ಅಥವಾ

ಒಟ್ಟು 131 ಕಡೆಗಳಲ್ಲಿ , 26 ವಚನಕಾರರು , 77 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವೆಂಬ ಹೇಳಿಗೆಗೆ ಮನಸರ್ಪನಾವರಿಸಿ, ಇನಿದು ಬಂದಡೆ ಅದಕ್ಕಿಂಬುಗೊಡದೆ, ಇರುತಿರ್ಪ ಸರ್ಪವನು ತೆಗೆದು ಶಿವಲಿಂಗವನು ನೆಲೆಗೊಳಿಸಿದ ಶ್ರೀ ಗುರುವೆ ಶರಣು ಶರಣೆಂಬ, ವಾಕ್ಯಂಗಳ್ಲ ಆಕಾರ ಚತುಷ್ಟಯಮಾನಂದದದಲ್ಲಿರಿಸಿದ ಏಕೋ ರುದ್ರ ಶಿಷ್ಟ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನಡೆನುಡಿಯಿಲ್ಲದ ಘನವು ನಡೆನುಡಿಗಡಿಯಿಟ್ಟು ಬಂದರೆ ಎನ್ನ ಸಡಗರ ಹೆಚ್ಚಿತ್ತು ನೋಡಾ ! ಬಡಿವಾರದ ಬಲವಯ್ಯಾ, ಕರ್ತು ಭೃತ್ಯಕಳೆ ಉನ್ನತವಾಗಿ ಶಕ್ತಿಯನು ಮುಕ್ತಿದಾಯಕ ಮುನಿಸಿಲ್ಲದೆ ಮುಂದುವರಿ. ನಾದ ಬಿಂದು ಕಳೆ ನವೀನವಯ್ಯಾ. ಮೂದೇವರೊಡೆಯ ಶರಣು ಶರಣು ಕರುಣಾನಿದ್ಥಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ ಬೆಳೆಗೆ ಮುನಿದವರುಂಟೆ ಅಯ್ಯಾ? ಅರಿದಂಗವ ತಾಳಿದವರಲ್ಲಿ ಮರವೆಗೆ ಮುನಿವರಲ್ಲದೆ ಅರಿವಿಗೆ ಮುನಿವರುಂಟೆ ಅಯ್ಯಾ? ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ ಮೊಲೆಯ ಕಟ್ಟಿದರುಂಟೆ ಅಯ್ಯಾ? ಗುರುವಾದಡೂ ಆಗಲಿ, ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ ಅರಿವಿಂಗೆ ಶರಣು ಮರವಿಂಗೆ ಮಥನವ ಮಾಡಿದಲ್ಲದೆ ಇರೆ. ಇದು ನೀವು ಕೊಟ್ಟ ಅರಿವಿನ ಮಾರನ ಇರವು, ಸದಾಶಿವಮೂರ್ತಿಲಿಂಗದ ಬರವು.
--------------
ಅರಿವಿನ ಮಾರಿತಂದೆ
ಪಾದಪೂಜೆಯ ಮಾಡಿ ಪಾದತೀರ್ಥವ ಪಡೆದುಕೊಂಬ ಕ್ರಮವು ಎಂತೆಂದಡೆ : 'ದೇಶಿಕಸ್ಯ ಪದಾಂಗುಷ್ಠೇ ಲಿಖಿತಾ ಪ್ರಣವಂ ತತಃ | ಪಾದಪೂಜಾವಿಧಿಂ ಕೃತ್ವಾ ವಿಶೇಷಂ ಶೃಣು ಪಾರ್ವತಿ ||' ಎಂದುದಾಗಿ, ಭಯಭಕ್ತಿ ಕಿಂಕುರ್ವಾಣದಿಂದೆ ಜಂಗಮಕ್ಕೆ ಪಾದಾರ್ಚನೆಯಂ ಮಾಡಿ ಗದ್ದುಗೆಯನಿಕ್ಕಿ ಮೂರ್ತವ ಮಾಡಿಸಿ ತನ್ನ ಕರಕಮಲವಂ ಮುಗಿದು ಅಯ್ಯಾ, ಹಸಾದ ಮಹಾಪ್ರಸಾದ ಪೂರ್ವಜನ್ಮ ನಿವಾರಣಂ ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಶ್ರೀಪಾದಗಳಿಗೆ ಶರಣು ಶರಣಾರ್ಥಿಯೆಂದು 'ಪ್ರಣಮ್ಯ ದಂಡವದ್ಭೂಮೌ ಇಷ್ಟಮಂತ್ರಂ [ಸದಾಜಪೇತ್] ಶ್ರೀ ಗುರೋಃ ಪಾದಪದ್ಮಂ ಚ ಗಂಧಪುಷ್ಪಾsಕ್ಷತಾದಿಭಿಃ ||' ಎಂದುದಾಗಿ, ದೀರ್ಘದಂಡ ನಮಸ್ಕಾರವಂ ಮಾಡಿ ಪಾದಪೂಜೆಗೆ ಅಪ್ಪಣೆಯಂ ತಕ್ಕೊಂಡು ಮೂರ್ತವಂ ಮಾಡಿ ಲಿಂಗವ ನಿರೀಕ್ಷಿಸಿ ತನ್ನ ಅಂಗೈಯಲ್ಲಿ ಓಂಕಾರ ಪ್ರಣವಮಂ ವಿಭೂತಿಯಲ್ಲಿ ಬರೆದು ಆ ಜಂಗಮದ ಎರಡು ಪಾದಗಳ ತನ್ನ ಕರಕಮಲದಲ್ಲಿ ಲಿಂಗೋಪಾದಿಯಲ್ಲಿ ಪಿಡಿದುಕೊಂಡು ಎರಡು ಅಂಗುಷ್ಠಗಳಲ್ಲಿ ಪ್ರಣವಮಂ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ ನಮಸ್ಕರಿಸಿ, ಆ ಪೂಜೆಯಂ ಇಳುಹಿ ಬಟ್ಟಲೊಳಗೆ ಪ್ರಣವಮಂ ಬರೆದು ಬ್ರಹ್ಮರಂಧ್ರದಲ್ಲಿರ್ದ ಸತ್ಯೋದಕವೆಂದು ಭಾವಿಸಿ, ಆ ಉದಕದ ಬಲದಂಗುಷ್ಠದ ಮೇಲೆ ನೀಡುವಾಗ ಆಱುವೇಳೆ ಷಡಕ್ಷರವ ನುಡಿದು ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ್ಠದ ಮೇಲೆ ನೀಡುವಾಗ ಐದುವೇಳೆ ಪಂಚಾಕ್ಷರವ ನುಡಿದು ಪ್ರಾಣಲಿಂಗವೆಂದು ಭಾವಿಸಿ, ಎರಡಂಗುಷ್ಠದ ಮಧ್ಯದಲ್ಲಿ ಉದಕವ ನೀಡುವಾಗ ಒಂದು ವೇಳೆ 'ಓಂ ಬಸವಲಿಂಗಾಯನಮಃ' ಎಂದು ಸ್ಮರಿಸಿ, ಭಾವಲಿಂಗವೆಂದು ಭಾವಿಸಿ ದ್ರವನೆಲ್ಲವ ತೆಗೆದು ಮತ್ತೆ ಪೂಜೆಯ ಮಾಡಿ ನಮಸ್ಕರಿಸಿ ಶರಣಾರ್ಥಿಯೆಂದು ಆ ಜಂಗಮವು ಸಲ್ಲಿಸಿದ ಮೇಲೆ ತಾನು ಪಾದತೀರ್ಥವ ಸಲ್ಲಿಸುವುದು. ಪಂಚಾಂಗುಲಿ ಪಂಚಾಕ್ಷರಿಯಿಂದಲಿ ಲಿಂಗಕರ್ಪಿಸಿ ಆ ಪಂಚಾಂಗುಲಿಯುತ ಜಿಹ್ವೆಯಿಂದ ಸ್ವೀಕರಿಸುವುದು ಗುರುಪಾದೋದಕ. ಲಿಂಗವನೆತ್ತಿ ಅಂಗೈಯಲ್ಲಿರ್ದ ತೀರ್ಥವ ಸಲ್ಲಿಸಿದುದು ಲಿಂಗಪಾದೋದಕ. ಬಟ್ಟಲೊಳಗಿರ್ದ ತೀರ್ಥವ ಸಲಿಸಿದುದು ಜಂಗಮಪಾದೋದಕ. ಈ ತ್ರಿವಿಧ ಪಾದೋದಕ ಒಂದೇ ಎಂದರಿವುದು. ಹೀಗೆ ಕ್ರಮವರಿದು ಸಲಿಸುವರ್ಗೆ ಮುಕ್ತಿಯಾಗುವುದಕ್ಕೆ ತಡವಿಲ್ಲವೆಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಶರಣನ ಬರವದು ಸಕಲಸನ್ನಿಹಿತ, ಶರಣ ನಿಂದುದು ಸಕಲನಿಃಕಳ, ಶರಣು ಶರಣಸಂಬಂಧವಾದುದು ಗುರುನಿರಂಜನ ಚನ್ನಬಸವಲಿಂಗೈಕ್ಯ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ ಶಿವಲೆಂಕಮಂಚಣ್ಣಗೆ ಶಿವರಾತ್ರಿಯಯ್ಯಗಳಿಗೆ ಸಿದ್ಧರಾಮಯ್ಯಗಳಿಗೆ ಚಿಮ್ಮುಲಿಗೆಯ ಚಂದಯ್ಯ ಚಿಕ್ಕಯ್ಯ ಡೋಹರ ಕಕ್ಕಯ್ಯ ಒಕ್ಕುಮಿಕ್ಕ ಪ್ರಸಾದವಯಿಕ್ಕೆಯ್ಯಲ್ಲಿ ಕೊಂಬ ಅಕ್ಕನಾಗಾಯಿಗೆ ಹರಳಯ್ಯ ಮಧುವಯ್ಯ ಬಳ್ಳೇಶ್ವರಯ್ಯಗಳಿಗೆ ಹಾವಿನಾಳ ಕಲ್ಲಯ್ಯಗಳಿಗೆ ಸರವೂರ ಬಂಕಯ್ಯಗೆ ಸುರಗಿಯ ಚೌಡಯ್ಯಗೆ ಪರಿಪರಿಯ ಶರಣರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಧರೆಯನಾಳುವ ಪರವಾದಿ ಬಿಜ್ಜಳನು ಮಡಿವಾಳಯ್ಯಗಳು ಕರೆಯಕಳುಹಿದರೆ ಬಾರದಿರಲು ಪಟ್ಟದಾನೆಯ ಮೇಲೆ ಪರಿಪರಿಬಣ್ಣ ಸಣ್ಣವಸ್ತ್ರವ ಹೇರಿಸಿ ಶರದ್ಥಿಯ ಮುಂದೆ ನೀ ನೂಕಿ ಬಾಯೆಂದು ಕಳುಹಲು, ಬರುವ ಪಟ್ಟದಾನೆಯ ಕಂಡು ಕಂಗೆಡದೆ ಕಡೆಗೋಡದೆ ತಟ್ಟನೆ ಸೀಳಿ ನಿಟ್ಟೆಲುವ ಮುರಿದು ಹೊದಕೆಯ ಮುರಿಗಿ ಮಾಡಿ ತಲೆಯ ಹರಿಯಲಿಟ್ಟು ದುಕೂಲವ ಸುಟ್ಟು ಪರಿಚಾರರ ನೆರೆಯಟ್ಟಿ ತಲೆಗಳ ಕುಟ್ಟುವದ ಕೇಳಿ ಕಂಗೆಟ್ಟು ಕಾಲಿಗೆರಗಲು ಕರುಣವ ಪಡೆದ ನಿಷ್ಠೆಯ ವೀರಮಡಿವಾಳಯ್ಯಗಳಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುಣ ರೂಪಂಗಳ ಮೀರಿ ಶಿಷ್ಯಜನ ಮನೋಜ್ಞಾನಾಂಧಕಾರಕ್ಕೆ ಸೂರ್ಯೋದಯನಾಗಿ, ಲಲಾಟಲೋಚನ ಚಂದ್ರಕಳಾ ದಶಭುಜಂಗಳಂ ಜ್ಞಾನ ಶಾಂತಿ ಬಾಹುದ್ವಯಂಗಳಲ್ಲಿ ಪುದುಂಗೊಳಿಸಿ, ಭುವನ ಹಿತಾರ್ಥಮಾಗಿ ದೇಶಿಕಸ್ವರೂಪಮಂ ತಾಳ್ದು, ದೀಕ್ಷಾ ಶಿಕ್ಷಾ ಸ್ವಾನುಭಾವಾತ್ಮಕನಾಗಿ ಚರಿಪ ಷಟ್ಸ ್ಥಲಬ್ರಹ್ಮ ಪ್ರಬೋಧಕ ಪ್ರಭು ಪ್ರಸನ್ನಮೂರ್ತಿ ಪರಮ ಶಿವಲಿಂಗ ಭಕ್ತಜನಾಂತರಂಗಾ. ಮನ್ಮಾನಸಾಂಭೋಜ ಭೃಂಗ ತವ ಪಾದ ಪಲ್ಲವಂಗಳೆ ಮನೋವಚನಕಾಯಂಗಳಿಂ ತ್ರಿವಾರಂ ಶರಣು ಶರಣು.