ಅಥವಾ

ಒಟ್ಟು 19 ಕಡೆಗಳಲ್ಲಿ , 10 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ ಪಡೆದು, ಗುರುಕರಜಾತರಾಗಿ ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ ? ಜಾತಿವಿಡಿದು ಕಳೆಯಿತ್ತೆ ಜಾತಿತಮವು ? ಅಜಾತಂಗೆ ಆವುದು ಕುಲಳ ಆವ ಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂದಡೆ; ದೀಯತೇ ಜಾÕನಸಂಬಂಧಃ ಕ್ಷೀಯತೇ ಚ ಮಲತ್ರಯಂ ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ. ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ? ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಏನೂ ಏನೂ ಎನಲಿಲ್ಲದಂದು ಮಹಾಘನಕ್ಕೆ ಘನವಾದ ಮಹಾಘನ ನಿರಂಜನಾತೀತಪ್ರಣವದ ನೆನಹು ಮಾತ್ರದಲ್ಲಿ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಆ ನಿರಂಜನಪ್ರಣವದ ನಿರ್ದೇಶ ಸ್ಥಲದ ವಚನವೆಂತೆಂದಡೆ : ಅವಾಚ್ಯಪ್ರಣವ ಕಲಾಪ್ರಣವ ಉತ್ಪತ್ಯವಾಗದತ್ತತ್ತ , ಪ್ರಣವನಾದ ಪ್ರಣವಬಿಂದು ಪ್ರಣವಕಲೆಗಳುತ್ಪತ್ಯವಾಗದತ್ತತ್ತ , ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಲ್ಲ ಇಲ್ಲೆಂಬೊ ನಿರ್ಬೈಲೊಳು ತಾನೇನು ಇಲ್ಲದವಾಚ್ಯ ಸ್ವಯಂಭು ಬೈಲ್ಹೆಂಗಾದುದೊ ತಾನೇ ತಾನೆಂದರೆ | ಪಲ್ಲ | ನಿರುಪಮ ನಿಃಕಳ ಪರಬ್ರಹ್ಮವಾದುದು ತಾನೆ ತಾನೆ ಆ- ಪರಬ್ರಹ್ಮದೊಳಗೆ ಚಿತ್ಕಳೆ ಅರವು ಆದುದು ತಾನೆ ತಾನೆ ಅರವಿನೊಳು ಅರವು ಅರಿತುದೆ ಮನವಾದುದು ತಾನೆ ಆ ಅರಿತ ಮನವೆ ನೆನವಿಗೆ ಘನವಾದುದು ತಾನೆ ತಾನೆ ಘನವಾದ ಘನವೇ ತಾ ಘನಲಿಂಗವಾದುದು ತಾನೆ ತಾನೆ ಆ ಘನಲಿಂಗದೊಳಗೆ ತಾ ನವಲಿಂಗವಾದುದು ತಾನೆ ತಾನೆ ಆ ಘನಲಿಂಗವೇ ಅವನ ಅಂಗವಾದುದು ತಾನೆ ತಾನೆ ಘನ ನವಲಿಂಗವೇ ಬಹುಬಗೆಯಾದುದು ತಾನೆ ನವಶಕ್ತಿ ನವಭಕ್ತಿ ನವನಾದವಾದುದು ತಾನೆ ತಾನೆ ನವಚಕ್ರ ನವವರ್ಣ ನವಮಂತ್ರವಾದುದು ತಾನೆ ತಾನೆ ನವಹಸ್ತ ನವಮುಖ ನವದೈವವಾದುದು ತಾನೆ ತಾನೆ ಈ ನವರೂಪು ನವರುಚಿ ನವತೃಪ್ತಿಯಾದುದು ತಾನೆ ತಾನೆ ಮೂರಾರು ಮುಂದೆ ಮೂವತ್ತಾರಾದುದು ತಾನೆ ತಾನೆ ಈ ಮೂರಾರೇ ಇನ್ನೂರಾಹದಿನಾರಾದುದು ತಾನೆ ತಾನೆ ಮೂರಾರೇ ಹನ್ನೆರಡುನೂರಾ ತೊಂಬತ್ತಾರಾದುದು ತಾನೆ ತಾನೆ ಈ ಮೂರಾರೇ ಮೀರಿ ಈ ಜಗಮಯವಾದುದು ತಾನೆ ತಾನೆ ಒಂದೇ ಮೂರಾದುದು ಒಂದೇ ಆರಾದುದು ತಾನೆ ತಾನೆ ಆ ಒಂದೇ ಆರು ಮೂರು ಒಂದೇ ಬರಿ ಆದುದು ತಾನೆ ತಾನೆ ಒಂದಾದ ಅಂದದಾನಂದ ನಾಮವಾದುದು ತಾನೆ ತಾನೆ ಈ ಸಂದ ಮಹಾಂತನ ಕಂದನಾದುದು ತಾನೆ ತಾನೆ
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಲಿಂಗಪ್ರೇಮಿಗಳನಂತರುಂಟು ಜಗದೊಳಗೆ, ಜಂಗಮಪ್ರೇಮಿಗಳಾರನೂ ಕಾಣೆನಯ್ಯ. ಲಿಂಗಪೂಜಕರನಂತರುಂಟು ಜಗದೊಳಗೆ, ಜಂಗಮಪೂಜಕರಾರನೂ ಕಾಣೆನಯ್ಯ. ಲಿಂಗಪ್ರಾಣಿಗಳನಂತರುಂಟು ಜಗದೊಳಗೆ, ಜಂಗಮಪ್ರಾಣಿಗಳಾರನೂ ಕಾಣೆನಯ್ಯ. ಲಿಂಗದ ಬಾಯಿ ಜಂಗಮವೆಂದರಿದು ಮಾಡಿ ಮನವಳಿದು ಘನವಾದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನು ಕರಣೇಂದ್ರಿಯ ವಿಷಯಾದಿ ವಿಕಾರಂಗಳ ಹಿಂಗಿ, ತನ್ನ ನಿಜಸ್ವರೂಪವನರಿದು, ಅಂಗಲಿಂಗಸಂಬಂಧಿಯಾಗಿ, ಲೋಕದ ಜನರ ಸಂಗವ ತೊಲಗಿ, ಕರ್ಮದ ಹೊರೆಯಂ ಬಿಸುಟು, ಸೀಮೆಯಂ ಬಿಟ್ಟು, ಉಪಾಧಿಯಿಲ್ಲದೆ ಜೀವ ಭಾವವ ಬಿಟ್ಟು, ಮಲತ್ರಯವ ಹೊದ್ದದೆ, ನಿತ್ಯವಾದ ವಸ್ತುವೆ ತಾನಾಗಿ ನಿಂದ ಮಹಾಜ್ಞಾನ ಜಂಗಮವ ನೋಡಿರಯ್ಯ. ಅದೆಂತೆಂದಡೆ: ನಿಸ್ಸಂಗತ್ವಂ ನಿರಾಭಾರಂ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ತಸ್ಯ ಜಂಗಮ ಲಕ್ಷಣಂ || ಇಂತೆಂದುದಾಗಿ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಘನಕ್ಕೆ ಘನವಾದ ಪ್ರಭುದೇವರ ಘನವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಐದರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದಿದಾವೆ ಈರೈದು ಹೆಣನು ಬೆಂಬಳುವರು ಬಳಗ ಘನವಾದ ಕಾರಣ ಆ ಹೆಣನು ಬೇಯವು, ಕಾಡೂ ನಂದದು ಮಾಡು ಉರಿಯಿತ್ತು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಮೃತ್ತಿಕೆಯೊಂದರಲ್ಲಿ ಮಡಕೆಗಳು ನೂರಾರು. ಮನವೊಂದರಲ್ಲಿ ಕ್ರಿಯಾಗಳು ನೂರಾರು. ಜನಕನೊಬ್ಬನಲ್ಲಿ ಸಂತ್ಕಗಳು ನೂರಾರು. ಘನಕ್ಕೆ ಘನವಾದ ಚಿನ್ಮಯ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಜಗತ್ತುಗಳು ನೂರಾರು.
--------------
ಸಿದ್ಧರಾಮೇಶ್ವರ
ಘನಕ್ಕೆ ಘನವಾದ ಮಹಾಘನವಸ್ತುವಿನಲ್ಲಿ ಮನವಡಗಿದ ಮಹಾಮಹಿಮಂಗೆ ಮರಳಿ ನೆನೆಯಬೇಕೆಂಬುದಿಲ್ಲ. ನೆನೆದು ಧ್ಯಾನಿಸಬೇಕೆಂಬುದಿಲ್ಲ. ಧ್ಯಾನಿಸಿ ಕಾಣಬೇಕೆಂಬುದಿಲ್ಲ. ಕಂಡು ಕೂಡಬೇಕೆಂಬುದಿಲ್ಲ. ಅಖಂಡೇಶ್ವರಾ, ನಿಮ್ಮನೊಡಗೂಡಿದ ಶರಣಂಗೆ ಏನೆಂದೆನಲಿಲ್ಲ.
--------------
ಷಣ್ಮುಖಸ್ವಾಮಿ
ಊರ ಮಧ್ಯದ ಕಣ್ಣ ಕಾಡಿನೊಳಗೆ, ಬಿದ್ದೈದಾವೆ ಐದು ಹೆಣನು. ಬಂದು ಬಂದು ಅಳುವರು. ಬಳಗ ಘನವಾದ ಕಾರಣ_ಹೆಣನೂ ಬೇಯದು ಕಾಡೂ ನಂದದು. ಮಾಡ ಉರಿಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎನ್ನ ಪೃಥ್ವಿತತ್ತ್ವದಲ್ಲಿ ಆಧಾರಚಕ್ರವಿರ್ಪುದು. ಆ ಚಕ್ರವೇ ಭಕ್ತಸ್ಥಲ. ಆ ಸ್ಥಲವ ಬಸವಣ್ಣನಿಂಬುಗೊಂಡನಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಅಪ್ಪುತತ್ತ್ವದಲ್ಲಿ ಸ್ವಾಧಿಷಾ*ನಚಕ್ರವಿರ್ಪುದು. ಆ ಚಕ್ರವೇ ಮಹೇಶ್ವರಸ್ಥಲ. ಆ ಸ್ಥಲವ ಮಡಿವಾಳಮಾಚಯ್ಯಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಅಗ್ನಿತತ್ತ್ವದಲ್ಲಿ ಮಣಿಪೂರಕಚಕ್ರವಿರ್ಪುದು. ಆ ಚಕ್ರವೆ ಪ್ರಸಾದಿಸ್ಥಲ. ಆ ಸ್ಥಲವ ಚೆನ್ನಬಸವಣ್ಣನಿಂಬುಗೊಂಡನಾಗಿ ಎನಗಾಸ್ಥಲ ಬಯಲಾಯಿತ್ತು . ಎನ್ನ ವಾಯುತತ್ತ್ವದಲ್ಲಿ ಅನಾಹತಚಕ್ರವಿರ್ಪುದು. ಆ ಚಕ್ರವೆ ಪ್ರಾಣಲಿಂಗಿಸ್ಥಲ. ಆ ಸ್ಥಲವ ಸಿದ್ಧರಾಮಯ್ಯದೇವರಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಗಗನತತ್ತ್ವದಲ್ಲಿ ವಿಶುದ್ಧಿಚಕ್ರವಿರ್ಪುದು. ಆ ಚಕ್ರವೆ ಶರಣಸ್ಥಲ. ಆ ಸ್ಥಲವ ಉರಿಲಿಂಗಪೆದ್ದಿದೇವರಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಜೀವತತ್ತ್ವದಲ್ಲಿ ಅಜ್ಞಾನಚಕ್ರವಿರ್ಪುದು. ಆ ಚಕ್ರವೆ ಐಕ್ಯಸ್ಥಲ. ಆ ಸ್ಥಲವ ಅಜಗಣ್ಣತಂದೆಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಬ್ರಹ್ಮಚಕ್ರವೆ ಪರಮ ಆರೂಢಸ್ಥಲ. ಆ ಸ್ಥಲವ ನಿಜಗುಣಯೋಗಿಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಶಿಖಾಚಕ್ರವೆ ನಿತ್ಯನಿರುಪಮಸ್ಥಲ. ಆ ಸ್ಥಲವ ಅಕ್ಕಮಹದೇವಿಯರಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಪಶ್ಚಿಮಚಕ್ರವೆ ಪರಮನಿರಂಜನಸ್ಥಲ. ಆ ಸ್ಥಲವ ಪ್ರಭುಸ್ವಾಮಿಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಒಳಹೊರಗೆ ತೋರುವ ಎಲ್ಲ ಸ್ಥಳಕುಳಂಗಳನು