ಅಥವಾ

ಒಟ್ಟು 341 ಕಡೆಗಳಲ್ಲಿ , 77 ವಚನಕಾರರು , 298 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಾತ್ಮನು ಸ್ವಲೀಲಾನಿಮಿತ್ತ ಸಾಕಾರಸ್ವರೂಪನಾಗಿ, ಪಂಚವಕ್ತ್ರ ದಶಭುಜಂಗಳನು ಧರಿಸಿ, ತನ್ನ ನಿಜಧರ್ಮವನೆ ತನಗಾಧಾರಮಪ್ಪ ವಾಹನಮಂ ಮಾಡಿಕೊಂಡು, ಪಂಚಮುಖಂಗಳಲ್ಲಿ ಪಂಚಭೂತಂಗಳಂ ಸೃಷ್ಟಿಸಿ, ಅವನೇ ಬಂದು ಬ್ರಹ್ಮಾಂಡವಂ ಮಾಡಿಕೊಂಡು, ತನ್ನ ಲೀಲಾಶಕ್ತಿಯ ಸಂಗದಿಂದ ಅನಂತಕೋಟಿ ಜೀವಂಗಳಂ ಸೃಷ್ಟಿಸಿ, ತನ್ನ ಗೂಢಮಪ್ಪ ಮನೋಭಂಡಾರವಂ ತೆಗೆದು, ಆ ಜೀವಂಗಳಿಗದನೇ ಜೀವನವಂ ಮಾಡಿ, ಈ ಬ್ರಹ್ಮಾಂಡವೆಂಬ ತನ್ನ ಪಟ್ಟಣಕ್ಕೂ ಈ ಜೀವಜಾಲಕ್ಕೂ ನಿಜಮನೋಭಂಡಾರವನೆ ಆಧಾರಮಂ ಮಾಡಿ, ತಾನೇ ಸೇವ್ಯನಾಗಿ, ಜೀವಂಗಳೇ ಸೇವಕರಾಗಿ ಕ್ರೀಡಿಸುತ್ತಿರಲಾ ಪರಮಾತ್ಮನಿಂದ ಸಲಿಗೆವಡೆದ ಕೆಲವು ಜೀವಂಗಳು ಅಹಂಕರಿಸಿ, ಆ ಪರಶಿವನಲ್ಲಿರ್ಪ ಮನೋಭಂಡಾರದಲ್ಲಿ ತಮ್ಮ ಶಕ್ತಿಗೆ ತಕ್ಕಷ್ಟು ಸತ್ಕರಿಸಿಕೊಂಡು, ತದ್ವಂಚನಾಮನದಿಂ ಪಂಚಭೂತಂಗಳನ್ನು ಸಾದ್ಥಿಸಿ, ಅದರಿಂದ ಒಂದು ಪಿಂಡಾಂಡವೆಂಬ ಪಟ್ಟಣಮಂ ಮಾಡಿಕೊಂಡು, ಇಂದ್ರಿಯಂಗಳೆಂಬ ಕೊತ್ತಲಂಗಳಂ ನಿರ್ಮಿಸಿ, ನವದ್ವಾರಂಗಳೆಂಬ ಹುಲಿಮುಖಂಗಳಿಂದ ಅಜ್ಞಾನವೆಂಬತಿ ಘಾತಮಾದಗಳಂ ಕಲ್ಪಿಸಿ, ಆಶೆಯೆಂಬಾಳ್ವೇರಿಯಂ ಸೃಜಿಸಿ, ತನ್ಮಧ್ಯದಲ್ಲಿ ಅಂತರಂಗವೆಂಬುದೊಂದು ಅರಮನೆಯಂ ಕಟ್ಟಿ, ಅಲ್ಲಿದ್ದುಕೊಂಡು, ಜೀವನು ತನ್ನ ಮನೋವಂಚನಾಭಂಡಾರವಂ ವೆಚ್ಚಿಸುತ್ತಾ, ವಿಷಯಂಗಳೆಂಬ ಮನ್ನೆಯರಂ ಸಂಪಾದಿಸಿ, ನಿಜಪುರದ್ವಾರಂಗಳಲ್ಲಿ ಕಾಹನಿಟ್ಟು, ಅಂತಃಕರಣಚತುಷ್ಟಯವೆಂಬ ಶಿರಃಪ್ರಧಾನರಂ ಸಂಪಾದಿಸಿ, ತನ್ಮಂತ್ರಾಲೋಚನೆಯಿಂ ಸಾಮ, ಭೇದ, ದಾನ, ದಂಡವೆಂಬ ಕರಿ, ತುರಗ, ರಥ, ಪದಾತಿಗಳಂ ಕೂಡಲಿಟ್ಟು, ಕರ್ಮವೆಂಬ ಸೇನಾನಿಗೆ ಪಟ್ಟಮಂ ಕಟ್ಟಿ, ತನ್ನಲ್ಲಿರ್ಪ ನಾನಾ ದಳಂಗಳಂ ಸೇನಾಪತಿಯ ವಶಮಂ ಮಾಡಿ, ನಾದ ಬಿಂದು ಕಳೆಗಳೆಂಬ ಶಕ್ತಿಗಳಂ ಪರಿಣಯಮಾಗಿ, ಜಾಗ್ರತ್ಸ್ವಪ್ನಸುಷುಪ್ತಿಗಳೆಂಬರಮನೆಗಳೊಳಗೆ ಕಳೆಯ ನಾದದಲ್ಲಿ ಕೆಲವುತ್ತಂ, ಬಿಂದುವಿನಲ್ಲಿ ಫಲಿಸಿ ಫಲಸುಖಂಗಳನನುಭವಿಸುತಿರ್ಪ ಜೀವನೆಂಬರಸಿನನುಮತವಿಡಿದು, ಕರ್ಮಸೇನಾನಿಯು ಸಕಲದಳಂಗಳೊಳಗೆ ಕೂಡಿ, ವಿಷಯಂಗಳೆಂಬ ಮನ್ನೆಯರಂ ಮುಂದುಮಾಡಿಕೊಂಡು, ಪ್ರಪಂಚವೆಂಬ ರಾಜ್ಯವಂ ಸಾದ್ಥಿಸಿ, ತದ್ರಾಜ್ಯದಲ್ಲಿ ಬಂದ ಪುತ್ರ ಮಿತ್ರ ಕಳತ್ರ ಧನ ಧಾನ್ಯ ವಸ್ತುವಾಹನಾಲಂಕಾರಾದಿಗಳನ್ನು ಕಾಯಪುರಕ್ಕೆ ತಂದು, ಜೀವನೆಂಬರಸಿಗೆ ಒಪ್ಪಯಿಸುತ್ತಿರಲು, ಜೀವನು ಸಂತೋಷಿಸಿ, ತಾನು ಸಂಪಾದಿಸಿದ ಸಕಲದ್ರವ್ಯವನ್ನು ತನ್ನ ಮೂಲಮನೋಭಂಡಾರದಲ್ಲಿ ಬೆರಸಿ, ಬಚ್ಚಿಟ್ಟು, ಅಹಂಕರಿಸಿ, ಸಕಲಕ್ಕೂ ತಾನೇ ಕರ್ತೃವೆಂದು ಬೆರತು, ಪರಮಾತ್ಮನಂ ಮರೆತು, ಸೇವ್ಯಸೇವಕರೆಂಬ ವಿವೇಕವರತು, ಅಧರ್ಮ ವಾಹನಾರೂಢನಾಗಿ, ತನ್ನ ತಾನರಿಯದೆ, ಕಾಮವಶನಾಗಿ ಸಂಚರಿಸುತಿರ್ಪ ಈ ಜೀವನ ಅಹಂಕಾರಮಂ ಸಂಹರಿಸುವ ನಿಮಿತ್ತವಾಗಿ ಪರಮಾತ್ಮನು ಕಾಲನೆಂಬ ಸುಬೇದಾರನಂ ಸೃಷ್ಟಿಸಿ, ವ್ಯಾದ್ಥಿಪೀಡನಗಳೆಂಬ ಬಲಂಗಳಂ ಕೂಡಲಿಟ್ಟು, ದುಃಖವೆಂಬ ಸಾಮಗ್ರಿಯಂ ಒದಗಿಸಿಕೊಟ್ಟು, ಕ್ರೋಧವೆಂದು ಮನೆಯಾಳಿಂಗೆ ತಮೋಗುಣಂಗಳೆಂಬ ಬಲುಗಾರರಂ ಕೂಡಿಕೊಟ್ಟು, ಈ ಕಾಯಪುರಮಂ ಸಾದ್ಥಿಸೆಂದು ಕಳುಹಲು, ಆ ಸದಾಶಿವನಾಜ್ಞಾಶಕ್ತಿಯಿಂದ ಕಾಲಸುಭೇದಾರನು ಸಕಲ ಬಲಸಮೇತವಾಗಿ ಬಂದು, ಕಾಯಪುರಕ್ಕೆ ಸಲುವ ಪ್ರಪಂಚರಾಜ್ಯವಂ ನೆರೆಸೂರೆಮಾಡಲು, ಕರಣಂಗಳೆಂಬ ಪ್ರಜೆಗಳು ಕೆಟ್ಟೋಡಿಬಂದು, ಜೀವನೆಂಬ ಅರಸಿಗೆ ಮೊರೆಯಿಡಲು, ಅದಂ ಕೇಳಿ, ಆಗ್ರಹಪಟ್ಟು, ಕರ್ಮಸೇನಾನಿಗೆ ನಿರೂಪಿಸಲು, ತತ್ಸೇನಾನಿಯು ಕಾಯಪುರದಲ್ಲಿರ್ಪ ಸಕಲದಳ ಸಮೇತಮಾಗಿ ಬಂದು ಕಾಲಸುಬೇದಾರನೊಡನೆ ಯುದ್ಧವಂ ಮಾಡಿ, ಜಯಿಸಲಾರದೆ ವಿಮುಖನಾಗಿ ಉಪಭೋಗಾದಿ ಸಕಲ ಸುಖಂಗಳಂ ಕೋಳುಕೊಟ್ಟು ಬಂದು ಕೋಟೆಯಂ ಹೊಗಲು, ಜೀವನು ಪಶ್ಚಾತ್ತಾಪದಿಂ ಸಂಶಯಯುಕ್ತನಾಗಿ ಕಳವಳಿಸುತ್ತಿರಲು, ಆ ಕಾಲಸುಬೇದಾರನು ಕಾಯಪುರಮಂ ಒತ್ತರಿಸಿ ಮುತ್ತಿಗೆಯಂ ಹಾಕಿ, ವಿಷಯಮನ್ನೆಯರಂ ಹಸಗೆಡಿಸಿ ಕೊಂದು, ಕರ್ಮವಂ ನಿರ್ಮೂಲವಂ ಮಾಡಿ, ಅಂತರಂಗ ಮನೆಯಂ ಕೊಳ್ಳೆಯವಂ ಮಾಡಿ, ನಾದಬಿಂದುಕಳಾಶಕ್ತಿಯಂ ಸೆರೆವಿಡಿದು, ಕಾಯಪುರಮಂ ಕಟ್ಟಿಕೊಳ್ಳಲು, ಜೀವನು ಭಯಭ್ರಾಂತನಾಗಿ, ಆ ಮೂಲಮನೋಭಂಡಾರಮಾತ್ರಮಂ ಕೊಂಡು, ತತ್ಪುರಮಂ ಬಿಟ್ಟು, ಅನೇಕ ಯಾತನೆಪಟ್ಟು ಓಡಿ, ಮರಳಿಮರಳಿ ಜೀವನು ಪುರಂಗಳಂ ಸಂಪಾದಿಸಲು, ತತ್ಸಂಪಾದಿತಪುರಂಗಳಂ ಕಾಲನು ಸಾದ್ಥಿಸುತ್ತಿರಲು, ಜೀವನು ಅಹಂಕಾರವಳಿದು, ಆಸ್ಪದವಿಲ್ಲದೆ, ತನಗೆ ಕರ್ತೃವಾರೆಂಬುದಂ ಕಾಣದೆ, ವಿಚಾರಪಟ್ಟು ದುಃಖಿಸುತಿರ್ಪ ಜೀವನಿಗೆ ಕರುಣದಿಂ ಪರಮಾತ್ಮನು ಜ್ಞಾನದೃಷ್ಟಿಯಂ ಕೊಡಲು, ತದ್ಬಲದಿಂ ಶಿವನೇ ಕರ್ತೃ ತಾನೇ ಭೃತ್ಯನೆಂಬುದಂ ತಿಳಿದು, ಶಿವಧ್ಯಾನಪರಾಯಣನಾಗಿ, ಶಿವಧಾರಣ ಧರ್ಮಪದಮಂ ಪಿಡಿದು ಪಲುಗುತ್ತಿರಲು, ತದ್ಧರ್ಮಮೇ ಗುರುರೂಪಮಾಗಿ, ತನ್ನಲ್ಲಿರ್ಪ ಶಿವನಂ ಜೀವಂಗೆ ತೋರಿಸಲು, ಜೀವಂ ಹಿಗ್ಗಿ, ತಾನು ಸಂಪಾದಿಸಿದ ಪುರವನೆ ಶಿವಪುರಮಂ ಮಾಡಿ, ಧರ್ಮಾದಿ ಸಕಲವಿಷಯಬಲಂಗಳಂ ಶಿವನ ವಶಮಂ ಮಾಡಿ, ಆ ಪಟ್ಟಣದೊಳಯಿಂಕೆ ಬಿಜಯಂಗೈಸಿಕೊಂಡು ಹೋಗಿ, ಅಂತರಂಗದ ಅರಮನೆಯೊಳಗೆ ಜ್ಞಾನಸಿಂಹಾಸನದ ಮೇಲೆ ಕುಳ್ಳಿರಿಸಿ, ಪಟ್ಟಮಂ ಕಟ್ಟಿ, ತನ್ನ ಸರ್ವಸ್ವಮಂ ಶಿವನಿಗೆ ಸಮರ್ಪಿಸಿ, ತಾನು ಸತ್ಕರಿಸಿಕೊಂಡುಬಂದ ಮನೋಭಂಡಾರಮಂ ಶಿವನಡಿಯಂ ಸೇರಿಸಲು, ಸದಾಶಿವನು ಪ್ರಸನ್ನಮುಖನಾಗಿ, ದಯೆಯಿಂ ಪರಿಗ್ರಹಿಸಿ, ಜೀವನನು ಸಜ್ಜೀವನನಮಾಡಿ ಕೂಡಿಕೊಂಡುದೆ ಲಿಂಗೈಕ್ಯ ಕಾಣಾ | ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಫಲಪದಾದಿಗಳ ಭಕ್ತರಿಗೆ ಕೊಟ್ಟೆನೆಂದೆಂಬೆ; ಅವರವನೊಲ್ಲರು! ಅವರು ನಿನಗೆ ನಿನ್ನ ರೂಪಿಂಗೆ ತನುಮನಧನಾದಿಗಳ ಕೊಡುವರು. ಎಲೆ ವಂಚಕನಾದ ಶಿವನೆ, ನಿರ್ವಂಚಕರೆಮ್ಮವರು! ನಿನ್ನನೇನ ಬೇಡುವರವರು? ನೀನೇನನವರಿಗೆ ಕೊಡುವೆ? ನಿನ್ನ ಕೊಡನೆಮ್ಮವರೊಲ್ಲರು ಕಾಣಾ, ಕೊಡು, ಕೊಡದೆ ಹೋಗು, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಬಲ್ಲೆನೆಂಬ ಮದದಲ್ಲಿ ಅರಿದೆನೆಂಬ ಮಹಾಮದವಂ ಕೊಂಡು, ಅಹಂಕಾರವೆಂಬ ಮದ, ಸರ್ವಾಂಗ ವೇದ್ಥಿಸಿ ತಲೆಗೇರಿದಲ್ಲಿ, ಸತ್ತೆಂಬುದನರಿಯದೆ, ಚಿತ್ತೆಂಬುದ ತಿಳಿಯದೆ, ಆನಂದವೆಂಬ ಆಶ್ರಯವ ಭಾವಿಸಿ ನೋಡದೆ, ಸ್ಥೂಲಸೂಕ್ಷ್ಮಕಾರಣವೆಂಬ ತನುತ್ರಯದ ಭೇದವ ಕಾಣಲರಿಯದೆ, ಅಂಡಪಿಂಡವೆಂಬ ಖಂಡಿತವ ತಿಳಿಯಲರಿಯದೆ, ದಿಂಡೆಯತನದಿಂದ ಕಂಡೆನೆಂದಡೆ, ಅದು ತಾ ಕೊಂಡ ಮೂರು ಹೆಂಡದ ಗುಣವೆಂದೆ, ಧರ್ಮೇಶ್ವರಲಿಂಗದ ಸಂಗವಲ್ಲಾಯೆಂದೆ.
