ಭ ಪದದಿಂದ ಪ್ರಾರಂಭವಾಗುವ ವಚನಗಳು:
ಭಕ್ತರಿಗೆ ಅಕ್ಕೆ ಶೋಕ ದುಃಖವುಂಟೆ ಅಯ್ಯಾ ? ಅತ್ತು ಕಳೆವ ನೋವ ಹಾಡಿ ಕಳೆಯಲೇಕಯ್ಯಾ ? ಈ ಮುಕ್ತಾಯಕ್ಕಗಳ ಕಕ್ಕುಲತೆಯ ಶಂಭುಜಕ್ಕೇಶ್ವರನ ಶರಣರೊಪ್ಪರಯ್ಯಾ.
ಭಾವನೇಕೆ ಬಾರನೆನ್ನ ಮನೆಗೆ ? ಹರಿಯಮಗನನುರುಹಿದ ಗರುವದ ಭಾವನೇಕೆ ಬಾರನೆನ್ನ ಮನೆಗೆ ? ಅಸುರರ ಪುರವ ಸುಟ್ಟ ವೀರಭಾವನೇಕೆ ಬಾರನೆನ್ನ ಮನೆಗೆ ? ದಕ್ಷನ ಶಿರವನರಿದು, ಯಾಗವ ಕೆಡಿಸಿ ಕುರಿದಲೆಯ ಹತ್ತಿಸಿ ಬಿನ್ನಾಣದ ಬಲುಹ ಮೆರೆವ ಏಕೋಭಾವನೇಕೆ ಬಾರನೆನ್ನ ಮನೆಗೆ ? ಹರಿಯ ನಯನದ ಪೂಜೆ ಚರಣದಲೊಪ್ಪಿತ್ತೆಂಬ ದುರುಳತನವು ತನಗೆ ಬೇಡವ್ವಾ. ಪರವಧುವಿಂಗಳುಪಿ ಇಲ್ಲವೆಂಬ ವಿಗಡತನದ ದುರುಳತನ ಬೇಡವ್ವಾ. ಆತನ ಕರೆದು ತಾರವ್ವಾ, ಶಂಭುಜಕ್ಕೇಶ್ವರನ ನೆರೆದು ನೋಡುವೆನು.
ಭವಿಯ ಬೆರಸಿದ ಭಕ್ತಿ, ಹವಿಯ ಬೆರಸಿದ ಬೀಜ, ಉದಕ ಬೆರಸಿದ ಎಣ್ಣೆ ಜ್ಯೋತಿ ಪ್ರಜ್ವಲಿಸುವುದೆ ? ಭವಿಯಲ್ಲ ಭಕ್ತನಲ್ಲ, ಹವಿಯಲ್ಲ ಬೀಜವಲ್ಲ, ಉದಕವಲ್ಲ ಎಣ್ಣೆಯಲ್ಲ ಒಡಲಿಚ್ಫೆಗೆ ಹೋಗಿ ಭವಿಯ ಮನೆಗೆ ತುತ್ತಿಡುವ ನರಕಿಗಳಿಗೇಕೊಲಿವ ನಮ್ಮ ಶಂಭುಜಕ್ಕೇಶ್ವರನು ?