ಉಳಿದ ಸಕಲಗಣಂಗಳು ಇಂಬುಗೊಂಡರಾಗಿ ಎನಗೆ ಎಲ್ಲ ಸ್ಥಲಂಗಳು ಬಯಲಾದುವು. ಇದು ಕಾರಣ, ಆದಿ ಅನಾದಿಯಿಂದತ್ತತ್ತಲಾದ ಘನಕೆ ಘನವಾದ ಮಹಕೆ ಮಹವಾದ ಮಹಾಸ್ಥಲವನಿಂಬುಗೊಂಡಿರಯ್ಯಾ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಯವಳಿದಡೇನು ? ಕಾಯ ಉಳಿದಡೇನು ? ಕಾಯ ಬಯಲಾದಡೇನು ? ಮನ ಮನ ಲಯವಾಗಿ ಘನಕ್ಕೆ ಘನವಾದ ಶರಣರ ಕಂಡಡೆ, ಕೂಡಲಚೆನ್ನಸಂಗಮನೆಂದು ಶಬುದ ಮುಗದವಾಗಿರಬೇಕಲ್ಲದೆ, ಚೋದ್ಯಕ್ಕೆ ಕಾರಣವೇನು ಹೇಳಾ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಪ್ರಸಾದ ಪ್ರಸಾದವೆಂದು ನುಡಿಯಬಹುದಲ್ಲದೆ, ಪ್ರಸಾದದ ಘನವನಾರು ಬಲ್ಲರಯ್ಯಾ ? ಪ್ರಸಾದವೆಂಬುದು ಪರಕ್ಕೆಪರವಾಗಿರ್ಪುದು. ಪ್ರಸಾದವೆಂಬುದು ಪÀರತರ ಮುಕ್ತಿದೋರುವುದು. ಪ್ರಸಾದವೆಂಬುದು ಪರಮಪದವಿಯನೀವುದು. ಪ್ರಸಾದವೆಂಬುದು ಪರಂಜ್ಯೋತಿಸ್ವರೂಪವನುಳ್ಳುದು. ಪ್ರಸಾದವೆಂಬುದು ಪರಬ್ರಹ್ಮನಾಮವುಳ್ಳದು. ಪ್ರಸಾದವೆಂಬುದು ಮಹಾಜ್ಞಾನಪ್ರಕಾಶವನುಳ್ಳುದು. ಪ್ರಸಾದವೆಂಬುದು ಸ್ವಾನುಭಾವಸಮ್ಯಜ್ಞಾನ, ಜ್ಞಾನ, ಸುಜ್ಞಾನ, ಮಹಾಜ್ಞಾನ, ಶಿವಜ್ಞಾನವೆಂಬ ಷಡ್ವಿದಜ್ಞಾನಸ್ವರೂಪವಾದ ಕರಕಮಲದಲ್ಲಿ ಪ್ರಕಾಶಮಯವಾಗಿ ತೋರುವ ಘನಮಹಾಲಿಂಗವು. ಅಂತಪ್ಪ ಘನಮಹಾ ಇಷ್ಟಬ್ರಹ್ಮದಲ್ಲಿ ಎರಡಳಿದು ಕೂಡಿ ಬೆರೆದು ಬೇರಿಲ್ಲದೆ ಇರಬಲ್ಲಡೆ ಆತನೆ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ ಇಂತೀ ಚತುರ್ವಿಧಪ್ರಸಾದದೇಕಸ್ವರೂಪಾದ ಮಹಕ್ಕೆ ಮಹವಾದ, ಘನಕ್ಕೆ ಘನವಾದ ಪರಶಿವನ ಮಹಾಪ್ರಸಾದಿಯೆಂದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಘನಕ್ಕೆ ಘನವಾದ ಮಹಾಘನದೋಂಕಾರವಿಲ್ಲದಂದು, ಪರಮ ಅಕಾರ ಪರಮ ಉಕಾರ ಪರಮ ಮಕಾರವಿಲ್ಲದಂದು, ಅನಾದಿ ಅಕಾರ ಅನಾದಿ ಉಕಾರ ಅನಾದಿ ಮಕಾರವಿಲ್ಲದಂದು, ಆದಿ ಅಕಾರ ಆದಿ ಉಕಾರ ಆದಿ ಮಕಾರ, ಅಕಾರ ಉಕಾರ ಮಕಾರವಿಲ್ಲದಂದು, ಪ್ರಕೃತಿ ಪ್ರಣವ ಓಂಕಾರ ಉತ್ಪತ್ಯವಾಗದಂದು, ನಿರಂಜನ ಪ್ರಣವವಾಗಿರ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಗದ ಮೇಲೆ ಸಾಕಾರವಿಡಿದು ಮಂತ್ರಾಹ್ವಾನಂಗಳಿಂದಷ್ಟವಿಧಾರ್ಚನೆ ಷೋಡಶೋಪಚರಿಯಂಗಳಿಂ ವ್ಯಾಪಿಸಿಕೊಂಬುದೆ ಇಷ್ಟಲಿಂಗ. ಆ ಇಷ್ಟಲಿಂಗಕ್ಕೆ ಆಶ್ರಯವಾಗಿ ಚತುರ್ದಶೇಂದ್ರಿಯಂಗಳಲ್ಲಿ ತನ್ಮುಖವಾಗಿ ಸರ್ವೇಂದ್ರಿಯಂಗಳಿಗೆ ಚೈತನ್ಯವಾಗಿ ಪ್ರಾಣನಲ್ಲಿ ಪರಿಪೂರ್ಣನಾಗಿಪ್ಪುದೇ ಪ್ರಾಣಲಿಂಗ. ಆ ಪ್ರಾಣಲಿಂಗಕ್ಕೆ ಆದಿಯಾಗಿ ಭಾವಭ್ರಮೆಗಳು ನಷ್ಟವಾಗಿ ಅನುಭಾವದಲ್ಲಿ ಲೀನವಾಗಿ ಭಾವ ಸದ್ಭಾವ ನಿರ್ಭಾವವೆಂಬ ಭಾವತ್ರಯಂಗಳಲ್ಲಿ ಭರಿತವಾಗಿ ಭಾವ ಬ್ರಹ್ಮವೆಂಬ ಭೇದವಿಲ್ಲದೆ ಸನ್ನಿಹಿತಭಾವದಿಂದಿಪ್ಪುದೇ ಭಾವಲಿಂಗ. ಇಂತೀ ಮೂರು ಲಿಂಗದ ಮೂಲ, ಆರು ಲಿಂಗದ ಅಂತ್ಯವನೊಳಕೊಂಡು ಮಾರ್ಗಕ್ರೀ ನಿಃಕ್ರೀಯಾಗಿ, ಧ್ಯಾನ ನಷ್ಟವಾಗಿ, ಮಂತ್ರ ಗೋಪ್ಯವಾಗಿ, ಜ್ಞಾನ ಶೂನ್ಯವಾಗಿ, ಭಾವ ದಿಗಂಬರವಾಗಿ, ಘನಕ್ಕೆ ಘನವಾದ ಪರಬ್ರಹ್ಮವು ತಾನೆ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಲೋಕದ ನಚ್ಚಮಚ್ಚನೆ ನೀಗಿ ನಿಚ್ಚಟನಾಗಿ ಜ್ಞಾನ ಕ್ರೀಗಳಿಂದಾಚರಿಸಿ ಅಂಗಲಿಂಗದ ಸಂಬಂಧಿಗಳಾದ ಶಿವಲಿಂಗಮೋಹಿಗಳು ನೀವು ಕೇಳಿರಯ್ಯ. ಶರಣರು ಮುಕ್ತಿಪುರಕ್ಕೆ ಹೋಗುವ ಬಟ್ಟೆಯ ಬೆಡಗು ಬಿನ್ನಾಣದ ಪರಿಯ. ಆ ಮುಕ್ತಿಪುರಕ್ಕೆ ಹೋಗುವ ಹಾದಿಯಲ್ಲಿ ಒಂದು ಪಂಚವರ್ಣದ ಕಣ್ಣು ಮನಕ್ಕೆ ಮುಟ್ಟದ ಮಹಾಪಟ್ಟಣವೊಂದೇ. ಆ ಪಟ್ಟಣವ ಕಟ್ಟಿದುದು ಮೊದಲಾಗಿ ಊರು ಹಾಳಾಗಿಪ್ಪುದು. ಆ ಪಟ್ಟಣದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಅಹಂಕಾರ ಮಮಕಾರಂಗಳೆಂಬ ಎರಡು ಪಟ್ಟಣಂಗಳು ತುಂಬಿ ತುಳುಕುತ್ತಿವೆ. ಆ ಎರಡು ಪಟ್ಟಣಕ್ಕೆ ಹೋದ ಹಾದಿ ಹೆಬ್ಬಟ್ಟೆಗಳಾಗಿಪ್ಪವು. ಆ ಎರಡು ಪಟ್ಟಣದ ವಿದಿಕ್ಕಿನಲ್ಲಿ ಒಂದು ಭಕ್ತಿಪುರವಿದೆ. ಆ ಭಕ್ತಿಪುರಕ್ಕೆ ಹಾದಿಯಿಲ್ಲ. ಆ ಭಕ್ತಿಪುರಕ್ಕೆ ಹೋದಲ್ಲದೆ ಮುಂದಣ ಮುಕ್ತಿಪುರದ ಬಟ್ಟೆಯ ಕಾಣಬಾರದು. ಆ ಮುಂದಣ ಪಯಣಗತಿಯ ಸಂಚುವರಿಯುವ ಸಂಬಂಧಮಂ ಶರಣ ಮನದಲ್ಲಿ ತಿಳಿದು ಆ ಹೆಬ್ಬಟ್ಟೆಗಳಲ್ಲಿ ಹೋದರೆ ಎಂಬತ್ತುನಾಲ್ಕುಲಕ್ಷ ಪ್ರಕಾರದ ಪರಮಂಡಲದಲ್ಲಿ ಸುಳಿವುದು ತಪ್ಪದೆಂದು ಅದಕ್ಕೆ ಹೇಹಮಂ ಮಾಡಿ ತಮ್ಮವರು ಹೋದ ನಸುದೋಯಲ ಬೆಂಬಳಿವಿಡಿದು ಹೋಗಿ ಭಕ್ತಿಪುರಮಂ ಕಂಡು ಆ ಭಕ್ತಿಪುರದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಹೆಬ್ಬುಲಿ ಕರಡಿ ಕಳ್ಳ ರಕ್ಕಸಿ ಕರಿಘಟೆಯಿಪ್ಪ ಮಹಾಸರೋವರದ ಅರಣ್ಯವಿದೆ. ಆ ಸರೋವರದ ಮಧ್ಯದಲ್ಲಿ ಎಂಟುಕಲಶದ ಚೌಕಾಮಂಟಪದ ಸುವರ್ಣದ ದೇಗುಲವಿದೆ. ಆ ದೇಗುಲದಲ್ಲಿ ಮುಕ್ತಿರಾಜ್ಯಕ್ಕೆ ಪಟ್ಟುವ ಕಟ್ಟುವ ಸಮರ್ಥಿಕೆಯನುಳ್ಳ ಜಂಗಮಲಿಂಗವಿದೆ. ಆ ಜಂಗಮಲಿಂಗಮಂ ಶರಣ ಕಂಡು ಹರುಷಗೊಂಡು ಭಾವದಲ್ಲಿಯೇ ಷೋಡಶೋಪಚಾರ ಅಷ್ಟವಿಧಾರ್ಚನೆಗಳಿಂದ ಪೂಜೆಯಂಮಾಡಿ ತನ್ನ ಮನದಭೀಷ್ಟೆಯಂ ನೆನೆದಂತೆ ಮನದಲ್ಲಿ ಬೇಡಿ ದೇಹ ಮನ ಪ್ರಾಣಕುಳ್ಳ ಸಮಸ್ತ ಕರಣಾದಿ ಗುಣಗಳೆಲ್ಲಮಂ ಸುಟ್ಟು ಬೊಟ್ಟಿಕ್ಕಿ ನಿರ್ಮಲ ಸ್ವರೂಪನಾಗಿ ಅಲ್ಲಿಂದ ಮುಂದೆ ನಡೆವುತಿಪ್ಪಾಗ ಊಧ್ರ್ವದಿಕ್ಕಿನ ಆಕಾಶದಲ್ಲಿ ಅನೇಕ ಚೋದ್ಯವನೊಳಕೊಂಡಿಪ್ಪ ತ್ರಿಪುರಮಂ ಕಂಡು ಆ ತ್ರಿಪುರವ ಮೇಲೆ ಬ್ರಹ್ಮರಂಧ್ರವೆಂಬ ಕೈಲಾಸದ ಕಡೆಯ ಬಾಗಿಲೊಳಿಪ್ಪ ಐಕ್ಯಸ್ಥಲವೆನಿಸುವ ಆರುನೆಲೆಯ ಮಾಣಿಕ್ಯವರ್ಣದ ಉಪ್ಪರಿಗೆ ತಳಮಂ ಕಂಡು ಪತಿಯಿದ್ದ ಮನೆಯ ಬಾಗಿಲಂ ಸತಿ ಸಾರುವಂತೆ ಆ ಶರಣ ಆ ಉಪ್ಪರಿಗೆಯ ಬಾಗಿಲಂ ಸಾರೆ ಆ ಬಾಗಿಲಿನಲ್ಲಿ ಡಾಕಿನಿ ಶಾಕಿನಿ ರಾಕಿನಿ ಲಾಕಿನಿ ಕಾಕಿನಿ ಹಾಕಿನಿಯರೆಂಬ ಷಡ್ವಿಧಶಕ್ತಿಗಳಿಗೆ ಆದಿನಾಯಕಿಯಾಗಿಪ್ಪಳು, ಊಧ್ರ್ವಕುಂಡಲಿನಿಯೆಂಬ ಜ್ಞಾನಶಕ್ತಿ. ಆ ಶಕ್ತಿ ಆ ಬಾಗಿಲಿಗೆ ದ್ವಾರಪಾಲಕಿಯಾಗಿಪ್ಪಳು. ಅವಳು ಅಂಗರ ತಡೆವಳು ನಿರಂಗರ ಬಿಡುವಳೆಂಬುದ ಶರಣ ತನ್ನ ಮನದಲ್ಲಿ ತಾನೆ ತಿಳಿದು ಅಲ್ಲಿಪ್ಪ ಮಹಾಲಿಂಗಮಂ ಶರಣ ಮಂತ್ರಮಾಲೆಯಂ ಮಾಡಿ ಮನದಲ್ಲಿ ಧರಿಸಿ ಸೋಮ ಸೂರ್ಯರ ಕಲಾಪಮಂ ನಿಲಿಸಿ ಕುಂಭಮಂ ಇಂಬುಗೊಳಿಸಿ ರೆುsುೀಂ ರೆುsುೀಂ ಎಂದು ರೆುsುೀಂಕರಿಸುತಿಪ್ಪ ಪೆಣ್ದುಂಬಿಯ ನಾದಮಂ ಚಿಣಿಮಿಣಿ ಎಂದು ಸಣ್ಣರಾಗದಿಂದ ಮನವ ಸೋಂಕುತಿಪ್ಪ ವೀಣಾನಾದಮಂ ಲಿಂಗ ಲಿಂಗವೆಂದು ಕರೆವುತಿಪ್ಪ ಘಂಟಾನಾದಮಂ ಢಮ್ಮ ಢಮ್ಮ ಎನುತಿಪ್ಪ ಪೂರಿತವಾದ ಭೇರಿನಾದಮಂ ಚಿಟಿಲು