ಅಥವಾ

ಒಟ್ಟು 43 ಕಡೆಗಳಲ್ಲಿ , 23 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುರುಹೆ ಘಟವಾಗಿ, ಅರಿವೆ ಆತ್ಮನಾಗಿ. ಉಭಯವನರಿವುದು ಆಚಾರದಂಗವಾಗಿ. ಇವು ನಿಂದು ಉಳಿಯೆ, ಐಘಟದೂರ ರಾಮೇಶ್ವರಲಿಂಗದ ಇರವು, ಬಚ್ಚಬಯಲಾಯಿತ್ತು.
--------------
ಮೆರೆಮಿಂಡಯ್ಯ
ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ, ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ. ಈಸುವನರಿಯದೆ ವೇಷವ ಧರಿಸಿ, ಲೋಚು ಬೋಳಾದಡೆ ಮಹಾಲಿಂಗ ಕಲ್ಲೇಶ್ವರದೇವರು ನಗುವರು.
--------------
ಹಾವಿನಹಾಳ ಕಲ್ಲಯ್ಯ
ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧ ಒಂದೆ ಬೀಜ; ತಲೆವಿಡಿಯಿಲ್ಲ ಪ್ರಾಣಲಿಂಗಿ ಶರಣ ಐಕ್ಯ ಇಂತೀ ತ್ರಿವಿಧ ಒಂದೇ ಬೀಜ; ತಲೆವಿಡಿಯಿಲ್ಲ್ಲ್ಲ. ವಸ್ತು-ವಸ್ತುಕದಂತೆ, ಶಿಲೆ-ಕಾಂತಿಯಂತೆ, ಕುಸುಮ-ಗಂಧದಂತೆ, ಪತಿ-ಸತಿಯಂತೆ ಭಕ್ತಿ ಘಟ; ಅರಿವೆ ವಸ್ತುಸ್ವರೂಪವಾಗಿ ಷಡಸ್ಥಲವನವಗವಿಸಿ ನಿಂದ ಸ್ವರೂಪ; ಬಸವಣ್ಣ ಚನ್ನಬಸವಣ್ಣ ಶರಣತತಿ ಮುಂತಾದ ಸಿದ್ಧಾಂತ ಉಭಯಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 66 ||
--------------
ದಾಸೋಹದ ಸಂಗಣ್ಣ
ಅರಿವುವಿಡಿದು, ಅರಿವನರಿದು, ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ, ಮರಹುವಿಡಿದು, ಮರಹ ಮರೆದು, ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ. ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು, ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ. ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಮುಟ್ಟದ ಮುನ್ನ ನರರು, ಸುರರು, ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿ ಅಡಗಿದರಾಗಿ ನಾನವರ ರೂಪಿಸಬಲ್ಲೆ. ದೇವಗಣ ಪ್ರಮಥಗಣ, ರುದ್ರಗಣಂಗಳೆಂಬವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ, ನಾನವರ ಭಾವಿಸಬಲ್ಲೆ. ಸತ್ಯರು, ನಿತ್ಯರು, ಮುಕ್ತರೆಂಬ ಮಹಾಮಹಿಮರೆಲ್ಲರೂ ಚಿದ್ಭಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ, ನಾನವರನರಿದು ಬಲ್ಲೆ. ಇಂತೀ ತ್ರಿಭಾಂಡವನೊಳಕೊಂಡ ಆ ಅಖಂಡಿತದಿರವೆ ತಾನೆಂದರಿದ ಲಿಂಗೈಕ್ಯನ ರೂಹಿಸಲಿಲ್ಲಾಗಿ, ಭಾವಿಸಲಿಲ್ಲಾಗಿ, ಅರಿಯಲಿಲ್ಲ. ಅರಿವೆ ತಾನೆಂದರಿದ ಬಳಿಕ, ಗುಹೇಶ್ವರನೆಂಬುದು ಬಯಲು ನೋಡಾ !
--------------
ಅಲ್ಲಮಪ್ರಭುದೇವರು
ಸತ್ಯವೆ ಜಲ, ಸಮತೆಯೆ ಗಂಧ, ಅರಿವೆ ಅಕ್ಷತೆ, ಭಾವ ಕುಸುಮ, ಸ್ವತಂತ್ರ ಧೂಪ, ನಿರಾಳ ದೀಪ, ಸ್ವಾನುಭಾವ ನೈವೇದ್ಯ, ಸಾಧನಸಾಧ್ಯ ಕರ್ಪುರವೀಳೆಯ. ಇವೆಲ್ಲವ ನಿಮ್ಮ ಪೂಜೆಗಂದನ್ನಕರಣಂಗಳು ಪಡೆದಿರಲು ಹೃದಯಮಧ್ಯದಲ್ಲಿದ್ದು ಗಮ್ಮನೆ ಕೈಕೊಂಡೆಯಲ್ಲಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಆವಾವ ಸ್ಥಲಂಗಳನಾದರಿಸಿ ನಡೆವಲ್ಲಿ, ಆ ಘಟನೆ ಬೀಗವಾಗಿ ಎಸಳೆ ಆತ್ಮವಾಗಿ, ಅರಿವೆ ಕೈಯಾಗಿ, ಸ್ವಸ್ಥ ಘಟಕ್ಕೆ, ಸ್ವಸ್ಥ ಕೈಗಳಿಂದ ಸಿಕ್ಕು ಹರಿವುದಲ್ಲದೆ, ಮತ್ತೊಂದು ಕೈಯಿಕ್ಕಿ ತುಡುಕಿದಡೆ ಬಿಟ್ಟುದುಂಟೆ ಆ ಸಿಕ್ಕು? ಇಂತೀ ಕ್ರೀಯಲ್ಲಿ ಕ್ರೀಯ ಕಂಡು, ಭಾವದಲ್ಲಿ ಭ್ರಮೆ ಹಿಂಗಿ, ಜ್ಞಾನದಲ್ಲಿ ಸಂಚವಿಲ್ಲದೆ ನಿಂದ ನಿಲವು, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಅಂಗಕ್ಕೆ ಆಚಾರಳವಟ್ಟಲ್ಲಿ ಆ ಲಿಂಗಕ್ಕೆ ಅಂಗವೆ ಅರ್ಪಿತ. ಪ್ರಾಣಕ್ಕೆ ಪ್ರಸಾದ ಸಾಧ್ಯವಾದಲ್ಲಿ ಆ ಲಿಂಗಕ್ಕೆ ಆ ಪ್ರಾಣವೆ ಅರ್ಪಿತ. ಮನವು ಮಹವನಿಂಬುಗೊಂಡಲ್ಲಿ ಆ ಲಿಂಗಕ್ಕೆ ಮನವೆ ಅರ್ಪಿತ. ಭಾವಭ್ರಮೆಯಳಿದು ನಿಭ್ರಾಂತುವಾದಲ್ಲಿ ಆ ಲಿಂಗಕ್ಕೆ ಆ ಭಾವವೆ ಅರ್ಪಿತ. ಜ್ಞಾತೃ ಜ್ಞಾನ ಜ್ಞೇಯ ಸಂಪುಟವಾಗಿ, ಅರಿವು ನಿರ್ಣಯಿಸಿ ನಿಷ್ಪತಿಯಾಗಿ ಕುರುಹುಗೆಟ್ಟಲ್ಲಿ ಆ ಲಿಂಗಕ್ಕೆ ಆ ಅರಿವೆ ಅರ್ಪಿತ. ಇಂತು, ಸರ್ವಾಂಗವರ್ಪಿತವಾದ ಲಿಂಗಕ್ಕೆ ಒಡೆತನವನಿತ್ತ ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ನಾನೆಂದೆನಲರಿಯದೆ ನಿಂದ ನಿಜದ ಮಹಾಪ್ರಸಾದಿ.
--------------
ಚನ್ನಬಸವಣ್ಣ
ಶರಣ ತನ್ನ ಪ್ರಾರಬ್ಧಕರ್ಮ ತೀರಿದ ವಿಸ್ತಾರವನರಿದು, ಪ್ರಕಾಶಿಸುತ್ತಿದ ಕಾರಣ, ಶ್ವಾನ ಜಂಗಮರೂಪೆನಬೇಕಾಯಿತ್ತು. ಗಜ ಮಲೆಯಿಂದ ಪುರದಲ್ಲಿಗೆ ಬಂದು, ಆ ಪುರದಲ್ಲಿ ಎಷ್ಟು ಸುಖವಾಗಿದ್ದರೂ ಮಿಗೆಮಿಗೆ ತನ್ನ ಮತಿಯನೆ ನೆನೆವುತಿಪ್ಪುದು. ಆ ಜಂಗಮ ಮೊದಲು ಪರಬ್ರಹ್ಮದಿಂದ ದೇಹವಿಡಿದನಾಗಿ, ಆ ದೇಹದಲ್ಲಿ ಎಷ್ಟು ಸುಖವಾಗಿದ್ದರೆಯೂ ಮಿಗೆಮಿಗೆ ಆ ಪರಬ್ರಹ್ಮವನೆ ನೆನೆವುತಿಹನು, ಇದು ಕಾರಣ, ಶ್ವಾನ ಗಜ ಇವೆರಡೂ ಶರಣಂಗೆ ಜಂಗಮಸ್ವರೂಪೆನಬೇಕಾಯಿತ್ತು. ಮನವೆ ಮರ್ಕಟ, ಅರಿವೆ ಪಿಪೀಲಿಕ, ಮಹಾಜ್ಞಾನವೆ ವಿಹಂಗ, ನಿತ್ಯ ಎಚ್ಚರವೆ ಕುಕ್ಕುಟ, ತನ್ನ ತಾನರಿವುದೆ ಶ್ವಾನ, ತನ್ನ ಬುದ್ಧಿಯೆ ಗಜ. ಇಂತೀ ಷಡ್ವಿಧವ ಬಲ್ಲಾತನೆ ಬ್ರಹ್ಮಜ್ಞಾನಿ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಗೊಹೇಶ್ವರಪ್ರಿಯ ಬಂಕಣ್ಣ ನಿಟ್ಟ ಮುಂಡಿಗೆಯನೆತ್ತುವರಿಲ್ಲ, ಬಸವಪ್ರಿಯ ಮಹಾಪ್ರಭುವೆ.
