ಅಥವಾ

ಒಟ್ಟು 37 ಕಡೆಗಳಲ್ಲಿ , 8 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ವಿಶ್ವಾದ್ಥಿಕ ಮಹಾರುದ್ರನುತ್ಪತ್ಯವೆಂತೆಂದಡೆ : ಅನಂತ ಬ್ರಹ್ಮಾಂಡ ಅನಂತ ಕೋಟಿ ಲೋಕಧರನಾದ ಪರಾಪರನಾದ ಮಹಾಸದಾಶಿವನಾದವನು ತನ್ನ ನಿಜಜಾÕನ ಹಿರಿಣ್ಯಗರ್ಭದಲ್ಲಿ ವಿಶ್ವಾದ್ಥಿಕ ಮಹಾರುದ್ರನಂ ನಿರ್ಮಿಸಿ ತನ್ನ ಪಂಚಮುಖದಿಂದ ಪೃಥ್ವಿ ತೇಜ ವಾಯುವಾಕಾಶವೆಂಬ ಮಹಾಭೂತ ಬ್ರಹ್ಮಾಂಡದೊಳು ಚತುರ್ದಶ ಭುವನಂಗಳು, ಸಪ್ತ ಕುಲಪರ್ವತಂಗಳು ಮೊದಲಾದ ಅನಂತ ಗಿರಿ ಗಹ್ವರಂಗಳಂ, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗಬ್ರ್ಥೀಕರಿಸಿಕೊಂಡು ನಿರ್ಮಿಸೆಂದು ಬೆಸನಂ ಕೊಟ್ಟು ಕಳುಹಲು, ಮಹಾಪ್ರಸಾದವೆಂದು ಕೈಕೊಂಡು ಆ ಭೂತಬ್ರಹ್ಮಾಂಡದೊಳು ನಿರ್ಮಿಸಿದನೆಂತೆಂದಡೆ : ಜಲದ ಮೇಲೆ ಕಮಠನ ನಿರ್ಮಿಸಿದ. ಆ ಕಮಠನ ಮೇಲೆ ಮಹಾವಾಸುಗಿಯಂ ನಿರ್ಮಿಸಿದ. ಆ ಮಹಾವಾಸುಗಿಯ ಮೇಲೆ ಅಷ್ಟದಿಗ್ಗಜಂಗಳ ನಿರ್ಮಿಸಿದನು ಆ ವಿಶ್ವಾದ್ಥಿಕ ಮಹಾರುದ್ರನು. ಆ ಅಷ್ಟದಿಗ್ಗಜಂಗಳ ಮೇಲೆ ಸಕಲವಾದ ಜೀವಂಗಳಿಗೂ ಸಕಲವಾದ ಪದಾರ್ಥಂಗಳಿಗೂ ಇಹಂತಾಗಿ ಮಹಾಪೃಥ್ವಿಯಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಮಹಾಮೇರುಪರ್ವತದ ತಾವರೆಯ ನಡುವಣ ಪೀಠಿಕೆಯ ಕ್ರಮದಲ್ಲಿ ನಡೆಯ ಪ್ರಮಾಣು ಹದಿನಾರು ಸಾವಿರದ ಯೋಜನ ಪ್ರಮಾಣು. ಉದ್ದ ಎಂಬತ್ನಾಲ್ಕು ಸಾವಿರ ಯೋಜನದುದ್ದ. ವಿಸ್ತೀರ್ಣ ಮೂವತ್ತೆರಡು ಸಾವಿರಯೋಜನ ಪ್ರಮಾಣು ಉಂಟಾಗಿಹಂತಾಗಿ ಮೇರುತನಕ ಸುತಾಳ ತಾಳ, ಪಂಚಾಶತಕೋಟಿ ಸೋಪಾನಂಗಳುಂಟಾಗಿ ದಿವ್ಯರೂಪಾಗಿ ನಿರ್ಮಿಸಿದನು. ಆ ಮೇರುವಿನ ಪೂರ್ವದೆಸೆಯಲ್ಲಿ ಪದ್ಮರಾಗವು, ಆಗ್ನೆಯಲ್ಲಿ ವಜ್ರ, ದಕ್ಷಿಣದಲ್ಲಿ ಮೌಕ್ತಿಕ, ನೈರುತ್ಯಭಾಗದಲ್ಲಿ ನೀಲ, ಪಶ್ಚಿಮದ ದೆಸೆಯ ವಿಭಾಗದಲ್ಲಿ ವೈಡೂರ್ಯ, ವಾಯುವ್ಯದಲ್ಲಿ ಚಿಂತಾಮಣಿ, ಉತ್ತರದಲ್ಲಿ ರತ್ನಕನಕ, ಈಶಾನ್ಯದಲ್ಲಿ ತಾಮ್ರ, ಮೇರುವಿನ ಮಧ್ಯದಲ್ಲಿ ಪುಷ್ಯರಾಗ ಜಾÕನ ದೃಷ್ಟಿಗಳುಂಟಾಗಿ ಪರಿಪೂರಿತಗಳಿಹಂತಾಗಿ ಗಿರಿಯ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಮೇಲುಳ್ಳ ವೃಕ್ಷಂಗಳೆಲ್ಲ ಕಲ್ಪವೃಕ್ಷಂಗಳು. ಆ ಮೇರುವಿನ ಮೇಲುಳ್ಳ ಮೃಗಂಗಳೆಲ್ಲ ಅಚಾಮಚರಿತ್ರಂಗಳು. ಆ ಮೇರುವಿನ ಮೇಲುಳ್ಳ ಗೋವೆಲ್ಲ ಕಾಮಧೇನುಗಳು. ಅಲ್ಲಿದ್ದ ಮನುಷ್ಯರೆಲ್ಲ ಪರಮಾತ್ಮರು. ಅಲ್ಲಿದ್ದ ಸ್ತ್ರೀಯರೆಲ್ಲ ದೇವಸ್ತ್ರೀಯರು. ಆಹಾರಂಗಳೆಲ್ಲ ಅಮೃತಾಹಾರ, ನೀರೆಲ್ಲ ರಜಸ್ತಳೇಯ ; ಅಲ್ಲಿಯ ಮಣ್ಣೆಲ್ಲ ಕಸ್ತೂರಿ ಕುಂಕುಮಾದಿಗಳೆನಿಸಿಕೊಂಬುದು. ಅಲ್ಲಿಯ ಕಾಷ್ಠಂಗಳೆಲ್ಲ ಸುಗಂಧಂಗಳು. ಆ ಮೇರುವಿನ ದೇವತೆಗಳಿಗೂ ಮುನಿಗಳಿಗೂ ಅನಂತ ಸಿದ್ಧರಿಗೂ ಅನಂತ ಯೋಗಿಗಳಿಗೂ ಜೋಗಿಗಳಿಗೂ ಪುರಂಗಳು ಗೃಹಂಗಳು ಗುಡಿಗಳು ಬಿಲದ್ವಾರಂಗಳುಂಟಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿಗೆ ನಾಲ್ಕು ಬಾಗಿಲು, ಎಂಟು ಸ್ವರ್ಣಕಂಡಿಗಳು, ಹದಿನಾರು ಮಕರತೋರಣಗಳು, ಮೂವತ್ತೆರಡು ಸೋಮವೀದಿಗಳು, ಅರವತ್ನಾಲ್ಕು ಸಂದುಗಳುಂಟಾಗಿ ಸರ್ವಸಂಪೂರ್ಣವಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿನ ಮಧ್ಯದಲ್ಲಿ ಶ್ರೀ ಮಹಾದೇವರಿಗೆ ಶಿವಪುರಮಂ ನಿರ್ಮಿಸಿದನು. ಪಂಚಸಹಸ್ರಯೋಜನ ಚತುಃಚಕ್ರಾಕಾರವಾಗಿ, ನವರತ್ನಖಚಿತವಾಗಿ, ಅಷ್ಟದಳವೇಷ್ಟಿತವಾಗಿ, ಅಷ್ಟಧ್ವಾನಂಗಳುಂಟಾಗಿ, ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ. ಪ್ರಮಥಗಣಂಗಳು, ನಂದಿ, ಮಹಾನಂದಿಕೇಶ್ವರ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖದಲ್ಲಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಬಲದ ದೆಸೆಯಲ್ಲಿ ಬ್ರಹ್ಮಪುರವು ತ್ರಿಕೋಣಾಕಾರವಾಗಿ ಅನಿಲಪ್ರಕಾರವೇಷ್ಟಿತವಾಗಿ, ಅಷ್ಟದ್ವಾರಂಗಳುಂಟಾಗಿ ಐನೂರು ಕೋಟಿ ಕನಕಗೃಹಂಗಳು ಅಸಂಖ್ಯಾತಕೋಟಿ ಮಹಾಋಷಿಗಳು ಒಡ್ಡೋಲಂಗಗೊಟ್ಟು, ನಾಲ್ಕು ವೇದಂಗಳು ಮೂರ್ತಿಬಾಂಧವರಾಗಿ ಸರಸ್ವತಿಸಮೇತವಾಗಿ ಬ್ರಹ್ಮದೇವರು ಪರಮಾನಂದಸುಖದೊಳಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ವಾಮಭಾಗದಲ್ಲಿ ವಿಷ್ಣುವಿಂಗೆ ವೈಕುಂಠವೆಂಬ ಪುರ ಚಕ್ರಾಕಾರವಾಗಿ ಪದ್ಮರಾಗಪ್ರಕಾಶವೇಷ್ಟಿತವಾಗಿ ಅಷ್ಟದ್ವಾರಂಗಳು ಹತ್ತುನೂರುಕೋಟಿ ಕನಕಗೃಹಂಗಳುಂಟಾಗಿ ಅನಂತಕೋಟಿ ಶಂಕ ಚಕ್ರ ಗದಾಹಸ್ತನಾಗಿ ವೇದ ಓಲೈಸಲಾಗಿ ಶ್ರೀಲಕ್ಷ್ಮೀ ಸಮೇತನಾಗಿ ವಿಷ್ಣು ಪರಮಾನಂದಸುಖದಲ್ಲಿಪ್ಪಂತೆ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಪೂರ್ವದೆಸೆಯಲ್ಲಿ ದೇವೇಂದ್ರಂಗೆ ಅಮರಾವತಿಯ ಪುರಮಂ ನಿರ್ಮಿಸಿದನು. ಆಗ್ನೇಯ ದೆಸೆಯಲ್ಲಿ ಅಗ್ನಿದೇವಂಗೆ ತೇಜೋವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ದಕ್ಷಿಣದಿಶಾಭಾಗದಲ್ಲಿ ಯಮದೇವಂಗೆ ಸಿಂಹಾವತಿಯ ಪುರಮಂ ನಿರ್ಮಿಸಿದನು. ನೈಋತ್ಯ ದಿಶಾಭಾಗದಲ್ಲಿ ನೈಋತ್ಯಂಗೆ ಕೃಷ್ಣವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಪಶ್ಚಿಮ ದಿಶಾಭಾಗದಲ್ಲಿ ವರುಣಂಗೆ ಜಂಜನಿತಪುರಮಂ ನಿರ್ಮಿಸಿದನು. ವಾಯುವ್ಯದಲ್ಲಿ ವಾಯುವಿಂಗೆ ಗಂಗಾವತಿಯಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಉತ್ತರದೆಶೆಯಲ್ಲಿ ಕುಬೇರಂಗೆ ಅಳಕಾಪುರಮಂ ನಿರ್ಮಿಸಿದನು. ಈಶಾನ್ಯದಿಶಾಭಾಗದಲ್ಲಿ ಈಶಾನ್ಯದೇವಂಗೆ ಧವಳಾವತಿಪುರಮಂ ಮೊದಲಾಗಿ ಸಮಸ್ತವಾದ ಪುರಗಳಂ ನಿರ್ಮಿಸಿದನು ವಿಶ್ವಾದ್ಥಿಯಕಮಹಾರುದ್ರನು. ಆ ಮಹಾಮೇರುವಿಂಗೆ ವಳಯಾಕೃತವಾಗಿ ಲವಣ ಇಕ್ಷು ಸುರೆ ಘೃತ ದದ್ಥಿ ಕ್ಷೀರ ಶುದ್ಧಜಲಂಗಳೆಂಬ ಸಪ್ತಸಮುದ್ರಂಗಳಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಸಮುದ್ರಂಗಳ ನಡುವೆ ಜಂಬೂದ್ವೀಪ, ಪ್ಲಕ್ಷದ್ವೀಪ, ಶುಕ್ಲದ್ವೀಪ, ಕುಶದ್ವೀಪ, ಶಾಕದ್ವೀಪ, ಶಾಲ್ಮಲೀದ್ವೀಪ, ಪುಷ್ಕರದ್ವೀಪ, ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ದ್ವೀಪಂಗಳಿಗೆ ವಳಯಾಕೃತವಾಗಿ ಮಲಯಜಪರ್ವತ, ನೀಲಪರ್ವತ, ಶ್ವೇತಪರ್ವತ, ಋಕ್ಷಪರ್ವತ, ರಮ್ಯಪರ್ವತ, ಉತ್ತರಕುರುಪರ್ವತ, ಸುಗಂಧಪರ್ವತ, ನಿರಾಕಾರಪರ್ವತ, ಉದಾರಪರ್ವತ, ಮಣಿಶಿಖರಪರ್ವತ, ಅರ್ಧಚಂದ್ರಪರ್ವತ, ಮಧುರಪರ್ವತ, ಮಣಿನಾಗಪರ್ವತ, ಮೈನಾಕಪರ್ವತ, ಉದಯಾದ್ರಿಪರ್ವತ, ತ್ರಿಪುರಾಂತಕಪರ್ವತ, ಶ್ರೀರಾಮಪರ್ವತ, ಮಾಲ್ಯವಂತಪರ್ವತ, ನಿಷಧಪರ್ವತ, ಹೇಮಕೂಟಪರ್ವತ, ನಿರಾಚಲಪರ್ವತ, ಗಂಧಾಚಲಪರ್ವತ, ನೀಲಾಚಲಪರ್ವತ, ಮಂದಾಚಲಪರ್ವತ, ಮೇರುಮಂದಿರಪರ್ವತ, ಶುಬರೀಶ್ವರಪರ್ವತ, ಕುಮುದಉದಯಾದ್ರಿ, ದೇವಕೂಟ, ವಿಂಧ್ಯಾಚಲ, ಪವನಾಚಲ, ಪರಿಯಾಚಲ, ಚಂದ್ರಾಚಲ, ಧಾರಾಚಲ, ಷಡುಲಕ್ಷ್ಮಿಗಿರಿ, ಮಾನಸಾಂತಗಿರಿ, ತಮಂಧಗಿರಿ, ಚಂದ್ರಗಿರಿ, ನಾಗಗಿರಿ, ಲಘುಗಿರಿ, ಮಕರಗಿರಿ, ದ್ರೋಣಗಿರಿ, ಅನಂತವಜ್ರಗಿರಿ, ಕಪಿಲಗಿರಿ, ನೀಲಗಿರಿ, ಪರಗಿರಿ, ತ್ರಿಪುರಗಿರಿ, ಸಿಂಹಗಿರಿ, ಶ್ರೀಕಂಠಗಿರಿ, ಚಕ್ರವಾಳಗಿರಿಪರ್ವತ, ಇಂದ್ರಗಿರಿಪರ್ವತ, ಲೋಕಪರ್ವತಂಗಳು ಮೊದಲಾದ ಪರ್ವತಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇದಕ್ಕೆ ದೇಶಂಗಳಾಗಬೇಕೆಂದು ಪಾಂಚಾಲ, ಬರ್ಬರ, ಮತ್ಸ್ಯ, ಮಗಧ, ಮಲೆಯಾಳ, ತೆಲುಂಗ, ಕಳಿಂಗ, ಕುಕರ, ಕೊಂಕಣ, ತ್ರಿಕರರಾಷ್ಟ್ರ, ಶ್ವಾಸಿನಿ, ಕಂಠರಹಿತ, ಕುತಿಷ್ಟ, ದಶಾರ್ಣ, ಕುರು, ಮುಖಸರ, ಕೌಸಯಿವರ್ಣ, ಆವಂತಿ, ಲಾಳ, ಮಹೇಂದ್ರ, ಪಾಂಡ್ಯ, ಸರ್ವೇಶ್ವರ, ವಿಷ್ಣು, ಶಾಂತಕ, ತುರಾದ್ರ, ಮಗಧಾದ್ರ, ವಿದೇಹ, ಮಗಧ, ದ್ರವಿಳ, ಕಿರಾಂತ, ಕುಂತಳ, ಕಾಮೀರ, ಗಾಂಧಾರ, ಕಾಂಭೋಜ, ಕೀಳುಗುಜ್ಜರ, ಅತಿದೃಷ್ಟ, ನೇಪಾಳ, ಬಂಗಾಳ, ಪುಳಿಂದ್ರ, ಜಾಳೇಂದ್ರ, ಕಲ್ವರ-ಇಂಥಾ ದೇಶಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇನ್ನು ಭೂಮಿಯಿಂದಂ ಮೇಲೆ ಮೇಘಮಂಡಲ ಮೊದಲಾಗಿ ಶಿವಾಂಡ ಚಿದ್ಬ ್ರಹ್ಮಾಂಡ ಕಡೆಯಾಗಿ ಎಲ್ಲಾ ಲೋಕಂಗಳಂ ನಿರ್ಮಿಸಿ, ಸಪ್ತಪಾತಾಳವ ನಿರ್ಮಿಸಿದನದೆಂತೆಂದಡೆ: ಅಲ್ಲಿ ಪೃಥ್ವಿಯ ಕೆಳಗೆ ಶತಕಯೋಜನದಲ್ಲಿ ಅತಳಲೋಕದಲ್ಲಿ ಇಶಿತಮಂಡಲಮಂ ನಿರ್ಮಿಸಿದನು. ಅತಳಲೋಕದಿಂದಂ ಕೆಳಗೆ ಕೋಟಿಯೋಜನದುದ್ದದಲ್ಲಿ ವಿತಳಲೋಕದಲ್ಲಿ ಸ್ವರ್ಣ ನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲು ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಸುತಳತೋಲಕದಲ್ಲಿ ಕೃಷ್ಣನಾಗಮಂಡಲಮಂ ನಿರ್ಮಿಸಿದನು. ಆ ಸುತಳಲೋಕದಿಂದಲು ಕೆಳಗೆ ರಸಾತಳಲೋಕದಲ್ಲಿ ರತ್ನನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ರಸಾತಳಲೋಕದಿಂದಲು ಕೆಳಗೆ ಚತುಃಕೋಟಿ ಯೋಜನದುದ್ದದಲ್ಲಿ ಮಹಾತಳಲೋಕದಿಂದಲು ಕೆಳಗೆ ಶತಕೋಟಿ ಯೋಜನದುದ್ದದಲ್ಲಿ ಪಾತಾಳಲೋಕದಲ್ಲಿ ಅವಿಷ್ಟಕೆ ಆಧಾರವಾಗಿ ಕಮಠನಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಕಮಠನ ಮೇಲೆ ಜಲಂಗಳಂ, ಕಮಲಂಗಳಂ, ಮಹಾಪೃಥ್ವಿಯಂ, ಮೇರುಪರ್ವತ ಸಮಸ್ತದೇವಾಸುರಂಗಳಂ ಮಹಾಪೃಥ್ವಿಯು ಸಮಸ್ತ ಸಪ್ತಸಮುದ್ರಂಗಳಂ, ಸಪ್ತದ್ವೀಪಂಗಳಂ ಮೊದಲಾದ ಲೋಕಾದಿಲೋಕ ಪರ್ವತಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲೂ ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಅತಳ ವಿತಳ ಸುತಳ ರಸಾತಳ ತಳಾತಳ ಮಹಾತಳ ಪಾತಾಳ ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನರ್ಲೋಕ, ತಪರ್ಲೋಕ, ಸತ್ಯರ್ಲೋಕ-ಇಂಥ ಲೋಕಂಗಳೆಂಬ ಹದಿನಾಲ್ಕು ಲೋಕಂಗಳಂ ನಿರ್ಮಿಸಿ ಮತ್ತೆ ಸ್ವರ್ಗ-ಮತ್ರ್ಯ-ಪಾತಾಳಗಳ ವಿವರಿಸಿ ನೋಡಿ ಆ ಲೋಕದವರಿಗೆ ವೇದಶಾಸ್ತ್ರಂಗಳಂ ನಿರ್ಮಿಸಿದನದೆಂತೆಂದಡೆ : ವೇದ ವೇದಾಂಗ, ಮಂತ್ರಶಾಸ್ತ್ರ, ತರ್ಕಶಾಸ್ತ್ರ, ಯೋಗಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ವೈದ್ಯಶಾಸ್ತ್ರ, ನೀತಿಶಾಸ್ತ್ರ, ಧರ್ಮಶಾಸ್ತ್ರ, ಶಕುನಶಾಸ್ತ್ರ, ಶಸ್ತ್ರಶಾಸ್ತ್ರ, ಶಿಲ್ಪಶಾಸ್ತ್ರ, ಜಲಶಾಸ್ತ್ರ, ಸಾಮುದ್ರಿಕಶಾಸ್ತ್ರ, ನೃಪತಿಶಾಸ್ತ್ರ, ಅಂಜನಶಾಸ್ತ್ರ, ರಸವೈದ್ಯಶಾಸ್ತ್ರ, ಬಿಲ್ಲುಶಾಸ್ತ್ರ, ಗೋಪಶಾಸ್ತ್ರ, ಮನುಷ್ಯಶಾಸ್ತ್ರ, ರಥಿಕಶಾಸ್ತ್ರ, ಅಂಗುಲಿಶಾಸ್ತ್ರ, ಶ್ರವಣಶಾಸ್ತ್ರ, ಗಂಧಪಾದ್ಯಶಾಸ್ತ್ರ, ಭುಜಗಶಾಸ್ತ್ರ, ಯೋಗಿಣಿಶಾಸ್ತ್ರ, ಯಕ್ಷಿಣಿಶಾಸ್ತ್ರ, ಶಬ್ದನೀತಿಶಾಸ್ತ್ರ, ಅಲಂಕಾರಶಾಸ್ತ್ರ, ವಿಶ್ವಶಾಸ್ತ್ರ, ಗಂಡಶಾಸ್ತ್ರ, ವ್ಯಾದ್ಥಿಶಾಸ್ತ್ರ, ಯುದ್ಧಶಾಸ್ತ್ರ, ಹಸರಶಾಸ್ತ್ರ, ಶುಂಭನಶಾಸ್ತ್ರ, ಮುಖಶಾಸ್ತ್ರ, ಬಂಧಶಾಸ್ತ್ರ, ಜಲಸ್ತಂಭಶಾಸ್ತ್ರ, ಅಗ್ನಿಶಾಸ್ತ್ರ, ಕರ್ಮಶಾಸ್ತ್ರ, ಪುರಾಣಿಕಶಾಸ್ತ್ರ, ಇಂಗಶಾಸ್ತ್ರ, ವೈದ್ಯಶಾಸ್ತ್ರ, ಇಂದ್ರಜಾಲ, ಮಹೇಂದ್ರಜಾಲ ಶಾಸ್ತ್ರಂಗಳು ಮೊದಲಾದ ಚೌಷಷ್ಠಿ ವಿದ್ಯಂಗಳ ನಿರ್ಮಿಸಿದನು ನೋಡಾ [ಅಪ್ರಮಾಣ] ಕೂಡಲಸಂಗಯ್ಯನ ಶರಣ ವಿಶ್ವಾದ್ಥಿಕಮಹಾರುದ್ರನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ ಪಂಚಭೂತ ಬ್ರಹ್ಮಾಂಡಕಪಾಲದೊಳು ಚತುರ್ದಶಭುವನಂಗಳು, ಸಪ್ತಸಮುದ್ರಂಗಳು, ಸಪ್ತದ್ವೀಪಂಗಳು, ಸಪ್ತಕುಲಪರ್ವತಂಗಳು, ಸಮಸ್ತ ಗ್ರಹರಾಶಿ ತಾರಾಪಥಂಗಳಿಹ ಕ್ರಮವೆಂತೆಂದಡೆ : ಆ ಭೂತಬ್ರಹ್ಮಾಂಡಕಪಾಲದಲ್ಲಿ ಅತಳಲೋಕವಿಹುದು. ಆ ಅತಳಲೋಕದಿಂದ ಮೇಲೆ ವಿತಳಲೋಕವಿಹುದು. ಆ ವಿತಳಲೋಕದಿಂದ ಮೇಲೆ ಸುತಳಲೋಕವಿಹುದು. ಆ ಸುತಳಲೋಕದಿಂದ ಮೇಲೆ ತಳಾತಳಲೋಕವಿಹುದು. ಆ ತಳಾತಳಲೋಕದಿಂದ ಮೇಲೆ ರಸಾತಳಲೋಕವಿಹುದು. ಆ ರಸಾತಳಲೋಕದಿಂದ ಮೇಲೆ ಮಹಾತಳಲೋಕವಿಹುದು. ಆ ಮಹಾತಳಲೋಕದಿಂದ ಮೇಲೆ ಪಾತಾಳಲೋಕವಿಹುದು. ಆ ಪಾತಾಳಲೋಕದಿಂದ ಮೇಲೆ ಜಲಪ್ರಳಯವಿಹುದು. ಆ ಜಲಪ್ರಳಯದ ಮೇಲೆ ಮಹಾಕಮಠನಿಹುದು. ಆ ಮಹಾಕಮಠನ ಮೇಲೆ ಮಹಾವಾಸುಗಿ ಇಹುದು. ಆ ಮಹಾವಾಸುಗಿಯ ಸುತ್ತುವಳಯಾಕೃತವಾಗಿ ಅಷ್ಟದಿಕ್‍ಮಹಾಗಜಂಗಳಿಹವು. ಆ ಅಷ್ಟದಿಕ್‍ಮಹಾಗಜಂಗಳ ಮೇಲೆ ಭೂಲೋಕವಿಹುದು. ಆ ಭೂಲೋಕದಲ್ಲಿ ಸಪ್ತಸಮುದ್ರಂಗಳು, ಸಪ್ತದ್ವೀಪಂಗಳು, ಸಪ್ತಕುಲಪರ್ವತಂಗಳಿಹವು. ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ ಸುತ್ತುವಳಯಾಕೃತವಾಗಿ ಸಮಸ್ತ ಲೋಕಾಲೋಕ ಪರ್ವತವಿಹುದು. ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ ವಿಸ್ತೀರ್ಣವೆಂತೆಂದಡೆ : ಪಂಚಾಶತಕೋಟಿ ವಿಸ್ತೀರ್ಣದ ಮಧ್ಯಭೂಮಿ. ಆ ಮಧ್ಯಭೂಮಿ ಮಂಡಲವಳಯದಲ್ಲಿ ಮಹಾಮೇರುಪರ್ವತದ ವಿಸ್ತೀರ್ಣವೆಂತೆಂದಡೆ : ಒಂದುಕೋಟಿಯು ಇಪ್ಪತ್ತಾರುಲಕ್ಷದ ಮೇಲೆ ಎಂಬತ್ತೈದುಸಾವಿರ ಯೋಜನಪ್ರಮಾಣು. ಆ ಮೇರುಮಂದಿರದ ಶಿರದ ಮೇಲೆ ಮೂವತ್ತುಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ನಂದಿವಾಹ ಗಣಂಗಳು, ದ್ವಾದಶಾದಿತ್ಯರು, ನಾರದಮುನಿ ಯೋಗೀಶ್ವರರು, ಅಷ್ಟದಿಕ್ಪಾಲರು, ಏಕಾದಶರುದ್ರರು ಮುಖ್ಯವಾದ ಅಸಂಖ್ಯಾತ ಮಹಾಗಣಂಗಳು ಶಿವಸುಖ ಸಂಗೀತ ವಿನೋದದಿಂದ ರಾಜ್ಯಂಗೆಯ್ಯುತ್ತಿರಲು, ಆ ಮೇರುಮಂದಿರದ ಶಿಖರದ ಕೆಳಗೆ ಜಂಬೂದ್ವೀಪವಿಹುದು. ಆ ಜಂಬೂದ್ವೀಪವು ಒಂದು ಲಕ್ಷದ ಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. ಒಂದುಲಕ್ಷದ ಮೇಲೆ ಇಪ್ಪತ್ತೈದುಸಾವಿರ ಯೋಜನದಗಲವಾಗಿ ಲವಣಸಮುದ್ರವು ಆ ಜಂಬೂದ್ವೀಪಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಎರಡು ಲಕ್ಷದ ಮೇಲೆ ಐವತ್ತುಸಾವಿರ ಯೋಜನ ಪ್ರಮಾಣದಲ್ಲಿ ಇಕ್ಷುಸಮುದ್ರವು ಆ ಪ್ಲಕ್ಷದ್ವೀಪಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಮೂರುಲಕ್ಷದ ಮೇಲೆ ಎಪ್ಪತ್ತುಸಾವಿರದಯಿನೂರು ಯೋಜನಪ್ರಮಾಣದಗಲವಾಗಿ ಕುಶದ್ವೀಪವಂ ಆ ಇಕ್ಷುಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ನಾಲ್ಕುಲಕ್ಷದ ಮೇಲೆ ಮೂರುಸಾವಿರ ಯೋಜನಪ್ರಮಾಣದಗಲವಾಗಿ ಸುರೆಯ ಸಮುದ್ರವು ಆ ಕುಶದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಐದುಲಕ್ಷ ಯೋಜನಪ್ರಮಾಣದಗಲವಾಗಿ ಶಾಕದ್ವೀಪವು ಆ ಸುರೆಯ ಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಹದಿನಾಲ್ಕುಲಕ್ಷ ಯೋಜನಪ್ರಮಾಣದಗಲವಾಗಿ ಘೃತಸಮುದ್ರವು ಆ ಶಾಕದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಇಪ್ಪತ್ತುಲಕ್ಷ ಯೋಜನಪ್ರಮಾಣದಗಲವಾಗಿ ಶಾಲ್ಮಲೀದ್ವೀಪ ಆ ಘೃತಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಇಪ್ಪತ್ತು ಲಕ್ಷ ಯೋಜನಪ್ರಮಾಣದಗಲವಾಗಿ ದಧಿಸಮುದ್ರವು ಆ ಶಾಲ್ಮಲೀದ್ವೀಪವಂ ವಳಯಾಕೃತವಾದಿ ಸುತ್ತಿಕೊಂಡಿಹುದು. ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಪುಷ್ಕರದ್ವೀಪ ಆ ದಧಿಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ಷೀರಸಮುದ್ರವು ಆ ಪುಷ್ಕರದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ರೌಂಚದ್ವೀಪವು ಆ ಕ್ಷೀರಸಮುದ್ರಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಸ್ವಾದೋದಕಸಮುದ್ರವು ಆ ಕ್ರೌಂಚದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಸಪ್ತದ್ವೀಪಂಗಳ ಸುತ್ತುವಳಯಾಕೃತವಾಗಿ ಲೋಕಾಲೋಕ ಪರ್ವಂತಗಳಿಹವು. ಆ ಲೋಕಾಲೋಕ ಪರ್ವತಂಗಳ ಸುತ್ತುವಳಯಾಕೃತವಾಗಿ ಚಕ್ರವಾಳಗಿರಿ ಇಹುದು. ಆ ಚಕ್ರವಾಳಗಿರಿಗತ್ತತ್ತ ಭೂಮಿ ಪರ್ವತಾಕಾರವಾಗಿಹುದು. ಆ ಭೂಮಿಯಿಂದಂ ಮೇಲೆ ಮೇಘಮಂಡಲಂಗಳಿಹವು. ಆ ಮೇಘಮಂಡಲಂಗಳ ಮೇಲೆ ಭುವರ್ಲೋಕವಿಹುದು. ಆ ಭುವರ್ಲೋಕದಿಂದ ಮೇಲೆ ಸ್ವರ್ಗಲೋಕವಿಹುದು. ಆ ಸ್ವರ್ಗಲೋಕದಿಂದ ಮೇಲೆ ನಕ್ಷತ್ರಾದಿಮಂಡಲವಿಹುದು. ಆ ನಕ್ಷತ್ರಾದಿ ಮಂಡಲಂಗಳಿಂದತ್ತ ಮೇಲೆ ಮಹರ್ಲೋಕವಿಹುದು. ಆ ಮಹರ್ಲೋಕದಿಂದತ್ತ ಮೇಲೆ ಜನರ್ಲೋಕವಿಹುದು. ಆ ಜನರ್ಲೋಕದಿಂದತ್ತ ಮೇಲೆ ತಪರ್ಲೋಕವಿಹುದು. ಆ ತಪರ್ಲೋಕದಿಂದತ್ತ ಮೇಲೆ ಸತ್ಯರ್ಲೋಕವಿಹುದು. ಆ ಸತ್ಯರ್ಲೋಕದಿಂದತ್ತ ಮೇಲೆ ತ್ರಿಲಕ್ಷಕೋಟಿಯೋಜನ ಪರಿಪ್ರಮಾಣದುದ್ದದಲ್ಲಿ ಮಹಾಪ್ರಳಯಜಲವಿಹುದು. ಆ ಮಹಾಪ್ರಳಯಜಲದಿಂದತ್ತ ಮೇಲೆ ಶಿವಾಂಡ ಚಿದ್ಬ್ರಹ್ಮಾಂಡವಿಹುದು. ಇಂಥ ಅನಂತಕೋಟಿ ಚಿದ್ಬ್ರಹ್ಮಾಂಡಗಳು, ಅನಂತಕೋಟಿ ಲೋಕಾಲೋಕಂಗಳೆಲ್ಲ ಒಂದರಲ್ಲೊಂದಡಗಿ ಅಪ್ರಮಾಣ ಕೂಡಲಸಂಗಯ್ಯನು ತನ್ನ ಲೀಲಾವಿನೋದದಿಂದ ನಿಂದರಾಗಿ ನಿಲುವುದು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾ ಬಲ್ಲೆ ತಾಬಲ್ಲೆನೆಂಬುವರೆಲ್ಲ ಅಲ್ಲ ಅಹುದೆಂಬ ಗೆಲ್ಲ ಸೋಲದ ಮಾತ ಕಲಿತು ಆಡುವರಲ್ಲದೆ ಅದನಾರು ಮೆಚ್ಚುವರು? ಕಾಲೂರಿ ಒಂದೆರಡು ಯೋಜನ ನಡೆಯಬಹುದಲ್ಲದೆ ತಲೆಯೂರಿ ನಡೆಯಬಹುದೆ? ನೆಲೆಯರಿಯದ ಮಾತ ಹಲವ ನುಡಿದಡೇನು ಫಲ? ನೆಲಯರಿದ ಮಾತೊಂದೆ ಸಾಲದೆ? ಹಲವು ದೇವರೆಂದು ಹೊಲಬುಗೆಟ್ಟು ನುಡಿವರು. ಕುಲಸ್ವಾಮಿ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಬ್ಬನೆ, ದೇವರೆಂದರಿದೆಡೆ ಸಾಲದೆ?
--------------
ಸ್ವತಂತ್ರ ಸಿದ್ಧಲಿಂಗ
ಇನ್ನು ಬ್ರಹ್ಮಾಂಡಕಪಾಲದೊಳಗಣ ಸೃಷ್ಟಿಯ ವಿಸ್ತೀರ್ಣವದೆಂತೆಂದಡೆ : ಆ ಭುವನಂಗಳು ಇಹ ಕ್ರಮವೆಂತೆಂದಡೆ : ಬ್ರಹ್ಮಾಂಡಕಪಾಲ ಸಹಸ್ರಕೋಟಿ ಯೋಜನ ಪ್ರಮಾಣು. ಅದರೊಳಗಾಗಿ ಅತಳಲೋಕ ಇಪ್ಪತ್ತೊಂದುಕೋಟಿ ಯೋಜನದಲ್ಲಿ ಶಿವನ ಆಜ್ಞಾಶಕ್ತಿಯಿಂದ ಆಧಾರಶಕ್ತಿ ಇಹಳು. ಆ ಆಧಾರಶಕ್ತಿಯ ಉದ್ದ ಗಾತ್ರದೊಳಗಾಗಿ ಐದು ಸಾವಿರಕೋಟಿ ಯೋಜನದಲ್ಲಿ ವಿತಳಲೋಕವಿಹುದು. ಆ ವಿತಳಲೋಕ ಆರುಸಾವಿರಕೋಟಿ ಯೋಜನಪ್ರಮಾಣು. ಆ ವಿತಳಲೋಕದ ಮೇಲೆ ಐದುಸಾವಿರಕೋಟಿ ಯೋಜನದಲ್ಲಿ ಸುತಳಲೋಕವಿಹುದು. ಆ ಸುತಳಲೋಕ ಅಗ್ನಿ ಜ್ವಾಲೆಯಾಗಿಹುದು. ಆ ಸುತಳಲೋಕದೊಳು ಕಾಲಾಗ್ನಿ ರುದ್ರರಿಹರು. ಆ ಸುತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ರಸಾತಳಲೋಕವಿಹುದು. ಆ ರಸಾತಳಲೋಕ ಬಯಲಾಗಿಹುದು. ಆ ರಸಾತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ತಳಾತಳಲೋಕವಿಹುದು. ಆ ತಳಾತಳಲೋಕ ಮಹಾಗ್ನಿ ಜ್ವಾಲೆಯಾಗಿಹುದು. ಆ ತಳಾತಳಲೋಕದ ಮೇಲೆ ಮಹಾತಳಲೋಕವಿಹುದು. ಆ ಮಹಾತಳಲೋಕದ ಮೇಲೆ ಪಾತಾಳಲೋಕವಿಹುದು. ಆ ಪಾತಾಳಲೋಕ ಎಂಬತ್ತು ಸಾವಿರ ಕೋಟಿ ಯೋಜನ ಭೂಮಿಯಮೇಲೆ ಜಲಮಯವಾಗಿಹುದು. ಆ ಜಲಮಯವಾಗಿಹ ಪಾತಾಳಲೋಕವು ಆಧಾರಶಕ್ತಿಯ ಆಜ್ಞೆಯಿಂದ ಹದಿನಾರು ದಿಕ್ಕುಗಳಲ್ಲಿಯೂ ಹದಿನಾರುಮಹಾಭೂತಂಗಳು ಸುತ್ತಿಹವು. ಹದಿನಾರುಭೂತಗಣಂಗಳ ನಡುವೆ ಕೂರ್ಮಾಂಡನೆಂಬ ಮಹಾಕೂರ್ಮನ ಅಗಲವದೆಂತೆಂದಡೆ : ಐದುಸಾವಿರಕೋಟಿ ವಿಸ್ತೀರ್ಣದಗಲ ನೋಡಾ. ಆ ಕೂರ್ಮಾಂಡನೆಂಬ ಮಹಾಕೂರ್ಮನ ಉದ್ದ ಹದಿನೆಂಟುಸಾವಿರಕೋಟಿಯೋಜನ ಪರಿಪ್ರಮಾಣುದ್ದದ ಬೆನ್ನ ಮೇಲೆ ಶತಕೋಟಿಯೋಜನ ಪರಿಪ್ರಮಾಣುದ್ದದ ಭೂಮಿಯ ಮೇಲೆ ಐನೂರು ಶಿರಸ್ಸನುಳ್ಳ ಶೇಷನು, ನಾಲ್ವತ್ತುಸಾವಿರ ಶೇಷನು ವಳಯಾಕೃತವಾಗಿ ಸುತ್ತಿರಲು, ಆ ನಾಲ್ವತ್ತುಸಾವಿರ ಶೇಷನ ಒಳಯಾಕೃತದಲ್ಲಿ, ಮಧ್ಯದಲ್ಲಿ ಶೇಷಾಹಿಯೆಂಬ ಮಹಾನಾಗ ಇಪ್ಪುದು. ಆ ಶೇಷಾಹಿಯೆಂಬ ಮಹಾನಾಗವು ಎಂಟುಸಾವಿರಕೋಟಿ ಯೋಜನಪ್ರಮಾಣು ನೀಳವು. ಹತ್ತುಸಾವಿರಕೋಟಿ ಸುತ್ತು ವಿಸ್ತೀರ್ಣವು. ಐದುಸಾವಿರ ಕೋಟಿ ಅಗಲದ ಹೆಡೆಯು. ಸ್ವರ್ಗ ಜ್ಯೋತಿಪ್ರಕಾಶದ ದೇಹವನುಳ್ಳುದಾಗಿ, ಸಹಸ್ರ ಶಿರ, ದ್ವಿಸಹಸ್ರಾಕ್ಷವು. ಆ ಸಹಸ್ರ ಶಿರದಲ್ಲಿ ಮಾಣಿಕ್ಯದ ಬಟ್ಟುಗಳ ಧರಿಸಿಕೊಂಡು ಮಹಾಗ್ನಿಜ್ವಾಲೆಯನುಳ್ಳ ಮಹಾಶೇಷನಿಹನು. ಐನೂರು ಶಿರಸ್ಸನುಳ್ಳ ಶೇಷ ನೂರುನಾಲ್ವತ್ತುಸಾವಿರ ಶೇಷನ ಸುತ್ತುವಳಯಾಕೃತವಾಗಿ ಅಷ್ಟದಿಗ್ಗಜಂಗಳಿಹವು. ಆ ಅಷ್ಟದಿಗ್ಗಜಂಗಳ ಮೇಲೆ ವಿಸ್ತೀರ್ಣ ಒಂದೊಂದು ಗಜಂಗಳು ನವಕೋಟಿಯೋಜನಪ್ರಮಾಣದುದ್ದವು, ಸಾವಿರಕೋಟಿಯೋಜನಪ್ರಮಾಣದಗಲವು, ಶತಕೋಟಿಸಾವಿರಯೋಜನಪ್ರಮಾಣದ ನೀಳವನುಳ್ಳುದಾಗಿ ಅಷ್ಟದಿಕ್‍ಮಹಾಗಜಂಗಳಿಹವು. ಆ ಅಷ್ಟದಿಕ್‍ಮಹಾಗಜಂಗಳು ಆಧಾರವಾಗಿ ಭೂಲೋಕವಿಹುದು. ಆ ಭೂಲೋಕ ಮೊದಲಾಗಿ ಕೆಳಗಿನಂಡಬ್ರಹ್ಮಾಂಡಕಪಾಲ ಕಡೆಯಾಗಿ ಅರುವತ್ತುಸಾವಿರಕೋಟಿಯೋಜನ ಪರಿಪ್ರಮಾಣು. ಆ ಭುವರ್ಲೋಕವು ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಕಬ್ಬುಣವಾಗಿಹುದು. ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಮಣ್ಣಾಗಿಹುದು. ಇದು ಮಧ್ಯಭೂಮಿ. ಈ ಮಧ್ಯಭೂಮಿ ಅಜಲಮಯವಾಗಿ ಉತ್ತರ-ದಕ್ಷಿಣ ಶತಸಹಸ್ರಕೋಟಿಯೋಜನಪರಿಪ್ರಮಾಣು. ಸುತ್ತ ಅಗಲ ಮುನ್ನೂರರುವತ್ತುಕೋಟಿಯೋಜನಪರಿಪ್ರಮಾಣು. ದಕ್ಷಿಣ-ಉತ್ತರ ಸಮುದ್ರ ತೊಡಗಿ ಉತ್ತರ ಹಿಮವತ್ಪರ್ವತ. ಇದಕ್ಕೆ ಹೆಸರು ಭರತವರುಷ. ಈ ಹಿಮವತ್ಪರ್ವತವು ಉತ್ತರ ದಕ್ಷಿಣ ಇಪ್ಪತ್ತುಸಾವಿರ ಯೋಜನಪ್ರಮಾಣು. ಕೆಳಗೆ ಮೇಲೆ ಇಪ್ಪತ್ತುಸಾವಿರಯೋಜನಪ್ರಮಾಣು. ಮೇಲುದ್ದವು ಎಂಬತ್ತೈದುಸಾವಿರಯೋಜನಪ್ರಮಾಣು. ಉತ್ತರ ಸಮುದ್ರಕ್ಕೆ ದಕ್ಷಿಣ ಉತ್ತರ ಸಾವಿರಕೋಟಿ ಯೋಜನದಲ್ಲಿ ವಿಂಧ್ಯಪರ್ವತವಿಹುದು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ಮೂರುಸಾವಿರ, ದಕ್ಷಿಣ ಉತ್ತರ ಮೂವತ್ತುಸಾವಿರಯೋಜನಪ್ರಮಾಣು. ಕೆಳಗು ಮೇಲು ಮೂವತ್ತುಸಾವಿರಯೋಜನಪ್ರಮಾಣು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ತುನೂರುಸಾವಿರಯೋಜನ ಪ್ರಮಾಣು. ಪಶ್ಚಿಮದೆಸೆಯ ಸಮುದ್ರದಲ್ಲಿಹ ಅಸ್ತಮಾನಪರ್ವತ. ಆ ಪರ್ವತ ದಕ್ಷಿಣ-ಉತ್ತರ ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಕೆಳಗು ಮೇಲು ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಮೇಲುದ್ದವು ತೊಂಬತ್ತುಸಾವಿರ ಯೋಜನಪ್ರಮಾಣು ಭೂಮಿಗೆ ನಡುವಾಗಿ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ಉತ್ತರ ದಕ್ಷಿಣ ಹದಿನಾರುಸಾವಿರ ಯೋಜನಪ್ರಮಾಣು. ಆ ಮೇರುಪರ್ವತದ ಮೇಲುದ್ದವು ಸಾವಿರಕೋಟಿಯ ಮೇಲೆ ನೂರುಸಾವಿರದ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಮಹಾಮೇರುವಿನ ಪೂರ್ವದಿಕ್ಕಿನಲ್ಲಿ ಮಂದರಪರ್ವತವಿಹುದು. ಅಲ್ಲಿಹ ವೃಕ್ಷ ಕದಂಬವೃಕ್ಷ. ಆ ಮಹಾಮೇರುವಿನ ದಕ್ಷಿಣದಿಕ್ಕಿನಲ್ಲಿ ಗಂಧಮಾದನಪರ್ವತವಿಹುದು. ಅಲ್ಲಿಹ ವೃಕ್ಷ ಜಂಬೂವೃಕ್ಷ. ಆ ಮಹಾಮೇರುವಿನ ನೈಋತ್ಯದಿಕ್ಕಿನಲ್ಲಿ ನೀಲಗಿರಿಪರ್ವತವಿಹುದು. ಅಲ್ಲಿಹ ವೃಕ್ಷ ಭೂದಳವೃಕ್ಷ. ಆ ಮಹಾಮೇರುವಿನ ಪಶ್ಚಿಮದಿಕ್ಕಿನಲ್ಲಿ ಕಾಶೀಪರ್ವತವಿಹುದು. ಅಲ್ಲಿಹ ವೃಕ್ಷ ಬಿಲ್ವದ ವೃಕ್ಷ. ಆ ಮಹಾಮೇರುವಿನ ವಾಯುವ್ಯದಿಕ್ಕಿನಲ್ಲಿ ನೀಲಪರ್ವತವಿಹುದು. ಅಲ್ಲಿಹ ವೃಕ್ಷ ಬ್ರಹ್ಮವೃಕ್ಷ. ಆ ಮಹಾಮೇರುವಿನ ಉತ್ತರದಿಕ್ಕಿನಲ್ಲಿ ಮಧುರಾದ್ರಿಪರ್ವತವಿಹುದು. ಅಲ್ಲಿಹ ವೃಕ್ಷ ವಟವೃಕ್ಷ. ಆ ಮಹಾಮೇರುವಿನ ಈಶಾನ್ಯದಿಕ್ಕಿನಲ್ಲಿ ಕಪಿಲ ಮಹಾಪರ್ವತವಿಹುದು. ಅಲ್ಲಿಹ ವೃಕ್ಷ ಶಾಕಾಫಲವೃಕ್ಷ. ಸಪ್ತಕುಲಪರ್ವತಂಗಳು ಒಂದೊಂದು ಬಗೆ ಹತ್ತುಸಾವಿರ ಯೋಜನಪ್ರಮಾಣು. ಆ ಸಪ್ತಕುಲಪರ್ವತಂಗಳೊಂದೊಂದಿಗೆ ಐದುಸಾವಿರ ಯೋಜನಪ್ರಮಾಣು. ಈ ಸಪ್ತಕುಲಪರ್ವತಂಗಳ ನಡುವೆ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ತುದಿಯಲ್ಲಿ ಪಂಚಸಹಸ್ರಯೋಜನದಗಲ ಚುತುಃಚಕ್ರಾಕಾರವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ನವರತ್ನಖಚಿತವಾಗಿ ಪ್ರಮಥಗಣಂಗಳು ನಂದಿ, ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದರಿಂ ಸುಖಂಗಳಲಿಪ್ಪಂತಾಗಿ ಶಿವಪುರವಿಹುದು. ಆ ಶಿವಪುರದೊಳು ಸಿಂಹಾಸನಾರೂಢನಾಗಿ ಮಹಾರುದ್ರಮೂರ್ತಿ ಇಹನು. ಆ ಮಹಾರುದ್ರಮೂರ್ತಿಯ ಚಂದ್ರಾದಿತ್ಯರು, ನಕ್ಷತ್ರ ನವಗ್ರಹಂಗಳು ಮೊದಲಾಗಿ ಎಲ್ಲಾ ದೇವರ್ಕಳು ಪ್ರದಕ್ಷಣಬಹರು. ಯಕ್ಷ ಕಿನ್ನರ ಗಂಧರ್ವ ಸಿದ್ಧ ವಿದ್ಯಾಧರ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳೆಲ್ಲರು ಒಡ್ಡೋಲಗಂಗೊಟ್ಟಿರಲು ಎಲ್ಲ ಲೋಕಕ್ಕೂ ಸಾಕ್ಷೀಭೂತನಾಗಿ ಆ ಮಹಾರುದ್ರಮೂರ್ತಿ ಇಹನು. ಆ ಮಹಾಮೇರುವಿನ ದಕ್ಷಿಣದ ಕೆಳಗಣ ಪಾಶ್ರ್ವದಲ್ಲಿ ಚಿಕ್ಕದೊಂದು ಕೋಡು. ಆ ಕೋಡಿನಲ್ಲಿ ಕಲ್ಪವೃಕ್ಷವಿಹುದು. ಆ ದಕ್ಷಿಣ ಕೋಡಿನಲ್ಲಿ ಜಂಬೂವೃಕ್ಷದ ಹಣ್ಣಿನ ರಸ ಸೋರಿ ಜಾಂಬೋಧಿಯೆಂಬ ಮಹಾನದಿ ಹರಿಯುತ್ತಿಹುದು. ಆ ನೀರ ಸೇವಿಸಿದವರು ಸ್ವರ್ಣವರ್ಣವಹರು. ಆ ನೀರು ಹರಿದ ಠಾವೆಲ್ಲ ಸ್ವರ್ಣಬೆಳೆಭೂಮಿ. ಆ ಭೂಮಿಗೆ ಉತ್ತರ ಪೂರ್ವವಾಗಿ ಶ್ರೀ ಕೈಲಾಸಪರ್ವತವಿಹುದು. ಆ ಕೈಲಾಸಪರ್ವತ ಏಳು ನೆಲೆಯಾಗಿ ರತ್ನಮಯವಾಗಿ ಅನಂತ ಕೋಡುಗಳುಂಟಾಗಿಹುದು. ಆ ಕೈಲಾಸಪರ್ವತವು ಉತ್ತರ ದಕ್ಷಿಣ ಹದಿನಾರುಸಾವಿರಕೋಟಿಯೋಜನ ಪರಿಪ್ರಮಾಣು. ಆ ಕೈಲಾಸಪರ್ವತದ ಮೇಲುದ್ದವು ಸಾವಿರಕೋಟಿ ನೂರುಸಾವಿರದ ಮೇಲೆ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಕೈಲಾಸಪರ್ವತದ ತುದಿಯಲ್ಲಿ ಶಿವಪುರದ ವಿಸ್ತೀರ್ಣ ಪಂಚಸಹಸ್ರ ಯೋಜನದಗಲ. ಚತುಷ್ಟಾಕಾರವಾಗಿ ನವರತ್ನಖಚಿತವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ಪ್ರಮಥಗಣಂಗಳು, ನಂದಿ ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖಂಗಳಲ್ಲಿಪ್ಪಂತಾಗಿ ಮಹಾಶಿವಪುರವಿಹುದು. ಆ ಶಿವಪುರದೊಳು ಶ್ರೀಕಂಠನೆಂಬ ಸದಾಶಿವಮೂರ್ತಿ ಇಹನು. ಆ ಶಿವಪುರದ ಬಾಗಿಲ ಕಾವಲಾಗಿ ನಂದಿ-ಮಹಾಕಾಳರೆಂಬ ಮಹಾಗಣಂಗಳಿಹರು. ನಂದಿ-ಮಹಾನಂದಿ-ಅತಿಮಹಾನಂದಿಕೇಶ್ವರರು ವಿಘ್ನೇಶ್ವರ ಕುಮಾರಸ್ವಾಮಿ ಮಹಾಭೈರವೇಶ್ವರ ಮಹಾಕಾಳಿ ಮೊದಲಾದ ಅಸಂಖ್ಯಾತ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಶುಗಳು, ನವಗ್ರಹಂಗಳು, ಬ್ರಹ್ಮ , ವಿಷ್ಣು , ರುದ್ರಗಣಂಗಳು, ಮೂವತ್ಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು, ಅಷ್ಟದಶ ಗಣಂಗಳು, ಯೋಗೀಶ್ವರರು, ಯಕ್ಷ ಕಿನ್ನರ ಗರುಡ ಗಂಧರ್ವ ಸಿದ್ಧ ವಿದ್ಯಾಧರರು, ರಾಕ್ಷಸಗಣ ನಾಗಗಣ ಭೂತಗಣಂಗಳು ಮೊದಲಾದ ಎಲ್ಲಾ ಗಣಂಗಳ ಸನ್ನಿಧಿಯಲ್ಲಿ ಒಡ್ಡೋಲಗಂಗೊಟ್ಟಿರಲು, ಚತುರ್ವೇದಂಗಳು ಮೊದಲಾಗಿ ಎಲ್ಲಾ ವೇದಂಗಳು `ವಿಶ್ವಾಧಿಕೋ ರುದ್ರೋ ಮಹಾಋಷಿ' ಎನಲು 'ಋತಂ ಸತ್ಯಂ ಪರಬ್ರಹ್ಮ ' ಎನಲು `ಅತ್ಯತಿಷ್ಟರ್ದಶಾಂಗುಲಂ' ಎನಲು `ತತ್ಪರ ಬ್ರಹ್ಮ ವಿಜಾತಿ', ಎನಲು `ಓಮಿತೈಕಾಕ್ಷರ ಬ್ರಹ್ಮ' ಎಂದು ಬೊಬ್ಬಿಟ್ಟು ಸಾರುತ್ತಿರಲು ತುಂಬುರ ನಾರದರು ಗೀತಮಂ ಪಾಡುತಿರಲು ನಂದಿ ಮದ್ದಳೆವಾದ್ಯಮಂ ಬಾರಿಸುತ್ತಿರಲು, ವಿಷ್ಣು ಆವುಜವ ನುಡಿಸಲು, ಬ್ರಹ್ಮ ತಾಳವನೊತ್ತಲು, ಪಂಚಮಹಾವಾದ್ಯಂಗಳು ಮೊಳಗುತ್ತಿರಲು ಭೃಂಗೀಶ್ವರ ಮಹಾನಾಟ್ಯವನಾಡಲು ಉಮಾಮಹೇಶ್ವರಿಯೊಡನೆ ಪರಮೇಶ್ವರನು ಸಿಂಹಾಸನಾರೂಢನಾಗಿ ಕುಳ್ಳಿರ್ದು ಭೃಂಗೀಶ್ವರನ ಮಹಾನಾಟ್ಯವ ತಮ್ಮ ಲೀಲಾವಿನೋದದಲ್ಲಿ ನೋಡುತ್ತ ಶ್ರೀ ಕೈಲಾಸಪರ್ವತದಲ್ಲಿ ಇರುತ್ತಿರ್ದನು. ಈ ಭೂಮಿಗೆ ದಕ್ಷಿಣ ಪೂರ್ವದಲ್ಲಿ ಆದಿಯ ಮಹಾದ್ರಿಪರ್ವತವಿಹುದು. ಆ ಆದಿಯ ಮಹಾದ್ರಿಪರ್ವತದಲ್ಲಿ ಅಗಸ್ತ್ಯಮಹಾಮುನಿ ಇಹನು. ಈ ಭೂಮಿ ಒಂಬತ್ತು ತುಂಡಾಗಿಹುದು. ಒಂಬತ್ತು ತುಂಡಾದ ಅಂತರಾಳವೆಲ್ಲವು ಜಲಮಯವಾಗಿ ಹೊರಗೆ ಬಿರಿದುದ್ದವಾಗಿ ಬೆಳೆಯಲು ನವಖಂಡಪೃಥ್ವಿಯೆಂದು ಹೆಸರಾಯಿತ್ತು. ಈ ಭೂಮಿ ಜಂಬೂದ್ವೀಪ. ಈ ಭೂಮಿಗೆ ಜನನ ಲವಣಸಮುದ್ರ. ಆ ಜಂಬೂದ್ವೀಪ ಲವಣಸಮುದ್ರದ ವಿಸ್ತೀರ್ಣ: ಆ ಜಂಬೂದ್ವೀಪದ ಅಗಲ ಶತಕೋಟಿಯೋಜನಪ್ರಮಾಣು. ಆ ಜಂಬೂದ್ವೀಪ ವಳಯಾಕೃತವಾಗಿ ಸುತ್ತಿಕೊಂಡು ಶತಕೋಟಿಯೋಜನಪರಿಪ್ರಮಾಣದಗಲವಾಗಿ ಲವಣಸಮುದ್ರವಿಹುದು. ಅದರಿಂದಾಚೆ ಪ್ಲಕ್ಷದ್ವೀಪ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಇಕ್ಷುಸಮುದ್ರ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಕುಶದ್ವೀಪ. ಅದರಗಲ ನಾನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಸುರೆಯ ಸಮುದ್ರ. ಅದರಗಲ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಶಾಕದ್ವೀಪ. ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಘೃತಸಮುದ್ರ, ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಸಾಲ್ಮಲೀದ್ವೀಪ. ಅದರಗಲ ಸಾವಿರದಾರು ನೂರು ಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ಷೀರಸಮುದ್ರ. ಅದರಗಲ ಸಾವಿರದಾರುನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಪುಸ್ಕರದ್ವೀಪ. ಅದರಗಲ ಮೂರುಸಾವಿರಕೋಟಿ ಯೋಜನ ಪ್ರಮಾಣು. ಅದರಿಂದಾಚೆ ದಧಿಸಮುದ್ರ. ಅದರಗಲ ಮೂರುಸಾವಿರದಿನ್ನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ರೌಂಚದ್ವೀಪ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವಾದೋದಕಸಮುದ್ರ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವರ್ಣಬೆಳೆಯಭೂಮಿ. ಅದರಗಲ ಹನ್ನೆರಡುಸಾವಿರಕೋಟಿಯೋಜನ ಪ್ರಮಾಣು. ಅದರಿಂದಾಚೆಯಲಿ ಚಕ್ರವಾಳಗಿರಿ. ಅದರಗಲ ಇಪ್ಪತ್ತೈದುಸಾವಿರಕೋಟಿ ಯೋಜನ ಪ್ರಮಾಣು. ಈ ಸಪ್ತಸಮುದ್ರಂಗಳು ಸಪ್ತದ್ವೀಪಂಗಳು ಹೊರಗೆ ಬಿರಿದು ಬೆಳೆಯಲು ಸಪ್ತಸಮುದ್ರಂಗಳು, ದೆಸೆಗಳು ಕೂಡಿ ಮೇಳೈಸಲು ನಾಲ್ವತ್ರೊಂಬತ್ತುಸಾವಿರಕೋಟಿ ಯೋಜನ ಪ್ರಮಾಣಿನ ಮೇಲೆ ತೊಂಬತ್ತು ಸಾವಿರದೈವತ್ತುಕೋಟಿಯ ಮಧ್ಯಭೂಮಿ ಯೋಜನ ಪ್ರಮಾಣುಮಂ ಕೂಡಿ ನೂರುಸಾವಿರಕೋಟಿ ಯೋಜನ ಪ್ರಮಾಣು. ಈ ಭೂಮಿಗೂ ಚಕ್ರವಾಳಗಿರಿಗೂ ಹೊರಗೆ ಕಾವಲಾಗಿ ಅಷ್ಟದಿಕ್ಪಾಲರಿಹರು. ಮೇರು ಮಂದರ ಕೈಲಾಸ ಗಂಧಮಾದನ ವಿಂಧ್ಯ ಹಿಮಾಲಯ ನಿಷಧ ಚಿತ್ರಕೂಟವೆಂಬ ಅಷ್ಟಕುಲಪರ್ವತಂಗಳ ತಪ್ಪಲಲ್ಲಿ ಅನಂತವಾಸುಗಿ ಕಶ್ಚ ಕರ್ಕಾಟಕ ಪರ ಮಹಾಪರ ಶಂಕವಾಲಿ ಕುಳಿಕನೆಂಬ ಅಷ್ಟಮಹಾಗಣಂಗಳಿಹವು. ಈಶಾನಮುಖದಲ್ಲಿ ವಡಬಮುಖಾಗ್ನಿ ಇಹುದು. ಉತ್ತರದೆಸೆಯಲ್ಲಿ ಕ್ಷೀರಸಮುದ್ರದೊಳು ವಿಷ್ಣು ಅನಂತಶಯನದಲ್ಲಿ ತಮೋಗುಣಯುಕ್ತನಾಗಿ ನಿದ್ರಾಲಂಬಿಯಾಗಿಹನು. ಈ ಭೂಮಿಗೆ ದಕ್ಷಿಣದೆಸೆಯಾಗಿ ಉತ್ತರ ಪರಿಯಂತರ ಬ್ರಹ್ಮ ಮಹೇಶ್ವರಿ ಕೌಮಾರಿ ವೈಷ್ಣವಿ ವರಾಹಿ ಮಾಹೇಂದ್ರಿ ಚಾಮುಂಡಿಯೆಂಬ ಸಪ್ತಮಾತೃಕೆಯರು ಇಹರು. ಮೇಲುಗಡೆಯಲ್ಲಿ ವಿನಾಯಕ, ಕೆಳಗಡೆಯಲ್ಲಿ ಭೈರವನಿಹನು. ಈ ಭೂಮಿಗೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮದಲ್ಲಿ ಭೈರವ ಮಹಾಭೈರವ ಕಾಲಭೈರವ ದುರ್ಗಿ ಮಹಾದುರ್ಗಿ ಮೊದಲಾದ ಅನಂತ ಭೂತಗಣಂಗಳು ಕಾವಲಾಗಿಹರು. ಈ ಭೂಮಿಯಿಂದ ಮೇಲೆ ಯೋಜನ ಪ್ರಮಾಣದಲ್ಲಿ ಸಪ್ತಮೇಘಂಗಳು, ವಾಯುವಿನ ದೆಸೆಯಿಂದ ಚಲಿಸುತ್ತಿಹುದು. ಅವಾವೆಂದಡೆ : ನೆಲವೃಷ್ಟಿ ನೀರವೃಷ್ಟಿ ಸ್ವರ್ಣವೃಷ್ಟಿ ಪುಷ್ಪವೃಷ್ಟಿ ಕಲ್ಪವೃಷ್ಟಿ ಮಣ್ಣವೃಷ್ಟಿ ಮೌಕ್ತಿಕವೃಷ್ಟಿ- ಎಂಬ ಸಪ್ತವೃಷ್ಟಿಗಳು ವೃಷ್ಟಿಸುತ್ತಿರಲು ಆ ಸಪ್ತಮೇಘಮಂಡಲಂಗಳ ಮೇಲೆ ಶತಕೋಟಿಯೋಜನದಲ್ಲಿ ಭುವರ್ಲೋಕವಿಹುದು. ಆ ಭುವರ್ಲೋಕದಲ್ಲಿ ಆದಿತ್ಯ ಚರಿಸುತ್ತಿಹನು. ಆ ಆದಿತ್ಯನ ರಥದ ಪ್ರಮಾಣು ತೊಂಬತ್ತುಸಾವಿರಯೋಜನಪ್ರಮಾಣದುದ್ದವು, ನಾಲ್ವತ್ತೈದುಸಾವಿರ ಯೋಜನದಗಲವು. ಆ ರಥಕ್ಕೆ ಒಂದೇ ಗಾಲಿ, ಒಂದೆ ನೊಗದಲ್ಲಿ ಕಟ್ಟುವ ಪಚ್ಚವರ್ಣದ ವಾಜಿಗಳೇಳು. ಉರದ್ವಯವಿಲ್ಲದ ಅರುಣ ರಥದ ಸಾರಥಿ. ಆ ಅರುಣನ ಕಂಡುದೆ ಉದಯ, ಕಾಣದುದೇ ಅಸ್ತಮಯ. ಆದಿತ್ಯಪಥಕ್ಕೆ ಶತಕೋಟಿ ಯೋಜನದಲ್ಲಿ ಚಂದ್ರಮನ ಪಥವು ಆ ಚಂದ್ರಮನ ಪಥಕ್ಕೆ ಶತಕೋಟಿ ಯೋಜನದಲ್ಲಿ ಅಂಗಾರಕನ ಪಥವು. ಅಂಗಾರಕನ ಪಥಕ್ಕೆ ಶತಕೋಟಿಯೋಜನದಲ್ಲಿ ಬುಧನ ಪಥವು. ಆ ಬುಧನ ಪಥಕ್ಕೆ ಶತಕೋಟಿಯೋಜನದಲ್ಲಿ ಬೃಹಸ್ಪತಿಯ ಪಥವು. ಆ ಬೃಹಸ್ಪತಿಯ ಪಥಕ್ಕೆ ಶತಕೋಟಿಯೋಜನದಲ್ಲಿ ಶುಕ್ರನ ಪಥವು. ಆ ಶುಕ್ರನ ಪಥಕ್ಕೆ ಶತಕೋಟಿ ಯೋಜನದಲ್ಲಿ ಶನೀಶ್ವರನ ಪಥವು. ಆ ಶನೀಶ್ವರನ ಪಥಕ್ಕೆ ಶತಕೋಟಿ ಯೋಜನದಲ್ಲಿ ರಾಹುಕೇತುಗಳ ಪಥವು. ಆ ರಾಹುಕೇತುಗಳ ಪಥಕ್ಕೆ ಶತಕೋಟಿಯೋಜನದಲ್ಲಿ ನಕ್ಷತ್ರಾದಿಗಳ ಪಥವು. ಆ ನಕ್ಷತ್ರಾದಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸಪ್ತಮಹಾಋಷಿಗಳ ಪಥವು. ಆ ಸಪ್ತಮಹಾಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಅಶ್ವಿನೀದೇವತೆಗಳ ಪಥವು. ಆ ಅಶ್ವಿನೀದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ವಿಶ್ವದೇವತೆಗಳ ಪಥವು. ಆ ವಿಶ್ವದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಬಾಲಸೂರ್ಯರ ಪಥವು. ಆ ಬಾಲಸೂರ್ಯರ ಪಥಕ್ಕೆ ಶತಕೋಟಿಯೋಜನದಲ್ಲಿ ಸೇನ ಮಹಾಸೇನ ಋಷಿಗಳ ಪಥವು. ಆ ಸೇನ ಮಹಾಸೇನ ಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಕ್ರುಕರನೆಂಬ ಋಷಿಗಳ ಪಥವು. ಆ ಕ್ರುಕರನೆಂಬ ಮುನಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸ್ವರ್ಣಪ್ರಭವಾಗಿ ಸ್ವರ್ಗಲೋಕವಿಹುದು. ಆ ಸ್ವರ್ಗಲೋಕದಲ್ಲಿ ಕಲ್ಪವೃಕ್ಷವಿಹುದು. ಆ ಕಲ್ಪವೃಕ್ಷದ ನೆಳಲಲ್ಲಿ ಅಮರಾವತಿಪುರ. ಆ ಪುರದೊಳು ದೇವೇಂದ್ರನಿಹನು. ಆ ದೇವೇಂದ್ರನ ಓಲಗದೊಳಗೆ ಸಪ್ತಮಹಾಋಷಿಗಳು, ಮೂವತ್ಮೂರು ಕೋಟಿ ದೇವರ್ಕಳಿಹರು. ಆ ಸ್ವರ್ಗಲೋಕಕ್ಕೆ ಶತಕೋಟಿ ಯೋಜನದಲ್ಲಿ ಮಹರ್ಲೋಕವಿಹುದು; ಅದು ಬ್ರಹ್ಮ ಪಥವು. ಆ ಮಹರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಜನರ್ಲೋಕವಿಹುದು; ಅದು ವಿಷ್ಣುವಿನ ಪಥವು. ಆ ಜನರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ತಪರ್ಲೋಕವಿಹುದು ; ಅದು ರುದ್ರಪಥವು. ಆ ತಪರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸತ್ಯರ್ಲೋಕವಿಹುದು ; ಅದು ಈಶ್ವರಪಥವು. ಆ ಸತ್ಯರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸದಾಶಿವಲೋಕವಿಹುದು. ಆ ಸದಾಶಿವಲೋಕಕ್ಕೆ ತ್ರಿಶತ ಸಹಸ್ರಕೋಟಿ ಯೋಜನದಲ್ಲಿ ಶಿವಾಂಡವಿಹುದು. ಆ ಶಿವಾಂಡವು ಪಂಚಶತಸಹಸ್ರಕೋಟಿ ಲಕ್ಷವು ತ್ರಿಶತ ಸಹಸ್ರಕೋಟಿ ಲಕ್ಷದ ಮೇಲೆ ಶತಕೋಟಿ ಸಾವಿರ ಲಕ್ಷ ಯೋಜನ ಪ್ರಮಾಣದಗಲವನುಳ್ಳ ಶಿವಾಂಡವು, ಮಹಾಸಮುದ್ರಂಗಳನು, ಅಣುವಾಂಡಗಳನು, ಬ್ರಹ್ಮಾಂಡಂಗಳನು, ಅನಂತಕೋಟಿ ಲೋಕಾದಿಲೋಕಂಗಳನೊಳಕೊಂಡು ಮಹಾಪ್ರಳಯಜಲದೊಳಗಿಹುದು. ಆ ಶಿವಾಂಡಕ್ಕೆ ಹೊರಗಾಗಿ ಅಖಂಡ ಚಿದ್ಬ ್ರಹ್ಮಾಂಡವಿಹುದು. ಅಖಂಡ ಚಿದ್ಬ್ರಹ್ಮಾಂಡವು ಅನಂತಕೋಟಿ ಬ್ರಹ್ಮಾಂಡವನೊಳಕೊಂಡು ಆದಿ ಮಧ್ಯಾವಸಾನಂಗಳಿಲ್ಲದೆ ಅಖಂಡಿತ ಅಪ್ರಮೇಯ ಅವ್ಯಕ್ತ ಅಚಲಿತ ಅಪ್ರಮಾಣ ಅಗೋಚರ ಅಖಂಡಪರಿಪೂರ್ಣವಾಗಿಹುದು ನೋಡಾ ಚಿದ್ಬ್ರಹ್ಮಾಂಡವು ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾಲ್ಕು ಇಪ್ಪತ್ತುನಾಲ್ಕು ಲಕ್ಷ ಯೋಜನ ಪ್ರಮಾಣದೊಳಗೆ ಛಪ್ಪನ್ನದೇಶ ಮಂಡಲದಲ್ಲಿ ಮಿಗೆ ಒಪ್ಪುತಿರ್ಪುದೊಂದು ಸೊಬಗಿನ ಕಲ್ಯಾಣ. ಅಂತಪ್ಪ ಕಲ್ಯಾಣಮಧ್ಯದಲ್ಲಿ ಮುಂತೆಸೆವ ಸಿಂಹಪೀಠಾಗ್ರದ ಪವಳ ಪೊಸಮುತ್ತು ನೀಲಪ್ರಕಾಶದೊಬ್ಬುಳಿಯೊಳೊಪ್ಪುವ ಬಸವಣ್ಣ, ಚನ್ನಬಸವಣ್ಣ ಪ್ರಭುಸ್ವಾಮಿಗಳವರ ವರಚರಣವನರಿದು ಕರ ಮನ ಭಾವದಲ್ಲಿ ಹೆರೆಹಿಂಗದರ್ಚಿಸುವ ಪರಮ ಶಿವಯೋಗಿಯ ಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗೃಹ ಗ್ರಾಮ ನಾಡು ದೇಶಂಗಳೆಂಬ ಭೂಮಿಯ ಆಗು_ಚೇಗೆಯ ರಾಗ_ದ್ವೇಷ, ಮರಳಿ ಭೂಮಿಯ ಆಶೆ, ಅಲ್ಪಭೂಮಿಯ ಆಶೆ. ಅಲ್ಪಭೂಮಿ ಅಲ್ಪಂಗಲ್ಲದೆ ಪಂಚಾಶತಕಕೋಟಿ ಯೋಜನ ಭೂಮಿಯನೂ ಒಳಕೊಂಡ ಬ್ರಹ್ಮಾಂಡ ಅಂತಹ ಬ್ರಹ್ಮಾಂಡವನೇಕವನೂ ಆಭರಣವ ಮಾಡಿಯಿಟ್ಟುಕೊಂಡಿಪ್ಪ, ಅಂತಹ ಆಭರಣದಿಂದ ಪೂಜೆಗೊಂಡಿಪ್ಪ, ಲಿಂಗವೇ ಪ್ರಾಣವಾಗಿ ಭೂಮಿಯಲ್ಲಿ ನಿಂದ ಲಿಂಗೈಕ್ಯಂಗೆ ಭೂಮಿಯ ಚಿಂತೆ ಇನ್ನೆಲ್ಲಿಯದೋ ? ಕಾಣೆ. ಕೋಟಿ ಕ್ಷಿತಿಪರಿಯಂತರ ಧನದಾಗುನಿರೋಧ ಆಗುಚೇಗೆಯ ನಿರೋಧಸುಖದುಃಖ ತನುಮನಧನಕಾಂಕ್ಷೆ ಅಲ್ಪಂಗಲ್ಲದೆ ಮಹಾಲಕ್ಷ್ಮಿಯೊಡೆಯನಾಗಿ, ಮಹದೈಶ್ವರ್ಯಸಂಪನ್ನನಾಗಿ, ಹಿರಣ್ಯಪತಿಯೇ ಪ್ರಾಣವಾಗಿ, ಹಿರಣ್ಯಪತಿಯೇ ಕಾಯವಾದ ಮಹಾಲಿಂಗೈಕ್ಯಂಗೆ ಧನದ ಚಿಂತೆ ಇನ್ನೆಲ್ಲಿಯದು ? ಉತ್ತಮ ಮಧ್ಯಮ ಕನಿಷ* ನಿಕೃಷ್ಟ ಹಸ್ತಿನಿ ಚಿತ್ತಿನಿ ಶಂಕಿನಿ ಪದ್ಮಿನಿಯರೆಂಬ ನಾಲ್ಕು ತೆರದ ಸ್ತ್ರೀಯರ ಸಂಗ; ಪಾತರ, ದಾಸಿ, ವೇಶ್ಯಾಗಮನ, ಪರಸ್ತ್ರೀ ಪರಸಂಗ ಅವಿಚಾರ ಅನ್ಯಜಾತಿಯ ಸಂಗ ಇವುಗಳಿಗಾಶಿಸುವ ಕ್ರೂರಾತ್ಮಂಗೆ ಹೆಣ್ಣಿನ ಚಿಂತೆಯಲ್ಲದೆ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯ ವರ್ತನೆಯ ಮೀರಿ ಮಹಾಶಕ್ತಿ ತಾನಾಗಿ(ಹ) ಮಹಾಪುರುಷನಲ್ಲಿ ಮಹಾಸಂಗವಾದ ಮಹಾಶರಣಂಗೆ ಹೆಣ್ಣಿನ ಚಿಂತೆ ಇನ್ನೆಲ್ಲಿಯದೋ ? ವೇದಶಾಸ್ತ್ರ ಪುರಾಣಾಗಮಾದಿಯಾಗಿ ಅಷ್ಟಾದಶವಿದ್ಯಂಗಳನೋದುವ ಕೇಳುವ ವಿಚಾರಿಸುವ ತಿಳಿವ ವಿದ್ಯದ ಚಿಂತೆ ಅಲ್ಪಮತಿಯ ಅಲ್ಪಂಗಲ್ಲದೆ ವಾಗ್ದೇವತೆಗೆ ಅಧಿದೈವಮಪ್ಪ ಮಹಾವಿದ್ಯೆಯೇ ದೇಹವಪ್ಪ ವಿದ್ಯಾರೂಪ ಮಹಾದೇವನೇ ಪ್ರಾಣವಾಗಿ, ಮಹಾದೇವನೇ ಕಾಯವಾಗಿ ಮಹಾದೇವನೇ ಜಿಹ್ವೆಯಾಗಿ, ಮಹಾದೇವನೇ ಮನವಾಗಿಹ ಮಹಾಲಿಂಗೈಕ್ಯಂಗೆ ಇನ್ನುಳಿದ ಚಿಂತೆ ಇನ್ನೆಲ್ಲಿಯದೋ ? ಭಕ್ತಕಾಯ ಶಿವನಾಗಿ ಶಿವನೇ ಪ್ರಾಣವಾಗಿ ನಿಂದ ಸದ್ಭಕ್ತಂಗೆ ಆವ ಚಿಂತೆಯೂ ಇಲ್ಲ, ಆತ ನಿಶ್ಚಿಂತ, ಪರಮಸುಖಪರಿಣಾಮಿ ಸತ್ಯನು ನಿತ್ಯನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪೃಥ್ವಿಯಿಂದ ಈಶ್ವರ ಪರಿಯಂತ ಪಂಚವಿಶಂತಿ ತತ್ವಂಗಳುತ್ಪತ್ಯ, ಈಶ್ವರಾದಿ ಪರಶಿವ ಪರಿಯಂತ ಶಿವತತ್ವದುತ್ಪತ್ಯ. ದೇವತಾದಿಗೆ ಜಗದಾದಿಗೆ ಪೃಥ್ವಿಯಾದಿಗೆ ಪಂಚವಿಂಶತಿತತ್ವಂಗಳುತ್ಪತ್ಯಮಂ ಪೇಳ್ವೆ: ಪಂಚಶತಕೋಟಿ (ವಿಸ್ತೀರ್ಣ) ಭೂಮಂಡಲವಳಯದಲ್ಲಿ ಮೇರುಮಂದಿರದ ವಿಸ್ತೀರ್ಣ ಒಂದುಕೋಟಿ ಇಪ್ಪತ್ತಾರುಲಕ್ಷದ ಮೇಲೆ ಎಂಬತ್ತೈದುಸಾವಿರ ಯೋಜನ ಪ್ರಮಾಣು. ಆ ಮೇರುಮಂದಿರದ ಮೇಲೆ ಬ್ರಹ್ಮ ವಿಷ್ಣು ರುದ್ರ ಸದಾಶಿವ ನಂದಿ ಮಹಾಕಾಳ ವೀರಭದ್ರ ಅಷ್ಟಾಶೀತಿಸಹಸ್ರ ಋಷಿಯರು, ಅಸಂಖ್ಯಾತ ಮಹಾಗಣಂಗಳು, ದ್ವಾದಶಾದಿತ್ಯರು, ನಾರದಯೋಗೀಶ್ವರರು, ಅಷ್ಟದಿಕ್ಪಾಲಕರು ಏಕಾದಶ ರುದ್ರರು ಮುಖ್ಯವಾಗಿ ಶಿವಸುಖಸಂತೋಷದಿಂ ರಾಜ್ಯಂಗೆಯ್ವರು. ಆ ಮೇರುಮಂದಿರದ ಕೆಳಗಣ ಜಂಬೂದ್ವೀಪದ ವಿಸ್ತೀರ್ಣ ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. (ಅಲ್ಲಿಂದ ಮುಂದೆ) ಲವಣಸಮುದ್ರ ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. ಆ ಲವಣಸಮುದ್ರದಿಂದಾಚೆಯಲ್ಲಿ ಭೂಮಿ ಎರಡುಲಕ್ಷದ ಮೇಲೆ ಐವತ್ತುಸಾವಿರ ಯೋಜನಪ್ರಮಾಣು. (ಆ ದ್ವೀಪದ ಹೆಸರು ಪ್ಲಕ್ಷದ್ವೀಪ) ಪ್ಲಕ್ಷದ್ವೀಪಕ್ಕೆ ಇಕ್ಷುರಸಮುದ್ರ ಎರಡುಲಕ್ಷ ಐವತ್ತುಸಾವಿರ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ಐದುಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು ಶಾಲ್ಮಲಿದ್ವೀಪ) ಶಾಲ್ಮಲಿದ್ವೀಪಕ್ಕೆ ಮಧುಸಮುದ್ರ, ಐದುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ, ಹತ್ತುಲಕ್ಷ ಯೋಜನಪ್ರಮಾಣು. (ಆ ದ್ವೀಪಕ್ಕೆ ಹೆಸರು ಕುಶದ್ವೀಪ) ಕುಶದ್ವೀಪಕ್ಕೆ ಘೃತಸಮುದ್ರ ಹತ್ತುಲಕ್ಷ ಯೋಜನಪ್ರಮಾಣು. ಅಲ್ಲಿಂದತ್ತ ಭೂಮಿ, ಇಪ್ಪತ್ತೈದು ಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು ಶಾಕದ್ವೀಪ) ಶಾಕದ್ವೀಪಕ್ಕೆ ದಧಿಸಮುದ್ರ, ನಾಲ್ವತ್ತುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ನಾಲ್ವತ್ತುಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು Põ್ಞ್ರಂಚದ್ವೀಪ) Põ್ಞ್ರಂಚದ್ವೀಪಕ್ಕೆ ಕ್ಷೀರಸಮುದ್ರ, ನಾಲ್ವತ್ತುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ, ಎಂಬತ್ತುಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು ಪುಷ್ಕರದ್ವೀಪ) ಪುಷ್ಕರದ್ವೀಪಕ್ಕೆ ಸ್ವಾದೋದಕಸಮುದ್ರ ಎಂಬತ್ತುಲಕ್ಷ ಯೋಜನಪ್ರಮಾಣು, ಅಲ್ಲಿಂದತ್ತತ್ತ ಲೋಕಾಲೋಕ ಪರ್ವತಾಕಾರವಾಗಿಪ್ಪುದು. ಇಂತೀ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಪ್ರಮಾಣವೊಂದಾಗಿ ಮೇಳೈಸಿದಡೆ ಮೂರುಕೋಟಿಯುಂ ಹದಿನೇಳುಲಕ್ಷದೈವತ್ತುಸಹಸ್ರ ಯೋಜನ ಪರಿಮಾಣಿನ ಕಟ್ಟಳೆಯಾಯಿತ್ತು. ಮತ್ತಲ್ಲಿಂದ ಭೂಮಂಡಲ ಉಂಟೆರಿ ಎಂದೊಡೆ, ಉಂಟು: ನಾನೂರುಕೋಟಿಯೋಜನ ಹೇಮೋರ್ವಿ. ಅಲ್ಲಿಂದತ್ತ ಭೂಮಂಡಲ ಉಂಟೆರಿ ಎಂದೊಡೆ ಉಂಟು: ಹತ್ತುಕೋಟಿ ಇಪ್ಪತ್ತುಲಕ್ಷ ಯೋಜನಪ್ರಮಾಣು, ಹೇಮದ ಬೆಟ್ಟ. ಮತ್ತಲ್ಲಿಂದತ್ತಲೂ ಭೂಮಂಡಲ ಉಂಟೆರಿ ಎಂದಡೆ, ಉಂಟು: ಎಂಬತ್ತೈದುಕೋಟಿ ಮೂವತ್ತೈದುಲಕ್ಷದ ಅರುವತ್ತೈದುಸಾವಿರ ಯೋಜನ ಪರಿಮಾಣ ವಳಯದಲ್ಲಿಅಂಧಕಾರವಾಗಿ, ಸೂರ್ಯಚಂದ್ರರ ಬೆಳಗಿಲ್ಲ. ಇಂತಿವನೆಲ್ಲವನೊಂದಾಗಿ ಮೇಳೈಸಿದಡೆ ಐನೂರುಕೋಟಿ ಯೋಜನ ಪರಿಪ್ರಮಾಣು ಕಟ್ಟಳೆಯಾಗಿತ್ತು. ಆ ಮೇರುವಿನ ಒಂದು ದಿಕ್ಕಿನ ಪ್ರಮಾಣು:ಆ ಮೇರುವಿನ ಪ್ರದಕ್ಷಿಣವಾಗಿ ಎಂಟು ದಳದಲ್ಲಿಎಂಟು ಪಂಚಶತಕೋಟಿ [ಯೋಜನ] ವಿಸ್ತೀರ್ಣವಾಯಿತ್ತು. ಇದನು ದಿವಸದೊಳಗೆ ಸೂರ್ಯ ತಿರುಗುವನು, ರಾತ್ರಿಯೊಳಗೆ ಚಂದ್ರ ತಿರುಗುವನು, ಇಪ್ಪತ್ತೇಳು ನಕ್ಷತ್ರ, ಧ್ರುವಮಂಡಲ, ಸಪ್ತಋಷಿಯರು, ರಾಹುಕೇತು, ನವಗ್ರಹ- ಇಂತಿವರೆಲ್ಲರು ಆ ಮೇರುಮಂದಿರದ ಹೊಸಪ್ರದಕ್ಷಿಣವಂ ದಿವಾರಾತ್ರಿಯಲ್ಲಿ ತಿರುಗಿ ಬಹರು. ಇವರೆಲ್ಲರ ಪ್ರಮಾಣವನು ಮಹಕ್ಕೆ ಮಹವಾಗಿಪ್ಪ ಶರಣಸ್ಥಲದವರು ಬಲ್ಲರು. ಪ್ರಭುದೇವರು ಸಿದ್ಧರಾದೇವರು ಸಾಮವೇದಿಗಳು, ಆದಿಲಿಂಗ ಅನಾದಿಶರಣ ಪೂರ್ವಾಚಾರಿ ಸಂಗನಬಸವಣ್ಣನು ಕಟ್ಟಿದ ಕಟ್ಟಳೆಯೊಳಗೆ ಜ್ಯೋತಿಜ್ರ್ಞಾನದವರು. (ಇಂತೀ) ಕಾಲ ಜ್ಯೋತಿಷ ಗ್ರಹಣ ಸಂಕ್ರಮಣ ತಿಥಿ ವಾರ ನಕ್ಷತ್ರ ಯೋಗ ಕರಣ ಸಂವತ್ಸರ ಇವೆಲ್ಲವು ಕೂಡಲಚೆನ್ನಸಂಗನಲ್ಲಿ ಬಸವಣ್ಣ ಕಟ್ಟಿದ ಕಟ್ಟಳೆ.
--------------
ಚನ್ನಬಸವಣ್ಣ
ಜಂಬೂದ್ವೀಪ ಕಡವರ ದ್ವೀಪ, ಮಧ್ಯಗಿರಿ, ಪಾತಾಳಕ್ಕೆ ಬೇರುವರಿದು ಈರೆಂಟು ಲಕ್ಷಯೋಜನ ಪರಿಪ್ರಮಾಣ, ಮೇಲೇಳಿಗೆಯಲ್ಲಿ ಎಂಬತ್ತುನಾಲ್ಕು ಲಕ್ಷ ಯೋಜನ ಪರಿಪ್ರಮಾಣ, ನಾಚಯ್ಯಪ್ರಿಯ ಚೆನ್ನರಾಮನಾಥನ ಗಣಂಗಳ ಒಡ್ಡೋಲಗ ಮೂವತ್ತಾರುಲಕ್ಷ ಯೋಜನ ವಿಸ್ತೀರ್ಣ.
--------------
ಅನಾಮಿಕ ನಾಚಯ್ಯ
ಅಂಗುಲ ಹನ್ನೆರಡು ಕೂಡಲು ಒಂದು ಗೇಣು, ಗೇಣು ಎರಡು ಕೂಡಲು ಒಂದು ಮೊಳ, ಮೊಳವೆರಡು ಕೂಡಲು ಒಂದು ಹಸ್ತ, ಹಸ್ತವೆರಡು ಕೂಡಲು ಒಂದು ಮಾರು, ಮಾರೆರಡು ಕೂಡಲು ಒಂದು ಜಂಘೆ, ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ, ಪಾದಚ್ಛಯವೆರಡು ಸಾವಿರದೆಂಟನೂರು ಕೂಡಲು ಒಂದು ಕೂಗಳತೆ, ಕೂಗಳತೆ ನಾಲ್ಕು ಕೂಡಲು ಒಂದು ಹರದಾರಿ, ಹರದಾರಿ ನಾಲ್ಕು ಕೂಡಲು ಒಂದು ಯೋಜನ, ಅಂಥ ಯೋಜನ ನಾಲ್ಕು ಚೌಕಕ್ಕು ಹನ್ನೆರಡು ಹನ್ನೆರಡು ಕೂಡಲು ಬಳಸಿ ನಾಲ್ವತ್ತೆಂಟು ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು. ಇಂತಪ್ಪ ಕಟ್ಟಳೆಯಾಗಿದ್ದ ಕಲ್ಯಾಣದೊಳಗಿರುವ ಗಣಂಗಳೆಲ್ಲರನೂ ಕೂಡಲಸಂಗಯ್ಯಾ ನಿಮ್ಮೊಳು ಕಂಡು ಸುಖಿಯಾಗಿರ್ದೆನು.
--------------
ಬಸವಣ್ಣ
ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯ ಎಂತೆಂದಡೆ: ವಿಸ್ತರಿಸಿ ಪೇಳುವೆನು; ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ. ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮತ್ರ್ಯಕ್ಕಿಳಿತಂದು, ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ ! ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳು ಪರಮಶಿವಯೋಗಿಗಳು ಶಿವಾನುಭಾವಸಂಪನ್ನರು ಶಿವಲಿಂಗಪ್ರಾಣಿಗಳು ಶಿವಪ್ರಸಾದಪಾದೋದಕಸಂಬಂಧಿಗಳು ಶಿವಾಚಾರವೇದ್ಯರು ಶಿವಾಗಮಸಾಧ್ಯರು ಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ. ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳು ಹೊಗಬಾರದು ಕಲ್ಯಾಣವ. ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ. ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ. ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ: ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣಪಟ್ಟಣಕ್ಕೆ ಮುನ್ನೂರರವತ್ತು ಬಾಗಿಲವಾಡ. ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು. ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆ ನಾನೂರ ಐವತ್ತು ಸುವರ್ಣದ ಕೆಲಸದ ಕದಂಗಳು, ಅಲ್ಲಿ ನೂರ ಹದಿನೈದು ಚೋರಗಂಡಿ; ಅವಕ್ಕೆ ನೂರ ಹದಿನೈದು ಮೊಳೆಯ ಕದಂಗಳು. ಇಪ್ಪತ್ತು ಬಾಗಿಲು ಆಳ್ವರಿಯೊಳಗಿಪ್ಪವಾಗಿ ಅವಕ್ಕೆ ಕದಂಗಳಿಲ್ಲ. ಆ ಪಟ್ಟಣಕ್ಕೆ ಬರಿಸಿಬಂದ ಕೋಂಟೆ ನಾಲ್ವತ್ತೆಂಟು ಯೋಜನ ಪರಿಪ್ರಮಾಣು. ಬಾಹತ್ತರ [ನಿಯೋಗಿಗಳ] ಮನೆ ಲಕ್ಷ; ಮಂಡಳಿಕರ ಮನೆ ಲಕ್ಷ; ಸಾಮಂತರ ಮನೆ ಲಕ್ಷ; ರಾಯ ರಾವುತರ ಮನೆಯೊಳಡಗಿದ ಮನೆಗಳಿಗೆ ಲೆಕ್ಕವಿಲ್ಲ. ದ್ವಾದಶ ಯೋಜನ ವಿಸ್ತ್ರೀರ್ಣದ ಸೂರ್ಯವೀಥಿ ನೂರಿಪ್ಪತ್ತು; ದ್ವಾದಶ ಯೋಜನದ ಸೋಮವೀಥಿ ನೂರಿಪ್ಪತ್ತೈದು. ಅದರಿಂ ಮಿಗಿಲಾದ ಒಳಕೇರಿ ಹೊರಕೇರಿಗೆ ಗಣನೆಯಿಲ್ಲ. ಆ ಪಟ್ಟಣದೊಳಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯ. ಆ ಶಿವಾಲಯಂಗಳಿಗೆ ಮುಖ್ಯವಾದ ತ್ರಿಪುರಾಂತಕದೇವರ ಶಿವಾಲಯ. ಮುನ್ನೂರರವತ್ತು ಪದ್ಮಪತ್ರ ತೀವಿದ ಸರೋವರಗಳು. ಎರಡು ಲಕ್ಷವು ಎಂಬತ್ತೈದು ಸಾವಿರದ ಏಳು ನೂರೆಪ್ಪತ್ತು ದಾಸೋಹದ ಮಠಂಗಳು. ಆ ದಾಸೋಹದ ಮಠಂಗಳಿಗೆ ಮುಖ್ಯವಾದ ಬಸವರಾಜದೇವರ ಮಠದ ವಿಸ್ತ್ರೀರ್ಣವೆಂತೆಂದಡೆ: ಯೋಜನವರಿಯ ಬಿನ್ನಾಣದ ಕಲುಗೆಲಸದ ¥õ್ಞಳಿ; ಅತಿ ಸೂಕ್ಷ್ಮದ ಕುಸುರಿಗೆಲಸದ ದ್ವಾರವಟ್ಟವೈದು. ಅವಕ್ಕೆ ಪಂಚಾಕ್ಷರಿಯ ಶಾಸನ. ಮಿಸುನಿಯ ಕಂಭದ ತೋರಣಗಳಲಿ ರುದ್ರಾಕ್ಷಿಯ ಸೂಸಕ ಆ ಬಾಗಿಲುವಾಡದಲ್ಲಿ ಒಪ್ಪುತಿರ್ಪವಯ್ಯಾ, ನಂದಿಯ ಕಂಭದ ಧ್ವಜ ಉಪ್ಪರಗುಡಿ ಪತಾಕೆ ವ್ಯಾಸಧ್ವಜ ಒಪ್ಪುತಿರ್ಪವಯ್ಯಾ, ಆ ಮಧ್ಯದಲ್ಲಿ ಬಸವರಾಜದೇವರ ಸಿಂಹಾಸನದ ವಿಸ್ತ್ರೀರ್ಣದ ಪ್ರಮಾಣು: ಸಹಸ್ರಕಂಭದ ಸುವರ್ಣದುಪ್ಪರಿಗೆ; ಆ ಮನೆಗೆತ್ತಿದ ಹೊನ್ನಕಳಸ ಸಾವಿರ. ಗುರುಲಿಂಗ ಜಂಗಮಕ್ಕೆ ಪಾದಾರ್ಚನೆಯ ಮಾಡುವ ಹೊಕ್ಕರಣೆ ನಾಲ್ಕು ಪುರುಷಪ್ರಮಾಣದ ಘಾತ. ಅಲ್ಲಿ ತುಂಬಿದ ಪಾದೋದಕದ ತುಂಬನುಚ್ಚಲು ಬೆಳೆವ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ, ಆ ಯೋಜನವರಿಯ ಬಿನ್ನಾಣದ ಅರಮನೆಯ ವಿಸ್ತ್ರೀರ್ಣದೊಳಗೆ ಲಿಂಗಾರ್ಚನೆಯ ಮಾಡುವ ಮಠದ ಕಟ್ಟಳೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಇನ್ನು ಬಸವರಾಜದೇವರು ಮುಖ್ಯವಾದ ಅಸಂಖ್ಯಾತರ ಮಠಂಗಳು ಆ ಕಲ್ಯಾಣದೊಳಗೆ ಎಷ್ಟು ಎಂದಡೆ: ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು, ಇಪ್ಪತ್ತೆಂಟು ಸಾವಿರ ಮಹಾಮನೆಗಳು; ಹತ್ತು ಸಾವಿರ ನಿತ್ಯನೇಮಿಗಳ ಮಠಂಗಳು; ಹದಿನೈದು ಸಾವಿರ ಚಿಲುಮೆಯಗ್ಗವಣಿಯ ವ್ರತಸ್ಥರ ಮಠಂಗಳು; ಐದು ಸಾವಿರ ವೀರವ್ರತನೇಮಿಗಳ ಕಟ್ಟಳೆಯ ಮಠಂಗಳು; ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು, ಒಂದು ಸಾವಿರ ಅರವತ್ತು ನಾಲ್ಕು ಶೀಲಸಂಪನ್ನರ ಮಠಂಗಳು; ನಿತ್ಯ ಸಾವಿರ ಜಂಗಮಕ್ಕೆ ಆರೋಗಣೆಯ ಮಾಡಿಸುವ ದಾಸೋಹಿಗಳ ಮಠಂಗಳು ಮೂವತ್ತೆರಡು ಸಾವಿರ; ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ಸತ್ಯಸದಾಚಾರಿಗಳ ಮಠಂಗಳು ಐವತ್ತೆಂಟು ಸಾವಿರ; ನಿತ್ಯ ಸಾವಿರದೈನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ; ನಿತ್ಯ ಅವಾರಿಯಿಂದ ಮಾಡುವ ಮಾಟಕೂಟದ ಸದ್ಭಕ್ತರ ಮಠಂಗಳು ಒಂದು ಲಕ್ಷ; ಜಂಗಮಸಹಿತ ಸಮಯಾಚಾರದಿಂದ ಲಿಂಗಾರ್ಚನೆಯ ಮಾಡುವ ಜಂಗಮಭಕ್ತರ ಮಠಂಗಳು ಎರಡು ಸಾವಿರದೇಳ್ನೂರೆಪ್ಪತ್ತು; ಅಂತು ಎರಡು ಲಕ್ಷವು ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು. ಇಂತಪ್ಪ ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದಿಳಿತಂದ ಪ್ರಮಥಗಣಂಗಳ ಮಠಂಗಳು ಏಳು ನೂರೆಪ್ಪತ್ತು. ಇಂತೀ ಮಹಾಪ್ರಮಥರಿಗೆ ಪುರಾತರಿಗೆ ಅಸಂಖ್ಯಾತ ಮಹಾಗಣಂಗಳಿಗೆ ಪ್ರಥಮ ನಾಯಕನಾಗಿ, ಏಕಮುಖ, ದಶಮುಖ, ಶತಮುಖ, ಸಹಸ್ರಮುಖ, ಲಕ್ಷಮುಖ, ಕೋಟಿಮುಖ, ಅನಂತಕೋಟಿಮುಖನಾಗಿ ಭಕ್ತರಿಗೆ ಒಡನಾಡಿಯಾಗಿಪ್ಪನು ಸಂಗನಬಸವಣ್ಣ. ಜಗದಾರಾಧ್ಯ ಬಸವಣ್ಣ, ಪ್ರಮಥಗುರು ಬಸವಣ್ಣ, ಶರಣಸನ್ನಹಿತ ಬಸವಣ್ಣ, ಸತ್ಯಸಾತ್ವಿಕ ಬಸವಣ್ಣ, ನಿತ್ಯನಿಜೈಕ್ಯ ಬಸವಣ್ಣ, ಷಡುಸ್ಥಲಸಂಪನ್ನ ಬಸವಣ್ಣ, ಸರ್ವಾಚಾರಸಂಪನ್ನ ಬಸವಣ್ಣ, ಸರ್ವಾಂಗಲಿಂಗಿ ಬಸವಣ್ಣ, ಸುಜ್ಞಾನಭರಿತ ಬಸವಣ್ಣ, ನಿತ್ಯಪ್ರಸಾದ ಬಸವಣ್ಣ, ಸಚ್ಚಿದಾನಂದಮೂರ್ತಿ ಬಸವಣ್ಣ, ಸದ್ಯೋನ್ಮುಕ್ಮಿರೂಪ ಬಸವಣ್ಣ, ಅಖಂಡಪರಿಪೂರ್ಣ ಬಸವಣ್ಣ, ಅಭೇದ್ಯಭೇದಕ ಬಸವಣ್ಣ, ಅನಾಮಯಮೂರ್ತಿ ಬಸವಣ್ಣ, ಮಹಾಮನೆಯ ಮಾಡಿದಾತ ಬಸವಣ್ಣ, ರುದ್ರಲೋಕವ ಮತ್ರ್ಯಲೋಕಕ್ಕೆ ತಂದಾತ ಬಸವಣ್ಣ, ಶಿವಚಾರದ ಘನವ ಮೆರೆದಾತ ಬಸವಣ್ಣ. ಇಂತಹ ಬಸವಣ್ಣನ ಭಕ್ತಿಯನು ಒರೆದೊರೆದು ನೋಡುವ, ಪ್ರಜ್ವಲಿತವ ಮಾಡುವ ಅಶ್ವಪತಿ, ಗಜಪತಿ, ನರಪತಿರಾಯ, ರಾಜಾಧಿರಾಜ ಬಿಜ್ಜಳರಾಯನೂ ಆ ಬಸವಣ್ಣನೂ ಆ ಕಲ್ಯಾಣಪಟ್ಟಣದೊಳಗೆ ಸುಖಸಂಕಥಾವಿನೋದದಿಂದ ರಾಜ್ಯಂಗೆಯುತ್ತಿರಲು, ಆ ಕಲ್ಯಾಣದ ನಾಮವಿಡಿದು ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು. ಲೋಕದೊಳಗೆ ಕಲ್ಯಾಣವೆ ಕೈಲಾಸವೆನಿಸಿತ್ತು. ಇಂತಪ್ಪ ಕಲ್ಯಾಣದ ದರುಶನವ ಮಾಡಿದಡೆ ಭವಂ ನಾಸ್ತಿ, ಇಂತಪ್ಪ ಕಲ್ಯಾಣವ ನೆನೆದಡೆ ಪಾಪಕ್ಷಯ, ಇಂತಪ್ಪ ಕಲ್ಯಾಣದ ಮಹಾತ್ಮೆಯಂ ಕೇಳಿದಡೆ ಕರ್ಮಕ್ಷಯವಹುದು, ಮೋಕ್ಷ ಸಾಧ್ಯವಹುದು, ಇದು ಕಾರಣ, ಕೂಡಲಚೆನ್ನಸಂಗಮದೇವಾ, ನಿಮ್ಮ ಭಕ್ತ ಬಸವಣ್ಣನಿದgಠ್ಞವೆ ಮಹಾಕಲ್ಯಾಣವೆಂದರಿದು ದಿವ್ಯಶಾಸನವ ಬರೆದು ಪರಿಸಿದ ಕಾರಣ, ಎನ್ನ ಭವಂ ನಾಸ್ತಿಯಾಯಿತ್ತಯ್ಯಾ.
--------------
ಚನ್ನಬಸವಣ್ಣ
ನವಖಂಡಪೃಥ್ವಿ ಎಂಬುದು ಪಂಚಶತಕೋಟಿ ಯೋಜನ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಕ್ಕೆ ಮಂಡಲಾಕಾರವಾದ ಭೂಮಂಡಲ ಒಂದೇ ಅಂತಪ್ಪ ಭೂಮಂಡಲದ ಮಧ್ಯದಲ್ಲಿ ಸಪ್ತಸಮುದ್ರ, ಸಪ್ತದ್ವೀಪಾಂತರ ಹಿಮಾಚಲ ಮಹಾಮೇರುವರ್ಪತ ಮೊದಲಾದ ಅಷ್ಟ ಪರ್ವತಂಗಳು. ಕಾಶಿ, ರಾಮೇಶ್ವರ ಮೊದಲಾದ ಮುನ್ನೂರಾ ಅರುವತ್ತು ಕ್ಷೇತ್ರಂಗಳು. ಕೃಷ್ಣಾ, ಭಾಗೀರಥಿ, ಯಮುನಾ, ಸರಸ್ವತಿ, ಗಂಗಾ ಮೊದಲಾದ ಅರುವತ್ತಾರುಕೋಟಿ ತೀರ್ಥಂಗಳು ಇಂತೀ ತೀರ್ಥಕ್ಷೇತ್ರಂಗಳ ತೆತ್ತೀಸಕೋಟಿ ದೇವರ್ಕಳು ಸ್ಥಾಪಿಸಿದರು. ಮತ್ತಂ, ಮಂದಮತಿಗಳಾದ ಜೀವಾತ್ಮರು ಕೂಡಿ, ಇದು ದೇವಭೂಮಿ, ಇದು ಹೊಲೆಭೂಮಿ, ಇದು ಮಠಮಾನ್ಯದ ಭೂಮಿ, ಇದು ಗ್ರಾಮ ಗೃಹದ ಭೂಮಿ, ಇದು ಲಿಂಗಸ್ಥಾಪನೆಯಾದ ರುದ್ರಭೂಮಿ, ಇದು ಶ್ಮಶಾನ ಭೂಮಿ ಎಂದು ಹೆಸರಿಟ್ಟು ಸ್ಥಾಪನೆಯ ಮಾಡುವಿರಿ. ಎಲಾ ದಡ್ಡ ಪ್ರಾಣಿಗಳಿರಾ, ಇದಕೊಂದು ದೃಷ್ಟವ ಪೇಳ್ವೆ ಕೇಳಿರಯ್ಯಾ. ಅದೆಂತೆಂದೊಡೆ : ಒಂದು ನದಿಯಲ್ಲಿ ಕೋಲು ಹಾಕಿ, ಗೆರೆಯ ಬರೆದು ಎರಡು ಮಾಡಿ, ಇದು ಸೀ ಉದಕ, ಇದು ಲವಣೋದಕವೆಂದಡೆ ಆಗಬಲ್ಲುದೇನಯ್ಯಾ ? ಆಗಲರಿಯದು. ಮತ್ತಂ, ಒಂದೇ ಬೇವಿನಮರದೊಳಗೆ ಒಂದು ಶಾಖೆಗೆ ಮಾವಿನಹಣ್ಣು, ಒಂದು ಶಾಖೆಗೆ ಬೇವಿನಹಣ್ಣು, ಒಂದು ಶಾಖೆಗೆ ಬಾಳೆಯಹಣ್ಣು, ಒಂದು ಶಾಖೆಗೆ ಹಸಲು, ನೀರಲಹಣ್ಣು, ಆಗೆಂದಡೆ ಆಗಬಲ್ಲವೇನಯ್ಯಾ ? ಆಗಲರಿಯವು ಎಂಬ ಹಾಗೆ. ಇಂತೀ ದೃಷ್ಟದಂತೆ ಒಂದು ನವಖಂಡಮಂಡಲಭೂಮಿಯೊಳಗೆ, ಇದು ಮಂಗಲಭೂಮಿ, ಇದು ಅಮಂಗಳಭೂಮಿ, ಇದು ಶುದ್ಧಭೂಮಿ, ಇದು ಅಶುದ್ಧಭೂಮಿ, ಎಂದಡೆ ಆಗಬಲ್ಲವೇನಯ್ಯಾ ? ಆಗಲರಿಯವು. ಅದೇನು ಕಾರಣವೆಂದಡೆ : ಆದಿ ಅನಾದಿಯಿಂದತ್ತತ್ತಲಾದ ಪರಶಿವನ ಮಹಾ ಪ್ರಸಾದದಿಂದುದ್ಭವಿಸಿದ ಬ್ರಹ್ಮಾಂಡವು, ಒಮ್ಮೆ ಶುದ್ಧ ಒಮ್ಮೆ ಅಶುದ್ಧವಾಗಬಲ್ಲುದೆ ಎಲೆ ಮರುಳ ಮನುಜರಿರಾ. ನಿಮ್ಮ ಮನದ ಸಂಕಲ್ಪ ವಿಕಲ್ಪದಿಂ ಶುದ್ಧ ಅಶುದ್ಧವಾಗಿ ತೋರುವುದಲ್ಲದೆ. ನಿಮ್ಮ ಮನದ ಸಂಕಲ್ಪವನಳಿದಡೆ ಸಕಲಬ್ರಹ್ಮಾಂಡಗಳೆಲ್ಲ ನಿರ್ಮಳವಾಗಿ ತೋರುವವು. ನಿಮ್ಮ ಮನದ ಸಂಕಲ್ಪವನಳಿಯದಿರ್ದಡೆ ಸಕಲಬ್ರಹ್ಮಾಂಡಗಳೆಲ್ಲ ಅಮಂಗಳವಾಗಿ ತೋರುವವು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->