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಆ ಶಿಷ್ಯನು ಶ್ರೀ ಗುರುವೆ ಶರಣು, ಸರ್ವಚೈತನ್ಯಾತ್ಮಗುರುವೆ ಶರಣು, ನಿತ್ಯನಿರಂಜನಗುರುವೆ ಶರಣು, ಶಾಂತ ಉಪಶಾಂತಗುರುವೇ ಶರಣು, ವ್ಯೋಮಾತೀತಗುರುವೆ ಶರಣು, ನಾದ ಬಿಂದು ಕಲಾತೀತಗುರುವೆ ಶರಣು, ನಿಮ್ಮ ಭವರೋಗವೈದ್ಯನೆಂದು ಶ್ರುತಿಗಳು ಸಾರುತಿರಲು ನಾನು ಭವರೋಗಿ ಬಂದು ನಿಮ್ಮ ಮೊರೆಹೊಕ್ಕೆನು, ಎನ್ನ ಭವರೋಗಂಗಳ ಕಳದು ನಿಮ್ಮ ಕರುಣಪ್ರಸಾದವನಿಕ್ಕಿ ಸಲಹಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನೀ ನಿಲಿಸಿದಲ್ಲಿ ನಾನಂಜೆ ನಾನಂಜೆ ನಾನಂಜೆನಯ್ಯಾ ಘನವು ಮಹಾಘನಕ್ಕೆ ಶರಣು ಹೊಕ್ಕುದಾಗಿ. ನೀ ನಿಲಿಸಿದ ಧನದಲ್ಲಿ ನಾನಂಜೆ ನಾನಂಜೆನಯ್ಯಾ, ಧನವು ಸತಿಸುತ ಮಾತಾಪಿತರಿಗೆ ಹೋಗದಾಗಿ. ನೀ ನಿಲಿಸಿದ ತನುವಿನಲ್ಲಿ ನಾನಂಜೆ ನಾನಂಜೆನಯ್ಯಾ, ತನು ಸರ್ವಾರ್ಪಿತದಲ್ಲಿ ನಿಹಿತಪ್ರಸಾದಭೋಗಿಯಾಗಿ, ಇಂತೆಲ್ಲರ ಧೀರಸಮಗ್ರನಾಗಿ, ಕೂಡಲಚೆನ್ನಸಂಗಮದೇವಾ, ನಿಮಗಾನಂಜೆನು
--------------
ಚನ್ನಬಸವಣ್ಣ
ಅಪ್ರತಿಮಭಸಿತವನು ಸುಪ್ರಭಾಚಾರ್ಯನಿಂದೆ ಅರಿದು ಅವಧರಿಸಿದ ಅನುಪಮ ಶರಣಂಗೆ ಅಜ ವಿಷ್ಣು ಇಂದ್ರಾದಿ ಮನುಮುನಿ ಷಡುದರ್ಶನ ಸಕಲ ನಿಃಕಲ ಸಂಭವಿತರೆಲ್ಲ ಶರಣು ಶರಣೆಂದು ಬದುಕುವರು ಕಾಣಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹುಸಿ ಕಳವು ಡಂಬಕದ ಸುಳುಹನಳಿದುಳಿದ ಜ್ಞಾನಕಲಾತ್ಮನ ಕಂಡ ಚೌಪೀಠವಾಸನು, ತ್ರಿವಿಧಾನುಗ್ರಹವ ಮಾಡಿ ಕಾಯ ಪ್ರಾಣಾತ್ಮ ಸನ್ನಿಹಿತನಾಗಿ ತಾನೆಂಬ ಭಾವ ತಪ್ಪುವಂತೆಮಾಡಿ ಸಲಹಿದನೆನ್ನ ನಿರಂಜನ ಚನ್ನಬಸವಲಿಂಗವೆಂಬ ಗುರುನಾಥಂಗೆ ಶರಣು ಶರಣು ಶರಣೆನುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ತನ್ನ ತಂದುಕೊಟ್ಟ ಚನ್ನಗುರುಲಿಂಗವ ಬ್ಥಿನ್ನವಿರಹಿತನಾಗಿ ಮುನ್ನ ಕರದಲ್ಲಿಟ್ಟು ಹೃದಯಕಾಸಾರದುದಕ ಮಜ್ಜನಗೈದು, ಅಷ್ಟದಳಕುಸುಮವನಿಟ್ಟು ಶರಣೆಂದು ಮಾಡುವೆನು. ಕರಸ್ಥಲದ ಲಿಂಗವ ಮನಸ್ಥಲದಲ್ಲಿ ಧರಿಸಿ, ಉನ್ಮನಸೋದಕದಿ ಮಜ್ಜನಕ್ಕೆರೆದು ತ್ರಿದಳಕುಸುಮವನಿಟ್ಟು ಶರಣೆಂದು ಮಾಡುವೆನು. ಮನಸ್ಥಲದ ಲಿಂಗವನು ಭಾವಸ್ಥಲದಲ್ಲಿ ಧರಿಸಿ, ಚಿಜ್ಜಲದಿಂ ಮಜ್ಜನಕ್ಕೆರೆದು ಸಾಸಿರದಳಕುಸುಮವನಿಟ್ಟು ಶರಣೆಂದು ಮಾಡುವೆನು. ಭಾವಸ್ಥಲದ ಲಿಂಗವನು ಸರ್ವಾಂಗದಲ್ಲಿರಿಸಿ ಸತ್ಯೋದಕದಿಂ ಮಜ್ಜನಕ್ಕೆರೆದು, ಪಶ್ಚಿಮಕೋಣೆಯಲ್ಲಿಪ್ಪ ನಿಶ್ಚಿಲಕುಸುಮವನಿಟ್ಟು ಶರಣು ಶರಣೆಂದು ಬದುಕಿದೆನು ನಿರಂಜನ ಚನ್ನಬಸವಲಿಂಗವನು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾದ-ಬಿಂದು-ಕಲಾಸಂಚ ನಿರಂಜನಲಿಂಗವನು ಪರಮಗುರುಮುಖದಿಂದೆ ಸಾದ್ಥಿಸಿ, ಕರಕಂಜದೊಳಗಿರಿಸಿ, ಉರವಣಿ ಬಟ್ಟೆಗಳ ಸವರಿ, ಕಳೆವ ಕರಡವಿಯೊಳೆಸೆವುತ, ಪರಿಪರಿಯಿಂದೆ ಅಣುಮಾತ್ರ ಮೂರು ವಿದ್ಯೆಕೆ ಮರವೆಯ ತಾರದೆ, ಎಡಬಲದ ನಡೆನುಡಿ ಜಾಣರನೊಳಕೊಳ್ಳದೆ ಹಿಡಿತ ಬಿಡಿತಗಳರಿದು, ಜರೆದು ನೂಂಕುತ ಹಿಡಿದುಕೊಂಬುತ ಶರಣು ಶರಣೆಂದು ಬೆರೆದು ಬೆರಗಾಗಿರ್ಪ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಮಾಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಸಕಲಕ್ಕೆ ಗುರು ಬಸವಣ್ಣ ಎನ್ನ ನಿಃಕಲಕ್ಕೆ ಗುರು ಬಸವಣ್ಣ ; ಎನ್ನ ಸಕಲ ನಿಃಕಲ ಕೂಡಿದಾನಂದದಾ ಪದವೆನಿತ ಆಗೆನಿಸಿ, ಪದವ ಮೀರಿದ ಸದಮಲಜ್ಞಾನಜ್ಯೋರ್ಮಯನೈ. ಬಸವಣ್ಣನೇ ಶರಣು, ಬಸವಣ್ಣನೇ ಶರಣು. ಬಸವಣ್ಣನೇ ಭಕ್ತಿಮುಕ್ತಿಗೆ ಮೂಲವು. ಬಸವಣ್ಣನ ನೆನೆದು ಅನಿಮಿಷಾಕ್ಷರದಿಂದ ಬಸವಪದವಾಯಿತ್ತೈ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->