--------------
ಜಗಳಗಂಟ ಕಾಮಣ್ಣ
ಅಯ್ಯಾ ಪಾದಪೂಜೆಯೆಂಬುದು ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ. ಶ್ರೀಗುರು ಬಸವೇಶ್ವರದೇವರು ತಮ್ಮ ಅಂತರಂಗದೊಳಗಣ ಪಾದಪೂಜೆಯಿಂದಾದ ತೀರ್ಥಪ್ರಸಾದವ `ಗಣಸಮೂಹಕ್ಕೆ ಸಲ್ಲಲಿ' ಎಂದು ನಿರ್ಮಿಸಿ, ಭಕ್ತಿಯ ತೊಟ್ಟು ಮೆರೆದರು. ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ; ಗ್ರಾಮಸೇವಾದಿಸಂರಂಭನೃತ್ಯಗೀತಾದಿ ವರ್ಜಿತಃ ಅನಾಚಾರವಿಹೀನೋ ಯೋ ತಸ್ಯ ತೀರ್ಥಂ ಪಿಬೇತ್ ಸದಾ ಇಂತೆಂದುದಾಗಿ, ತಂಬೂರಿ ಕಿನ್ನರಿವಿಡಿದು ಮನೆಮನೆಯ ಬೇಡುವಾತ ಹಲವು ವೇಷವ ತೊಟ್ಟು ಆಡುವಾತ, ನಗಾರಿ ಸಮ್ಮೇಳ ಕರಣೆ ಕಹಳೆ ಶಂಖ ಬಾರಿಸುವಾತ ಅಷ್ಟಾವರಣ ಪಂಚಾಚಾರದಲ್ಲಿ ಅಹಂಕರಿಸುವಾತ ಅನಾಚಾರಿ. ಪರ್ವತದ ಕಂಬಿ ಮಹಾಧ್ವಜವ ಹೊರುವಾತ ರಾಜಾರ್ಥದಲ್ಲಿ ಅಹುದ ಅಲ್ಲವ ಮಾಡಿ, ಅಲ್ಲವ ಅಹುದ ಮಾಡುವಾತ ಅನಾಚಾರವ ಹೇಳುವಾತ ಸದಾಚಾರದಲ್ಲಿ ತಪ್ಪುವಾತ ಭಕ್ತಗಣಂಗಳ ನಿಂದೆಯ ಮಾಡುವಾತ ಸದಾಚಾರಸದ್ಭಕ್ತಗಣಂಗಳ ಕಂಡಡೆ ಗರ್ವಿಸುವಾತ ಧಾನ್ಯ ಅರಿವೆ ಬೆಳ್ಳಿ ಬಂಗಾರಂಗಳ ಕ್ರಯವಿಕ್ರಯದಲ್ಲಿ ವಂಚಿಸುವಾತ ಗುರುಹಿರಿಯರಲ್ಲಿ ಹಾಸ್ಯರಹಸ್ಯವ ಮಾಡುವಾತ ಪರದೈವ ಪರಧನ ಪರಸ್ತ್ರೀ ಗಮಿಸುವಾತ ಸೂಳೆ ಬಸವಿಯರ ಗೃಹದಲ್ಲಿ ಇರುವಾತ ಆಚಾರಭ್ರಷ್ಟ ಮಾನಹೀನರ ಸಂಗವ ಮಾಡುವಾತ, ದುರುಳು ಮಂಕು. ಅವರ ಗುರುಲಿಂಗಜಂಗಮವೆಂದು ನುಡಿಯಲಾಗದು. ಅದೆಂತೆಂದಡೆ : ಖೇಟಕೋ ದಂಡಚಕ್ರಾಸಿಗದಾತೋಮರಧಾರಿಣಃ ಜಂಗಮಾ ನಾನುಮಂತವ್ಯಾಃ ಸ್ವೀಯಲಕ್ಷಣಸಂಯುತಾಃ ಆಶಾತೋ ವೇಷಧಾರೀ ಚ ವೇಷಸ್ಯ ಗ್ರಾಸತೋಷಕಃ ಗ್ರಾಸಶ್ಚ ದೋಷವಾಹೀ ಚ ಇತಿ ಭೇದೋ ವರಾನನೇ ಅನಾಚಾರವಿಭಾವೇನ ಸದಾಚಾರಂ ನ ವರ್ಜಯೇತ್ ಸದಾಚಾರೀ ಸುಭಕ್ತಾನಾಂ ಪಾದತೀರ್ಥಪ್ರಸಾದಕಃ ಮಹಾಭೋಗಿ ಮಹಾತ್ಯಾಗೀ ಲೋಲುಪೋ ವಿಷಯಾತುರಃ ಯಸ್ತ್ವಂಗವಿಹೀನಃ ಸ್ಯಾತ್ತಸ್ಯ (ಪಾದ) ತೀರ್ಥಂ[ನ]ಸೇವಯೇತ್ ಕುಷಿ*ೀ ಕರಣಹೀನಶ್ಚ ಬಧಿರಃ ಕಲಹಪ್ರಿಯಃ ವ್ಯಾಧಿಭಿಸ್ತ್ವಂಗಹೀನೈಶ್ಚತೈರ್ನ ವಾಸಂ ಚ ಕಾರಯೇತ್ ಇಂತೀ ದುರ್ಮಾರ್ಗ ನಡತೆಗಳಿಲ್ಲದೆ, ಅಯೋಗ್ಯವಾದ ಜಂಗಮವನುಳಿದು, ಯೋಗ್ಯಜಂಗಮವ ವಿಚಾರಿಸಿ ತನು ಮನ ಧನ ವಂಚನೆಯಿಲ್ಲದೆ ಸಮರ್ಪಿಸಿ ಅವರ ತೀರ್ಥಪ್ರಸಾದವ ಕೈಕೊಳ್ಳಬೇಕಲ್ಲದೆ ದುರ್ಮಾರ್ಗದಲ್ಲಿ ಆಚರಿಸುವಾತನಲ್ಲಿ ತ್ರಿಣೇತ್ರವಿದ್ದಡೆಯೂ ತೀರ್ಥಪ್ರಸಾದ ಉಪದೇಶವ ಕೊಳಲಾಗದು ಕಾಣಾ. ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ ಗುರುವಚನವ ತಿಳಿದು ನೋಡಾ ಸಂಗನಬಸವಣ್ಣಾ.
