ಎಲೆ ತಂಗಿ,
ಶರಣಸತಿ ಲಿಂಗಪತಿಯಾದ ಪತಿವ್ರತಾಭಾವದ ಚಿಹ್ನೆ,
ನಿನ್ನ ನಡೆ ನುಡಿಯಲ್ಲಿ, ಹೊಗರುದೋರುತ್ತಿದೆ,
ನಿನ್ನ ಪೂರ್ವಾಪರವಾವುದಮ್ಮ?.
ಸುತ್ತೂರು ಸಿಂಹಾಸನದ ಪರ್ವತದೇವರ ಶಿಷ್ಯರು,
ಭಂಡಾರಿ ಬಸವಪ್ಪೊಡೆಯದೇವರು.
ಆ ಭಂಡಾರಿ ಬಸವಪ್ಪೊಡೆಯದೇವರ ಶಿಷ್ಯರು.
ಕೂಗಲೂರು ನಂಜಯ್ಯದೇವರು.
ಆ ನಂಜಯ್ಯದೇವರ ಕರಕಮಲದಲ್ಲಿ,
ಉದಯವಾದ ಶರಣವೆಣ್ಣಯ್ಯಾ ನಾನು.
ಎನ್ನ ಗುರುವಿನ ಗುರು ಪರಮಗುರು,
ಪರಮಾರಾಧ್ಯ ತೋಂಟದಾರ್ಯನಿಗೆ
ಗುರುಭಕ್ತಿಯಿಂದೆನ್ನ ಶರಣುಮಾಡಿದರು.
ಆ ತೋಂಟದಾರ್ಯನು,
ತನ್ನ ಕೃಪೆಯೆಂಬ ತೊಟ್ಟಿಲೊಳಗೆನ್ನಂ ಮಲಗಿಸಿ,
ಪ್ರಮಥಗಣಂಗಳ
ವಚನಸ್ವರೂಪತತ್ವಾರ್ಥವೆಂಬ, ಹಾಲು ತುಪ್ಪಮಂ
ಸದಾ ದಣಿಯಲೆರೆದು, ಅಕ್ಕರಿಂದ ರಕ್ಷಣೆಯಂ ಮಾಡಿ,
``ಘನಲಿಂಗಿ' ಎಂಬ ನಾಮಕರಣಮಂ ಕೊಟ್ಟು,
ಪ್ರಾಯಸಮರ್ಥೆಯಂ ಮಾಡಿ,
ಸತ್ಯಸದಾಚಾರ, ಜ್ಞಾನಕ್ರಿಯೆಗಳೆಂಬ, ದಿವ್ಯಾಭರಣಂಗಳಂ ತೊಡಿಸಿ,
ಅರುಹೆಂಬ ಬಣ್ಣವ ನಿರಿವಿಡಿದುಡಿಸಿ,
ಅರ್ತಿಯ ಮಾಡುತ್ತಿಪ್ಪ ಸಮಯದಲ್ಲಿ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ,
ತನಗೆ ನಾನಾಗಬೇಕೆಂದು ಬೇಡಿಕಳುಹಲು,
ಎಮ್ಮವರು ಅವಂಗೆ ಮಾತನಿಕ್ಕಿದರಮ್ಮಾ.