ಅಥವಾ

ಒಟ್ಟು 266 ಕಡೆಗಳಲ್ಲಿ , 58 ವಚನಕಾರರು , 221 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣು ನೋಡಿ ರೂಪ ಹೇಳದಂತಿರಬೇಕು. ಕಿವಿ ಕೇಳಿ ಶಬ್ದವ ನುಡಿಯಲರಿಯದಂತಿರಬೇಕು. ಮನವುಂಡು ಡರ್ರನೆ ತೇಗಿ ರುಚಿಯ ಪೇಳಲರಿಯದಂತಿರಬೇಕು. ಮನವ ತೋರುವ ಗುರುವಿನ ಕಾರುಣ್ಯದನುವ ಕಾಬ ಶಿಷ್ಯಂಗೆ, ಮನೋಮೂರ್ತ ಮುನ್ನವೆಯಾಯಿತ್ತೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗುರುಶಿಷ್ಯರಿಬ್ಬರೂ ಸಹಪಂಕ್ತಿಯಲ್ಲಿ ಲಿಂಗಾರ್ಚನೆ ಮಾಡಿಹೆವೆಂಬರಯ್ಯಾ! ಹೋ! ಹೋ! ಬಾಲಭಾಷೆಯ ಕೇಳಲಾಗದು. ಅಲ್ಲಲ್ಲ, ಮಾಡಬಹುದು. ಅದೇನು ಕಾರಣ? ಗುರುವಿನ ಅರಿವಿನ ಹರಿವನರಿಯಬಲ್ಲಡೆ ಮಾಡಬಹುದು, ಮಾಡಬಹುದು. ಶಿಷ್ಯ ಪ್ರಸಾದವೆಂಬುಭಯಸಂದೇಹ ಹಿಂದುಳಿಯಬಲ್ಲಡೆ, ಮಾಡಬಹುದು, ಮಾಡಬಹುದು. ಇದಲ್ಲದೆ ಲಿಂಗಪ್ರಸಾದದ ಮೇಲೆ ಗುರುಪ್ರಸಾದವನಿಕ್ಕಿಹೆನೆಂಬ ಶಿವದ್ರೋಹಿಗಳನೇನೆಂಬೆ! ಕೊಂಡೆಹೆನೆಂಬ ಗುರುದ್ರೋಹಿಗಳನೇನೆಂಬೆ! ಇದು ಕಾರಣ, ಮಹಾಘನಸೋಮೇಶ್ವರಾ, ನಿಮ್ಮಲ್ಲಿ, ಇವರಿಬ್ಬರ ಗುರು ಶಿಷ್ಯರೆಂದೆನಾದಡೆ, ಎನ್ನನದ್ದಿ ನೀನೆದ್ದು ಹೋಗಯ್ಯಾ?
--------------
ಅಜಗಣ್ಣ ತಂದೆ
ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ, ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ ಜಂಗಮದೀಕ್ಷಾಪಾದೋದಕವ ತುಂಬಿ, ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ, ನವಧಾನ್ಯ, ನವಸೂತ್ರ, ವಿಭೂತಿವಿಳ್ಯೆ, ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ ಷೋಡಶೋಪಚಾರಂಗಳಿಂದೊಪ್ಪುವ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ, ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ, ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ, ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ, ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ ಗಣಸಾಕ್ಷಿಯಾಗಿ ಶ್ರೀ ಗುರುದೇವನು ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ, ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ, ಆ ಪಂಚÀಕಲಶಂಗಳಲ್ಲಿ ಶೋಬ್ಥಿಸುವಂಥ ದೇವಗಂಗಾಜಲಸ್ವರೂಪವಾದ ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಆ ಕಲಶಂಗಳೈದರಲ್ಲಿ ತೆಗೆದುಕೊಂಡು ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ, ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು, ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ ಮಾಡುವಂಥಾದೆ ಕಲಶಾಬ್ಥಿಷೇಕದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ದೀಕ್ಷೋಪದೇಶವ ಮಾಡಿ ಗುರುವಿನ ಕಣ್ಣ ಕಳೆದು ತಲೆ ಹೊಡೆದು ಮೂರು ಹಣವ ಕೊಂಡೆ. ದೀಕ್ಷೋಪದೇಶವ ಹಡೆದ ಭಕ್ತರ ನಾಲಗೆಯ ಕೊಯ್ದು ಕೈ ಮುರಿದು ಮೂರು ಹಣವ ಕೊಂಡೆ. ಈ ಗುರುಶಿಷ್ಯರುಭಯರ ಸಂಯೋಗಕಾಲದಲ್ಲಿರುವ ಸಾಕ್ಷಿಗಣಂಗಳ ಮನೆಯ ಸುಟ್ಟು ಮೂರು ರತ್ನವ ಕೊಂಡೆ. ಇಂತೀ ಮೂವರ ಹಣವ ತಂದು ಗುರುವಿಗೆ ಕೊಟ್ಟು ಕಾಯಕವ ಮಾಡುತ್ತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುದಸ್ಥಾನದಲ್ಲಿ ಆಧಾರಚಕ್ರ, ಅಲ್ಲಿಗೆ ಪೃಥ್ವಿಯೆಂಬ ಮಹಾಭೂತ, ಸದ್ಯೋಜಾತವಕ್ತ್ರ, ಬ್ರಹ್ಮ ಪೂಜಾರಿ, ಸುವರ್ಣದ ತೇಜ, ಬಾಲರವಿಕೋಟಿ ಪ್ರಕಾಶ, ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ ಸುವರ್ಣಮಯಲಿಂಗ - ಅದು ಆಚಾರಲಿಂಗ, ಅದಕ್ಕೆ ಬೀಜಾಕ್ಷಾರ ಓಂ ನಾಂ ನಾಂ ನಾಂ ಎಂಬ ನಾದಘೋಷ. ಎಸಳು ನಾಲ್ಕರಲ್ಲಿ ವ, ಶ, ಷ, ಸ ಎಂಬ ನಾಲ್ಕಕ್ಷರ. ಅದು ದೇವರಿಗೂ ತಮಗೂ ಪಶ್ಚಿಮಮುಖ- ಸದ್ಯೋಜಾತ ವಕ್ತ್ರ, ಆಧಾರಚಕ್ರ. ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ, ಅಲ್ಲಿಗೆ ಅಪ್ಪುವೆಂಬ ಮಹಾಭೂತ, ವಾಮದೇವವಕ್ತ್ರ, ವಿಷ್ಣು ಪೂಜಾರಿ, ನೀಲದ ತೇಜ, ಬಾಲದ್ವಿಕೋಟಿ ಸೂರ್ಯಪ್ರಕಾಶ, ಅರೆಸಳಿನ ತಾವರೆಯ ಮಧ್ಯದಲ್ಲಿ ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ - ಅದು ಗುರುಲಿಂಗ; ಅದಕ್ಕೆ ಬೀಜಾಕ್ಷರ ಓಂ ಮಾಂ ಮಾಂ ಮಾಂ ಎಂಬ ನಾದಘೋಷ. ಎಸಳು ಆರರಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರ ಅದು ದೇವರಿಗೂ ತಮಗೂ ಉತ್ತರಮುಖ-ವಾಮದೇವವಕ್ತ್ರ, ಸ್ವಾದಿಷ್ಠಾನಚಕ್ರ. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ಅಲ್ಲಿಗೆ ಅಗ್ನಿಯೆಂಬ ಮಹಾಭೂತ, ಅಘೋರವಕ್ತ್ರ ರುದ್ರ ಪೂಜಾರಿ, ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ, ಹತ್ತೆಸಳಿನ ತಾವರೆಯ ಮಧ್ಯದಲ್ಲಿ ಮಾಣಿಕ್ಯವರ್ಣದ ಲಿಂಗ-ಅದು ಶಿವಲಿಂಗ, ಅದಕ್ಕೆ ಬೀಜಾಕ್ಷರ ಓಂ ಶಿಂ ಶಿಂ ಶಿಂ ಎಂಬ ನಾದಘೋಷ. ಎಸಳು ಹತ್ತರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರ. ಅದು ದೇವರಿಗೂ ತಮಗೂ ದಕ್ಷಿಣಮುಖ - ಅಘೋರವಕ್ತ್ರ, ಮಣಿಪೂರಕಚಕ್ರ. ಹೃದಯ ಸ್ಥಾನದಲ್ಲಿ ಅನಾಹತಚಕ್ರ, ಅಲ್ಲಿಗೆ ವಾಯುವೆಂಬ ಮಹಾಭೂತ, ತತ್ಪುರುಷವಕ್ತ್ರ, ಈಶ್ವರ ಪೂಜಾರಿ ಕಪೋತವರ್ಣದ ತೇಜ, ಬಾಲಚತುಷ್ಕೋಟಿ ಸೂರ್ಯಪ್ರಕಾಶ, ಹನ್ನೆರಡೆಸಳಿನ ತಾವರೆಯ ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ-ಅದು ಜಂಗಮಲಿಂಗ, ಅದಕ್ಕೆ ಬೀಜಾಕ್ಷರ ಓಂ ವಾಂ ವಾಂ ವಾಂ ಎಂಬ ನಾದಘೋಷ. ಎಸಳು ಹನ್ನೆರಡರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟಂಠ ಎಂಬ ದ್ವಾದಶಾಕ್ಷರ ಅದು ದೇವರಿಗೂ ತಮಗೂ ಪೂರ್ವಮುಖ-ತತ್ಪುರುಷ ವಕ್ತ್ರ, ಅನಾಹತ ಚಕ್ರ. ಕÀಠಸ್ಥಾನದಲ್ಲಿ ವಿಶುದ್ಧಿಚಕ್ರ, ಅಲ್ಲಿಗೆ ಆಕಾಶವೆಂಬ ಮಹಾಭೂತ, ಈಶಾನವಕ್ತ್ರ, ಸದಾಶಿವ ಪೂಜಾರಿ, ವಿದ್ಯುಲ್ಲತೆಯ ತೇಜ, ಬಾಲಪಂಚಕೋಟಿ ಸೂರ್ಯಪ್ರಕಾಶ, ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ ಅನಂತಕೋಟಿ ಮಿಂಚುಗಳ ವರ್ಣದ ಲಿಂಗ_ ಅದು ಪ್ರಸಾದಲಿಂಗ, [ಓಂ ಯಾಂ ಯಾಂ ಯಾಂ ಎಂಬ ನಾದಘೋಷ]. ಎಸಳು ಹದಿನಾರರಲ್ಲಿ ಅ ಆ ಇ ಈ ಉ ಊ ಋ Iೂ ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರ. ಅದು ದೇವರಿಗೂ ತಮಗೂ ಊಧ್ರ್ವಮುಖ_ ಈಶಾನವಕ್ತ್ರ, ವಿಶುದ್ಧಿಚಕ್ರ. ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಅಲ್ಲಿಗೆ ಮನವೆಂಬ ಮಹಾಭೂತ, ಶ್ರೀಗುರುವೆ ವಕ್ತ್ರ ಮಾಹೇಶ್ವರ ಪೂಜಾರಿ, ಜ್ಯೋತಿರ್ವರ್ಣದ ತೇಜ. ಬಾಲಷಟ್ಕೋಟಿ ಸೂರ್ಯಪ್ರಕಾಶ ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ ಎಡಗಡೆಯ ಪಾದ ಕೆಂಪು ವರ್ಣ, ಬಲಗಡೆಯ ಪಾದ ಶ್ವೇತವರ್ಣ-ಅದು ಮಹಾಲಿಂಗ. ಅದಕ್ಕೆ ಬೀಜಾಕ್ಷರ `ಓಂಕಾರನಾದ ಘೋಷ. ಎಸಳೆರಡರಲ್ಲಿ ಅಕ್ಷರ ಹಂ ಸಂ ಎಂಬ [ಎರಡಕ್ಷರ] ಅದು ದೇವರಿಗೂ ತನಗೂ ಗಂಭೀರ ಮುಖ-ಶ್ರೀಗುರುವಕ್ತ್ರ, ಆಜ್ಞಾಚಕ್ರ. ಅಲ್ಲಿಂದತ್ತ ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ಅಲ್ಲಿಗೆ ಚಂದ್ರನೆಂಬ ಮಹಾಭೂತ, ಲಿಂಗವಕ್ತ್ರ ಪರಮೇಶ್ವರ ಪೂಜಾರಿ, ಮಹಾಜ್ಯೋತಿರ್ವರ್ಣದ ತೇಜ, ಬಾಲ ಅನಂತಕೋಟಿಸೂರ್ಯಪ್ರಕಾಶ ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ ಮಹಾಜ್ಯೋತಿರ್ವರ್ಣದ ಲಿಂಗ. ಅದು ನಿರಾಮಯ ಲಿಂಗ, ಅದಕ್ಕೆ ಬೀಜಾಕ್ಷರ ಪ್ರಣವ ನಾದ ಘೋಷ, ಎಸಳೊಂದುನೂರ ಎಂಟು ಸಾವಿರದಲ್ಲಿ, ಒಂದನೂರ ಎಂಟು ಸಾವಿರ ಅಕ್ಷರ_ ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ. ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತೋ ಬಾಹುರುತ ವಿಶ್ವತಃ ಪಾತ್ ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ ದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಹೊರಗನೆ ಹಾರೈಸಿ ಹೊರಗಣ ಸದಾಚಾರ ಕ್ರಿಯೆಗಳ, ಮನಮುಟ್ಟಿ ಮಾಡುತ್ತಿರಲು; ಇದೆಲ್ಲಿಯ ಹೊರಗಣಸುಖವೆಂದು, ಸುವಿಚಾರ ಕಣ್ದೆರೆದು ನೋಡಲು ಕನ್ನಡಿಯೊಳಗಣ ರೂಪ ತಾನೆಂದರಿವಂತೆ ಮೆಲ್ಲಮೆಲ್ಲನೆ ಒಳಗೆ ಅಡಗಿತ್ತಯ್ಯಾ. ಲಿಂಗಸುಖದ ಸುಗ್ಗಿಯಲ್ಲಿ ಎನ್ನ ಪ್ರಾಣ ಮನ ಕರಣಂಗಳು ಮೇರೆದಪ್ಪಿದ ಸುಖಸಮುದ್ರದೊಳಗೋಲಾಡಿದಂತಾದೆನಯ್ಯಾ ! ಮುಳುಗಿದೆನಯ್ಯಾ, ಸ್ವಾನುಭಾವವೆಂಬ ಗುರುವಿನ ಕರುಣದಲ್ಲಿ. ಇಂತಾದ ಬಳಿಕ ಕೂಡಲಚೆನ್ನಸಂಗಯ್ಯನೆ ಪ್ರಾಣವಾಗಿದ್ದನಯ್ಯಾ.
--------------
ಚನ್ನಬಸವಣ್ಣ
ಗುರುಭಕ್ತನಾದಡೆ ತನುವಿನಾಸೆಯ ಬಿಡಬೇಕು. ಲಿಂಗಭಕ್ತನಾದಡೆ ಮನದಾಸೆಯ ಬಿಡಬೇಕು. ಜಂಗಮಭಕ್ತನಾದಡೆ ಧನದಾಸೆಯ ಬಿಡಬೇಕು. ಗುರುವಿನ ಅನುವನರಿಯನಾಗಿ ಗುರು ಸಂಬಂದ್ಥಿಯಲ್ಲ. ಲಿಂಗದ ನಿಲವನರಿಯನಾಗಿ ಲಿಂಗಸಂಬಂದ್ಥಿಯಲ್ಲ. ಜಂಗಮದಲ್ಲಿ ನಿಜವನರಿಯನಾಗಿ ಜಂಗಮ ಸಂಬಂದ್ಥಿಯಲ್ಲ. ಇದು ಕಾರಣ, ಗುರುಲಿಂಗಜಂಗಮವನರಿಯಲೇ ಆಗದು, ನೆರೆ ಅರಿದಡೆ, ಅರಿಯಬೇಕು ನಿಃಕಳಂಕ ಮಲ್ಲಿಕಾರ್ಜುನಲ್ಲಿ. ಆ ಶರಣ ಉರಿಯುಂಡ ಕರ್ಪುರದಂತೆ.
--------------
ಮೋಳಿಗೆ ಮಾರಯ್ಯ
ಶಿವತಂತ್ರದಿಂದ ಸುಖದುಃಖಗಳು ಬರುತಿಹವೆಂದರಿಯದೆ ನರಗುರಿಗಳಿಗೆ, ರೋಗ ದಾರಿದ್ರ್ಯ ಅಪಜಯಂಗಳು ಬರುತ್ತಿರಲು ವಿಪ್ರಗೆ ಕೈಮುಗಿದು ಕಾಣಿಕೆಯನಿಕ್ಕಿ ತನ್ನ ಹೆಸರ ಹೇಳಿ ಸೂರ್ಯಬಲ ಚಂದ್ರಬಲ ಬೃಹಸ್ಪತಿಬಲ ನವಗ್ರಹಬಲವ ಕೇಳುವವರಿಗೆ ಎಲ್ಲಿಯದೋ ಶಿವಭಕ್ತಿ ? ಸೂರ್ಯನು ಜ್ಞಾನವುಳ್ಳ್ಳವನಾದಡೆ ಗೌತಮಮುನೀಶ್ವರನ ಹೆಂಡತಿ ಅಹಲ್ಯಾದೇವಿಗೆ ಮೋಹಿಸಿ ಮುನಿಯ ಶಾಪದಿಂದ ಕುಷ್ಟದೊಳಗಿಹನೆ ? ಳ ಅಲ್ಲದೆ ದಕ್ಷನ ಯಾಗದಲ್ಲಿ ಹಲ್ಲ ಹೋಗಲಾಡಿಸಿಕೊಂಬನೆ ? ಚಂದ್ರನು ಜ್ಞಾನವುಳ್ಳವನಾದಡೆ ಗುರುವಿನ ಹೆಂಡತಿಗೆ ಅಳುಪಿ ಕೊಂಡೊಯ್ದು ಜಾತಜ್ವರದಲ್ಲಿ ಅಳಲುತಿಹನೆ ? ಬೃಹಸ್ಪತಿ ಜ್ಞಾನವುಳ್ಳವನಾದಡೆ ಸಕಲ ಜ್ಯೋತಿಷ್ಯಗಳ ನೋಡಿ ವಿವಾಹವಾದ ಹೆಂಡತಿ ರೋಹಿಣೀದೇವಿಯ ಚಂದ್ರನೆತ್ತಿಕೊಂಡು ಹೋಹಾಗ ಸುಮ್ಮನಿದ್ದುದು ಏನು ಜ್ಞಾನ ? ಶನಿ ಜ್ಞಾನವಳ್ಳವನಾದಡೆ ಕುಂಟನಾಗಿ ಸಂಕೋಲೆ ಬೀಳ್ವನೆ ? ಅದು ಕಾರಣ_ ತಮಗೆ ಮುಂಬಹ ಸುಖದುಃಖಂಗಳನರಿಯದವರು ಮತ್ತೊಬ್ಬರ ಸುಖದುಃಖಂಗಳ ಮೊದಲೆ ಅರಿಯರು. ಬೃಹಸ್ಪತಿಯ ಮತದಿಂದೆ ದಕ್ಷ, ಯಾಗವನಿಕ್ಕೆ ಕುರಿದಲೆಯಾಯಿತ್ತು. ಬೃಹಸ್ಪತಿಯ ಮತದಿಂದೆ ದ್ವಾರಾವತ ನೀರಲ್ಲಿ ನೆರೆದು ಕೃಷ್ಣನ ಹದಿನಾರುಸಾವಿರ ಸ್ತ್ರೀಯರ ಹೊಲೆಬೇಡರು ಸೆರೆಯನೊಯ್ದರು, ಶ್ರೀರಾಮನ ಹೆಂಡತಿ ಸೀತಾಂಗನೆ ಸೆರೆಯಾದಳು. ಇಂತೀ ತಮತಮಗೆ ಮುಂದೆ ಬಹ ಅಪಜಯಂಗಳನರಿಯದ ಕಾರಣ, ಆ ಬೃಹಸ್ಪತಿ ಜ್ಞಾನಿಯ ಮತದಿಂದೆ, ಅಭಾಷ ಜೋಯಿಸರ ಮಾತ ಕೇಳಿ ಹುಣ್ಣಿಮೆ ಅಮವಾಸೆಯಲ್ಲಿ ಉಪವಾಸವಿದ್ದು, ಗ್ರಹಬಲವುಳ್ಳ ಶುಭಮುಹೂರ್ತದಲ್ಲಿ, ಅರಳಿಯ ಮರಕ್ಕೆ ನೀರ ಹೊಯ್ದು ನೂಲ ಸುತ್ತಿ ವಿಪ್ರಜೋಯಿಸರ್ಗೆ ಹೊನ್ನು ಹಣವ ಕೊಟ್ಟಡೆ, ಹೋದೀತೆಂಬ ಅನಾಚಾರಿಯ ಮಾತ ಕೇಳಲಾಗದು. `ವಸಿಷ್ಠೇನ ಕೃತೇ ಲಗ್ನೇ ವನೇ ರಾಮೇಣ ವಾಸಿತೇ ಕರ್ಮಮೂಲೇ ಪ್ರಧಾನೇ ತು ಕಿಂ ಕರೋತಿ ಶುಭಗ್ರಹಃ ' ಇಂತೆಂದುದಾಗಿ ಬಹ ಕಂಟಕವ ಹೊನ್ನು ಹೆಣ್ಣು ಶುಭ ಲಗ್ನದಿಂದೆ ಪರಿಹರಿಸೇನೆಂದಡೆ ಹೋಗಲರಿಯದು. ಹಸಿವಿಲ್ಲದ ಮದ್ದು ಕೊಟ್ಟೇನು, ಅಶನವ ನೀಡೆಂಬಂತೆ, ಖೇಚರದ ಮದ್ದು ಕೊಟ್ಟೇನು ತೊರೆಯ ದಾಂಟಿಸೆಂಬಂತೆ, ಕುರುಡನ ಕೈಯ ಕುರುಡ ಹಿಡಿದು ಹಾದಿಯ ತೋರುವಂತೆ, ಲಜ್ಜೆ ನಾಚಿಕೆ ಇಲ್ಲದೆ ವಿಪ್ರರ ಕೈಯೆ ಲಗ್ನವ ಕೇಳಲಾಗದು. ಸದ್ಭಕ್ತರಾದವರಿಗೆ ನಿಮ್ಮ ಬಲವೇ ಬಲವಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎನ್ನ ಮಸ್ತಕದಲ್ಲಿ ಹಕಾರವಾಗಿದ್ದಾತ ಪ್ರಭುದೇವ. ಎನ್ನ ಲಲಾಟದಲ್ಲಿ ಓಂಕಾರವಾಗಿದ್ದಾತ ಚೆನ್ನಬಸವ. ಎನ್ನ ಘ್ರಾಣದಲ್ಲಿ ನಕಾರವಾಗಿದ್ದಾತ ಮಡಿವಾಳಯ್ಯ. ಎನ್ನ ಬಾಯಿಯಲ್ಲಿ ಮಕಾರವಾಗಿದ್ದಾತ ಮರುಳು ಶಂಕರಯ್ಯ. ಎನ್ನ ನೇತ್ರದಲ್ಲಿ ಶಿಕಾರವಾಗಿದ್ದಾತ ಬಸವ. ಎನ್ನ ಕಪೋಲದಲ್ಲಿ ವಕಾರವಾಗಿದ್ದಾತ ಪಡಿಹಾರಿ ಬಸವಯ್ಯ. ಎನ್ನ ಶ್ರೋತ್ರದಲ್ಲಿ ಯಕಾರವಾಗಿದ್ದಾತ ಹಡಪದಪ್ಪಣ್ಣ. ಎನ್ನ ಜಿಹ್ವೆಯಲ್ಲಿ ಹ್ರೀಂಕಾರವಾಗಿದ್ದಾಕೆ ಅಕ್ಕನಾಗಮ್ಮ. ಎನ್ನ ಸರ್ವಾಂಗದಲ್ಲಿ ಸಕಲ ಪ್ರಣವರೂಪಾಗಿದ್ದಾತ ಗುರುವಿನ ಗುರು ಚೆನ್ನಬಸವ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಯ್ಯಾ, ಶ್ರೀಗುರುವಿನ ವೇಧಾದೀಕ್ಷೆಯಿಂದೆ ಸರ್ವಕಲಾಬ್ಥಿಜ್ಞತೆಯೆಂಬ ಅನುಗ್ರಹವೇ ಭಾವಲಿಂಗವಾಗಿ ಎನ್ನ ಭಾವದ ಕರಸ್ಥಲದಲ್ಲಿ ನಿಂದು, ಭಾವ ತನುಮನಯುಕ್ತವಾದ ಕಾರ್ಮಿಕಮಲ ಭ್ರಾಂತಿಯನಳಿಸಿ ನಿಭ್ರಾಂತನಾದೆ. ಅಯ್ಯಾ, ಶ್ರೀಗುರುವಿನ ಮಂತ್ರದೀಕ್ಷೆಯಿಂದೆ ವಿದ್ಯಾವಿನಯ ಸಂಪನ್ನತೆಯೆಂಬ ಅನುಗ್ರಹವೇ ಪ್ರಾಣಲಿಂಗವಾಗಿ ಎನ್ನ ಮನದ ಕರಸ್ಥಲದಲ್ಲಿ ನಿಂದು, ಮನ ಭಾವ ತನುಯುಕ್ತವಾದ ಮಾಯಾಮಲಸಂಕಲ್ಪನಳಿಸಿ ಅಕಲ್ಪಿತನಾದೆ. ಅಯ್ಯಾ, ಶ್ರೀ ಗುರುವಿನ ಕ್ರಿಯಾದೀಕ್ಷೆಯಿಂದೆ ವೀರಶೈವೋತ್ತಮತೆಯೆಂಬ ಅನುಗ್ರಹವೇ ಇಷ್ಟಲಿಂಗವಾಗಿ ಎನ್ನ ಕಾಯದ ಕರಸ್ಥಲದಲ್ಲಿ ನಿಂದು, ತನು ಮನ ಭಾವಯುಕ್ತವಾದ ಆಣವಮಲದನಿಷ್ಟವನಳಿಸಿ ಅಕಾಯಚರಿತನಾದೆ. ಅಯ್ಯಾ, ನಿರಂಜನ ಚನ್ನಬಸವಲಿಂಗವ ಕರ, ಕಕ್ಷ, ಕಂಠ, ಉರಸಜ್ಜೆ, ಉತ್ತುಮಾಂಗ, ಅಮಳೊಕ್ಯದಲ್ಲಿ ಧರಿಸಿ ಪರಮಸುಖಿಯಾಗಿ ನಮೋ ನಮೋ ಎನುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ; ಗುರುವಿನ ಕೃಪೆಯಿಂದ ಮಲತ್ರಯದ ಪಂಕವ ತೊಳೆದೆ; ಗುರುವಿನ ಕೃಪೆಯಿಂದ ದೀಕ್ಷಾತ್ರಯದಿಂದ ಅನುಭಾವಿಯಾದೆ; ಗುರುವಿನ ಕೃಪೆಯಿಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಮಾಣವನರಿದೆ; ಎನಗಾದ್ಥಿಕ್ಯವಪ್ಪ ವಸ್ತು ಬೇರೊಂದಿಲ್ಲ. ಅದೇನುಕಾರಣ? ಅವ ನಾನಾದೆನಾಗಿ. ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ, ಎನ್ನ ಜ್ಞಾನಕ್ಕೆ ಸ್ವಾನುಭಾವ ದೀಕ್ಷೆಯ ಮಾಡಿ, ಎನ್ನ ತನು-ಮನ-ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದಿಕ್ಷೆಯ ಮಾಡಿ, ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ, ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆನಾಗಿ. ಅದೇನು ಕಾರಣ? ಜನನ-ಮರಣ-ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದ ಗುರುವೆ, ಭವಪಾಶ ವಿಮೋಚನ, ಅವ್ಯಯ, ಮನದ ಸರ್ವಾಂಗ ಲೋಲುಪ್ತ, ಭಕ್ತಿ ಮುಕ್ತಿ ಫಲಪ್ರದಾಯಕ ಗುರುವೆ, ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಾ, ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರೆಲ್ಲರನು ತೋರಿದೆ ಗುರುವೆ.