--------------
ಚನ್ನಬಸವಣ್ಣ
ಎನ್ನ ತನುಮನವೆರಡನೂ ಗುರು ಕಳೆದು ಲಿಂಗದಲಿ ಏಕವ ಮಾಡಿದನಾಗಿ, ಎನ್ನ ಅಂತರಂಗ ಬಹಿರಂಗವೆರಡೂ ನಿಮ್ಮವು ನೋಡಾ ! ನಿಮ್ಮ ಅಂತರಂಗದೊಳಗೆ ನಿಮ್ಮನೆ ಇಂಬಿಟ್ಟುಕೊಂಬೆ, ನಿಮ್ಮ ಬಹಿರಂಗದೊಳಗೆ ನಿಮ್ಮನೆ ನೀವಾಗಿ ಪೂಜಿಸುವೆ, ನಿಮ್ಮ ಅರಿವಿಂದ ನಿಮ್ಮನೆ ಅರಿವೆ ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಅಂಗಸ್ಥಲ ಮೂವತ್ತಾರು ಕಲ್ಪನಾಡಿಭೇದಮಂ ಭೇದಿಸುತ್ತ ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂಗಳ ವರ್ಮದಲ್ಲಿರಿಸಿ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚೇಂದ್ರಿಯ[ವಿಷಯಂ]ಗಳ ಪೂರ್ವನಾಮವಿಮೋಚನೆಯಂ ಮಾಡುವ ಪರಿ : ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣವೆಂಬ ಪಂಚೇಂದ್ರಿಯಂಗಳ ಬಾಹ್ಯಾಭ್ಯಂತರವನರಿವ ಪರಿ, ಆದ್ಯಕ್ಷರವೊಂದಾದಡೆ ಅಂತ್ಯಕ್ಷರ ಶೂನ್ಯ, ಅದಕ್ಕೆ ಶಾಸ್ತ್ರಕ್ರಮದೊಳಗಾಡುವ ಭೇದಖಂಡದಿಂದ ಲಿಂಗಪ್ರಸಾದವ ಛೇದಿಸಿ, ಆ ಲಿಂಗವಂ ಭೂಮಿಯ ಬಿಡಿಸುವುದು. ಕಳಾವಿಧಸ್ಥಾನಕ್ಕೆ ತಂದಲ್ಲಿ ಸರ್ಪನು ಹಲವ ರುಚಿಸುವುದು. ಆ ರುಚಿಸುವ ಸರ್ಪನನು ತನ್ನಿಚ್ಛೆಗೆ ಹರಿಯಲೀಯದೆ ಅರಿವೆ ಪ್ರಾಣವಾಗಿ ಆ ಅರಿವಿನಿಂ ದೃಢವಿಡಿದು, ಹರಿವ ಹತ್ತುವ ಪರಿಯನೊಡೆದು ಮೂವತ್ತೆರಡು ಜವೆಯ ತೊರೆದಲ್ಲಿ ತೋರುವ, ನಾಡಿ ಮಧ್ಯಮಸ್ವರ ಮಹಿತಸ್ವರ, ಭೂಸ್ವರವೆಂಬ ಮಧ್ಯನಾಡಿ ಮಥನಂಗಳಂ ಮಥಿಸುವುದು. ಅಂಗಕ್ಕೆ ಲಿಂಗ ಬಂದಡೆ ಅಂಗದಾಪ್ಯಾಯನವನರಿವುದು. ಗುರುವಿನಿಂದ ಕರಣಾದಿಗಳು ಶುದ್ಧವಹವು, ಆದಿಪ್ರಭೆಯ ಕಿರಣಂಗಳು ಶುದ್ಧವಹವು, ಕರಣಂಗಳ ಆರತವಡಗುವುದು, ಕಾದ್ರಮಾ ಕಾದು ಕಾವುದು; ಆ ಲಿಂಗವನು ಉದಯದಲ್ಲಿ ನಾಲ್ಕು ಘಳಿಗೆ ತನಕ ಲಿಂಗಾರ್ಚನೆಯಂ ಮಾಡುವುದು. ಆ ಲಿಂಗವನು ವಾಮಕ್ಕೆ ಆ ಲಿಂಗವನು ದಕ್ಷಿಣಕ್ಕೆ ಆ ಲಿಂಗವನು ಪೂರ್ವಕ್ಕೆ, ಆ ಲಿಂಗವನು ಪಶ್ಚಿಮಕ್ಕೆ ಆ ಲಿಂಗವನು ಅಧಕ್ಕೆ, ಆ ಲಿಂಗವನು ಊಧ್ರ್ವಕ್ಕೆ ಆ ಲಿಂಗವನು ಜಡಿವುದು. ಪ್ರಭಾಲಿಂಗವೆಂಬ ಭಾವವನು ಭಾವಿಸಿ, ವಾತ ಪಿತ್ತ ಶ್ಲೇಷ್ಮವೆಂಬ ತ್ರಿಧಾತುವನರಿವುದು. ವಾತೋದ್ರೇಕವಾದಡೆ ಶೀತೋಷ್ಣಂಗಳ ಲಿಂಗಕ್ಕೆ ಸಮ ಮಾಡುವುದು, ಪಿತ್ತೋದ್ರೇಕವಾದಡೆ ಶೈತ್ಯವಂ ಮಾಡಿ ಕಾವುದು. ಶ್ಲೇಷ್ಮೋದ್ರೇಕವಾದಡೆ ಬಿಗಿದು ಲಿಂಗಾರ್ಚನೆಯಂ ಮಾಡುವುದು. ವಾತಪ್ರಕೃತಿಯಲ್ಲಿ ಲಿಂಗದ ಮೊದಲು ದೊಡ್ಡ ತುದಿ ಸಣ್ಣದಾಗಿಹುದು ಪಿತ್ತಪ್ರಕೃತಿಯಲ್ಲಿ ತುದಿ ಮೊದಲು ಸಣ್ಣದಾಗಿ ನಡು ದೊಡ್ಡದಾಗಿಹುದು. ಶ್ಲೇಷ್ಮಪ್ರಕೃತಿಯಲ್ಲಿ ಲಿಂಗತುದಿ ಮೊದಲೊಂದಾಗಿ ದೊಡ್ಡದಾಗಿಹುದು. ಇಂತು ತ್ರಿಧಾತುವನರಿದು ಲಿಂಗಾರ್ಚನೆಯ ಮಾಡುವುದು- ಇದು ವರ್ತನಾಕ್ರಮ. ಆದಿಕ್ರಮ ಅಂತ್ಯಕ್ರಮ ಅನ್ವಯಕ್ರಮ ನಿನಾದಾದಿಕ್ರಮವೆಂಬ ಭೇದಾದಿ ಭೇದಂಗಳಂ ಭೇದಿಸುವುದು. ಶಾಸ್ತ್ರಸಂಧಿಯಲ್ಲಿ ಬಾಹ್ಯಂಗಳನರಿವುದು, ಕ್ರಮಾದಿಕ್ರಮಂಗ?ಂ ತಿಳಿವುದು. ವಿನಾದದಲ್ಲಿ ಚಿತ್ರಪತ್ರಂಗಳನರಿವುದು, ಕರಣಂಗಳಂ ಶುದ್ಧಮಂ ಮಾಡುವುದು. ಹಿರಿದು ನಡೆಯದೆ, ಹಿರಿದು ನುಡಿಯದೆ ಹಿರಿದುಂ ದಿವಾರಾತ್ರಿಯಲ್ಲಿ ಶೀತೋಷ್ಣಾದಿಗಳಂ ಮುಟ್ಟಿಸಿಕೊ?್ಳದೆ ಮಹಾಮಾರ್ಗವ ತಿಳಿವುದು. ಇದರಿಂಗೆ ತನ್ನ ಮಾರ್ಗಮಂ ತೋರದೆ ಮಹಾಮಾರ್ಗದಲ್ಲಿ ಮಾರ್ಗಿಯಾಗಿ ಇದರ ಭೇದಸಂಬಂಧದಲ್ಲಿ ಉಚ್ಛ್ವಾಸ ನಿಶ್ವಾಸಕ್ರಮವನು ಓದಿ ಭರತಕ್ರಮವನು ಅನುಕ್ರಮಿಸಿ ಮೂಲಕಸ್ಥಾನದಲ್ಲಿ ಹೊರೆಹೊಗದೆ ಇಕ್ಕುವ ಚಿತ್ರಕ್ರಮದಲ್ಲಿ ಹೊರೆಹೊಗದೆ ಇಂತಿವನರಿತು ಲಿಂಗಾರ್ಚನೆಯಂ ಮಾಡುವ ಪ್ರಕರಣ : ಭ್ರಾಹ್ಮೀ ಮಹಾಮುಹೂರ್ತದಲ್ಲಿ ಎದ್ದು, ಅಂಗಪ್ರಕ್ಷಾಲನಮಂ ಮಾಡಿ ಕಂಬುವಂ ವಿಸರ್ಜಿಸಿ, ಶಿಶು ಪ್ರಕಾರವಂ ಮಾಡಿ ಶಮೆಯೆಂಬ ಸಮಾಧಿಯಲ್ಲಿ ಕುಳ್ಳಿರ್ದು, ದಮೆಯೆಂಬ ಪೀಠವನಿಕ್ಕಿ, ಶಾಂತಿಯೆಂಬ ನಿಜವಸ್ತ್ರವ ತಂದು, ಆದಿ ಶಿಶುವಿಂಗೆ ಅನುಬಂಧವಂಮಾಡಿ ತಲೆವಲದಲ್ಲಿ ಶಿಶುವಂ ತೆಗೆದು ಕರವೆಂಬ ತೊಟ್ಟಿಲಲ್ಲಿಕ್ಕಿ ಜೋಗೈಸಿ ಕೈಗೆ ಬಾಯಿಗೆ ಬಂದಿತ್ತು ನೋಡಾ, ಬಾಯಿಗೆ ಬಂದಲ್ಲಿ ಭಾವ ಶುದ್ಧವಾಯಿತ್ತು, ಕೈಗೆ ಬಂದಲ್ಲಿ ಆದಿ ಶುದ್ಧವಾಯಿತ್ತು, ಭಾವಲಿಂಗ ಜೀವಕರವಾಯವೆಂಬ ಪಟ್ಟಣದಲ್ಲಿ ಸೀಮೆ ಸಂಬಂಧವಂ ಮೀರಿ, ಮಂತ್ರಮಯವಾಯಿತ್ತು ನೋಡಾ ! ಮಂತ್ರಲಿಂಗವೊ ! ಅಮಂತ್ರ ಲಿಂಗವೊ ಹೇಳಾ ! ಮತ್ರದಿಂ ವಸ್ತ್ರ, ಅಮಂತ್ರದಿಂ ಹಸ್ತ ಇಂತು ಮಂತ್ರ ಆಮಂತ್ರಗಳೆರಡನು ಕೂಡಿ ರಕ್ಷಿಸುತ್ತಿದ್ದಿತ್ತು ನೋಡಾ ! ಶಿರಸ್ಸೆಂಬ ಧೇನು ಲಿಂಗವೆಂಬ ಮೊಲೆಯ ಕರವೆಂಬ ವತ್ಸ ತೊರೆಯಿತ್ತು ನೋಡಾ! ಮಂತ್ರವೆಂಬ ಅಮೃತವ ಕರೆಯಿತ್ತು ನೋಡಾ ! ಬಸವಯ್ಯ ನೋಡಾ ಊಡದ ಹಸು, ಉಣ್ಣದ ಕರು, ಆರೂಢದ ಭಾಂಡ ! ಅಂಗದಲ್ಲಿ ಹುಟ್ಟಿದ ಅಮೃತಜಲವನು ಲಿಂಗಕ್ಕೆ ಕೊಡದೆ ಧರೆಯಲ್ಲಿ ಬಿಟ್ಟಡೆ ಎಂತೊ ಲಿಂಗೋದಯವಹುದು ? ಎಂತೋ ಪಾದೋದಕ ಪ್ರಸಾದಜೀವಿಯಹನು ? ಜೀವ ಪರಮರ ಐಕ್ಯಬಾವವನರಿದ(ವ?)ಡೆ ಲಿಂಗೋದಯದಲಲ್ಲದೆ ಅರಿಯಬಾರದು ನಿಜಭಾವ ನಿಜಭಕ್ತಿ ನಿಜಸಮರಸವಾದಲ್ಲದೆ ಲಿಂಗೋದಯವಾಗದು. ನಿಜಮತ್ರ್ಯದಲ್ಲಿ ಜನಿಸಿದ ಅಂಗ ಅಂಗಿಗಳೆಲ್ಲರು ಪ್ರಾಣಲಿಂಗ ಸಂಬಂಧವನರಿಯರು. ಅಂತು ಅಂಗಲಿಂಗಿಗಳು ಪ್ರಾಣಲಿಂಗಿಗಳಿಗೆ ಭವಿಗಳು ಅಂತು ಪ್ರಾಣಲಿಂಗಿಗಳು ಅಂಗಲಿಂಗಿಗಳನೊಲ್ಲರು. ಅದು ಹೇಗೆಂದಡೆ: ಅವರಿಗೆ ಪ್ರಸಾದ ಪ್ರಾಣಲಿಂಗವಾಗಿ ನಾಮಗೋಪ್ಯ ಮಂತ್ರಗೋಪ್ಯಂಗಳಲ್ಲಿ ಆ ಮಹಾಮಾರ್ಗವನರಿಯರಾಗಿ, ಅಂಗಲಿಂಗಿಗಳಲ್ಲದೆ ಪ್ರಾಣಲಿಂಗಿಗಳಲ್ಲ ಪ್ರಸಾದಸೇವನಧ್ಯಾನಾದರ್ಚನಾದರ್ಪಣಾತ್ ಶುಚಿಃ ಪ್ರಸಾದಹೀನಸ್ಯಾಂಗೇ ತು ಲಿಂಗಂ ನಾಸ್ತಿ ಪುನಃ ಪುನಃ ಎಂದುದಾಗಿ ಇಂತು ಲಿಂಗಾರ್ಚನೆಯಂ ಮಾಡುವುದು ಲಿಂಗಪಾದೋದಕ ಪ್ರಸಾದವನು ಬಾಹ್ಯಾಂತರಂಗದಲ್ಲಿ ವಿರ?