--------------
ಹೆಂಡದ ಮಾರಯ್ಯ
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜರಿ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !
--------------
ಚನ್ನಬಸವಣ್ಣ
ಭಕ್ತನಾದ ಮತ್ತೆ ಬಂಧಗಳ ಬಿಡಬೇಕು. ವಿರಕ್ತನಾದ ಮತ್ತೆ ಧರಿತ್ರಿಯಲ್ಲಿ ಸುಖಕ್ಕೆ ಸಿಕ್ಕಿ ಮತ್ತನಾಗದಿರಬೇಕು. ಇಕ್ಕುವರ ಬಾಗಿಲ ಕಾಯದೆ, ಸುಚಿತ್ತದಿಂದ ಬಂದ ಬ್ಥಿಕ್ಷವ ಕೊಂಡು, ಅನಿತ್ಯವ ಮರೆದು, ಸತ್ತುಚಿತ್ತಾನಂದ ಭಕ್ತ ಜಂಗಮಕ್ಕೆ ನಿತ್ಯ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನ್ನ ನೇಮಿಸಿ ಕಳಿವಿದಖಂಡಪರಶಿವನು ತನ್ನಿಂದೆ ತಾ ಬಂದು ನಿಂದಲ್ಲಿ, ತನತನಗೆ ಬಂದ ಬಂಧವನರಿದು ಹಿಂದುಮುಂದರಿಯದೆ ಚಂದಚಂದದಲಿ ಅರ್ಪಿಸಿಕೊಂಡು ಸುಖಿಸುವನಲ್ಲದೆ, ಒಂದನರಿಯದೆ ಸಂದವರೆಂದು, ಬಂದ ಬಂದ ಪದಾರ್ಥವನು, ಸಂದ್ಥಿ ಸಂದ್ಥಿಸಿ ಕೊಟ್ಟು ಕೊಂಡು, ಬೆಂದುಹೋಗುವ ಮಂದಮತಿಯಂತಲ್ಲ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಪ್ರಸಾದಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಾದೋದಕ ಪ್ರಸಾದವ ಕೊಂಡು ಪ್ರಪಂಚವ ಮಾಡುವ ಪರಸತಿಯರ ಸಂಗವ ಮಾಡುವ ಪಂಚಮಹಾಪಾತಕರು ನೀವು ಕೇಳಿರೊ. ಪಂಚಮಹಾಪಾತಕವ ಬಿಟ್ಟದ್ದೇ ಪಾದೋದಕ. ಅಲ್ಲದಿದ್ದಡೆ ಮುಂದೆ ನಿಮ್ಮ ಬಾದ್ಥಿಸುವದಕ್ಕೆ ಕಾದಸೀಸ. ಪ್ರಸಾದವೆ ಮುಂದೆ ನಿಮ್ಮ ಪೊರೆವುದಕ್ಕೆ ಪರುಷ. ಪ್ರಪಂಚ ಮುಂದೆ ನಿಮ್ಮ ಪಾಕುಳಕ್ಕೆ ಹಾಕುವುದು. ಪರಸ್ತ್ರೀಯರ ಸಂಗವೆ ಮುಂದೆ ನಿಮಗೆ ಉರಿಗಿಚ್ಚು, ಇರಿವ ಸುರಗಿ. ಇಂತಿವ ಬಿಟ್ಟು ಭಕ್ತ ವಿರಕ್ತನಾಗಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ನಂಬಿದರೆ ಪರಶಿವ ನಮಗೊಲಿವ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪಿಂಡವಾಯಿತ್ತು ನಾದಬಿಂದು ಕಳೆಗಳ ಕೂಡಿ ಕೊಂಡು ಸ್ವರೂಪ ತತ್ವವಿಡಿದು ಚೆನ್ನಾಗಿ ಧರೆಯಿಂದಲೆದು ಕರ್ಮೇಂದ್ರಿಯಂಗಳ ಜನನ ಸರಸದಿಂದ ಪಂಚವಿಷಯಂಗಳುತ್ಪತ್ಯ ಮೇಣ್ ಉರಿಯಿಂದ ಬುದ್ಧೀಂದ್ರಿಯಂಗಳಾದವು ನೋಡಿರೆ. ಮರುತನಿಂದೈದು ಪ್ರಾಣವಾಯುಗಳ ಜನನ ಹಿರಿದಪ್ಪ ಗಗನದಲ್ಲಿ ಚತುರ ಕರಣವು ಆತ್ಮ ನೆರೆ ಕೂಡಿ ಪಂಚವಿಂಶತಿತತ್ವವಿಡಿದು. | 1 | ಆರೂರ್ಮೆ ಏಳುಧಾತೈದುವಿಂಶತಿ ಅಂಶ ಈ ಮೂರು ತನುಗುಣವು ಇಪ್ಪತ್ತೈದು ಎರಡಂಗ ಆರು ಚಕ್ರವು ಕಮಲದೈವತ್ತೊಂದರಕ್ಷರಗಳಿಂ ವಾರಿಜ ದಾಕ್ಷಾಯಣಿ ಹರಿ ರುದ್ರ ಈಶ್ವರ ಮೀರಿದ ಸದಾಶಿವನದ್ಥಿದೈವಂಗಳು, ನವದ್ವಾರ ಚೆನ್ನಾಗಿ ಸಕಲಾರಂಭತತ್ವವಿಡಿದು. | 2 | ಮೂರು ಕರ್ಮಗಳು ಏಳ್ನೂರು ಎಪ್ಪುತ್ತು ಲೊ ಓರಣದ ಕರಣದ ಕರಣ ಅರುವತ್ತಾರು ಕೋಟಿಯಂ ಮೂ [ರಾ]ರು ಗುಣ ಅಂತರಂಗದಷ್ಟವೇದವು ಸಹಿತದ ಮೂರು ಮಲ ದಶವಾಯು ಅಂಗದೊಳು ಚರಿಸುತಿಹ ಮಾರುತ ಮನ ಮಂತ್ರಿ ಪ್ರಾಣ ನಾಯಕನರಸು ಶ ರೀರ ಜಗದೊಳುತ್ಪತ್ಯವಾಗಿದೆ ದೇವ. | 3 | ನೆಲ ನೀರು ಶಿಲೆಯಿಂದ ಬಿತ್ತಿಗಟ್ಟಿಯೆ ಅದನು ಸಲೆ ಗೋಮಯದಿ ಶುದ್ಧಮಾಡಿ ಸಾರಿಸುವಂತೆ ಎಲು ಚರ್ಮ ನರ ತೊಗಲು ಮಾಂಸ ಮಜ್ಜೆಯ ಕೂಡಿಯೆ ಚೆಲುವಾಗಿ ಈ ಕಾಯ ಗಾಳಿ ತುಂಬಿ ವೃಕ್ಷ ಉಲಿವಂತೆ ಶಿವಬೀಜವ ಚೈತನ್ಯದಿಂದಲಿ ಇಳೆಗೆ ತೋರುತಿರೆ ನೋಡಿದ ತಿಳಿಯಿರಣ್ಣ. | 4 | ಆದಿ ಮಧ್ಯ ಅಂತ್ಯ ಭಾಂಡದೊಳು ಶಿವ ತಾನೆ ಆದಿಯಾಗಿಯೆ ನೆಲದ ಮರೆಯಲ್ಲಿಹ ಧನದಂತೆ ಭೇದಿಸದೆಯಿಪ್ಪ ಭೇದವನಾರು ಅರಿಯರಲ್ಲ ಅಭೇದ್ಯಗುರು ಪಡುವಿಡಿ ಸಿದ್ಧಮಲ್ಲಿನಾಥನ ಪಾದವಿಡಿದ ತನುವು ಸುಕೃತದೇಹಿಯಾಗಿ ಮೇದಿನಿಗೆ ತೋರುತಿದೆ ಶಿವಶರಣರಿದ ತಿಳಿಯರೆ. | 5 |
--------------
ಹೇಮಗಲ್ಲ ಹಂಪ
ಹಸಿದಡೆ ಉಣಬಹುದೆ ನಸುಗುನ್ನಿ ತುರುಚಿಯನು ? ಅವಸರಕಿಲ್ಲದ ದೊರೆಗೆ ಅರ್ಥವಿದ್ದಲ್ಲಿ ಫಲವೇನು ? ಸಾಣೆಯ ಮೇಲೆ ಶ್ರೀಗಂಧವ ತೇವರಲ್ಲದೆ ಇಟ್ಟಿಗೆಯ ಮೇಲೆ ತೇಯಬಹುದೆ ? ರಂಭೆಯ ನುಡಿ ಸಿಂಬಿಗೆ ಶೃಂಗಾರವೆ ? ಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನಲ್ಲದೆ ಅಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನೆ ? ಸರೋವರದೊಳಗೊಂದು ಕೋಗಿಲೆ ಸ್ವರಗೆಯ್ಯುತ್ತಿದ್ದಡೆ ಕೊಂಬಿನ ಮೇಲೊಂದು ಕಾಗೆ ಕರ್ರೆನ್ನದೆ ?_ಅಂತೆ ಇದ್ದತ್ತು. ಬರದಲ್ಲಿ ಬರಡ ಕರೆದೆಹೆನೆಂದು, ಕಂದಲ ಕೊಂಡು ಹೋದರೆ, ಕಂದಲೊಡೆದು ಕೈ ಮುರಿದಂತಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವಂದಿಸಿ ನಿಂದಿಸಿ ಮತ್ತೆ ಅದಾರಿಂಗೆ ಕೇಡೆಂಬುದನರಿತು ತಾ ನೋಯಲೇತಕೆ? ಕಟ್ಟಿದ ತಟಾಕವನೊಡೆಯ ಕುಕ್ಕಿದ ಮತ್ತೆ ಆರನುಭವದ ನಷ್ಟ ಅದಾರಿಗೆ ಹೇಳಾ? ಭೂಮಿಯ ಬಡತನಕ್ಕೆ ಬೀಜವಿಲ್ಲ ಪತ್ರಭಾಜನ ಹಸಿಯಿತ್ತೆಂದು ಓಗರವಿಲ್ಲ. ಮಾಟಕೂಟದಲ್ಲಿ ಇಕ್ಕಿ ಎರೆದು ಕೊಟ್ಟು ಕೊಂಡು ಚಿತ್ತ ಶುದ್ಧವಿಲ್ಲಾಯೆಂದು ನುಡಿಯಲೇತಕ್ಕೆ? ಬೆಳೆದ ಬೆಳಸ ಕಳದಲ್ಲಿ ಕಡೆಗಾಣಿಸಿದ ಮತ್ತೆ ಹೋದ ಹೊಲಬ ಬಳಸಲೇತಕ್ಕೆ ತನ್ನ ತಾನರಿದು? ಜಗ ತನಗನ್ಯವಿಲ್ಲೆಂದು ಅರಿದ ಮತ್ತೆ ಪ್ರತಿಮೂದಲೆಗೊಡಲಿಲ್ಲ. ಆತ ಉಭಯ ಶುದ್ಧಾತ್ಮನು. ತ್ರಿಗುಣರಹಿತನು, ತ್ರಿಗುಣಾತ್ಮಭರಿತನು. ಆತ ಕೂಗಿನ ದನಿಗೆ ಹೊರಗು ಮಹಾಮಹಿಮ ಮಾರೇಶ್ವರಾ.
--------------
ಕೂಗಿನ ಮಾರಯ್ಯ
ನಿಚ್ಚ ನಿಚ್ಚ ಲಿಂಗಪೂಜೆಯ ಮಾಡಿ, ನಿಚ್ಚ ನಿಚ್ಚ ಜಂಗಮಕ್ಕೆ ಶರಣೆಂದು, ಜಂಗಮಪೂಜೆಯ ಮಾಡಿ, ನಿಚ್ಚ ನಿಚ್ಚ ಪಾದೋದಕ ಪ್ರಸಾದವ ಕೊಂಡು, ಮತ್ತೆ, ಆ ಜಂಗಮವ ದ್ಥಿಕ್ಕರಿಸಿ ನುಡಿದು, ಹುಸಿಯಟಮಟವನಾರೋಪಿಸಿ, ಜಂಗಮದ ಕೈಗೆ, ನಾಲಗೆಗೆ ಶಿಕ್ಷೆಯ ಮಾಡಬೇಕೆಂಬವರಿಗೆ ಗುರುವುಂಟೆ? ಲಿಂಗವುಂಟೆ? ಜಂಗಮವುಂಟೆ? ಪಾದೋದಕ ಪ್ರಸಾದವುಂಟೆ? ಇಲ್ಲವಾಗಿ. ಅವರಿಗೆ ಪೂಜಾಫಲ ಮುನ್ನವೆಯಿಲ್ಲವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ ಇನ್ನಾವುದು ವಿದ್ಥಿಯಯ್ಯಾ ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರಾಚರವೆಲ್ಲ. ಅದು ಕಾರಣ, ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು.
--------------
ಬಸವಣ್ಣ
ಇಷ್ಟಲಿಂಗವನರಿದು ಪೂಜೆಯ ಮಾಡಿ, ಪ್ರಾಣಲಿಂಗವನರಿದು ಪಥ್ಯದ ಕೊಂಡು, ಜಂಗಮವಾದೆವೆಂಬ ಮಿಥ್ಯತಥ್ಯದ ಅಣ್ಣಗಳು ಕೇಳಿರೊ. ಕೊಟ್ಟಾತಗುರು, ಕೊಂಡಾತ ಶಿಷ್ಯನೆಂದು ಜಗದಲ್ಲಿ ಅಂದಗಾರಿಕೆಯಲ್ಲಿ ನಡೆವ ಭಂಡರಿಗೇಕೆ ಲಿಂಗಾಂಗ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತದ್ದುತತುರಿ ಬಾವು ಬಗದಳ ಶೀತ ವಾತ ಬಹುಜ್ವರ ಹೊಟ್ಟೆಬೇನೆ ಕೆಟ್ಟ ಹುಣ್ಣು ಮೈಕುಷ್ಠ ಮೊದಲಾದ ಮುನ್ನೂರರುವತ್ತು ವ್ಯಾದ್ಥಿಗಳ, ಶಿವನು ಹರಿಯಬಿಟ್ಟು ನೋಡುವ. ಇವೆಲ್ಲ ಶಿವನ ಕರುಣವಾದಲ್ಲದೆ ಹೋಗವು. ಇದನರಿಯದೆ, ನಾರು ಬೇರ ನಚ್ಚಿದ ಅವಿದ್ಯ ಸಾಧಕರೆಲ್ಲ ಹತವಾಗಿ ಹೋದರಂದೆ. ಇಂತಿದ ವಿಚಾರಿಸಿ ತಿಳಿಯದೆ, ಲೋಕದ ಬುದ್ಧಿಗೇಡಿ ಮನುಜರು, ಸಜ್ಜನಶುದ್ಧಶಿವಾಚಾರಸಂಪನ್ನರಾದ ಜಂಗಮಲಿಂಗದ ಮಾತ ಕೇಳದೆ, ಅದ್ದನ ಜೋಳ, ಅರಪಾವು ಎಣ್ಣೆಯ ಕೊಂಡು, ನೋಟಕಾರ್ತಿಯ ಮನೆಗೆ ಹೋಗಿ, ಅವಳು ಹೇಳಿದ ತಾತುಭೂತದ ಕೋಟಲೆಯ ಕೈಕೊಂಡು ಬಂದು, ಅವಕ್ಕೂಟವನಟ್ಟಿಕ್ಕಿ,. ಮಿಕ್ಕಿದ ಕೂಳ ತನ್ನಿಷ್ಟಲಿಂಗಕ್ಕೆ ತೋರಿ ತಿಂಬ, ಲಿಂಗದ್ರೋಹಿಗಳಿಗೆ ಕುಂಬ್ಥೀಪಾತಕ ನಾಯಕನರಕ, ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಬಸವಣ್ಣ ಚನಬಸವಣ್ಮ ಪ್ರಭುದೇವ ಮಡಿವಾಳ ಮಾಚಯ್ಯಾ ಸಿದ್ಧರಾಮಯ್ಯ ಸೊಡ್ಡಳ ಬಾಚರಸರು ಹಡಪದಪ್ಪಣ್ಣ ಪಡಿಹಾರಿ ಉತ್ತಣ್ಣ ಅವ್ವೆ ನಾಗಾಯಿ ಕೋಲಶಾಂತಯ್ಯ ಡೋಹರ ಕಕ್ಕಯ್ಯ ಮೊಗವಾಡದ ಕೇಶಿರಾಜದೇವರು ಖಂಡೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಇನ್ನಷ್ಟು ... -->