ತನ್ನ ಲಿಂಗದಲ್ಲಿ ಪದಾರ್ಥದ ಪೂರ್ವಾಶ್ರಯ ಹೋಗದೆಂದು
ಅನುಸರಿಸಿ ಜಂಗಮದ ಒಕ್ಕುದ ಮಿಕ್ಕುದ ಕೊಂಬೆನೆಂಬವನೊಬ್ಬ ಠಕ್ಕಭವಿ.
ಆ ಚರಲಿಂಗ ಜಂಗಮ ಹೋದ ಬಳಿಕ್ಕ
ತನ್ನ ಸ್ವಯಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಮಂ ಮಾಡಿ,
ಆ ಲಿಂಗಪ್ರಸಾದವಲ್ಲದೆ ಒಲ್ಲೆನೆಂಬವನೊಬ್ಬ ಠಕ್ಕಭವಿ.
ಅವಂಗೆ ಲಿಂಗವಿಲ್ಲ, ಲಿಂಗಕ್ಕೆ ತಾನಿಲ್ಲ, ಆವ ಆಚಾರಭ್ರಷ್ಟ.
ಅಂಥವರ ಕಂಡಡೆ ಇರಿದಿರಿದು ಸುಡುವನಲ್ಲದೆ, ಮೆರೆವನಲ್ಲ
ಕೂಡಲಚೆನ್ನಸಂಗಮದೇವ.