ವಿಲ್ಲದೆ ಅವಿರಳಭಾವಸಂಬಂಧದಲ್ಲಿ ಧರಿಸುವುದು; ಧರಿಸುವಾತ ಲಿಂಗವಂತನು. ಅಂಗಲಿಂಗಿ ಪ್ರಾಣಲಿಂಗಿ ಪ್ರಸಾದಲಿಂಗಿ ನಿಜನಿಂದ ಮಾರ್ಗವಿರಳ ಪಂಚಕನಾಡಿಯಲ್ಲಿ ಹೊರಹೊಗದೆ ನಿರ್ನಾದಮಂ ಆಶ್ರಯಿಸುವುದು. ಇದು ಮಹಾಮಾರ್ಗ ಪುರಾತನರ ಪೂರ್ವ; ಅಪರದಲ್ಲಿ ಅಂಥ ಲಿಂಗವನರಿ, ಆದಿಯಲ್ಲಿ ಅನಾಹತಲಿಂಗವನರಿ. ಲಿಂಗವಾರು ಅಂಗಾಂಗಲಿಂಗ ಸರ್ವಾಂಗಲಿಂಗ, ಲಿಂಗಸನುಮತವಾಯಿತ್ತು, ಮಹಾವೃತ್ತಿಗೆ ಅನುಮತವಾಯಿತು, ನಿರ್ವಿಕಲ್ಪ ಪರಮಪದಕ್ಕೆ ತಾನೆ ಆಯಿತ್ತು. ಇನ್ನು ಮಾನಸ ವಾಚಕ ಕಾಯಕದಲ್ಲಿ ಅವಿತಥವಿಲ್ಲದೆ ಲಿಂಗಾರ್ಚನೆಯಂ ಮಾಡುವರ ತೋರಿ ಬದುಕಿಸಾ ಕೂಡಲಚೆನ್ನಸಂಗಮದೇವಯ್ಯ.
--------------
ಚನ್ನಬಸವಣ್ಣ
ಗುರುವಿನಿಂದಾಯಿತ್ತೆನ್ನ ಗುರುಸಂಬಂಧ; ಲಿಂಗದಿಂದಾಯಿತ್ತೆನ್ನ ಲಿಂಗಸಂಬಂಧ; ಜಂಗಮದಿಂದಾಯಿತ್ತೆನ್ನ ಜಂಗಮಸಂಬಂಧ. ಅದೆಂತೆಂದಡೆ: ತನುವಿಕಾರವಳಿದೆನಾಗಿ ಗುರುಸಂಬಂಧ; ಮನವಿಕಾರವಳಿದೆನಾಗಿ ಲಿಂಗಸಂಬಂಧ; ಧನವಿಕಾರವಳಿದೆನಾಗಿ ಜಂಗಮಸಂಬಂಧ. ಇಂತೀ ತ್ರಿವಿಧವಿಕಾರವಳಿದೆನಾಗಿ, ಗುರುವಾಗಿ ಗುರುಭಕ್ತಿಸಂಪನ್ನ; ಲಿಂಗವಾಗಿ ಲಿಂಗಭಕ್ತಿಸಂಪನ್ನ; ಜಂಗಮವಾಗಿ ಜಂಗಮಭಕ್ತಿ ಸಂಪನ್ನ. ಇದು ಕಾರಣ, ಅರಿವೆ ಗುರು, ಅನುಭಾವವೆ ಲಿಂಗ, ಆನಂದವೆ ಜಂಗಮ. ಅದು ಹೇಗೆಂದಡೆ: ಅರಿವೆಂಬ ಗುರುವಿನಿಂದ ಇಷ್ಟಲಿಂಗಸಾಹಿತ್ಯ; ಅನುಭಾವವೆಂಬ ಲಿಂಗದಿಂದ ಪ್ರಾಣಲಿಂಗಸಾಹಿತ್ಯ ಆನಂದವೆಂಬ ಜಂಗಮದಿಂದ ತೃಪ್ತಿಲಿಂಗಸಾಹಿತ್ಯ. ಅರಿವಿನಿಂದ ಅನುಭವ; ಅನುಭವದಿಂದ ಅರಿವು. ಅರಿವು ಅನುಭವ ಸಮರಸವಾದುದೆ ಆನಂದ. ಆನಂದಕ್ಕೆ ಅರಿವೆ ಸಾಧನ. ಇಷ್ಟದಿಂದ ಪ್ರಾಣ, ಪ್ರಾಣದಿಂದ ಇಷ್ಟ; ಇಷ್ಟಪ್ರಾಣಸಂಯೋಗವಾದುದೆ ತೃಪ್ತಿ. ಆ ತೃಪ್ತಿಗೆ ಇಷ್ಟಲಿಂಗದರಿವೆ ಸಾಧನ. ಅದೆಂತೆಂದಡೆ: ಆ ಇಷ್ಟಲಿಂಗದಲ್ಲಿ ವಿನಯ ಮೋಹ ಭಯ ಭಕ್ತಿ ಕರುಣ ಕಿಂಕುರ್ವಾಣ ಸಮರಸವಾದುದೆ ಆಚಾರಲಿಂಗ. ಮತ್ತಾ ಇಷ್ಟಲಿಂಗದಲ್ಲಿ ದೃಢಸ್ನೇಹ ನಿಶ್ಚಯ ನಿಶ್ಚಲವಿಶ್ವಾಸ ಸಮರಸವಾದುದೆ ಗುರುಲಿಂಗ. ಮತ್ತಾ ಇಷ್ಟಲಿಂಗದಲ್ಲಿ ಎಚ್ಚರಿಕೆ ಸುಜನತ್ವ ಸಾವಧಾನ ಸನ್ನಹಿತ ಪ್ರಸನ್ನತ್ವ ಸಮರಸವಾದುದೆ ಶಿವಲಿಂಗ. ಮತ್ತಾ ಇಷ್ಟಲಿಂಗದಲ್ಲಿ ನಿಸ್ತರಂಗ ದೃಕ್ಕಿರಣೋದಯ ಹೃದಯಕುಹರ ಸ್ವಯಾನುಭಾವಾಂತರ್ಮುಖ ಸಮರಸವಾದುದೆ ಜಂಗಮಲಿಂಗ. ಮತ್ತಾ ಇಷ್ಟಲಿಂಗದಲ್ಲಿ ಪರವಶ ಗೂಢ ಏಕಾಗ್ರಚಿತ್ತ ಉತ್ತರಯೋಗ ಪರಿಪೂರ್ಣಭಾವ ಸಚ್ಚಿದಾನಂದ ಸಮರಸವಾದುದೆ ಪ್ರಸಾದಲಿಂಗ. ಮತ್ತಾ ಇಷ್ಟಲಿಂಗದಲ್ಲಿ ಮನೋಲಯ ಭಾವಾದ್ವೈತ ಅನುಪಮ ಚಿತ್ತಾತ್ಮಿಕದೃಷ್ಟಿ ಸುನಾದ ಭೋಜ್ಯ ಸಮರಸವಾದುದೆ ಮಹಾಲಿಂಗ. ಇಂತಪ್ಪ ಮಹಾಲಿಂಗದಿಂದ ಪ್ರಸಾದಲಿಂಗ, ಪ್ರಸಾದಲಿಂಗದಿಂದ ಜಂಗಮಲಿಂಗ, ಜಂಗಮಲಿಂಗದಿಂದ ಶಿವಲಿಂಗ, ಶಿವಲಿಂಗದಿಂದ ಗುರುಲಿಂಗ, ಗುರುಲಿಂಗದಿಂದ ಆಚಾರಲಿಂಗ. ಆಚಾರಲಿಂಗದಲ್ಲಿ ಅನುಭಾವಿಯಾದಡೆ, ಇಪ್ಪತ್ತೈದು ಕರಣಂಗಳನರಿದಾಚರಿಸಬೇಕು. ಗುರುಲಿಂಗದಲ್ಲಿ ಅನುಭಾವಿಯಾದಡೆ, ಇಪ್ಪತ್ತು ಕರಣಂಗಳನರಿದಾಚರಿಸಬೇಕು. ಶಿವಲಿಂಗದಲ್ಲಿ ಅನುಭಾವಿಯಾದಡೆ, ಹದಿನೈದು ಕರಣಂಗಳನರಿದಾಚರಿಸಬೇಕು. ಜಂಗಮದಲ್ಲಿ ಅನುಭಾವಿಯಾದಡೆ, ಹತ್ತು ಕರಣಂಗಳನರಿದಾಚರಿಸಬೇಕು. ಪ್ರಸಾದಲಿಂಗದಲ್ಲಿ ಅನುಭಾವಿಯಾದಡೆ, ಐದು ಕರಣಂಗಳನರಿದಾಚರಿಸಬೇಕು. ಮಹಾಲಿಂಗದಲ್ಲಿ ಅನುಭಾವಿಯಾದಡೆ, ಎಲ್ಲಾ ಕರಣಂಗ?ನರಿದಾಚರಿಸಬೇಕು. ಇಂತಪ್ಪ ಮಹಾಲಿಂಗವೆ ಇಷ್ಟಲಿಂಗವಾಗಿ, ಆ ಇಷ್ಟಲಿಂಗದ ಗಂಧಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಆಚಾರಲಿಂಗಭೋಗಿ. ಮತ್ತಾ ಇಷ್ಟಲಿಂಗದ ರಸಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಗುರುಲಿಂಗಭೋಗಿ. ಮತ್ತಾ ಇಷ್ಟಲಿಂಗದ ರೂಪುಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಶಿವಲಿಂಗಭೋಗಿ. ಮತ್ತಾ ಇಷ್ಟಲಿಂಗದ ಸ್ಪರ್ಶನಂಗಳಾರು ಮುಖಂಗಳಾಗಿ ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಜಂಗಮಲಿಂಗಭೋಗಿ. ಮತ್ತಾ ಇಷ್ಟಲಿಂಗದ ಶಬ್ದಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳ್ಳಬಲ್ಲನಾಗಿ ಪ್ರಸಾದಲಿಂಗಭೋಗಿ. ಮತ್ತಾ ಇಷ್ಟಲಿಂಗದ ಪರಿಣಾಮಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಮಹಾಲಿಂಗಭೋಗಿ. ಇಂತಪ್ಪ ಮಹಾಲಿಂಗವೆ ಇಷ್ಟಲಿಂಗವಾಗಿ, ಆ ಇಷ್ಟಲಿಂಗದ ಸದ್ಯೋಜಾತಮುಖವಪ್ಪ ಪ್ರಾಣಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ವಾಮದೇವಮುಖವಪ್ಪ ಜಿಹ್ವೆಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ಅಘೋರಮುಖವಪ್ಪ ನೇತ್ರಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ತತ್ಪುರುಷಮುಖವಪ್ಪ ತ್ವಕ್ಕುಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ಈಶಾನಮುಖವಪ್ಪ ಶ್ರೋತ್ರಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ಗೋಪ್ಯಮುಖವಪ್ಪ ಹೃದಯಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ. ಇಂತಪ್ಪ ತೃಪ್ತಿಪದಾರ್ಥಂಗಳಾರು, ಶಬ್ದಪದಾರ್ಥಂಗಳಾರು, ಸ್ಪರ್ಶನಪದಾರ್ಥಂಗಳಾರು, ರೂಪುಪದಾರ್ಥಂಗಳಾರು, ರಸಪದಾರ್ಥಂಗಳಾರು, ಗಂಧಪದಾರ್ಥಂಗಳಾರು. ಇಂತೀ ಗಂಧಪದಾರ್ಥಂಗಳಾರನು