ಅಥವಾ

ಒಟ್ಟು 32 ಕಡೆಗಳಲ್ಲಿ , 17 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಜಲ, ಕೂರ್ಮ, ಗಜ, ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು, ಅಗ್ನಿಗೆ ಕಳೆದೋರದಂದು, ತರು ಗಿರಿ ತೃಣ ಕಾಷಾ*ದಿಗಳಿಲ್ಲದಂದು, ಯುಗ ಜುಗ, ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು ತೋರುವ ಬೀರುವ ಭಾವದ ಪರಿ, ಭಾವದಲ್ಲಿ ಭರಿತ, ಆಗಮ್ಯ ಗುಹೇಶ್ವರ ನಿರಾಳವು !
--------------
ಅಲ್ಲಮಪ್ರಭುದೇವರು
ಬ್ರಹ್ಮಾಂಡದ ಧರೆಯ ಮೇಲೆ ಅರಿಬಿರಿದಿನ ಮಂತಣದ ಗಿರಿ ಹುಟ್ಟಿತ್ತು. ಆ ದುರ್ಗಕ್ಕೆ ಮೂವರು ದೊರೆಗಳು ಹುಟ್ಟಿದರು. ಒಬ್ಬ ನರಪತಿ, ಒಬ್ಬ ಸುರಪತಿ, ಒಬ್ಬ ಸಿರಿವುರಿಗೊಡೆಯ, ಮೂವರ ದುರ್ಗವೊಂದೆಯಾಗಿ ಸಂದೇಹಕ್ಕೆ ಈಡಾಗುತ್ತದೆ. ಸದಾಶಿವಮೂರ್ತಿಲಿಂಗ ಸಂಗವಾಗಿಯಲ್ಲದೆ ಆಗದು.
--------------
ಅರಿವಿನ ಮಾರಿತಂದೆ
ಧರೆಯ ಮೇಲಣ ಅರೆಯಲ್ಲಿ ಮೇರುಗಿರಿ ಹುಟ್ಟಿದುದ ಕಂಡೆನಯ್ಯ. ಗಿರಿಯ ಸನ್ನಿಧಿಯಲ್ಲಿ ವಜ್ರ ಉದಯಿಸಲು ಗಿರಿ ಕರಗಿ ಅರೆವೊಡೆದು, ಧರೆ ಬೆಂದು ಕಾಲಾಗ್ನಿ ಎದ್ದು ಉರಿವುತ್ತಿದೆ ನೋಡಾ. ಆ ಉರಿಯೇ ವಜ್ರದ ಪ್ರಭೆಯೆಂದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿಲಿಮಿಲಿ ಎಂದು ಓದುವ ಗಿಳಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಕೊಳನತಡಿಯೊಳಾಡುವ ಹಂಸೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಗಿರಿ ಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ.
--------------
ಅಕ್ಕಮಹಾದೇವಿ
ಒಂದಿಲ್ಲದಡೆ ಪರ್ವತ ಸಂಧಿಯದೇಕಯ್ಯಾ ಯತಿಗೆ? ಅಂದಾಶ್ರಯಿಸಿದ ಮಯೂರ ಚಂದವಾಯಿತ್ತೇನಯ್ಯಾ? ಇವೆಲ್ಲ ಬರಿಯ ಭ್ರಮೆ! ಸಂದಳಿದು ಇಂದುಧರ ತಾನಾಗಬಲ್ಲಡೆ, ಗಿರಿ ಗ್ರಾಮ ವನವಾಸದ ಗೊಂದಿ ಏಕಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಉರಿಯ ಫಣಿಯನುಟ್ಟು ಊರಿಂದ ಹೊರಗಿರಿಸಿ, ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವಾ. ತೂರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ ಬೆರಗಾಗಿ ನಿಲಲಾರೆನವ್ವಾ. ಆರವಸ್ಥೆ ಕರ ಹಿರಿದು ಎಲೆ ತಾಯೆ. ಗಿರಿ ಬೆಂದು ತರುವುಳಿದು ಹೊನ್ನರಳೆಯ ಮರನುಲಿವಾಗ ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನನ.
