ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸುಗಂಧ ದುರ್ಗಂಧವೆಂಬುಭಯವ ನಾಸಿಕವರಿದು, ಹೆರೆಹಿಂಗುವ ಪರಿಯಿನ್ನೆಂತೊ ? ಸುಳಿವ ವಾಸನೆಗೆ ಮೊದಲೆ, ಅಲ್ಲ ಅಹುದೆಂಬುದನರಿತು, ಅರ್ಪಿತವ ಮಾಡಬಲ್ಲಡೆ ಬಲ್ಲರೆಂಬೆ. ಇಂತಿವರಲ್ಲಿ ಪ್ರಾಣಲಿಂಗಾರ್ಪಿತವುಳಿಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸತ್ವಕ್ಕೆ ತಕ್ಕ ಹೊರೆಯಲ್ಲದೆ, ಮತ್ತುಳಿದ ಮಾತಂಗವ ಹೊರಬಹುದೆ ? ಸತ್ವಕ್ಕೆ ತಕ್ಕ ನುಡಿಯಲ್ಲದಿರ್ದಡೆ, ಆತನ ಒಚ್ಚತಗೊಂಬರೆ ಹರಶರಣರು? ನಡೆ ನುಡಿ ಸಿದ್ಧಾಂತವಲ್ಲದೆ, ಹುಡಿಗರ ಮಾತ ಸುಡು. ಎನ್ನೊಡೆಯ ಕರೆಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸ್ಥೂಲ ಬ್ರಹ್ಮನ ಮಗ, ಸೂಕ್ಷ್ಮ ವಿಷ್ಣುವಿನ ಮಗ, ಕಾರಣ ರುದ್ರನ ಮಗ. ಘನಮಹಿಮ ನಿಮ್ಮನರಿವುದಕ್ಕೆ ಎನಗಿನ್ನಾವುದು ಮನ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಸಮಯಾಚಾರವೆಂದು ನೇಮಕ್ಕೆ ಹೊತ್ತು ಮಾಡುತಿರ್ಪ ಸದ್ಭಕ್ತರು, ಎನಗೆ ಹೇಳಿರಯ್ಯಾ, ಅರ್ಥಕೋ, ಪ್ರಾಣಕ್ಕೋ, ಅಪಮಾನಕ್ಕೋ? ಅಂತಲ್ಲದೆ, ಉಂಬ ಓಗರಕ್ಕೋ, ಸಂತತ ಸಮಯೋಚಿತವನರಿವುದಕ್ಕೋ? ಈ ಸಂಚಿತನವರಿಯದೆ ಮುಂಚಿತ್ತಾಗಿ ಉಂಬ, ಅಶನಕ್ಕೆ ಕೈಯ ನೀಡಿ, ತಾ ಹಿಂಚಾಗಿ ಉಂಬ ಪ್ರಸಾದಿಯ ನೋಡಾ. ಆಯತವೆಂದರಿಯದೆ, ಸ್ವಾಯತವೆಂದರಿಯದೆ, ಸನ್ನಹಿತಪ್ರಸಾದವೆಂದರಿಯದೆ, ಹಮ್ಮುಬಿಮ್ಮಿಗೆ ಹೋರುವ ಉನ್ಮತ್ತರನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸತ್ವಗೆಟ್ಟಲ್ಲಿ ಕಾಷ್ಠವನೂರಿ ನಡೆಯಬೇಕು. ಮತ್ತತ್ವವಿದ್ದಲ್ಲಿ ನಿಶ್ಚಯವ ಹೇಳಲಾಗಿ, ಮಹಾಪ್ರಸಾದವೆಂದು ಕೈಕೊಳಬೇಕು. ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ, ಎನ್ನ ಸತ್ಯಕ್ಕೆ ನೀ ಸತಿಯಾದ ಕಾರಣ, ಎನ್ನ ಸುಖದುಃಖ ನಿನ್ನ ಸುಖದುಃಖ, ಅನ್ಯವಿಲ್ಲ. ಇದಕ್ಕೆ ಬ್ಥಿನ್ನಭೇದವೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಸರ್ಪನ ಹಿಡಿವಲ್ಲಿ ಅಧಮತ್ವವ ಮಾಡುವ ಮಂತ್ರವಿರಬೇಕು. ಶಸ್ತ್ರವ ಹಿಡಿವಲ್ಲಿ ರಣಕ್ಕೆ ನಿಶ್ಚಯನಾಗಿರಬೇಕು. ಭಕ್ತಿಯ ಹಿಡಿವಲ್ಲಿ ತ್ರಿವಿಧಕ್ಕೆ ಮುಚ್ಚಳವನಿಕ್ಕದಿರಬೇಕು. ಇಂತೀ ಗುಣ, ನಿಶ್ಚಟರಿಗಲ್ಲದೆ, ಮಿಕ್ಕಿನ ಪುಕ್ಕಟನಾಥರಿಗೆಲ್ಲಿಯದೊ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಸಡಗರಿಸುವಲ್ಲಿ ಲಿಂಗವ ನೆನೆದು, ಕಡುದುಃಖ ಬಂದಲ್ಲಿ ಲಿಂಗವ ಮರೆದು, ಇಂತೀ ಅಂಗಲಿಂಗಸಂಗವ ಮಾಡುವ ಪರಿಯಿನ್ನೆಂತೊ? ಕೂರ್ತಡೆ ಭಕ್ತ, ತಾಪತ್ರಯಕ್ಕೆ ಪಾಪಿಯೆ? ಇಂತೀ ಸುಖದುಃಖವೆಂಬ ಉಭಯವ ಭೇದಿಸಿ ನಿಂದವಂಗೆ, ಸುಖನಿಶ್ಚಯದಿಂದ ನಮೋ ನಮೋ ಎಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸರ್ವ ನಿರ್ವಾಣದಲ್ಲಿ ಗುರುಸ್ಥಲ, ಲಯ ನಿರ್ವಾಣದಲ್ಲಿ ಲಿಂಗಸ್ಥಲ. ಇಷ್ಟ ಕಾಮ್ಯ ಮೋಕ್ಷಂಗಳು, ಉತ್ಪತ್ಯಸ್ಥಿತಿಲಯ ಆಣವ ಮಾಯಾ ಕಾರ್ಮಿಕ ನವಗುಣಂಗಳು ನಿಂದು, ಶಬ್ದಮುಗ್ಧವಾದುದು ಜಂಗಮಸ್ಥಲ. ಇಂತೀ ಕುಳ ವಿವರವ ವೇದಿಸಿ ಸರ್ವಜ್ಞಾನ ಪರಿಪೂರ್ಣವಾಗಿಪ್ಪ ತ್ರಿವಿಧಮೂರ್ತಿಯೆ ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಸತಿ ತಪ್ಪಿ ಪಾರದ್ವಾರವ ಮಾಡಿದಲ್ಲಿ, ಒಳಗಿಟ್ಟುಕೊಂಡು ಸಂದುಸಂಶಯವಿಲ್ಲದಿದ್ದಡೆ, ಗುರುಲಿಂಗಜಂಗಮಕ್ಕೆ ಉದಾಸೀನವ ಮಾಡಿದಡೆ, ತಪ್ಪನೊಪ್ಪಬಹುದು. ಅಲ್ಲಿಗೆ ದ್ವೇಷ, ಇಲ್ಲಿಗೆ ಶಾಂತಿಯೇ? ಇದು ಭಕ್ತಿಯ ಬಲ್ಲವರ ಮತವಲ್ಲ. ಸತಿಸುತ ಬಂಧುಗಳು ತಪ್ಪಿದಲ್ಲಿ, ಭಕ್ತಿಗೆ ಅನುಸರಣೆಯ ಮಾಡಿದಡೆ, ಲಿಂಗಕ್ಕೆ ಮಜ್ಜನಕ್ಕೆರೆದಡೆ, ಜಂಗಮ ಪ್ರಸಾದವ ಕೊಂಡಡೆ, ಆ ಅಂಗ ಧರೆಯಲ್ಲಿ ನಿಂದಿತ್ತಾದಡೆ, ನಾ ನಿಂದ ಕಾಯಕಕ್ಕೆ ಭಂಗ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಾವಿರದಲ್ಲಿ ಒಂದು ರಜ್ಜು ಹರಿದಡೆ, ಅದ ಸಾಗಿಸಿ ಕಡೆಹಾಸಬೇಕಲ್ಲದೆ, ಗೈದು ಬಿಟ್ಟದೆ, ಒಂದರ ಹಿಂದೊಂದಳಿಯಿತ್ತು ಆ ಅಚ್ಚು. ಬಂದುದನರಿದು ಮಾಡುವ ಭಕ್ತನ ದ್ವಂದ್ವದೊಳಗೊಂದು