ಅಥವಾ

ಒಟ್ಟು 61 ಕಡೆಗಳಲ್ಲಿ , 25 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಬಹುದೆ ದಿವರಾತ್ರೆ ಉಳ್ಳನ್ನಕ್ಕ? ಉತ್ತಮ ಕನಿಷ* ಮಧ್ಯಮವೆಂಬುದನರಿವನ್ನಕ್ಕ ಕಾಲ ವೇಳೆಯನರಿದು ಶಿವಲಿಂಗಾರ್ಚನೆಯ ಮಾಡಬೇಕು. ವಾರ ನೇಮ ಸ್ಥಿತಿ ಲಗ್ನಂಗಳಲ್ಲಿ ಹರಶರಣರಿಂದ ಪರಿಹರಿಸಿಕೊಳ್ಳಬೇಕು. ಅದೆಂತೆಂದಡೆ: ತನ್ನ ಒಡಲೆಂಬನ್ನಕ್ಕ, ತನ್ನ ಗುರುವೆಂಬನ್ನಕ್ಕ, ತನ್ನ ಜಂಗಮವೆಂಬನ್ನಕ್ಕ, ಶೀತ ಉಷ್ಣಮೃದು ಕಠಿಣಂಗಳನರಿವನ್ನಕ್ಕ, ಕಾಲಾಂತಕ ಭೀಮೇಶ್ವರಲಿಂಗವೆಂದು ಪೂಜಿಸಬೇಕು.
--------------
ಡಕ್ಕೆಯ ಬೊಮ್ಮಣ್ಣ
ಲಿಂಗ ಲಿಂಗಿಗಳ ದರ್ಶನ:ಸಾಲೋಕ್ಯಪದ. ಲಿಂಗ ಲಿಂಗಿಗಳ ಸ್ನೇಹ ನಿರಂತರ ಸ್ನೇಹಸಂಗ:ಸಾಮಿಪ್ಯಪದ. ಲಿಂಗ ಲಿಂಗಿಗಳ ಸಂಗ ಹಿಂಗದೆ, ಮನೋವಾಕ್ಕಾಯದಲ್ಲಿ ವಂಚನೆಯಿಲ್ಲದೆ ತನುಮನಧನವನರ್ಪಿಸಿ ಲಿಂಗಭರಿತ ಶರಣಮೂರ್ತಿಯನು ಕಂಗಳಲ್ಲಿ ಮನದಲ್ಲಿ ಹೃದಯದಲ್ಲಿ ಭರಿತನಾಗಿ ಮೂರ್ತಿಗೊಳಿಸುವುದು:ಸಾರೂಪ್ಯಪದ. ಲಿಂಗ ಲಿಂಗಿಗಳ ಶ್ರೀಪಾದಪದ್ಮದಲ್ಲಿ, ಮನೋವಾಕ್ಕಾಯದಲ್ಲಿ ನಿರಂತರ ಐಕ್ಯನಾಗಲು ಸಾಯುಜ್ಯಪದವಯ್ಯಾ. ಇದೇ ಚತುರ್ವಿಧಪದ, ಇದೇ ಚತುರ್ವಿಧಪದಕ್ಕೆ ವಿಶೇಷಪದ. ಸಾಲೋಕ್ಯಂ ಚ ತು ಸಾಮಿಪ್ಯಂ ಸಾರೂಪ್ಯಂ ಚ ಸಾಯುಜ್ಯತಾ ತತ್ಪದೇಭ್ಯೋ ವಿಶೇಷಶ್ಚ ಶಿವದಾಸೋಹ ಉತ್ತಮಃ ಎಂದುದಾಗಿ, ಇತರ ಪದವ ನಿಶ್ಚೈಸಲು ಸಾಲೋಕ್ಯಂ ಚ ತು ಸಾಮಿಪ್ಯಂ ಸಾರೂಪ್ಯಂ ಚ ಸಾಯುಜ್ಯತಾ ಸಕೃತಾಪೇಕ್ಷಿಭಕ್ತಾನಾಂ ನಾಸ್ತಿ ಲಿಂಗಂ ಗುರೋಃ ಪರು ಎಂದುದಾಗಿ, ಇತರ ಪದವ ಬಯಸದಿರಿ. ಮಹಾಪದ ಚತುರ್ವಿಧಪದಕ್ಕೆ ವಿಶೇಷಃ. ಶರಣರಿಗೆ ಶರಣೆಂಬುದೇ ಪದ ಕಾಣಿರಣ್ಣಾ, ಶರಣೆನ್ನದೆ ಪದವ ಬಯಸಿದ ದಕ್ಷ ನಾರಸಿಂಹಾದಿಗಳು ಕೆಟ್ಟರು, ಶರಣೆಂದು ಮಹಾಪದವ ಪಡೆದರು. ಶರಣರಿಗೆ ಶರಣೆನ್ನದೆ ನಂಬಿಯಣ್ಣನು ಶರಣರಿಗೆ ಹೊರಗಾಗಿ ಅರಿದು ಸದ್ಭಕ್ತಿಯಿಂ ಶರಣೆಂದು ಶರಣರೊಳಗಾದನು, ಇಹಪರಭೋಗವನು ವಿಶೇಷವಾಗಿ ಹಡೆದನು. ಶರಣರಿಗೆ ಶರಣೆನ್ನದೆ ಕೆಟ್ಟರು ಕಾಲ, ಕಾಮ, ಇಂದ್ರ ಮೊದಲಾದವರನೇಕರು. ಅವರಂತಾಗದಿರಿ. ಶರಣರಿಗೆ ಶರಣೆನ್ನಿ, ಇದೇ ಭಕ್ತಿ, ಇದೇ ಮುಕ್ತಿ. ಶರಣರಿಗೆ ಶರಣೆನ್ನದೆ, ಭಕ್ತಿಯೆಂದಡೆ ಮುಕ್ತಿಯೆಂದಡೆ ಪದವ ಬಯಸಿದಡೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವು ನಗುವು ನಗುವನು, ನಾಯಕನರಕದಲ್ಲಿಕ್ಕುವನಯ್ಯಾ.
--------------
ಉರಿಲಿಂಗಪೆದ್ದಿ
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಸಪ್ತಪಾತಾಳದಿಂದ ಅತ್ತತ್ತವಿತ್ತು, ಮುಂದೆ ಭುವನದ ಮೂಲವ ತಿಳಿದು ಗುಪ್ತಮಂಡಲವೆಂಬ ಹುತ್ತದೊಳಗೆ ಇರ್ದ ಘಟಸರ್ಪದ ಅಡಿಯ ಮೇಲಕ್ಕೆ ಮಾಡಿ, ಒಡನೆ ನಿಲಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮಂದಿರದ ಮನೆಯೊಳಗೆ ಇದ್ದುಕೊಂಬ, ತನ್ನ ತಲೆಕೆಳಗಾಗಿ ಪಾದ ಮೇಲಾಗಿ ಉಧೋ ಎಂದು ಅರ್ತು ಗುರ್ತವಿಟ್ಟು ಆಳಬಲ್ಲರೆ ಆತನಿಗೆ ಮಹಾಶಿವಜ್ಞಾನಿ ಎಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಸ್ವರ್ಗ ಮತ್ರ್ಯ ಪಾತಾಳ, ಈರೇಳು ಭುವನ, ಹದಿನಾಲ್ಕುಲೋಕ, ಪಂಚಶತಕೋಟಿ ಭುವನದ ವಿಸ್ತಾರವನ್ನೆಲ್ಲ ತನ್ನ ಅಂತರಂಗದೊಳಗೆ ನೋಡಿಕೊಂಡು, ಹೊರಗೆ ಶಿವಶಾಸ್ತ್ರ ಆಗಮ ಪುರಾಣಂಗಳ ನಿರ್ಮಿತವ ಮಾಡಿ, ಇರಬಲ್ಲರೆ ಆತನಿಗೆ ಉತ್ತಮ ಶಿವಕವೀಶ್ವರ ಎಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ನಾಲ್ಕು ದಿಕ್ಕಿನ ಮೂಲವ ತಿಳಿದು ಘಟಿಕಾಸ್ಥಾನವೆಂಬ ಒಂದಾಸನವ ಬರೆದು, ಎಂಬತ್ನಾಲ್ಕು ಆಸನದ ಭೇದದ ಗುಣಾವಗುಣಗಳೆಲ್ಲಾ ಒಂದೇ ಆಸನದಲ್ಲಿ ತಿಳಿದು, ಸತ್ಯವ ಹಿಡಿದು, ನಿತ್ಯನಾಗಿರಬಲ್ಲರೆ ಆತ ತನಗೆ ಬಂದಂತಹ ಮೂನ್ನೂರರವತ್ತು ಕಂಟಕಗಳನ್ನೆಲ್ಲ ಬಡಬಾಗ್ನಿಯ ಕಿಚ್ಚಿನಲ್ಲಿ ಸುಟ್ಟು, ಬೂದಿಯನು ಗಂಗೆಯ ಕೂಡಿಸಿ, ಲಿಂಗಾಂಗಿಯಾಗಿರಬಲ್ಲರೆ ಆತನಿಗೆ ಸ್ನಾನ ನೇಮ ಸಂಧ್ಯಾವಂದನ ಜಪ ಗಾಯತ್ರಿ ಸಪ್ತಗಾಯತ್ರಿಗಳ ಸ್ಥಾನಸ್ಥಾನದಲ್ಲಿ ನುಡಿದು ಪ್ರಾಣಲಿಂಗದ ದರುಶನವಾಗಿರಬಲ್ಲರೆ, ಆತನಿಗೆ ಅನಂತಕಾಲ ಚಕ್ರವ ಗೆಲಿದಂತಹ ಅಖಂಡಪರಿಪೂರ್ಣ ಮಹಾಮಹಾದೇವರೆಂದೆನ್ನಬಹುದು ಕಾಣಿರೋ. ಇಂತು ತಮ್ಮ ಅಂತರಂಗದೊಳಗಿದ್ದ ಕುಲಭಕ್ತನ ಭೇದವನರಿಯದೆ, ನರಕವಿ ವರಕವಿಗಳು ಹಲವು ಶಾಸ್ತ್ರ ಆಗಮ ಪುರಾಣಗಳ ಓದಿ, ಬಹುಮಾತುಗಳ ಕಲಿತು, ಬಂದ ಬರವು ನಿಂದ ನಿಲವು ತಡಿಯನರಿಯದೆ, ಒಂದೊಂದನೆ ಪದ ಪದ್ಯವನು ಮಾಡಿ, ಆಸ್ಥಾನದ ಸಭೆಯೊಳಗೆ ಕುಳಿತುಕೊಂಡು ಹಾಡಿ ಪಾಡುವಂತಹ ಕವಿಗಳೆಂಬ ಕತ್ತೆಗಳ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ದೇವನೊಂದೆ ವಸ್ತು, ಮನವೊಂದೆ ವಸ್ತು. ಸತ್ಯ, ನಿತ್ಯ, ಸಹಜ, ಉತ್ತಮ ವಸ್ತುವೆ ಉತ್ತಮ ವಸ್ತು. ಈ ಒಂದನೊಂದು ಮೆಚ್ಚಿ ಒಂದಾದಡೆ ಇಹ ಪರ ಒಂದು, ದ್ವಂದ್ವವೆಂಬುದಿಲ್ಲ. ಒಂದೆ ಇದು, ಘನಪರಿಣಾಮ ಮುಕ್ತಿಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಸಂಕಲ್ಪ ವಿಕಲ್ಪವೆಂಬ ಉದಯಾಸ್ತಮಾನಗಳಿಗೆ ದೂರವಾದ ಶಿವಶರಣರ ಅಕುಲಜರೆಂದು ಗಳಹುತಿಪ್ಪರು ನೋಡಾ ಈ ಮರುಳ ವಿಪ್ರರು ತಾವು ಮಾತಂಗಿಯ ಗರ್ಭಸಂಭವ ಜೇಷ*ಪುತ್ರರೆಂಬುದನರಿಯದೆ. ನಮ್ಮ ಶಿವಭಕ್ತರು ಅಂತಹ ಕುಲ ಇಂತಹ ಕುಲದವರೆಂದು ನಿಂದಿಸಿ ನುಡಿವ ವಿಪ್ರಹೊಲೆಯರು ನೀವು ಕೇಳಿ ಭೋ ಅದೆಂತೆಂದಡೆ_ ಸ್ತ್ರೀವಾದಪುರುಷಃ ಷಂಡಶ್ಚಂಡಾಲೋ ದ್ವಿಜವಂಶಜಃ ನಜಾತಿಭೇದೋ ಲಿಂಗಾರ್ಚೇ ರುದ್ರಗಣಾಃ ಸ್ಮೃತಾಃ ಇಂತೆಂಬ ಪುರಾಣವಾಕ್ಯವನರಿದು ನಮ್ಮ ಶಿವಭಕ್ತನು ಹೊಲೆಯ ಮಾದಿಗ ಕಬ್ಬಿಲ ಕಮ್ಮಾರ ಕಂಚುಗಾರ ಅಕ್ಕಸಾಲೆ ಕುಂಬಾರ ಅಗಸ ನಾವಿಂದ ಜೇಡ ಬೇಡನೆಂದು ನುಡಿಯುತಿಪ್ಪರು. ನಿಮ್ಮ ಉತ್ತಮ ಸತ್ಕುಲಂಗಳ ನಾವು ಎತ್ತಿ ನುಡಿಯಬಹುದೇ ಮಾರ್ಕಂಡೇಯ ಮಾದಿಗನೆಂದು ಸಾಂಖ್ಯ ಶ್ವಪಚನೆಂದು ಕಾಶ್ಯಪ ಕಮ್ಮಾರನೆಂದು ರೋಮಜ ಕಂಚುಗಾರನೆಂದು ಅಗಸ್ತ್ಯ ಕಬ್ಬಿಲನೆಂದು ನಾರದ ಅಗಸನೆಂದು ವ್ಯಾಸ ಬೇಡನೆಂದು ವಶಿಷ* ಡೊಂಬನೆಂದು ದುರ್ವಾಸ ಮಚ್ಚಿಗನೆಂದು ಕೌಂಡಿಲ್ಯ ನಾವಿಂದನೆಂದು ಅದೆಂತೆಂದಡೆ ವಾಸಿಷ*ದಲ್ಲಿ_ ವಾಲ್ಮಿಕೀ ಚ ವಶಿಷ*ಶ್ಚ ಗಾಗ್ರ್ಯಮಾಂಡವ್ಯಗೌತಮಾಃ ಪೂರ್ವಾಶ್ರಯೇ ಕನಿಷಾ*ಸ್ಯುರ್ದೀಕ್ಷಯಾ ಸ್ವರ್ಗಗಾಮಿನಃ ಎಂದುದಾಗಿ ಇದನರಿದು ಮರೆದಿರಿ ನಿಮ್ಮ ಕುಲವನು ಇನ್ನು ನಿಮ್ಮ ಕುಲದಲ್ಲಿ ಹಿರಿಯರುಳ್ಳರೆ ನೀವು ಹೇಳಿ ಭೋ ನಿಮ್ಮ ಗೋತ್ರವ ನೋಡಿ ನಿಮ್ಮ ಹಮ್ಮು ಬಿಡಿ ಭೋ ಎಮ್ಮ ಸದ್ಭಕ್ತರೇ ಕುಲಜರು. ಇದ ನಂಬಿದಿರ್ದಡೆ ಓದಿ ನೋಡಿರಣ್ಣಾ ನಿಮ್ಮ ವೇದವರ್ಗಂಗಳೊಳಗೆ ಅದೆಂತೆಂದಡೆ ಅಥರ್ವವೇದದಲ್ಲಿ_ ಮಾತಂಗೀ ರೇಣುಕಾ ಗರ್ಭಸಂಭವಾತ್ ಇತಿ ಕಾರುಣ್ಯಂ ಮೇಧಾವೀ ರುದ್ರಾಕ್ಷಿಣಾ ಲಿಂಗಧಾರಣಸ್ಯ ಪ್ರಸಾದಂ ಸ್ವೀಕುರ್ವನ್ ಋಷೀಣಾಂ ವರ್ಣಶ್ರೇಷೊ*ೀs ಘೋರ ಋಷಿಃ ಸಂಕರ್ಷಣಾತ್ ಇತ್ಯಾದಿ ವೇದ ವಚನ ಶ್ರುತಿಮಾರ್ಗೇಷು ಎಂದುದಾಗಿ ಮತ್ತಂ ವಾಯವೀಯಸಂಹಿತಾಯಾವಮ್_ ಬಾಹ್ಮಣೋ ವಾಪಿ ಚಾಂಡಾಲೋ ದುರ್ಗುಣಃ ಸುಗುಣೋsಪಿ ವಾ ಭಸ್ಮ ರುದ್ರಾಕ್ಷಕಕಂಠೂೀ ವಾ ದೇಹಾಂತೇ ಸ ಶಿವಂ ವ್ರಜೇತ್ ಎಂದುದಾಗಿ ಮತ್ತಂ ಶಿವರಹಸ್ಯದಲ್ಲಿ_ ಗ್ರಾಮೇಣ ಮಲಿನಂ ತೋಯಂ ಯಥಾ ಸಾಗರಸಂಗತವರಿï ಶಿವಸಂಸ್ಕಾರಸಂಪನ್ನೆ ಜಾತಿಭೇದಂ ನ ಕಾರಯೇತ್ ಎಂದುದಾಗಿ ಇವರೆಲ್ಲರ ವರ್ಣಂಗಳು ಲಿಂಗಧಾರಣೆಯಿಂದ ಮರೆಸಿಹೋದವು ಕೇಳಿರಣ್ಣಾ. ಇಂತಪ್ಪ ಋಷಿ ಜನಂಗಳೆಲ್ಲ ಶ್ರೀಗುರುವಿನ ಕಾರುಣ್ಯವಂ ಪಡೆದು ವಿಭೂತಿ ರುದ್ರಾಕ್ಷಿಯಂ ಧರಿಸಿ ಶಿವಲಿಂಗಾರ್ಚನೆಯಂ ಮಾಡಿ ಪಾದತೀರ್ಥ ಪ್ರಸಾದವಂ ಕೊಂಡು ಉತ್ತಮ ವರ್ಣಶ್ರೇಷ*ರಾದರು ಕಾಣಿರೇ ಇದು ಕಾರಣ ನಮ್ಮ ಕೂಡಲಚೆನ್ನಸಂಗಯ್ಯನ ಅರಿದು ಪೂಜಿಸುವಾತನೇ ಉತ್ತಮ ಸದ್ಭಕ್ತ ಬ್ರಾಹ್ಮಣನು. ಅರಿಯದವನೀಗಲೇ ಕೆಟ್ಟ ಹೊಲೆಯ ಕಾಣಿರಣ್ಣಾ.
--------------
ಚನ್ನಬಸವಣ್ಣ
ಭವಬೀಜಂ ತಥಾ ಭಕ್ತಿರ್ಭಕ್ತಿಬೀಜಂ ತಥಾ ಶಿವಃ ಶಿವಬೀಜಂ ತಥಾ ಜ್ಞಾನಂ ತ್ರೈಲೋಕ್ಯದುರ್ಲಭಂ ಈಷಣತ್ರಯಸಂಯುಕ್ತಃ ಶಿವಜ್ಞಾನವಿವರ್ಜಿತಃ ಶ್ವಪಚಃ ಪಾದಾತೀರ್ಥಂ ತು ಸ್ವೀಕುರ್ವನ್ನರಕಂ ವ್ರಜೇತ್ ಸಂಸಾರಾರ್ಣವಘೋರೇಣ ವೇಷಮಂಗೀಕರೋತಿ ಯಃ ಪಾದತೀರ್ಥಂ ಪ್ರಸಾದಂ ಚ ಸ್ವೀಕುರ್ವನ್ನರಕಂ ವ್ರಜೇತ್ ಉತ್ತಮಂ ಪ್ರಾಣಲಿಂಗಸ್ಯ ತ್ವಂಗಲಿಂಗಸ್ಯ ಮಧ್ಯಮಂ ಕನಿಷ*ಂ ಸ್ಥಾವರಾದೀನಾಂ ಧ್ಯಾನಂ ಶೂನ್ಯಸ್ಯ ನಿಷ್ಫಲಂ _ಇಂತೆಂದುದಾಗಿ ಪ್ರಾಣಲಿಂಗವರಿಯದವರ ಪಾದಾರ್ಚನೆಯ ಮಾಡಲಾಗದು. ಮುಖಲಿಂಗವಿಲ್ಲದವರಲ್ಲಿ ಪ್ರಸಾದವ ಕೊಂಡಡೆ, ಸರ್ವಾಂಗ ಲಿಂಗವೆಂದರಿಯದವರಲ್ಲಿ ಪ್ರಸಾದವ ಕೊಂಡಡೆ, ಅಘೋರನರಕ ತಪ್ಪದಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
``ಗೃಹಸ್ನಾನಂ ಕನಿಷ*ಂ ಚ ಕೂಪಸ್ನಾನಂ ತು ಮಧ್ಯಮಂ|| ಉತ್ತಮಂ ತು ನದೀಸ್ನಾನಂ ಸತ್ಯಂ ಪರ್ವತನಂದನೇ||' ಎಂಬುದಂತಿರ. ಎಮ್ಮ ಮನಸಿನ ಕಲ್ಮಷಗಳಳಿದುದೆ ಮಹಾಸ್ನಾನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪ್ರಥಮದಲ್ಲಿ ನಾಮ ರೂಪು ಕ್ರೀ ಏನೂ ಏನೂ ಇಲ್ಲದ ಮಹಾಘನ ಶೂನ್ಯಬ್ರಹ್ಮವು. ಆ ಶೂನ್ಯಬ್ರಹ್ಮದಿಂದ ಶುದ್ಧ ಪ್ರಣವ. ಆ ಶುದ್ಧ ಪ್ರಣವಧಿಂದ ಚಿತ್ತು ಭಾವದಕ್ಷರ. ಆ ಚಿತ್ತು ಭಾವದಕ್ಷರದಿಂದ ಪರಶಕ್ತಿ. ಆ ಪರಾಶಕ್ತಿಯಿಂದ ಅಕ್ಷರತ್ರಯಂಗಳು. ಆ ಅಕ್ಷರತ್ರಯಂಗಳಿಂದ ಓಂಕಾರ. ಆ ಓಂಕಾರವೆ ಬಸವಣ್ಣನು. ಆ ಬಸವಣ್ಣನೆ ಎನ್ನ ವದನಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಮಧ್ಯಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಬಲದ ತೊಡೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ತೊಡೆಗೆ ಯಕಾರಾವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಯತಕ್ಕೆ ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಯತಕ್ಕೆ ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸನ್ನಿಹಿತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರೀಗೆ ಅವಾಚ್ಯ ಸ್ವರೂಪಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಮಹಾಶೂನ್ಯ ಸ್ವರೂಪನಾಗಿ ಬಂದನಯ್ಯ ಬಸವಣ್ಣ. ಎನ್ನ ರುಧಿರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮೇದಸ್ಸಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಸ್ಥಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಗಮಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಭಾವ ಕೊಂದಹೆನೆಂದು ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೊನ್ನು ಹೆಣ್ಣು ಮಣ್ಣೆಂಬ ಸಕಲಾಸೆಯ ಕೊಂದಹೆನೆಂದು ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಂದ್ರಿಯ ವಿಷಯಂಗಳ ಕೊಂದಹೆನೆಂದು ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಾದಕ್ಕೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಳೆಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶ್ವಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ತೈಜಸಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ ಎನ್ನ ಪ್ರಜ್ಞೆಗೆ ತೃಪ್ತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸತ್ವಕ್ಕೆ ಶುದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ರಜಕ್ಕೆ ಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ತಮಕ್ಕೆ ಪ್ರಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನಗೆ ಬಕಾರವೆ ಗುರುವಾಗಿ ಬಂದನಯ್ಯ ಬಸವಣ್ಣ. ಎನಗೆ ಸಕಾರವೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನಗೆ ವಕಾರವೆ ಜಂಗಮವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶಿವ ಕ್ಷೇತ್ರಜ್ಞ ಕರ್ತಾರ ಭಾವ ಚೈತನ್ಯ ಅಂತರ್ಯಾಮಿಯೆಂಬ ಷಡುಮೂರ್ತಿಗಳಿಗೆ ನಕಾರ ಮಃಕಾರ ಶಿಕಾರ ವಾಕಾರ ಯಕಾರ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಸ್ಸಿಂಗೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬ್ರಹ್ಮತತ್ವಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಷ್ಣುತತ್ವಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ರುದ್ರತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಈಶ್ವರತತ್ವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸದಾಶಿವತತ್ವಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಹಾಶ್ರೀಗುರುತತ್ವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೃಥ್ವಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪ್ಪುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಗ್ನಿತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಕಾಶಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆತ್ಮಂಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣವಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪಾನವಾಯುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವ್ಯಾನವಾಯುವಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಉದಾನವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮಾನವಾಯುವಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಪಂಚವಾಯುವಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಧಾರಚಕ್ರಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಧಿಷಾ*ನಚಕ್ರಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಣಿಪೂರಚಕ್ರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅನಾಹತಚಕ್ರಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶುದ್ಧಿಚಕ್ರಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಆಜ್ಞಾಚಕ್ರಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರ್ದಳಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡುದಳಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶದಳಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶದಳಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿದಳಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರಾಕ್ಷರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡಾಕ್ಷರಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದಶಾಕ್ಷರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶಾಕ್ಷರಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಾಕ್ಷರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿಯಾಕ್ಷರಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಮ. ಎನ್ನ ಕೆಂಪುವರ್ಣಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೀಲವರ್ಣಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕುಂಕುಮವರ್ಣಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೀತವರ್ಣಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ವೇತವರ್ಣಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಣಿಕ್ಯವರ್ಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ರಾಗ್ರಾವಸ್ಥೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಪ್ನಾವಸ್ಥೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸುಷುಪ್ತಾವಸ್ಥೆಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತೂರ್ಯಾವಸ್ಥೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅತೀತಾವಸ್ತೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿರಾವಸ್ಥೆಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಂತಃಕರಣಂಗಳಿಗೆ ಚತುರ್ವಿಧ ಬಿಂದು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅರಿಷಡ್ವರ್ಗಂಗಳಿಗೆ ಷಡ್ವಿಧಧಾತು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದಶವಾಯುಗಳಿಗೆ ದಶವಿದ ಕ್ಷೇತ್ರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶೇಂದ್ರಿಯಂಗಳಿಗೆ ದ್ವಾದಶ ವಿಕೃತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಕಲೆಗೆ ಷೋಡಶಕಲಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರ ಮಮಕಾರಗಳಿಗೆ ವಿದ್ಯಾಲಿಂಗವಾಗಿ ಬಂದನಯ್ಯಬಸವಣ್ಣ. ಎನ್ನ ಭಕ್ತಿಸ್ಥಲಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಹೇಶ್ವರಸ್ಥಲಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಸಾದಿಸ್ಥಲಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಲಿಂಗಿಸ್ಥಳಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶರಣಸ್ಥಲಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಐಕ್ಯಸ್ಥಲಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರಿಯಾಶಕ್ತಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಶಕ್ತಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಚ್ಛಾಶಕ್ತಿಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆದಿಶಕ್ತಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪರಶಕ್ತಿಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ಶಕ್ತಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರದ್ಧೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿಷೆ*ಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅವಧಾನಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅನುಭಾವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆನಂದಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮರಸಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶಬ್ದಕ್ಕೆ ಗುರುವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಪರುಶನಕ್ಕೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ರೂಪಿಂಗೆ ಶಿವಲಾಂಛನವಾಗಿ ಬಂದನಯ್ಯ ಬಸವಣ್ಣ. ಎನ್ನ ರಸಕ್ಕೆ ಶಿವಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ಗಂಧಕ್ಕೆ ಶಿವಾನುಭಾವವಾಗಿ ಬಂದನಯ್ಯ ಬಸವಣ್ಣ ಎನ್ನ ನಾಸಿಕಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜಿಹ್ವೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೇತ್ರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಕ್ಕಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರೋತ್ರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೃದಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಕ್ಕಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಣಿಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾದಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಗುಹ್ಯಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಇಂತೀ ಪಂಚೇಂದ್ರಿಯಂಗಳೆ ಪಂಚಮಹಾಯಜ್ಞ. ಆ ಪಂಚಮಹಾಯಜ್ಞದಲ್ಲಿ ಎನ್ನ ಮನ ಹಾರೈಸಿ ಪೂರೈಸಿ ಒಲಿದು ಕೇಳಿತ್ತು ಮುಟ್ಟಿತ್ತು ನೋಡಿತ್ತು ರುಚಿಸಿತ್ತು ವಾಸಿಸಿತ್ತು. ಎನ್ನ ಮಾನಸ ವಾಚಕ ಕಾಯಕ ಕರಣಂಗಳೆಲ್ಲವು ಪಂಚಮಹಾಯಜ್ಞ ಸೋಂಕಿ ಪಂಚಮಹಾಯಜ್ಞವಪ್ಪುದು ತಪ್ಪದು. ಅದೆಂತೆಂದಡೆ- ಮಹಾಜ್ಯೋತಿಯ ಸೋಂಕಿದ ಉತ್ತಮ ಅಧಮ ತೃಣ ಮೊದಲಾದವೆಲ್ಲವು ಮಹಾ ಅಗ್ನಿಯ ಸೋಂಕಿ ಮಹಾ ಅಗ್ನಿಯಪ್ಪುದು