ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗ ಮನ ಪ್ರಾಣಂಗಳೆಂಬಲ್ಲಿ ಘನಲಿಂಗವಿಪ್ಪೆಡೆ ಯಾವುದು ? ಪಂಕಕ್ಕೆ ಜಲ ಒಳಗೋ, ಹೊರಗೋ ? ಅಂಗಕ್ಕೂ ಮನಸ್ಸಿಂಗೂ ಆತ್ಮಂಗೂ ಲಿಂಗವ ಹಿಂಗಿ ಅರಿವ ಠಾವಿನ್ನಾವುದು ? ಬೀಜದೊಳಗಾದ ವೃಕ್ಷ, ವೃಕ್ಷದೊಳಗಾದ ಬೀಜ ಈ ಉಭಯವ ಮೀರಿ ಬೆಳೆವ ಠಾವಿನ್ನಾವುದೊ ? ಮೊನೆಗೂಡಿಯೆ ಗ್ರಹಿಸುವ ಅಲಗಿನ ತೆರದಂತೆ ಅದು ಲಿಂಗಾಂಗಸಂಯೋಗಸಂಬಂಧ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಅಪ್ಪು ತುಂಬಿದ ಕುಂಭದಲ್ಲಿ ಕಿಚ್ಚು ಹಾಕಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಆ ಅಪ್ಪುವ ಸುಟ್ಟುದುಂಟೆ ಕಿಚ್ಚು ? ಆ ಕುಂಭದ ತಪ್ಪಲಿನಲ್ಲಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಕುಂಭದ ಲೆಪ್ಪದ ಮರೆಯಲ್ಲಿ ಅಪ್ಪುವ ಸುಡಬಲ್ಲುದೆ ? ಇದು ಕಾರಣ ಕ್ರೀಯ ಮರೆಯಲ್ಲಿರ್ದ ನಿಃಕ್ರೀ ಶಿಲೆಯ ಮರೆಯಲ್ಲಿರ್ದ ನೆಲೆ ವಸ್ತುವ ಚಿತ್ತದ ಒಲವರದಿಂದ ಅರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವಲ್ಲಿ.
--------------
ಪ್ರಸಾದಿ ಭೋಗಣ್ಣ
ಅಷ್ಟವಿಧಾರ್ಚನೆ ಷೋಡಶ ಉಪಚರಿಯ ಷಟ್ಕರ್ಮ ತ್ರಿವಿಧವರ್ಮ ಚತುರ್ವಿಧಫಲಭೋಗ ಭೋಜ್ಯ ಪೂಜಾ ವ್ಯವಧಾನ ಕರ್ಮಂಗಳಲ್ಲಿ ಸೋದಿಸಿ ವರ್ಮವನರಿಯಬೇಕು. ವರ್ಮವನರಿತಲ್ಲಿ ಸರ್ವಜೀವಕ್ಕೆ ಶಾಂತಿ, ಆಚಾರ್ಯನಂಗಕ್ಕೆ ನಿಹಿತ. ಸರ್ವಚೇತನಾದಿಗಳಲ್ಲಿ ಘಾತಕತನವಿಲ್ಲದೆ ಮನ ವಚನ ಕಾಯ ತ್ರಿಕರಣಶುದ್ಧವಾಗಿ ಈಶ್ವರಪೂಜೆಯ ಮಾಡುವಾತನ ಆಶ್ರಯದ ಶೇಷಪ್ರಸಾದವ ಕೊಂಬ ವೃಶ್ಚಿಕ ಮೂಷಕ ವಿಹಂಗ ಮಾರ್ಜಾಲ ಇಂತಿವರಂತೆ ಸದ್ಭಕ್ತನ ಬಾಗಿಲಲ್ಲಿ ಸಂತತ ಕಾಯುವಂತೆ ಮಾಡು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ಅವಿದ್ಯನಾಗಿ, ಅವಗುಣನಿರತನಾಗಿ ಅವಿವೇಕ ಅನಾಮಯನಾಗಿ ಅಬದ್ಧ ಅಪ್ರಮಾಣಂಗೆ ಗುರು ಲಿಂಗ ಜಂಗಮವೆಂಬ ಇದಿರೆಡೆಯಿಲ್ಲ, ಅದು ಪರಿಪೂರ್ಣಭಾವ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ನಿಜವೆ ತಾನಾದ ನಿತ್ಯ.
--------------
ಪ್ರಸಾದಿ ಭೋಗಣ್ಣ
ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ ನಿಜಸ್ವರೂಪ ನಿಃಕಲವಸ್ತು ಜಗಲೀಲಾಭಾವಿಯಾಗಿ ತ್ರಿಗುಣ್ಮಾತಕವಾದ ಭೇದಪೂರ್ವಕ ಮುಂತಾದ ಷಡ್ದರ್ದಶನದ ವಿವರಂಗಳಿಗೆ ಶೈವ ವೈಷ್ಣವ ಉಭಯಂಗಳಲ್ಲಿ ಶೈವವಾರು ವೈಷ್ಣವವಾರು. ಇಂತೀ ಉಭಯದಲ್ಲಿ ಅಡಗುವ ಗುಣ ವಿವರ: ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು. ಉಭಯನಾಮ ಕುಲಲಯವಹಲ್ಲಿ ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ. ಇದು ಅಕ್ಷಯ ಲಕ್ಷ ನಿರೀಕ್ಷಣೆಯಿಂದತ್ತಣ ಮಾತು. ಅಂದಿನಿಂದ ಇತ್ತಣ ವಿವರ: ನಾಲ್ಕು ಲಕ್ಷವು ಮೂವತ್ತೈರಡನೆಯ ಸಹಸ್ರವತ್ಸರಂಗಳಿಂದ ಈಚೆಯಾದ ಸರ್ವಪ್ರಮಾಣಿಗೆ ಏಕಾದಶಗುಣ. ಅವತಾರಕ್ಕೆ ಸಮಾಧಿ, ದಶ ಅವತಾರಕ್ಕೆ ದಹನ. ಇಂತೀ ಭೇದಂಗಳು ಆವರ್ಚಿಸಿ ನಡೆದು ಕಲಿಯುಗದ ಕಡೆಯಲ್ಲಿ ಅನಾದಿಪರಮೇಶ್ವರನ ಅಪರಾವತಾರ ಭೇದರೂಪು ಬಸವಣ್ಣನಾಗಿ ಅಭೇದ್ಯರೂಪು ಚೆನ್ನಬಸವಣ್ಣನಾಗಿ ವೀರಶೈವಸಿದ್ಧಾಂತವೆಂಬುದು ಲಕ್ಷಿಸಿ ಷಡ್ದರ್ಶನಕ್ಕೆ ಸ್ಥಾಪನಾಚಾರ್ಯನಾಗಿ ವಿಶ್ವಕ್ಕೆ ಚಕ್ಷುವಾಗಿ, ಆಚಾರಕ್ಕೆ ಅಂಗವಾಗಿ ಶಿಕ್ಷೆ ದೀಕ್ಷೆ ಮೋಕ್ಷಕ್ಕೆ ಮುಮುಕ್ಷುವಾಗಿ ಚತುರ್ಗುಣ ಆಚಾರಕ್ಕೆ ಅರಸಾಗಿ ಸರ್ವಗುಣಸಂಬಂಧಿ ನೀನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ, ನಿನ್ನ ಲೀಲಾಭಾವ.
--------------
ಪ್ರಸಾದಿ ಭೋಗಣ್ಣ
ಅರ್ತಿಗೆ ತಿರಿಗಿ ಮೊತ್ತದ ಮಾತನಾಡಿ ಕತ್ತೆ ಹೊರೆಯ ಹೊತ್ತು ಹೆಂಗತ್ತೆಯ ಕಂಡು ಬಾಯಬಿಟ್ಟು ಒರಲುವಂತೆ ಒರಲುತ್ತಿರ್ಪವರ ಕಂಡು ತ್ರಿವಿಧದ ಗೊತ್ತಿನ ಮಾರಿಯ ತುತ್ತೆಂದೆ ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಅಯಃಕಾಂತದ ಶಿಲೆ ಲೋಹಕ್ಕೆ ಬಾಯ ಕಂಡಲ್ಲಿ ವೇದ ಸಿದ್ಧಾಂತಿ. ಲೋಹ ಸುವರ್ಣವ ಏಗೆಯ್ದುಯೆತ್ತುವಲ್ಲಿ ಆ ಭೇದವ ಬಲ್ಲಡೆ ಶಾಸ್ತ್ರಸಂಪದನು. ಮರಾಳ ಕ್ಷೀರವನೀಂಟಿ ಜಲವನುಳುಹಿದ ಭೇದವ ಬಲ್ಲಡೆ ಪುರಾಣಸಂಬಂಧಿ. ಗೋವು ಅಜ ಮುಂತಾದವು ತೃಣ ಪರ್ಣ ಗ್ರಾಸವ ಕೊಂಡು ಪುನರಪಿಯಾಗಿ ಸವಿದಿಳಿವ ಭೇದವ ಬಲ್ಲಡೆ ಆಗಮಯುಕ್ತ. ಇಂತೀ ಭೇದಂಗಳಲ್ಲಿ ಭೇದಿಸಿ, ಅಭೇದ್ಯವಪ್ಪ ಲಿಂಗವ ಸಾಧಿಸಿ ಕ್ರೀಗೆ ಮಾರ್ಗ, ಅರಿವಿಂಗೆ ಆಚರಣೆ ಉತ್ತರ ಪೂರ್ವವ ನಿಶ್ಚೈಸಿ, ನಿಜನಿಶ್ಚಯದಲ್ಲಿ ನಿಂದ ಶರಣಂಗೆ ಮುಕ್ತ ನಿರ್ಮುಕ್ತನೆಂಬುದಿಲ್ಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ತಾನಾಗಿ.
--------------
ಪ್ರಸಾದಿ ಭೋಗಣ್ಣ