ತಪ್ಪಿದಡೆ, ಅವ ಹಿಂದುಳಿದನೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಂಚಿತ ಆಗಾಮಿ ಪ್ರಾರಬ್ಧವೆಂಬ ಕರ್ಮಕಲ್ಪಿತಕ್ಕೆ ಹೊರಗಾಗಿಯಲ್ಲದೆ ಲಿಂಗವನರಿಯಬಾರದು. ಆ ಲಿಂಗ ಸಾಕಾರವ ತಾಳಿ, ಜಗದ್ಧಿತಾರ್ಥವಾಗಿ ಬಂದಿರ್ದಲ್ಲಿ ನಿರಾಕಾರದಿಂದ ಕಾಬ ಕಾಣಿಕೆ ಇನ್ನಾವುದೊ ? ಇನ್ನಾರಿಗೆ ಹೇಳುವೆ ? ಕಣಿತಿಯ ಕೈಯ ಕೊಟ್ಟ ಕಲ್ಲಿನಂತೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಿದ್ಧರಸ ಲೇಸೆಂದಡೆ ತಾನಿದ್ದ ಕುಡಿಕೆ ಹೇಮವಾದುದಿಲ್ಲ, ಲೋಹಕ್ಕಲ್ಲದೆ ವೇಧಿಸೂದಿಲ್ಲ. ವಸ್ತು ಸರ್ವದಲ್ಲಿ ಸಂಪೂರ್ಣವಾಗಿರ್ದಡೇನು, ತನ್ನನರುವರ ಹೃದಯದಲಲ್ಲದೆ ಇರದು. ಸದಾಶಿವಮೂರ್ತಿಲಿಂಗದ ಇರವು, ಇಂದ್ರಿಯವ ಕಟ್ಟಿ ವಸ್ತುವನರಿದಿಹೆನೆಂದಡೆ ಕರೆವ ಹಸುವಲ್ಲ. ಇಂದ್ರಿಯವ ಬಿಟ್ಟು ವಸ್ತುವ ಹಿಡಿದಿಹೆನೆಂದಡೆ ಬಿಡಾಡಿಯಲ್ಲ. ವಸ್ತುವನರಿವುದಕ್ಕೆ ಎರಡಳಿದು ಒಂದುಳಿಯಬೇಕು. ಆ ಸಂದಿನ ಬೆಸುಗೆಯಲ್ಲಿ ಸಂದಿರುತಿಪ್ಪವರ ಅಂದವ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸುಖವ ಮೆಚ್ಚಿದ ದೇಹ, ಸಕಲದೊಳಗೆ ಸಿಕ್ಕಿದುದಕ್ಕೆ ದೃಷ್ಟ. ಅಖಿಳರ ಬೋಧೆಗೆ ಸಿಕ್ಕಿ ಸುಖವನರಿದ ಮತ್ತೆ, ಅಕಳಂಕತನವಿಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಮಾಲಕ್ಷದಲ್ಲಿ ಹುಟ್ಟಿ, ಸಕಲಕ್ರಮಗಳಿಂದ ಭೋಗಿಸಿ, ಪುಣ್ಯಪಾಪಂಗಳೆಂಬುವದನರಿಯದೆ, ಶ್ರುತಿಸ್ಮøತಿತತ್ವಂಗಳ ತಿಳಿಯದೆ, ಅಗಮ್ಯ ಅಗೋಚರಲಿಂಗವನರಿಯದೆ, ವೃಥಾ ವೈಭವಕ್ಕೆ ಕೆಡುತ್ತಿದ್ದೀಯಲ್ಲಾ. ಅಂದು ಬಂದ ಕಥನ, ಬಸವೇಶ್ವರನಿಂದ ಬಂದ ಮಥನ, ಶುಷ್ಕಕಾಯಕದ ಯತನ, ಎನ್ನ ಸತಿಭಾವದ ಜತನ, ಭಕ್ತಿವರ್ತನದ ಸೌಖ್ಯಸಂಬಂಧ, ನಿಷೆ* ದೃಷ್ಟ ಭಕ್ತಿಜ್ಞಾನವೈರಾಗ್ಯ, ಇಂತಿವ ಹೊತ್ತಾಡಿದೆಯಲ್ಲಾ. ಇಂತೀ ಘಟ ಬಸವಣ್ಣನ ತಪ್ಪಲಲ್ಲಿ ನಿಶ್ಚಯವಾಗಿ ನಿಂದಲ್ಲದೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಕಾಣಬಾರದು.
--------------
ಮೋಳಿಗೆ ಮಾರಯ್ಯ
ಸಾಸಿವೆಯ ಮೊನೆಯೊಳಗಡಗಿದ ಗುಂಗುರು, ಈ ದೀಪದ ವೇಷಧಾರಿಗಳೆಲ್ಲರ ನುಂಗಿ, ಮತ್ತೆ ಆಸೆ ಹಿಂಗದೆ, ಮೂರು ವೇಷವ ನುಂಗಿತ್ತು. ಈ ಪಾಶವ ಬಿಡಿಸಾ, ಈ ಷಣತ್ರಯದೂರ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಾರವ ಕೂಡಿದಲ್ಲಿ ಹಣ್ಣು, ನಿಸ್ಸಾರವಾದಲ್ಲಿ ಕಾಯಿ. ಕಾಯಿ ಹಣ್ಣಹುದು, ಉಭಯದೊಡಲೊಂದೆ. ಅರಿದು ಮರೆವುದ ಹೆರೆಹಿಂಗಿದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ, ತಾನು ತಾನೆ.
--------------
ಮೋಳಿಗೆ ಮಾರಯ್ಯ
ಸರ್ವಾವಧಾನಿಯ ಇರವು, ಅನಲ ಅನಿಲನ ತೆರದಂತೆ, ಅಂಕುರ ಅಪ್ಪುವಿನ ತೆರದಂತೆ, ಸಾರ ಸವಿಯ ತೆರದಂತೆ, ಆಲಿ ನೂಲಿನ ತೆರದಂತೆ, ಭಾವ ಲಿಂಗೈಕ್ಯವು, ಸ್ವಾನುಭಾವಾತ್ಮಕ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸರ್ವತ್ರ ಸುಲಭನಾದಲ್ಲಿ ನೀನು ನಾನು ಎನ್ನದಿರ್ಪುದೆ ಜ್ಞಾನ. ಆ ಜ್ಞಾನವಿಂಬಾದಲ್ಲಿ ಭಾವದ ಭ್ರಮೆಗೆ, ಆತ್ಮತೇಜಕ್ಕೆ, ತರ್ಕದ ಗೆಲ್ಲ ಸೋಲಕ್ಕೆ, ಇಕ್ಕೆ ಹಕ್ಕೆಗೆ ಹಿಕ್ಕುಗೊಡದಿಪ್ಪುದೆ ಅರಿವು. ಆ ಅರಿವು ಕರಿಗೊಂಡಲ್ಲಿ, ಇದಿರೆಡೆಯಿಲ್ಲವಾಗಿ, ದೃಢವೇ ತದ್ರೂಪವಾದಲ್ಲಿ ತನಗೆ ಇದಿರಿಲ್ಲ, ಇದಿರು ತನಗಿಲ್ಲ, ದರ್ಪಣದ ಒಪ್ಪದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸರ್ವೇಂದ್ರಿಯಂಗಳ ಲಿಂಗಮುಖ ಮಾಡಿ, ಲಿಂಗಕ್ಕೆ ಕೊಡಬೇಕೆಂಬುದು, ತನ್ನಯ ಸಂದೇಹವೋ, ಲಿಂಗದ ಬಂಧವೋ ಎಂಬುದನರಿತು ಕೊಡುವಲ್ಲಿ, ಇಂದ್ರಿಯಂಗಳ ನೆನಹಿನಲ್ಲಿ ಲಿಂಗ ಬರಬೇಕೊ ? ಲಿಂಗದ ನೆನಹಿನಲ್ಲಿ ಇಂದ್ರಿಯಂಗಳು ಎಯ್ದಬೇಕೊ ? ಇಂತೀ ಉಭಯದ ಪ್ರಮಾಣು, ಸಂದೇಹದ ಅಪ್ರಮಾಣು. ಈ ಅರ್ಪಿತದಂಗ ಸಂಗವಾದಲ್ಲಿ, ತಿಲ ಎಣ್ಣೆಯಂತೆ, ಗಂಧ ಕುಸುಮದಂತೆ, ಲಿಂಗ ಇಂದ್ರಿಯಂಗಳ ಸಂದು ಒಂದೊಂದು ಕೂಡುವಲ್ಲಿ, ಎನ್ನಂಗದ ಮನದ ಕೊನೆಯ ಮೊನೆಯ ಮೇಲೆ ನೀ ಬಂದು ನಿಂದಡೆ, ಬಿಡುಗು ಸಂದೇಹ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸರ್ಪನ ಸಲಹಿದಲ್ಲಿ, ಬೇರೆ ವಿಷವ ಸಲಹಲುಂಟೆ ? ಸಸಿವೃಕ್ಷಂಗಳ ಸಲಹುವಲ್ಲಿ ಬೇರೆ ಫಲವ ಸಲಹಲುಂಟೆ ? ಕ್ರೀ ನಿರ್ಧಾರವಾದಲ್ಲಿ, ಆಚಾರಕ್ಕೆ ಅಂಕುರ, ಆಚಾರ ಅಂಕುರವಾದಲ್ಲಿ, ದಿವ್ಯಜ್ಞಾನ ಪಲ್ಲವಿಸಿತ್ತು. ಆ ಪಲ್ಲವದ ಮರೆಯಲ್ಲಿ, ಪರತತ್ವ ವಸ್ತು ಫಲವಾಗಿ, ಉಭಯದ ತೊಟ್ಟು ಹರಿದು ಬಿದ್ದ ಹಣ್ಣು, ಅಭೇದ್ಯ ಲಿಂಗಕ್ಕೆ ತೃಪ್ತಿಯಾಯಿತ್ತು. ಇಂತೀ ಭಾವದ ಭ್ರಮೆಯ ಕಳೆದು, ಜೀವವಿಕಾರ ಹಿಂಗಿ, ನಾ ನೀನೆಂಬ ಉಭಯದ ದೃಷ್ಟ ಏನೂ ಇಲ್ಲದೆ ನಿಂದುದು, ಪ್ರಾಣಲಿಂಗಸಬಂಧ. ಆ ಸಂಬಂಧವ ಸ್ವೀಕರಿಸಿ ನಿಂದುದು ಪ್ರಾಣಲಿಂಗಿಯ ತೃಪ್ತಿ. ಇಂತೀ ನಿಜದಲ್ಲಿ ತಾನು ತಾನಾಗಬಲ್ಲಡೆ, ಆತನೇ ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸ್ಥೂಲತನು, ಸೂಕ್ಷ್ಮತನು, ಕಾರಣತನು. ಇಂತೀ ತನುತ್ರಯದ ಭೇದವನರಿಯಬೇಕಣ್ಣಾ. ಸ್ಥೂಲತನು ಗುರುವಿಂಗೆ ಭಿನ್ನ, ಸೂಕ್ಷ್ಮತನು ಲಿಂಗಕ್ಕೆ ಭಿನ್ನ, ಭಿನ್ನಕಾರಣತನು ಜಂಗಮಕ್ಕೆ ಭಿನ್ನ. ನಾದ ಗುರುವಿನಲ್ಲಿ ಅಡಗಿತ್ತು, ಬಿಂದು ಲಿಂಗದಲ್ಲಿ ಅಡಗಿತ್ತು, ಕಳೆ ಜಂಗಮದಲ್ಲಿ ಅಡಗಿತ್ತು. ಮಹಾಘನ ವಸ್ತುವಿನಲ್ಲಿ ಲೀಯವಾಯಿತ್ತು. ಆದ ಬಳಿಕ, ಗುರುಲಿಂಗೆ ತನುವೆಂಬುದಿಲ್ಲ, ಲಿಂಗಕ್ಕೆ ಮನವೆಂಬುದಿಲ್ಲ, ಜಂಗಮಕ್ಕೆ ಘನವೆಂಬುದಿಲ್ಲ, ಪ್ರಸಾದಕ್ಕೆ ಜಿಹ್ವೆಯೆಂಬುದಿಲ್ಲ. ಅನುವರಿದು ಘನದಲ್ಲಿ ನಿಂದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಅರಸಿಕೊಳ್ಳಿರಣ್ಣಾ.
