ಅಥವಾ

ಒಟ್ಟು 39 ಕಡೆಗಳಲ್ಲಿ , 18 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಡೆಯಲರಿಯದೆ ನಡೆವರಯ್ಯಾ ತನುವಿಡಿದು, ನೋಡಲರಿಯದೆ ನೋಡುವರಯ್ಯಾ ಮನವಿಡಿದು, ಮುಟ್ಟಲರಿಯದೆ ಮುಟ್ಟುವರಯ್ಯಾ ಪ್ರಾಣವಿಡಿದು, ವಾಸಿಸಲರಿಯದೆ ವಾಸಿಸುವರಯ್ಯಾ ಭಾವವಿಡಿದು, ಕಾಣಲರಿಯದೆ ಕಾಣುವರಯ್ಯಾ ಜೀವವಿಡಿದು, ಹೋಗಿ ಬರುವ ದಾರಿಯ ಸುಖಿಗಳಿಗೆತ್ತಣ ಶರಣಸ್ಥಲವಯ್ಯಾ, ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದ ಅಸಮಜ್ಞಾನರಿಗಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧರೆಯನಾಳುವ ಪರವಾದಿ ಬಿಜ್ಜಳನು ಮಡಿವಾಳಯ್ಯಗಳು ಕರೆಯಕಳುಹಿದರೆ ಬಾರದಿರಲು ಪಟ್ಟದಾನೆಯ ಮೇಲೆ ಪರಿಪರಿಬಣ್ಣ ಸಣ್ಣವಸ್ತ್ರವ ಹೇರಿಸಿ ಶರದ್ಥಿಯ ಮುಂದೆ ನೀ ನೂಕಿ ಬಾಯೆಂದು ಕಳುಹಲು, ಬರುವ ಪಟ್ಟದಾನೆಯ ಕಂಡು ಕಂಗೆಡದೆ ಕಡೆಗೋಡದೆ ತಟ್ಟನೆ ಸೀಳಿ ನಿಟ್ಟೆಲುವ ಮುರಿದು ಹೊದಕೆಯ ಮುರಿಗಿ ಮಾಡಿ ತಲೆಯ ಹರಿಯಲಿಟ್ಟು ದುಕೂಲವ ಸುಟ್ಟು ಪರಿಚಾರರ ನೆರೆಯಟ್ಟಿ ತಲೆಗಳ ಕುಟ್ಟುವದ ಕೇಳಿ ಕಂಗೆಟ್ಟು ಕಾಲಿಗೆರಗಲು ಕರುಣವ ಪಡೆದ ನಿಷ್ಠೆಯ ವೀರಮಡಿವಾಳಯ್ಯಗಳಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹೋದ ದಿವಸ ವಿಷವೆಂದರಿವುದು ಮನದಲ್ಲಿ. ಬರುವ ದಿವಸ ಸುಧಾಸಮವೆಂದರಿವುದು ಸದ್ಭಾವದಲ್ಲಿ. ಹೋದಂತೆ ಹೋದಡೆ ಕಲಿದೇವರ ಕಾಂಬ ಪರಿಯೆಂತೊ, ಸಿದ್ಧರಾಮಯ್ಯಾ ?
--------------
ಮಡಿವಾಳ ಮಾಚಿದೇವ
ಅಯ್ಯ, ಶರಣಸತಿ-ಲಿಂಗಪತಿ ಭಾವದಿಂದ ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವ, ನಿರುಪಾದ್ಥಿಕ, ನಿಷ್ಕಳಂಕ, ನಿರಾಳವೆಂಬ ನವವಿಧ ಹಸ್ತಗಳಿಂದ ನವವಿಧ ಪದಾರ್ಥವನ್ನು ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗ- ಆಚಾರಲಿಂಗ-ಗುರುಲಿಂಗ-ಶಿವಲಿಂಗ-ಜಂಗಮಲಿಂಗ ಪ್ರಸಾದಲಿಂಗ-ಮಹಾಲಿಂಗವೆಂಬ ನವವಿಧಲಿಂಗಗಳಿಗೆ ಶ್ರದ್ಧಾಭಕ್ತಿ ಮೊದಲಾಗಿ ನವವಿಧ ಭಕ್ತಿಗಳಿಂದ ಸಮರ್ಪಿಸುವ ಕ್ರಮವೆಂತೆಂದಡೆ : ತನುಸಂಬಂಧವಾದ ರೂಪುಪದಾರ್ಥವನ್ನು ಇಷ್ಟಲಿಂಗಕ್ಕೆ ಸಮರ್ಪಿಸಿ, ಮನಸಂಬಂಧವಾದ ರುಚಿಪದಾರ್ಥವನ್ನು ಪ್ರಾಣಲಿಂಗಕ್ಕೆ ಸಮರ್ಪಿಸಿ, ಧನಸಂಬಂಧವಾದ ತೃಪ್ತಿ ಪದಾರ್ಥವನ್ನು ಭಾವಲಿಂಗಕ್ಕೆ ಸಮರ್ಪಿಸಿ, ಸುಗಂಧಪದಾರ್ಥವನ್ನು ಆಚಾರಲಿಂಗಕ್ಕೆ ಸಮರ್ಪಿಸಿ, ಸುರಸಪದಾರ್ಥವನ್ನು ಗುರುಲಿಂಗಕ್ಕೆ ಸಮರ್ಪಿಸಿ, ಸುರೂಪುಪದಾರ್ಥವನ್ನು ಶಿವಲಿಂಗಕ್ಕೆ ಸಮರ್ಪಿಸಿ, ಸ್ಪರ್ಶನಪದಾರ್ಥವನ್ನು ಜಂಗಮಲಿಂಗಕ್ಕೆ ಸಮರ್ಪಿಸಿ, ಸುಶಬ್ದಪದಾರ್ಥವನ್ನು ಪ್ರಸಾದಲಿಂಗಕ್ಕೆ ಸಮರ್ಪಿಸಿ, ಸುತೃಪ್ತಿಪದಾರ್ಥವನ್ನು ಮಹಾಲಿಂಗಕ್ಕೆ ಸಮರ್ಪಿಸಿ, ಘ್ರಾಣ, ಚಿಹ್ನೆ, ನೇತ್ರ, ತ್ವಕ್ಕು, ಶ್ರೋತ್ರ, ಹೃದಯಂಗಳು ಮೊದಲಾದ ಸಮಸ್ತ ಮುಖಂಗಳಲ್ಲಿ ಬರುವ ಪದಾರ್ಥಂಗಳ ಸಮಸ್ತಲಿಂಗಂಗಳಿಗೆ ಮಿಶ್ರಾಮಿಶ್ರಂಗಳೊಡನೆ ಸಮರ್ಪಿಸಿ, ಆ ಲಿಂಗಂಗಳ ಸಂತೃಪ್ತಿ ಪರಿಣಾಮಪ್ರಸಾದದಲ್ಲಿ ಲೋಲುಪ್ತವಾಗಿರುವಂಥಾದೆ ಪಂಚೇಂದ್ರಿಯಾರ್ಪಿತದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಷ್ಪ್ರಪಂಚ ನಿರಾಲಂಬ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕರಸ್ಥಲದ ಲಿಂಗ ಕೈಸೇರಿ ಇರು ತಿರಲನ್ಯ ಭಯಗಳುಂಟೆ ಗುರುವೆ ? ಪದ :ಕಂಠೀರ[ವ]ನಿಹ ವನದೊಳು ಕರಿಯಭಯ ವುಂಟೇ ಇನ್ನಾ ತೆರದೊಳು ಬಂಟಾಯುಧವಿರೆ ಕರದೊಳು ಸೂಜಿಯ ಮೊನೆಯ ತುಂಟಕದ ಭಯಗಳುಂಟೆ ಗುರವೆ ? | 1 | ಕರಿಯನೇರಿ ಪೋಗುತಿರಲು ಶುನಿ ಬಗುಳುತ ಬರುತಿರುವ ಭಯಗಳುಂಟೆ ನೋಡಾ. ಹರನೆನ್ನ ಕರದೊಳಿರಲು ಪಂಚೇಂದ್ರಿ ದುರಿತ ಭಯದಂಜಿಕೆಯುಂಟೆ ಗುರುವೆ ? | 2 | ದ್ಯುಮಣಿಗುರಿಯ ಭಯಗಳುಂಟೆ ? ಅಷ್ಟದಳ ಕಮಲದೊಳು ಸುಳಿವ ಹಂಸ ತಾನೆ ಭ್ರಮರನಂತೆ ಕರಕಮಲದ ಲಿಂಗವ ತಾ ಭ್ರಮಿಸೆರಗೆ ಭಯಗಳುಂಟೆ ಗುರುವೆ ? | 3 | ಉರಿಯುತಿರೆ ಜ್ಯೋತಿ ಗೃಹದಿ ತಮ ನಡೆದು ಬರುವ ಬ್ಥೀತಿಯುಂಟೆ ನೋಡಾ. ಪರಂಜ್ಯೋತಿರ್ಲಿಂಗಯೆನ್ನ ಅಂಗಾಕಾರದೆ ಇರೆ ಮಾಯದ ಬ್ಥೀತಿಯುಂಟೆ ಗುರುವೆ ? | 4 | ಉರಗ ಮುಟ್ಟಲು ಓರ್ವನ ತನು ವಿಷದಿ ಭರಿತವಾದಂತೆ ಶರಣ ಶರೀರವನು ಸೊಮ್ಮು ಸೋಂಕಿ ಸರ್ವಾಂಗ ಕಾರಣಲಿಂಗವಾಗೆ ಭಯವೆ ಗುರುವೆ ? | 5 | ಅಗಲದೆ ಸರ್ವಾಂಗದಿ ಭರಿತವಾದಂತೆ ಶರಣ ಶಿವಲಿಂಗ ಝಗಝಗಿಸುತಿದೆ ಕೋಯೆಂದು ನುಡಿದು ಪೊಗಳ್ದ ಹೇಮಗಲ್ಲ ಹಂಪ ಪಡುವಿಡಿಯ ಬಗೆಯ ಗುರು ರಾಚನಿರವು ತಾನೆ | 6
