ಆಗ ಹುಟ್ಟಿ ಬೇಗ ಸಾವ ಕಾಯಗೊಂಡ ಮಾನವಾ, ನೀ ದೇವರೆನಿಸಿಕೊಂಬುದೊಂದು ಆವುದಂತರ ಹೇಳಾ ? ದೇವರು ಸಾವಡೆ, ದೇವರಿಗೂ ಸಾವರಿಗೂ ಆವುದಂತರ ಹೇಳಾ ? ದೇವರಿಗೆ ದೇವಲೋಕ, ಮಾನವರಿಗೆ ಮತ್ರ್ಯಲೋಕ, ಗುಹೇಶ್ವರ ಅಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ.
ಬೇಗ ಬೇಗನೆ ಗತಿಪಥದ ಜ್ಞಾನವ ಮಾಡಿಕೊಂಡು ನೀಗಿರೊ ನಿಮ್ಮ ಭವಬಂಧನದ ಸಾಗರವನು. ಪ್ರಾಣತ್ಯಾಗವು ಈಗಲೋ ಆಗಲೋ ಯಾವಾಗಲೋ ಎಂದರಿಯಬಾರದು. ರೋಗ ರುಜೆಗಳಿಗೆ ಅಗರವು ನಿಮ್ಮ ಒಡಲು. ತನು-ಮನ-ಪ್ರಾಣವ ನೆಚ್ಚದಿರು, ನಾಗಭೂಷಣನ ಪಾದಪೂಜೆಯ ಮಾಡಿ, ಶಿವಯೋಗದಲಿ ಲಿಂಗವನೊಡಗೂಡಿ ಸಾಗಿ ಹೋಗುವವರನು ಭವಗೇಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ.
ಗಾಳಿ ಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗ ಬೇಗ ! ಗಾಳಿ ನಿಮ್ಮಿಚ್ಛೆಯಲ್ಲ ಕೇಳಿರೋ ಜಾಳಮನುಜರಿರಾ. ಅಂಗಕ್ಕೆ ಅಳಿವು ಬರುವುದು ದೂರವಿಲ್ಲ ನೋಡಿರೋ. ``ತ್ವರಿತಂ ಜೀವಿತಂ ಯಾತಿ ತ್ವರಿತಂ ಯಾತಿ ಯೌವನಮ್ | ತ್ವರಿತಂ ಯಾತಿ ಪ್ರಖ್ಯಾತಿಃ ತಸ್ಮಾತ್ಪೂಜಯ ಶಂಕರಮ್ ||'' ಇದನರಿದು ಬೇಗ ಬೇಗ ಲಿಂಗವ ಪೂಜಿಸಿರೊ ! ಬೇಗ ಬೇಗ ಜಂಗಮವನೊಲಿಸಿರೋ ! ಅರುವುಳ್ಳ ಕಾಲಕ್ಕೆ ಬೇಗ ಬೇಗ ನಮ್ಮ ಅಖಂಡೇಶ್ವರಲಿಂಗವ ಕೂಡಿರೋ.
ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೆ ? ಆತ್ಮನಿದ್ದಲ್ಲಿ ಅರಿಯದೆ ಹಸು ಸತ್ತ ಮತ್ತೆ ಮೋಕ್ಷವನರಸಲುಂಟೆ ? ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದ ತಂದೆ. ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ. ಆತ್ಮಂಗೆ ಭವವಿಲ್ಲ. ಅರಿವಿಂಗೆ ತುದಿಮೊದಲಿಲ್ಲ. ಇದು ನಿರಿಗೆ ಕೊಳಬಲ್ಲಡೆ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ರೋಗ ಹೋಯಿತ್ತು, ಬೇಗ ಅರಿದುಕೊಳ್ಳಿ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
ಜ್ಞಾನಾಮೃತಜಲನಿಧಿಯ ಮೇಲೆ, ಸಂಸಾರವೆಂಬ ಹಾವಸೆ ಮುಸುಕಿಹುದು. ನೀರ ಮೊಗೆವರು ಬಂದು ನೂಕಿದಲ್ಲದೆ ತೆರಳದು. ಮರಳಿ ಮುಸುಕುವುದ ಮಾಣಿಸಯ್ಯಾ. ಆಗಳೂ ಎನ್ನುವ ನೆನೆವುತ್ತಿರಬೇಕೆಂದು ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು, ದಿವಾರಾತ್ರಿ ತನ್ನನರಿಯಬೇಕೆಂದು. ಕೆರೆಯ ನೀರನುಂಡು ತೊರೆಯ ನೀರ ಹೊಗಳುವ ಅರೆಮರುಳರ ಮೆಚ್ಚುವನೆ ನಮ್ಮ ಕೂಡಲಚೆನ್ನಸಂಗಮದೇವ ?
ತಟಿದಂಕುರದಂತೆ ಕ್ಷಣದಲ್ಲಿ ತೋರಿಯಡಗುವ ಸಂಸಾರ. ಇದರಲ್ಲೇನು ಲೇಸಕಂಡು, ನಿತ್ಯಾನಂದ ಚಿದಾತ್ಮಸುಖವ ಬಿಡುವೆ? ಈ ಸಂಸಾರ ಸ್ಥಿರವಲ್ಲ. ಬೇಗ ಗುರು ಚರಣವ ದೃಢವಿಡಿ. ಕಾಬೆ, ಮುಂದೆ ನೀನು ಕೈವಲ್ಯವ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಹ ಸೌಖ್ಯವನು.
ಈ ಆಸೆಯೆಂಬವಳು ನೋಡಾ ಜಲ ಸಮುದ್ರಂಗಳಂ ಕಟ್ಟಿಸುವಳು, ಕ್ಷಣ ಬೇಗ ಮೂಷೆಗಳಂ ಮಾಡಿ ರಸಂಗಳಂ ಪಡೆವಳು. ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿನೊ ಕಪಿಲಸಿದ್ಧಮಲ್ಲಿಕಾರ್ಜುನ.