--------------
ಅಕ್ಕಮಹಾದೇವಿ
ಹರಿ ಬ್ರಹ್ಮ ಇಂದ್ರ ಚಂದ್ರ ರವಿ ಕಾಲ ಕಾಮ ದಕ್ಷ ಇವರೊಳಗಾದ ಸಮಸ್ತ ದೇವ ದಾನವ ಮಾನವರೆಲ್ಲರು ಶಿವಲಿಂಗದೇವರನಾರಾಧಿಸಿಹೆವೆಂದು, ಜಪ ಧ್ಯಾನ ಮೌನಾದಿ ತಪ ನಾನಾವ್ರತ ನೇಮಂಗಳಂ ಕೈಕೊಂಡು, ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ ಅನೇಕ ಫಲಪದಮುಕ್ತಿಯಂ ಪಡೆದು ಭೋಗಿಸಿ ಸುಖಿಯಾಗಿರುತಿಹುದಕ್ಕೆ ಸಂಶಯವೇಕೆ ? ಶ್ರುತ ದೃಷ್ಟ ಅನುಮಾನದಿಂ ತಿಳಿದುನೋಡಿ ಅದಕೇನೂ ಸಂದೇಹಂ ಬಡಲಿಲ್ಲಯ್ಯಾ. ಎರಡಿಲ್ಲದೆ ಏಕವಾದ, ಭಿನ್ನದೋರದೆ ಶಿವನಂಗವಾದ ಶಿವಭಕ್ತನು ಇದರಂತೆ ಅಲ್ಲ. ಜಪ ತಪ ಧ್ಯಾನ ಮೌನ ನಾನಾವ್ರತನಿಯಮಂಗಳಂ ಕೈಕೊಂಡು ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ ಅನೇಕ ಫಲಪದಮುಕ್ತಿಯ ಪಡೆದಹೆವೆಂದು ಅಲ್ಪಾಸೆವಿಡಿದು ಭ್ರಮೆಗೊಳಗಾದ ಮರ್ಕಟಮನದ ಪರಿಯ ನೋಡಾ ! ಶಿವಶಿವ ಮಹಾದೇವಾ ಮಹಾವಸ್ತುವಿನಲ್ಲಿ ಭೇದವಿಲ್ಲದಿಪ್ಪ ಅಭೇದ್ಯ ಶರಣಂಗೆ ಜಪದ ನೇಮವೆಲ್ಲಿಯದು ? ಜಪದ ಫಲ ಕೈಸಾರಿದಂಗೆ ಧ್ಯಾನಮೌನವೆಲ್ಲಿಯದು ? ಧ್ಯಾನದೇಹ ಅಳವಟ್ಟು ಅನಂದಿಪಂಗೆ ತಪದ ತಗಹೆಲ್ಲಿಯದು ? ಇಹ-ಪರವೆಂಬ ಇದ್ದೆಸೆಗೆಟ್ಟಂಗೆ ವ್ರತನೇಮದ ನೋಂಪಿಯ ಸೂತಕವೆಲ್ಲಿಯದು ? ಉದ್ಯಾಪನೆಯಂ ಮಾಡಿ ಮಹಾಪುರುಷನಂ ಪಡೆದು ತೆರಹಿಲ್ಲದೆ ಪತಿಭಕ್ತಿಯ ಮಾಡುವ ಸಜ್ಜನ ಸತಿಗೆ ಅರ್ಚನೆ ಪೂಜನೆಯಂ ಮಾಡುವ ದಂದುಗವೆಲ್ಲಿಯದೊ ? ತನು ಮನ ಧನ ಮುಂತಾದುವೆಲ್ಲವು ಶಿವನೊಡವೆಯೆಂದು ಮಾಡುವ ಸದ್ಭಕ್ತಂಗೆ ಆವಾಗಲೂ ಶಿವನ ಸೇವೆಯ ಮಾಡುವ ಕೈಗಳಿಗೆ ಮಣಿಯ ಹಿಡಿದು ತಿರುಹಬೇಕೆಂಬ ಕೋಟಲೆಯೇಕೆ ? ಅನುಶ್ರುತವು ನೆನೆವ ಮನದ ನೆನಹ ಬಿಡಿಸಿ ಎಣಿಕೆಗಿಕ್ಕಿ ಸಂದೇಹಿಸುವ ಸಂಚಲವೇಕೆ ? ಅನಿಮಿಷನಾಗಿ ನೋಡುವ ದೃಷ್ಟಿಗೆ, ಎವೆಯ ಮರೆ ಮಾಡಿಕೊಂಡು ಕಣ್ಣುಮುಚ್ಚಲೇತಕ್ಕೆ ? ಕಣ್ಣು ಮನ ಕೈ (ಈ) ತ್ರಿಸ್ಥಾನದಲ್ಲಿರಿಸಲರಿಯದೆ ಭೇದವ ಮಾಡಿ ಅಗಲಿಸುವ ಜಪ ತಾನೇಕೆ ? ಪರಿಪೂರ್ಣವಾಗಿಹ ಸರ್ವಪದವನೀವ ಸ್ವತಂತ್ರ ಪರಾತ್ಪರವಸ್ತುವನಗಲಿ ದೂರಕಿಕ್ಕಿ, ಎಡೆದೆರಹ ಮಾಡಿ ಖಂಡಿಸಿ (ಕಂಡಹೆ)ನೆಂಬ ಧ್ಯಾನಮನವೇಕೆ ? ಸಮರ್ಥತೆಯನುಳ್ಳ ಮಹಾಪದದೊಳಗಿದ್ದು, ಅಲ್ಪಪದವ ಸಾಧಿಸೇನೆಂದು ಕಾಯವ ದಂಡಿಸಿ ಆತ್ಮನಿಗ್ರಹವ ಮಾಡಿ, ಬಟ್ಟೆಗುತ್ತಗೆತನವ ಹಣ್ಣಿ, ತಗಹಿನಲ್ಲಿ ಕುಳ್ಳಿರ್ದು ಬೇಡಿಕೊಂಬ ತಪ ತಾನೇಕೆ ? ಮುಟ್ಟಿತ್ತೆಲ್ಲ ಪವಿತ್ರ, ನೋಡಿತ್ತೆಲ್ಲ ಪಾವನ, ನಿರ್ಮಾಯನೆಂಬ ನಿರ್ಮಳಾಂಗ ನಿತ್ಯಶುದ್ಧದಾಸೋಹದೊಳಿರುತ ಸೂತಕ ಬಿಡದೆಂದು, ಜಡಕ್ರೀಯಿಂದ ಭಾಷೆಗೊಡಲ ಗುರಿಮಾಡಿ ಮೀಸಲಾಗಿಹ ಪ್ರಾಣವನಿರಿದುಕೊಂಡು ಸಾವ ಸಂಕಲ್ಪ ವ್ರತನೇಮವೇಕೆ ? ಪೂಜೆಯು ಪೂಜ್ಯನು ಪೂಜಿಸುವವ_ ಈ ತ್ರಿವಿಧದೋಜೆಯ ಸೂತ್ರಾತ್ಮಕ ತಾನೆ ಎಂಬ ಹವಣನರಿದು, ಅರಿವಿಂಗಾಶ್ರಯವಾಗಿರಲರಿಯದೆ; ನಾನಾ ಪರಿಯಿಂದ ಒಲಿಸಿ ಮೆಚ್ಚಿಸಿ ಸ್ವರ್ಗಾದಿ ಭೋಗ ಧರ್ಮಕರ್ಮವನುಂಬ ಕೈಕೂಲಿಕಾರಕರ್ಮಿಗಳಂತೆ ಮಾಡುವ ಅರ್ಚನೆ ಪೂಜನೆಯ ಆಯಸವೇಕೆ ? ಜಪದ ಜಾಡ್ಯದ ಜಂಜಡದವನಲ್ಲ, ಧ್ಯಾನಮೌನದಿಂದ ಬಿಗಿದು ಬೆರೆತಿಹ ಬಂಧನದವನಲ್ಲ. ತಪದ ದಂಡನೆಯ ತಗಹಿನವನಲ್ಲ, ವ್ರತನೇಮದ ಸೂತಕಿಯಲ್ಲ, ಅರ್ಚನೆ ಪೂಜನೆಯ ಫಲ[ಗ್ರಾಹ]ಕನಲ್ಲ, ಹರಕೆಗೆ ಹವಣಿಸಿ ಬೆರೆತಹನಲ್ಲ, ನೆವದಿಂದ ತದ್ದಿನವ ಮಾಡಬೇಕೆಂಬ ಉದ್ದೇಶಿಯಲ್ಲ, ವರುಷಕ್ಕೊಂದು ತಿಥಿಯೆಂದು ಕೂಡಿ ಮಾಡುವ ಕೀರ್ತಿವಾರ್ತೆಗೆ ಮುಯ್ಯಾನುವನಲ್ಲ, ಮಿಕ್ಕಾದ ಕಿರುಕುಳ ಬಾಧೆ ಆಧಿವಿಡಿಯದ ಸಹಜಸಂತೋಷಿ, ಸರ್ವಾಂಗದೊಳ್ ತನ್ಮಯನಾಗಿರುತ್ತ, ಭಿನ್ನವೇಕೆ ? ಹಾಲ ಸಾಗರದೊಳಗೋಲಾಡುತಿರ್ದು ಓರೆಯಾವಿನ ಬೆನ್ನ ಹರಿವನಲ್ಲ, ಪರುಷದ ಗಿರಿ ಕೈಸಾರಿರಲು; ನಾಡ ಮಣ್ಣ ಕೂಡಲಿಕ್ಕಿ ತೊಳೆದು ಹಾಗವ ಸಾಧಿಸಬೇಕೆಂಬ ಧಾವತಿಯವನಲ್ಲ, ಅತ್ಯಂತ ಸ್ನೇಹದಿಂದ ನೆನಹಿನಲ್ಲಿ ಮನಕ್ಕೆ ಬಂದು ನೆಲೆಗೊಂಡಿರುತ್ತಿರಲು `ಆಹಾ ಪುಣ್ಯವೆ' ಎಂದು ಕ್ರೀಡಿಸುವ ರತಿಸುಖವಂ ಬಿಟ್ಟು ನೆನಹಿನ ಆಸೆಯಿಂದ ತೊಳಲಿ ಬಳಲುವ ಮರಹಿನವನಲ್ಲ. ಕೆಲವು ಮತದವರಂತೆ ಕಂಡಹೆನೆಂದರಿಸಿ ಆಡುವನಲ್ಲ ಕೆಲವು ಮತದವರಂತೆ ತೆರಪಿಟ್ಟು ಅರಸುವನಲ್ಲ ತಾನಲ್ಲದನ್ಯವಿಲ್ಲವೆಂದು ಅಹಂಕರಿಸಿ ಬೆರೆವವನಲ್ಲ. ಮತ್ತೆ ಉಳಿದಾದ ಕಾಕುಮತದ ಸೊಗಸಿಗೆಳಸನಾಗಿ, ಹೊಲಬುಗೆಡುವನಲ್ಲ. ಹೊತ್ತುದ ಹುಸಿ ಮಾಡಿ ಮತ್ತೆ ಉಂಟೆಂದು ಭೇದವ ಮಾಡುವ ದುಷ್ಟದುಷ್ಕರ್ಮಿಗಳ ಪರಿಯವನಲ್ಲ. ಮಾಡಿಹೆನೆಂಬ ಸಂಸಾರದ ಬಂಧನದವನಲ್ಲ. ಮಾಡಲೊಲ್ಲೆನೆಂಬ ವಿಕಳವಾವರಿಸಿಹ ವೈರಾಗ್ಯದ ಉದಾಸೀನದವನಲ್ಲ. ಋತುವುಳ್ಳ ಸತಿಯ ರತಿಕೂಟದಂತೆ ಮುಂದೆ ಅಗಲಿಸುವ ಕಷ್ಟದ ಸುಖವನೊಲುವನಲ್ಲ. ಋತುವರತ ಸತಿಯ ರತಿಕೂಟದಂತೆ ಅಗಲಿಕೆಯಿಲ್ಲದ ಸುಖದ ಸಂಯೋಗದ ನೆಲೆಯನರಿದಾತಂಗೆ; ಮಾಡುವಾತ ತಾನು ಮಾಡಿಸಿಕೊಂಬಾತ ತಾನು ಸೋಹ ದಾಸೋಹ ತಾನೆಂದು ಬೇರೆನ್ನದೆ ದಾತೃ ಭೋಕ್ತೃ ಶಿವನೊಬ್ಬನಲ್ಲದೆ, ಬೇರೆ ಬೇರೆ ತಮತಮಗೆ ಒಡೆಯರುಂಟೆ ? ಇಲ್ಲ. ಆದಿ ಪರಶಿವ ತಾನೆ ಎಂದು ಮಾಡುವ ಮಾಟ, ಸಟೆಯಿಲ್ಲದೆ ದಿಟ ಘಟಿಸಿ ಸಯವಾಗಿ ನಿಂದು ನಿರಾಶೆಯ ಕುಳ(ನಿರಾಕುಳರಿ)ದ ಅನುವನರಿತು ನಿಜವೆಡೆಗೊಂಡ ನಿಲವ ಪ್ರಮಾಣಿಸಿ ಕಾಬಂತೆ, ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ? ಮಾಡಬೇಕೆಂಬ ಅರಿವಿನ ಕಣ್ದೆರೆಸಿದವರಾರು ? ಮಾಡುವೆನೆಂದು ನೆನೆವ ಚೇತನದ ಪ್ರಾಣವ ತಂದಿರಿಸಿದವರಾರು ? ಮಾಡಿಹೆನೆಂಬ, ಮಾಡಬೇಕೆಂಬ, ಮಾಡುವ_ ಇವನೆಲ್ಲವ ಅರಿವಡಿಸಿಕೊಂಡಿಹ ಕಾಯವ ರೂಪಿಸಿದರಾರು ? ಆದಿಯಿಂದವೆ ನುಡಿದು ನಡೆದು ರೂಪಾಗಿ ಪ್ರಭಾವಿಸಿ ವ್ಯಾಪಾರಕ್ಕೆ ಸಂದೆವೆಂಬ ಹವಣಗಾರರು ಬರಿಯ ವಳಾವಳಿಯಿಂದ, ನಾ ಮಾಡಿದಹೆನೆಂದು ಪ್ರತಿಜ್ಞೆಯಂ ಕೈಕೊಂಡು, ಇಲ್ಲದುದನುಂಟುಮಾಡಿ, ಪಡೆದು ಸಾಧಿಸೆಹೆನೆಂಬ ಬಯಕೆಯ ಸಂಭ್ರಮದಾಯಸ ತಲೆಗೇರಿ, ಉಬ್ಬಿ ಹರಿದಾಡುವ, ಅವಿಚಾರದ ಮನದ, ಮರವೆ ಬಲಿದ ಇರವಿನ ಪರಿಯ ನೋಡಾ ! ಶಿವ ಮಹಾದೇವಾ. ಶಿವ ತನ್ನ ಲೀಲಾ ವಿನೋದಕ್ಕೆ ಸಕಲವನು ರೂಪಿಸಿ ಆಗುಮಾಡಿಕೊಂಡಿರುತ್ತಿರಲು, ಹುಚ್ಚುಗೊಂಡಂತೆ ಎಲ್ಲವೂ ನನ್ನಿಂದಾಯಿತು, ನಾ ಮಾಡಿದೆನೆಂದು ಉಲಿವ ದೇಹಿಯ ಇನ್ನೇನೆನಬಹುದಯ್ಯ ? ಅವರಿಂದಾದ ಒಡವೆಯ ಅವರಿಗೆ ಈವುದು, ಉಪಚರಿಯವೆ ? ನದಿಯುದಕವ ನದಿಗರ್ಪಿಸುವಂತೆ ಒಡೆಯಂಗೊಡವೆಯನರ್ಪಿಸಿ ತಾ ಶುದ್ಧನಾಗಿ ನಡೆನುಡಿಯಲ್ಲಿ ಕವಲುದೋರದೆ ತನ್ನಲ್ಲಿ ತಾನೆ ತಿಳಿದು, ಘನವೆಡೆಗೊಂಡ ಮಹಾನುಭಾವಿಗಳು; ಎಲ್ಲವನಳವಡಿಸಿಕೊಂಡಿಹ ಕಾಯವ ಗುರುವೆಂದೆ ಸಾಧಿಸಿದ ನೆನೆವ ಚೇತನದ ಪ್ರಾಣವ ಲಿಂಗವೆಂದೆ ಭಾವಿಸಿದ ಅರಿವಿನ ಜ್ಞಾನವ ಜಂಗಮವೆಂದೆ ಅರಿದ ನಮ್ಮ ಕೂಡಲಚೆನ್ನಸಂಗಮದೇವರು.
--------------
ಚನ್ನಬಸವಣ್ಣ
ನೆಲೆಯಿಲ್ಲದ ಮಹಾಜಲದೊಳಗೆ ಮಲಗಿರ್ದ ಸರ್ಪನ ಫಣವ ನೋಡಲು, ಬೆಳಬೆಳಗುತ್ತಿರ್ದವು ರಜತ ಹೇಮವೆಂಬ ಎರಡು ಕುಲಗಿರಿಗಳು. ಎಡದ ಕೈಯಲ್ಲಿ ರಜತಗಿರಿಯಂ ಪಿಡಿದು ಬಲದ ಕೈಯಲ್ಲಿ ಹೇಮಾದ್ರಿಯಂ ಪಿಡಿದು ಮಹಾದಂಡಿಯ ಫಣಿಯ ಒದೆಯಲು ನೆಗಹಿತ್ತು ಈರೇಳು ಭುವನವ. ಅಲ್ಲಿಂದ ಮೇಲೆ, ಗಿರಿ ಎರಡು ವರ್ಣವಳಿದು ಅಡಗಿದವು ಚಿಕ್ಕಾಡಿನ ಹೃದಯದಲ್ಲಿ ! ಚಿಕ್ಕಾಡು ಕಂದೆರೆದು ಕಂಡಿತ್ತು ಚಿದಾಕಾಶವೆಂಬ ಶಿವಾಲಯವ ! ಅಂಗವಿಲ್ಲದ ಶೃಂಗಾರಕ್ಕೆ ಭಂಗ ಉಂಟೆ ?_ಇಲ್ಲವಾಗಿ, ಗುಹೇಶ್ವರನೆಂಬ ಶಬ್ದಬ್ರಹ್ಮಕ್ಕೆ ಮುದ್ರಿಕೆಯಾಯಿತ್ತು.