--------------
ಮೋಳಿಗೆ ಮಾರಯ್ಯ
ಸ್ತ್ರೀಯರು ಹಲವಾದಡೇನು ಕೂಡುವನೊಬ್ಬನೆ. ಯೋಗಿ ಭಿನ್ನವಲ್ಲದೆ ಸ್ಥಾಣು ಭಿನ್ನವಲ್ಲ. ಅರಿವ ಅರಿವು ಹಲವಲ್ಲದೆ, ಅರುಹಿಸಿಕೊಂಬವ ನೀನೋಬ್ಬನೆ. ನಿನ್ನನರಿವ ಪರಿಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸ್ಥೂಲದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ? ಸೂಕ್ಷ್ಮದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ? ಕಾರಣದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ? ದೃಷ್ಟಕ್ಕೆ ದೃಷ್ಟವ ಕಂಡಲ್ಲದೆ ಮನ ನಿಶ್ಚಯಿಸದು. ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು, ಭಾವ ನಿರ್ಭಾವವಾಗಿಯಲ್ಲದೆ ನಿಶ್ಚಯವಿಲ್ಲ. ನಿಶ್ಚಯಕ್ಕೆ ಒಳಗಾಹನ್ನಬರ ಅಂಗಕ್ಕೆ ಆಚಾರ, ಮನಕ್ಕೆ ಅರಿವು. ಅರಿವಿಂಗೆ ನಿರಾಳವಹನ್ನಕ್ಕ, ಸ್ಥೂಲದಲ್ಲಿ ಮುಟ್ಟಿ, ಸೂಕ್ಷ್ಮದಲ್ಲಿ ಅರಿದು, ಕಾರಣದಲ್ಲಿ ಕೂಡಿ, ಕೂಟ ಏಕಸ್ಥವಾದಲ್ಲಿ, ತ್ರಿವಿಧಲಿಂಗ ತ್ರಿವಿಧ ಲಿಂಗಾರ್ಪಣವಾಯಿತ್ತು. ಆದಲ್ಲಿ ಭಾವವಿಲ್ಲದಿಪ್ಪುದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸತ್ಕ್ರೀವಂತಂಗೆ ಭಕ್ತಸ್ಥಲವಿಲ್ಲ, ನಿರ್ಮಲಚಿತ್ತಂಗೆ ಮಾಹೇಶ್ವರಸ್ಥಲವಿಲ್ಲ. ಪರಿಪೂರ್ಣಭಾವಿಗೆ ಪ್ರಸಾದಿಸ್ಥಲವಿಲ್ಲ, ಉಭಯವನಳಿದವಂಗೆ ಪ್ರಾಣಲಿಂಗಿಸ್ಥಲವಿಲ್ಲ. ಶ್ರುತದೃಷ್ಟ ಅನುಮಾನಕ್ಕೆ ಒಳಗಾಗನಾಗಿ ಶರಣಸ್ಥಲವಿಲ್ಲ. ಕೂಡಿಹೆನೆಂಬ ಭಾವವಿಲ್ಲವಾಗಿ ಐಕ್ಯಸ್ಥಲವಿಲ್ಲ. ಇಂತೀ ಸ್ಥಲದಿಂದ ಸ್ಥಲವನೆಯ್ದಿ, ಸ್ಥಲಲೇಪವಾದ ಮತ್ತೆ ಮೀರಿದ ತೆರನ ನೀವೆ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸತ್ಯನ ಇರವು ಪಯದೊಳಗಣ ನವನೀತದಂತೆ, ಕೂರ್ಮೆಯ ಆಚರಣೆಯಂತೆ, ಪಳುಕಿನ ಘಟದಂತೆ. ಹೆಸರಿಡಬಾರದ ಅತೀತನ ಅಸಮಾಕ್ಷನ ಶರಣರು ನೀವೆ ಬಲ್ಲಿರಿ. ಇದ ಹೆಸರಿಡಲಂಜುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...