--------------
ಹೇಮಗಲ್ಲ ಹಂಪ
ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋರಗನ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲಿ ಹೆಬ್ಬುಲಿಯ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವ. ಇಂತಿವೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು, ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ ನಿಲ್ಲಿಸಲಾಗದು. ಈ ಲೋಭಕ್ಕೆ ದಾರಿದ್ರ್ಯವೇ ಔಷಧವು. ಹೇಳಿದರೆ ಕೇಳರು, ತಾವು ತಿಳಿಯರು, ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು. ಇಂತಹ ಗೊಡ್ಡು ಮೂಳ ಹೊಲೆಯರಿಗೆ ಕರ್ಮವೆಂಬ ಶರದ್ಥಿಯಲ್ಲಿ ಬಿದ್ದು ಉರುಳಾಡುವುದೆ ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕುನ್ನಿಗೆ ರನ್ನದ ಹಲ್ಲಣವ ಹಾಕಿದಂತೆ, ಹಂದಿಯ ತಂದು ಅಂದಣವನೇರಿಸಿದಂತೆ, ಎನಗೊಲಿದು ಶಿವಲಾಂಛನವ ಕೊಟ್ಟ ಕಾರಣವೇನಯ್ಯ ಗುರುವೆ?. ನಾನು ಲಿಂಗದ್ರೋಹವ ಮಾಡಿ ಜಂಗಮವ ಕೆಡನುಡಿದೆನು. ಕೈವಿಡಿದ ಸ್ತ್ರೀಯ ಕಡಿಖಂಡವಮಾಡಿದೆ. ಒಡನಾಡಿದವರ ಕಡುಕೋಪದಿನಿರಿದುಕೊಂದೆ. ನಂಬಿದ ಹಳೆಯರ ಪ್ರಾಣಕ್ಕೆ ಮುನಿದೆ. ಪಶುವಿನ ಶಿಶುವ ತಲೆಯೊಡೆಯಿಕ್ಕಿದೆ. ಗೋವ ಕೊಂದವರ ವಹಿಸಿಕೊಂಡೆ. ಪರಧನವ ಕದ್ದೆ, ಪರಸ್ತ್ರೀಯರಿಗಳುಪಿದೆ. ಭವಿಹೆಣ್ಣುಗಳ ಕೂಡುಂಡ ಬಾಯಹುಳುಕನಯ್ಯ ನಾನು. ಇಂತಪ್ಪ ಮಹಾಪಾತಕಂಗಳ ಮಾಡಿದ್ದ ಹೊಲೆಯನಿವನೆಂದು ನೀನರಿದ ಬಳಿಕ, ಎನಗೆ ವಿರಕ್ತಿಯೆಂಬ ಲಾಂಛನ ಕೊಟ್ಟುದು, ಕೋಪದ ಕಾರಣವಲ್ಲದೆ ಕೃಪೆಯಲ್ಲವಯ್ಯ. ಅದೇನು ಕಾರಣವೆಂದೊಡೆ- ಬಟ್ಟೆಯ ಬಡಿದ ಕಳ್ಳಬಂಟನ ಭೂಪಾಲರು ಬೇಹನಿಕ್ಕಿ ಹಿಡಿತರಿಸಿ, ನಾಳೆ ಶೂಲಕ್ಕೆ ತೆಗಸುವರೆ, ಇಂದು ಕಳ್ಳಬಂಟಂಗೆ, ಪುನುಗು ಜವಾಜಿಯ ಲೇಪಿಸಿ, ಹೂವಿನ ದಂಡೆಯ ಕೊರಳು- ಮಂಡೆ-ಉರದೊಳಗೆ ಅಡ್ಡಹಾಕಿ, ಹಾಲು ತುಪ್ಪ ಹಣ್ಣುಗಳ ಉಣಕೊಟ್ಟು, ಅಡಿಗಡಿಗೆ, ಅಡಕೆಲೆಯ, ಮೆಲುಕೊಟ್ಟು ವೀರವೃಂದದ ಹಲಗೆ ಕಹಳೆಯಂ, ಅವನ ಮುಂದೆ ಸಂಭ್ರಮಿಸುವ ಬರಿಯುಪಚಾರದಂತೆ, ನಾನು ಮಾಡಿದ ಸರ್ವ ದ್ರೋಹಕ್ಕೆ ನಿನ್ನ ಮನನೊಂದು, ಎನ್ನ ಎಕ್ಕಲನರಕಕ್ಕೆ ನೂಂಕುವುದಕ್ಕೋಸ್ಕರ ಕೊಟ್ಟ ಸಟೆಯುಪಚಾರಕ್ಕಾದ ಲಾಂಛನವಲ್ಲದೆ, ದಿಟದೊಲವಲ್ಲವಯ್ಯ ದೇವನೆ. ನಾನು ಮುಂದನರಿಯದಂಧಕನಯ್ಯ. ನಿನ್ನ ಬಾಗಿಲ ಕಾವ ಗೊಲ್ಲನಯ್ಯ. ನಿನ್ನ ಕುದುರೆಯ ಸಾಕುವ ಗೋವನಯ್ಯ. ನಿನ್ನ ಚಮ್ಮಾವುಗೆಯ ಹೊತ್ತು ಬರುವ ಬೋವರ ಲೆಂಕನಯ್ಯ. ನಿನ್ನ ಪಡುಗವ ಹಿಡಿವ ಪಡುಡಿಂಡಿಯಯ್ಯ. ನೀನುಗುಳ್ದ ತಂಬುಲವನುಂಬ ನಿನ್ನಾದಿಯ ಹಳೆಯನಯ್ಯ. ನಿನ್ನಂಗಳದಲ್ಲಿ ಬೊಗಳುವ ಶ್ವಾನನಯ್ಯ. ಎನ್ನ ತಪ್ಪ ಕಾಯಯ್ಯ ಶಿವಧೋ ಶಿವಧೋ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅಯ್ಯಾ, ಎನಗೆ ಬರುವ ಗಂಧದ್ರವ್ಯ, ನಿನ್ನನುಭಾವಿಸಿ ಬಂದ ಬರವಯ್ಯಾ. ಎನಗೆ ಬರುವ ರಸದ್ರವ್ಯ ನಿನ್ನ ಸುಖಿಸಿ ಬಂದ ಬರವಯ್ಯಾ. ಎನಗೆ ಬರುವ ರೂಪುದ್ರವ್ಯ ನಿನ್ನ ಪರಿಣಾಮಿಸಿ ಬಂದ ಬರವಯ್ಯಾ. ಎನಗೆ ಬರುವ ಸ್ಪರ್ಶದ್ರವ್ಯ ನಿನ್ನ ಆನಂದಿಸಿ ಬಂದ ಬರವಯ್ಯಾ. ಎನಗೆ ಬರುವ ಶಬ್ದದ್ರವ್ಯ ನಿನಗೆ ಸೊಗಸನಿಟ್ಟು ಬಂದ ಬರವಯ್ಯಾ. ಎನಗೆ ಬರುವ ತೃಪ್ತಿದ್ರವ್ಯ ನಿನ್ನ ತೃಪ್ತಿಯಪಡಿಸಿ ಬಂದ ಬರವಯ್ಯಾ. ಎನಗೆ ಬರುವ ಸಕಲವು ಗುರುನಿರಂಜನ ಚನ್ನಬಸವಲಿಂಗ ಸಹಿತವಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿ ಅನಾದಿಯಿಲ್ಲದತ್ತಣ ದೂರಕ್ಕೆ ದೂರದಲ್ಲಿ ಭಾವಕ್ಕೆ ನಿರ್ಭಾವಕ್ಕೆ ಬಾರದಿರ್ದ ನಿಷ್ಕಳಂಕ ಪರಬ್ರಹ್ಮವೇ ಮುನ್ನ ನೀನು ಶಾಖೆದೋರುವಲ್ಲಿ ನಿನ್ನೊಳಂಕುರಿಸಿ ನಾನು ತಾಮಸ ಮುಸುಂಕಿ ಜನನ ಮರಣಕ್ಕೊಳಗಾಗಿ ಚೌರಾಶಿ ಎಂಬತ್ತುನಾಲ್ಕು ಲಕ್ಷ ಪ್ರಾಣಿಗಳ ಗರ್ಭದಿಂದ ಬಂದು ಬಂದು ಒಮ್ಮೆ ಮಾನವನಪ್ಪಂದಿಗೆ ನಾನುಂಡು ಮೊಲೆಹಾಲು ಸಪ್ತಸಮುದ್ರಕ್ಕೆ ಸರಿಯಿಲ್ಲವಯ್ಯ. ಇಂತಪ್ಪ ಮಾನವ ಜನ್ಮದಲ್ಲಿ ಬಂದ ಬಂದುದು ಗಣಿತಕ್ಕೆ ಬಾರದಯ್ಯ. ಈ ಜನ್ಮದಲ್ಲಿ ಪಿಂಡೋತ್ಪತ್ತಿಯಲ್ಲಿಯೇ ಶರಣಸತಿ ಲಿಂಗಪತಿಯೆಂಬ ಜ್ಞಾನ ತಲೆದೋರಿ ಶರಣವೆಣ್ಣಾಗಿ ಹುಟ್ಟಿದೆನಯ್ಯ. ಎನಗೆ ನಿನ್ನ ಬಯಕೆಯೆಂಬ ಸಿಂಗಾರದ ಸಿರಿಮುಡಿಯಾಯಿತು. ಎನಗೆ ನಿನ್ನ ನೋಡುವೆನೆಂಬ ಮುಗುಳ್ಮೊಲೆ ಮೂಡಿದವು. ಎನಗೆ ನಿನ್ನೊಳು ನುಡಿಯಬೇಕೆಂಬ ಉರವಣೆಯ ಸಂಪದದ ಜವ್ವನ ಕುಡಿವರಿಯಿತ್ತು. ಎನಗೆ ನಿನ್ನನೊಲಿಸಬೇಕೆಂಬ ಸಂಭ್ರಮದ ಕಾಂಚೀಧಾಮ ಕಟಿಸೂತ್ರ ನೇವುರ ನಿಡುಗೊಂಡೆಯವೆಂಬಾಭರಣ ಅನುಲೇಪನ ವಸ್ತ್ರಂಗಳೆನಗೆ ಅಲಂಕಾರವಾಯಿತ್ತು. ಭಕ್ತಿಯೆಂಬ ವಿರಹಾಗ್ನಿ ಎನ್ನ ಹೃದಯಕಮಲದಲ್ಲಿ ಬೆಳೆದು ಬೀದಿವರಿದು ನಿಂತಲ್ಲಿ ನಿಲಲೀಸದಯ್ಯ. ಕುಳಿತಲ್ಲಿ ಕುಳ್ಳಿರಲೀಸದಯ್ಯ. ಮನ ನಿಂದಲ್ಲಿ ಮನೋಹರವಪ್ಪುದಯ್ಯ. ಅಂಗ ಮನ ಪ್ರಾಣ ನೇತ್ರ ಚಿತ್ತಂಗಳೊಳು ಪಂಚಮುಖವೆಂಬ ಪಂಚಬಾಣಂಗಳು ನೆಟ್ಟವಯ್ಯ. ನಾನು ಧರೆಯೊಳುಳಿವುದರಿದು. ಪ್ರೇಮದಿಂ ಬಂದು ಕಣ್ದುಂಬಿ ನೋಡಿ ಮನವೊಲಿದು ಮಾತಾಡಿ ಕರುಣದಿಂ ಕೈವಿಡಿದು ಅಕ್ಕರಿಂದಾಲಂಗಿಸಿ ದಿಟ್ಟಿಸಿ ಬೊಟ್ಟಾಡಿ ಲಲ್ಲೆವಾತಿಂ ಗಲ್ಲವ ಪಿಡಿದು ಪುಷ್ಪ ಪರಿಮಳದಂತೆ ನಾನು ನೀನುಭಯವಿಲ್ಲದಂತೆ ಕೂಡೆನ್ನ ಪ್ರಾಣೇಶನೇ. ಕೂಡಿದಿರ್ದೊಡೆ ಗಲ್ಲವ ಪಿಡಿ. ಪಿಡಿಯದಿರ್ದೊಡೆ ಬೊಟ್ಟಾಡು. ಬೊಟ್ಟಾಡದಿರ್ದೊಡೆ ಆಲಂಗಿಸು. ಆಲಂಗಿಸದಿರ್ದೊಡೆ ಕೈವಿಡಿ. ಕೈವಿಡಿಯದಿರ್ದೊಡೆ ಮಾತಾಡು. ಮಾತಾಡದಿರ್ದೊಡೆ ನೋಡು. ನೋಡದಿರ್ದೊಡೆ ಬಾ. ಬಾರದಿರ್ದೊಡೆ ಪ್ರಮಥಗಣಂಗಳೊಡನೆನ್ನವಳೆಂದು ನುಡಿ. ನುಡಿಯದಿರ್ದೊಡೆ ನಿನ್ನ ಮನದಲ್ಲಿ ನನ್ನವಳೆಂದು ಭಾವಿಸು. ಭಾವಿಸದಿರ್ದೊಡೆ ಪುಣ್ಯ ಕಣ್ದೆರೆಯದು. ಕರ್ಮ ಕಾಂತಿಯಪ್ಪುದು. ಕಾಮ ಕೈದುಗೊಂಬ, ಕಾಲ ಕಲಿಯಪ್ಪ. ಭವಕ್ಕೆ ಬಲ್ಮೆ ದೊರೆವುದು. ಇಂತೀ ಐವರು ಎನಗೆ ಅವಾಂತರದೊಳಗಾದ ಹಗೆಗಳಯ್ಯ, ಇವರೆನ್ನ ತಿಂದುತೇಗಿ ಹಿಂಡಿ ಹಿಪ್ಪೆಯಮಾಡಿ ನುಂಗಿ ಉಗುಳ್ದು ಹಿಂದಣ ಬಟ್ಟೆಗೆ ನೂಂಕುತಿಪ್ಪರಯ್ಯ. ಹೊಗಲಂಜುವೆನಯ್ಯ. ಹೋದರೆ ಚಂದ್ರಸೂರ್ಯಾದಿಗಳುಳ್ಳನಕ್ಕ ನಿನ್ನ ನೆನವ ಮನಕ್ಕೆ ನಿನ್ನ ಕೊಂಡಾಡುವ ಬಾಯ್ಗೆ ನಿನ್ನ ನೋಡುವ ಕಂಗಳಿಗೆ ಸೆರೆ ಸಂಕಲೆಯಪ್ಪುದಯ್ಯ. ಇಂತಿವಂ ತಿಳಿದು ನಿನ್ನ ಮನದೊಳು ನನ್ನವಳೆಂದರೆ ದಿವಾರಾತ್ರೆಯುಳ್ಳನ್ನಬರ ಎನ್ನ ಮನ ಜಿಹ್ವೆ ನೇತ್ರಂಗಳಿಗೆ ಬಂಧನಗಳೆಂಬಿವು ಮುಂಗೆಡುವುವಯ್ಯ. ನಿನ್ನನು ನೆನೆನೆನೆದು ನನ್ನ ಮನ ಬೀಗಿ ಬೆಳೆದು ತಳಿರಾಗಿ ಹೂ ಮಿಡಿಗೊಂಬುದಯ್ಯ. ನಿನ್ನ ಹಾಡಿ ಹಾಡಿ ನನ್ನ ಜಿಹ್ವೆ ಅಮೃತಸಾಗರದೊಳೋಲಾಡುತ್ತಿಪ್ಪುದಯ್ಯ. ನಿನ್ನಂ ನೋಡಿ ನೋಡಿ ಕಂಗಳು ನಿಜಮೋಕ್ಷಮಂ ಪಡೆವುವಯ್ಯ. ನಾನು ಈರೇಳು ಲೋಕಕ್ಕೆ ಬರುವ ಹಾದಿ ಹಾಳಾಗಿಪ್ಪುದಯ್ಯ. ಶತ್ರುಗಳೆನಗೆ ಮಿತ್ರರಪ್ಪರಯ್ಯ. ಭವದ ಬಳ್ಳಿ ಅಳಿವುದು. ಕಾಲಿನ ಕಲಿತನ ಕೆಡುವುದು. ಕಾಮನ ಕೈದು ಖಂಡಿಸುವುದು. ಕರ್ಮದ ಕಾಂತಿ ಕರಗುವುದು. ಪುಣ್ಯದ ಕಣ್ಣು ಬಣ್ಣಗೆಡುವುದಯ್ಯ. ನಿನಗೊಲಿದವರ ನಿನ್ನಂತೆ ಮಾಡು ಕೃಪಾಕರನೆ. ನಿನಗೆ ಮೆಚ್ಚಿದೆನಯ್ಯ. ನಿನ್ನ ಮೆಚ್ಚಿಸಿಕೊಳ್ಳಲರಿಯದ ಮುಗ್ಧವೆಣ್ಣಿನ ಪತಿಭಕ್ತಿಯಂ ಸಾಧಿಸು. ಎನ್ನವಸ್ಥೆಯಂ ಲಾಲಿಸು, ನಿನ್ನ ಶ್ರೀಪಾದಪದ್ಮದೊಳಗೆನ್ನನೊಡಗೂಡಿಸು. ಎನ್ನ ಬಿನ್ನಪಮಂ ಲಾಲಿಸು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಜ್ವರ ಪೀಡಿಸಿದ ಮನುಜರಿಗೆ ನೊರೆವಾಲು ಸೊಗಸುವದೆ? ಭವಜನ್ಮದಲ್ಲಿ ಬರುವ ಕ್ರೂರಕರ್ಮಿಗಳಿಗೆ ಶಿವಾಚಾರವ ಹೇಳಿದಡೆ ಹಗೆಯ ಮಾಡುವರು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಗುರುಮಾರ್ಗಾಚಾರ ಷಟ್ಸ್ಥಲಮಾರ್ಗವಿಡಿದ ಪ್ರಸಾದಿಗಳು ಲಘುಶಂಕೆಯ ಮಾಡಿದಡೂ ಸರಿಯೆ, ಭವಿಜನ್ಮಾತ್ಮರ ಕೂಡೆ ಮಾತನಾಡಿದಡೂ ಸರಿಯೆ, ಗುರುಪಾದೋದಕ[ದಿಂದಾದಡೂ ಸರಿಯೆ], ಲಿಂಗಪಾದೋದಕದಿಂದಾದಡೂ ಸರಿಯೆ, ಆರು ವೇಳೆ ಆಚಮನ ಮಾಡುವದು. ಇದ ಮೀರಿ, ಜಿಹ್ವೆಯಲ್ಲಿ ಬರುವ ಸತ್ಯೋದಕದ ಗುಟುಕ ಕೊಳಲಾಗದು. ಬಹಿರ್ಭೂಮಿಗೆ ಹೋದ ಬಳಿಕ, ಸ್ನಾನವಿಲ್ಲದೆ ಲಿಂಗಾರ್ಚನೆ, ಲಿಂಗಾರ್ಪಣಕ್ರಿಯೆಗಳನಾಚರಿಸಲಾಗದು. ಮೀರಿ ಮಾಡಿದಡೆ, ಭೂತಪ್ರಾಣಿಯೆಂಬೆನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಂತರಂಗದಲ್ಲಿ ಅರಿಯದಿರ್ದ ಪರಮಮಹಾಲಿಂಗವು ಗುರುಮುಖದಿಂದೆ ಕರ ಮನ ಭಾವದಲ್ಲಿ ಥಳಥಳಿಸಿ ಬೆಳಗುತ್ತಿರಲು, ಅಲ್ಲಿಯೇ ಮುಕ್ತಿಯ ಪಡೆದಾನಂದಿಸಲರಿಯದೆ, ಕಾಶಿ ಗೋಕರ್ಣ ರಾಮೇಶ ನದಿ ಕಡಲತೀರವೆಂಬ ಪುಣ್ಯಕ್ಷೇತ್ರಂಗಳೆಂದು ಕಾಗೆ ಶಿಖರವನೇರಿ ಕರ್ರೆಂದು ಹೋದಂತೆ ಕಂಡರೇನು ಕಾಣಿಸಿಕೊಂಡರೇನು ಹೋಗಿ ಬರುವ ಮಾರ್ಗ ತಪ್ಪದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮನವಿಕಾರ ಸುಟ್ಟದನು ಮನವಿಕಾರದ ಭ್ರಮೆಯ ಹೋರಟೆಯಾಗದೆಂ ಬನುವಿನಿಂ ತ್ರಿಲೋಕಯೆಲ್ಲ ಭಂಗಿತರಾಗಿ ಜನನ ಮರಣಕೆ ಬರುವ ಮನವು ನಿರ್ಮನವಾಗಲವ ಸತ್ಯ ನಿತ್ಯ ಶರಣ. ಪದ :ಹರಿದು ಮರ್ಕಟನ ವಿಕಾರಕಿಂದಲಿ ಮೇಣು ಸುರೆ ಸವಿದವನ ವಿಕಾರವದರಿಂದ ಧ ತ್ತುರಿಯ ಸೇವಿಸಿದವನ ವಿಕಾರಯಿವು ತ್ರಿವಿಧಕೆ ಗೌರವಂ ಮನವಿಕಾರ ಚರಿಯ ಮದದ ಅಮಲು ತಲೆಗೇರಿ ತಾಮಸದಲಿಂ ಗಿರಿಯಂಧಕನವೋಲಿನಂತೆ ದೇವತಾ ಸತ್ಯ ಪುರುಷರುಂ ಶಿವಜ್ಞಾನ ಹೊಲಬನರಿಯದೆ ಕೆಟ್ಟುದನೇನ ಹೊಗಳ್ವೆ ನಾನು | 1 | ಹರಿಯ ಮುಂದುಗೆಡಿಸಿ ಅಜನ ಶಿರವ ಕಳೆಸಿ ಸುರನ ಮೈಯೋನಿಯಂ ಮಾಡಿ ದೇವರ್ಕಳಂ ನೆರೆ ಕೆಡಿಸಿ ಯತಿ ಸಿದ್ಧಸಾಧ್ಯರೆಲ್ಲರ ಸೆರೆಯ ಹಿಡಿದು ಭಂಗಿತರ ಮಾಡಿ ಧರೆಯ ಮನುಜರ ತಿಂದು ತೇಗಿ ಕಾಡುವ ಮನವ ನಿರಸನಮಾಡಿ ನಿರ್ಮೋಹಿಯಾಗಿಹ ಸತ್ಯ ಶರಣರಡಿಧೂಳಿಯ ಚಮ್ಮಾವುಗೆಯ ಪೊರೆವೆನೆನಗಿದೆ ಸತ್ಯ ಮುಕ್ತಿ ಕಂಡಾ |2| ಇಳೆಪತಿಗೆ ಮಂತ್ರಿ ತಾ ಮುಖ್ಯವಾದಂತೆ ಕಾಯ ದೊಳು ಚರಿಸುವ ಜೀವ ಪ್ರಾಣದ್ವಯ ದಶವಾಯು ಗಳು ಅಷ್ಟಮದ ಸಪ್ತವ್ಯಸನ ಅರಿವರ್ಗ ಚತುರಂತಃಕರಣವಿಷ್ಟೆಲ್ಲಕೆ ಸಲೆ ಮನಂ ಮುಖ್ಯವಾಗಿಯೂ ಪಾಪ ಅನ್ಯಾಯವ ಗಳಿಸಿ ಯಮನಿಂಗೆ ಗುರಿಮಾಡಿ ಬಂಧಿಸಿ ಜನರ ಕೊಲ್ಲಿಸುತಿಹ ವಿಧಿಗಂಜಿ ನಿಮ್ಮ ಮೊರೆಹೊಕ್ಕೆನೆಲೆ ಕಾಯೋ ಶಂಭುವೆ. | 3 | ಚಣಚಣಕ್ಕೆ ಪಾತಾಳಲೋಕಕೈದುವ ಮನಂ ಚಣಚಣಕ್ಕೆ ಆಕಾಶದತ್ತ ಹಾರುವ ಮನಂ ಚಣಚಣಕ್ಕೆ ಸಪ್ತಸಮುದ್ರವ ಚರಿಸಿಬರುವುದೀ ಮನಮರುತ ಸರ್ವಾಂಗದಿ ಚಣಕೊಂದು ಬುದ್ಧಿಯ ನೆನದು ಕಾಡುವ ಮನದ ಗುಣದಿಂದ ನಾ ಕರ್ಮಶರಧಿಯೊಳು ಮುಣಗಿದೆನು ತ್ರಿಣಯ ನೀ ಕೈವಿಡಿದು ತೆಗೆದು ರಕ್ಷಿಸು ಎನ್ನ ಕರುಣಾಳು ದುರಿತಹರನೆ |4 | ಮನದಿಂದೆ ನೊಂದೆ ನಾ ಮನದಿಂದೆ ಬೆಂದೆ ನಾ ಮನದಿಂದ ಕಂದಿ ಕುಂದಿಯೆ ಕುಸಿದು ಭವಗಿರಿಯ ನನುದಿನಂ ಸುತ್ತುತಿರ್ದೆನು ಅಂಧಕನ ತೆರದಿ ಮನದ ನಸು ಗುನ್ನಿ ಚುರಿಚಿತನವು ಸರ್ವಾಂಗವೆಲ್ಲವ ಕೊಂಡು ತಿನಿಸೆದ್ದು ಮನದ ಗಂಧೆಯ ತುರಿಸಿ ತುರಿಸನೇ ಹಂಬಲಿಸಿ ಕನಲುತಿರ್ದೆನು ಎನ್ನ ಗುಣವ ನೋಡದೆ ಕಾಯೋ ಕಾಯೋ ಕರುಣಾಳುವೆ |5| ಪಾಪಿಮನ ಠಕ್ಕಮನ ಸರ್ವರೊಳು ಕೋಪಿಮನ ಕುಕ್ಕಮನ ಕಾಕುಮನ ಜಾಪಿಮನ ಹೇವಮನ ಹೆಬಗಮನ ಗುಣಧರ್ಮಕರ್ಮದಿಂದ ತಾಪಸಬಡುತಿರ್ದೆ ಗಾಯವಡೆದ ಉರಗ ನಾಪರಿಯಲೆನ್ನ ನೆರಳಿಸಿ ಒರಲಿಸುವ ಮನದ ರೂಪನಳಿದು ಜ್ಞಾನವಿತ್ತು ಸಲವಯ್ಯಾ ಚಿದ್ರೂಪ ಚಿನ್ಮಯ ಶಂಭುವೆ. | 6 | ಕೂಳಮನ ಕುರಿಮನ ಸರ್ವಚಾಂ ಡಾಲಿಮನ ಪರಧನ ಪರಸ್ತ್ರೀಯರನ್ಯಕ್ಕೆ ಕೋಳುಗೊಂಬುವ ಹೆಡ್ಡಮನ ಜಿಡ್ಡುಮನ ಜಾಳುಮನ ಹಾಳುಮನದ ಪಾಳೆಯವು ಹಲವು ಪರಿಯ ಮನದ ಗಾಡಿಗೆ ಸಿಲ್ಕಿ ಕಾಲಕರ್ಮಕ್ಕೆ ಗುರಿಯಾದೆನಿದ ಪರಿಹರಿಸಿ ಶೂಲಿ ಸರಸಿಜನ ಕಪಾಲಿ ಶಿರಮಾಲಿ ರಕ್ಷಿಸು ಕರುಣಾಂಬುನಿಧಿ ಗಿರಿಜೇಶನೆ |7| ಅಂಗಗೂಡಿನೊಳು ಮನಪಕ್ಷಿ ಹೊರಗಿರುವ ಪ ಕ್ಕಂಗಳೆರಡರೊಳು ಉಡುಪತಿ ಭಾನುವಂ ಪಿಡಿದು ಜಂಗಿಟ್ಟು ಭೂಯ್ಯೋಮ ಮಧ್ಯದೊಳು ಚರಿಸುತಿರಲೆತಿ ಸಿದ್ಧ ಸಾಧ್ಯರೆಲ್ಲ ಭಂಗಬಡುವರು ಮನವೆಂಬ ಪಕ್ಷಿಯ ಮುರಿದು ನುಂಗಬಲ್ಲಡೆ ಸತ್ಯಶಿವಯೋಗಿ ಶರಣ ನಿ ರ್ಭಂಗ ನಿರ್ಲೇಪ ನಿರ್ಮನ ನಿರಾಭಾರಿಯಾಗಿಹರೆನ್ನ ಪ್ರಾಣಲಿಂಗ. | 8 | ಹರನ ಶ್ರೀಪಾದದೊಳು ಮನವನಿಟ್ಟಿಹ ಸತ್ಯ ಶರಣಬಸವೇಶ ಪ್ರಭುರಾಯ ಮೋಳಿಗೆ ಮಾರ ಗುರುಭಕ್ತ ನೆಂಬಣ್ಣ ದಾಸಿ ಕೇಶಯ್ಯನೋಹಿಲದೇವನುದುಟಯ್ಯ ಮರುಳಶಂಕರ ಮುಖ್ಯವಾದ ಪ್ರಮಥರ ದಿವ್ಯ ಚರಣದಲಿ ಮನವ ಮಗ್ನಿಸಿದ ದಾಸೋಹಿಗಳ ವರಪ್ರಸಾದಕ್ಕೆ ಯೋಗ್ಯನ ಮಾಡು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 9 |
--------------
ಹೇಮಗಲ್ಲ ಹಂಪ
ಅರಿಬಿರಿದಿನಾಲಯದೊಳಗೆ ದೊರೆ (ಯದೆ) ತಿರಿತಿರಿಗಿ ಬರುವ ದುರದಿಕ್ಕಿಗಳನೊಲ್ಲ. ಕರುಕರತ ತಾಳತೋರಿ ಎನ್ನನಿಂಬುಗೊಂಡೆಯಲ್ಲಾ ನಿಜಗುಣಯೋಗಿ.
--------------
ನಿಜಗುಣಯೋಗಿ
ಒಂದು ದಾರಿಯ ಮೇಲೆ ಎರಡು ಮಿಕವಿಪ್ಪವು ನೋಡಾ. ಎರಡು ಮಿಕವಿಪ್ಪಲ್ಲಿ ಮೂರು ಕೇರಿಗಳಿಪ್ಪವು ನೋಡಾ. ನಾಲ್ವರು ಪುರುಷರು ಐವರ ಸಂಗವ ಮಾಡಿ, ಆರು ದೇಶವ ಪೊಕ್ಕು, ಏಳು ಸಾಗರವ ದಾಂಟಿ, ಅಷ್ಟಕುಲ ಪರ್ವತವ ಮೆಟ್ಟಿ, ಒಂಬತ್ತು ದ್ವಾರಂಗಳ ದಾಂಟಿ, ಹತ್ತನೆಯ ಮನೆಯಲ್ಲಿ ನಿಂದು, ಬರಿದಾದ ಮನೆಗೆ ಹೋಗಿ ಬರುವ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->