ಜಗದಲ್ಲಿ ಸುಳಿವ ಗುರುಗಳ ಉಪದೇಶದ ಬೋಧೆಯ
ಚೋರತನವ ಕಂಡು ಅಂಜಿದೆನಯ್ಯಾ.
ಮನೆಯ ಕೂಡಿಕೊಂಡು ಅನ್ನವನಿಕ್ಕಿದಲ್ಲಿ
ಸುಳಿವ ಚೋರರ ಕಂಡು ಗುರುವೆನಲಾರೆ.
ಅದೆಂತೆಂದಡೆ :
ಮಹತ್ತರವಪ್ಪ ಜ್ಯೋತಿರ್ಲಿಂಗವ ಕೈಯಲ್ಲಿ ಕೊಟ್ಟು,
ಪಾತಕವಪ್ಪ ಫಲಭೋಗಂಗಳ ಕೈಯಲ್ಲಿ ಕೊಟ್ಟು,
ಅಜಾತರೆಂದಡೆ ನಾಚಿದೆನಯ್ಯಾ.
ಇಂತೀ ಭ್ರಾಂತರ ಕಂಡು ವಂದಿಸಲಾಗದು,
ತನ್ನ ರೋಗಕ್ಕೆ ನಿರ್ವಾಹವ ಕಾಣದೆ, ಇದಿರ ರೋಗವ ಮಾಣಿಸಿಹೆನೆಂದು,
ಮದ್ದಿನ ಚೀಲವ ಹೊತ್ತು ಸಾವ ಕದ್ದೆಹಕಾರನಂತೆ,
ಕ್ಷುದ್ರಜೀವಿಗೆಲ್ಲಿಯದು ಸದ್ಗುರುಸ್ಥಲ ?
ಸದ್ಗುರುವಾದಡೆ ಅವ ಬದ್ಧನಾಗಿರಬೇಕು.
ತಂತ್ರದಲ್ಲಿ ಹೋಹ ಮಂತ್ರದಂತಿರಬೇಕು.
ಮಂದಾರದಲ್ಲಿ ತೋರುವ ಸುಗಂಧದಂತಿರಬೇಕು.
ಇಂತಿಪ್ಪ ಗುರುವಿಂಗಿಹವಿಲ್ಲ, ಪರವಿಲ್ಲ, ಭಾವಕ್ಕೆ ಭ್ರಮೆಯಿಲ್ಲ.
ಆ ಗುರುವಿನ ಕೈಯಲ್ಲಿ ಬೋಧಿಸಿಕೊಂಡ ಶಿಷ್ಯಂಗೆ
ತುಪ್ಪವನಿಕ್ಕಿದ ಚಿತ್ತೆಯಂತೆ ಸ್ಫಟಿಕವ [ಸಾರಿ] ದ [ಒರತೆ ]ಯಂತೆ.
ಹೀಂಗಲ್ಲದೆ, ಗುರುಶಿಷ್ಯಸಂಬಂಧವಾಗಬಾರದು.
ಇದನರಿಯದಿರ್ದಡೆ ಅಂಧಕನ ಕೈಯ ಅಂಧಕ ಹಿಡಿದಂತೆ,
ಪಂಗುಳ[ನ]ಲ್ಲಿ ಚಂದವನರಸುವನಂತೆ,
ಸ್ವಯಾನಂದಭರಿತ, ನಿಃಕಳಂಕ ಮಲ್ಲಿಕಾರ್ಜುನಾ.