--------------
ಸಿದ್ಧರಾಮೇಶ್ವರ
ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ? ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ. ಕಂಡು ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ, ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು, ಎನ್ನ ಅರಿವು ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ. ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ? ಇಂತೀ ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು? ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಗುರುವೆನ್ನ ತನುವ ಬೆರಸಿದ ಕಾರಣ, ಗುರುವಿನ ತನುವ ನಾ ಬೆರಸಿದ ಕಾರಣ, ಗುರು ಶುದ್ಧನಾದನಯ್ಯಾ. ಲಿಂಗವೆನ್ನ ಮನವ ಬೆರಸಿದ ಕಾರಣ, ಲಿಂಗದ ಮನವ ನಾ ಬೆರಸಿದ ಕಾರಣ, ಲಿಂಗ ಶುದ್ಧವಾದನಯ್ಯಾ. ಜಂಗಮವೆನ್ನ ಜಿಹ್ವೆಯ ಬೆರಸಿದ ಕಾರಣ, ಜಂಗಮದ ಜಿಹ್ವೆಯ ನಾ ಬೆರಸಿದ ಕಾರಣ ಜಂಗಮ ಶುದ್ಧನಾದನಯ್ಯಾ ಈ ಮೂವರು ತಮ್ಮಿಂದ ತಾವಾಗಲರಿಯದೆ ಎನ್ನ ಮುಟ್ಟಿ ಶುದ್ಧವಾದರು ಕಾಣಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹುಸಿಯಿಲ್ಲದ ಶಿಷ್ಯನು, ಮರಹಿಲ್ಲದ ಗುರುವಿನ ಪಾದವ ಹಿಡಿದಡೆ, ಕುರುಹಿಲ್ಲದ ಲಿಂಗವ ಕೊಡಲಿಕ್ಕಾಗಿ, ತೆರಹಿಲ್ಲದಪ್ಪಲೊಡನೆ ಬರಿದಾದವು ತನುಮನಪ್ರಾಣಂಗಳೆಲ್ಲವು. ಈ ಬೆಡಗಿನುಪದೇಶವ ಪಡೆದ ಶಿಷ್ಯನಲ್ಲಿ, ಗುರುವಡಗಿ ಗುರು ಶಿಷ್ಯನಾಗಿ, ಎರಡೂ ಒಂದಾದ ಪರಿಯನೇನೆಂದುಪಮಿಸುವೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾದ ಗುರುಶಿಷ್ಯರ?.
--------------
ಸ್ವತಂತ್ರ ಸಿದ್ಧಲಿಂಗ
ತತ್ತ್ವ ಮೂವತ್ತಾರರಿಂದತ್ತತ್ತ ಪರಕ್ಕೆ ಪರವಾದ ಗುರುವಿನ ಅಂಗ ತಾನೆ ಸಕಲ ನಿಃಕಲರೂಪಾದ ಲಿಂಗವು. ಅದು ತಾನೆ ಮತ್ತೆ ಸಕಲಾಂಗವೆನಿಸುವ ಜಂಗಮವು. ಆ ಜಂಗಮವು ತಾನೆ ಗುರುವಿನ ನಿಃಕಲಾಂಗವು. ಆ ಶ್ರೀಗುರುವಿನ ಕಳೆಯಿಂದ ಹುಟ್ಟಿದ ನಿಜಸುಖವೇ ಪ್ರಸಾದಲಿಂಗವು, ಇಂತು ಗುರು ಲಿಂಗ ಜಂಗಮವೆನಿಸುವ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಕಳೆಗಳಿಂದತಿಶಯವಾಗಿ ಬೆಳಗುವ ಶರಣ ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->