ಅಥವಾ

ಒಟ್ಟು 83 ಕಡೆಗಳಲ್ಲಿ , 32 ವಚನಕಾರರು , 69 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಬ್ರಹ್ಮಾಂಡಕಪಾಲದೊಳಗಣ ಸೃಷ್ಟಿಯ ವಿಸ್ತೀರ್ಣವದೆಂತೆಂದಡೆ : ಆ ಭುವನಂಗಳು ಇಹ ಕ್ರಮವೆಂತೆಂದಡೆ : ಬ್ರಹ್ಮಾಂಡಕಪಾಲ ಸಹಸ್ರಕೋಟಿ ಯೋಜನ ಪ್ರಮಾಣು. ಅದರೊಳಗಾಗಿ ಅತಳಲೋಕ ಇಪ್ಪತ್ತೊಂದುಕೋಟಿ ಯೋಜನದಲ್ಲಿ ಶಿವನ ಆಜ್ಞಾಶಕ್ತಿಯಿಂದ ಆಧಾರಶಕ್ತಿ ಇಹಳು. ಆ ಆಧಾರಶಕ್ತಿಯ ಉದ್ದ ಗಾತ್ರದೊಳಗಾಗಿ ಐದು ಸಾವಿರಕೋಟಿ ಯೋಜನದಲ್ಲಿ ವಿತಳಲೋಕವಿಹುದು. ಆ ವಿತಳಲೋಕ ಆರುಸಾವಿರಕೋಟಿ ಯೋಜನಪ್ರಮಾಣು. ಆ ವಿತಳಲೋಕದ ಮೇಲೆ ಐದುಸಾವಿರಕೋಟಿ ಯೋಜನದಲ್ಲಿ ಸುತಳಲೋಕವಿಹುದು. ಆ ಸುತಳಲೋಕ ಅಗ್ನಿ ಜ್ವಾಲೆಯಾಗಿಹುದು. ಆ ಸುತಳಲೋಕದೊಳು ಕಾಲಾಗ್ನಿ ರುದ್ರರಿಹರು. ಆ ಸುತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ರಸಾತಳಲೋಕವಿಹುದು. ಆ ರಸಾತಳಲೋಕ ಬಯಲಾಗಿಹುದು. ಆ ರಸಾತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ತಳಾತಳಲೋಕವಿಹುದು. ಆ ತಳಾತಳಲೋಕ ಮಹಾಗ್ನಿ ಜ್ವಾಲೆಯಾಗಿಹುದು. ಆ ತಳಾತಳಲೋಕದ ಮೇಲೆ ಮಹಾತಳಲೋಕವಿಹುದು. ಆ ಮಹಾತಳಲೋಕದ ಮೇಲೆ ಪಾತಾಳಲೋಕವಿಹುದು. ಆ ಪಾತಾಳಲೋಕ ಎಂಬತ್ತು ಸಾವಿರ ಕೋಟಿ ಯೋಜನ ಭೂಮಿಯಮೇಲೆ ಜಲಮಯವಾಗಿಹುದು. ಆ ಜಲಮಯವಾಗಿಹ ಪಾತಾಳಲೋಕವು ಆಧಾರಶಕ್ತಿಯ ಆಜ್ಞೆಯಿಂದ ಹದಿನಾರು ದಿಕ್ಕುಗಳಲ್ಲಿಯೂ ಹದಿನಾರುಮಹಾಭೂತಂಗಳು ಸುತ್ತಿಹವು. ಹದಿನಾರುಭೂತಗಣಂಗಳ ನಡುವೆ ಕೂರ್ಮಾಂಡನೆಂಬ ಮಹಾಕೂರ್ಮನ ಅಗಲವದೆಂತೆಂದಡೆ : ಐದುಸಾವಿರಕೋಟಿ ವಿಸ್ತೀರ್ಣದಗಲ ನೋಡಾ. ಆ ಕೂರ್ಮಾಂಡನೆಂಬ ಮಹಾಕೂರ್ಮನ ಉದ್ದ ಹದಿನೆಂಟುಸಾವಿರಕೋಟಿಯೋಜನ ಪರಿಪ್ರಮಾಣುದ್ದದ ಬೆನ್ನ ಮೇಲೆ ಶತಕೋಟಿಯೋಜನ ಪರಿಪ್ರಮಾಣುದ್ದದ ಭೂಮಿಯ ಮೇಲೆ ಐನೂರು ಶಿರಸ್ಸನುಳ್ಳ ಶೇಷನು, ನಾಲ್ವತ್ತುಸಾವಿರ ಶೇಷನು ವಳಯಾಕೃತವಾಗಿ ಸುತ್ತಿರಲು, ಆ ನಾಲ್ವತ್ತುಸಾವಿರ ಶೇಷನ ಒಳಯಾಕೃತದಲ್ಲಿ, ಮಧ್ಯದಲ್ಲಿ ಶೇಷಾಹಿಯೆಂಬ ಮಹಾನಾಗ ಇಪ್ಪುದು. ಆ ಶೇಷಾಹಿಯೆಂಬ ಮಹಾನಾಗವು ಎಂಟುಸಾವಿರಕೋಟಿ ಯೋಜನಪ್ರಮಾಣು ನೀಳವು. ಹತ್ತುಸಾವಿರಕೋಟಿ ಸುತ್ತು ವಿಸ್ತೀರ್ಣವು. ಐದುಸಾವಿರ ಕೋಟಿ ಅಗಲದ ಹೆಡೆಯು. ಸ್ವರ್ಗ ಜ್ಯೋತಿಪ್ರಕಾಶದ ದೇಹವನುಳ್ಳುದಾಗಿ, ಸಹಸ್ರ ಶಿರ, ದ್ವಿಸಹಸ್ರಾಕ್ಷವು. ಆ ಸಹಸ್ರ ಶಿರದಲ್ಲಿ ಮಾಣಿಕ್ಯದ ಬಟ್ಟುಗಳ ಧರಿಸಿಕೊಂಡು ಮಹಾಗ್ನಿಜ್ವಾಲೆಯನುಳ್ಳ ಮಹಾಶೇಷನಿಹನು. ಐನೂರು ಶಿರಸ್ಸನುಳ್ಳ ಶೇಷ ನೂರುನಾಲ್ವತ್ತುಸಾವಿರ ಶೇಷನ ಸುತ್ತುವಳಯಾಕೃತವಾಗಿ ಅಷ್ಟದಿಗ್ಗಜಂಗಳಿಹವು. ಆ ಅಷ್ಟದಿಗ್ಗಜಂಗಳ ಮೇಲೆ ವಿಸ್ತೀರ್ಣ ಒಂದೊಂದು ಗಜಂಗಳು ನವಕೋಟಿಯೋಜನಪ್ರಮಾಣದುದ್ದವು, ಸಾವಿರಕೋಟಿಯೋಜನಪ್ರಮಾಣದಗಲವು, ಶತಕೋಟಿಸಾವಿರಯೋಜನಪ್ರಮಾಣದ ನೀಳವನುಳ್ಳುದಾಗಿ ಅಷ್ಟದಿಕ್‍ಮಹಾಗಜಂಗಳಿಹವು. ಆ ಅಷ್ಟದಿಕ್‍ಮಹಾಗಜಂಗಳು ಆಧಾರವಾಗಿ ಭೂಲೋಕವಿಹುದು. ಆ ಭೂಲೋಕ ಮೊದಲಾಗಿ ಕೆಳಗಿನಂಡಬ್ರಹ್ಮಾಂಡಕಪಾಲ ಕಡೆಯಾಗಿ ಅರುವತ್ತುಸಾವಿರಕೋಟಿಯೋಜನ ಪರಿಪ್ರಮಾಣು. ಆ ಭುವರ್ಲೋಕವು ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಕಬ್ಬುಣವಾಗಿಹುದು. ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಮಣ್ಣಾಗಿಹುದು. ಇದು ಮಧ್ಯಭೂಮಿ. ಈ ಮಧ್ಯಭೂಮಿ ಅಜಲಮಯವಾಗಿ ಉತ್ತರ-ದಕ್ಷಿಣ ಶತಸಹಸ್ರಕೋಟಿಯೋಜನಪರಿಪ್ರಮಾಣು. ಸುತ್ತ ಅಗಲ ಮುನ್ನೂರರುವತ್ತುಕೋಟಿಯೋಜನಪರಿಪ್ರಮಾಣು. ದಕ್ಷಿಣ-ಉತ್ತರ ಸಮುದ್ರ ತೊಡಗಿ ಉತ್ತರ ಹಿಮವತ್ಪರ್ವತ. ಇದಕ್ಕೆ ಹೆಸರು ಭರತವರುಷ. ಈ ಹಿಮವತ್ಪರ್ವತವು ಉತ್ತರ ದಕ್ಷಿಣ ಇಪ್ಪತ್ತುಸಾವಿರ ಯೋಜನಪ್ರಮಾಣು. ಕೆಳಗೆ ಮೇಲೆ ಇಪ್ಪತ್ತುಸಾವಿರಯೋಜನಪ್ರಮಾಣು. ಮೇಲುದ್ದವು ಎಂಬತ್ತೈದುಸಾವಿರಯೋಜನಪ್ರಮಾಣು. ಉತ್ತರ ಸಮುದ್ರಕ್ಕೆ ದಕ್ಷಿಣ ಉತ್ತರ ಸಾವಿರಕೋಟಿ ಯೋಜನದಲ್ಲಿ ವಿಂಧ್ಯಪರ್ವತವಿಹುದು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ಮೂರುಸಾವಿರ, ದಕ್ಷಿಣ ಉತ್ತರ ಮೂವತ್ತುಸಾವಿರಯೋಜನಪ್ರಮಾಣು. ಕೆಳಗು ಮೇಲು ಮೂವತ್ತುಸಾವಿರಯೋಜನಪ್ರಮಾಣು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ತುನೂರುಸಾವಿರಯೋಜನ ಪ್ರಮಾಣು. ಪಶ್ಚಿಮದೆಸೆಯ ಸಮುದ್ರದಲ್ಲಿಹ ಅಸ್ತಮಾನಪರ್ವತ. ಆ ಪರ್ವತ ದಕ್ಷಿಣ-ಉತ್ತರ ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಕೆಳಗು ಮೇಲು ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಮೇಲುದ್ದವು ತೊಂಬತ್ತುಸಾವಿರ ಯೋಜನಪ್ರಮಾಣು ಭೂಮಿಗೆ ನಡುವಾಗಿ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ಉತ್ತರ ದಕ್ಷಿಣ ಹದಿನಾರುಸಾವಿರ ಯೋಜನಪ್ರಮಾಣು. ಆ ಮೇರುಪರ್ವತದ ಮೇಲುದ್ದವು ಸಾವಿರಕೋಟಿಯ ಮೇಲೆ ನೂರುಸಾವಿರದ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಮಹಾಮೇರುವಿನ ಪೂರ್ವದಿಕ್ಕಿನಲ್ಲಿ ಮಂದರಪರ್ವತವಿಹುದು. ಅಲ್ಲಿಹ ವೃಕ್ಷ ಕದಂಬವೃಕ್ಷ. ಆ ಮಹಾಮೇರುವಿನ ದಕ್ಷಿಣದಿಕ್ಕಿನಲ್ಲಿ ಗಂಧಮಾದನಪರ್ವತವಿಹುದು. ಅಲ್ಲಿಹ ವೃಕ್ಷ ಜಂಬೂವೃಕ್ಷ. ಆ ಮಹಾಮೇರುವಿನ ನೈಋತ್ಯದಿಕ್ಕಿನಲ್ಲಿ ನೀಲಗಿರಿಪರ್ವತವಿಹುದು. ಅಲ್ಲಿಹ ವೃಕ್ಷ ಭೂದಳವೃಕ್ಷ. ಆ ಮಹಾಮೇರುವಿನ ಪಶ್ಚಿಮದಿಕ್ಕಿನಲ್ಲಿ ಕಾಶೀಪರ್ವತವಿಹುದು. ಅಲ್ಲಿಹ ವೃಕ್ಷ ಬಿಲ್ವದ ವೃಕ್ಷ. ಆ ಮಹಾಮೇರುವಿನ ವಾಯುವ್ಯದಿಕ್ಕಿನಲ್ಲಿ ನೀಲಪರ್ವತವಿಹುದು. ಅಲ್ಲಿಹ ವೃಕ್ಷ ಬ್ರಹ್ಮವೃಕ್ಷ. ಆ ಮಹಾಮೇರುವಿನ ಉತ್ತರದಿಕ್ಕಿನಲ್ಲಿ ಮಧುರಾದ್ರಿಪರ್ವತವಿಹುದು. ಅಲ್ಲಿಹ ವೃಕ್ಷ ವಟವೃಕ್ಷ. ಆ ಮಹಾಮೇರುವಿನ ಈಶಾನ್ಯದಿಕ್ಕಿನಲ್ಲಿ ಕಪಿಲ ಮಹಾಪರ್ವತವಿಹುದು. ಅಲ್ಲಿಹ ವೃಕ್ಷ ಶಾಕಾಫಲವೃಕ್ಷ. ಸಪ್ತಕುಲಪರ್ವತಂಗಳು ಒಂದೊಂದು ಬಗೆ ಹತ್ತುಸಾವಿರ ಯೋಜನಪ್ರಮಾಣು. ಆ ಸಪ್ತಕುಲಪರ್ವತಂಗಳೊಂದೊಂದಿಗೆ ಐದುಸಾವಿರ ಯೋಜನಪ್ರಮಾಣು. ಈ ಸಪ್ತಕುಲಪರ್ವತಂಗಳ ನಡುವೆ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ತುದಿಯಲ್ಲಿ ಪಂಚಸಹಸ್ರಯೋಜನದಗಲ ಚುತುಃಚಕ್ರಾಕಾರವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ನವರತ್ನಖಚಿತವಾಗಿ ಪ್ರಮಥಗಣಂಗಳು ನಂದಿ, ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದರಿಂ ಸುಖಂಗಳಲಿಪ್ಪಂತಾಗಿ ಶಿವಪುರವಿಹುದು. ಆ ಶಿವಪುರದೊಳು ಸಿಂಹಾಸನಾರೂಢನಾಗಿ ಮಹಾರುದ್ರಮೂರ್ತಿ ಇಹನು. ಆ ಮಹಾರುದ್ರಮೂರ್ತಿಯ ಚಂದ್ರಾದಿತ್ಯರು, ನಕ್ಷತ್ರ ನವಗ್ರಹಂಗಳು ಮೊದಲಾಗಿ ಎಲ್ಲಾ ದೇವರ್ಕಳು ಪ್ರದಕ್ಷಣಬಹರು. ಯಕ್ಷ ಕಿನ್ನರ ಗಂಧರ್ವ ಸಿದ್ಧ ವಿದ್ಯಾಧರ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳೆಲ್ಲರು ಒಡ್ಡೋಲಗಂಗೊಟ್ಟಿರಲು ಎಲ್ಲ ಲೋಕಕ್ಕೂ ಸಾಕ್ಷೀಭೂತನಾಗಿ ಆ ಮಹಾರುದ್ರಮೂರ್ತಿ ಇಹನು. ಆ ಮಹಾಮೇರುವಿನ ದಕ್ಷಿಣದ ಕೆಳಗಣ ಪಾಶ್ರ್ವದಲ್ಲಿ ಚಿಕ್ಕದೊಂದು ಕೋಡು. ಆ ಕೋಡಿನಲ್ಲಿ ಕಲ್ಪವೃಕ್ಷವಿಹುದು. ಆ ದಕ್ಷಿಣ ಕೋಡಿನಲ್ಲಿ ಜಂಬೂವೃಕ್ಷದ ಹಣ್ಣಿನ ರಸ ಸೋರಿ ಜಾಂಬೋಧಿಯೆಂಬ ಮಹಾನದಿ ಹರಿಯುತ್ತಿಹುದು. ಆ ನೀರ ಸೇವಿಸಿದವರು ಸ್ವರ್ಣವರ್ಣವಹರು. ಆ ನೀರು ಹರಿದ ಠಾವೆಲ್ಲ ಸ್ವರ್ಣಬೆಳೆಭೂಮಿ. ಆ ಭೂಮಿಗೆ ಉತ್ತರ ಪೂರ್ವವಾಗಿ ಶ್ರೀ ಕೈಲಾಸಪರ್ವತವಿಹುದು. ಆ ಕೈಲಾಸಪರ್ವತ ಏಳು ನೆಲೆಯಾಗಿ ರತ್ನಮಯವಾಗಿ ಅನಂತ ಕೋಡುಗಳುಂಟಾಗಿಹುದು. ಆ ಕೈಲಾಸಪರ್ವತವು ಉತ್ತರ ದಕ್ಷಿಣ ಹದಿನಾರುಸಾವಿರಕೋಟಿಯೋಜನ ಪರಿಪ್ರಮಾಣು. ಆ ಕೈಲಾಸಪರ್ವತದ ಮೇಲುದ್ದವು ಸಾವಿರಕೋಟಿ ನೂರುಸಾವಿರದ ಮೇಲೆ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಕೈಲಾಸಪರ್ವತದ ತುದಿಯಲ್ಲಿ ಶಿವಪುರದ ವಿಸ್ತೀರ್ಣ ಪಂಚಸಹಸ್ರ ಯೋಜನದಗಲ. ಚತುಷ್ಟಾಕಾರವಾಗಿ ನವರತ್ನಖಚಿತವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ಪ್ರಮಥಗಣಂಗಳು, ನಂದಿ ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖಂಗಳಲ್ಲಿಪ್ಪಂತಾಗಿ ಮಹಾಶಿವಪುರವಿಹುದು. ಆ ಶಿವಪುರದೊಳು ಶ್ರೀಕಂಠನೆಂಬ ಸದಾಶಿವಮೂರ್ತಿ ಇಹನು. ಆ ಶಿವಪುರದ ಬಾಗಿಲ ಕಾವಲಾಗಿ ನಂದಿ-ಮಹಾಕಾಳರೆಂಬ ಮಹಾಗಣಂಗಳಿಹರು. ನಂದಿ-ಮಹಾನಂದಿ-ಅತಿಮಹಾನಂದಿಕೇಶ್ವರರು ವಿಘ್ನೇಶ್ವರ ಕುಮಾರಸ್ವಾಮಿ ಮಹಾಭೈರವೇಶ್ವರ ಮಹಾಕಾಳಿ ಮೊದಲಾದ ಅಸಂಖ್ಯಾತ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಶುಗಳು, ನವಗ್ರಹಂಗಳು, ಬ್ರಹ್ಮ , ವಿಷ್ಣು , ರುದ್ರಗಣಂಗಳು, ಮೂವತ್ಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು, ಅಷ್ಟದಶ ಗಣಂಗಳು, ಯೋಗೀಶ್ವರರು, ಯಕ್ಷ ಕಿನ್ನರ ಗರುಡ ಗಂಧರ್ವ ಸಿದ್ಧ ವಿದ್ಯಾಧರರು, ರಾಕ್ಷಸಗಣ ನಾಗಗಣ ಭೂತಗಣಂಗಳು ಮೊದಲಾದ ಎಲ್ಲಾ ಗಣಂಗಳ ಸನ್ನಿಧಿಯಲ್ಲಿ ಒಡ್ಡೋಲಗಂಗೊಟ್ಟಿರಲು, ಚತುರ್ವೇದಂಗಳು ಮೊದಲಾಗಿ ಎಲ್ಲಾ ವೇದಂಗಳು `ವಿಶ್ವಾಧಿಕೋ ರುದ್ರೋ ಮಹಾಋಷಿ' ಎನಲು 'ಋತಂ ಸತ್ಯಂ ಪರಬ್ರಹ್ಮ ' ಎನಲು `ಅತ್ಯತಿಷ್ಟರ್ದಶಾಂಗುಲಂ' ಎನಲು `ತತ್ಪರ ಬ್ರಹ್ಮ ವಿಜಾತಿ', ಎನಲು `ಓಮಿತೈಕಾಕ್ಷರ ಬ್ರಹ್ಮ' ಎಂದು ಬೊಬ್ಬಿಟ್ಟು ಸಾರುತ್ತಿರಲು ತುಂಬುರ ನಾರದರು ಗೀತಮಂ ಪಾಡುತಿರಲು ನಂದಿ ಮದ್ದಳೆವಾದ್ಯಮಂ ಬಾರಿಸುತ್ತಿರಲು, ವಿಷ್ಣು ಆವುಜವ ನುಡಿಸಲು, ಬ್ರಹ್ಮ ತಾಳವನೊತ್ತಲು, ಪಂಚಮಹಾವಾದ್ಯಂಗಳು ಮೊಳಗುತ್ತಿರಲು ಭೃಂಗೀಶ್ವರ ಮಹಾನಾಟ್ಯವನಾಡಲು ಉಮಾಮಹೇಶ್ವರಿಯೊಡನೆ ಪರಮೇಶ್ವರನು ಸಿಂಹಾಸನಾರೂಢನಾಗಿ ಕುಳ್ಳಿರ್ದು ಭೃಂಗೀಶ್ವರನ ಮಹಾನಾಟ್ಯವ ತಮ್ಮ ಲೀಲಾವಿನೋದದಲ್ಲಿ ನೋಡುತ್ತ ಶ್ರೀ ಕೈಲಾಸಪರ್ವತದಲ್ಲಿ ಇರುತ್ತಿರ್ದನು. ಈ ಭೂಮಿಗೆ ದಕ್ಷಿಣ ಪೂರ್ವದಲ್ಲಿ ಆದಿಯ ಮಹಾದ್ರಿಪರ್ವತವಿಹುದು. ಆ ಆದಿಯ ಮಹಾದ್ರಿಪರ್ವತದಲ್ಲಿ ಅಗಸ್ತ್ಯಮಹಾಮುನಿ ಇಹನು. ಈ ಭೂಮಿ ಒಂಬತ್ತು ತುಂಡಾಗಿಹುದು. ಒಂಬತ್ತು ತುಂಡಾದ ಅಂತರಾಳವೆಲ್ಲವು ಜಲಮಯವಾಗಿ ಹೊರಗೆ ಬಿರಿದುದ್ದವಾಗಿ ಬೆಳೆಯಲು ನವಖಂಡಪೃಥ್ವಿಯೆಂದು ಹೆಸರಾಯಿತ್ತು. ಈ ಭೂಮಿ ಜಂಬೂದ್ವೀಪ. ಈ ಭೂಮಿಗೆ ಜನನ ಲವಣಸಮುದ್ರ. ಆ ಜಂಬೂದ್ವೀಪ ಲವಣಸಮುದ್ರದ ವಿಸ್ತೀರ್ಣ: ಆ ಜಂಬೂದ್ವೀಪದ ಅಗಲ ಶತಕೋಟಿಯೋಜನಪ್ರಮಾಣು. ಆ ಜಂಬೂದ್ವೀಪ ವಳಯಾಕೃತವಾಗಿ ಸುತ್ತಿಕೊಂಡು ಶತಕೋಟಿಯೋಜನಪರಿಪ್ರಮಾಣದಗಲವಾಗಿ ಲವಣಸಮುದ್ರವಿಹುದು. ಅದರಿಂದಾಚೆ ಪ್ಲಕ್ಷದ್ವೀಪ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಇಕ್ಷುಸಮುದ್ರ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಕುಶದ್ವೀಪ. ಅದರಗಲ ನಾನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಸುರೆಯ ಸಮುದ್ರ. ಅದರಗಲ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಶಾಕದ್ವೀಪ. ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಘೃತಸಮುದ್ರ, ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಸಾಲ್ಮಲೀದ್ವೀಪ. ಅದರಗಲ ಸಾವಿರದಾರು ನೂರು ಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ಷೀರಸಮುದ್ರ. ಅದರಗಲ ಸಾವಿರದಾರುನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಪುಸ್ಕರದ್ವೀಪ. ಅದರಗಲ ಮೂರುಸಾವಿರಕೋಟಿ ಯೋಜನ ಪ್ರಮಾಣು. ಅದರಿಂದಾಚೆ ದಧಿಸಮುದ್ರ. ಅದರಗಲ ಮೂರುಸಾವಿರದಿನ್ನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ರೌಂಚದ್ವೀಪ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವಾದೋದಕಸಮುದ್ರ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವರ್ಣಬೆಳೆಯಭೂಮಿ. ಅದರಗಲ ಹನ್ನೆರಡುಸಾವಿರಕೋಟಿಯೋಜನ ಪ್ರಮಾಣು. ಅದರಿಂದಾಚೆಯಲಿ ಚಕ್ರವಾಳಗಿರಿ. ಅದರಗಲ ಇಪ್ಪತ್ತೈದುಸಾವಿರಕೋಟಿ ಯೋಜನ ಪ್ರಮಾಣು. ಈ ಸಪ್ತಸಮುದ್ರಂಗಳು ಸಪ್ತದ್ವೀಪಂಗಳು ಹೊರಗೆ ಬಿರಿದು ಬೆಳೆಯಲು ಸಪ್ತಸಮುದ್ರಂಗಳು, ದೆಸೆಗಳು ಕೂಡಿ ಮೇಳೈಸಲು ನಾಲ್ವತ್ರೊಂಬತ್ತುಸಾವಿರಕೋಟಿ ಯೋಜನ ಪ್ರಮಾಣಿನ ಮೇಲೆ ತೊಂಬತ್ತು ಸಾವಿರದೈವತ್ತುಕೋಟಿಯ ಮಧ್ಯಭೂಮಿ ಯೋಜನ ಪ್ರಮಾಣುಮಂ ಕೂಡಿ ನೂರುಸಾವಿರಕೋಟಿ ಯೋಜನ ಪ್ರಮಾಣು. ಈ ಭೂಮಿಗೂ ಚಕ್ರವಾಳಗಿರಿಗೂ ಹೊರಗೆ ಕಾವಲಾಗಿ ಅಷ್ಟದಿಕ್ಪಾಲರಿಹರು. ಮೇರು ಮಂದರ ಕೈಲಾಸ ಗಂಧಮಾದನ ವಿಂಧ್ಯ ಹಿಮಾಲಯ ನಿಷಧ ಚಿತ್ರಕೂಟವೆಂಬ ಅಷ್ಟಕುಲಪರ್ವತಂಗಳ ತಪ್ಪಲಲ್ಲಿ ಅನಂತವಾಸುಗಿ ಕಶ್ಚ ಕರ್ಕಾಟಕ ಪರ ಮಹಾಪರ ಶಂಕವಾಲಿ ಕುಳಿಕನೆಂಬ ಅಷ್ಟಮಹಾಗಣಂಗಳಿಹವು. ಈಶಾನಮುಖದಲ್ಲಿ ವಡಬಮುಖಾಗ್ನಿ ಇಹುದು. ಉತ್ತರದೆಸೆಯಲ್ಲಿ ಕ್ಷೀರಸಮುದ್ರದೊಳು ವಿಷ್ಣು ಅನಂತಶಯನದಲ್ಲಿ ತಮೋಗುಣಯುಕ್ತನಾಗಿ ನಿದ್ರಾಲಂಬಿಯಾಗಿಹನು. ಈ ಭೂಮಿಗೆ ದಕ್ಷಿಣದೆಸೆಯಾಗಿ ಉತ್ತರ ಪರಿಯಂತರ ಬ್ರಹ್ಮ ಮಹೇಶ್ವರಿ ಕೌಮಾರಿ ವೈಷ್ಣವಿ ವರಾಹಿ ಮಾಹೇಂದ್ರಿ ಚಾಮುಂಡಿಯೆಂಬ ಸಪ್ತಮಾತೃಕೆಯರು ಇಹರು. ಮೇಲುಗಡೆಯಲ್ಲಿ ವಿನಾಯಕ, ಕೆಳಗಡೆಯಲ್ಲಿ ಭೈರವನಿಹನು. ಈ ಭೂಮಿಗೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮದಲ್ಲಿ ಭೈರವ ಮಹಾಭೈರವ ಕಾಲಭೈರವ ದುರ್ಗಿ ಮಹಾದುರ್ಗಿ ಮೊದಲಾದ ಅನಂತ ಭೂತಗಣಂಗಳು ಕಾವಲಾಗಿಹರು. ಈ ಭೂಮಿಯಿಂದ ಮೇಲೆ ಯೋಜನ ಪ್ರಮಾಣದಲ್ಲಿ ಸಪ್ತಮೇಘಂಗಳು, ವಾಯುವಿನ ದೆಸೆಯಿಂದ ಚಲಿಸುತ್ತಿಹುದು. ಅವಾವೆಂದಡೆ : ನೆಲವೃಷ್ಟಿ ನೀರವೃಷ್ಟಿ ಸ್ವರ್ಣವೃಷ್ಟಿ ಪುಷ್ಪವೃಷ್ಟಿ ಕಲ್ಪವೃಷ್ಟಿ ಮಣ್ಣವೃಷ್ಟಿ ಮೌಕ್ತಿಕವೃಷ್ಟಿ- ಎಂಬ ಸಪ್ತವೃಷ್ಟಿಗಳು ವೃಷ್ಟಿಸುತ್ತಿರಲು ಆ ಸಪ್ತಮೇಘಮಂಡಲಂಗಳ ಮೇಲೆ ಶತಕೋಟಿಯೋಜನದಲ್ಲಿ ಭುವರ್ಲೋಕವಿಹುದು. ಆ ಭುವರ್ಲೋಕದಲ್ಲಿ ಆದಿತ್ಯ ಚರಿಸುತ್ತಿಹನು. ಆ ಆದಿತ್ಯನ ರಥದ ಪ್ರಮಾಣು ತೊಂಬತ್ತುಸಾವಿರಯೋಜನಪ್ರಮಾಣದುದ್ದವು, ನಾಲ್ವತ್ತೈದುಸಾವಿರ ಯೋಜನದಗಲವು. ಆ ರಥಕ್ಕೆ ಒಂದೇ ಗಾಲಿ, ಒಂದೆ ನೊಗದಲ್ಲಿ ಕಟ್ಟುವ ಪಚ್ಚವರ್ಣದ ವಾಜಿಗಳೇಳು. ಉರದ್ವಯವಿಲ್ಲದ ಅರುಣ ರಥದ ಸಾರಥಿ. ಆ ಅರುಣನ ಕಂಡುದೆ ಉದಯ, ಕಾಣದುದೇ ಅಸ್ತಮಯ. ಆದಿತ್ಯಪಥಕ್ಕೆ ಶತಕೋಟಿ ಯೋಜನದಲ್ಲಿ ಚಂದ್ರಮನ ಪಥವು ಆ ಚಂದ್ರಮನ ಪಥಕ್ಕೆ ಶತಕೋಟಿ ಯೋಜನದಲ್ಲಿ ಅಂಗಾರಕನ ಪಥವು. ಅಂಗಾರಕನ ಪಥಕ್ಕೆ ಶತಕೋಟಿಯೋಜನದಲ್ಲಿ ಬುಧನ ಪಥವು. ಆ ಬುಧನ ಪಥಕ್ಕೆ ಶತಕೋಟಿಯೋಜನದಲ್ಲಿ ಬೃಹಸ್ಪತಿಯ ಪಥವು. ಆ ಬೃಹಸ್ಪತಿಯ ಪಥಕ್ಕೆ ಶತಕೋಟಿಯೋಜನದಲ್ಲಿ ಶುಕ್ರನ ಪಥವು. ಆ ಶುಕ್ರನ ಪಥಕ್ಕೆ ಶತಕೋಟಿ ಯೋಜನದಲ್ಲಿ ಶನೀಶ್ವರನ ಪಥವು. ಆ ಶನೀಶ್ವರನ ಪಥಕ್ಕೆ ಶತಕೋಟಿ ಯೋಜನದಲ್ಲಿ ರಾಹುಕೇತುಗಳ ಪಥವು. ಆ ರಾಹುಕೇತುಗಳ ಪಥಕ್ಕೆ ಶತಕೋಟಿಯೋಜನದಲ್ಲಿ ನಕ್ಷತ್ರಾದಿಗಳ ಪಥವು. ಆ ನಕ್ಷತ್ರಾದಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸಪ್ತಮಹಾಋಷಿಗಳ ಪಥವು. ಆ ಸಪ್ತಮಹಾಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಅಶ್ವಿನೀದೇವತೆಗಳ ಪಥವು. ಆ ಅಶ್ವಿನೀದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ವಿಶ್ವದೇವತೆಗಳ ಪಥವು. ಆ ವಿಶ್ವದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಬಾಲಸೂರ್ಯರ ಪಥವು. ಆ ಬಾಲಸೂರ್ಯರ ಪಥಕ್ಕೆ ಶತಕೋಟಿಯೋಜನದಲ್ಲಿ ಸೇನ ಮಹಾಸೇನ ಋಷಿಗಳ ಪಥವು. ಆ ಸೇನ ಮಹಾಸೇನ ಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಕ್ರುಕರನೆಂಬ ಋಷಿಗಳ ಪಥವು. ಆ ಕ್ರುಕರನೆಂಬ ಮುನಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸ್ವರ್ಣಪ್ರಭವಾಗಿ ಸ್ವರ್ಗಲೋಕವಿಹುದು. ಆ ಸ್ವರ್ಗಲೋಕದಲ್ಲಿ ಕಲ್ಪವೃಕ್ಷವಿಹುದು. ಆ ಕಲ್ಪವೃಕ್ಷದ ನೆಳಲಲ್ಲಿ ಅಮರಾವತಿಪುರ. ಆ ಪುರದೊಳು ದೇವೇಂದ್ರನಿಹನು. ಆ ದೇವೇಂದ್ರನ ಓಲಗದೊಳಗೆ ಸಪ್ತಮಹಾಋಷಿಗಳು, ಮೂವತ್ಮೂರು ಕೋಟಿ ದೇವರ್ಕಳಿಹರು. ಆ ಸ್ವರ್ಗಲೋಕಕ್ಕೆ ಶತಕೋಟಿ ಯೋಜನದಲ್ಲಿ ಮಹರ್ಲೋಕವಿಹುದು; ಅದು ಬ್ರಹ್ಮ ಪಥವು. ಆ ಮಹರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಜನರ್ಲೋಕವಿಹುದು; ಅದು ವಿಷ್ಣುವಿನ ಪಥವು. ಆ ಜನರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ತಪರ್ಲೋಕವಿಹುದು ; ಅದು ರುದ್ರಪಥವು. ಆ ತಪರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸತ್ಯರ್ಲೋಕವಿಹುದು ; ಅದು ಈಶ್ವರಪಥವು. ಆ ಸತ್ಯರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸದಾಶಿವಲೋಕವಿಹುದು. ಆ ಸದಾಶಿವಲೋಕಕ್ಕೆ ತ್ರಿಶತ ಸಹಸ್ರಕೋಟಿ ಯೋಜನದಲ್ಲಿ ಶಿವಾಂಡವಿಹುದು. ಆ ಶಿವಾಂಡವು ಪಂಚಶತಸಹಸ್ರಕೋಟಿ ಲಕ್ಷವು ತ್ರಿಶತ ಸಹಸ್ರಕೋಟಿ ಲಕ್ಷದ ಮೇಲೆ ಶತಕೋಟಿ ಸಾವಿರ ಲಕ್ಷ ಯೋಜನ ಪ್ರಮಾಣದಗಲವನುಳ್ಳ ಶಿವಾಂಡವು, ಮಹಾಸಮುದ್ರಂಗಳನು, ಅಣುವಾಂಡಗಳನು, ಬ್ರಹ್ಮಾಂಡಂಗಳನು, ಅನಂತಕೋಟಿ ಲೋಕಾದಿಲೋಕಂಗಳನೊಳಕೊಂಡು ಮಹಾಪ್ರಳಯಜಲದೊಳಗಿಹುದು. ಆ ಶಿವಾಂಡಕ್ಕೆ ಹೊರಗಾಗಿ ಅಖಂಡ ಚಿದ್ಬ ್ರಹ್ಮಾಂಡವಿಹುದು. ಅಖಂಡ ಚಿದ್ಬ್ರಹ್ಮಾಂಡವು ಅನಂತಕೋಟಿ ಬ್ರಹ್ಮಾಂಡವನೊಳಕೊಂಡು ಆದಿ ಮಧ್ಯಾವಸಾನಂಗಳಿಲ್ಲದೆ ಅಖಂಡಿತ ಅಪ್ರಮೇಯ ಅವ್ಯಕ್ತ ಅಚಲಿತ ಅಪ್ರಮಾಣ ಅಗೋಚರ ಅಖಂಡಪರಿಪೂರ್ಣವಾಗಿಹುದು ನೋಡಾ ಚಿದ್ಬ್ರಹ್ಮಾಂಡವು ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎಂಟು ನೆಲೆಯ ಮಣಿಮಾಡದ ಮಂಟಪದ ಮೇಲೆ, ಏಳು ವಶ್ಯ ಕನ್ನಿಕೆಯರು, ಮಹಾಲಿಂಗಕ್ಕೆ ಮಾಣಿಕದಾರತಿಯನೆತ್ತಿದರಲ್ಲಾ ! ಚಾಮರಂಗಳು ಬೀಸದೆ, ಮಾಣಿಕಸೂಸಕ ಕೆದರದೆ ಅಧರಪಟಂಗಳು ಹಳಚದೆ, ಸ್ವಯಲಿಂಗಾರ್ಚನೆಯ ಮಾಡುವಲ್ಲಿ ಪ್ರಸಾದಕ್ಕೆ ಕರುಣದಿಂ ದಯಮಾಡೈ (ದಯಮಾಡಿಸೈ?) ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ದಿನಚರಿ ಮಾಸದೊಳಗೆ ಏಳು ವಾರದೊಳಗೆ ಸೋಮವಾರ ಉಪವಾಸ ಮಾಡಬೇಕೆಂಬಿರಿ. ದ್ವಾದಶಮಾಸದೊಳಗೆ ಶ್ರಾವಣಸೋಮವಾರ ಉಪವಾಸಮಾಡಬೇಕೆಂಬಿರಿ. ಮಾಘಮಾಸದ ಚತುರ್ದಶಿ ಉಪವಾಸ ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂಬಿರಿ. ಇಂತೀ ವಾರ, ಮಾಸ, ತಿಥಿಯಲ್ಲಿ ಅನ್ನ ಉದಕವ ತೊರೆದು, ಉಪವಾಸ ಮಾಡಿ, ಆತ್ಮವ ಬಳಲಿಸಿ, ತನುವನೊಣಗಿಸಿ, ನೀವು ವ್ರತವನಾಚರಿಸಿದಡೆ ನಿಮ್ಮ ಆತ್ಮದ್ರೋಹವು ಆ ದೇವತೆಗಳಿಗೆ ತಾಕಿ ಭವಭವದಲ್ಲಿ ಬೀಳುವರು. ಇದು ಕಾರಣವಾಗಿ ಉಪವಾಸ ಮಾಡಲಾಗದು. ಉಪವಾಸ ಮಾಡಿದಲ್ಲಿ ಪ್ರಯೋಜನವಿಲ್ಲ. ಅದೆಂತೆಂದಡೆ : ಉಂಡುಟ್ಟು ಲಿಂಗವ ಪೂಜಿಸಬೇಕು. ಉಣಿಸಿ ಉಡಿಸಿ ಜಂಗಮವನರ್ಚಿಸಬೇಕು. ಕೊಟ್ಟು ಕೊಂಡು ಗುರುವನರ್ಚಿಸಬೇಕು. ಇಂತೀ ತ್ರಿವಿಧದ ಭೇದ ಬಲ್ಲರೆ ಉಪವಾಸವ ಮಾಡಬಲ್ಲರೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಏಕಮುಖದ ರುದ್ರಾಕ್ಷಿಯೊಂದನೆ ಶಿಖಿಯಲ್ಲಿ ಧರಿಸುವುದಯ್ಯಾ. ದ್ವಿತ್ರಿದ್ವಾದಶ ಮುಖದ ಮೂರು ಮಣಿಯ ಮೂಧ್ರ್ನಿಯಲ್ಲಿ ಧರಿಸುವುದಯ್ಯಾ. ಏಕಾದಶಮುಖದ ಮೂವತ್ತಾರು ಮಣಿಯ ಶಿರವ ಬಳಸಿ ಧರಿಸುವುದಯ್ಯಾ. ಐದು ಏಳು ಹತ್ತುಮುಖದ ರುದ್ರಾಕ್ಷಿಯ ಒಂದೊಂದು ದ್ವಿಕರ್ಣದಲ್ಲಿ ಧರಿಸುವುದಯ್ಯಾ. ಷಡಾಷ್ಟಮುಖದ ದ್ವಾತ್ರಿಂಶತ್ ರುದ್ರಾಕ್ಷಿಯ ಕಂಠದಲ್ಲಿ ಧರಿಸುವುದಯ್ಯಾ. ಚತುರ್ಮುಖದ ಪಂಚಾಶತ್ ರುದ್ರಾಕ್ಷಿಯ ಉರಮಾಲೆಯಾಗಿ ಧರಿಸುವುದಯ್ಯಾ. ತ್ರಿದಶಮುಖದ ದ್ವಾತ್ರಿಂಶ ರುದ್ರಾಕ್ಷಿಯ ದ್ವಿಬಾಹುಗಳಲ್ಲಿ ಧರಿಸುವುದಯ್ಯಾ. ನವಮುಖದ ಚತುರ್ವಿಂಶ ರುದ್ರಾಕ್ಷಿಯ ದ್ವಿಮಣಿಬಂಧದಲ್ಲಿ ಧರಿಸುವುದಯ್ಯಾ. ಚತುರ್ದಶಮುಖದ ರುದ್ರಾಕ್ಷಿಯ ಅಷ್ಟೋತ್ತರಶತವ ಉಪವೀತದಂತೆ ಧರಿಸುವುದಯ್ಯಾ. ಇಂತರಿದು ಧರಿಸಿದ ಶಿವಮಾಹೇಶ್ವರನ ಹೆಜ್ಜೆಹೆಜ್ಜೆಗೆ ಅಶ್ವಮೇಧಯಾಗದ ಫಲ ತಪ್ಪದಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಒಂದು ದಾರಿಯ ಮೇಲೆ ಎರಡು ಮಿಕವಿಪ್ಪವು ನೋಡಾ. ಎರಡು ಮಿಕವಿಪ್ಪಲ್ಲಿ ಮೂರು ಕೇರಿಗಳಿಪ್ಪವು ನೋಡಾ. ನಾಲ್ವರು ಪುರುಷರು ಐವರ ಸಂಗವ ಮಾಡಿ, ಆರು ದೇಶವ ಪೊಕ್ಕು, ಏಳು ಸಾಗರವ ದಾಂಟಿ, ಅಷ್ಟಕುಲ ಪರ್ವತವ ಮೆಟ್ಟಿ, ಒಂಬತ್ತು ದ್ವಾರಂಗಳ ದಾಂಟಿ, ಹತ್ತನೆಯ ಮನೆಯಲ್ಲಿ ನಿಂದು, ಬರಿದಾದ ಮನೆಗೆ ಹೋಗಿ ಬರುವ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಏಳು ಸುತ್ತಿನ ಐದು ವರ್ಣದ ಪಟ್ಟಣಕ್ಕೆ ಒಂಭತ್ತು ಬಾಗಿಲು. ಹೊರವೊಳಯದಲೆರಡಗುಸೆಯ ಬಾಗಿಲು. ಮಂದೇಳು ದ್ವಾರ, ತುಂಬಿದ ವ್ಯಾಪಾರ, ಸರಕ ಕೊಳುಕೊಡೆಗಳುಂಟು. ಅದೆಂತೆಂದೊಡೆ : ಎರಡು ಬಾಗಿಲಲ್ಲಿ ತಳವಾರನ ವಾಸನೆಯನರಿದು ಮಾರುವದು. ಮತ್ತೆರಡು ಬಾಗಿಲಲ್ಲಿ ರಮ್ಯವಾದಖಿಳಜೀನಸು ಮಾರುವದು ಕೊತವಾಲನ ಮುಂದಿಟ್ಟು. ಮತ್ತೆರಡು ಬಾಗಿಲಲ್ಲಿ ಊರಹಿರಿಯನ ಮಾತಕೇಳಿ ಸಕಲವ ಮಾರುವದು. ಮತ್ತೊಂದು ಬಾಗಿಲಲ್ಲಿ ಶೆಟ್ಟಿ ಮುಂತಾಗಿ ಬೇಕಾದಂತೆ ಮಾರುವದು. ಇಂತು ಹೊರಗೊಳಗಿರ್ದ ಜನರು ಲೆಕ್ಕವಿಲ್ಲದೆ ಪಟ್ಟಣಶೆಟ್ಟಿಯ ಮಾತಿನೊಳಗಿರ್ದರು. ಎಂಟು ಕೊತ್ತಲ ಸುತ್ತಿ ವ್ಯಾಪಾರ ಮಾಡುವಲ್ಲಿ ಕಂಟಕ ಬಂದುದನೇನೆಂಬೆನಯ್ಯಾ! ಅಂಗೈಯೊಳರಳಿದ ಬೆಂಕಿ ಪಟುವಾಗಿ ಅಂಗಳದಲ್ಲಿ ಉರಿಯಿತ್ತು. ಪಟ್ಟಣ ಬೆಂದು, ಮಳಿಗೆಗಳು ಸುಟ್ಟು ಜನರೆಲ್ಲ ಉರಿದು ಕೊತ್ತಲೆಂಟಕ್ಕಾವರಿಸಲು ಶೆಟ್ಟಿ ಮಧ್ಯಬುರುಜನೇರಲು, ಬೆಂದ ತಲೆ ಉರಿದು ನಿಂದು ನೋಡಲು ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧವದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಏಳು ನೆಲೆಯ ಕರುಮಾಡದುಪ್ಪರಿಗೆಯೊಳಗೆ, ಒಂದೆ ಮುತ್ತಿನ ನೆಲೆಗಟ್ಟಿನ ಮೇಲೆ, ಭಿತ್ತಿ ಇಲ್ಲದ ರತ್ನದ ಹೊದಿಕೆಯ ಮೇಲಿಪ್ಪ ಕಳಸವ ಕಂಡವರಾರನೂ ಕಾಣೆ. ಸೌರಾಷ್ಟ್ರ ಸೋಮೇಶ್ವರಲಿಂಗವ ಹಿಡಿದು ನಿಲಲರಿಯದೇರಿದವರು ಜಾರಿ ಬಿದ್ದು ಸೂರೆವೋದರು ಕಾಲಂಗೆ.