ಪಿಟಿಲು ಧಿಗಿಲು ಭುಗಿಲೆನುತಿಪ್ಪ ಮೇಘನಾದಮಂ ಓಂ ಓಂ ಎಂದು ಎಲ್ಲಿಯೂ ಎಡೆವಿಡದೆ ಉಲಿವುತಿಪ್ಪ ಪ್ರಣವನಾದಮಂ ಓಂ ಹ್ರಾಂ ಹ್ರೀಂ ಹ್ರೂಂ ಹ್ರೇಂ ಹ್ರೆ ೈಂ ಹ್ರೌಂ ಹ್ರಂ ಹ್ರಃ ಎಂದು ಬೆಳಗ ಬೀರುತಿಪ್ಪ ದಿವ್ಯನಾದಮಂ ಅರಣ್ಯ ಘೋಳಿಡುವಂತೆ ಹೂಂಕರಿಸುತಿಪ್ಪ ಸಿಂಹನಾದಮಂ ಈ ಪ್ರಕಾರದ ನಾದಂಗಳಂ ಶರಣ ಕೇಳಿ ಮನದಣಿದು ಹರುಷಂ ಮಿಕ್ಕು ಆ ಬಾಗಿಲು ದಾಂಟಿ ಪಶ್ಚಿಮ ದಿಕ್ಕಿಗೆ ಮುಖವಾಗಲೊಡನೆ ಚೌಕಮಧ್ಯದಲ್ಲಿ ವಜ್ರ ವೈಡೂರ್ಯ ಪುಷ್ಯರಾಗ ಗೋಮೇಧಿಕ ಇಂತಿವರೊಳಗಾದ ನವರತ್ನಂಗಳ ಕಂಭ ಬೋದಿಗೆ ಹಲಗೆಗಳಿಂದ ಅನುಗೈದು ತೀರಿಸಿದ ಮಹಾ ಶ್ರೀ ಗುರುವಿನ ಒಡ್ಡೋಲಗದ ಹಜಾರದ ಪ್ರಭೆಯು ಆಕಾಶವನಲೆವುತಿಪ್ಪುದಂ ಕಂಡು ಬಹಿರಾವರಣವ ಸೇರಿಪ್ಪ ಪ್ರಾಕಾರದ ಗೋಡೆಯ ಎರಡು ಹದಿನಾರು ಗೊತ್ತುಗಳಲ್ಲಿ ಈಶಾನ ಪರ್ಜನ್ಯ ಜಯಂತರೊಳಗಾದ ಮೂವತ್ತೆರಡು ತಂಡದ ಅನಂತ [ವಾ]ಸ್ತುದೇವತೆಗಳ ಕಾವಲ ಅತ್ಯುಗ್ರವಂ ಕಂಡು ಶರಣರ್ಗೆ ತಡೆಹಿಲ್ಲವೆಂಬುದಂ ತನ್ನ ಮನಜ್ಞಾನದಿಂದವೇ ಅರಿದು ಕಾವಲಾಗಿಪ್ಪ [ವಾ]ಸ್ತುದೇವತೆಗಳ ಕೃಪಾದೃಷ್ಟಿಯಿಂದ ಸಂತೈಸಿ ಮುಕ್ತಿಪುರಕ್ಕೆ ಮೂಲ ಸೂತ್ರವಾದ ಬ್ರಹ್ಮರಂಧ್ರದ ಪೂರ್ವ ದಿಕ್ಕಿನ ಚಂದ್ರಮಂಡಲದಲ್ಲಿಪ್ಪ ಬಾಗಿಲ ಬೀಗಮಂ ತೆಗೆದು ಶರಣನು ಒಳಹೊಗಲೊಡನೆ ಬಹಿರಾವರಣದ ವೀಥಿ ಓಲಗದೊಳಿಪ್ಪ ಹರಿ ಸುರ ಬ್ರಹ್ಮಾದಿ ದೇವತೆಗಳು ಮನು ಮುನಿ ಗರುಡ ಗಂಧರ್ವ ಇಂದ್ರ ಚಂದ್ರರೊಳಗಾದ ಅನಂತರೆಲ್ಲರು ಬೆದರಿ ಕೆಲಸಾರೆ ಸೋಮವೀಥಿಯೊಳಿಪ್ಪ ಅನಂತರುದ್ರರೊಳಗಾದ ಇಪ್ಪತ್ತನಾಲ್ಕುತಂಡದ ಅನಂತರು ಶಿವನ ಒಡ್ಡೋಲಗದ ವೈಭವವ ನಡೆಸುವ ಪರಿಚಾರಕರು ಬಂದು ಶರಣ ಲಿಂಗದೃಷ್ಟಿ ಸಂಧಾನವಾಗಲೆಂದು ಸಮ್ಮುಖವಂ ಮಾಡೆ ಸೂರ್ಯವೀಥಿಯೊಳಿಪ್ಪ ಉಮೆ ಚಂಡೇಶ್ವರ ನಂದಿಕೇಶ್ವರರೊಳಗಾದ ಹದಿನಾರುತಂಡದ ಅನಂತರುದ್ರರು ಬಂದು ಶರಣನ ಸನ್ಮಾನವಂ ಮಾಡೆ ಅಗ್ನಿವೀಥಿಯೊಳಿಪ್ಪ ವಾಮೆ ಜ್ಯೇಷೆ*ಯರೊಳಗಾದ ಎಂಟುತಂಡದ ಅನಂತಶಕ್ತಿಯರು ಬಂದು ಶರಣನ ಇದಿರ್ಗೊಳೆ ಕರ್ನಿಕಾವೀಥಿಯೊಳಿಪ್ಪ ಅಂಬಿಕೆ ಗಣಾನಿಯರೊಳಗಾದ ನಾಲ್ಕುತಂಡದ ಶಕ್ತಿಯರು ಬಂದು ಶರಣನ ಕೈವಿಡಿದು