ಅಥವಾ

ಒಟ್ಟು 13 ಕಡೆಗಳಲ್ಲಿ , 5 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಷ ಉಂಡು ದಣಿಯಲಾರದೆ, ವಿಷ ನೈವೇದ್ಯವ ಮಾಡಿಕೊಂಡ ನೋಡಾ, ಈ ದೇವಾ. ತ್ರಿಪುರಾಂತಕ ಕೆರೆಯಗುಳಿ ದಣಿಯಲಾರದೆ, ಹಲವು ಗುಡ್ಡ ರೂಪಾಗಿ ಕೆರೆಯಗುಳಿಸಿಕೊಂಡ ನೋಡಾ [ಈ ದೇವ] ಇದ್ದ ದೇವಾಲಯವಲ್ಲದೆ ಮತ್ತೆ ದೇವಾಲಯವ ಮಾಡಿಸಿಕೊಂಡ ನೋಡಾ, ಈ ದೇವ, ತಾನಾಖಂಡಮೂರ್ತಿಯ ರೂಪು ಧರಿಸದೆ, ಲಕ್ಷ ತೊಂಬತ್ತಾರು ಸಾಸಿ[ವಾಗಿ]ನೆಲಸಿಪ್ಪ ನೋಡಾ ಈ ದೇವ, ಕಪಿಲಸಿದ್ಧಮಲ್ಲಿಕಾರ್ಜುನದೇವ.
--------------
ಸಿದ್ಧರಾಮೇಶ್ವರ
ಪರ್ಣ ಉದುರಿದ ವೃಕ್ಷ ಕಡಿದು, ಕೊಂಗೆಯ ಸವರದೆ ಮನೆಯ ಕಟ್ಟಿ, ಪಾತಾಳದ ಬೇತಾಳಂಗೆ ರುದ್ರನನಾಹುತಿಯ ಕೊಟ್ಟು, ಸ್ವರ್ಗಲೋಕದ ಮಾರೇಶ್ವರಂಗೆ ವಿಷ್ಣುವಿನ ಆಹುತಿ ಕೊಟ್ಟು, ಮತ್ರ್ಯಲೋಕದ ಜಗಜಟ್ಟಿಗೆ ಬ್ರಹ್ಮನ ಆಹುತಿ ಕೊಟ್ಟು, ಉಳಿದಲೋಕದ ಭೂತಂಗಳಿಗೆ ಷಟ್‍ಸ್ಥಲದ ಭವಿಗಳ ಕೊಟ್ಟು, ಜನಿವಾರ ಹರಿದು ಗಂಧವ ಧರಿಸದೆ, ಜಳಕವ ಮಾಡದೆ, ಮಡಿ ಉಡದೆ, ಮೈಲಿಗೆಯನುಟ್ಟು, ಉಣ್ಣದ ಆಹಾರವನುಂಡು ಕಾಯಕವ ಮಾಡುತ್ತಿರ್ಪರು ನೋಡೆಂದ, ಕಾಡನೋಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹರಿಕುಲದ ವಿಪ್ರರು ಶ್ರೀ ವಿಭೂತಿಯ ಧರಿಸದೆ ಮೋಕ್ಷಮಾರ್ಗಕ್ಕೆ ತಪ್ಪುಗರಾದರು ನೋಡಾ. ಸಕಲವೇದಂಗಳು ಶ್ರೀ ವಿಭೂತಿಯೇ ಘನವೆಂದು ಕರವೆತ್ತಿ ಕೂಗುತಿಪ್ಪುವು ನೋಡಾ. ಸಕಲಶ್ರುತಿಗಳು ಶ್ರೀ ವಿಭೂತಿಯ ಮಹತ್ವವನೆ ಹೊಗಳುತಿಪ್ಪುವು ನೋಡಾ. ಸಕಲಸ್ಮೃತಿಗಳು ಶ್ರೀ ವಿಭೂತಿಯ ಮಹಿಮೆಯನೆ ಉಗ್ಗಡಿಸುತಿಪ್ಪುವು ನೋಡಾ. ಅಖಿಲ ಪುರಾಣಂಗಳು ಶ್ರೀ ವಿಭೂತಿಯೇ ಅಧಿಕವೆಂದು ಹೊಗಳುತಿಪ್ಪುವು ನೋಡಾ. ಅದೆಂತೆಂದೊಡೆ :ಗಾರುಡೇ ``ಶ್ರುತಯಃ ಸ್ಮೃತಯಃ ಸರ್ವಾಃ ಪುರಾಣಾನ್ಯಖಿಲಾನ್ಯಪಿ | ವದಂತಿ ಭೂತಿಮಹಾತ್ಮ್ಯಂ ತತಸ್ತಾಂ ಧಾರಯೇತ್ ದ್ವಿಜಃ || ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಧರಿಸಲೊಲ್ಲದೆ ಮಣ್ಣು ಮಟ್ಟಿಯ ಹಣೆಗಿಟ್ಟುಕೊಂಬ ಮಧ್ವಮತದ ಚಾಂಡಾಲ ಹೊಲೆಯ ವಿಪ್ರ ಹಾರುವರೆಂಬ ಅಧಮ ಮಾದಿಗರನೆನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮೇಲುಮಾಡಿದ ನುಡಿಯಂತೆ ನಡೆಯಬೇಹಡೆ, ಮೃಡಭಾವವಡಗಿರಬೇಕು. ಪ್ರಾಣದಲ್ಲಿ ಅಡಗಿದ ಭಾವ[ವ] ನಡಹಿಕೊಳಬೇಕಾದಡೆ, ದೃಢಂಗಮೂರ್ತಿಯ ಧರಿಸಬಹುದೆ ದೇಹದಲ್ಲಿ? ಅರಿದು ಧರಿಸದೆ, ಧರಿಸಿ ಅರಿಯದೆ ಇದ್ದವನ ಭಾವ ಬಯಲಲ್ಲಿಹ ದೀಪದಂತೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಆವ ಕಾರ್ಯಕ್ಕಾದಡೂ ಶ್ರೀ ವಿಭೂತಿಯೇ ಬೇಕು. ಆವ ಕ್ರಿಯೆಗಾದಡೂ ಶ್ರೀ ವಿಭೂತಿಯೇ ಬೇಕು. ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ವೇದವನೋದಿದಡೇನು ? ಆತನೋದಿದ ವೇದಂಗಳು ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ಯಜ್ಞಂಗಳ ಮಾಡಿದಡೇನು ? ಆತ ಮಾಡಿದ ಯಜ್ಞಂಗಳು ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀವಿಭೂತಿಯ ದಾನಂಗಳ ಮಾಡಿದಡೇನು ? ಆತ ಮಾಡಿದ ದಾನಂಗಳು ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ತಪವ ಮಾಡಿದಡೇನು ? ಆತ ಮಾಡಿದ ತಪ ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ನಿತ್ಯ ನೇಮ ವ್ರತ ಉಪವಾಸಂಗಳಂ ಮಾಡಿದಡೇನು ? ಆತ ಮಾಡಿದ ನಿತ್ಯ ನೇಮ ವ್ರತ ಉಪವಾಸಂಗಳು ವ್ಯರ್ಥ ಕಾಣಿರೋ ! ಅದೆಂತೆಂದೊಡೆ :ಬೋಧಾಯನ ಸ್ಮೃತೌ- ``ವೃಥಾ ವೇದಾ ವೃಥಾ ಯಜ್ಞಾ ವೃಥಾ ದಾನಂ ವೃಥಾ ತಪಃ | ವೃಥಾ ವ್ರತೋಪವಾಸೌ ತು ತ್ರಿಪುಂಡ್ರಂ ಯೋ ನ ಧಾರಯೇತ್ ||'' ಎಂದುದಾಗಿ, ಸಕಲಕ್ಕೆ ಶ್ರೀ ವಿಭೂತಿಯೇ ಆಧಾರವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಧರಿಸಿರಣ್ಣ ಶ್ರೀ ವಿಭೂತಿಯ, ಧರಿಸಿರಣ್ಣ ಶ್ರೀ ರುದ್ರಾಕ್ಷಿಯ, ಸ್ಮರಿಸಿರಣ್ಣ ಶ್ರೀ ಪಂಚಾಕ್ಷರಿಯ. ಶ್ರೀ ವಿಭೂತಿಯ ಹೂಸದೆ, ಶ್ರೀ ರುದ್ರಾಕ್ಷಿಯ ಧರಿಸದೆ, ಶ್ರೀ ಪಂಚಾಕ್ಷರಿಯ ನೆನೆಯದೆ ಶಿವಪದವ ಸಾಧಿಸಿದೆನೆಂದರೆ ಸಾಧ್ಯವಾಗದು ಕಾಣಿರಣ್ಣಾ ! ಕಣ್ಣು ಕಾಲು ಕಿವಿಯಿಲ್ಲದಿರೆ ಶರೀರಕೆ ಒಪ್ಪವಹುದೆ ? ಮುಕ್ಕಣ್ಣನ ಆಭರಣವೆನಿಸುವ ಭಸ್ಮ ರುದ್ರಾಕ್ಷಿ ಷಡಕ್ಷರಿಯಿಂದಲೆನ್ನ ಭವದಗ್ಧವಾಗಿ ನಿತ್ಯ ಮುಕ್ತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜ್ಞಾನಪಾದೋದಕದಲ್ಲಿ ಮೂರು ಸಂಬಂಧವಾಗುವವು, ಅದೆಂತೆಂದಡೆ: ಮಹಾಂತನ ಪಾದವನ್ನು ಪಡೆದುಕೊಂಬಂತಹ ಭಕ್ತನು ಆ ಮಹೇಶ್ವರನ ಉನ್ನತಾಸನದಲ್ಲಿ ಮೂರ್ತಗೊಳಿಸಿ ಪಾದಪ್ರಕ್ಷಾಲನೆಯ ಮಾಡಿದ ನಂತರದಲ್ಲಿ ದೀಕ್ಷಾಪಾದೋದಕವ ಮಾಡಿ, ಶುಭ್ರವಸ್ತ್ರದಿಂದ ದ್ರವವ ತೆಗೆದು ಅಷ್ಟವಿಧಾರ್ಚನೆಯಿಂದ ಲಿಂಗಪೂಜೆಯ ಮಾಡಿಸಿ ಮರಳಿ ತಾನು ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಂ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರವೇ ನಮಃ ಎಂದು ಅಷ್ಟಾಂಗಯುಕ್ತನಾಗಿ ವಂದನಂಗೈದು ಪಾದಪೂಜೆಗೆ ಅಪ್ಪಣೆಯ ತೆಗೆದುಕೊಂಡು, ಅವರ ಸಮ್ಮುಖದಲ್ಲಿ ಗದ್ದುಗೆಯ ಹಾಕಿಕೊಂಡು, ಅದರ ಮೇಲೆ ಮೂರ್ತವ ಮಾಡಿಕೊಂಡು, ತನ್ನ ಲಿಂಗವ ನಿರೀಕ್ಷಿಸಿ, ವಾಮಹಸ್ತದಲ್ಲಿ ನಿರಂಜನ ಪ್ರಣವವ ಲಿಖಿಸಿ ಪೂಜೆಯ ಮಾಡಿ, ಆಮೇಲೆ ಜಂಗಮದ ಪಾದವ ಹಿಡಿದು ಪೂಜೆಯ ಮಾಡಿ ಆ ಪೂಜೆಯನಿಳುಹಿ, ಅದೇ ಉದಕದ ಪಾತ್ರೆಯಲ್ಲಿ ಶಿಕ್ಷಾಪಾದೋದಕವ ಮಾಡಿ, ಪಾದದ್ರವವ ತೆಗೆದು ಐದಂಗುಲಿಗಳಲ್ಲಿ ಪಂಚಾಕ್ಷರವ ಲೇಖನವ ಮಾಡಿ, ಮಧ್ಯದಲ್ಲಿ ಮೂಲಪ್ರಣವವ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಪೂಜೆಯ ಮಾಡಬೇಕು. ಶಿವಧರ್ಮೋತ್ತರೇ: ಲಿಂಗಾರ್ಪಿತಪ್ರಸಾದಂ ಚ ನ ದದ್ಯಾಚ್ಚರಲಿಂಗಕೇ ಚರಾರ್ಪಿತಪ್ರಸಾದಂ ಚ ದದ್ಯಾಲ್ಲಿಂಗಾಯ ವೈ ಶುಭಂ ಶಿವರಹಸ್ಯೇ : ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್ ಅನಾದಿಜಂಗಮಾಯೈವಂ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಂ ಎಂದುದಾಗಿ ಲಿಂಗಕ್ಕೆ ತೋರಿ ಪಾದವ ಪೂಜಿಸಲಾಗದು. ಅದೆಂತೆಂದಡೆ: ಗುರುವಿಗೂ ಲಿಂಗಕ್ಕೂ ಚೈತನ್ಯಸ್ವರೂಪ, ಜಂಗಮವಾದ ಕಾರಣ, ಆ ಜಂಗಮದ ಪ್ರಸಾದವ ಲಿಂಗಕ್ಕೆ ತೋರಬೇಕಲ್ಲದೆ ಲಿಂಗಪ್ರಸಾದವ ಪಾದಕ್ಕೆ ತೋರಲಾಗದು. ಅದೇನು ಕಾರಣವೆಂದಡೆ: ಗುರುಲಿಂಗಜಂಗಮಕ್ಕೆ ಅನಾದಿಜಂಗಮವೆ ಚೈತನ್ಯಸ್ವರೂಪವಾದ ಕಾರಣ, ಆ ಜಂಗಮವೆ ಮುಖ್ಯಸ್ವರೂಪು. ಇಂತಪ್ಪ ಜಂಗಮಪಾದವೆ ಪರಬ್ರಹ್ಮಕ್ಕೆ ಆಧಾರವಾಗಿಪ್ಪುದು. ಆ ಪಾದವ ಬಿಟ್ಟು ಪರವ ಕಂಡುದಿಲ್ಲವೆಂದು ಶ್ರುತಿಗಳು ಪೊಗಳುತಿರ್ದ ಕಾರಣ, ಇಂತಪ್ಪ ಚರಮೂರ್ತಿಯ ಪಾದವನು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚಿಸಿದಂತಹುದೆ ಲಿಂಗಪೂಜೆ. ಆಮೇಲೆ ಆ ಮೂರ್ತಿಯ ಉಭಯಪಾದಗಳ ಹಿಮ್ಮಡ ಸೋಂಕುವಂತೆ ಹಸ್ತವ ಮಡಗಿ ಲಲಾಟವ ಮುಟ್ಟಿ ನಮಸ್ಕರಿಸಿ ಆ ಪೂಜೆಯನಿಳುಹಿ, ಆ ಶಿಕ್ಷಾಪಾದೋದಕವನು ಬಲದಂಗುಷ* ಮೇಲೆ ಷಡಕ್ಷರಮಂತ್ರವ ಆರುವೇಳೆ ಸ್ಮರಿಸುತ್ತ ನೀಡಿ, ಅಲ್ಲಿ ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ*ದ ಮೇಲೆ ಪಂಚಾಕ್ಷರೀಮಂತ್ರವ ಐದುವೇಳೆ ಸ್ಮರಿಸುತ್ತ ನೀಡಿ, ಅಲ್ಲಿ ಪ್ರಾಣಲಿಂಗವೆಂದು ಭಾವಿಸಿ, ಮಧ್ಯದಲ್ಲಿ `ಓಂ ಬಸವಾಯ ನಮಃ ಎಂದು ಒಂದುವೇಳೆ ಒಂದು ಪುಷ್ಪವ ಧರಿಸಿ ಸ್ಮರಿಸುತ್ತ ನೀಡಿ, ಅಲ್ಲಿ ಭಾವಲಿಂಗವೆಂದು ಭಾವಿಸಿ, ನೀಡಿದ ಉದಕವೆ ಬಟ್ಟಲಲಿ ನಿಂದು ಮಹತ್ಪಾದವೆಂದೆನಿಸುವುದು, ಈ ಮಹತ್ಪಾದದಲ್ಲಿ ದ್ರವವ ತೆಗೆದು ಮತ್ತೆ ಪೂಜಿಸಬೇಕಾದಡೆ, ಬಹುಪುಷ್ಪವ ಧರಿಸದೆ ಒಂದೆ ಪುಷ್ಪವ ಧರಿಸಬೇಕು. ಅದೇನು ಕಾರಣವೆಂದಡೆ; ಪಶ್ಚಿಮಚಕ್ರದಲ್ಲಿ ಸಂಬಂಧವಾದ ನಿರಂಜನ ಜಂಗಮಕ್ಕೆ ಏಕದಳವನುಳ್ಳ ಒಂದೆ ಪುಷ್ಪವು ಮುಖ್ಯವಾದ ಕಾರಣ, ಏಕಕುಸುಮವನೆ ಧರಿಸಿ ಪೂಜೆಯಮಾಡಿ ನಮಸ್ಕರಿಸುವುದೆ ಜಂಗಮಪೂಜೆ. ಆ ಪೂಜೆಯ ತೆಗೆದ ಶಿಷ್ಯನು `ಶರಣಾರ್ಥಿ ಸ್ವಾಮಿ ಎಂದು ಬಟ್ಟಲವನೆತ್ತಿಕೊಟ್ಟಲ್ಲಿ, ಕರ್ತೃವಾದ ಜಂಗಮವು ಆ ಬಟ್ಟಲಲ್ಲಿರ್ದ ತೀರ್ಥವನು ತಮ್ಮ ಪಂಚಾಂಗುಲಿಗಳ ಪಂಚಪ್ರಾಣವೆಂದು ಭಾವಿಸಿ, ಮೂಲಮಂತ್ರದಿಂದ ಮೂರುವೇಳೆ ಪ್ರದಕ್ಷಿಣವ ಮಾಡಿ ನಮಸ್ಕರಿಸಿ, ಲಿಂಗದ ಮಸ್ತಕದ ಮೇಲೆ ಮೂರುವೇಳೆ ಚತುರಂಗುಲ ಪ್ರಮಾಣಿನಲ್ಲಿ ಲಿಂಗವ ಮುಟ್ಟದೆ ನೀಡಿ, ಆ ಪಂಚಾಂಗುಲಿಗಳ ತಮ್ಮ ಜಿಹ್ವೆಯಲ್ಲಿ ಸ್ವೀಕರಿಸುವಲ್ಲಿ ಗುರುಪಾದೋದಕವೆನಿಸುವುದು; ಅದೇ ದೀಕ್ಷಾಪಾದೋದಕ. ತಾವು ಲಿಂಗವನೆತ್ತಿ ಸಲಿಸಿದುದೆ ಲಿಂಗಪಾದೋದಕವೆನಿಸುವುದು; ಅದೇ ಶಿಕ್ಷಾಪಾದೋದಕ. ಬಟ್ಟಲನೆತ್ತಿ ಸಲ್ಲಿಸಿದಲ್ಲಿ ಜಂಗಮಪಾದೋದಕವೆನಿಸುವುದು; ಅದೇ ಜ್ಞಾನಪಾದೋದಕ. ಈ ರೀತಿಯಲ್ಲಿ ಮಾಹೇಶ್ವರನು ಸಲಿಸಿದ ಬಳಿಕ `ಶರಣಾರ್ಥಿ ಎಂದು ಶಿಷ್ಯೋತ್ತಮನು ಎದ್ದು, ಲಲಾಟಂ ಚ ಭುಜದ್ವಂದ್ವಂ ಪಾಣಿಯುಗ್ಮಮುರಸ್ತಥಾ ಅಂಗುಷ*ಯುಗಲಂ ಪ್ರೋಕ್ತಂ ಪ್ರಣಾಮೋ[s]ಷ್ಟಾಂಗಮುಚ್ಯತೇ ಎಂದು ಭೃತ್ಯೋಪಚಾರಗಳಿಂದ ಪ್ರಣತಿಂಗೈದು ಅಪ್ಪಣೆಯ ಪಡೆದುಕೊಂಡು ಬಂದು, ಆ ಜಂಗಮದ ಮರ್ಯಾದೆಯಲ್ಲಿಯೆ ತಾನು ಸ್ವೀಕರಿಸುವುದು. ಇದೇ ರೀತಿಯಲ್ಲಿ ಗುರುಶಿಷ್ಯರಿರ್ವರು ಸಮರಸಭಾವದಿಂದ ಸೇವನೆ ಮಾಡಿದಲ್ಲಿ, ಆ ಶಿಷ್ಯೋತ್ತಮನೆ ನಿಜಶಿಷ್ಯನಾದ ಕಾರಣ, ಗುರುವೆ ಶಿಷ್ಯ, ಶಿಷ್ಯನೆ ಗುರು. ಈ ಎರಡರ ಮರ್ಮವು ಆದ ಬಗೆ ಹೇಗೆಂದಡೆ: ಆ ಶಿಷ್ಯನು ಪಡೆದುಕೊಂಡ ಪಾದೋದಕವ ಆ ಗುರು ಭಕ್ತಿಮುಖದಿಂದ ತೆಗೆದುಕೊಂಡಲ್ಲಿ ಗುರುವೆ ಶಿಷ್ಯನಾಗಿಪ್ಪನು. ಆ ಗುರು ಸೇವನೆಯ ಮಾಡಿ ಉಳಿದ ಉದಕವ ಶಿಷ್ಯ ಭಕ್ತಿಭಾವದಿಂದ ಸೇವನೆ ಮಾಡಿದಲ್ಲಿಗೆ ತಚ್ಛಿಷ್ಯನಾದಹನು. ಈ ಮರ್ಮವ ತಿಳಿದು ಗುರುಶಿಷ್ಯರೀರ್ವರು ಸಲಿಸಿದ ಬಳಿಕ ಕೆಲವು ಭಕ್ತಮಾಹೇಶ್ವರರು ಸಲ್ಲಿಸುವುದು. ಇನ್ನು ನಿಚ್ಚಪ್ರಸಾದಿಗಳಿಗೆ, ಸಮಯಪ್ರಸಾದಿಗಳಿಗೆ ಆಯಾಯ ತತ್ಕಾಲದಲ್ಲಿ ತ್ರಿವಿಧೋದಕವಾಗಿಪ್ಪುದು; ಇದೇ ಆಚರಣೆ. ಇದನರಿಯದಾಚರಿಸುವವರಿಗೆ ನಿಮ್ಮ ನಿಲವರಿಯಬಾರದು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಲಿಂಗಧಾರಣದ ನಿರ್ಣಯವ ಪೇಳ್ವೆ. ಅದೆಂತೆಂದಡೆ: ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿಯಮಾಡಿ, ಶ್ರೀಗುರುಕಾರುಣ್ಯವ ಹಡದು, ಅಂಗದ ಮೇಲೆ ಲಿಂಗಧಾರಣವಾದ ಶಿವಶರಣನು, ಷಟ್‍ಸ್ಥಾನದಲ್ಲಿ ಲಿಂಗವ ಧರಿಸುತ್ತಿರ್ದ. ಅದೆಂತೆಂದಡೆ: ಕರಸ್ಥಲವೆಂಬ ಪೃಥ್ವಿತತ್ವದಲ್ಲಿ ಆಚಾರಲಿಂಗಸ್ವಾಯತವಮಾಡಿ, ಕಕ್ಷೆಯೆಂಬ ಅಪ್ಪುತತ್ವದಲ್ಲಿ ಗುರುಲಿಂಗಸ್ವಾಯತವಮಾಡಿ, ಹೃದಯವೆಂಬ ತೇಜತತ್ವದಲ್ಲಿ ಶಿವಲಿಂಗಸ್ವಾಯತವಮಾಡಿ, ಕಂಠವೆಂಬ ವಾಯುತತ್ವದಲ್ಲಿ ಜಂಗಮಲಿಂಗಸ್ವಾಯತವಮಾಡಿ, ಉತ್ತಮಾಂಗವೆಂಬಾಕಾಶತತ್ವದಲ್ಲಿ ಪ್ರಸಾದಲಿಂಗಸ್ವಾಯತವಮಾಡಿ, ಅಮಳೋಕ್ಯವೆಂಬ ಆತ್ಮತತ್ವದಲ್ಲಿ ಮಹಾಲಿಂಗಸ್ವಾಯತವಮಾಡಿ, ಇದಲ್ಲದೆ, ಆಪಾದಮಸ್ತಕ ಪರಿಯಂತರ ಸರ್ವಾಂಗಲಿಂಗಮಯವಾಗಿ, ಆವಾವೇಷವ ಧರಿಸದೆ ಲೌಕಿಕಾತ್ಮರಲ್ಲಿ ಹತ್ತರೊಳಗೆ ಹನ್ನೊಂದು ಎಂಬ ಹಾಗೆ ಸರ್ವರಲ್ಲಿಯೂ ಶಿವಶರಣನು ಅವರಂತೆ ಇರ್ಪನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶ್ರೀ ವಿಭೂತಿಯಿಲ್ಲದವನ ಹಣೆಯ ಸುಡುಯೆಂದಿತ್ತು ಪೌರಾಣ. ಶಿವಾಲಯವಿಲ್ಲದ ಗ್ರಾಮವ ಸುಡುಯೆಂದಿತ್ತು ಪೌರಾಣ. ಶಿವಾರ್ಚನೆಯಿಲ್ಲದವನ ಜನ್ಮವ ಸುಡುಯೆಂದಿತ್ತು ಪೌರಾಣ. ಶ್ರೀ ಶಿವಸ್ತುತಿಯಿಲ್ಲದವನ ಆಗಮವ ಸುಡುಯೆಂದಿತ್ತು ಪೌರಾಣ. ಅದು ಎಂತೆಂದರೆ : ಸಾಕ್ಷಿ :``ಧಿಗ್ ಭಸ್ಮರಹಿತಂ ಭಾಳಂ ಧಿಗ್ ಗ್ರಾಮಮಶಿವಾಲಯಂ | ಧಿಗ್ ಗನೀಶ್ರಾಶ್ರಿತಂ ಜನ್ಮ ಧಿಗ್‍ವಿದ್ಯಾಮಶಿವಾಶ್ರಯಾಂ ||'' ಎಂದುದಾಗಿ, ಎಲ್ಲಿ ಲಿಂಗಾರ್ಚನೆಯಿಲ್ಲ, ಎಲ್ಲಿ ತ್ರಿಪುಂಡ್ರವಿಲ್ಲ, ಎಲ್ಲಿ ರುದ್ರಜಪವಿಲ್ಲ ಅವನ ಮನೆ ಹೊಲೆಮಾದಿಗನ ಮನೆಯ ಸರಿಯೆಂದಿತ್ತು ಪೌರಾಣ. ಅದು ಎಂತೆಂದರೆ : ಸಾಕ್ಷಿ :``ಯತ್ರ ಲಿಂಗಾರ್ಚನಂ ನಾಸ್ತಿ | ನಾಸ್ತಿ ಯತ್ರ ತ್ರಿಪುಂಡ್ರಕಂ | ಯತ್ರ ರುದ್ರ ಜಪಂ ನಾಸ್ತಿ | ತತ್‍ಚಾಂಡಾಲ ಗುರೋರ್ಗೃಹಂ ||'' ಹೀಗೆಂಬುದನರಿಯದೆ ವಾಗದ್ವೈತದಿಂದ ಶ್ರೀವಿಭೂತಿಯ ಪೂಸದೆ, ಶ್ರೀರುದ್ರಾಕ್ಷಿಯ ಧರಿಸದೆ, ಶಿವಲಿಂಗದ ಪೂಜೆಯನನುದಿನ ಮಾಡದೆ, ಶಿವನಿರೂಪದಿಂದಲಾವರಣವನರಿಯದೆ, ಶಿವನ ಸಾಧಿಸೇನೆಂಬ ಅಜ್ಞಾನಿಗಳ ಕಂಡು ನಾ ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮೂದೇವಿಯ ಮಕ್ಕಳೆಲ್ಲಾ ಚಿತ್ರವ ಪೂಜಿಸಿ ಅನಂತ ವೇಷವ ಧರಿಸಿರ್ಪರು. ಹೊಲತಿಯ ಮಕ್ಕಳೆಲ್ಲ ಚಿತ್ರವ ಪೂಜಿಸಿ ಚಿನಿಪಾಲವ ಮಾಡಿ ಹಲವು ವೇಷವ ಧರಿಸದೆ ಇರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->