--------------
ಆದಯ್ಯ
ಸ್ಥಲವೆಂದರೆ ಒಂದು, ನೆಲೆಯೆಂದರೆ ಎರಡು, ಕಲೆಯೆಂದರೆ ಮೂರು, ಕರಣವೆಂದರೆ ನಾಲ್ಕು, ಕಾಯವೆಂದರೆ ಐದು, ಕಾಮವೆಂದರೆ ಆರು, ಸೀಮೆಯೆಂದರೆ ಏಳು, ನೇಮವೆಂದರೆ ಎಂಟು, ತಾಮಸವೆಂದರೆ ಒಂಬತ್ತು , ಹರಿಯೆಂದರೆ ಹತ್ತು, ಹರನೆಂದರೆ ಇನ್ನೊಂದು. ಇದೇ ದಶವಿಧ ಪಾದೋದಕ, ಇದೇ ಏಕಾದಶ ಪ್ರಸಾದ. ಇದೇ ಅರ್ಪಿತ, ಇದೇ ಅವಧಾನ, ಇದೇ ಸುಯಿದಾನ. ಇದೇ ಶುದ್ಧಸಿದ್ಧಪ್ರಸಿದ್ಧ ಪ್ರಸಾದ. ಇದೇ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ಆಡುವ ಹೊಲಸ್ಥಲದ ನೆಲೆ.
--------------
ಹಡಪದ ಅಪ್ಪಣ್ಣ
ಬಿದುರಿನ ಮಲೆಯೊಳಗೆ ಚದುರೆರೊಂದೈವರು ಇಪ್ಪರು ನೋಡಾ. ಅವರಿಂಗೆ ಏಳು ಮಂದಿ ಗಂಡರು ಹುಟ್ಟಿ, ಅಂಗಡಿ ರಾಜಬೀದಿಗಳನಿಕ್ಕಿ ಭವಭಾರಂಗಳ ಮಾರುತಿರ್ಪರು ನೋಡಾ. ಇದು ಕಾರಣ ಆದಿಯಲ್ಲಿ ಒಬ್ಬ ದೇವ ಬರಲಾಗಿ ಅಂಗಡಿ ರಾಜಬೀದಿಗಳ ಮುಚ್ಚಿ ಏಳು ಮಂದಿ ಗಂಡರು ಬಿಟ್ಟುಹೋದರು ನೋಡಾ. ಆ ಚದುರೆರೊಂದೈವರ ಹಿಡಿದು ಚಿದ್ರೂಪವಂ ಮಾಡಿ ನಿರಾಲಂಬಲಿಂಗದೊಳು ಬೆರೆದಿದ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಲ್ಲನ ಕೂಡಿದ ಸುಖವೆಲ್ಲವ ಮೆಲ್ಲನೆ ಉಸುರುವೆ ಕೇಳಿರವ್ವಾ. ಏಳು ನೆಲೆಯ ಮಣಿಮಾಡದ ಮಾಣಿಕ್ಯಮಂಟಪದುಪ್ಪರಿಗೆಯ ಮೇಲೆ ಚಪ್ಪರ ಮಂಚವ ಹಾಸಿ, ಒಪ್ಪುವ ಊಟವ ನೀಡಿ, ಕರ್ಪೂರವೀಳ್ಯವ ಕೊಟ್ಟು, ಲಜ್ಜೆಗೆಟ್ಟು ನಾಚಿಕೆಯ ತೊರೆದು, ತನು ಜಜ್ಜರಿತವಾಗಿ, ತೆಕ್ಕೆ ಚುಂಬನಾದಿಗಳಿಂದ ಅಮರ್ದಪ್ಪಿ ಅಸ್ಥಿಗಳು ನುಗ್ಗುನುರಿಯಾಗಿ ಮನದ ಪರಿಣಾಮ ಹೊರಹೊಮ್ಮಿ ಪರಮಾನಂದ ಮಹಾಪರಿಣಾಮದ ಸುಗ್ಗಿಯೊಳಗೆ ಪರವಶಗೊಂಡಿರ್ದೆನು ಅಖಂಡೇಶ್ವರನೆಂಬ ನಲ್ಲನ ಕೂಡಿ.
--------------
ಷಣ್ಮುಖಸ್ವಾಮಿ
ಒಂದು ಎರಡು ಮೂರು ನಾಲ್ಕು ಐದು ಆರು ಏಳು ಎಂಟು ಒಂಬತ್ತು ಹತ್ತೆಂಬ ಮಾತು ನಿಮಗೇಕೆ ಹೇಳಿರೆ. ನಾದ ಮುನ್ನ ಉತ್ಪತ್ಯವೊ? ಬಿಂದು ಮುನ್ನ ಉತ್ಪತ್ಯವೊ? ನಾದ ಬಿಂದುವಿನ ಕುಳ ಸ್ಥಳಗಳ ಬಲ್ಲರೆ ನೀವು ಹೇಳಿರೆ. ಈಡಾ ಪಿಂಗಳ ಸುಷುಮ್ನಾನಾಡಿಗಳ ಭೇದವ ಬಲ್ಲಡೆ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಆ ಪರಶಿವನೇ ತಾನೇ ಆದ ಆತ್ಮನೋರ್ವಗೆ ಕರ್ಮ ಎರಡು, ಮೂರು ಗುಣ, ಕರಣ ನಾಲ್ಕು, ಇಂದ್ರಿಯ ಐದು, ವರ್ಗ ಆರು, ವ್ಯಸನ ಏಳು, ಮದ ಎಂಟು, ನಾಳ ಒಂಬತ್ತು, ವಾಯು ಹತ್ತು, ಎಪ್ಪತ್ತೆರಡು ಸಾವಿರ ನಾಡಿ, ಅರವತ್ತಾರುಕೋಟಿ ಗುಣ, ಆರುವರೆಕೋಟಿ ರೋಮ- ಇವು ಮೊದಲಾದ ಅನಂತ ತತ್ವಯುಕ್ತವೆನಿಸಿದ ತೊಂಬತ್ತಾರು ಅಂಗುಲ ದೇಹದೊಳಗೆ ನಿರ್ದೇಹಿಯಾಗಿ, ಕರ್ಮ ಎರಡರೊಳಗೆ ದುಷ್ಕರ್ಮಮಾಡುವದೆಂತೆನೆ : ಜಾರ ಚೋರ ಹುಸಿ ಹಾಸ್ಯ ಡಂಭಕ ಜೀವಹಿಂಸಾ ಪರಪೀಡಾ ಕ್ಷುದ್ರ ಧೂರ್ತ ಕ್ರೋಧಿ ವಿಕಾರಿ ಪರದ್ರವ್ಯಾಪಹಾರಕ ಅಹಂಕಾರ ಅಜ್ಞಾನ ಅನಾಚಾರ ಪಂಚಪಾತಕ ವಿಶ್ವಾಸಘಾತಕ ಇವು ಮೊದಲಾದ ಅನಂತ ದುರ್ಗುಣದಿಂದ ತನ್ನ ತಾ ಮರೆತು ತಾ ಮಾಡಿದ ದುಷ್ಕರ್ಮದಿಂದೆ ಪಾಪಹತ್ತಿ, ದುಃಖಗೊಂಡು ಯಮನೊಳಗಾಗಿ ನರಕ ಉಂಡು ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಅನಂತಕಾಲ ತಿರುತಿರುಗಿ ಬಳಲುವದು. ಆ ಬಳಲುವ ದುಷ್ಕರ್ಮವೇ ಕಾಲೋಚಿತಕ್ಕೆ ಸತ್ಕರ್ಮವಾಯಿತು. ಅದು ಎಂತಾಯಿತೆಂದರೆ : ಚೋರರಿಗೆ ಪರದ್ರವ್ಯಾಪಹಾರ ವಿಯೋಗದಲ್ಲಿ, ದೇಗುಲ ದೀಪದಕುಡಿ ಕಡಿದಂತೆ : ಆ ಸತ್ಕರ್ಮ ಮಾಡುವದೆಂತೆನೆ : ದಯ, ಧರ್ಮ, ನಯ, ನೀತಿ ಶಾಂತಿ, ದಾಂತಿ, ಕ್ಷಮೆ, ದಮೆ, ಭಕ್ತಿ , ಜ್ಞಾನ, ವೈರಾಗ್ಯ, ನಿರಹಂಕಾರ, ನಿರಾಶ, ಅಷ್ಟಾಂಗಯೋಗ, ಅಷ್ಟವಿಧಾರ್ಚನೆ, ಅಷ್ಟಾವರಣನಿಷೆ* - ಇವು ಮೊದಲಾದ ಅನಂತ ಸುಗುಣದಿಂದೆ ಪುಣ್ಯವೊದಗಿ ಸುಖಗೊಂಡು ಇಂದ್ರನೊಳಗಾಗಿ ಸ್ವರ್ಗ ಅನುಭವಿಸಿ ಅಥವಾ ಬಹು ಸತ್ಕರ್ಮವಾದಡೆ ಸದಾಶಿವನ ಚೌಪದ ಬಹುಪದದೊಳಗಾಗಿ ಕೈಲಾಸಕ್ಕೆ ಹೋಗಿ ಸತ್ಕರ್ಮದಿಂದ ಒದಗಿದ ಪುಣ್ಯದ ಫಲವನ್ನು ಅನುಭವಿಸಿ ಮರಳಿ ಎಂಬತ್ನಾಲ್ಕುಲಕ್ಷ ಜೀವರಾಶಿ ಯೋನಿಯ ದ್ವಾರದಲ್ಲಿ ಅನಂತಕಾಲ ತಿರುತಿರುಗಿ ಅಷ್ಟಭೋಗಸುಖದೊಳಗೆ ತೊಳಲುವದು, ಆ ತೊಳಲುವ ಸತ್ಕರ್ಮವೇ ಕಾಲೋಚಿತಕ್ಕೆ ದುಷ್ಕರ್ಮವಾಗುವದು. ಅದೆಂತೆನೆ : ಶಿವಗಡ ಬಿದ್ದು ಗಂಧರ್ವ ಕರಿನಾಯಿ ಆದಂತೆ `ಅತಿದಾನಾದ್ ಬಲೇರ್ಬಂಧಃ' ಎಂಬ ನೀತಿ ಉಂಟಾಗಿ, ಇದಕ್ಕೆ ದುಷ್ಟಮಾರಿ ಚೌಡಾಪೂರ ವಿರೂಪಾಕ್ಷಿಗೆ ಜಂಗಮದಾಸೋಹದಲ್ಲಿ ಜಂಗಮದೋಷ ಘಟಿಸಿದಂತೆ. ಅದುಕಾರಣ ಸತ್ಕರ್ಮಕ್ಕೆ ಬೀಜ ದುಷ್ಕರ್ಮ, ದುಷ್ಕರ್ಮಕ್ಕೆ ಬೀಜ ಸತ್ಕರ್ಮ. ಹೀಗಾದ ಮೇಲೆ ಸತ್ಕರ್ಮವೇ ದುಷ್ಕರ್ಮ, ದುಷ್ಕರ್ಮವೇ ಸತ್ಕರ್ಮ, ಪಾಪವೇ ಪುಣ್ಯ ಪುಣ್ಯವೇ ಪಾಪ, ಸುಖವೇ ದುಃಖ ದುಃಖವೇ ಸುಖ, ಇವು ಎರಡರೊಳಗೆ ಹೆಚ್ಚು ಕಡಿಮೆ ಎಂಬುದೇನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ ಬಸವಣ್ಣ. ನಾದವನರ್ಪಿಸಿದಲ್ಲಿ ಅರ್ಪಿತಗೊಂಡಾತ ಬಸವಣ್ಣ. ನಾ ಹೆಂಡಿರನರ್ಪಿಸುವಲ್ಲಿ ಅರ್ಪಿತಗೊಂಡಾತ ಬಸವಿದೇವ. ಎನ್ನ ಧನ ಕೆಟ್ಟಿತ್ತು ಬಸವನಿಂದ, ಮನ ಕೆಟ್ಟಿತ್ತು ಬಸವನಿಂದ. ಎನ್ನ ಗೋತ್ರ ನಿವಾರಣವಾಯಿತ್ತು ಬಸವನಿಂದ. [ವೇಳವಾಳಿ] ನಾ ಹೆಣ್ಣನರ್ಪಿತ ಮಾಡಿದಲ್ಲಿ ಒಪ್ಪುಗೊಂಡಾತ ಬಸವಣ್ಣ. ಕಡುಗಲಿ ತಮ್ಮನನಿರಿಯಲು ಮುರಿಯಿತ್ತು ಅಲಗು ಬಸವನಿಂದ. ಎನ್ನೊಡಲಲಿರ್ದ ಏಳು ಮಾನಿಸಸ್ತ್ರೀಯರು ಏಳಲಾರದೆ ಹೋದರು ಬಸವನಿಂದ. ನಾ ಕೆಟ್ಟೆ ಕಾಣಾ, ರೇಕಣ್ಣಪ್ರಿಯನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಭಿಕ್ಷೆ ನಿರತರು ಭಿಕ್ಷಕ್ಕೆ ಹೋಗಿ ಅಕ್ಷ[ಯ] ಪಾತ್ರೆ ಗಿಡತರು. ಭಿಕ್ಷ ಏಳು ವಿಧವಾಗಿಪ್ಪುದು ; ಭಿಕ್ಷ ಒಂಬತ್ತು ವಿಧವಾಗಿಪ್ಪುದು. [ನಿಚ್ಚ] ಭಿಕ್ಷ ಪಂಚಾಪ್ತರಲ್ಲಿ ಪಂಚ ಭಿಕ್ಷವನುಂಡು, ಕರಪಾತ್ರ ನಿರುತನಾದಾತನಿಗೆ ದಿನವೊಂದಕ್ಕೆ ಭಿಕ್ಷ ಲಿಂಗಾರ್ಪಿತಕ್ಕೆ, ಭುವನದ ಎಲ್ಲರಿಗೆಯೂ ಒಡೆಯ! ನಿಚ್ಚ ಹಿಡಿತಡೆಯಿಲ್ಲ. ರಕ್ಷಾರಕ್ಷಕನ ಇಚ್ಛೆಯನರಿದು, ಭಿಕ್ಷಕ್ಕೆ ಹೋಗಿ, ಗೋಣಿಯ ಮರೆಯ ಕೋಟೆಯ ಹುರಿಮಾಡಿ......... ಕೇಟೇಶ್ವರಲಿಂಗದಲ್ಲಿ ಗೋಣಿ ಹರಿಯಿತ್ತು.
--------------
ಬೊಕ್ಕಸದ ಚಿಕ್ಕಣ್ಣ
ಇನ್ನಷ್ಟು ... -->