ಕರೆತರೆ ಈ ಸಿಂಹಾಸನಕ್ಕೆ ಮೇಲುಗದ್ದಿಗೆಯೆನಿಪ ಸಿಂಹಾಸನ ಶುಭ್ರವರ್ಣದ ಹತ್ತುನೂರುದಳವ ಗರ್ಭೀಕರಿಸಿಕೊಂಡು ಬೆಳಗುತಿಪ್ಪ ಒಂದು ಮಹಾಕಮಲ. ಆ ಕಮಲದಳಂಗಳೊಳಗಿಪ್ಪ ಪ್ರಣವ. ಆ ಪ್ರಣವ ಸ್ವರೂಪರಾದ ಬಸವಾದಿ ಅಸಂಖ್ಯಾತ ಪ್ರಮಥಗಣಂಗಳು ಆ ಪ್ರಮಥಗಣಂಗಳಿಗೆ ಶರಣಭಾವದಲ್ಲಿಯೇ ಸಾಷ್ಟಾಂಗವೆರಗಿ ನಮಸ್ಕಾರವ ಮಾಡೆ ಆ ಗಣಂಗಳು ಕೃಪಾದೃಷ್ಟಿಯಿಂದ ಶರಣನ ಮೈದಡವಿ ಅನಂತಕೋಟಿ ಸೋಮ ಸೂರ್ಯ ಕಾಲಾಗ್ನಿ ಮಿಂಚು ನಕ್ಷತ್ರಂಗಳು ತಮ್ಮ ತಮ್ಮ ಪ್ರಕಾಶಮಂ ಒಂದೇ ವೇಳೆ ತೋರಿದ ಬೆಳಗಿನೊಡ್ಡವಣೆ ಪಂಚಪತ್ರಂಗಳಾವರಣಂಗಳಾಗಿ ತೋರ್ಪ ಹದಿನಾರುದಳಂಗಳೊಳಿಪ್ಪ ಷೋಡಶಕಳಾಪುಂಜವೆನಿಸುವ ಪದ್ಮಿನಿ ಚಂದ್ರಿಣಿಯರೊಳಗಾದ ಷೋಡಶ ಲಾವಣ್ಯಶಕ್ತಿನಿಯರ ಬೆಳಗಂ ಕಂಡು ಆ ಬೆಳಗಿನೊಡ್ಡವಣೆ ಬಯಲಾಯಿತ್ತು. ಈ ಕರ್ಣಿಕಾಪ್ರದೇಶದ ಪಂಚಪತ್ರಂಗಳೊಳಗಿಪ್ಪ ಪಂಚಪ್ರಣವಂಗಳ ಬೆಳಗಂ ಕಂಡು ಆ ಲಾವಣ್ಯಶಕ್ತಿನಿಯರ ಬೆಳಗು ತೆಗೆದೋಡಿತ್ತು. ಕರ್ಣಿಕಾಗ್ರದೊಳು ನಿಜನಿವಾಸವಾಗಿ ಮೂರ್ತಿಗೊಂಡಿಪ್ಪ ನಿಷ್ಕಲಬ್ರಹ್ಮದ ಚರಣದಂಗುಲಿಯ ನಖದ ಬೆಳಗಂ ಕಂಡು ಆ ಪ್ರಣವಂಗಳ ಬೆಳಗು ತಲೆವಾಗಿದವು. ಇಂತಪ್ಪ ಘನಕ್ಕೆ ಘನವಾದ ಮಹಾಲಿಂಗವಂ ಶರಣಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ಮನಂ ನಲಿದು ಆನಂದಾಶ್ರುಜಲಂ ಸುರಿದು ಪುಳಕಂಗಳುಣ್ಮೆ ರೋಮಾಂಚನಂ ಗುಡಿಗಟ್ಟೆ ಪ್ರಣವದ ನುಡಿ ತಡೆಬಡಿಸಿ ನಡೆ ದಟ್ಟಡಿಸುವ ಕಾಲದಲ್ಲಿ ಕರ್ಪೂರದ ಪುತ್ಥಳಿ ಬಂದು ಉರಿಯ ಪುತ್ಥಳಿಯನಾಲಂಗಿಸಿದಂತೆ ಶರಣಂ ಬಂದು ಆ ಘನಲಿಂಗಮಂ ಅಮರ್ದಪ್ಪಿ ಪುಷ್ಪ ಪರಿಮಳದಂತೆ ಏಕವಾಗಿ ಘನಲಿಂಗ ತಾನೆಯಾದ, ಮಹಾಗುರು ಸಿದ್ಧೇಶ್ವರಪ್ರಭುವಿನ ಚರಣಮಂ ನಾನು ಕರಸ್ಥಲದಲ್ಲಿ ಪಿಡಿದು ಪೂಜೆಯಂ ಮಾಡಲೊಡನೆ ಎನ್ನ ತನುವೇ ಪಂಚಬ್ರಹ್ಮ ಪ್ರಾಣವೇ ಪರಬ್ರಹ್ಮವಾಯಿತು. ಪ್ರವೃತ್ತಿಯ ಬಟ್ಟೆ ಹುಲ್ಲು ಹುಟ್ಟಿತು. ನಿವೃತ್ತಿಯ ಬಟ್ಟೆ ನಿರ್ಮಲವಾಯಿತು. ಉಯ್ಯಾಲೆಯ ಮಣೆ ನೆಲೆಗೆ ನಿಂದಂತೆ ಆದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಇನ್ನಷ್ಟು ... -->