೆ ಇವರು ಸದ್ಭಕ್ತರ ಮಾಡಲರಿಯರು. ಸದ್ಭಕ್ತರ ಮಾಡುವ ಪರಿಯ ಪೇಳ್ವೆ. ಅದೆಂತೆಂದೊಡೆ: ಪಂಚಭೂತ ಮಿಶ್ರವಾದ ದೇಹವೆಂಬ ಘಟವನು ತೆಗೆದು, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಪಂಚಲಕ್ಷಣವುಳ್ಳ ಚಿದ್ಘಟವ ತಂದು, ಸಂಕಲ್ಪ ವಿಕಲ್ಪ, ಸಂಸಾರಸೂತಕವೆಂಬ ಮುಟ್ಟು ಚಟ್ಟನೆಲ್ಲ ಚಿಜ್ಜಲದಿಂದ ತೊಳೆದು, ಮಾಯಾ ಮೋಹವೆಂಬ ಹೊದಿಕೆಯ ತೆಗೆಸಿ, ನಿರ್ಮಾಯ ನಿರ್ಮೋಹವೆಂಬ ವಸ್ತ್ರವನುಡಿಸಿ ತೊಡಿಸಿ, ಆಶೆ ಎಂಬ ಕೇಶವ ಬೋಳಿಸಿ, ಅವನ ಹಲ್ಲು ಕಳೆದು, ನಾಲಿಗೆಯ ಕೊಯ್ದು, ಕಣ್ಣುಗುಡ್ಡಿಯ ಮೀಟಿ, ಎರಡು ದಾಡಿಯ ಮುರಿಗುಟ್ಟಿ, ತಲೆ ಹೊಡೆದು, ಕೈಕಾಲು ಕಡಿದು, ತಿದಿಯ ಹರಿದು, ಸಂದ ಮುರಿದು, ಹಂದಿ ನಾಯಿಯ ಕೊಂದು ಕಂಡವ ತಿನಿಸಿ, ಕಪ್ಪೆಯ ಉಚ್ಚಿಯ ಕುಡಿಸಿ, ಇಂತೀ ಪರಿಯಲ್ಲಿ ದೀಕ್ಷೋಪದೇಶವ ಮಾಡಿ ಲಿಂಗವ ಕೊಡಬಲ್ಲರೆ ಗುರುವೆಂಬೆ. ಇಲ್ಲವಾದರೆ ಕಳ್ಳಗುರುಕಿಮಕ್ಕಳೆಂಬೆ. ಇಂತಪ್ಪ ವಿಚಾರವ ತಿಳಿದುಕೊಳ್ಳಬಲ್ಲರೆ ಭಕ್ತರೆಂಬೆ. ಇಲ್ಲದಿದ್ದರೆ ಬದ್ಧಭವಿಗಳೆಂಬೆ. ಇಂತೀ ತರುವಾಯದಲ್ಲಿ ಅಯ್ಯತನವ ಮಾಡಬಲ್ಲರೆ ಚರಂತಿಹಿರಿಯರು ಎಂಬೆ. ಇಲ್ಲದಿದ್ದರೆ ಮೂಕೊರತಿ ಮೂಳಿಯ ಮಕ್ಕಳೆಂಬೆ. ಇಂತೀ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದುಕೊಳ್ಳಬೇಕಲ್ಲದೆ, ಈ ಲೋಕದ ಜಡಜೀವರು ಕಡುಪಾತಕರಲ್ಲಿ ಕೊಳ್ಳಲುಬಾರದು. ಅದೇನು ಕಾರಣವೆಂದೊಡೆ: ತಾವಾರೆಂಬ ತಮ್ಮ ನಿಲವ ತಾವರಿಯರು, ಇನ್ನೊಬ್ಬರಿಗೆ ಏನು ಹೇಳುವರಯ್ಯ? ಇಂತಪ್ಪ ಮೂಢಾತ್ಮರಲ್ಲಿ-ಇದಕ್ಕೆ ದೃಷ್ಟಾಂತ: ಹಿತ್ತಲಲ್ಲಿ ಪಡುವಲಕಾಯಿಗೆ ಕಲ್ಲು ಕಟ್ಟಿದಂತೆ, ಬಾವಿಯೊಳಗೆ ಕೊಡಕ್ಕೆ ಹಗ್ಗವ ಕಟ್ಟಿ ಬಿಟ್ಟಂತೆ, ನಾವು ನಮ್ಮ ಪಾದದಲ್ಲಿ ಮರೆಯ ಮಾಡಬೇಕೆಂದು, ತಮ್ಮ ಕಾಲಿಗೆ ಒಂದೊಂದು ಪೋರಗಳ ಕಟ್ಟಿಕೊಂಡು ಅಡ್ಡಡ್ಡ ಬಿದ್ದು ಮರಿಯ ಪಡಕೊಂಬವರ, ಆ ಮರಿಗಳಿಗೆ ಅಯ್ಯತನ ಮಾಡಿದೆವು ಎಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಮೂಗ ಕೊಯಿದು ಕನ್ನಡಿಯ ತೋರಿ ಮೂಗಿನೊಳಗೆ ಮೆಣಸಿನಹಿಟ್ಟು ತುಂಬಿ ಸಂಗನ ಶರಣರ ಪಾದರಕ್ಷೆಯಲ್ಲಿ ಘಟ್ಟಿಸಿ, ಮೂಡಲ ದಿಕ್ಕಿಗೆ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗಗಂಭೀರ ಸುನಾದವೆ ತನುಗುಣ ಚರಿತ್ರ ಜಂಗಮಗಂಭೀರ ಅನಾಹತವೆ ಮನಗುಣ ಸ್ವಭಾವ. ಈ ಎರಡರ ಸಂಬಂಧವೆ ಒಡಲು. ಪರಮಾನಂದ ಜಲದಲ್ಲಿ ಅಲುಬಿ, ಮಹಾಪ್ರಕಾಶದಲ್ಲಿ ಆರಿಸಿ ಅನಾಹತ ಮಥನದಲ್ಲಿ ಘಟ್ಟಿಸಿ ಆ ವಸ್ತ್ರವ ಎನಗೆ ಕೊಟ್ಟಡೆ ಉಡದ ಮುನ್ನವೆ ಉರಿ ಹತ್ತಿತ್ತು ನೋಡಾ ! ಆ ಉರಿಯು ಕಣ್ಣಿಗೆ ಕಾಣಬಾರದು ಮನಕ್ಕೆ ನೆನೆಯಬಾರದು. ಉರಿ ಉಂಟು ಉಷ್ಣವಿಲ್ಲದ ಆ ಸ್ವಯಂಜ್ಯೋತಿಯ ನಿಜನಿವಾಸದಲ್ಲಿ ನಿಶ್ಚಿಂತನಾಗಿದ್ದು, ಮಡಿವಾಳನ ಕೃಪೆಯಿಂದ ನಾನು ಬದುಕಿದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮನೆಯೆನ್ನದು, ಧನವೆನ್ನದು, ತನುವೆನ್ನದು, ಮಾತಾಪಿತರು, ಸತಿಸುತರು ಎನ್ನವರು, ಸ್ನೇಹಿತರು ಬಾಂಧವರು ಎನ್ನವರು ಎಂದರೆ ಭಕ್ತಿ ಭಿನ್ನವಾಯಿತ್ತು. ಅವನಿಗೆ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ, ಜಂಗಮವಿಲ್ಲವಾಗಿ ಪಾದೋದಕ ಪ್ರಸಾದವಿಲ್ಲ, ಪಾದೋದಕ ಪ್ರಸಾದವಿಲ್ಲವಾಗಿ ವಿಭೂತಿ ರುದ್ರಾಕ್ಷಿ ಮಂತ್ರ ಮೊದಲಾಗಿ ಅಷ್ಟಾವರಣಂಗಳಿಲ್ಲ. ಇಂತಪ್ಪ ಪಂಚಮಹಾಪಾತಕರಿಗೆ ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ. ಇಂಥ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿ, ಸಕಲ ಪ್ರಪಂಚವನೆಲ್ಲವನು ನಿವೃತ್ತಿಯಂ ಮಾಡಿ, ಹಿಂದೆ ಹೇಳಿದ ಗುರುಮಾರ್ಗ ಆಚಾರವನು ವಿಚಾರಿಸಿ ತಿಳಿದಲ್ಲದೆ ಶಿವಪಥವೆಂದಿಗೂ ಸಾಧ್ಯವಾಗದು. ಇದನರಿಯದೆ ಕಾಮದಲ್ಲಿ ಕರಗಿ, ಕ್ರೋಧದಲ್ಲಿ ಕೊರದು, ಲೋಭ ಮೋಹದಲ್ಲಿ ಮಗ್ನರಾಗಿ, ಮದಮತ್ಸರದಲ್ಲಿ ಮುಂದುಗಾಣದೆ, ಅಷ್ಟಮದದಲ್ಲಿ ಕಟ್ಟುವಡೆದು, ದಶವಾಯುಗಳಲ್ಲಿ ಹರಿದಾಡಿ, ಹೀಗೆ ಭವದತ್ತ ಮುಖವಾಗಿ ಹೊತ್ತುಗಳೆದು ಸತ್ತು ಹೋಗುವ ಹೇಸಿ ಮೂಳರ ಹಿಡಿತಂದು, ಅವರ ಮೂಗು ಹಲ್ಲು ಮೋರೆ ಕೊಯಿದು ಕಟವಾಯಿ ಸೀಳಿ ಕನ್ನಡಿಯ ತೋರಿ, ಅವನ ಬಾಯಲ್ಲಿ ಸಣ್ಣ ಸುಣ್ಣ ಮೆಣಸಿನ ಹಿಟ್ಟು ತುಂಬಿ ಮೇಲು ಮುಂದಾಗಿ ನಮ್ಮ ಗಣಂಗಳ ಪಾದರಕ್ಷೆಯಲ್ಲಿ ಘಟ್ಟಿಸಿ ಅಟ್ಟೆಂದಾತ ನಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->