ತನುವೆಂಬ ಹೊಲದೊಳು ಜೀವವೆಂಬ ಒಕ್ಕಲಿಗ,
ಅಜ್ಞಾನವೆಂಬ ಕೂರಿಗೆ, ಪಂಚೇಂದ್ರಿಯವೆಂಬ ತಾಳುಗಳಿಗೆ,
ಪಂಚವಿಷಯವೆಂಬ ಸೆಡ್ಡಿಯಕೋಲನಿಕ್ಕಿ,
ಚಿತ್ತವೆಂಬ ಸೆಡ್ಡಿಯಬಟ್ಟಲಿಗೆ ಬುದ್ಧಿಯೆಂಬ ಹಸ್ತದಿಂದ
ದಶವಾಯುಗಳೆಂಬ ಬೀಜವ ಬಿತ್ತಿ,
ಕರಣಾದಿಗುಣವೆಂಬ ಬೆಳೆಯ ಬೆಳೆವುತ್ತಿರೆ,
ಮನವಿಕಾರಭ್ರಮೆಯೆಂಬ ಮೂಷಕನ ಹಿಂಡು ಕವಿಯೆ,
ಅದಕ್ಕೆ ರೋಷವೆಂಬ ಬಡಿಗಲ್ಲನೊಡ್ಡಿ,
ಆಸೆಯೆಂಬ ಜಂಪವಿಟ್ಟು, ರೋಷವೆಂಬ ಬಡಿಗಲ್ಲು ಮೇಲೆ ಬೀಳೆ,
ಒದ್ದಾಡಿ ಒರಲೊರಲಿ ಸಾಯುತಿರೆ,
ತನುವೆಂಬ ಹೊಲನ ಕೆಡಿಸಿ, ಜೀವವೆಂಬ ಒಕ್ಕಲಿಗನ ಕೊಂದು,
ಅಜ್ಞಾನವೆಂಬ ಕೂರಿಗೆಯನುರುಹಿ,
ಪಂಚೇಂದ್ರಿಯವೆಂಬ ತಾಳ ಮುರಿದು,
ಪಂಚವಿಷಯವೆಂಬ ಸೆಡ್ಡಿಯಕೋಲ ಸೀಳಿಬಿಟ್ಟು,
ಚಿತ್ತವೆಂಬ ಸೆಡ್ಡಿಯಬಟ್ಟಲನೊಡದು,
ಬುದ್ಧಿಯೆಂಬ ಹಸ್ತದ ಸಂದ ತಪ್ಪಿಸಿ,
ದಶವಾಯುಗಳೆಂಬ ಬೀಜವ ಹುರಿದು,
ಕರಣೇಂದ್ರಿಯವೆಂಬ ಬೆಳೆಯ ಕೊಯಿದು ಕೆಡಿಸಿ,
ನಿಃಕರಣವಾಗಿ ನಿಜಲಿಂಗಪದವ ಸಾರಿಪ್ಪ ಶರಣಂಗೆ
ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.