ಘ್ರಾಣಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ರಸಪದಾರ್ಥಂಗಳಾರನು ರುಚಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ರೂಪುಪದಾರ್ಥಂಗಳಾರನು ನಿರೀಕ್ಷಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ಸ್ಪರ್ಶನ ಪದಾರ್ಥಂಗಳಾರನು ಸೋಂಕಿಸುವಲ್ಲಿ ಅಷ್ಟಾದಶಲಿಂಗಶೇಷ ಭುಕ್ತನಾಗಿ, ಶಬ್ದಪದಾರ್ಥಂಗಳಾರನು ಲಾಲಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ತೃಪ್ತಿಪದಾರ್ಥಂಗಳಾರನು ಪರಿಣಾಮಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ಅರ್ಪಿತ ಪ್ರಸಾದ ಅವಧಾನ ಸ್ಥಳಕು? ಅನುಭಾವ ಆಚರಣೆ ಇಂತಿವೆಲ್ಲವನು ಇಷ್ಟಲಿಂಗದಲ್ಲಿಯೆ ಕಂಡು ಸುಖಿಸುತ್ತಿರ್ಪ ಮಹಾಮಹಿಮನ ನಾನೇನೆಂಬೆನಯ್ಯಾ ! ಇಂತಪ್ಪ ಮಹಾಮಹಿಮನೊಳಕೊಂಡಿಪ್ಪ ಇಷ್ಟಬ್ರಹ್ಮವ ನಾನೇನೆಂಬೆನಯ್ಯಾ ! ಫಲ ಪತ್ರ ಕುಸುಮ ರಸ ಗಂಧ ಕಾರ ಒಗರು ಹುಳಿ ಮಧುರ ಇಂತಿವೆಲ್ಲಕ್ಕೂ ಜಲವೊಂದೆ ಹಲವು ತೆರನಾದಂತೆ, ಮಸೆದ ಕೂರಲಗು ಮೊನೆ ಮೊನೆಗೆ ಬಂದಾನುವಂತೆ, ರಸಘುಟಿಕೆಯೊಂದೆ ಸಹಸ್ರ ಮೋಹಿಸುವಂತೆ, ಬಂಗಾರವೊಂದೆ ಹಲವಾಭರಣವಾದಂತೆ, ಹತ್ತೆಂಟುಬಾಯ ಹುತ್ತದೊಳಗೆ ಸರ್ಪನೊಂದೆ ತಲೆದೋರುವಂತೆ ಹಲವು ಕರಣಂಗಳ ಕೊನೆಯ ಮೊನೆಯ ಮೇಲೆ ತೊ?ಗಿ ಬೆಳಗುವ ಪರಂಜ್ಯೋತಿರ್ಲಿಂಗವು ! ಅನುಪಮ ಅದ್ವಯ ವಾಙ್ಮನೋತೀತ ಅವಿರಳ ಅಪ್ರಮೇಯ ಚಿನ್ಮಯ ನಿರಾವರಣ ನಿರುತ ನಿರ್ಗುಣ ನಿರ್ಭೇದ್ಯ, ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಸರ್ವಾಂಗಲಿಂಗಿ.
--------------
ಚನ್ನಬಸವಣ್ಣ
ಅರಿದೆನೆಂಬನ ಅರಿವೆ ನುಂಗಿತ್ತು. ಮರೆದೆನೆಂಬನ ಮರಹೆ ನುಂಗಿತ್ತು. ಇನ್ನೇನಿದ್ದುದಯ್ಯಾ ಅವಧಾನಗೆಟ್ಟು ನಡೆಯದನ್ನಕ್ಕ ! ಅರಿವಿನ ಮರಹಿನ ಕುರುಹು ತಾನಲ್ಲ, ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ವಿಷಯ ವಿರಕ್ತನಾಗಿ ದೃಢ ಭಕ್ತಿಯಿಂದ ಸದ್ಗುರು ಚರಣಕ್ಕೆ ಶರಣಾಗತಿ ಹೊಕ್ಕು ನಿರ್ಮಲನಾಗಿ ತತ್ಸನ್ನಿಧಿಯಲ್ಲಿ ನಿಂದು ತನ್ನನರಿಯಲೆಂದು ಬಂದು, ತಾನಾ ಅರಿವೆ ಮೈಯಾಗಿ, ಅರಿಯೆ ನಾನೆನ್ನದೆಂಬ ಮರವೆಯನರಿವುದು. ಸನ್ಮಾತ್ರ ತನು ತಾನಲ್ಲೆಂಬರಿವು ತಾನಲ್ಲವೆ? ಚಿನ್ಮಯ ಚೋದ್ಯ ರೂಪನಲ್ಲವೆ? ನಿರವಯ ನಿರ್ಗುಣ ತಾನೇತರಿಂದ ನೋವವನಲ್ಲೆಂದನಲಾನಂದಮಯ. ಮಿಥ್ಯೆಯಿಂ ಕೆಡುವುದು ಸಕಲ ಜಗವು. ಸತ್ಯವೆನಗೆ ಕೇಡಿಲ್ಲೆಂದರಿಯಲು ನಿತ್ಯಪದ. ಸರ್ವಭಾವ ಹುಸಿ ತೋರದೆ ನಿಂದ ನಿಲವದು ಪರಿಪೂರ್ಣಸತ್ಯ, ನಂಬು, ನಿನ್ನ ನೀ ತಿಳಿದು ನೋಡೆ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇನ್ನಷ್ಟು ... -->