--------------
ಅಲ್ಲಮಪ್ರಭುದೇವರು
ಆ ಪರಶಿವನ ಗರ್ಭದಲ್ಲಿರ್ದ ಬ್ರಹ್ಮಾಂಡದೊಳಗೆ ಪಿಂಡಾಂಡವಾದ ಪುಣ್ಯಾತ್ಮರು, ಬಿಂದುರೂಪಾಗಿ ಬಂದ ಸೂತಕ ಕಂಡು ಸಂದೇಹಗೊಂಡು, ಚಂದವಳಿದು, ಹಿಂದೆ ಬಂದಾ ಯೋನಿಯ ಕಿಸುಕುಳ ಮೂತ್ರದಕುಣಿಗೆ ಬೀಳಬಾರದೆಂದು ಹೇಯ ಹುಟ್ಟಿ ಸ್ತ್ರೀ ಭೋಗವ ಬಿಟ್ಟು, ವೈರಾಗ್ಯ ತಲಿಗೇರಿ, ಅನ್ನ ವಸ್ತ್ರವ ಕಳೆದು ಊರೊಳಗಿರಬಾರದೆಂದು ದೇಶ ಸಂಚಾರ ಮಾಡಿ, ಕಾಶಿ, ಕೇದಾರ, ರಾಮೇಶ್ವರ, ಶ್ರೀಶೈಲ, ಉಳವಿ, ಹಂಪಿ, ಗೋಕರ್ಣ ಮೊದಲಾದ ಅನಂತ ತೀರ್ಥವ ಮಿಂದು, ಸಾಯಬಾರದ ಅಂಗಸಿದ್ಧಿ, ಅಲಗುನೋಯಿಸದ ಘುಟಿಕಾಸಿದ್ಧಿ, ಹೇಳಿದ್ದಾಗುವ ವಾಕ್ಯಸಿದ್ಧಿ, ಹೆಸರುಹೇಳುವ ಬೆನಕನಸಿದ್ಧಿ, ರೋಗಕಳೆಯುವ ಮೂಲಿಕಿಸಿದ್ಧಿ, ಬೆರಗುಮಾಡುವ ಬೇತಾಳಸಿದ್ಧಿ, ಅಗ್ನಿಸ್ತಂಭನ, ಜಲಸ್ತಂಭನ, ಗಗನಕ್ಕೆ ಹಾರುವ ಯೋಗಸಿದ್ಧಿ, ದೂರದೃಷ್ಟಿ, ದೂರಶ್ರವಣ, ಸರ್ವದೃಷ್ಟಿ, ಉಂಡೂಟ, ಕಂಡ ಕನಸು, ಮನೋಬಯಕೆ, ಹಿಂದಿನ ಖೂನ, ಕನಸಸಾಕ್ಷಿ, ಇಂದ್ರಜಾಲ, ಮಹೇಂದ್ರಜಾಲ, ಸುವರ್ಣಜನನ, ಬಂಗಾಳಿ, ಮರಣಯೋಗ, ಪರಕಾಯಪ್ರವೇಶ, ರಾಜಯೋಗ, ರಾಜವಶ, ಜನವಶ, ಸ್ತ್ರೀವಶ, ಭಸ್ಮಸಿದ್ಧಿ, ಅಂಜನಸಿದ್ಧಿ, ಮೋಹನ, ವೈರಿಸ್ತಂಭನ, ವಾಯುಸ್ತಂಭನ, ಭೂತ, ಪ್ರೇತ, ಪಿಶಾಚಿ, ಬ್ರಹ್ಮರಾಕ್ಷಸ, ಜಟ್ಟಿಂಗ, ಹಿರೋಡ್ಯಾ, ಯಲ್ಲಮ್ಮಾ, ಪೋತಮ್ಮಾ, ಚಂಡಿಚಾಮುಂಡ್ಯಾದಿಗಳ ಮಾತನಾಡಿಸುವ ಮಂತ್ರಸಿದ್ಧಿ, ಹುಲಿ, ಹಲ್ಲಿ, ಕತ್ತಿ, ನರಿ, ಕಾಗಿ, ಹಾಲ್ಹಕ್ಕಿ ಮೊದಲಾದ ಮೃಗಪಕ್ಷಿಯ ಮಾತು ತಿಳಿಯುವ ಯಂತ್ರತಂತ್ರಸಿದ್ಧಿ, ಮಲಮೂತ್ರವನು ಬಿಡದ ಅಂತರಪಚನ ಅದೃಶ್ಯ ಅನಂತ ಆಹಾರ ಜೀವಸ್ತಂಭನ, ದೇವ ಪ್ರತ್ಯಕ್ಷ ಸಂಜೀವನ, ಬಂಧವಿಮೋಚನ, ದೃಷ್ಟಿ ಆಗಮನ, ಇಷ್ಟದಾಯಕ ಮನೋಗಮನ ಮೊದಲಾದ ಅನಂತ ಸಿದ್ಧಿಗಳಿಗಾಶೆ ಮಾಡಿ ಮಣ್ಣುಗಾಣದೇ ಹೋದರು ಅನಂತರು. ಅದು ಅಂತಿರಲಿ, ಫಲಪದವಿ ಪಡೆವೆವೆಂದು ಹಳ್ಳ, ಕೊಳ್ಳ, ನದಿತೀರ, ಅಡವಿ ಅರಣ್ಯ ಗುಡ್ಡ ಗಿರಿ, ಗವಿ ವಟವೃಕ್ಷ, ಸಂಗಮ, ಮಠ ಮಾನ್ಯ ಮೊದಲಾದ ಸುಸ್ಥಳದಲ್ಲಿ ಕುಳಿತು ನಿದ್ರೆ ಆಹಾರ ತೊರೆದು, ಆಸನವ ಬಲಿದು, ಮೌನ ಮುದ್ರೆಯ ಹಿಡಿದು, ವಾತ, ಅಂಬು, ಪರ್ಣ, ಕಲ್ಲು, ಹಣ್ಣು, ಬೂದಿ, ಹುಲ್ಲಿನ ರಸ, ನೆಲ, ಬೇರು, ಗಡ್ಡಿ ಮೊದಲಾದ ಆಹಾರವ ಕೊಂಡು, ಮೈಗೆ ಹುತ್ತೇರಿ, ಜಡಿಯಲ್ಲಿ ಆಲವ ಬೆಳೆದು, ಗಡ್ಡದೊಳು ಗೀಜಗವು ಮನಿ ಮಾಡಿರಲು, ಮನವಳಿಯದೆ, ಘನವ ತಿಳಿಯದೆ, ತನುವ ಉಳಿಯದೆ, ಪಂಚೇಂದ್ರಿಯ ಮಿಂಚು ತೊಳಿಯದೆ, ಹಳೆಹಂಚಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಗಿರಿ ತರು ಗುಹೆ ಮಹಾವಿಪಿನ ಸರೋವರದಲ್ಲಿ ಹಿರಿದುಗ್ರತಪವ ಮಾಡುತ್ತ ಪವನಾಹಾರ, ಪರ್ಣಾಹಾರ, ಜಲಾಹಾರ, ಘಳಾಹಾರ ನಿರಾಹಾರದಲ್ಲಿದ್ದಡೇನು? ತನು ಮನ ರೂಪವಾದ ಮಾಯೆ ಕಾಡದೆ ಬಿಡುವಳೆ? ತನುವಿನಲ್ಲಿ ವ್ಯಾಪಾರ ಮನದಲ್ಲಿ ವ್ಯಾಕುಲವಾಗಿ ಕಾಡದೆ ಬಿಡುವಳೆ? ಈ ಮಾಯೆಯ ಗೆಲುವುದಕ್ಕೊಂದುಪಾಯವ ಕಾಬುದು. ಅದೆಂತೆಂದಡೆ, ಕಂಗಳ ಕೊನೆಯಲ್ಲಿ ಲಿಂಗದ ನೋಟ. ಮನದ ಕೊನೆಯಲ್ಲಿ ಲಿಂಗದ ನೆನಹು. ಜಿಹ್ವೆಯ ಕೊನೆಯಲ್ಲಿ ಶಿವಮಂತ್ರ. ಭಾವದ ಕೊನೆಯಲ್ಲಿ ಶಿವಾನುಭಾವ ನೆಲೆಗೊಂಡಡೆ, ಅಂಗದ ಅವಯವಂಗಳೆಲ್ಲ ಲಿಂಗದ ಅವಯವಂಗಳಾಗಿ, ಕೀಟಭ್ರಮರನಂತೆ ತಾನೇ ಶಿವನಹನು. ಇಂತಪ್ಪ ಲಿಂಗಾನುಭಾವಿ ಲಿಂಗಸಂಗಿಗೆ ಅಂಗವಿಲ್ಲ. ಅಂಗವಿಲ್ಲದ ನಿತ್ಯ ನಿರ್ಮಲಂಗೆ, ಮಾಯಾಮಲಿನ ಮುನ್ನವೆ ಹೊದ್ದದಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕಿಡಿ ಕಿಡಿ ಕೆದರಿದಡೆ ಎನಗೆ ಹಸಿವು ತೃಷೆಯಡಗಿತ್ತೆಂಬೆನು. ಮುಗಿಲು ಹರಿದು ಬಿದ್ದಡೆ ಎನಗೆ ಮಜ್ಜನಕ್ಕೆರೆದರೆಂಬೆನು. ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು. ಚೆನ್ನಮಲ್ಲಿಕಾರ್ಜುನಯ್ಯಾ, ಶಿರ ಹರಿದು ಬಿದ್ದಡೆ ಪ್ರಾಣ ನಿಮಗರ್ಪಿತವೆಂಬೆನು.
--------------
ಅಕ್ಕಮಹಾದೇವಿ
ಸ್ವರದ ಹುಳ್ಳಿಯ ಕೊಂಡು, ಗಿರಿಯ ತಟಾಕಕ್ಕೆ ಹೋಗಿ, ಹಿರಿಯರು ಓಗರವ ಮಾಡುತ್ತಿಪ್ಪರು. ಗಿರಿ ಬೇಯದಾಗಿ ಓಗರವಾಗದು. ಅರ್ಪಿತವಿಲ್ಲಾಗಿ ಪ್ರಸಾದವಿಲ್ಲ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ರಾಗವಡಗಿ ತಾಮಸ ನಿಂದು, ಆಹಂಕಾರದ ಗಿರಿ ಉಡುಗಿ, ಮಾತಿನ ಬಣವೆಯ ಮೆದೆಯ ಸುಟ್ಟುರುಹದೆ, ಕಾಯ ಕರ್ಮದಲ್ಲಿ ಸವೆಯುತ್ತ, ಜೀವ ಸಕಲ ಸಂಸಾರದಲ್ಲಿ ನೋಯುತ್ತ [ಇದ್ದಡೆ] ಮತ್ತೆ ಭಾವಶುದ್ಧವುಂಟೆ ಗುಹೇಶ್ವರಲಿಂಗಕ್ಕೆ ?