ತಪ್ಪದು. ಇಂತಪ್ಪ ಮಹಾಯಜ್ಞವನೊಳಕೊಂಡಿಪ್ಪ ಮೂಲಾಗ್ನಿಯೇ ಬಸವಣ್ಣ. ಆ ಬಸವಣ್ಣನೆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯೇ ಚಿದ್ಬ ್ರಹ್ಮ. ಆ ಚಿದ್ಬ ್ರಹ್ಮವೇ ಬಸವಣ್ಣ. ಆ ಬಸವಣ್ಣನೇ ಎನಗೆ ಅಷ್ಟಾವರಣ ಸ್ವರೂಪನಾದ ಸಚ್ಚಿದಾನಂದ ಬಸವಣ್ಣ. ನಿತ್ಯಪರಿಪೂರ್ಣ ಬಸವಣ್ಣ. ಅಖಂಡಾದ್ವಯ ಬಸವಣ್ಣ. ನಿರಂಜನ ಬಸವಣ್ಣ. ನಿರ್ಮಾಯ ಬಸವಣ್ಣ, ನಿರಾಚರಣ ಬಸವಣ್ಣ. ನಿರ್ಜನಿತ ಬಸವಣ್ಣ. ನಿರ್ಲೇಪ ಬಸವಣ್ಣ. ನಿಃಕಪಟಿ ಬಸವಣ್ಣ. ಅಸಾಧ್ಯ ಸಾಧಕ ಬಸವಣ್ಣ. ಅಭೇದ್ಯ ಭೇದಕ ಬಸವಣ್ಣ. ಚಿತ್ಪ್ರಕಾಶ ಬಸವಣ್ಣ. ಇಂತಪ್ಪ ಬಸವಣ್ಣನ ಅಂಗವೆ ಚಿದಾಕಾಶ. ಆ ಚಿದಾಕಾಶದ ಮಧ್ಯದಲ್ಲಿ ಚಿತ್ಪ್ರಾಣವಾಯು. ಆ ಚಿತ್ಪ್ರಾಣವಾಯುವಿನ ಮಧ್ಯದಲ್ಲಿ ಚಿದಾಗ್ನಿ. ಆ ಚಿದಾಗ್ನಿಯ ಮಧ್ಯದಲ್ಲಿ ಚಿಜ್ಜಲ. ಆ ಚಿಜ್ಜಲದ ಮಧ್ಯದಲ್ಲಿ ಚಿದ್ಭೂಮಿ. ಆ ಚಿದ್ಭೂಮಿಯ ಮಧ್ಯದಲ್ಲಿ ಹೃದಯ. ಆ ಹೃದಯದ ಮಧ್ಯದಲ್ಲಿ ಆಕಾರ ಉಕಾರ ಮಕಾರ ಪ್ರಣಮಪೀಠ. ಆ ಪ್ರಣವಪೀಠದ ಮಧ್ಯದಲ್ಲಿ ಜಂಗಮ ಆ ಜಂಗಮವ ಮಕುಟದಲ್ಲಿ ಶೂನ್ಯಲಿಂಗ. ಆ ಶೂನ್ಯಲಿಂಗದಲ್ಲಿ ಚಿದಂಬರ, ಆ ಚಿದಂಬರರಲ್ಲಿ ಶಿವಶಕ್ತಿ. ಆ ಶಿವಶಕ್ತಿಯಲ್ಲಿ ಪಂಚಶಕ್ತಿ. ಆ ಪಂಚಶಕ್ತಿಯಲ್ಲಿ ಪಂಚನಾದ. ಆ ಪಂಚನಾದದಲ್ಲಿ ಪಂಚಸಾದಾಖ್ಯ. ಆ ಪಂಚಸಾದಾಖ್ಯದಲ್ಲಿ ಈಶ್ವರ. ಆ ಈಶ್ವರನಲ್ಲಿ ಮಾಹೇಶ್ವರ. ಆ ಮಾಹೇಶ್ವರನಲ್ಲಿ ರುದ್ರ. ಆ ರುದ್ರನಲ್ಲಿ ತ್ರಯವಯ ಹಿರಣ್ಯಗರ್ಭ ವಿರಾಟ್‍ಮೂರ್ತಿ. ಇಂತೀ ಎಂಬತ್ತುಮೂರು ಮೂರ್ತಿಗಳೊಳಗೆ ಎಂಬತ್ತೆರಡೆ ಬಸವಣ್ಣನಂಗವೊಂದೆ ಪ್ರಾಣ. ಆ ಪ್ರಾಣ ಚೈತನ್ಯ ಶೂನ್ಯವೆ ಗೋಳಕ ಗೋಮುಖ ವೃತ್ತಾಕಾರವಾಗಿ ಕರಸ್ಥಲದಲ್ಲಿ ಪಿಡಿದು ಆ ಲಿಂಗದ ಆದಿಪ್ರಣಮವೆ ಪೀಠ, ಆಕಾರವೆ ಕಂಠ, ಉಕಾರವೆ ಗೋಮುಖ, ಮಕಾರವೆ ವರ್ತುಳ, ನಾಳ ಬಿಂದು ಮಹಾತೇಜ. ನಾದವೆ ಅಖಂಡಲಿಂಗ. ಇಂತಪ್ಪ ಬಸವಣ್ಣನ ನಿತ್ಯತ್ವವೆ ಲಿಂಗ; ಪೂರ್ಣತ್ವವೆ ಗುರು. ಚಿತ್ಪ್ರಕಾಶವೆ ಜಂಗಮ. ಆನಂದವೆ ಪ್ರಸಾದ, ಚಿದ್ರಸದ ಪ್ರವಾಹವೆ ಪಾದತೀರ್ಥ. ಇಂತಪ್ಪ ಬಸವಣ್ಣ ಅನಂತಕೋಟಿ ಬ್ರಹ್ಮಾಂಡಗಳ ರೋಮಕೂಪದಲ್ಲಿ ಸಂಕಲ್ಪಿಸಿ ಅಲ್ಲಿದ್ದಾತ್ಮಂಗೆ ಸುಜ್ಞಾನ ಕ್ರೀಯನಿತ್ತು ತದ್ ಭೃತ್ಯ ಕರ್ತೃ ತಾನಾಗಿ ಇಷ್ಟಾರ್ಥಸಿದ್ಧಿಯನೀವುತಿಪ್ಪ ಬಸವಣ್ಣನ ಭೃತ್ಯರ ಭೃತ್ಯರ ತದ್‍ಭೃತ್ಯನಾಗಿರಿಸಿ ಬಸವಣ್ಣನ ಪಡುಗ ಪಾದರಕ್ಷೆಯ ಹಿಡಿವ ಭಾಗ್ಯವಯೆನಗೀವುದಯ್ಯ, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಬಸವಣ್ಣನ ಅರುಹಿಕೊಟ್ಟ ಸಿದ್ಧೇಶ್ವರನ ಶ್ರೀಪಾದಪದ್ಮದಲ್ಲಿ ಭೃಂಗನಾಗಿರ್ದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಮಹಾಶೂನ್ಯ ಅಂಧಕಾರ ಸುರಾಳ ನಿರಾಳ ನಿರಾಲಂಬದಿಂದತ್ತ ತನ್ಮಯ ಸ್ವಯಂಭು ಸನ್ನದ್ಧವಾಗಿ ಅನಾದಿವಸ್ತು ಆದಿಸ್ವರೂಪವ ತಾಳ್ದು ಬಂದ ವಿವರ: ನಾದ ಬಿಂದು ಕಳೆ ಈ ತ್ರಿವಿಧಭೇದ ಏಕವಾಗಿನಿಂದ ದೆಸೆಯಿಂದ ಆ ವಸ್ತುವಿನ ತಿಲಾಂಶು ಸದಾಶಿವಮೂರ್ತಿಯ ಅಂಶೀಭೂತವಾಗಿ ಏಕಾಂತ ಪ್ರಮಥ ರುದ್ರನ ದೆಸೆಯಿಂದ ದಶರುದ್ರರ ಸಂಬಂಧ ವೈಷ್ಣವಭೇದ. ಆ ವೈಷ್ಣವ ದಶ ಅವತಾರಭೇದ. ದಕ್ಷ ಮುಂತಾದ ನವಬ್ರಹ್ಮತ್ವದಿಂದ ಮನುಮುನಿಗಳು ಮುಂತಾದ ಯಕ್ಷ ರಾಕ್ಷಸ ಶಕ್ತಿದೇವತೆ ಕುಲ ಮುಂತಾದ ಷಡ್ದರ್ಶನ ಪಕ್ಷಪಾತ ಭೇದಂಗಳಾಗಿ ಇಪ್ಪ ತೆರನ ವೇದದ ಹಾದಿಯಿಂದ ಶಾಸ್ತ್ರದ ಸಂದೇಹದಿಂದ ಪುರಾಣದ ಪೂರ್ವ ಮುಂತಾದ ಯುಕ್ತಿಯಿಂದ ತಿಳಿದು ಉತ್ತಮ ಮಧ್ಯಮ ಕನಿಷ*ವೆಂಬ ದೇವತ್ವಕುಲವನರಿ. ಇಂದುವಿನ ಕಳೆಯಿಂದ ಆ ಇಂದುವಿನ ಕಳೆಯನರಿವಂತೆ ಜ್ಯೋತಿಯ ಕಳೆಯಿಂದ ಆ ಜ್ಯೋತಿಯ ಲೇಸು ಕಷ್ಟವ ಕಾಂಬಂತೆ ನಿಮ್ಮ ಶಾಸ್ತ್ರಸಂಪದಗಳಲ್ಲಿ ಏಕಮೇವನದ್ವಿತೀಯನೆಂಬ ಶ್ರುತಿಯ ವಿಚಾರಿಸಿಕೊಂಡು ಇದ್ದ ಮತ್ತೆ ಆರಡಿಯೇತಕ್ಕೆ ? ಇಂತೀ ಭೇದಕ್ಕೆ ವಿಶ್ವಮಯನಾಗಿ ವಿಶ್ವಚಕ್ಷುವಾಗಿ ತತ್ವಂಗಳಿಗೆ ಮುಖ್ಯವಾಗಿ ಉತ್ಪತ್ಯ ಸ್ಥಿತಿ ಲಯಕ್ಕೆ ಕರ್ತೃವಾಗಿ ಆಚಾರ್ಯಮತಕ್ಕೆ ಅಂಗವಾಗಿ ಲೀಲಾಗುಣದಿಂದ ಶಕ್ತಿಸಮೇತವಾಗಿ ಮತ್ತೆ ನಿನ್ನ ಇಚ್ಫೆ ಹಿಂಗಿ ನಿಶ್ಚಯವಾಗಿ ಸ್ವಯಂಭುವಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ
ತಂದೆ-ತಾಯಿ, ಬಂಧು-ಬಳಗ, ಹೆಂಡಿರು-ಮಕ್ಕಳು, ತೊತ್ತು-ಬಂಟರುಗಳಿಗೆ ಒಬ್ಬನೆ ಗುರುವು. ಒಂದೇ ದೀಕ್ಷೆಯಾದಡೆ ಅತ್ಯಂತ ಉತ್ತಮ ನೋಡಾ ``ಪತಿಪತ್ನೀಭ್ರಾತೃಪುತ್ರದಾಸ್ಯೋ ಗೃಹಚರಾಶ್ಚ ಯೇ | ಏಕ ಏವ ಗುರುಸ್ತೇಷಾಂ ದೀಕ್ಷೈಕಾ ತು ವಿಶೇಷ್ಯತೇ ||'' ಇದಲ್ಲದೆ ಬಹುಮುಖದ ಗುರು, ಬಹುಮುಖದ ದೀಕ್ಷೆಯಾದಡೆ, ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಲಿಂಗ ಜಂಗಮದ ಇರವನರಿವಲ್ಲಿ, ತನ್ನ ಶ್ರದ್ಧೆಯೊ ಅವರ ಇರವೊ ಎಂಬುದನರಿಯಬೇಕು. ಗುರುವಿನಲ್ಲಿ ಗುಣವನರಸಲಿಲ್ಲಾ ಎಂಬರು; ಲಿಂಗದಲ್ಲಿ ಲಕ್ಷಣವನರಸಲಿಲ್ಲಾ ಎಂಬರು; ಜಂಗಮದಲ್ಲಿ ಜಾತಿಸೂತಕವನರಸಲಿಲ್ಲಾ ಎಂಬರು. ಇದು ಎಲ್ಲರ ಬಳಕೆಯ ಮಾತು. ಗುರುವಿನಲ್ಲಿ ಗುಣವಿಲ್ಲದಿರ್ದಡೆ ಶಿಷ್ಯನ ಕೃತಾರ್ಥನ ಮಾಡುವ ಪರಿಯಿನ್ನೆಂತೊ? ಲಿಂಗದಲ್ಲಿ ಲಕ್ಷಣವಿಲ್ಲದಿರ್ದಡೆ ಪಂಚಸೂತ್ರ ಪ್ರವರ್ತನ ವರ್ತುಳ ಗೋಮುಖ ಗೋಳಕಾಕಾರ ಇಷ್ಟಾರ್ಥ ಭಕ್ತರಿಗೆ ಮನೋಹರವಹ ಪರಿಯಿನ್ನೆಂತೊ? ಜಂಗಮಕ್ಕೆ ಜಾತಿಯಿಲ್ಲದಿರ್ದಡೆ, ಉತ್ತಮ ಕನಿಷ* ಮಧ್ಯಮ ಮುಖದಲ್ಲಿ ವೇದಾಂತಿ, ಭುಜದಲ್ಲಿ ಕ್ಷತ್ರಿಯ, ಉದರದಲ್ಲಿ ಹರದಿಗ, ಜಂಘೆಯಲ್ಲಿ ಹಲಾಯುಧ ಈ ಅಂಗದಲ್ಲಿ ವಿಶೇಷವ ಕಂಡು ಜಾತಿಯ ಹಿಂಗುವ ಪರಿಯಿನ್ನೆಂತೊ? ನುಡಿಯಬಾರದು, ದರಿಸಿನಕ್ಕಂಜಿ ಸುಮ್ಮನಿರಬಾರದು. ಜ್ಞಾನಕ್ಕಂಜಿ ಬಿದಿರ ಹೋಟೆಯಲ್ಲಿ ಹರಿದ ಉರಿಯಂತೆ ಬೇವುತ್ತಿದ್ದೇನೆ. ಈ ಬೇಗೆಯ ಬಿಡಿಸು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಜ್ಞಾನಗುರುವಿನ ಶ್ರೀಪಾದವಿಡಿದ ಶಿವಕವಿ ಅತೀತನೆಂತೆನೆ : ``ಪರಬ್ರಹ್ಮಸ್ವರೂಪ ಉತ್ತಮಂ ಮುಕ್ತಿ ಸಂತತಃ ದೇವದೂತಿ ಪ್ರಸನ್ನಿತೆ ಉಭಯಮಾರ್ಗ ವರಕವಿ ಮುದಿಮಮ್ ಪ್ರಳಯಕಾಲಸ್ಯ | ಆತ್ಮತೃಪ್ತಿ ನರಕವಿ ರಾಜವಂದಿತಾ ತನ್ನಿಷ್ಟ ನರಕಪಿತಃ ತ್ರಿವಿಧ ಶಬ್ದ ಶಾಸ್ತ್ರಯಿತಾರ್ಥ ಸಮೋದ್ದಿಷ್ಟ ವಚನಧಾರಿ ನಿಷ್ಕಳಂ ||''(?) ಶ್ರೀ ಶ್ರೀ ಕವಿಗಳೆಂದು ಪೆಸರಿಟ್ಟುಕೊಂಡು ನುಡಿವಣ್ಣಗಳಿರಾ ಕಾಯದ ಕೀಲನರಿತು ಕಾವ್ಯತ್ವವನು ಮಾಡಿ ಭೇದವ ಬಲ್ಲರೆ ಹೇಳಿ, ಅರಿಯದಿರ್ದೊಡೆ ಕೇಳಿ. ನಿಮ್ಮ ಅಂಗ ಪಾತಾಳವೆಂಬ ಪವನಸೂತ್ರವನು ಮೆಟ್ಟಿ ಬಿಡುವಿಲ್ಲದಂತಾ ಉಯ್ಯಾಲೆಯನಾಡುತಿಹುದು. ನಿಮ್ಮ ಅಂಗ ಭುವಿಯೆಂಬ ಭೂಚಕ್ರದ ಮೂಲ ತಿಳಿದು ನಾಭಿಮಂಡಲವೆಂಬ ಹುತ್ತದೊಳಗಿರ್ದ ನಾಗಕೂರ್ಮನೆಂಬ ಘಟಸರ್ಪನ ತಲೆಕೆಳಗಾಗಿ ಬಾಲ ಮೇಲಕಾಗಿರುವುದು ಕಾಣಿರೋ. ಯೋಗದೃಷ್ಟಿಯೆಂಬ ನಾಗೇಶ್ವರನನು ಹಿಡಿದುಕೊಂಡು ಊದಲಾಗಿ ಆಗ ನಾಗಕೂರ್ಮನೆಂಬ ಸರ್ಪ ಸಭೆಯನು ತಿಳಿಯಲಿಕ್ಕೆ ಇಳುಹಿ ತಲೆಯ ಮೇಲಕ್ಕೆ ಮಾಡಿ ಗಗನಾಕಾರವೆಂಬ ಮಂಡಲಕ್ಕೆ ಹೆಡೆಯೆತ್ತಿ ಆರ್ಭಟಿಸಿ ಝೇಂಕರಿಸಿ ನಲಿದಾಡುವಂತೆ, ನಾದವನು ತನ್ನಲ್ಲಿ ಜ್ಞಾನೋದಯದಿಂದ ಲಾಲಿಸಿ ಕೇಳಬಲ್ಲರೆ ಆತನಿಗೆ ಝೇಂಕಾರ ಮೊದಲಾದ ನಾಲ್ಕು ವೇದ, ಆರು ಶಾಸ್ತ್ರ, ಹದಿನೆಂಟು ಪುರಾಣ ಇಪ್ಪತ್ತೆಂಟು ದಿವ್ಯಾಗಮ, ಮೂವತ್ತೆರಡು ಉಪಶಾಸ್ತ್ರಂಗಳಲ್ಲಿ ಗೀತ ಗಾಯನ ಯತಿ ಪ್ರಾಸ ದೀರ್ಘ ಗುರು ಲಘು ಬತ್ತೀಸ ರಾಗವನು ಎತ್ತಿ ಹಾಡುವಂತ ಮೂಲದ ಕೀಲ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಪಂಚಶತಕೋಟಿ ಭುವನದಲ್ಲಿ ಚಲಿಸ್ಯಾಡುವಂಥ ಮನದ ಚಂಚಲವೆಂಬ ಪಕ್ಷಿಯ ಪಕ್ಕವನು ಹರಿದು, ತನುವೆಂಬ ಪಂಜರದೊಳಗೆ ಇಂಬಿಟ್ಟುಕೊಂಡು, ತಾಮಸ ಮದಗುಣಾದಿಗಳೆಂಬ ಹುಳುಗಳ ಜಾತಿಗಳ ತೂಗಡಿಕೆ ಮದನಿದ್ರೆ ವಾಹಡಿಕೆ ಆಕಳಿಕೆ ಸೀನು ಬಿಕ್ಕಳಿಕೆ ಬದಗರ ತೇಗು ಮೊದಲಾದ ತಾಮಸಗುಣಾದಿ ಗುಣಂಗಳೆಂಬ ಹುಳುಜಾತಿಗಳನ್ನೆಲ್ಲ ತಿಂದು ನುಂಗಿ ನಿರ್ಮಲ ದೇಹಿಯಾಗಿರಬಲ್ಲರೆ ಆತನಿಗೆ ಒಂ ನಮಃಶಿವಾಯ ಎಂಬ ಷಡಕ್ಷರದ ಭೇದವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮಗೆ ಅಷ್ಟದಿಕ್ಕಿನಲ್ಲಿ ಆಡುವಂಥ ದಶರೂಪಗಳನ್ನೆಲ್ಲ ಚಿತ್ತ ಏಕ ಮಾಡಿ, ಸುಜ್ಞಾನವೆಂಬ ಹಸ್ತದಲ್ಲಿ ಹಿಡಿದು, ಮುಖದ ಮೇಲುಗಿರಿಮಂದರಪರ್ವತದ ಶಿಖರದ ತುದಿಯಲ್ಲಿ ನಿಲ್ಲಿಸಿ, ಕ್ಷೀರಸಾಗರವೆಂಬ ಸಮುದ್ರದೊಳಗೆ ಹುಚ್ಚೆದ್ದು ಸೂಸಿ ಆಡುವಂಥ ತೆರೆಗಳನ್ನೆಲ್ಲ ನಿಲ್ಲಿಸಬಲ್ಲರೆ ಆತನಿಗದು ತ್ರಿಕಾಲ ಮರಣಾದಿಗಳನ್ನೆಲ್ಲ ಗೆಲಿಯಬಲ್ಲಂಥ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ಆತನಿಗೆ ಜ್ಞಾನ ಅರ್ಥ ಪದದ ಕೀಲ ವಚನಂಗಳ ಅರ್ಥ ಅನುಭಾವಂಗಳ ಮಾಡಬಲ್ಲನೆಂದೆನ್ನಬಹುದು ಕಾಣಿರೋ ! ಇಂತು ಮಂತ್ರದ ಕೀಲನರಿಯದ ಕವಿಗಳು ಕಂದಯ್ಯಗೆ ಮಹಾಪ್ರಭುಲಿಂಗಲೀಲೆ, ಕರಣಹಸಿಗೆ, ಮಿಶ್ರಾರ್ಪಣ, ನವಚಕ್ರಕೋಟಿಗಳೆಂಬ ಇಂತೀ ಭುವಿಯಲ್ಲಿ ಶಿವಾಗಮವೆಂದು ಬರಿಯ ಮಾತಿನ ಮತಿಯ ಪತ್ರವನು ಹಿಡಕೊಂಡು ಓದಿ, ಅದರೊಳಗಿನ ಅರ್ಥವನು ಭಾವಂಗಳಲಿ ತಿಳಿತಿಳಿದು ನೋಡಿ, ಜ್ಞಾತತ್ವದ ವಚನಂಗಳ ಮಾಡಿ ಇಡುವಂಥ ಕವಿಗಳು ತಮ್ಮ ಆತ್ಮದ ಶುದ್ಧಿಯ ತಾವರಿಯದೆ ಭೂತವೊಡೆದವರು ಬೊಗಳಾಡಿದಂತೆ ಆಯಿತ್ತು ಕಾಣಿರೋ. ಅದೆಂತೆಂದರೆ :ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹಂಚಿನ ಕುಡಿಕೆಯೊಳಗೆ ತುಂಬಿದ ಅರ್ಥ ಅನುಭಾವಂಗಳ ತಿಳಿತಿಳಿದು ನೋಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ರವಿಶಶಿಯಾದಿಗೂ ಹೆಸರದೆಸೆಯ ಕೊಂಡುಕೊಂಡು, ಇಂತಿವು ಮೂರನು ಕೂಡಿಕೊಂಡು, ಒಂದಕ್ಕೆ ಒಂದು ಕಟ್ಟಿ ಹಾಕಿ ಪ್ರಾಸ ಬಿದ್ದಿತೊ ಬೀಳದೊ ಎಂದು ತಮ್ಮನದಲ್ಲಿ ತಾವು ಅಳದಾಡುವಂತೆ ಒಂದು ಹೊದವಿದ ಪದ್ಯವನು ಮಾಡಿ ಇಡುವಂತಹ ಕಲಿಕೆಯ ಕವಿಗಳು ಮುಂದೆ ಅಜ್ಞಾನದಿಂದ ಮುಕ್ತಿಯ ದಾರಿಯ ಕಾಣಲರಿಯದೆ ಮುಂದುಗಾಣದ ತುರುಕರು ಅಘೋರವೆಂಬ ನರಕದ ಕಿಚ್ಚಿನ ಕೊಂಡದೊಳಗೆ ಬಿದ್ದು ಹೋರಟೆಗೊಳ್ಳುತ್ತಿದ್ದರು ಕಾಣಿರೋ. ಅದೆಂತೆಂದರೆ ; ಛಂದಸ್ಸು ನಿಘಂಟು ಅಮರ ವ್ಯಾಕರಣ ನಾನಾರ್ಥಂಗಳೆಂಬುವೆಲ್ಲ ಕವಿಯೆಂಬ ಕುಂಬಾರ ಮಾಡಿ ಸವಿದುಂಡು ಬೀದಿಯೊಳಗೆ ಬಿಟ್ಟಿರ್ದ ಎಂಜಲ ಪತ್ರಾವಳಿಯೊಳಗಿನ ಭೋಜನಕ್ಕೆ ಕವಿಗಳೆಂಬುವ ಆರುಮಂದಿ ಸೊಣಗಗಳು ಕೂಗಿಡುತಿರ್ದವು ಕಾಣಿರೋ. ಅದೆಂತೆಂದರೆ:ಕಾಮ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಕ್ರೋಧ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮದ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮೋಹ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಮಚ್ಚರ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಲೋಭ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಇಂತಿವರು ಆರು ಮಂದಿ ಕವಿಗಳೆಂಬ ಶ್ವಾನಗಳು ಕೂಡಿ ನಾ ಹೆಚ್ಚು ತಾ ಹೆಚ್ಚು ಎಂದು ಒಂದಕ್ಕೊಂದು ಕಾದಾಡಿ ಚಿತ್ತಪಲ್ಲಟವಾಗಿ, ಆ ಪತ್ರದೊಳಗಿನ ಬೋನದ ಸವಿಯನು ಬಿಟ್ಟು ಚಿತ್ತಪಲ್ಲಟವಾಗಿ, ಆ ಪತ್ರದ ತುಳಿಯನು ಹರಿದುಕೊಂಡು ತಿಂದು ಹಲವು ಕಡೆಗೆ ಹರಿದಾಡುತ್ತಿದ್ದವು ಕಾಣಿರೋ. ಅದು ಎಂತೆಂದರೆ :ಇಂತು ಕಾಯದ ಕೀಲನರಿಯದೆ ಮಾಡಿದ ಕವಿಗಳು ಕಾಲನ ಬಾಧೆಗಳೆಂಬ ಮರಣಕ್ಕೆ ಒಳಗಾಗಿ ಹೋದಂತೆ ಕುರುಡ ಕವಿಗಳಂ ಕಂಡು ನಗುತ್ತಿದ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
``ಲಿಂಗ ಸೂತ್ರಾತ್ಮನೋರಪಿ, ವಿಶ್ವತಶ್ಚಕ್ಷುಂ, ಊಧ್ರ್ವರೇತಂ ವಿರೂಪಾಕ್ಷಃ, ಪುರುಷಂ ಕೃಷ್ಣಪಿಂಗಳಂ ಋತಗ್‍ಂ ಸತ್ಯಂ ಪರಬ್ರಹ್ಮಂ, ಲಿಂಗಂ ಮನಂ ತಮವ್ಯಕ್ತಮಚಿಂತ್ಯಂ, ಲಿಂಗಂ ಶಿವ ಪರಾತ್ಪರಮಧಿಷಾ*ನಾಂ ಸಮಸ್ತಸ್ಯಂ' ಎಂಬ ಶ್ರುತಿಯುಂಟಾಗಿ; ಜಗವೆಲ್ಲಾ ನೇತ್ರಂಗಳಾಗಿರ್ಪಾತನು ಶಿವನೆನಲಾ ಶ್ರುತಿ ಜಗವೆಲ್ಲಾ ನೇತ್ರಂಗಳಾಗಿದ್ದರೆ, ನೇತ್ರಂಗಳೊಳಗೆ ಉತ್ತಮ ಮಧ್ಯಮ ಕನಿಷ*ಂಗಳೇಕಾದವೆಂದಡೆ, ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶವಾಗಿ ತನ್ನ ತಾ ತೋರದಿದ್ದಂತೆ, ಜ್ಯೋತಿರ್ಲಿಂಗವನೆ ನೋಡಿದ ನೇತ್ರವು ಲಿಂಗನೇತ್ರವು. ಅದೀಗ ಉತ್ತಮವು. ಖಗಮೃಗ ಕ್ರಿಮಿಕೀಟ ಪತಂಗ ನೇತ್ರಂಗಳು ಉಭಯ ಕರ್ಮಂಗಳಿಲ್ಲವಾಗಿ ದೃಷ್ಟಿದೋಷವಿಲ್ಲ. ಅದು ಮಧ್ಯಮವೆನಿಸಿತ್ತು. ಅಪವಿತ್ರಜೀವಿಗಳಾದ ಭವಿಗಳ ನೇತ್ರವು ಉಭಯ ಕರ್ಮಕ್ಕನುಕೂಲವಾದ ಕಾರಣ, ಚರ್ಮಚಕ್ಷುವೆಂದು ತನ್ನ ತಾನರಿಯದ ಗಾಡಾಂಧಕಾರವೆಂದು, ವಿೂನನೇತ್ರವೆಂದು ವಿಷನೇತ್ರ ವಿಷಯನೇತ್ರವೆಂದು ಮನ್ಮಥನ ಕೈಗೆ ಸಿಲ್ಕಿದ ನೀಲೋತ್ಪಲಬಾಣವೆಂದು, ತಾಮಸಾಗ್ನಿಯೆಂದು, ನೇತ್ರೇಂದ್ರಿಯವೆಂದು, ಶಿವಲಾಂಛನಧಾರಿಗಳ ಕೆಡಿಸುವ ಮಹಾಪಾತಕದೃಷ್ಟಿಯೆಂದು, ವಿಷಯ ಗಾಳಿಯೆಂದು ಪೇಳಲ್ಪಟ್ಟಿತ್ತು. ಅವರಿಗಿಷ್ಟಲಿಂಗಧಾರಣವಿಲ್ಲದ ಕಾರಣ, ಕನಿಷ*ವೆಂದು ಪೇಳಲ್ಪಟ್ಟಿತ್ತು. ಇದು ಕಾರಣ, ಶಿವಭಕ್ತರವರ ನೋಡುವುದಿಲ್ಲ. ಅವರು ಸುಕರ್ಮ ದುಷ್ಕರ್ಮವೆಂಬ ಮಾಯಾ ರೂಪುಗಳಂ ಎದುರಿಟ್ಟು ನೋಡುತ್ತಿಹರಾಗಿ, ಶಿವಾರ್ಚನೆ ಶಿವಾರ್ಪಣವಂ ಮಾಡುವುದಿಲ್ಲ. ಅವರ ಬಹುಜನ್ಮಾಂತರದ ಮಹಾಪಾತಕಂಗಳು ಶಿವಭಕ್ತರು ತಮ್ಮ ಸೋಂಕವೆಂದು, ಮೇರುಗಿರಿಯಂ ಪಿಡಿದು ಘೋರಾಸ್ತ್ರ ಪ್ರಯೋಗದಿಂ ದಹಿಸಿ ಗುಹೇಶ್ವರಲಿಂಗವನೊಡಗೂಡುವರು ನೋಡಾ.
--------------
ಅಲ್ಲಮಪ್ರಭುದೇವರು
ಬೆಟ್ಟದ ನೆಲ್ಲಿಯಕಾಯ ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ ಹೊಟ್ಟೆಯ ಹೊರೆವವನಂತೆ, ಉತ್ತಮ ತೇಜಿಯ ಹೆಸರ ಕೇಳಿ ಕಡಲೆಯ ತಿಂಬ ಗಾವಲಿಗನಂತೆ, ಅತ್ತೆಯ ಹೆಸರ ಹೇಳಿ ಹೊಟ್ಟೆಯ ಹೊರೆವ ತೊತ್ತಿನಂತೆ, ಆದ್ಯರ ವಚನಂಗಳ ಅಲ್ಲಿಗಲ್ಲಿಗೆ ಉಸುರಿ ಅನ್ನ ಕೂಳಿಂಗೆ ಹರಿದಾಡುವ ಅಜ್ಞಾನಿಗಳ ಅನುಭಾವಿಗಳೆಂಬೆನೆ ? ಅಯ್ಯಾ, ವಿರಕ್ತರೆಂಬೆನೆ ? ವೇಷವ ಹೊತ್ತು ತಿರುಗುವ ಡೊಂಬನಂತೆ ಬಲ್ಲೆ ಬಲ್ಲೆನೆಂಬ ಅಹಂಕಾರವ ನುಡಿವ ಭವಿಗಳ ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ? ವಿಷಯವ ಮುಂದುಗೊಂಡು ತಿರುಗುವ ಅನುಭಾವಿಗಳನೆಂತು ವಿರಕ್ತರೆಂಬೆನಯ್ಯಾ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
-->