--------------
ಅಲ್ಲಮಪ್ರಭುದೇವರು
ಅಯ್ಯಾ, ವಿರಕ್ತ ವಿರಕ್ತರೆಂದೇನೊ? ವಿರಕ್ತಿಯ ಮಾತನಾಡುವರಲ್ಲದೆ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ, ಬಾಯೊಳಗಣ ಮಾತು. ಪುಣ್ಯವಿಲ್ಲ-ಪಾಪವಿಲ್ಲ, ಕರ್ಮವಿಲ್ಲ-ಧರ್ಮವಿಲ್ಲ, ಸತ್ಯವಿಲ್ಲ-ಅಸತ್ಯವಿಲ್ಲವೆಂದು ಮಾತನಾಡುತಿಪ್ಪರು. ಅದೆಂತೆಂದಡೆ ಕಂಗಳ ನೋಟ ಹಿಂಗದನ್ನಕ್ಕ, ಕೈಯೊಳಗಣ ಬೆರಟು ನಿಲ್ಲದನ್ನಕ್ಕ, ಹೃದಯದ ಕಾಮ ಉಡುಗದನ್ನಕ್ಕ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಬಲ್ಲ ವಿರಕ್ತನ ಹೃದಯವುದಕದೊಳಗಣ ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೊ? ಕಂಡಾತಂಗೆ ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ, ಕರ್ಣದಲ್ಲಿ ಕೇಳಿದ ಆಗಮ ಪುರಾಣಂಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ ಜಿಹ್ವೆಯಲ್ಲಿ ರುಚಿಸಿದ ಪದಾರ್ಥಗಳು ಆ ಲಿಂಗಕ್ಕರ್ಪಿತ. ಅದೆಂತೆಂದಡೆ ಅಂಗವೂ ಲಿಂಗವೂ ಏಕೀಭವಿಸಿದಡೆ ಅವಂಗೆ ಪುಣ್ಯವಿಲ್ಲ-ಪಾಪವಿಲ್ಲ, ಕರ್ಮವಿಲ್ಲ-ಧರ್ಮವಿಲ್ಲ, ಸತ್ಯವಿಲ್ಲ-ಅಸತ್ಯವಿಲ್ಲ. ಅದೆಂತೆಂದಡೆ: ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ. ಅಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ ತಾ ಮಹಾಲಿಂಗವನಪ್ಪುವನಾಗಿ, ಅವಂಗೆ ಮುಖ ಬೇರಲ್ಲದೆ, ಆತ್ಮನೆಲ್ಲಾ ಒಂದೆ. ಅದಕ್ಕೆ ಜಗವು ಪಾಪ ಪುಣ್ಯವೆಂದು ಮಾತನಾಡುತಿಪ್ಪರು. ಅದೆಂತೆಂದಡೆ: ಶಿವಂಗೆ ತಾಯಿಯಿಲ್ಲ, ಭುವನಕ್ಕೆ ಬೆಲೆಯಿಲ್ಲ. ತರು ಗಿರಿ ಗಹ್ವರಕ್ಕೆ ಮನೆಯಿಲ್ಲ. ಲಿಂಗವನೊಡಗೂಡಿದ ವಿರಕ್ತಂಗೆ ಪುಣ್ಯ ಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಯ್ಯ! ಪಾಷಾಣಕ್ಕೆ ಗಿರಿ ಸವೆದವು. ಪತ್ರೆಗೆ ತರು ಸವೆದವು. ಸಪ್ತಸಾಗರಂಗಳು ಮಜ್ಜನಕ್ಕೆ ಸವೆದವು. ಅಗ್ನಿ ಧೂಪಕ್ಕೆ ಸವೆಯಿತ್ತು. ವಾಯು ಕಂಪಿತಕ್ಕೆ ಸವೆಯಿತ್ತು ಉಘೆ! ಚಾಂಗು ಭಲಾ! ಎಂಬ ಶಬ್ದ ಸವೆಯಿತ್ತು. ಎನ್ನಗಿನ್ನೆಂತೊ, ಉಮೇಶನ ಶರಣರು ಮಹಮನೆಯಲ್ಲಿ ಶಿವಲಿಂಗಾರ್ಚನೆಗೆ ಕುಳ್ಳಿದ್ದಡೆ, ನಾನವರ ಪಾದರಕ್ಷೆಯ ಕಾಯ್ದಕೊಂಡಿದ್ದೇನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->